ಪ್ರಧಾನ ಮಂತ್ರಿಯವರ ಕಛೇರಿ

ಥಾಯ್ ಲ್ಯಾಂಡ್ ನಲ್ಲಿ ಆದಿತ್ಯ ಬಿರ್ಲಾ ಸಮೂಹದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗಿಯಾದ ಪ್ರಧಾನಮಂತ್ರಿ

Posted On: 03 NOV 2019 9:54AM by PIB Bengaluru

ಥಾಯ್ ಲ್ಯಾಂಡ್ ನಲ್ಲಿ ಆದಿತ್ಯ ಬಿರ್ಲಾ ಸಮೂಹದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗಿಯಾದ ಪ್ರಧಾನಮಂತ್ರಿ

ಭಾರತಕ್ಕಿದು ಉತ್ತಮ ಕಾಲ: ಪ್ರಧಾನಮಂತ್ರಿ,  ಥಾಯ್ ಲ್ಯಾಂಡ್ 4.0 ಭಾರತದ ಆದ್ಯತೆಗಳಿಗೆ ಪೂರಕವಾಗಿದ್ದು, ಸಹಭಾಗಿತ್ವದ ಗಮನಾರ್ಹ ಅವಕಾಶಗಳನ್ನು ಒದಗಿಸುತ್ತದೆ: ಪ್ರಧಾನಮಂತ್ರಿ,   ವಾಣಿಜ್ಯ ಮತ್ತು ಸಂಸ್ಕೃತಿಗೆ ಜಗತ್ತನ್ನು ಹತ್ತಿರಕ್ಕೆ ತರುವ ಶಕ್ತಿಯಿದೆ: ಪ್ರಧಾನಮಂತ್ರಿ

 

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದು ಆದಿತ್ಯ ಬಿರ್ಲಾ ಸಮೂಹದ ಥಾಯ್ ಲ್ಯಾಂಡ್ ನಲ್ಲಿನ ಕಾರ್ಯಾಚರಣೆಯ 50ನೇ ವಾರ್ಷಿಕೋತ್ಸವದಲ್ಲಿ ಭಾಗಿಯಾದರು. ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಶ್ರೀ ಕುಮಾರ ಮಂಗಲಂ ಬಿರ್ಲಾ, ಥಾಯ್ ಲ್ಯಾಂಡ್ ನಲ್ಲಿ ತಮ್ಮ ಸಮೂಹದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗಿಯಾಗಿದ್ದಕ್ಕಾಗಿ ಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದರು.

ಸರ್ಕಾರಿ ಅಧಿಕಾರಿಗಳು ಮತ್ತು ಕೈಗಾರಿಕಾ ನಾಯಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಹಲವರಿಗೆ ಅವಕಾಶಗಳನ್ನು ಸೃಷ್ಟಿಸಿ ಅವರ ಉನ್ನತಿಗೆ ಕಾರಣವಾದ ಆದಿತ್ಯ ಬಿರ್ಲಾ ಸಮೂಹದ ತಂಡದ ಅದ್ಭುತ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು.  ಭಾರತ ಮತ್ತು ಥಾಯ್ ಲ್ಯಾಂಡ್ ನ ಬಲಿಷ್ಠ ಸಾಂಸ್ಕೃತಿಕ ನಂಟಿನ ಬಗ್ಗೆ ಮಾತನಾಡಿದ ಅವರು, ವಾಣಿಜ್ಯ ಮತ್ತು ಸಂಸ್ಕೃತಿಗೆ ವಿಶ್ವವನ್ನು ಹತ್ತಿರ ತರುವ ಶಕ್ತಿ ಇದೆ ಎಂದರು.

ಭಾರತದಲ್ಲಿ ಪರಿವರ್ತನಾತ್ಮಕ ಬದಲಾವಣೆ

ಕಳೆದ ಐದು ವರ್ಷಗಳಲ್ಲಿ ತಮ್ಮ ಸರ್ಕಾರ ಸಾಧಿಸಿದ ಹಲವು ಯಶೋಗಾಥೆಗಳನ್ನು ಅವರು ಹಂಚಿಕೊಂಡರು. ಯಾಂತ್ರಿಕವಾಗಿ ಕಾರ್ಯ ನಿರ್ವಹಿಸುವ ಏಕ ಪ್ರಕಾರದ ಕೆಲಸದ ಪರಿಯನ್ನು ಬದಲಾಯಿಸಿದ್ದು,  ಪರಿವರ್ತನಾತ್ಮಕ ಬದಲಾವಣೆಗಳಿಗೆ ಕಾರಣವಾಯಿತು ಎಂದರು. ಈ ಹಿಂದೆ ಅಸಾಧ್ಯ ಎಂದು ಹೇಳಲಾಗುತ್ತಿದ್ದುದು ಈಗ ಸಾಧ್ಯವಾಗುತ್ತಿದೆ, ಜೊತೆಗೆ ಭಾರತಕ್ಕೆ ಇದು ಅತ್ಯುತ್ತಮ ಸಮಯವಾಗಿದೆ ಎಂದರು.

ವಿಶ್ವ ಬ್ಯಾಂಕ್ ನ ಸುಗಮ ವಾಣಿಜ್ಯ ನಡೆಸುವಿಕೆ ಶ್ರೇಯಾಂಕದಲ್ಲಿ ಭಾರತ ಕಳೆದ 5 ವರ್ಷಗಳಲ್ಲಿ 79 ಸ್ಥಾನ ಜಿಗಿದಿದೆ. 2014ರಲ್ಲಿ 142ನೇ ಸ್ಥಾನದಲ್ಲಿದ್ದದ್ದು 2019ರಲ್ಲಿ 63ಕ್ಕೆ ಬಂದಿದೆ, ಇದು ವ್ಯಾಪಾರದ ಪರಿಸರದಲ್ಲಿ ಸುಧಾರಣೆ ಮಾಡುವ ಬದ್ಧತೆಯನ್ನು ಬಿಂಬಿಸುತ್ತದೆ ಎಂದರು. ವಿಶ್ವ ಆರ್ಥಿಕ ವೇದಿಕೆಯ ಪ್ರವಾಸ ಮತ್ತು ಪ್ರವಾಸೋದ್ಯಮ ಸ್ಪರ್ಧಾತ್ಮಕತೆ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕ 2013ರಲ್ಲಿ 65 ಇದ್ದದ್ದು 2019ರಲ್ಲಿ 34ಕ್ಕೆ ಏರಿದೆ ಎಂದರು. ಉತ್ತಮ ರಸ್ತೆಗಳು, ಸಂಪರ್ಕ, ಸ್ವಚ್ಛತೆ ಮತ್ತು ಸುಧಾರಿತ ಕಾನೂನು ಮತ್ತು ಸುವ್ಯವಸ್ಥೆ ಮೂಲಕ ಆರಾಮ, ಅನುಕೂಲತೆ ಮತ್ತು ಸುರಕ್ಷತೆಯನ್ನು ಒದಗಿಸುವುದರಿಂದ ವಿದೇಶಿ ಪ್ರವಾಸಿಗರ ಆಗಮನವು ಶೇ.50 ರಷ್ಟು ಹೆಚ್ಚಾಗಿದೆ ಎಂದರು.

ಉಳಿಸಿದ ಹಣ ಗಳಿಸಿದ ಹಣಕ್ಕೆ ಸಮಾನ, ಇಂಧನ ಉಳಿತಾಯ ಇಂಧನ ಉತ್ಪಾದನೆಗೆ ಸಮಾನ ಎಂದ ಅವರು, ನೇರ ಸವಲತ್ತು ವರ್ಗಾವಣೆ ಯೋಜನೆ ಮೂಲಕ ಸೋರಿಕೆಯನ್ನು ತಡೆದು ಕ್ಷಮತೆಯನ್ನು ಹೆಚ್ಚಿಸಲಾಗಿದೆ, ಇದರಿಂದಾಗಿ 20 ಶತಕೋಟಿ ಡಾಲರ್ ಹಣ ಈವರೆಗೆ ಉಳಿತಾಯವಾಗಿದೆ ಎಂದರು. ಇಂಧನ ಕ್ಷಮತೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ, ಎಲ್.ಇ.ಡಿ. ದೀಪಗಳು ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸಿವೆ ಎಂದರು.

ಭಾರತಹೂಡಿಕೆಯ ಆಕರ್ಷಕ ತಾಣ

ಭಾರತವನ್ನು ಅತ್ಯಂತ ಉತ್ತಮವಾದ ಜನಸ್ನೇಹಿ ತೆರಿಗೆ ಆಡಳಿತ ಎಂದು ಬಣ್ಣಿಸಿದ ಪ್ರಧಾನಮಂತ್ರಿ, ಮಧ್ಯಮವರ್ಗದ ಮೇಲಿನ ತೆರಿಗೆಯ ಹೊರೆ ತಗ್ಗಿಸುವ ಇತ್ತೀಚಿನ ಕ್ರಮಗಳ ಸೇರ್ಪಡೆಯ ಬಗ್ಗೆ ಒತ್ತಿ ಹೇಳಿ, ಮುಖಾಮುಖಿ ಇಲ್ಲದ ತೆರಿಗೆ ನಿರ್ಧರಣೆಯಿಂದ ಕಿರುಕುಳ ತಪ್ಪಿದೆ, ಸಾಂಸ್ಥಿಕ ತೆರಿಗೆ ದರ ಕಡಿತ ಮಾಡಲಾಗಿದೆ ಎಂದರು. ಜಿಎಸ್ಟಿಯ ಜಾರಿಯಿಂದಾಗಿ ಆರ್ಥಿಕ ಸಮಗ್ರತೆ ಸಾಕಾರವಾಗಿದೆ, ಇದನ್ನು ಇನ್ನೂ ಹೆಚ್ಚು ಜನಸ್ನೇಹಿ ಮಾಡಲು ಸರ್ಕಾರ ಬದ್ಧವಾಗಿದೆ ಎಂದರು. ಈ ಎಲ್ಲ ಕ್ರಮಗಳೂ ಭಾರತವನ್ನು ಹೂಡಿಕೆಗೆ ಅತ್ಯಂತ ಆಕರ್ಷಕ ತಾಣವನ್ನಾಗಿ ಮಾಡಿವೆ, ಯುಎನ್.ಸಿ.ಟಿ.ಎ.ಡಿ.ಯ 10 ಅಗ್ರ ಎಫ್.ಡಿ.ಐ. ತಾಣಗಳ ಪೈಕಿ ಭಾರತ ಬಿಂಬಿತವಾಗಿದೆ ಎಂದರು.

ಥಾಯ್ ಲ್ಯಾಂಡ್ 4.0ಗೆ ಪೂರಕವಾಗಿದೆ

ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕ ರಾಷ್ಟ್ರವಾಗಿ ಮಾಡುವ ಕನಸಿನ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ, 2014ರಲ್ಲಿ 2 ಟ್ರಿಲಿಯನ್ ಡಾಲರ್ ಇದ್ದ ಆರ್ಥಿಕತೆ 2019ರಲ್ಲಿ ಹೇಗೆ 3 ಟ್ರಿಲಿಯನ್ ಡಾಲರ್ ಗೆ ಹೆಚ್ಚಳವಾಯಿತು ಎಂಬುದನ್ನು ಒತ್ತಿ ಹೇಳಿದರು.

ಥಾಯ್ ಲ್ಯಾಂಡ್ ಅನ್ನು ಮೌಲ್ಯಾಧಾರಿತ ಆರ್ಥಿಕ ರಾಷ್ಟ್ರವಾಗಿ ಪರಿವರ್ತನೆ ಮಾಡುವ ಥಾಯ್ ಲ್ಯಾಂಡ್ 4.0 ಉಪಕ್ರಮಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ, ಭಾರತದ ಆದ್ಯತೆಗಳಾದ ಡಿಜಿಟಲ್ ಭಾರತ, ಕೌಶಲ್ಯ ಭಾರತ, ಸ್ವಚ್ಛ ಭಾರತ ಅಭಿಯಾನ, ಸ್ಮಾರ್ಟ್ ಸಿಟಿಗಳು, ಜಲ್ ಜೀವನ್ ಅಭಿಯಾನವೇ ಮೊದಲಾದ ಭಾರತದ ಕ್ರಮಗಳಿಗೆ ಸಮನಾಗಿದ್ದು, ಪೂರಕವಾಗಿವೆ ಎಂದ ಅವರು, ಗಣನೀಯ ಅವಕಾಶಗಳ ಪಾಲುದಾರಿಕೆಗೆ ಆಹ್ವಾನ ನೀಡಿದರು. ಎರಡೂ ರಾಷ್ಟ್ರಗಳು ಭೂ-ರಾಜಕೀಯ, ಸಾಂಸ್ಕೃತಿಕ ಸಮಾನತೆ ಮತ್ತು ಉತ್ತಮಿಕೆಯ  ಆಪ್ತತೆಯ ಲಾಭ ಪಡೆಯಬೇಕು ಮತ್ತು ವಾಣಿಜ್ಯ ಪಾಲುದಾರಿಕೆ ಹೆಚ್ಚಿಸಬೇಕು ಎಂದರು.  

ಥಾಯ್ ಲ್ಯಾಂಡ್ ನಲ್ಲಿ ಆದಿತ್ಯ ಬಿರ್ಲಾ ಸಮೂಹ

22 ವರ್ಷಗಳ ಹಿಂದೆ, ಭಾರತೀಯ ಆರ್ಥಿಕತೆ  ವಿಧ್ಯುಕ್ತವಾಗಿ ಮುಕ್ತವಾದಾಗ, ಶ್ರೀ ಆದಿತ್ಯ ವಿಕ್ರಮ ಬಿರ್ಲಾ ಅವರು ಥಾಯ್ ಲ್ಯಾಂಡ್ ನಲ್ಲಿ ನೂಲುವ ಘಟಕ ಸ್ಥಾಪಿಸುವ ಮೂಲಕ ಪ್ರವರ್ತಕರಾದರು. ಇಂದು ಈ ಸಮೂಹ ಥಾಯ್ ಲ್ಯಾಂಡ್ ನಲ್ಲಿ 1.1 ಶತಕೋಟಿ ಡಾಲರ್ಗಳ ವೈವಿಧ್ಯಮಯ ವ್ಯವಹಾರವನ್ನು ಹೊಂದಿದ್ದು, ಅತಿದೊಡ್ಡ ಉದ್ಯಮಗಳಲ್ಲಿ ಒಂದಾಗಿದೆ. ಆದಿತ್ಯ ಬಿರ್ಲಾ ಸಮೂಹ ತನ್ನ ಒಂಬತ್ತು ಅತ್ಯಾಧುನಿಕ ಘಟಕಗಳ ಮೂಲಕ ಥಾಯ್ ಲ್ಯಾಂಡ್ ನಲ್ಲಿ ಅಸ್ತಿತ್ವ ಹೊಂದಿದ್ದು, ಜವಳಿ, ಇಂಗಾಲದ ನಿಕ್ಷೇಪ ಮತ್ತು ರಾಸಾಯನಿಕಗಳಂತಹ ವೈವಿಧ್ಯಮಯ ಕ್ಷೇತ್ರಗಳನ್ನು ವ್ಯಾಪಿಸಿದೆ.



(Release ID: 1592606) Visitor Counter : 102