ಪ್ರಧಾನ ಮಂತ್ರಿಯವರ ಕಛೇರಿ

ಅಸಾಧಾರಣ ವಸ್ತುಶಃ ಜಿ-20 ನಾಯಕರ ಶೃಂಗಸಭೆ

Posted On: 26 MAR 2020 10:08PM by PIB Bengaluru

ಅಸಾಧಾರಣ ವಸ್ತುಶಃ ಜಿ-20 ನಾಯಕರ ಶೃಂಗಸಭೆ


 
ಕೋವಿಡ್ -19 ಸಾಂಕ್ರಾಮಿಕ ರೋಗ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಎದುರಾಗಿರುವ ಸವಾಲುಗಳ ಬಗ್ಗೆ ಚರ್ಚಿಸಲು ಮತ್ತು ಜಾಗತಿಕ ಸಮನ್ವಯದ ಕ್ರಿಯಾ ಯೋಜನೆ ರೂಪಿಸುವ ಕುರಿತು 2020ರ ಮಾರ್ಚ್ 26ರಂದು ಅಸಾಧಾರಣ ವಸ್ತುಶಃ ಜಿ-20 ನಾಯಕರ ಶೃಂಗಸಭೆ ನಡೆಸಲಾಯಿತು. ಇದಕ್ಕೂ ಮುನ್ನ ಪ್ರಧಾನಿ ಅವರು ಇದೇ ವಿಷಯವಾಗಿ ಸೌದಿ ಅರೆಬಿಯಾದ ದೊರೆ ಜೊತೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದರು. ಜಿ-20 ನಾಯಕರ ಶೃಂಗಸಭೆ, ಹಣಕಾಸು ಸಚಿವರುಗಳ ಮತ್ತು ಕೇಂದ್ರ ಬ್ಯಾಂಕುಗಳ ಗೌರ್ನರ್ ಗಳ ಸಭೆ ಮತ್ತು ಕೋವಿಡ್ -19 ಸಾಂಕ್ರಾಮಿಕದ ಬಗ್ಗೆ ಜಿ-20 ರಾಷ್ಟ್ರಗಳ ಮಹತ್ವದ ಸಭೆಯಲ್ಲಿ ಸಮ್ಮಿಳಿತಗೊಂಡಿತ್ತು.
 
ಸಭೆಯಲ್ಲಿ ಜಿ-20 ರಾಷ್ಟ್ರಗಳ ನಾಯಕರು ಸಾಂಕ್ರಾಮಿಕವನ್ನು ನಿಯಂತ್ರಿಸಲು ಮತ್ತು ಜನರನ್ನು ರಕ್ಷಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಒಪ್ಪಿದರು. ಅಗತ್ಯ ವೈದ್ಯಕೀಯ ಪೂರೈಕೆ, ರೋಗ ಪತ್ತೆ ಉಪಕರಣಗಳು, ಚಿಕಿತ್ಸೆ, ಔಷಧಗಳು ಮತ್ತು ಲಸಿಕೆಗಳು ಸೇರಿದಂತೆ ಸಾಂಕ್ರಾಮಿಕದ ವಿರುದ್ಧ ಹೋರಾಡಲು ವಿಶ್ವ ಆರೋಗ್ಯ ಸಂಸ್ಥೆಯ ಕಡ್ಡಾಯ ಆದೇಶದಂತೆ  ಎಲ್ಲ ಕ್ರಮಗಳನ್ನು ಬೆಂಬಲಿಸಲು ಎಲ್ಲ ರಾಷ್ಟ್ರಗಳು ಸಹಮತ ಸೂಚಿಸಿದವು.
 
ಸಾಂಕ್ರಾಮಿಕದಿಂದ ಆಗಲಿರುವ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳನ್ನು ಕನಿಷ್ಠಗೊಳಿಸಲು ಲಭ್ಯವಿರುವ ಎಲ್ಲ ನೀತಿ ಉಪಾಯಗಳನ್ನು ಬಳಸಿಕೊಳ್ಳುವ ಬದ್ಧತೆಯನ್ನು ನಾಯಕರು ವ್ಯಕ್ತಪಡಿಸಿದರು ಮತ್ತು ಜಾಗತಿಕ ಪ್ರಗತಿ, ಮಾರುಕಟ್ಟೆ ಲಭ್ಯತೆ ಮತ್ತು ಸ್ಥಿತಿ ಸ್ಥಾಪಕತ್ವ ಬಲವರ್ಧನೆಗೆ ಕ್ರಮ ಕೈಗೊಳ್ಳಲು ನಿರ್ಧರಿಸಿದರು. ಕೋವಿಡ್-19 ನಿಂದಾಗುವ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳನ್ನು ಎದುರಿಸಲು ಜಾಗತಿಕ ಆರ್ಥಿಕತೆಗೆ ಸುಮಾರು 5 ಟ್ರಿಲಿಯನ್ ಅಮೆರಿಕನ್ ಡಾಲರ್ ಸೇರ್ಪಡೆ ಮಾಡಲು ಜಿ-20 ರಾಷ್ಟ್ರಗಳು ಬದ್ಧತೆ ತೋರಿದವು, ವಿಶ್ವ ಆರೋಗ್ಯ ಸಂಸ್ಥೆ ನೇತೃತ್ವದಲ್ಲಿ ರಚನೆಯಾಗಿರುವ ಕೋವಿಡ್-19 ಐಕ್ಯತಾ ಪ್ರತಿಸ್ಪಂದನಾ ನಿಧಿಗೆ ಸ್ವಯಂಪ್ರೇರಿತವಾಗಿ ಕೊಡುಗೆ ನೀಡಲು ಎಲ್ಲ ನಾಯಕರು ಒಪ್ಪಿಗೆ ಸೂಚಿಸಿದರು.
ಜಿ-20 ಅಸಾಧಾರಣ ಶೃಂಗಸಭೆ ಕರೆದಿದ್ದಕ್ಕಾಗಿ ಪ್ರಧಾನಮಂತ್ರಿ ಅವರು, ಸೌದಿ ಅರೆಬಿಯಾದ ದೊರೆಗೆ ಧನ್ಯವಾದಗಳನ್ನು ಸಲ್ಲಿಸಿದರು. ಪ್ರಧಾನಮಂತ್ರಿ ಅವರು ತಮ್ಮ ಭಾಷಣದಲ್ಲಿ ಸಾಂಕ್ರಾಮಿಕ ರೋಗದಿಂದಾಗಿ ಆರ್ಥಿಕ ಹಾಗೂ ಸಾಮಾಜಿಕ ವೆಚ್ಚ ಏರಿಕೆಯಾಗುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಅವರು ಕೋವಿಡ್-19ನ ಶೇ.90ರಷ್ಟು ಪ್ರಕರಣಗಳಲ್ಲಿ ಶೇ.88ರಷ್ಟು ಸಾವುಗಳು ಜಿ-20 ರಾಷ್ಟ್ರಗಳಲ್ಲಿ ಸಂಭವಿಸಿವೆ, ಆ ರಾಷ್ಟ್ರಗಳು ವಿಶ್ವ ಜಿಡಿಪಿಯ ಶೇ.80ರಷ್ಟು ಪಾಲನ್ನು ಹೊಂದಿವೆ ಮತ್ತು ವಿಶ್ವದ ಶೇ.60ರಷ್ಟು ಜನಸಂಖ್ಯೆಯನ್ನು ಹೊಂದಿವೆ ಎಂದರು. ಪ್ರಧಾನಮಂತ್ರಿ ಅವರು ಈ ಜಾಗತಿಕ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಸಮಗ್ರ ಕಾರ್ಯತಂತ್ರ ಅಥವಾ ಕ್ರಿಯಾಯೋಜನೆ ರೂಪಿಸುವಂತೆ ಜಿ-20 ರಾಷ್ಟ್ರಗಳಿಗೆ ಕರೆ ನೀಡಿದರು.
ಪ್ರಧಾನಮಂತ್ರಿ ಅವರು, ಜಾಗತಿಕ ಸಹಕಾರ ಮತ್ತು ಏಳಿಗೆಯ ದೃಷ್ಟಿಕೋನದಲ್ಲಿ ಮಾನವರನ್ನು ಪ್ರಮುಖ ಸ್ಥಾನದಲ್ಲಿಟ್ಟು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಬಲವಾಗಿ ಪ್ರತಿಪಾದಿಸಿದರು. ಅಲ್ಲದೆ ವೈದ್ಯಕೀಯ ಸಂಶೋಧನೆ ಮತ್ತು ಅಭಿವೃದ್ಧಿಯ ಪ್ರಯೋಜನಗಳನ್ನು ಉಚಿತವಾಗಿ ಹಾಗೂ ಮುಕ್ತವಾಗಿ ವಿನಿಮಯ ಮಾಡಿಕೊಳ್ಳಬೇಕು. ಮಾನವ ಆರೋಗ್ಯ ರಕ್ಷಣಾ ವ್ಯವಸ್ಥೆಯಲ್ಲಿ ಪ್ರತಿಸ್ಪಂದನಾ ಹಾಗೂ ಅಳವಡಿಸಿಕೊಳ್ಳಬಹುದಾದ ಕ್ರಮಗಳನ್ನು ಅಭಿವೃದ್ಧಿಪಡಿಸಬೇಕು, ಜಾಗತಿಕವಾಗಿ ಗ್ರಾಮಗಳ ನಡುವೆ ಅಂತರ ಸಂಪರ್ಕವಿರುವುದರಿಂದ ಹೊಸ ಸಂಕಷ್ಟ ನಿರ್ವಹಣಾ ಶಿಷ್ಟಾಚಾರ ಮತ್ತು ಪದ್ಧತಿಗಳನ್ನು ಉತ್ತೇಜಿಸಬೇಕು, ವಿಶ್ವಸಂಸ್ಥೆ ಮತ್ತು ಇನ್ನಿತರ ಅಂತಾರಾಷ್ಟ್ರೀಯ ಸರ್ಕಾರಿ ಸಂಸ್ಥೆಗಳ ಸುಧಾರಣೆ ಮತ್ತು ಬಲವರ್ಧನೆ ಅಗತ್ಯವಿದೆ ಹಾಗೂ ಕೋವಿಡ್-19ನಿಂದ ವಿಶೇಷವಾಗಿ ಆಗುತ್ತಿರುವ ಆರ್ಥಿಕ ಸಂಕಷ್ಟಗಳನ್ನು ತಗ್ಗಿಸಲು ಎಲ್ಲರೂ ಒಗ್ಗೂಡಿ ಕಾರ್ಯೋನ್ಮುಖವಾಗಬೇಕು ಎಂದು ಅವರು ಕರೆ ನೀಡಿದರು.
ಹೊಸ ಜಾಗತೀಕರಣ ವ್ಯವಸ್ಥೆಯಲ್ಲಿ ಮನುಕುಲದ ಒಳಿತಿಗಾಗಿ ಎಲ್ಲರೂ ಸಾಮೂಹಿಕವಾಗಿ ಒಗ್ಗೂಡಬೇಕು ಮತ್ತು ಮಾನವೀಯತೆ ದೃಷ್ಟಿಯಿಂದ ಪರಸ್ಪರ ಹಿತಾಸಕ್ತಿಗಳನ್ನು ಉತ್ತೇಜಿಸಲು ಬಹು ಆಯಾಮದ ಕಾರ್ಯತಂತ್ರಗಳಿಗೆ ನಾಯಕರು ಆದ್ಯತೆ ನೀಡಬೇಕು ಮತ್ತು ಪರಸ್ಪರ ಸಹಕಾರ ನೀಡಬೇಕು ಎಂದು ಪ್ರಧಾನಿ ಅವರು ಕರೆ ನೀಡಿದರು.
ಶೃಂಗಸಭೆಯ ಕೊನೆಯಲ್ಲಿ ಜಿ-20 ನಾಯಕರು ಹೇಳಿಕೆಯನ್ನು ಬಿಡುಗಡೆ ಮಾಡಿ, ಅದರಲ್ಲಿ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಜಾಗತಿಕವಾಗಿ ಸಮನ್ವಯಿತ ಕಾರ್ಯತಂತ್ರದ ಅಗತ್ಯವಿದೆ, ಜಾಗತಿಕ ಆರ್ಥಿಕತೆ ರಕ್ಷಣೆಗೆ ಕ್ರಮಗಳನ್ನು ಕೈಗೊಳ್ಳಬೇಕು, ವ್ಯಾಪಾರ ತೊಂದರೆಗಳನ್ನು ಕನಿಷ್ಠಗೊಳಿಸಬೇಕು ಮತ್ತು ಜಾಗತಿಕ ಸಹಕಾರವೃದ್ಧಿಗೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಕರೆ ನೀಡಲಾಯಿತು.
 


***



(Release ID: 1608485) Visitor Counter : 268