ಪ್ರಧಾನ ಮಂತ್ರಿಯವರ ಕಛೇರಿ

370 ಮತ್ತು 35 ಎ ವಿಧಿಗೆ ಸಂಬಂಧಿಸಿದಂತೆ ಪ್ರಧಾನಮಂತ್ರಿಯವರ ಭಾಷಣದ ಪಠ್ಯ

Posted On: 08 AUG 2019 9:20PM by PIB Bengaluru

370 ಮತ್ತು 35 ಎ ವಿಧಿಗೆ ಸಂಬಂಧಿಸಿದಂತೆ ಪ್ರಧಾನಮಂತ್ರಿಯವರ ಭಾಷಣದ ಪಠ್ಯ

 

ನನ್ನ ದೇಶಬಾಂಧವರೇ,

ಒಂದು ದೇಶವಾಗಿ ಮತ್ತು ಕುಟುಂಬವಾಗಿ, ನೀವು ಮತ್ತು ನಾವು ಒಟ್ಟಾಗಿ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಜಮ್ಮು, ಕಾಶ್ಮೀರ ಮತ್ತು ಲಡಾಖ್‌ನ ನಮ್ಮ ಸೋದರ ಸೋದರಿಯರಿಗೆ ಸರಿಯಾದ ಹಕ್ಕುಗಳನ್ನು ನಿರಾಕರಿಸಿದ ವ್ಯವಸ್ಥೆಯನ್ನು; ಅವರ ಅಭಿವೃದ್ಧಿಯಲ್ಲಿ ಭಾರಿ ಅಡಚಣೆಯಾಗಿದ್ದ ವ್ಯವಸ್ಥೆಯನ್ನು ಈಗ ನಿರ್ಮೂಲನೆ ಮಾಡಲಾಗಿದೆ.

ಸರ್ದಾರ್ ವಲ್ಲಭಭಾಯ್‌ಪಟೇಲ್ ಕಂಡ ಕನಸು, ಬಾಬಾಸಾಹೇಬ್ ಅಂಬೇಡ್ಕರ್ ಕಂಡ ಕನಸು, ಶ್ಯಾಮಾ ಪ್ರಸಾದ್ ಮುಖರ್ಜಿ ಅಟಲ್‌ಜಿ ಮತ್ತು ಕೋಟ್ಯಾಂತರ  ನಾಗರಿಕರು ಹಂಚಿಕೊಂಡ ಕನಸು ಈಗ ಈಡೇರಿದೆ.

ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಹೊಸ ಯುಗ ಪ್ರಾರಂಭವಾಗಿದೆ.

ಈಗ ದೇಶದ ಎಲ್ಲ ನಾಗರಿಕರ ಹಕ್ಕುಗಳು ಮತ್ತು ಹೊಣೆಗಾರಿಕೆಗಳು ಒಂದೇ ಆಗಿವೆ. ಜಮ್ಮು-ಕಾಶ್ಮೀರ, ಲಡಾಖ್ ಮತ್ತು ದೇಶದ ಪ್ರತಿಯೊಬ್ಬ ನಾಗರಿಕರನ್ನು ನಾನು ಅಭಿನಂದಿಸುತ್ತೇನೆ.

 

ಸ್ನೇಹಿತರೇ,

ಕೆಲವೊಮ್ಮೆ ಸಾಮಾಜಿಕ ಜೀವನದ ಕೆಲವು ವಿಷಯಗಳು ಕಾಲದೊಂದಿಗೆ ಸಿಕ್ಕಿಹಾಕಿಕೊಳ್ಳುತ್ತವೆ ಮತ್ತು ಅವುಗಳನ್ನು ಶಾಶ್ವತವೆಂದು ಪರಿಗಣಿಸಲಾಗುತ್ತದೆ. ಇದು ತೃಪ್ತಿಯ ಭಾವನೆಯನ್ನು ಬೆಳೆಸುತ್ತದೆ ಮತ್ತು ಯಾವಾಗಲೂ ಏನೂ ಬದಲಾಗುವುದಿಲ್ಲ ಎಂದು ಭಾವಿಸಲಾಗುತ್ತದೆ. 370 ನೇ ವಿಧಿಗೆ ಇದೇ ರೀತಿಯ ಭಾವನೆ ಇತ್ತು.

ಈ ಕಾರಣದಿಂದಾಗಿ ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನಲ್ಲಿರುವ ನಮ್ಮ ಸಹೋದರ ಸಹೋದರಿಯರಿಗೆ, ನಮ್ಮ ಮಕ್ಕಳಿಗೆ ಆಗಿರುವ ಹಾನಿಯ ಬಗ್ಗೆ ಯಾವುದೇ ಚರ್ಚೆ ಅಥವಾ ಮಾತುಕತೆ ನಡೆದಿಲ್ಲ. ಆಶ್ಚರ್ಯವೆಂದರೆ, 370 ನೇ ವಿಧಿ ಜಮ್ಮು-ಕಾಶ್ಮೀರದ ಜನರಿಗೆ ನೀಡಿದ ಪ್ರಯೋಜನಗಳನ್ನು ಪಟ್ಟಿ ಮಾಡಲು ಯಾರಿಗೂ ಸಾಧ್ಯವಾಗಲಿಲ್ಲ.

 

ಸೋದರ ಸೋದರಿಯರೇ,

ಜಮ್ಮು-ಕಾಶ್ಮೀರಕ್ಕೆ 370 ಮತ್ತು 35 ಎ ವಿಧಿ ಪ್ರತ್ಯೇಕತಾವಾದ, ಭಯೋತ್ಪಾದನೆ, ಸ್ವಜನಪಕ್ಷಪಾತ ಮತ್ತು ದೊಡ್ಡ ಪ್ರಮಾಣದ ವ್ಯಾಪಕ ಭ್ರಷ್ಟಾಚಾರವನ್ನಲ್ಲದೇ  ಬೇರೇನನ್ನೂ ನೀಡಿಲ್ಲ. ಈ ಎರಡೂ ವಿಧಿಗಳನ್ನು ಕೆಲವು ಜನರ ಭಾವನೆಗಳನ್ನು ಸ್ಫೋಟಿಸಲು ಪಾಕಿಸ್ತಾನವು ಅಸ್ತ್ರವಾಗಿ ಬಳಸಿಕೊಂಡಿತು.

ಇದರಿಂದಾಗಿ ಕಳೆದ ಮೂರು ದಶಕಗಳಲ್ಲಿ 42,000 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನಲ್ಲಿನ ಅಭಿವೃದ್ಧಿಯು ಈ ಪ್ರದೇಶಕ್ಕೆ ಅರ್ಹವಾದ ಮಟ್ಟದಲ್ಲಿ ಮಾಡಲಾಗಲಿಲ್ಲ.

ವ್ಯವಸ್ಥೆಯಲ್ಲಿನ ಈ ನ್ಯೂನತೆಯನ್ನು ತೆಗೆದುಹಾಕಿದ ನಂತರ, ಜಮ್ಮು-ಕಾಶ್ಮೀರದ ಜನರಿಗೆ ಉತ್ತಮ ವರ್ತಮಾನ ಮಾತ್ರವಲ್ಲದೆ ಉಜ್ವಲ ಭವಿಷ್ಯವೂ ಇರುತ್ತದೆ.

 

ಸ್ನೇಹಿತರೇ,

ಯಾವ ಸರ್ಕಾರ ಅಧಿಕಾರದಲ್ಲಿದ್ದರೂ ಅದು ಸಂಸತ್ತಿನಲ್ಲಿ ಕಾನೂನುಗಳನ್ನು ಜಾರಿಗೆ ತರುವ ಮೂಲಕ ದೇಶದ ಸುಧಾರಣೆಗೆ ಕೆಲಸ ಮಾಡುತ್ತದೆ. ಯಾವ ಪಕ್ಷ ಅಥವಾ ಒಕ್ಕೂಟ ಅಧಿಕಾರದಲ್ಲಿದ್ದರೂ, ಈ ಕೆಲಸ ಎಂದಿಗೂ ನಿಲ್ಲುವುದಿಲ್ಲ.

ಕಾನೂನುಗಳನ್ನು ಜಾರಿಗೊಳಿಸಿದಾಗ ಮತ್ತು ರಚಿಸಿದಾಗ ಸಂಸತ್ತಿನ ಒಳಗೆ ಮತ್ತು ಹೊರಗೆ ಸಾಕಷ್ಟು ಚರ್ಚೆಗಳು ನಡೆಯುತ್ತವೆ, ಸಾಕಷ್ಟು ಚರ್ಚೆಗಳು ಮತ್ತು ಬುದ್ದಿಮತ್ತೆ ಸಂಭವಿಸುತ್ತದೆ ಮತ್ತು ಅದರ ಪ್ರಾಮುಖ್ಯತೆ ಮತ್ತು ಪರಿಣಾಮದ ಬಗ್ಗೆ ಗಂಭೀರ ವಾದಗಳನ್ನು ಮಂಡಿಸಲಾಗುತ್ತದೆ. ಈ ಪ್ರಕ್ರಿಯೆಗೆ ಒಳಪಟ್ಟ ನಂತರ ಜಾರಿಗೆ ಬರುವ ಕಾನೂನುಗಳು ರಾಷ್ಟ್ರದ ಜನರಿಗೆ ಪ್ರಯೋಜನಕಾರಿ. ಆದಾಗ್ಯೂ, ಸಂಸತ್ತಿನಲ್ಲಿ ಹಲವು ಕಾನೂನುಗಳನ್ನು ಜಾರಿಗೆ ತರಲಾಗಿದೆ ಮತ್ತು ದೇಶದ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಜಾರಿಗೊಳಿಸಲಾಗಿಲ್ಲ ಎಂಬುದು ಅರಿವಿಗೆ ನಿಲುಕದ್ದಾಗಿದೆ.

ಕೇವಲ ಒಂದು ಕಾನೂನನ್ನು ಜಾರಿಗೆ ತಂದ ನಂತರ ಪ್ರಶಂಸಿಸಲ್ಪಟ್ಟ ಹಿಂದಿನ ಸರ್ಕಾರಗಳು ಸಹ ಜಮ್ಮು ಮತ್ತು ಕಾಶ್ಮೀರ ಪ್ರದೇಶದಲ್ಲಿ ಅದೇ ಕಾನೂನನ್ನು ಅನುಷ್ಠಾನಗೊಳಿಸಲಾಗುವುದು ಎಂದು ಹೇಳಲಾಗುವುದಿಲ್ಲ.

ಜಮ್ಮು ಮತ್ತು ಕಾಶ್ಮೀರದ 1.5 ಕೋಟಿಗೂ ಹೆಚ್ಚು ಜನರು ಭಾರತದ ಜನರ ಅನುಕೂಲಕ್ಕಾಗಿ ಜಾರಿಗೆ ತರಲಾದ ಕಾನೂನುಗಳ ಪ್ರಯೋಜನಗಳಿಂದ ವಂಚಿತರಾಗಿದ್ದರು. ದೇಶದ ಉಳಿದ ಮಕ್ಕಳಿಗೆ ಶಿಕ್ಷಣದ ಹಕ್ಕಿರುವಾಗ ಜಮ್ಮು ಮತ್ತು ಕಾಶ್ಮೀರದ ಮಕ್ಕಳು ಈ ಹಕ್ಕಿನಿಂದ ವಂಚಿತರಾಗಿರುವುದನ್ನು ಊಹಿಸಿಕೊಳ್ಳಿ. ಜಮ್ಮು ಮತ್ತು ಕಾಶ್ಮೀರದ ಹೆಣ್ಣುಮಕ್ಕಳು ಉಳಿದ ರಾಜ್ಯಗಳಲ್ಲಿ ನಮ್ಮ ಹೆಣ್ಣುಮಕ್ಕಳಿಗೆ ಇರುವ ಹಕ್ಕಿಗಳಿಂದ ವಂಚಿತರಾಗಿದ್ದರು.

ಇತರ ಎಲ್ಲ ರಾಜ್ಯಗಳಲ್ಲಿ, ನೈರ್ಮಲ್ಯ ಕಾರ್ಮಿಕರಿಗಾಗಿ ಸಫಾಯ್ ಕರ್ಮಚಾರಿ  ಕಾಯ್ದೆಯನ್ನು ಜಾರಿಗೆ ತರಲಾಯಿತು ಆದರೆ ಜಮ್ಮು ಮತ್ತು ಕಾಶ್ಮೀರದ ಕಾರ್ಮಿಕರು ಇದರಿಂದ ವಂಚಿತರಾಗಿದ್ದರು.

ಇತರ ರಾಜ್ಯಗಳಲ್ಲಿ, ದಲಿತರ ಮೇಲಿನ ದೌರ್ಜನ್ಯವನ್ನು ತಡೆಯಲು ಕಠಿಣ ಕಾನೂನುಗಳನ್ನು ಜಾರಿಗೆ ತರಲಾಯಿತು ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತಹ ಯಾವುದೇ ಕಾನೂನುಗಳನ್ನು ಜಾರಿಗೆ ತರಲು ಸಾಧ್ಯವಾಗಲಿಲ್ಲ.

ಬ್ಲೂ-ಕಾಲರ್ ಉದ್ಯೋಗಿಗಳ ಹಕ್ಕುಗಳನ್ನು ರಕ್ಷಿಸಲು, ಕನಿಷ್ಠ ವೇತನ ಕಾಯ್ದೆಯನ್ನು ಇತರ ಎಲ್ಲ ರಾಜ್ಯಗಳಲ್ಲಿ ಜಾರಿಗೆ ತರಲಾಯಿತು ಆದರೆ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಪತ್ರಿಕೆಗಳಲ್ಲಿ ಮಾತ್ರ ಅಂತಹ ಕಾನೂನು ಕಂಡುಬರುತ್ತದೆ.

ಎಲ್ಲಾ ಇತರ ರಾಜ್ಯಗಳಲ್ಲಿ, (ನಮ್ಮ) ಪರಿಶಿಷ್ಟ ಪಂಗಡದ ಸಹೋದರ ಸಹೋದರಿಯರು ಚುನಾವಣೆಯಲ್ಲಿ ಸ್ಪರ್ಧಿಸುವಾಗ ಮೀಸಲಾತಿ ಪಡೆದರು, ಆದರೆ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಅಂತಹ ವಿಷಯ ಕೇಳಿಬರುವುದಿಲ್ಲ.

 

ಸ್ನೇಹಿತರೇ,

370 ಮತ್ತು 35-ಎ ವಿಧಿಗಳನ್ನು ರದ್ದುಪಡಿಸಿದ ನಂತರ, ಜಮ್ಮು ಮತ್ತು ಕಾಶ್ಮೀರ ಶೀಘ್ರದಲ್ಲೇ ಅದರ ನೇತ್ಯಾತ್ಮಕ ಪರಿಣಾಮಗಳಿಂದ ಹೊರಬರಲಿದೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ.

 

ಸ್ನೇಹಿತರೇ ಮತ್ತು ಸಹೋದರಿಯರೇ,

ಹೊಸ ವ್ಯವಸ್ಥೆಯಲ್ಲಿ, ಕೇಂದ್ರ ಸರ್ಕಾರದ ಆದ್ಯತೆಯೆಂದರೆ ರಾಜ್ಯ ಸರ್ಕಾರಿ ನೌಕರರು ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಿಬ್ಬಂದಿಯನ್ನು ಇತರ ರಾಜ್ಯಗಳ ರಾಜ್ಯ ಸರ್ಕಾರಿ ನೌಕರರು ಮತ್ತು ಪೊಲೀಸ್ ಸಿಬ್ಬಂದಿಗೆ ಸೌಲಭ್ಯಗಳ ದೃಷ್ಟಿಯಿಂದ ಸಮನಾಗಿರಿಸುವುದು.

ಕೇಂದ್ರಾಡಳಿತ ಪ್ರದೇಶಗಳಲ್ಲಿ, ಎಲ್‌ಟಿಸಿ, ಮನೆ ಬಾಡಿಗೆ ಭತ್ಯೆ, ಮಕ್ಕಳಿಗೆ ಶಿಕ್ಷಣ ಭತ್ಯೆ, ಆರೋಗ್ಯ ಯೋಜನೆಗಳು ಮುಂತಾದ ಅನೇಕ ಆರ್ಥಿಕ ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತದ., ಇವುಗಳಲ್ಲಿ ಹೆಚ್ಚಿನವು ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಉದ್ಯೋಗಿಗಳಿಗೆ ದೊರಕುತ್ತಿರಲಿಲ್ಲ..

ಜಮ್ಮು ಮತ್ತು ಕಾಶ್ಮೀರ ಸರ್ಕಾರದ ನೌಕರರು ಮತ್ತು ರಾಜ್ಯ ಪೊಲೀಸ್ ಸಿಬ್ಬಂದಿಗೆ ಇಂತಹ ಸೌಲಭ್ಯಗಳನ್ನು ಪರಿಶೀಲನೆಯ ನಂತರ ಶೀಘ್ರದಲ್ಲೇ ಒದಗಿಸಲಾಗುವುದು.

ಸ್ನೇಹಿತರೇ, ಶೀಘ್ರದಲ್ಲೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಪ್ರಾರಂಭಿಸಲಾಗುವುದು.

ಇದು ಸ್ಥಳೀಯ ಯುವಕರಿಗೆ ಸಾಕಷ್ಟು ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ.

ಅಲ್ಲದೆ, ಹೊಸ ಉದ್ಯೋಗಾವಕಾಶಗಳನ್ನು ಒದಗಿಸಲು ಕೇಂದ್ರ ಸರ್ಕಾರದ ಸಾರ್ವಜನಿಕ ವಲಯದ ಘಟಕಗಳು ಮತ್ತು ದೊಡ್ಡ ಖಾಸಗಿ ವಲಯದ ಕಂಪನಿಗಳನ್ನು ಸಹ ಪ್ರೋತ್ಸಾಹಿಸಲಾಗುತ್ತದೆ.

ಇವುಗಳಲ್ಲದೇ, ಸೈನ್ಯ ಮತ್ತು ಪ್ಯಾರಾ ಮಿಲಿಟರಿ ಪಡೆಗಳು ಸ್ಥಳೀಯ ಯುವಕರನ್ನು ನೇಮಿಸಿಕೊಳ್ಳಲು ರಾಲಿಗಳನ್ನು ಆಯೋಜಿಸುತ್ತವೆ.

ಸರ್ಕಾರವು ಪ್ರಧಾನ ಮಂತ್ರಿಗಳ ವಿದ್ಯಾರ್ಥಿವೇತನ ಯೋಜನೆಯನ್ನು ವಿಸ್ತರಿಸುವುದರಿಂದ ಹೆಚ್ಚಿನ ವಿದ್ಯಾರ್ಥಿಗಳು ಅದರ ಪ್ರಯೋಜನವನ್ನು ಪಡೆಯಬಹುದು.

ಜಮ್ಮು ಮತ್ತು ಕಾಶ್ಮೀರಕ್ಕೂ ಭಾರಿ ಆದಾಯ ನಷ್ಟವಿದೆ. ಅದರ ಪರಿಣಾಮವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ಪ್ರಯತ್ನಿಸುತ್ತದೆ.

ಸಹೋದರರೇ, 370 ನೇ ವಿಧಿಯನ್ನು ರದ್ದುಪಡಿಸಿದ ನಂತರ, ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಅದರ ಆಡಳಿತದಲ್ಲಿಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ನಿರ್ಧಾರದ ಹಿಂದಿನ ಕಾರಣಗಳನ್ನು ನೀವು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ.

ರಾಜ್ಯವು ರಾಜ್ಯಪಾಲರ ಆಡಳಿತದಲ್ಲಿದ್ದಾಗಿನಿಂದಲೂ, ಜಮ್ಮು ಮತ್ತು ಕಾಶ್ಮೀರದ ಆಡಳಿತವು ನೇರವಾಗಿ ಕೇಂದ್ರ ಸರ್ಕಾರದ ಅಡಿಯಲ್ಲಿದೆ.

ಇದರ ಪರಿಣಾಮವಾಗಿ ಉತ್ತಮ ಆಡಳಿತ ಮತ್ತು ಅಭಿವೃದ್ಧಿಯ ಉತ್ತಮ ಪರಿಣಾಮವನ್ನು ನೋಡಬಹುದಾಗಿದೆ.

ಈ ಮೊದಲು ಫೈಲ್‌ಗಳಲ್ಲಿ ಮಾತ್ರ ಉಳಿದಿದ್ದ ಯೋಜನೆಗಳನ್ನು ವಾಸ್ತವವಾಗಿ ಜಾರಿಗೆ ತರಲಾಗಿದೆ.

ದಶಕಗಳಿಂದ ಬಾಕಿ ಇರುವ ಯೋಜನೆಗಳನ್ನು ವೇಗಗೊಳಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಸ ಕೆಲಸದ ಸಂಸ್ಕೃತಿಯನ್ನು ತರಲು ನಾವು ಪ್ರಯತ್ನಿಸಿದ್ದೇವೆ. ಇದರ ಪರಿಣಾಮವಾಗಿ, ಐಐಟಿ, ಐಐಎಂ, ಏಮ್ಸ್, ವಿವಿಧ ನೀರಾವರಿ ಯೋಜನೆಗಳು ಅಥವಾ ವಿದ್ಯುತ್ ಯೋಜನೆಗಳು ಅಥವಾ ಭ್ರಷ್ಟಾಚಾರ-ವಿರೋಧಿ ಬ್ಯೂರೋ ಈ ಎಲ್ಲ ಯೋಜನೆಗಳ ಕೆಲಸವನ್ನು ನಾವು ವೇಗಗೊಳಿಸಲು ಸಾಧ್ಯವಾಯಿತು.

ಇದಲ್ಲದೆ, ಸಂಪರ್ಕ, ರಸ್ತೆಗಳು ಅಥವಾ ಹೊಸ ರೈಲು ಮಾರ್ಗಗಳು, ವಿಮಾನ ನಿಲ್ದಾಣದ ಆಧುನೀಕರಣದ ಯೋಜನೆಗಳಾಗಿರಲಿ ಎಲ್ಲವನ್ನೂ ವೇಗಗೊಳಿಸಲಾಗುತ್ತಿದೆ.

 

ಸ್ನೇಹಿತರೇ,

ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವವು ತುಂಬಾ ಸುರಕ್ಷಿತವಾಗಿದೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ದಶಕಗಳಿಂದ ಸಾವಿರಾರು ಸಹೋದರ-ಸಹೋದರಿಯರು ವಾಸಿಸುತ್ತಿದ್ದಾರೆಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ ಆದರೆ ಅವರಿಗೆ ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮತ ಚಲಾಯಿಸಲು ಅವಕಾಶ ನೀಡಿರಲಿಲ್ಲ.

ಅವರೆಲ್ಲ 1947 ರಲ್ಲಿ ವಿಭಜನೆಯ ನಂತರ ಭಾರತಕ್ಕೆ ಬಂದವರು. ಅನ್ಯಾಯವನ್ನು ಅದೇ ರೀತಿಯಲ್ಲಿ ಮುಂದುವರಿಸಲು ನಾವು ಅವಕಾಶ ನೀಡಬೇಕೇ?

 

ಸ್ನೇಹಿತರೇ,

ಜಮ್ಮು ಮತ್ತು ಕಾಶ್ಮೀರದ ನನ್ನ ಸಹೋದರ ಸಹೋದರಿಯರಿಗೆ ಮತ್ತೊಂದು ಪ್ರಮುಖ ವಿಷಯವನ್ನು ಸ್ಪಷ್ಟಪಡಿಸಲು ನಾನು ಬಯಸುತ್ತೇನೆ.

ನಿಮ್ಮ ಪ್ರತಿನಿಧಿಯನ್ನು (ಚುನಾವಣೆಯಿಂದ) ನಿಮ್ಮಿಂದ ಆಯ್ಕೆ ಮಾಡಲಾಗುತ್ತದೆ, ಅವನು ನಿಮ್ಮಲ್ಲಿ ಒಬ್ಬನಾಗಿರುತ್ತಾನೆ.

ಶಾಸಕರು ಮೊದಲು ಆಯ್ಕೆಯಾದಂತೆಯೇ ಆಯ್ಕೆಯಾಗುತ್ತಾರೆ.

ಮುಂಬರುವ ಸಚಿವ ಸಂಪುಟವು ಮೊದಲಿನಂತೆಯೇ ಇರಲಿದೆ. ಮೊದಲಿನಂತೆಯೇ ಮುಖ್ಯಮಂತ್ರಿಗಳು ಇರುತ್ತಾರೆ.

ಸ್ನೇಹಿತರೇ, ಹೊಸ ವ್ಯವಸ್ಥೆಯಡಿಯಲ್ಲಿ, ನಾವು ಒಟ್ಟಾಗಿ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದದಿಂದ ಮುಕ್ತವಾಗಿಡಲು ಸಾಧ್ಯವಾಗುತ್ತದೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ.

ನಮ್ಮ ಭೂಮಿಯ ಮೇಲಿನ ಸ್ವರ್ಗ ಜಮ್ಮು ಮತ್ತು ಕಾಶ್ಮೀರವು ಅಭಿವೃದ್ಧಿಯ ಹೊಸ ಎತ್ತರಗಳನ್ನು ಸಾಧಿಸಿದ ನಂತರ, ಇಡೀ ಜಗತ್ತನ್ನು ಆಕರ್ಷಿಸಿ, ಯಾವಾಗ ನಾಗರಿಕರು ಸುಲಭವಾದ ಜೀವನ ನಡೆಸುವಂತಾದಾಗ, ಅವರು ತಮ್ಮ ಹಕ್ಕುಗಳನ್ನು ನಿರಂತರವಾಗಿ ಪಡೆಯುವಾಗ, ಯಾವಾಗ ಆಡಳಿತದ ಎಲ್ಲಾ ಸಾಧನಗಳು ಜನಸಾಮಾನ್ಯರ ಪರವಾಗಿ ಕೆಲಸವನ್ನು ವೇಗಗೊಳಿಸುತ್ತವೆಯೋ, ನಂತರ ಕೇಂದ್ರ ಸರ್ಕಾರದ ಅಡಿಯಲ್ಲಿ ವ್ಯವಸ್ಥೆಯನ್ನು ಮುಂದುವರಿಸುವ ಅಗತ್ಯವಿದೆ ಎಂದು ನನಗನಿಸುವುದಿಲ್ಲ.

ಸಹೋದರ ಸಹೋದರಿಯರೇ, ನಾವೆಲ್ಲರೂ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯನ್ನು ಬಯಸುತ್ತೇವೆ. ಹೊಸ ಸರ್ಕಾರ ರಚನೆಯಾಗಬೇಕು, ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಬೇಕು.

ಜಮ್ಮು ಮತ್ತು ಕಾಶ್ಮೀರದ ಜನರಿಗೆ ನಿಮ್ಮ ಪ್ರತಿನಿಧಿಯನ್ನು ಸಂಪೂರ್ಣ ಪ್ರಾಮಾಣಿಕ ಮತ್ತು ಪಾರದರ್ಶಕ ವಾತಾವರಣದಲ್ಲಿ ಆಯ್ಕೆ ಮಾಡುವ ಅವಕಾಶ ಸಿಗುತ್ತದೆ ಎಂದು ನಾನು ಭರವಸೆ ನೀಡುತ್ತೇನೆ.

ಕಳೆದ ದಿನಗಳಲ್ಲಿ ಪಂಚಾಯತ್ ಚುನಾವಣೆ ಪಾರದರ್ಶಕವಾಗಿ ನಡೆದಂತೆಯೇ, ಜಮ್ಮು ಮತ್ತು ಕಾಶ್ಮೀರದಲ್ಲೂ ವಿಧಾನಸಭಾ ಚುನಾವಣೆ ನಡೆಯಲಿದೆ.

ಕಳೆದ ಎರಡು-ಮೂರು ದಶಕಗಳಿಂದ ಬಾಕಿ ಇರುವ ಬ್ಲಾಕ್ ಡೆವಲಪ್‌ಮೆಂಟ್ ಕೌನ್ಸಿಲ್ ಸ್ಥಾಪನೆ ಸಾಧ್ಯವಾದಷ್ಟು ಬೇಗ ರಚನೆಯಾಗಬೇಕೆಂದು ನಾನು ರಾಜ್ಯಪಾಲರನ್ನು ಒತ್ತಾಯಿಸುತ್ತೇನೆ.

 

ಸ್ನೇಹಿತರೇ,

ನಾಲ್ಕೈದು ತಿಂಗಳ ಹಿಂದೆ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ನಲ್ಲಿ ನಡೆದ ಪಂಚಾಯತ್ ಚುನಾವಣೆಯಲ್ಲಿ ಚುನಾಯಿತರಾದವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ನನಗೆ ವೈಯಕ್ತಿಕವಾಗಿ ಅನುಭವಕ್ಕೆ ಬಂದಿದೆ..

ಕೆಲವು ತಿಂಗಳ ಹಿಂದೆ ನಾನು ಶ್ರೀನಗರಕ್ಕೆ ಭೇಟಿ ನೀಡಿದಾಗ ಅವರೊಂದಿಗೆ ಸುದೀರ್ಘ ಸಭೆ ನಡೆಸಿದೆ.

ಅವರು ದೆಹಲಿಗೆ ಬಂದಾಗ ನಾನು ಅವರೊಂದಿಗೆ ನನ್ನ ಮನೆಯಲ್ಲಿ ದೀರ್ಘಕಾಲ ಮಾತುಕತೆ ನಡೆಸಿದೆ.

ಪಂಚಾಯತ್‌ಗಳಲ್ಲಿನ ಈ ಸ್ನೇಹಿತರ ಕಾರಣದಿಂದಾಗಿ ಜಮ್ಮು ಮತ್ತು ಕಾಶ್ಮೀರದ ಗ್ರಾಮ ಮಟ್ಟದಲ್ಲಿ ತ್ವರಿತವಾಗಿ ಕೆಲಸ ಮಾಡಲಾಗುತ್ತಿದೆ.

ಪ್ರತಿ ಮನೆಯಲ್ಲೂ ವಿದ್ಯುದ್ದೀಕರಣದ ಕಾರ್ಯವಾಗಲಿ ಅಥವಾ ರಾಜ್ಯವನ್ನು ಬಯಲು ಮಲವಿಸರ್ಜನೆ ಮುಕ್ತವಾಗಲಿ, ಪಂಚಾಯತ್‌ಗಳಲ್ಲಿನ ಪ್ರತಿನಿಧಿಗಳು ನಿರ್ಣಾಯಕ ಪಾತ್ರ ವಹಿಸಿದ್ದಾರೆ.

370ನೇ ವಿಧಿ ರದ್ದುಗೊಳಿಸುವಿಕೆಯ ನಂತರ, ಈ ಪಂಚಾಯತ್ ಸದಸ್ಯರಿಗೆ ಹೊಸ ವ್ಯವಸ್ಥೆಯಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕರೆ ಅವರು ಅದ್ಭುತಗಳನ್ನು ಮಾಡುತ್ತಾರೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ.

ಜಮ್ಮು ಮತ್ತು ಕಾಶ್ಮೀರದ ಜನರು ಪ್ರತ್ಯೇಕತಾವಾದವನ್ನು ಜಯಿಸುತ್ತಾರೆ ಮತ್ತು ಹೊಸ ಭರವಸೆಯೊಂದಿಗೆ ಮುಂದುವರಿಯುತ್ತಾರೆ ಎಂದು ನಾನು ದೃಢವಾಗಿ ನಂಬುತ್ತೇನೆ.

ಉತ್ತಮ ಆಡಳಿತ ಮತ್ತು ಪಾರದರ್ಶಕತೆಯ ವ್ಯವಸ್ಥೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಜನರು ತಮ್ಮ ಉದ್ದೇಶವನ್ನು ಹೊಸ ಉತ್ಸಾಹದಿಂದ ಸಾಧಿಸುತ್ತಾರೆ ಎಂದು ನಾನು ದೃಢ ವಾಗಿ ನಂಬುತ್ತೇನೆ.

ಸ್ನೇಹಿತರೇ, ಕುಟುಂಬ ಆಡಳಿತವು ರಾಜ್ಯದ ಜಮ್ಮು ಮತ್ತು ಕಾಶ್ಮೀರದ ಯುವ ನಾಗರಿಕರಿಗೆ ನಾಯಕತ್ವದ ಯಾವುದೇ ಅವಕಾಶವನ್ನು ನೀಡಿಲ್ಲ.

ಈಗ, ನನ್ನ ಈ ಯುವಕರು ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಯ ನಾಯಕತ್ವವನ್ನು ತೆಗೆದುಕೊಂಡು ಅದನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಾರೆ.

ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ಯುವಕರು, ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ತಮ್ಮ ಪ್ರದೇಶದ ಅಭಿವೃದ್ಧಿಯನ್ನು ತಾವೇ ವಹಿಸಿಕೊಳ್ಳಬೇಕೆಂದು ನಾನು ಮನವಿ ಮಾಡುತ್ತೇನೆ.

 

ಸ್ನೇಹಿತರೇ,

ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಅತ್ಯುತ್ತಮ ಪ್ರವಾಸಿ ತಾಣಗಳಲ್ಲಿ ಒಂದಾಗುವ ಎಲ್ಲ ಸಾಧ್ಯತೆಗಳಿವೆ.

ಇದಕ್ಕೆ ಅಗತ್ಯವಾದ ಪರಿಸರ, ಆಡಳಿತದಲ್ಲಿ ಬದಲಾವಣೆಯ ಅವಶ್ಯಕತೆ ಎಲ್ಲವನ್ನೂ ನೋಡಿಕೊಳ್ಳಲಾಗುತ್ತದೆ, ಆದರೆ ಇದಕ್ಕಾಗಿ ನನಗೆ ಎಲ್ಲ ದೇಶವಾಸಿಗಳ ಬೆಂಬಲ ಬೇಕು.

ಬಾಲಿವುಡ್ ಚಿತ್ರಗಳ ಚಿತ್ರೀಕರಣಕ್ಕೆ ಕಾಶ್ಮೀರ ನೆಚ್ಚಿನ ಸ್ಥಳವಾಗಿತ್ತು.

ಆ ಸಮಯದಲ್ಲಿ ಕಾಶ್ಮೀರದಲ್ಲಿ ಚಿತ್ರೀಕರಿಸದೇ ಬಹುಶಃ ಯಾವುದೇ ಚಲನಚಿತ್ರವನ್ನು ನಿರ್ಮಿಸಲಾಗಿಲ್ಲ.

ಈಗ, ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಗಳು ಸಾಮಾನ್ಯವಾಗುತ್ತವೆ; ಭಾರತದಿಂದ ಮಾತ್ರವಲ್ಲ, ಪ್ರಪಂಚದಾದ್ಯಂತ ಜನರು ಅಲ್ಲಿ ಚಿತ್ರೀಕರಣಕ್ಕಾಗಿ ಬರುತ್ತಾರೆ.

ಪ್ರತಿ ಚಲನಚಿತ್ರವು ಕಾಶ್ಮೀರದ ಜನರಿಗೆ ಉದ್ಯೋಗದ ಹೊಸ ಅವಕಾಶವನ್ನು ತರುತ್ತದೆ.

ತೆಲುಗು ಮತ್ತು ತಮಿಳು ಚಲನಚಿತ್ರೋದ್ಯಮ ಮತ್ತು ಅದಕ್ಕೆ ಸಂಬಂಧಿಸಿದ ಜನರು ಜಮ್ಮು ಮತ್ತು ಕಾಶ್ಮೀರದಲ್ಲಿ ಹೂಡಿಕೆ, ಚಲನಚಿತ್ರದ ಚಿತ್ರೀಕರಣ ಮತ್ತು ಚಿತ್ರಮಂದಿರ ಮತ್ತು ಇತರ ಮೂಲಗಳ ಸ್ಥಾಪನೆಗಾಗಿ ಯೋಚಿಸಬೇಕೆಂದು ನಾನು ಮನವಿ ಮಾಡುತ್ತೇನೆ.

ತಂತ್ರಜ್ಞಾನ ಜಗತ್ತು, ಆಡಳಿತ ಅಥವಾ ಖಾಸಗಿ ವಲಯದೊಂದಿಗೆ ಸಂಬಂಧ ಹೊಂದಿರುವವರಿಗೆ ಅವರ ನೀತಿಗಳಲ್ಲಿ ಆದ್ಯತೆ ನೀಡುವಂತೆ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ತಂತ್ರಜ್ಞಾನವನ್ನು ಹೇಗೆ ಪ್ರಸಾರ ಮಾಡಬೇಕೆಂಬುದರ ಬಗ್ಗೆ ಅವರ ಅಭಿಪ್ರಾಯಗಳಿಗಾಗಿ ನಾನು ಮನವಿ ಮಾಡುತ್ತೇನೆ.

ಅಲ್ಲಿ ಡಿಜಿಟಲ್ ಸಂವಹನವನ್ನು ಬಲಪಡಿಸಿದಾಗ ಬಿಪಿಓ ಕೇಂದ್ರ, ಸಾಮಾನ್ಯ ಸೇವಾ ಕೇಂದ್ರಗಳ ಸಂಖ್ಯೆ ಹೆಚ್ಚಾಗುತ್ತವೆ.  ಜೀವನೋಪಾಯವನ್ನು ಗಳಿಸುವ ಅವಕಾಶ ಹೆಚ್ಚಾಗುತ್ತದೆ ಮತ್ತು ಜಮ್ಮು ಮತ್ತು ಕಾಶ್ಮೀರದ ನಮ್ಮ ಸಹೋದರ ಸಹೋದರಿಯರ ಜೀವನವು ಸುಲಭವಾಗುತ್ತದೆ.

 

ಸ್ನೇಹಿತರೇ,

ಸರ್ಕಾರ ತೆಗೆದುಕೊಂಡ ನಿರ್ಧಾರವು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಯುವಕರಿಗೆ ಮತ್ತು ಜಾಗತಿಕ ಕ್ರೀಡೆಗಳಲ್ಲಿ ಪ್ರಗತಿ ಸಾಧಿಸುವವರಿಗೆ ಅನುಕೂಲವಾಗಲಿದೆ.

ಹೊಸ ಕ್ರೀಡಾ ಅಕಾಡೆಮಿಗಳು, ಹೊಸ ಕ್ರೀಡಾಂಗಣ, ವೈಜ್ಞಾನಿಕ ಪರಿಸರದಲ್ಲಿ ತರಬೇತಿ ನೀಡುವುದು ಜಗತ್ತಿನಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಲು ಸಹಾಯ ಮಾಡುತ್ತದೆ.

ಸ್ನೇಹಿತರೇ, ಕೇಸರಿಯ ಬಣ್ಣ ಅಥವಾ ಕಾಫಿಯ ಪರಿಮಳ ಅಥವಾ ಸೇಬಿನ ರುಚಿ ಅಥವಾ ಏಪ್ರಿಕಾಟ್ ನ ರಸ ಅಥವಾ ಒಂದು ತೊಗಟೆ ಅಥವಾ ಲಡಾಖ್ ನ ಸಾವಯವ ಉತ್ಪನ್ನಗಳು ಅಥವಾ ಜಮ್ಮು ಮತ್ತು ಕಾಶ್ಮೀರದ ಗಿಡಮೂಲಿಕೆ ಔಷಧಿ ಯಾವುದೇ ಆಗಿರಲಿ, ಇವೆಲ್ಲವನ್ನೂ ಇಡೀ ಜಗತ್ತಿನಲ್ಲಿ ಪ್ರಸಾರ ಮಾಡಬೇಕಾಗಿದೆ.

ನಾನು ನಿಮಗೆ ಒಂದು ಉದಾಹರಣೆ ನೀಡುತ್ತೇನೆ, ಲಡಾಕ್‌ನಲ್ಲಿ ಸೊಲೊ ಎಂಬ ಸಸ್ಯವಿದೆ. ಈ ಸಸ್ಯವು ಎತ್ತರದಲ್ಲಿ ವಾಸಿಸುವವರಿಗೆ ಮತ್ತು ಭಾರೀ ಹಿಮಾವೃತ ಪರ್ವತಗಳಲ್ಲಿ ನಿಯೋಜಿಸಲಾದ ಭದ್ರತಾ ಪಡೆಗಳಿಗೆ ಸಂಜೀವಿನಿ ಎಂದು ತಜ್ಞರು ಹೇಳುತ್ತಾರೆ.

ಕಡಿಮೆ ಆಮ್ಲಜನಕ ಇರುವ ಸ್ಥಳಗಳಲ್ಲಿ ದೇಹದ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಈ ಸಸ್ಯಗಳು ಪ್ರಮುಖ ಪಾತ್ರವನ್ನು ಹೊಂದಿವೆ.

ಸ್ವಲ್ಪ ಯೋಚಿಸಿ, ಈ ಅಸಾಮಾನ್ಯ ವಸ್ತುಗಳನ್ನು ಇಡೀ ಜಗತ್ತಿನಲ್ಲಿ ಮಾರಾಟ ಮಾಡಬೇಕೇ ಅಥವಾ ಬೇಡವೇ? ಯಾವ ಭಾರತೀಯರು ಇದನ್ನು ಇಷ್ಟಪಡುವುದಿಲ್ಲ ಹೇಳಿ.

 

ಮತ್ತು ಸ್ನೇಹಿತರೇ,

ನಾನು ಒಂದೇ ಸಸ್ಯವನ್ನು ಹೆಸರಿಸಿದೆ.

ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಸಾಕಷ್ಟು ಸಸ್ಯಗಳು, ಗಿಡಮೂಲಿಕೆ ಉತ್ಪನ್ನಗಳು ಇವೆ.

ಅವುಗಳನ್ನು ಗುರುತಿಸಲಾಗುವುದು. ಅವುಗಳನ್ನು ಮಾರಾಟ ಮಾಡಿದರೆ ಅದು ಜನರಿಗೆ ಮತ್ತು ಜಮ್ಮು ಕಾಶ್ಮೀರ ಮತ್ತು ಲಡಾಖ್‌ನ ರೈತರಿಗೆ ಪ್ರಯೋಜನವನ್ನು ನೀಡುತ್ತದೆ.

ಆದ್ದರಿಂದ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ಸ್ಥಳೀಯ ಉತ್ಪನ್ನಗಳು ಪ್ರಪಂಚದಾದ್ಯಂತ ತಲುಪುವಂತೆ ನೋಡಿಕೊಳ್ಳಲು ಕೈಗಾರಿಕೆ, ರಫ್ತು, ಆಹಾರ ಸಂಸ್ಕರಣಾ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಮುಂದೆ ಬರಬೇಕೆಂದು ನಾನು ಮನವಿ ಮಾಡುತ್ತೇನೆ.

 

ಸ್ನೇಹಿತರೇ,

ಕೇಂದ್ರಾಡಳಿತ ಪ್ರದೇಶವಾದ ನಂತರ, ಲಡಾಖ್ ಜನರ ಅಭಿವೃದ್ಧಿಯು ಭಾರತ ಸರ್ಕಾರದ ಸ್ವಾಭಾವಿಕ ಜವಾಬ್ದಾರಿಯಾಗಿದೆ.

ಕೇಂದ್ರ ಸರ್ಕಾರವು ಲಡಾಖ್ ಮತ್ತು ಕಾರ್ಗಿಲ್ ಅಭಿವೃದ್ಧಿ ಮಂಡಳಿ, ಸ್ಥಳೀಯ ಪ್ರತಿನಿಧಿಗಳ ಸಹಕಾರದೊಂದಿಗೆ ಎಲ್ಲಾ ಅಭಿವೃದ್ಧಿ ಯೋಜನೆಗಳ ಪ್ರಯೋಜನಗಳು ತ್ವರಿತವಾಗಿ ಲಭ್ಯವಾಗುವಂತೆ ಮಾಡುತ್ತದೆ.

ಲಡಾಖ್ ಆಧ್ಯಾತ್ಮಿಕ ಪ್ರವಾಸೋದ್ಯಮ, ಸಾಹಸ ಪ್ರವಾಸೋದ್ಯಮ ಮತ್ತು ಪರಿಸರ ಪ್ರವಾಸೋದ್ಯಮದ ಶ್ರೇಷ್ಠ ಕೇಂದ್ರಗಳಲ್ಲಿ ಒಂದಾಗುವ ಸಾಧ್ಯತೆಯಿದೆ.

ಲಡಾಖ್  ಸೌರ ವಿದ್ಯುತ್ ಉತ್ಪಾದನೆಯು ವಿಶಾಲ ಕೇಂದ್ರವಾಗಬಹುದು.

ಲಡಾಖ್ ಜನರ ಸಾಮರ್ಥ್ಯವನ್ನು ಈಗ ಸೂಕ್ತವಾಗಿ ಬಳಸಿಕೊಳ್ಳಲಾಗುವುದು ಮತ್ತು ಯಾವುದೇ ತಾರತಮ್ಯವಿಲ್ಲದೆ ಅಭಿವೃದ್ಧಿಯ ಹೊಸ ಅವಕಾಶಗಳು ಬರಲಿವೆ.

ಈಗ ಲಡಾಖ್‌ನ ಯುವಕರ ಹೊಸ ಮನೋಭಾವವು ಹೆಚ್ಚಾಗುತ್ತದೆ. ಅವರಿಗೆ ಉತ್ತಮ ಶಿಕ್ಷಣಕ್ಕಾಗಿ ಉತ್ತಮ ಸಂಸ್ಥೆಗಳು ಸಿಗುತ್ತವೆ, ಜನರಿಗೆ ಉತ್ತಮ ಆಸ್ಪತ್ರೆಗಳು ಸಿಗುತ್ತವೆ ಮತ್ತು ಮೂಲಸೌಕರ್ಯಗಳನ್ನು ಆದ್ಯತೆಯೊಂದಿಗೆ ಆಧುನೀಕರಿಸಲಾಗುವುದು.

 

ಸ್ನೇಹಿತರೇ,

ಈ ನಿರ್ಧಾರವನ್ನು ಕೆಲವರು ಒಪ್ಪುತ್ತಾರೆ ಮತ್ತು ಕೆಲವರು ಅದನ್ನು ವಿರೋಧಿಸುತ್ತಾರೆ. ಇದು ಪ್ರಜಾಪ್ರಭುತ್ವದಲ್ಲಿ ಸಾಧ್ಯ. ಅವರ ಭಿನ್ನಾಭಿಪ್ರಾಯ ಮತ್ತು ಅವರ ಆಕ್ಷೇಪಣೆಗಳನ್ನು ನಾನು ಗೌರವಿಸುತ್ತೇನೆ.

ಈ ಸಂಬಂಧವಾಗಿ  ಏನನ್ನು ಚರ್ಚಿಸುತ್ತಿದ್ದರೂ, ಕೇಂದ್ರ ಸರ್ಕಾರ ಅದಕ್ಕೆ ಪ್ರತಿಕ್ರಿಯಿಸುತ್ತದೆ ಮತ್ತು ಅದನ್ನು ಪರಿಹರಿಸಲು ಪ್ರಯತ್ನಿಸುತ್ತದೆ.

ಅದು ನಮ್ಮ ಪ್ರಜಾಪ್ರಭುತ್ವದ ಜವಾಬ್ದಾರಿ.

ಆದರೆ ರಾಷ್ಟ್ರೀಯ ಹಿತಾಸಕ್ತಿಯನ್ನು ಅತ್ಯುನ್ನತ ಸ್ಥಾನದಲ್ಲಿಟ್ಟುಕೊಂಡು ಜಮ್ಮು - ಕಾಶ್ಮೀರ-ಲಡಾಖ್‌ಗೆ ಹೊಸ ನಿರ್ದೇಶನ ನೀಡಲು ಸರ್ಕಾರಕ್ಕೆ ಸಹಾಯ ಮಾಡಬೇಕೆಂದು ನಾನು ಅವರನ್ನು ಕೋರುತ್ತೇನೆ. ದೇಶಕ್ಕೆ ಸಹಾಯ ಮಾಡಲು ಮುಂದೆ ಬನ್ನಿ.

ಸಂಸತ್ತಿನಲ್ಲಿ ಯಾರು ಮತ ಚಲಾಯಿಸಿದರು, ಯಾರು ಮಾಡಲಿಲ್ಲ, ಯಾರು ಮಸೂದೆಯನ್ನು ಯಾರು ಬೆಂಬಲಿಸಿದರು, ಯಾರು ಮಾಡಲಿಲ್ಲ ಎನ್ನುದರ ಆಚೆ ನಾವು ಹೋಗಬೇಕಿದೆ. ಈಗ ನಾವೆಲ್ಲರೂ ಜಮ್ಮು - ಕಾಶ್ಮೀರ-ಲಡಾಖ್ ಹಿತದೃಷ್ಟಿಯಿಂದ ಒಗ್ಗಟ್ಟಿನಿಂದ ಕೆಲಸ ಮಾಡಲು ಒಗ್ಗೂಡಬೇಕಾಗಿದೆ.

ಜಮ್ಮು - ಕಾಶ್ಮೀರ ಮತ್ತು ಲಡ್ಡಾಖ್ನ ಕಳವಳಗಳು ನಮ್ಮ ಸಾಮೂಹಿಕ ಕಾಳಜಿ ಎಂದು ಪ್ರತಿಯೊಬ್ಬ ದೇಶವಾಸಿಗೂ ತಿಳಿಸಲು ನಾನು ಬಯಸುತ್ತೇನೆ. 130 ಕೋಟಿ ನಾಗರಿಕರ ಕಳವಳ ಇವು. ಅವರ ಸಂತೋಷ ಅಥವಾ ದುಃಖಗಳು ಮತ್ತು ನೋವುಗಳ ಬಗ್ಗೆ ನಾವು ಅಸಡ್ಡೆ ಹೊಂದಿಲ್ಲ.

370ನೇ ವಿಧಿ ರದ್ದಾಗಿರುವುದು ಈಗ ವಾಸ್ತವ. ಆದರೆ ಈ ಐತಿಹಾಸಿಕ ಹೆಜ್ಜೆಗಳಿಂದಾಗಿ ಉಂಟಾಗುವ ಯಾವುದೇ ವಿಲಕ್ಷಣಗಳು ಪರಿಣಾಮಗಳನ್ನು ಅವರೇ ಎದುರಿಸಬೇಕು ಎಂಬುದು ನಿಜ.

ಆ ಪ್ರದೇಶದ ನಮ್ಮ ಸಹೋದರರು ಮತ್ತು ಸಹೋದರಿಯರು ಅಲ್ಲಿನ ವಾತಾವರಣವನ್ನು ಹಾಳುಮಾಡಲು ಬಯಸುವ ಆ ಬೆರಳೆಣಿಕೆಯಷ್ಟು ಜನರಿಗೆ ತಾಳ್ಮೆಯಿಂದ ಉತ್ತರಿಸುತ್ತಾರೆ.

ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದವನ್ನು ಪ್ರಚೋದಿಸುವ ಪಾಕಿಸ್ತಾನದ ಪಿತೂರಿಗಳನ್ನು ಬಲವಾಗಿ ವಿರೋಧಿಸುತ್ತಿರುವುದು ಜಮ್ಮು - ಕಾಶ್ಮೀರದ ದೇಶಭಕ್ತರು ಎಂಬುದನ್ನು ನಾವು ಮರೆಯಬಾರದು.

ಭಾರತೀಯ ಸಂವಿಧಾನವನ್ನು ನಂಬುವ ನಮ್ಮ ಸಹೋದರ ಸಹೋದರಿಯರು ಪ್ರಾಮಾಣಿಕವಾಗಿ ಉತ್ತಮ ಜೀವನಕ್ಕೆ ಅರ್ಹರು.

ನಾವು ಅವರ ಬಗ್ಗೆ ಹೆಮ್ಮೆಪಡುತ್ತೇವೆ.

ಪರಿಸ್ಥಿತಿ ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತದೆ ಮತ್ತು ಅವರ ಎಲ್ಲಾ ತೊಂದರೆಗಳು ಕಡಿಮೆಯಾಗುತ್ತವೆ ಎಂದು ಜಮ್ಮು - ಕಾಶ್ಮೀರದ ಈ ಸ್ನೇಹಿತರಿಗೆ ಇಂದು ನಾನು ಭರವಸೆ ನೀಡುತ್ತೇನೆ.

 

ಸ್ನೇಹಿತರೇ,

ಈದ್ ಹಬ್ಬವು ಹತ್ತಿರದಲ್ಲಿದೆ.

ಎಲ್ಲರಿಗೂ ಈದ್  ಶುಭಾಶಯಗಳನ್ನು ತಿಳಿಸುತ್ತೇನೆ.

ಈದ್ ಆಚರಿಸುವಾಗ ಜಮ್ಮು - ಕಾಶ್ಮೀರದ ಜನರು ಯಾವುದೇ ಸಮಸ್ಯೆಯನ್ನು ಎದುರಿಸದಂತೆ ಸರ್ಕಾರ ಎಲ್ಲಾ ಕಾಳಜಿ ವಹಿಸುತ್ತದೆ.

ಜಮ್ಮು - ಕಾಶ್ಮೀರದ ಹೊರಗೆ ವಾಸಿಸುವ ಮತ್ತು ಈದ್ ದಿನದಂದು ತಮ್ಮ ಮನೆಗಳಿಗೆ ಮರಳಲು ಬಯಸುವ ಸ್ನೇಹಿತರಿಗೆ ಸರ್ಕಾರವು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತದೆ.

ಸ್ನೇಹಿತರೇ, ಇಂದು ಈ ಸಂದರ್ಭದಲ್ಲಿ,

ಜಮ್ಮು - ಕಾಶ್ಮೀರದ ಜನರ ಸುರಕ್ಷತೆಗಾಗಿ ನಿಯೋಜಿಸಲಾಗಿರುವ ಭದ್ರತಾ ಪಡೆಗಳ ನಮ್ಮ ಸ್ನೇಹಿತರಿಗೂ ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ.

ಎಲ್ಲಾ ಆಡಳಿತ ಅಧಿಕಾರಿಗಳು, ರಾಜ್ಯ ಸರ್ಕಾರಿ ನೌಕರರು ಮತ್ತು ಜಮ್ಮು - ಕಾಶ್ಮೀರ ಪೊಲೀಸ್ ಸಿಬ್ಬಂದಿ ಅಲ್ಲಿನ ಪರಿಸ್ಥಿತಿಯನ್ನು ನಿಭಾಯಿಸುತ್ತಿರುವ ರೀತಿ ನಿಜಕ್ಕೂ ಶ್ಲಾಘನೀಯ.

ನಿಮ್ಮ ಈ ಪರಿಶ್ರಮವು ಬದಲಾವಣೆಯು ಸಂಭವಿಸಬಹುದು ಎಂಬ ನನ್ನ ವಿಶ್ವಾಸವನ್ನು ಹೆಚ್ಚಿಸಿದೆ.

ಸಹೋದರ ಸಹೋದರಿಯರೇ, ಜಮ್ಮು - ಕಾಶ್ಮೀರ ನಮ್ಮ ದೇಶದ ಕಿರೀಟ. ಜಮ್ಮು - ಕಾಶ್ಮೀರದ ಅನೇಕ ಧೈರ್ಯಶಾಲಿ ಪುತ್ರರು ಮತ್ತು ಪುತ್ರಿಯರು ಅದರ ಭದ್ರತೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಮತ್ತು ಅಪಾಯವನ್ನು ಎದುರಿಸಿದ್ದಾರೆ ಎಂದು ನಾವು ಹೆಮ್ಮೆಪಡುತ್ತೇವೆ.

1965 ರ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ನುಸುಳುಕೋರರ ಬಗ್ಗೆ ಭಾರತೀಯ ಸೇನೆಗೆ ಮಾಹಿತಿ ನೀಡಿದ್ದ ಪೂಂಚ್ ಜಿಲ್ಲೆಯ ಮೌಲ್ವಿ ಗುಲಾಮ್ ದಿನ್  ಅವರಿಗೆ ಅಶೋಕ ಚಕ್ರವನ್ನು ನೀಡಿ ಗೌರವಿಸಲಾಯಿತು.

ಕಾರ್ಗಿಲ್ ಯುದ್ಧದ ಸಮಯದಲ್ಲಿ ಶತ್ರುಗಳು ಮಣ್ಣು ಮುಕ್ಕುವಂತೆ ಮಾಡಿದ ಲಡಾಖ್ ಜಿಲ್ಲೆಯ ಕರ್ನಲ್ ಸೋನಮ್ ವಾಂಗ್‌ಚುಗ್ ಅವರಿಗೆ ಮಹಾವೀರ ಚಕ್ರ ನೀಡಿ ಗೌರವಿಸಲಾಯಿತು.

ದೊಡ್ಡ ಭಯೋತ್ಪಾದಕನನ್ನು ಕೊಂದ ರಾಜೌರಿಯ ರುಕ್ಷಾನ ಕೌಸರ್‌ಗೆ ಕೀರ್ತಿ ಚಕ್ರವನ್ನು ನೀಡಲಾಯಿತು.

ಕಳೆದ ವರ್ಷ ಭಯೋತ್ಪಾದಕರಿಂದ ಹತ್ಯೆಗೀಡಾದ ಪೂಂಚ್‌ನ ಹುತಾತ್ಮ ಔರಂಗ್‌ಜೀಬ್  ಅವರ ಇಬ್ಬರು ಸಹೋದರರು ಈಗ ಸೇನೆಯಲ್ಲಿ ಸೇರಿ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ.

ಅಂತಹ ಧೈರ್ಯಶಾಲಿ ಪುತ್ರರು ಮತ್ತು ಹೆಣ್ಣುಮಕ್ಕಳ ಪಟ್ಟಿ ಬಹಳ ಉದ್ದವಾಗಿದೆ.

ಜಮ್ಮು - ಕಾಶ್ಮೀರ ಪೊಲೀಸರ ಹಲವಾರು ಜವಾನರು ಮತ್ತು ಅಧಿಕಾರಿಗಳು ಭಯೋತ್ಪಾದಕರೊಂದಿಗೆ ಹೋರಾಡುವಾಗ ಪ್ರಾಣ ಬಲಿ ಕೊಟ್ಟಿದ್ದಾರೆ. ನಾವು ದೇಶದ ಇತರ ಭಾಗಗಳಿಂದ ಸಾವಿರಾರು ಜನರನ್ನು ಕಳೆದುಕೊಂಡಿದ್ದೇವೆ.

ಅವರೆಲ್ಲರೂ ಶಾಂತಿಯುತ, ಸುರಕ್ಷಿತ ಮತ್ತು ಸಮೃದ್ಧ ಜಮ್ಮು - ಕಾಶ್ಮೀರದ ಕನಸು ಹೊಂದಿದ್ದರು.

ನಾವು ಒಟ್ಟಾಗಿ ಅವರ ಕನಸನ್ನು ನನಸಾಗಿಸಬೇಕು.

ಸ್ನೇಹಿತರೇ! ಈ ನಿರ್ಧಾರವು ಜಮ್ಮು - ಕಾಶ್ಮೀರ ಮತ್ತು ಲಡಾಖ್ ಜೊತೆಗೆ ಇಡೀ ದೇಶದ ಆರ್ಥಿಕ ಅಭಿವೃದ್ಧಿಗೆ ಸಹಾಯ ಮಾಡುತ್ತದೆ.

ಜಗತ್ತಿನ ಈ ಪ್ರಮುಖ ಭಾಗದಲ್ಲಿ ಶಾಂತಿ ಮತ್ತು ಸಮೃದ್ಧಿ ಮೇಲುಗೈ ಸಾಧಿಸಿದಾಗ, ಇಡೀ ಜಗತ್ತಿನಲ್ಲಿ ಶಾಂತಿಯ ಪ್ರಯತ್ನಗಳು ಸ್ವಾಭಾವಿಕವಾಗಿ ಬಲಗೊಳ್ಳುತ್ತವೆ.

ನಮ್ಮಲ್ಲಿ ಎಷ್ಟು ಶಕ್ತಿ, ಧೈರ್ಯ ಮತ್ತು ಉತ್ಸಾಹವಿದೆ ಎಂಬುದನ್ನು ಜಗತ್ತಿಗೆ ತೋರಿಸಲು ಜಮ್ಮು - ಕಾಶ್ಮೀರ ಮತ್ತು ಲಡಾಖ್‌ನ ನನ್ನ ಸಹೋದರ ಸಹೋದರಿಯರು ಒಗ್ಗೂಡಬೇಕೆಂದು ನಾನು ಕರೆ ನೀಡುತ್ತೇನೆ.

ಹೊಸ ಜಮ್ಮು - ಕಾಶ್ಮೀರ ಮತ್ತು ಲಡಾಖ್ ನೊಂದಿಗೆ ಹೊಸ ಭಾರತವನ್ನು ನಿರ್ಮಿಸಲು ನಾವು ಒಂದಾಗೋಣ.

 

ನಿಮೆಲ್ಲರಿಗೂ ತುಂಬು ಧನ್ಯವಾದಗಳು!

 

ಜೈ ಹಿಂದ್ !!!



(Release ID: 1581628) Visitor Counter : 700