ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಅವರಿಂದ ರಾಷ್ಟ್ರೀಯ ಪಶು ರೋಗ ನಿಯಂತ್ರಣ ಕಾರ್ಯಕ್ರಮ ಮತ್ತು ರಾಷ್ಟ್ರೀಯ ಕೃತಕ ಬೀಜಬಿತ್ತುವ ಕಾರ್ಯಕ್ರಮಕ್ಕೆ ಚಾಲನೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಯುವಜನರಿಗೆ ನಾವಿನ್ಯ ಪರಿಹಾರಗಳನ್ನು ಕಂಡುಹಿಡಿಯಲು ಮತ್ತು ಸಮಾಜದ ಎಲ್ಲ ವರ್ಗದ ಜೀವನದಲ್ಲಿ ಏಕ ಅಥವಾ ಬಿಡಿ ಪ್ಲಾಸ್ಟಿಕ್ ಬಳಕೆ ತಗ್ಗಿಸಲು ಕರೆ

Posted On: 11 SEP 2019 3:46PM by PIB Bengaluru

ಪ್ರಧಾನಮಂತ್ರಿ ಅವರಿಂದ ರಾಷ್ಟ್ರೀಯ ಪಶು ರೋಗ ನಿಯಂತ್ರಣ ಕಾರ್ಯಕ್ರಮ ಮತ್ತು ರಾಷ್ಟ್ರೀಯ ಕೃತಕ ಬೀಜಬಿತ್ತುವ ಕಾರ್ಯಕ್ರಮಕ್ಕೆ ಚಾಲನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಯುವಜನರಿಗೆ ನಾವಿನ್ಯ ಪರಿಹಾರಗಳನ್ನು ಕಂಡುಹಿಡಿಯಲು ಮತ್ತು ಸಮಾಜದ ಎಲ್ಲ ವರ್ಗದ ಜೀವನದಲ್ಲಿ ಏಕ ಅಥವಾ ಬಿಡಿ ಪ್ಲಾಸ್ಟಿಕ್ ಬಳಕೆ ತಗ್ಗಿಸಲು ಕರೆ
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಥುರಾದಲ್ಲಿಂದು ದೇಶಾದ್ಯಂತ ಇರುವ ಜಾನುವಾರುಗಳಲ್ಲಿನ ಕಾಲು ಬಾಯಿ ರೋಗ(ಎಫ್ ಎಂಡಿ) ಮತ್ತು ದನಕರುಗಳಲ್ಲಿನ ಗರ್ಭಪಾತ ರೋಗ (ಬ್ರೂಸೆಲೋಸಿಸ್) ನಿಯಂತ್ರಣ ಮತ್ತು ನಿರ್ಮೂಲನೆ ಉದ್ದೇಶದ ರಾಷ್ಟ್ರೀಯ ಪಶು ಕಾಯಿಲೆ ನಿಯಂತ್ರಣ ಕಾರ್ಯಕ್ರಮ(ಎನ್ ಎಸಿಡಿಪಿ)ಕ್ಕೆ ಚಾಲನೆ ನೀಡಿದರು.

12 ಸಾವಿರದ 652 ಕೋಟಿ ರೂ. ವೆಚ್ಚದ ಸಂಪೂರ್ಣ ಕೇಂದ್ರ ಸರ್ಕಾರ ಪ್ರಯೋಜಕತ್ವದ ಈ ಕಾರ್ಯಕ್ರಮದಲ್ಲಿ ಎರಡು ರೋಗಗಳನ್ನು ನಿಯಂತ್ರಿಸಲು ಸುಮಾರು 600 ಮಿಲಿಯನ್ ಜಾನುವಾರುಗಳಿಗೆ ಲಸಿಕೆ ಹಾಕಲಾಗುವುದು.

ಇದೇ ವೇಳೆ ಪ್ರಧಾನಮಂತ್ರಿಯವರು ರಾಷ್ಟ್ರೀಯ ಕೃತಕ ಬೀಜಬಿತ್ತುವ ಕಾರ್ಯಕ್ರಮಕ್ಕೆ ಮತ್ತು ದೇಶದ 687 ಜಿಲ್ಲೆಗಳಲ್ಲಿರುವ ಎಲ್ಲ ಕೃಷಿ ವಿಜ್ಞಾನ ಕೇಂದ್ರ(ಕೆವಿಕೆ) ಗಳ ಮೂಲಕ ದೇಶಾದ್ಯಂತ ಲಸಿಕೆ, ರೋಗ ನಿರ್ವಹಣೆ ಮತ್ತು ಕೃತಕ ಬೀಜ ಬಿತ್ತುವಿಕೆ ಮತ್ತು ಉತ್ಪಾದನೆ ಹೆಚ್ಚಿಸುವ ಕಾರ್ಯಾಗಾರಗಳನ್ನು ನಡೆಸುವುದಕ್ಕೂ ಚಾಲನೆ ನೀಡಿದರು.

ಈ ವೇಳೆ ಭಾರಿ ಜನಸಂಖ್ಯೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ “ಪರಿಸರ ಮತ್ತು ಜಾನುವಾರು ಸದಾ ಭಾರತದ ಆರ್ಥಿಕತೆಯ ಚಿಂತನೆ ಮತ್ತು ತತ್ವದ ಜೀವಾಳ. ಆದ್ದರಿಂದ ನಾವು ಸ್ವಚ್ಛ ಭಾರತ ಅಥವಾ ಜಲ ಜೀವನ್ ಮಿಷನ್ ಅಥವಾ ಕೃಷಿ ಮತ್ತು ಪಶು ಸಂಗೋಪನೆಗೆ ಉತ್ತೇಜನಕ್ಕೆ ಯಾವುದೇ ಕ್ರಮಗಳನ್ನು ಕೈಗೊಂಡರೂ ನಿರಂತರವಾಗಿ ಪ್ರಕೃತಿ ಮತ್ತು ಆರ್ಥಿಕತೆ ನಡುವೆ ಸಮತೋಲನ ಕಾಯ್ದುಕೊಳ್ಳುತ್ತಿದ್ದೇವೆ. ಇದೇ ನಮಗೆ ಸದೃಢ ಭಾರತ ನಿರ್ಮಾಣಕ್ಕೆ ಶಕ್ತಿ ನೀಡುತ್ತಿದೆ’’ಎಂದರು.

ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ದೇಶದಲ್ಲಿ ಬಿಡಿ ಅಥವಾ ಏಕ ಪ್ಲಾಸ್ಟಿಕ್ ಬಳಕೆ ತಗ್ಗಿಸುವ ಉದ್ದೇಶಕ್ಕೆ ಹೆಚ್ಚಿನ ಒತ್ತು ನೀಡುವ “ಸ್ವಚ್ಛತ ಹಿ ಸೇವಾ’’ ಕಾರ್ಯಕ್ರಮಕ್ಕೂ ಚಾಲನೆ ನೀಡಿದರು.

“ನಾವು ಈ ವರ್ಷದ ಅಕ್ಟೋಬರ್ 2ರ ವೇಳೆಗೆ ನಮ್ಮ ಮನೆಗಳು, ಕಚೇರಿಗಳು ಮತ್ತು ಕೆಲಸದ ಸ್ಥಳಗಳು ಬಿಡಿ ಪ್ಲಾಸ್ಟಿಕ್ ಬಳಕೆಯಿಂದ ಮುಕ್ತಗೊಳಿಸಲು ಪ್ರಯತ್ನಿಸಬೇಕು’’ಎಂದು ಪ್ರಧಾನಿ ಹೇಳಿದರು.

“ಬಿಡಿ ಪ್ಲಾಸ್ಟಿಕ್ ಬಳಕೆ ವಿರುದ್ಧದ ಈ ಹೋರಾಟದಲ್ಲಿ ಎಲ್ಲ ಸ್ವಯಂ ಸೇವಾ ಸಂಘಗಳು, ನಾಗರಿಕ ಸಮಾಜ, ಸರ್ಕಾರೇತರ ಸಂಸ್ಥೆಗಳು, ಮಹಿಳಾ ಮತ್ತು ಯುವ ಸಂಘಟನೆಗಳು, ಪ್ರತಿಯೊಂದು ಶಾಲಾ-ಕಾಲೇಜು ಮತ್ತು ಎಲ್ಲ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು, ಪ್ರತಿಯೊಬ್ಬ ನಾಗರಿಕರು ಕೈ ಜೋಡಿಸಬೇಕೆಂದು ನಾನು ಮನವಿ ಮಾಡುತ್ತಿದ್ದೇನೆ’’ಎಂದರು. “ಪ್ಲಾಸ್ಟಿಕ್ ಚೀಲಗಳಿಗೆ ಬದಲಾಗಿ ನಾವು ಸುಲಭ ಹಾಗೂ ಕಡಿಮೆ ದರದ ಪರ್ಯಾಯಗಳತ್ತ ಗಮನಹರಿಸಬೇಕು. ನಮ್ಮ ನವೋದ್ಯಮಗಳ ಮೂಲಕ ಹಲವು ಪರಿಹಾರಗಳನ್ನು ನಾವು ಕಂಡುಕೊಳ್ಳಬಹುದು’’

ಪ್ರಧಾನಿ ಅವರು, ಜಾನುವಾರು ಆರೋಗ್ಯ, ಪೌಷ್ಟಿಕಾಂಶ ಮತ್ತು ಹೈನುಗಾರಿಕೆಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳಿಗೆ ಇದೇ ವೇಳೆ ಚಾಲನೆ ನೀಡಿದರು.

“ರೈತರ ಆದಾಯವೃದ್ಧಿಯಲ್ಲಿ ಪಶು ಸಂಗೋಪನೆ ಮತ್ತು ಅದರ ಸಂಬಂಧಿ ಚಟುವಟಿಕೆಗಳು ಮಹತ್ವದ ಪಾತ್ರವಹಿಸಲಿವೆ. ಪಶು ಸಂಗೋಪನೆ, ಮೀನುಗಾರಿಕೆ, ಜೇನು ಸಾಕಾಣಿಕೆ ಮತ್ತಿತರ ಚಟುವಟಿಕೆಗಳಲ್ಲಿ ಹಣ ಹೂಡಿದರೆ ಹೆಚ್ಚಿನ ಆದಾಯ ಸಿಗಲಿದೆ’’ ಎಂದರು “ಕಳೆದ ಐದು ವರ್ಷಗಳಿಂದೀಚೆಗೆ ಕೃಷಿ ಮತ್ತು ಅದರ ಸಂಬಂಧಿ ಚಟುವಟಿಕೆಗಳಲ್ಲಿ ಹೊಸ ಅನುಸಂಧಾನದಿಂದಾಗಿ ನಾವು ಸಾಕಷ್ಟು ಮುಂದುವರಿದಿದ್ದೇವೆ. ಜಾನುವಾರುಗಳು ಮತ್ತು ಹಾಲಿನ ಉತ್ಪನ್ನಗಳ ಗುಣಮಟ್ಟ ಸುಧಾರಣೆ ಮತ್ತು ಉದ್ಯಮಕ್ಕೆ ಭಿನ್ನ ರೂಪ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ’’ಎಂದು ಪ್ರಧಾನಿ ಹೇಳಿದರು

“ನಾವು ಜಾನುವಾರುಗಳಿಗೆ ನಿರಂತರವಾಗಿ ಹಸಿರು ಮೇವು ಮತ್ತು ಪೌಷ್ಟಿಕ ಆಹಾರ ನೀಡಲು ಅಗತ್ಯ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ’’ .

“ಭಾರತದಲ್ಲಿ ಹೈನೋದ್ಯಮವನ್ನು ವಿಸ್ತರಿಸಲು ನಾವಿನ್ಯತೆ ಮತ್ತು ಹೊಸ ತಂತ್ರಜ್ಞಾನ ಅಳವಡಿಕೆಗೆ ಇದು ಸಕಾಲ. ನಮ್ಮ ಗ್ರಾಮಗಳಿಂದ ಬರುವ ಇತಹ ಹೊಸ ಆವಿಷ್ಕಾರಗಳನ್ನು ಉತ್ತೇಜಿಸಲು ನಾವು “ಸಾರ್ಟ್ಪ್ ಅಪ್ ಬ್ರಾಂಡ್ ಚಾಲೆಂಜ್’ ಆರಂಭಿಸಿದ್ದೇವೆ’’ “ನಾವು ನಮ್ಮ ಯುವ ಸ್ನೇಹಿತರಿಗೆ ಭರವಸೆ ನೀಡುವುದೇನೆಂದರೆ, ಅವರ ಚಿಂತನೆಗಳನ್ನು ಗಂಭೀರವಾಗಿ ಪರಿಗಣಿಸಿ, ಅವುಗಳನ್ನು ಮುಂದೆ ಕೊಂಡೊಯ್ಯಲು ಮತ್ತು ಅಗತ್ಯ ಹೂಡಿಕೆಯನ್ನು ಒದಗಿಸಿಕೊಡಲಾಗುವುದು. ಇದರಿಂದ ಉದ್ಯೋಗದಲ್ಲಿ ಹೊಸ ಹೊಸ ಅವಕಾಶಗಳು ಸೃಷ್ಟಿಯಾಗುತ್ತವೆ’’ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು.



(Release ID: 1585272) Visitor Counter : 148