ಸಂಪುಟ

ಪಿಂಚಣಿಯ ವ್ಯಾಪ್ತಿಗೆ ವರ್ತಕರು! 

Posted On: 31 MAY 2019 8:40PM by PIB Bengaluru

ಪಿಂಚಣಿಯ ವ್ಯಾಪ್ತಿಗೆ ವರ್ತಕರು! 

ವರ್ತಕರಿಗೆ ಪಿಂಚಣಿ ಯೋಜನೆಯನ್ನು ಅನುಮೋದಿಸಿದ ಸಂಪುಟ, ಈ ಕ್ರಮದಿಂದ 3 ಕೋಟಿ ಚಿಲ್ಲರೆ ವರ್ತಕರು ಮತ್ತು ಅಂಗಡಿ ಮಾಲೀಕರಿಗೆ ಪ್ರಯೋಜನ, ಸರ್ಕಾರದ ಪ್ರಥಮ ದಿನವೇ ಮತ್ತೊಂದು ಭರವಸೆಯನ್ನು ಈಡೇರಿಸಿದ ಪ್ರಧಾನಮಂತ್ರಿ ಮೋದಿ 
 

ಭಾರತಕ್ಕೆ ವಾಣಿಜ್ಯ ಮತ್ತು ವ್ಯಾಪಾರದಲ್ಲಿ ಶ್ರೀಮಂತ ಪರಂಪರೆಯಿದೆ. ನಮ್ಮ ವರ್ತಕರು ಭಾರತದ ಆರ್ಥಿಕ ವೃದ್ಧಿಗೆ ಬಲವಾದ ಕೊಡುಗೆ ನೀಡುತ್ತಲೇ ಬಂದಿದ್ದಾರೆ. 

ವರ್ತಕ ಸಮುದಾಯಕ್ಕೆ ಪ್ರಯೋಜನಕಾರಿಯಾದ ನಿರ್ಧಾರವೊಂದರಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ವರ್ತಕ ಸಮುದಾಯಕ್ಕೆ ಪಿಂಚಣಿ ವ್ಯಾಪ್ತಿ ನೀಡುವ ಹೊಸ ಯೋಜನೆಗೆ ತನ್ನ ಅನುಮೋದನೆ ನೀಡಿದೆ. ಇದು ಚೈತನ್ಯದಾಯಕ ಸ್ವರೂಪದಲ್ಲಿ ಸಾರ್ವತ್ರಿಕ ಸಾಮಾಜಿಕ ಭದ್ರತೆ ಒದಗಿಸುವ ಪ್ರಧಾನಮಂತ್ರಿಯವರ ದೂರದರ್ಶಿತ್ವದ ಭಾಗವಾಗಿದೆ. 

ಈ ಯೋಜನೆ ಹೇಗೆ ಕಾರ್ಯ ನಿರ್ವಹಿಸುತ್ತದೆ: 

ಈ ಯೋಜನೆಯಡಿ ಎಲ್ಲ ಅಂಗಡಿಯವರೂ, ಚಿಲ್ಲರೆ ವ್ಯಾಪಾರಸ್ಥರು ಮತ್ತು ಸ್ವಯಂ ಉದ್ಯೋಗಿಗಳಿಗೂ 60 ವರ್ಷ ತುಂಬಿದ ತರುವಾಯ ಕನಿಷ್ಠ ಮಾಸಿಕ 3,000/- ರೂ. ಪಿಂಚಣಿಯ ಖಾತ್ರಿ ಒದಗಿಸುತ್ತದೆ. 

18-40 ವರ್ಷ ವಯೋಮಿತಿಯೊಳಗಿರುವ ಮತ್ತು 1.5 ಕೋಟಿ ರೂಪಾಯಿಗಳಿಗಿಂತ ಕಡಿಮೆ ಜಿ.ಎಸ್.ಟಿ. ವಹಿವಾಟು ಹೊಂದಿರುವ ಎಲ್ಲ ಸಣ್ಣ ಅಂಗಡಿಯವರೂ ಮತ್ತು ಸ್ವಯಂ ಉದ್ಯೋಗಿಗಳು ಮತ್ತು ಚಿಲ್ಲರೆ ವ್ಯಾಪಾರಸ್ಥರು ಈ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದು. ಈ ಯೋಜನೆಯು 3 ಕೋಟಿ ಸಣ್ಣ ಅಂಗಡಿ ಮಾಲೀಕರು ಮತ್ತು ವ್ಯಾಪಾರಸ್ಥರಿಗೆ ಉಪಯುಕ್ತವಾಗಿದೆ. 

ಆಧಾರ್ ಮತ್ತು ಬ್ಯಾಂಕ್ ಖಾತೆಯ ಹೊರತಾಗಿ ಯಾವುದೇ ದಾಖಲೆಯ ಅಗತ್ಯವಿಲ್ಲದ ಈ ಯೋಜನೆ ಸ್ವಯಂ ಘೋಷಣೆಯ ಆಧಾರಿತವಾಗಿದೆ. ಆಸಕ್ತರು ದೇಶದಾದ್ಯಂತ ಇರುವ 3,25,000 ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ. 

ಭಾರತ ಸರ್ಕಾರವು ಚಂದಾದಾರರ ಖಾತೆಗೆ ಅಷ್ಟೇ ಮೊತ್ತದ ವಂತಿಗೆಯನ್ನು ನೀಡುತ್ತದೆ. ಉದಾಹರಣೆಗೆ 29 ವರ್ಷದ ಒಬ್ಬ ವ್ಯಕ್ತಿ ಯೋಜನೆಯಡಿ ಮಾಸಿಕ 100 ರೂಪಾಯಿ ನೀಡಿದರೆ, ಕೇಂದ್ರ ಸರ್ಕಾರ ಸಹ ಪಿಂಚಣಿದಾರನ ಖಾತೆಗೆ ಪ್ರತಿ ತಿಂಗಳೂ ಅಷ್ಟೇ ಮೊತ್ತವನ್ನು ಅನುದಾನವಾಗಿ ಜಮಾ ಮಾಡುತ್ತದೆ. 

ಮೊದಲ ದಿನವೇ ಪ್ರಮುಖ ಆಶ್ವಾಸನೆಯ ಈಡೇರಿಕೆ 

ವರ್ತಕ ಸಮುದಾಯಕ್ಕೆ ಪಿಂಚಣಿಯ ಸ್ವರೂಪವನ್ನು ತರುವ ಮೂಲಕ, ಪ್ರಧಾನಮಂತ್ರಿ ಮತ್ತು ಅವರ ತಂಡ ಭಾರತದ ಜನತೆಗೆ ನೀಡಿದ್ದ ಪ್ರಮುಖ ಆಶ್ವಾಸನೆಯನ್ನು ಈಡೇರಿಸಿದೆ. ವರ್ತಕ ಸಮುದಾಯಕ್ಕೆ ಪಿಂಚಣಿ ಒದಗಿಸುವ ಅಗತ್ಯ ಕುರಿತಂತೆ ಮಾತನಾಡಿರುವ ಪ್ರಧಾನಮಂತ್ರಿಯವರು, ಇದು ಅವರಿಗೆ ಅದರಲ್ಲೂ ವೃದ್ಧಾಪ್ಯದಲ್ಲಿ ಗೌರವಯುತವಾಗಿ ಮತ್ತು ಆರ್ಥಿಕ ಭದ್ರತೆಯೊಂದಿಗೆ ಬದುಕುವ ಖಾತ್ರಿ ಒದಗಿಸುತ್ತದೆ ಎಂದು ಹೇಳಿದ್ದಾರೆ. 

ವರ್ತಕರ, ಸಣ್ಣ ಮತ್ತು ಮಧ್ಯಮ ವಾಣಿಜ್ಯಗಳ ಕಲ್ಯಾಣಕ್ಕಾಗಿ ಕೈಗೊಳ್ಳಲಾಗಿರುವ ಇತರ ಹಲವು ಕ್ರಮಗಳ ನಿಟ್ಟಿನಲ್ಲಿ ಈ ನಿರ್ಧಾರ ನೋಡಬಹುದಾಗಿದೆ. ವರ್ತಕ ಸಮುದಾಯದ ಅಭಿಪ್ರಾಯಗಳನ್ನು ಪಡೆದ ತರುವಾಯ ಜಿಎಸ್ಟಿಯಲ್ಲಿ ಗಣನೀಯ ಸರಳೀಕರಣ ಮಾಡಲಾಗಿದೆ. ಅದೇ ರೀತಿ, ಮುದ್ರಾ ಸಾಲ ಉದ್ಯಮಶೀಲತೆಯಲ್ಲಿ ಭಾರತದ ಯುವ ಜನರಿಗೆ ಉತ್ಸಾಹ, ಉತ್ತೇಜನ ನೀಡಿದೆ. 1ಕೋಟಿ ರೂಪಾಯಿಗಳವರೆಗೆ ಸಾಲ ಈಗ ಸುಲಭವಾಗಿ ಲಭಿಸುತ್ತದೆ. 

ಇದು ಮತ್ತು ಇತರ ಹಲವು ಪ್ರಯತ್ನಗಳು ವರ್ತಕ ಸಮುದಾಯಕ್ಕೆ ಸಹಕಾರಿಯಾಗಿವೆ. 
 

******



(Release ID: 1573216) Visitor Counter : 184