ಪ್ರಧಾನ ಮಂತ್ರಿಯವರ ಕಛೇರಿ
16ನೇ ಲೋಕಸಭೆಯ ಕೊನೆ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಮಂತ್ರಿ
प्रविष्टि तिथि:
13 FEB 2019 8:48PM by PIB Bengaluru
16ನೇ ಲೋಕಸಭೆಯ ಕೊನೆ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಮಂತ್ರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು 16ನೇ ಲೋಕಸಭೆಯ ಕೊನೆಯ ಅಧಿವೇಶನ ಉದ್ದೇಶಿಸಿ ಮಾತನಾಡಿದರು.
ಸದನದ ಕಲಾಪವನ್ನು ನಡೆಸುವಲ್ಲಿ ಸ್ಪೀಕರ್ ಶ್ರೀಮತಿ ಸುಮಿತ್ರಾ ಮಹಾಜನ್ ಅವರ ಪಾತ್ರವನ್ನು ಅವರು ಶ್ಲಾಘಿಸಿದರು. 16ನೇ ಲೋಕಸಭೆಯ ಅವಧಿಯಲ್ಲಿ ಸಂಸದೀಯ ವ್ಯವಹಾರಗಳ ಸಚಿವರ ಪಾತ್ರವನ್ನೂ ಅವರು ಪ್ರಶಂಸಿಸಿದರು. ಸಂಸದೀಯ ವ್ಯವಹಾರಗಳ ಖಾತೆ ಮಾಜಿ ಸಚಿವ ದಿವಂಗತ ಅನಂತ್ ಕುಮಾರ್ ಸೇವೆಯನ್ನು ಮತ್ತು ಲೋಕಸಭೆಗೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದರು.
ಸದನ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಬಹುತೇಕ ಮೂರು ದಶಕಗಳ ಬಳಿಕ ಸಂಪೂರ್ಣ ಬಹುಮತದ ಸರ್ಕಾರವನ್ನು ದೇಶ ಕಂಡಿತು ಎಂದರು. ಲೋಕಸಭೆಯ ಫಲಪ್ರದತೆಯ ಬಗ್ಗೆ ಮಾತನಾಡಿದ ಅವರು, 17 ಅಧಿವೇಶನಗಳ ಪೈಕಿ 8 ಪ್ರತಿಶತ 100ರಷ್ಟು ಪ್ರದರ್ಶನ ಕಂಡವು, ಒಟ್ಟಾರೆ ಶೇ.85ರಷ್ಟು ಫಲಪ್ರದವಾಗಿತ್ತು ಎಂದರು.
ಸದಸ್ಯರನ್ನು ಅಭಿನಂದಿಸಿದ ಪ್ರಧಾನಮಂತ್ರಿಯವರು, ಆಡಳಿತ ಪಕ್ಷದ ಪ್ರತಿಯೊಬ್ಬ ಸದಸ್ಯರೂ ಮತ್ತು ಪ್ರತಿಪಕ್ಷ ಸದಸ್ಯರು ಈ ಲೋಕಸಭೆಯ ಅವಧಿಯಲ್ಲಿ ಜನರ ಹಿತಕ್ಕಾಗಿ ಗಣನೀಯ ಕೊಡುಗೆ ನೀಡಿದ್ದಾರೆ ಎಂದರು.
ಈ ಲೋಕಸಭೆಯನ್ನು ಅತಿ ಹೆಚ್ಚು ಮಹಿಳಾ ಸಂಸದರ ಕಾರಣಕ್ಕೆ ಸ್ಮರಿಸಲಾಗುವುದು, ಈ ಪೈಕಿ 44 ಸಂಸದರು ಪ್ರಥಮ ಬಾರಿ ಆಯ್ಕೆಯಾದವರು ಎಂದರು. ಮಹಿಳಾ ಸಂಸತ್ ಸದಸ್ಯರ ಪಾಲ್ಗೊಳ್ಳುವಿಕೆಯನ್ನು ಗುರುತಿಸಿದ ಪ್ರಧಾನಮಂತ್ರಿಯವರು, ಇದೇ ಮೊದಲ ಬಾರಿಗೆ ಗರಿಷ್ಠ ಸಂಖ್ಯೆಯ ಮಹಿಳಾ ಸಚಿವರು ಸಂಪುಟದಲ್ಲಿದ್ದರು ಮತ್ತು ಭದ್ರತೆ ಕುರಿತ ಸಂಪುಟ ಸಮಿತಿಯಲ್ಲಿ ನಾವು ಇಬ್ಬರು ಮಹಿಳಾ ಸಚಿವರನ್ನು ಹೊಂದಿದ್ದೆವು ಎಂದರು.
ಭಾರತದ ಆತ್ಮ ವಿಶ್ವಾಸ ಸಾರ್ವಕಾಲಿಕವಾಗಿ ಉತ್ಕೃಷ್ಟವಾಗಿತ್ತು. ನಾನು ಇದನ್ನು ಅತ್ಯಂತ ಧನಾತ್ಮಕ ಸಂಕೇತ ಎಂದು ಪರಿಗಣಿಸುತ್ತೇನೆ, ಕಾರಣ ಅಂಥ ವಿಶ್ವಾಸ ಅಭಿವೃದ್ಧಿಗೆ ಇಂಬು ನೀಡುತ್ತದೆ” ಎಂದರು.
ಪ್ರಸ್ತುತ ಭಾರತ 6ನೇ ಅತಿ ದೊಡ್ಡ ಆರ್ಥಿಕ ರಾಷ್ಟ್ರವಾಗಿದೆ ಮತ್ತು 5 ಟ್ರಿಲಿಯನ್ ಡಾಲರ್ ಆರ್ಥಿಕ ರಾಷ್ಟ್ರವಾಗುವ ಸಾಮಿಪ್ಯದಲ್ಲಿದೆ ಎಂದೂ ತಿಳಿಸಿದರು.
ಇಂಧನ, ಡಿಜಿಟಲ್ ತಂತ್ರಜ್ಞಾನ, ಬಾಹ್ಯಾಕಾಶ, ಉತ್ಪಾದನೆ ಸೇರಿದಂತೆ ವಿವಿಧ ವಲಯಗಳಲ್ಲಿ ಭಾರತದ ಸಾಧನೆಯನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಜಗತ್ತು ಜಾಗತಿಕ ತಾಪಮಾನದ ಬಗ್ಗೆ ಚರ್ಚಿಸುತ್ತಿದ್ದಾಗ, ಭಾರತ ಈ ಪಿಡುಗು ನಿವಾರಣೆಗೆ ಅಂತಾರಾಷ್ಟ್ರೀಯ ಸೌರ ಸಹಯೋಗದ ಪ್ರಯತ್ನ ಮಾಡಿತು ಎಂದರು.
ಇಂದು ವಿಶ್ವ ನಮ್ಮನ್ನು ಗಂಭೀರವಾಗಿ ಪರಿಗಣಿಸುತ್ತದೆ ಏಕೆಂದರೆ ಅದು ಸಂಪೂರ್ಣ ಬಹುಮತದ ಸರ್ಕಾರವನ್ನು ಗುರುತಿಸಿದೆ ಎಂದರು. ಇದರ ಶ್ರೇಯ 2014ರಲ್ಲಿ ಜನಾದೇಶ ನೀಡಿದ ನಾಗರಿಕರಿಗೆ ಸಲ್ಲುತ್ತದೆ ಎಂದರು.
ಭಾರತದ ವಿದೇಶಾಂಗ ನೀತಿಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ, ಕಳೆದ 5 ವರ್ಷಗಳಲ್ಲಿ ಭಾರತವು ಮಾನವೀಯತೆಯ ಕಾರ್ಯಗಳಲ್ಲಿ ಅಂದರೆ ನೇಪಾಳದಲ್ಲಿ ಭೂಕಂಪ ಸಂಭವಿಸಿದಾಗ ಕೈಗೊಂಡ ಪರಿಹಾರ ಕಾಮಗಾರಿಯೇ ಇರಬಹುದು, ಮಾಲ್ಡೀವ್ಸ್ ನಲ್ಲಿ ತಲೆದೋರಿದ ನೀರಿನ ಬಿಕ್ಕಟ್ಟೆ ಇರಬಹುದು ಅಥವಾ ಯಮನ್ ನಿಂದ ನಾಗರಿಕರನ್ನು ರಕ್ಷಿಸುವುದೇ ಇರಬಹುದು ಎಲ್ಲದರಲ್ಲೂ ದೊಡ್ಡ ಪಾತ್ರ ನಿರ್ವಹಿಸಿದೆ ಎಂದರು. ಭಾರತದ ಸಾತ್ವಿಕ ಶಕ್ತಿಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ, ಯೋಗ ಇಂದು ಜಾಗತಿಕವಾಗಿ ಮಾನ್ಯತೆ ಪಡೆದಿದೆ ಎಂದರು. ಹಲವು ದೇಶಗಳು ಇಂದು ಬಾಬಾ ಅಂಬೇಡ್ಕರ್ ಜಯಂತಿ, ಮಹಾತ್ಮಾ ಗಾಂಧಿ ಜಯಂತಿ ಆಚರಿಸುತ್ತಿವೆ ಎಂದರು.
ಆಗಿರುವ ಕೆಲಸದ ಬಗ್ಗೆ ವಿವರ ನೀಡಿದ ಪ್ರಧಾನಮಂತ್ರಿಯವರು, 219 ಮಸೂದೆಗಳನ್ನು ಮಂಡಿಸಲಾಗಿದ್ದು, 203 ವಿಧೇಯಕಗಳು ಅನುಮೋದನೆಗೊಂಡಿವೆ ಎಂದರು.
ಕಪ್ಪುಹಣ ಮತ್ತು ಭ್ರಷ್ಟಾಚಾರದ ವಿರುದ್ಧ ತಮ್ಮ ಸರ್ಕಾರದ ನಿಲುವನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, ಈ ಲೋಕಸಭೆ ದಿವಾಳಿ ಮತ್ತು ದಿವಾಳಿತನ ಸಂಹಿತೆ, ಫಲಾಯನ ಮಾಡುವ ಆರ್ಥಿಕ ಅಪರಾಧಿಗಳ ಕಾಯಿದೆಯಂಥ ಹಲವು ಪರಿಣಾಮಕಾರಿ ಶಾಸನಗಳನ್ನು ತಂದಿದೆ ಎಂದರು.
ಈ ಲೋಕಸಭೆಯೇ ಜಿಎಸ್ಟಿಯನ್ನು ಅನುಮೋದಿಸಿದ್ದು ಎಂದು ಪ್ರಧಾನಮಂತ್ರಿ ಹೇಳಿದರು. ಜಿಎಸ್ಟಿ ಪ್ರಕ್ರಿಯೆ ಸಹಕಾರ ಮತ್ತು ದ್ವಿಪಕ್ಷೀಯತೆಯ ಸ್ಫೂರ್ತಿಯನ್ನು ಹೊರಹಾಕಿತು ಎಂದು ತಿಳಿಸಿದರು.
ಪ್ರಧಾನಮಂತ್ರಿ ಮೋದಿ ಅವರು ಆಧಾರ್, ಇ.ಡಬ್ಲ್ಯು.ಎಸ್.ಗೆ ಶೇ.10ರ ಮೀಸಲು, ಹೆರಿಗೆ ಸೌಲಭ್ಯ ಸೇರಿದಂತೆ ಸರ್ಕಾರದ ಇತರ ಉಪಕ್ರಮಗಳ ಬಗ್ಗೆ ಮಾತನಾಡಿದರು. 16ನೇ ಲೋಕಸಭೆಯ ಅವಧಿಯಲ್ಲಿ 1400 ಹಳೆಯ ಅನುಪಯುಕ್ತ ಕಾಯಿದೆಗಳನ್ನು ತೆಗೆದುಹಾಕಲಾಯಿತು ಎಂದರು.
16ನೇ ಲೋಕಸಭೆಯ ಅವಧಿಯಲ್ಲಿ ಸುಗಮ ಕಲಾಪ ನಡೆಸಲು ಬೆಂಬಲ ನೀಡಿದ, ಸಹಕರಿಸಿದ, ಕೊಡುಗೆ ನೀಡಿದ ಸದನದ ಪ್ರತಿಯೊಬ್ಬ ಸದಸ್ಯರಿಗೂ ಧನ್ಯವಾದವನ್ನು ಅರ್ಪಿಸುವ ಮೂಲಕ ಅವರು ತಮ್ಮ ಮಾತುಗಳನ್ನು ಮುಗಿಸಿದರು.
***
(रिलीज़ आईडी: 1564395)
आगंतुक पटल : 152