ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಪರಿಸ್ಥಿತಿ, ತಡೆಗಟ್ಟುವಿಕೆ ಮತ್ತು ನಿರ್ವಹಣಾ ಕ್ರಮ ಪರಿಶೀಲಿಸಿದ ಉನ್ನತ ಮಟ್ಟದ ಸಚಿವರ ತಂಡ

Posted On: 19 MAR 2020 7:54PM by PIB Bengaluru

ಕೋವಿಡ್-19 ಪರಿಸ್ಥಿತಿ, ತಡೆಗಟ್ಟುವಿಕೆ ಮತ್ತು ನಿರ್ವಹಣಾ ಕ್ರಮ ಪರಿಶೀಲಿಸಿದ ಉನ್ನತ ಮಟ್ಟದ ಸಚಿವರ ತಂಡ

 

ಕೋವಿಡ್ -19 ಕುರಿತ ಸಚಿವರ ಗುಂಪಿನ 8 ನೇ ಉನ್ನತ ಮಟ್ಟದ ಸಭೆ ಇಂದು ನಿರ್ಮಾಣ ಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ವಹಿಸಿದ್ದರು. ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಎಸ್.ಪುರಿ, ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್, ಗೃಹ ವ್ಯವಹಾರಗಳ ರಾಜ್ಯ ಸಚಿವ ಎಸ್. ನಿತ್ಯಾನಂದ ರೈ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಎಸ್. ಅಶ್ವಿನಿ ಕುಮಾರ್ ಚೌಬೆ ಮತ್ತು ಹಡಗು, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಮನ್ಸುಖ್ ಎಲ್. ಮಾಂಡವಿಯಾ ಅವರೊಂದಿಗೆ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಸಭೆಯಲ್ಲಿ ಭಾಗವಹಿಸಿದ್ದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯದರ್ಶಿ ಪ್ರೀತಿ ಸುದಾನ್, ಗೃಹ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ, ನಾಗರಿಕ ವಿಮಾನಯಾನ ಇಲಾಎಖೆ ಕಾರ್ಯದರ್ಶಿ ಪ್ರದೀಪ್ ಸಿಂಗ್ ಖರೋಲಾ, ಫಾರ್ಮಾಸೂಟಿಕಲ್ಸ್ ಕಾರ್ಯದರ್ಶಿ ಪಿ.ಡಿ. ವಘೇಲಾ, ಡಿಎಚ್ಆರ್ ಕಾರ್ಯದರ್ಶಿ ಮತ್ತು ಐಸಿಎಂಆರ್ ಮಹಾನಿರ್ದೇಶಕ ಡಾ.ಬಲರಾಮ್ ಭಾರ್ಗವ, ಜವಳಿ ಕಾರ್ಯದರ್ಶಿ ಎಸ್. ರವಿ ಕಪೂರ್, ಪ್ರವಾಸೋದ್ಯಮ ಕಾರ್ಯದರ್ಶಿ ಯೋಗೇಂದ್ರ ತ್ರಿಪಾಠಿ, ವಿಶೇಷ ಕಾರ್ಯದರ್ಶಿ (ಆರೋಗ್ಯ), ಸಂಜೀವ ಕುಮಾರ್, ಹೆಚ್ಚುವರಿ ಕಾರ್ಯದರ್ಶಿ (ಹಡಗು), ಸಂಜಯ್ ಬಂದೋಪಾಧ್ಯಾಯ, ಹೆಚ್ಚುವರಿ ಕಾರ್ಯದರ್ಶಿ (ಎಂಇಎ) ಆನಂದ್ ಸ್ವರೂಪ್, ಹೆಚ್ಚುವರಿ ಕಾರ್ಯದರ್ಶಿ (ಎಂಎಚ್), ದಮ್ಮು ರವಿ, ಇನ್ಸ್ಪೆಕ್ಟರ್ ಜನರಲ್ (ಐಟಿಬಿಪಿ) ಅನಿಲ್ ಮಲಿಕ್, ಡಿಜಿಹೆಚ್ಎಸ್, ಹೆಚ್ಎಫ್ಡಬ್ಲ್ಯೂ ಡಾ. ರಾಜೀವ್ ಗರ್ಗ್, ಜಂಟಿ ಕಾರ್ಯದರ್ಶಿ (ಹೆಚ್ಎಫ್ಡಬ್ಲ್ಯೂ) ಲವ ಅಗರ್ವಾಲ್ ಜೊತೆಗೆ ಸಶಸ್ತ್ರ ಪಡೆಗಳು, ಐಟಿಬಿಪಿ ಮತ್ತು ಇತರ ಸಚಿವಾಲಯಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ದೇಶದಲ್ಲಿ ಕೋವಿಡ್ -19 ತಡೆಗಟ್ಟುವಿಕೆ ಮತ್ತು ನಿರ್ವಹಣೆ ಕುರಿತು ಸಚಿವರ ಗುಂಪು ವಿವರವಾದ ಚರ್ಚೆ ನಡೆಸಿತು. ನಿಟ್ಟಿನಲ್ಲಿ ನಡೆಯುತ್ತಿರುವ ಕ್ರಮಗಳ ಕುರಿತು ಸಂಪುಟ ಕಾರ್ಯದರ್ಶಿಯವರ ಅಧ್ಯಕ್ಷತೆಯ ಕಾರ್ಯದರ್ಶಿಗಳ ಸಮಿತಿಯು ಇಂದು ಸಭೆ ನಡೆಸಿ, ಸದ್ಯದ ಪರಿಸ್ಥಿತಿಯ ಬಗ್ಗೆ ಸಚಿವರ ಗುಂಪಿಗೆ ತನ್ನ ಶಿಫಾರಸನ್ನು ನೀಡಿತ್ತು.

ಸಚಿವರ ಗುಂಪು ಭಾರತದಲ್ಲಿನ ಪ್ರಕರಣಗಳ ಸ್ಥಿತಿ ಮತ್ತು ಭಾರತ ಸರ್ಕಾರ ಈವರೆಗೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿತು. ಈಗಾಗಲೇ ಜಾರಿಯಲ್ಲಿರುವ ಪ್ರಯಾಣ ನಿರ್ಬಂಧಗಳು ಮತ್ತು ಸಲಹೆಗಳ ಜೊತೆಗೆ ಸಚಿವರ ಗುಂಪು ಕೆಲವು ನಿರ್ಧಾರಗಳನ್ನು ಪ್ರಕಟಿಸಿತು:

  • ಮಾರ್ಚ್ 22, 2020 GMT ಕಾಲಮಾನ 00:01 ಗಂಟೆಯ ನಂತರ (* ಅಂದರೆ ಮಾರ್ಚ್ 22, 2020 05:31 ಗಂಟೆಗಳ ಭಾರತೀಯ ಕಾಲಮಾನ) ಯಾವುದೇ ನಿಗದಿತ ಅಂತರರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕ ವಿಮಾನಗಳು ಭಾರತದ ಯಾವುದೇ ವಿಮಾನ ನಿಲ್ದಾಣಕ್ಕೆ ಯಾವುದೇ ವಿದೇಶಿ ವಿಮಾನ ನಿಲ್ದಾಣದಿಂದ ಹೊರಡುವುದಿಲ್ಲ. ಸೂಚನೆ ಮಾರ್ಚ್ 29, 2020 GMT ಕಾಲಮಾನ 00:01 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.
  • ಅಂತಹ ವಾಣಿಜ್ಯ ಪ್ರಯಾಣಿಕರ ವಿಮಾನಗಳು ಭಾರತದಲ್ಲಿ ಇಳಿಯಲು ಗರಿಷ್ಠ 20 ಗಂಟೆಗಳ ಪ್ರಯಾಣದ ಸಮಯವನ್ನು ನೀಡಲಾಗಿದೆ.
  • ಹಾಗೆಯೇ, ಒಳಬರುವ ಯಾವುದೇ ನಿಗದಿತ ಅಂತರರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕ ವಿಮಾನಗಳು 2020 ಮಾರ್ಚ್ 22 ಜಿಎಂಟಿ (* ಅಂದರೆ, ಮಾರ್ಚ್ 23, 2020 ಭಾರತೀಯ ಕಾಲಮಾನ 01:31) 20:01 ನಂತರ ನಂತರ ಭಾರತದ ನೆಲದಲ್ಲಿ  (ವಿದೇಶಿ ಅಥವಾ ಭಾರತೀಯ) ತನ್ನ ಪ್ರಯಾಣಿಕರನ್ನು ಇಳಿಸಲು ಅನುಮತಿ ಇಲ್ಲ.
  • ಇವು ಕೋವಿಡ್-19 ಹರಡುವುದನ್ನು ನಿರ್ಬಂಧಿಸುವ ತಾತ್ಕಾಲಿಕ ಕ್ರಮಗಳಾಗಿದ್ದು, ಸರ್ಕಾರ ಇವುಗಳನ್ನು ಪರಿಶೀಲಿಸಲಿದೆ.

ಇದಲ್ಲದೆ, ಮಾರ್ಚ್ 16, 2020 ರಂದು ಕೇಂದ್ರ ಸರ್ಕಾರವು ಔಷಧ ರಹಿತ ಕ್ರಮವಾಗಿ ಸಾಮಾಜಿಕವಾಗಿ ದೂರವಿರುವ ಕ್ರಮಗಳ ಬಗ್ಗೆ ವಿವರವಾದ ಸಲಹೆಯನ್ನು ನೀಡಿತ್ತು. ಸಾಮಾಜಿಕವಾಗಿ ದೂರವಿರುವುದು ಪ್ರಾಥಮಿಕ ಸಂಪರ್ಕವನ್ನು ತಪ್ಪಿಸುತ್ತದೆ / ಕಡಿಮೆ ಮಾಡುವುದರಿಂದ ರೋಗ ಹರಡುವಿಕೆಯ ಪ್ರಮಾಣ ಮತ್ತು ವ್ಯಾಪ್ತಿಯನ್ನು ತಡೆಯಲು ಅಥವಾ ನಿಧಾನಗೊಳಿಸಲು ಸಹಾಯಕವಾಗುತ್ತದೆ. ರೋಗದಿಂದ ಉಂಟಾಗುವ ಕಾಯಿಲೆ ಮತ್ತು ಮರಣ ಪ್ರಮಾಣವನ್ನು ಕಡಿಮೆ ಮಾಡಲು ಇದು ಉಪಯುಕ್ತ ವಿಧಾನವೆಂದು ಕಂಡುಬಂದಿದೆ. ಸಾಮಾಜಿಕ ಅಂತರದ ಜೊತೆಗೆ, ಸೂಕ್ತವಾದ ಗಾಳಿ ಬೆಳಕಿನೊಂದಿಗೆ ಕೈ ಮತ್ತು ಉಸಿರಾಟದ ನೈರ್ಮಲ್ಯ, ಆಗಾಗ್ಗೆ ಮೇಲ್ಮೈಗಳನ್ನು ಸ್ವಚ್ಛಗೊಳಿಸುವುದು, ವಸ್ತುಗಳ ಹಂಚಿಕೆಯನ್ನು ಕಡಿಮೆ ಮಾಡುವುದು ಮುಂತಾದ ಪರಿಸರ ನೈರ್ಮಲ್ಯದ ಕ್ರಮಗಳನ್ನು ನಿಯಮಿತವಾಗಿ ಪಾಲಿಸುವಂತೆ ಸರ್ಕಾರವು ನಾಗರಿಕರಿಗೆ ಕರೆಕೊಟ್ಟಿದೆ.

ಸಚಿವರ ಗುಂಪಿನ ನಿರ್ದೇಶನದಂತೆ, ಈಗಾಗಲೇ ನೀಡಲಾದ ಸಲಹೆಗಳ ಮುಂದುವರಿಕೆಯಾಗಿ, ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಸರ್ಕಾರಿ ಕಚೇರಿಗಳಲ್ಲಿನ ಸಂಪರ್ಕ ಮತ್ತು ದಟ್ಟಣೆಯನ್ನು ಕಡಿಮೆ ಮಾಡಲು ಕೆಲವು ಸೂಚನೆಗಳನ್ನು ನೀಡಿದೆ. ಕಚೇರಿ ಜ್ಞಾಪಕ ಪತ್ರದ ಪ್ರಕಾರ:

  • ಗ್ರೂಪ್ ಬಿ ಮತ್ತು ಸಿ ಉದ್ಯೋಗಿಗಳಲ್ಲಿ ಶೇಕಡ 50 ರಷ್ಟು ಮಂದಿ ಪ್ರತಿದಿನ ಕಚೇರಿಗೆ ಹಾಜರಾಗಬೇಕಿದ್ದು, ಉಳಿದ ಶೇ.50 ಸಿಬ್ಬಂದಿಗೆ ಮನೆಯಿಂದ ಕೆಲಸ ಮಾಡಲು ಸೂಚನೆ ನೀಡಬೇಕು.
  • ಗ್ರೂಪ್ ಬಿ ಮತ್ತು ಸಿ ಸಿಬ್ಬಂದಿಗೆ ಸಾಪ್ತಾಹಿಕ ರೋಸ್ಟರ್ ಆಫ್ ಡ್ಯೂಟಿ ರಚಿಸಬೇಕು ಮತ್ತು ಅವರು ಪರ್ಯಾಯ ವಾರಗಳಲ್ಲಿ ಕಚೇರಿಗೆ ಹಾಜರಾಗಬೇಕು.
  • ನಿರ್ದಿಷ್ಟ ದಿನದಂದು ಕಚೇರಿಗೆ ಹಾಜರಾಗುವ ಎಲ್ಲಾ ಉದ್ಯೋಗಿಗಳಿಗೆ ಕೆಲಸದ ಸಮಯವು ಬೇರೆ ಬೇರೆಯಾಗಿರಬೇಕು.

ವಿವರಗಳನ್ನು DoPT ವೆಬ್ಸೈಟ್ನಲ್ಲಿ ನೋಡಬಹುದು; https://dopt.gov.in/sites/default/files/11013_9_2014_EsttAIII_19032020_English.PDF

ಇದಲ್ಲದೆ, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಸೇವೆಗಳಲ್ಲಿ ಸಮಯವನ್ನು ನಿಯಂತ್ರಿಸಲು ರಾಜ್ಯಗಳು ಸೂಚನೆಗಳನ್ನು ನೀಡುತ್ತವೆ. ಕೈಗಾರಿಕೆಗಳು ವಿವಿಧ ಸಮಯಗಳಲ್ಲಿ ಕೆಲಸ ಮತ್ತು ಮಾರುಕಟ್ಟೆಯಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಸಹ ಕ್ರಮ ಕೈಗೊಳ್ಳಬೇಕು.

ಸಾಧ್ಯವಿರುವ ಕಡೆ ಮನೆಯಿಂದಲೇ ಕೆಲಸ ಮಾಡುವುದನ್ನು ಪರಿಗಣಿಸುವಂತೆ ರಾಜ್ಯಗಳು ಖಾಸಗಿ ವಲಯಕ್ಕೆ ನಿರ್ದೇಶನಗಳನ್ನು ನೀಡುತ್ತವೆ.

ಎಲ್ಲಾ ಶಿಕ್ಷಣ ಸಂಸ್ಥೆಗಳು, ಚಿತ್ರಮಂದಿರಗಳು, ವಸ್ತು ಸಂಗ್ರಹಾಲಯಗಳು, ಜಿಮ್ಗಳು, ಪರೀಕ್ಷಾ ಕೇಂದ್ರಗಳು ತಾತ್ಕಾಲಿಕವಾಗಿ ಮುಚ್ಚಿರುತ್ತವೆ.

ಎಲ್ಲಾ ಕ್ರೀಡಾಕೂಟಗಳು, ಸ್ಪರ್ಧೆಗಳು ಮತ್ತು ಧಾರ್ಮಿಕ ಕೂಟಗಳನ್ನು ಮುಂದೂಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ರಾಜ್ಯಗಳು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸಣ್ಣ ಸಭೆಗಳಲ್ಲಿಯೂ ಸಹ ಅಗತ್ಯವಾದ ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುವುದನ್ನು ಖಾತ್ರಿಪಡಿಸಿಕೊಳ್ಳಬೇಕು.

ಸಾರ್ವಜನಿಕ ಸಾರಿಗೆಗೆ ಸಂಬಂಧಿಸಿದಂತೆ, ಮಹಾನಗರಗಳು, ರೈಲ್ವೆಗಳು, ಬಸ್ಸುಗಳು ಮತ್ತು ವಿಮಾನಗಳು ತಮ್ಮ ಸೇವೆಗಳಲ್ಲಿ ಇಳಿಕೆ ಮಾಡಬೇಕು, ಸಾಮಾಜಿಕ ದೂರವನ್ನು ಖಚಿತಪಡಿಸಿಕೊಳ್ಳಲು ಪರ್ಯಾಯ ಆಸನಗಳನ್ನು ಪರಿಗಣಿಸಬೇಕು ಎಂದು ನಿರ್ದೇಶಿಸಲಾಗಿದೆ. ರೈಲ್ವೆ ನಿಲ್ದಾಣಗಳು, ಮೆಟ್ರೋ ನಿಲ್ದಾಣಗಳು, ಬಸ್ ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳಂತಹ ಸ್ಥಳಗಳಲ್ಲಿ ಪರಿಣಾಮಕಾರಿ ಸೋಂಕು ನಿವಾರಣೆ ಮತ್ತು ಜನದಟ್ಟಣೆ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಬೇಕು.

2020 ಮಾರ್ಚ್ 20 ರಾತ್ರಿ 12 ಗಂಟೆಯಿಂದ ರೋಗಿಗಳು, ವಿದ್ಯಾರ್ಥಿಗಳು ಮತ್ತು ದಿವ್ಯಾಂಗರನ್ನು ಹೊರತುಪಡಿಸಿ ಹಿರಿಯ ನಾಗರಿಕರಿಗೆ ಮತ್ತು ರಿಯಾಯಿತಿ ಬುಕಿಂಗ್ ಪಡೆಯುವ ಇತರರಿಗೆ ಪ್ರಯಾಣ ರಿಯಾಯಿತಿಗಳನ್ನು ರದ್ದುಪಡಿಸಿ ರೈಲ್ವೆ ಈಗಾಗಲೇ ಆದೇಶ ಹೊರಡಿಸಿದೆ.

ಇದಲ್ಲದೆ, ಜನ ಪ್ರತಿನಿಧಿಗಳು / ಸರ್ಕಾರಿ ನೌಕರರು / ವೈದ್ಯಕೀಯ ವೃತ್ತಿಪರರನ್ನು ಹೊರತುಪಡಿಸಿ 65 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಾಗರಿಕರು ವೈದ್ಯಕೀಯ ಕಾರಣಗಳು ಮತ್ತು ಅಗತ್ಯ ಸೇವೆಗಳ ಅವಶ್ಯಕತೆಯನ್ನು ಹೊರತುಪಡಿಸಿ ಇತರ ಸಮಯದಲ್ಲಿ ಮನೆಯಲ್ಲಿಯೇ ಇರುವಂತೆ ಮತ್ತು ಸಭೆ ಸಮಾರಂಭಗಳಲ್ಲಿ ಭಾಗವಹಿಸದಂತೆ ಎಲ್ಲಾ ರಾಜ್ಯಗಳು ಸೂಕ್ತ ಸೂಚನೆಗಳನ್ನು ನೀಡಬೇಕು.

ಹಾಗೆಯೇ, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಮಕ್ಕಳು ಮನೆಯಲ್ಲಿಯೇ ಇರುವಂತೆ ಮತ್ತು ಸಾರ್ವಜನಿಕ ಉದ್ಯಾನವನಗಳು, ಪ್ರವಾಸ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಇತರ ಆಟಗಳಿಗೆ ಹೋಗದಂತೆ ಸೂಚಿಸಬೇಕು.

ವೈದ್ಯಕೀಯ ವೃತ್ತಿಪರರೊಂದಿಗೆ ಸಮಾಲೋಚಿಸಿ, ತುರ್ತಿಲ್ಲದೆ ಆಸ್ಪತ್ರೆಗೆ ದಾಖಲಾಗುವುದನ್ನು ತಪ್ಪಿಸಲು ಮತ್ತು ತುರ್ತಿಲ್ಲದ ಶಸ್ತ್ರಚಿಕಿತ್ಸೆಯನ್ನು ಕಡಿಮೆ ಮಾಡಲು ಎಲ್ಲಾ ಆರೋಗ್ಯ ಸಂಸ್ಥೆಗಳಿಗೆ ವಿವರವಾದ ಸಲಹೆಯನ್ನು ನೀಡಲಾಗುತ್ತದೆ. ದುರ್ಬಲರಿಗೆ ಆಸ್ಪತ್ರೆಗೆ ಸಂಬಂಧಿಸಿದ ಸೋಂಕುಗಳನ್ನು ತಪ್ಪಿಸಲು ಮತ್ತು COVID-19 ಸವಾಲುಗಳನ್ನು ಎದುರಿಸಲು ಆಸ್ಪತ್ರೆಗಳನ್ನು ಸಿದ್ಧಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಕೋವಿಡ್-19 ನಿರ್ವಹಣೆಯಲ್ಲಿ ಸರ್ಕಾರದ ನಿರಂತರ ಪ್ರಯತ್ನಗಳನ್ನು ಬೆಂಬಲಿಸಲು ಯುವಜನರು ಮತ್ತು ನಾಗರಿಕರು ಸ್ವಯಂಸೇವಕರಾಗುವಂತೆ ಕೋರಲಾಗಿದೆ.

ಮುಖಗವಸುಗಳು, ಸ್ಯಾನಿಟೈಜರ್ಗಳು ಮತ್ತು ಇತರ ಆರೋಗ್ಯ ಸಂಬಂಧಿತ ಲಾಜಿಸ್ಟಿಕ್ ವಸ್ತುಗಳಿಗೆ ಅತಿಯಾದ ಬೆಲೆ ವಿಧಿಸುವವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲು ಮತ್ತು ಎಲ್ಲಾ ಆಸ್ಪತ್ರೆಗಳಲ್ಲಿ ಮತ್ತು ಹೆಚ್ಚಿನ ಜನರಿಗೆ ಅವುಗಳ ಲಭ್ಯವಾಗುವಂತೆ ಮಾಡಲು ಜನರು ಮುಖಗವಸುಗಳನ್ನು ಅಗತ್ಯವಿದ್ದಾಗ ಮಾತ್ರ ಬಳಸಬೇಕು ಮತ್ತು ಸೋಪಿನಿಂದ ಕೈ ತೊಳೆಯಬೇಕು ಎಂದು ಫಾರ್ಮಾ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯವು ನಿರ್ದೇಶನ ನೀಡಿದೆ.

ಸರ್ಕಾರವು ತೆಗೆದುಕೊಳ್ಳುವ ಎಲ್ಲಾ ಕ್ರಮಗಳ ಬಗ್ಗೆ ಜನಸಮುದಾಯ ಜಾಗೃತವಾಗಿರಬೇಕು ಮತ್ತು COVID-19 ರೋಗವನ್ನು ನಿರ್ವಹಿಸುವ ಸರ್ಕಾರದ ಪ್ರಯತ್ನಗಳಲ್ಲಿ ಅವರ ಬೆಂಬಲವನ್ನು ಕೋರಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು.

***



(Release ID: 1607264) Visitor Counter : 273