ಹಣಕಾಸು ಸಚಿವಾಲಯ
5 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದುವ ಪ್ರಧಾನಮಂತ್ರಿಯವರ ದೂರದೃಷ್ಟಿ ಫಲಪ್ರದಗೊಳಿಸಲು ನೀಲನಕ್ಷೆ ನೀಡಿದ ಆರ್ಥಿಕ ಸಮೀಕ್ಷೆ
Posted On:
04 JUL 2019 12:30PM by PIB Bengaluru
5 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದುವ ಪ್ರಧಾನಮಂತ್ರಿಯವರ ದೂರದೃಷ್ಟಿ ಫಲಪ್ರದಗೊಳಿಸಲು ನೀಲನಕ್ಷೆ ನೀಡಿದ ಆರ್ಥಿಕ ಸಮೀಕ್ಷೆ
ಖಾಸಗಿ ಹೂಡಿಕೆ, ಉದ್ಯೋಗ, ರಫ್ತು ಮತ್ತು ಬೇಡಿಕೆ ಆಧರಿತ ಉತ್ಕೃಷ್ಟ ಮಾದರಿ ರೂಪಿಸಲು ಸಲಹೆ
2025ರ ವೇಳೆಗೆ ಭಾರತದ ಅರ್ಥ ವ್ಯವಸ್ಥೆ 5 ಟ್ರಿಲಿಯನ್ ಅಮೆರಿಕನ್ ಡಾಲರ್ ತಲುಪಬೇಕು ಎಂಬ ಪ್ರಧಾನಮಂತ್ರಿಯವರ ದೂರದೃಷ್ಟಿಯನ್ನು ಫಲಪ್ರದಗೊಳಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರದ ಬಗ್ಗೆ ಆರ್ಥಿಕ ಸಮೀಕ್ಷೆಯು ನೀಲನಕ್ಷೆಯೊಂದನ್ನು ನೀಡಿದೆ.
ಕೇಂದ್ರ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮ್ ಅವರು ಗುರುವಾರ ಸಂಸತ್ತಿನಲ್ಲಿ ಮಂಡಿಸಿದ 2018-19ರ ಆರ್ಥಿಕ ಸಮೀಕ್ಷೆಯಲ್ಲಿ ಈ ಅಂಶ ಅಡಕವಾಗಿದೆ.
ಸಮೀಕ್ಷೆಯ ಪ್ರಮುಖ ವಿಷಯವೆಂದರೆ, 2024-25ರ ವೇಳೆಗೆ 5 ಟ್ರಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಆರ್ಥಿಕತೆ ತಲುಪುವ ಉದ್ದೇಶಕ್ಕಾಗಿ ನಿರಂತರ ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು ಸಜ್ಜಾಗುವುದು. 5 ಟ್ರಿಲಿಯನ್ ಗುರಿ ಸಾಧಿಸಲು ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ದರವನ್ನು ಶೇ. 8ಕ್ಕೆ ಕೊಂಡೊಯ್ದು ಮುಂದುವರಿಸಲು ಆರ್ಥಿಕತೆಯ ವೇಗವನ್ನು ಚುರುಕುಗೊಳಿಸುವಂತೆ ಸೂಚಿಸಲಾಗಿದೆ.
ಆರ್ಥಿಕ ಬೆಳವಣಿಗೆ, ಬೇಡಿಕೆ, ರಫ್ತು ಮತ್ತು ಉದ್ಯೋಗ ಸೃಷ್ಟಿಯ ರಾಷ್ಟ್ರೀಯ ಆದ್ಯತೆಗಳನ್ನು ಪ್ರತ್ಯೇಕ ಸಮಸ್ಯೆಗಳಾಗಿನೋಡುವ ಬದಲು ಪರಸ್ಪರ ಪೂರಕ ಎಂದು ಪರಿಗಣಿಸುವ ಈ ಸಮೀಕ್ಷೆ, ಒಂದಕ್ಕೊಂದನ್ನು ಸಂಪರ್ಕಿಸುವ ಯೋಜನೆಗಳನ್ನು ರೂಪಿಸಬೇಕು ಎಂದು ಹೇಳಿದ್ದು, 2018-19ನೇ ಸಾಲನ್ನು 'ನೀಲಾಕಾಶ ಚಿಂತನೆ' (ಬ್ಲೂ ಸ್ಕೈ ಥಿಂಕಿಂಗ್) ಸಿದ್ಧಾಂತದ ಮೇಲೆ ರೂಪಿಸಲಾಗಿದೆ.
ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ಆರ್ಥಿಕತೆಯನ್ನು ಒಂದೇ ಉತ್ತಮ ಮಾದರಿ ಇಲ್ಲವೇ ಕೆಟ್ಟ ಮಾದರಿಯಾಗಿ ನೋಡಲಾಗುತ್ತಿದ್ದು, ಇದರಿಂದ ಸಮತೋಲನದ ಆರ್ಥಶಾಸ್ತ್ರ ಪರಿಕಲ್ಪನೆ ದೂರವಾಗಿದೆ. ಅಲ್ಲದೆ, ಬೇಡಿಕೆ, ಉದ್ಯೋಗ,ರಫ್ತು ಮತ್ತಿತರೆ ಆರ್ಥಿಕ ಸವಾಲುಗಳನ್ನು ಎದುರಿಸಲು ಖಾಸಗಿ ಹೂಡಿಕೆಯೊಂದಿಗೆ ಉತ್ಕೃಷ್ಟ ಆರ್ಥಿಕ ಮಾದರಿ ರೂಪಿಸಬೇಕು. ಇದು ಅತಿ ಸಣ್ಣ ಬದಲಾವಣೆಗಳನ್ನೂ ಬೆಳವಣಿಗೆಗೆ ಪೂರಕವಾಗಿ ರೂಪಿಸುತ್ತದೆ ಎಂದು ಸಮೀಕ್ಷೆ ತಿಳಿಸಿದೆ.
ಆರ್ಥಿಕ ಅನಿಶ್ಚಿತತೆಯ ಜಗತ್ತಿನಲ್ಲಿ ದೂರದೃಷ್ಟಿ, ಅದನ್ನು ಸಾಧಿಸಲು ಕಾರ್ಯತಂತ್ರಗಳನ್ನೊಳಗೊಂಡ ನೀಲನಕ್ಷೆ ಮತ್ತು ನೀಲನಕ್ಷೆಗೆ ಅನುಗುಣವಾಗಿ ಆದಾಯ ಸಂಗ್ರಹಿಸಲು ಪ್ರಾಯೋಗಿಕ ಸಾಧನಗಳು ಅಗತ್ಯ. ಆ ನಿಟ್ಟಿನಲ್ಲಿ ಪ್ರಧಾನಮಂತ್ರಿಯವರು ದೂರದೃಷ್ಟಿಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸಮೀಕ್ಷೆಯು ಕಾರ್ಯತಂತ್ರದ ನೀಲನಕ್ಷೆ ರೂಪಿಸಿದೆ. ಸಾಂಪ್ರದಾಯಿಕ ಅರ್ಥಶಾಸ್ತ್ರದಲ್ಲಿ ಜನರನ್ನು ಮಾನವರಾಗಿಯೇ ಪರಿಗಣಿಸಬೇಕೇ ಹೊರತು ರೊಬೋಟ್ ಗಳಂತೆ ಅಲ್ಲ. ಸಾರ್ವಜನಿಕ ಹಿತದೃಷ್ಟಿಯಿಂದ ಅಗತ್ಯ ದತ್ತಾಂಶ ರಚಿಸುವುದು, ಒಪ್ಪಂದಗಳ ಜಾರಿಗೆ ಕಾನೂನು ಬಲಪಡಿಸುವುದು, ನೀತಿ ನಿರೂಪಣೆಗಳಿಗೆ ಬೆಂಬಲ ನೀಡುವುದು ಈ ನೀಲನಕ್ಷೆಯ ಪ್ರಮುಖ ಭಾಗಗಳಾಗಿವೆ.
ಈ ಬಾರಿಯ ಆರ್ಥಿಕ ಸಮೀಕ್ಷೆಯು ಲಿಂಗ ಸಮಾನತೆ, ಆರೋಗ್ಯಕರ ಮತ್ತು ಸುಂದರ ಭಾರತ, ಉಳಿತಾಯ, ತೆರಿಗೆ ಅನುಸರಣೆ, ಸಾಲದ ಗುಣಮಟ್ಟದ ಸಮಸ್ಯೆಗಳನ್ನು ಬಗೆಹರಿಸಲು ಅರ್ಥಶಾಸ್ತ್ರದ ಬದಲಾವಣೆ ಪದ್ಧತಿಯನ್ನು ಅನುಸರಿಸುವಂತೆ ಹೇಳಿದೆ. ಬೇಟಿ ಬಚಾವೋ- ಬೇಟಿ ಪಡಾವೋ, ಸ್ವಚ್ಛ ಭಾರತ ಮಿಷನ್, ಜನ್ ಧನ್ ಯೋಜನೆ ಮುಂತಾದ ಕಾರ್ಯಕ್ರಮಗಳು ಸಾಮಾಜಿಕ ಬದಲಾವಣೆಗೆ ಕಾರಣವಾಗಿವೆ ಎಂದೂ ಸಮೀಕ್ಷೆ ಅಭಿಪ್ರಾಯಪಟ್ಟಿದೆ.
(Release ID: 1577161)