ಪ್ರಧಾನ ಮಂತ್ರಿಯವರ ಕಛೇರಿ

ಗಾಂಧಿನಗರದಲ್ಲಿ ವೈಬ್ರೆಂಟ್ ಗುಜರಾತ್ ಶೃಂಗಸಭೆಯ 9ನೇ ಅವೃತ್ತಿಯನ್ನು ಉದ್ಘಾಟಿಸಿದ ಪ್ರಧಾನಮಂತ್ರಿ

Posted On: 18 JAN 2019 3:35PM by PIB Bengaluru

ಗಾಂಧಿನಗರದಲ್ಲಿ ವೈಬ್ರೆಂಟ್ ಗುಜರಾತ್ ಶೃಂಗಸಭೆಯ 9ನೇ ಅವೃತ್ತಿಯನ್ನು ಉದ್ಘಾಟಿಸಿದ ಪ್ರಧಾನಮಂತ್ರಿ

 

ಭಾರತ ಈ ಹಿಂದೆಂದಿಗಿಂತ ಹೆಚ್ಚು ವಾಣಿಜ್ಯ ನಡೆಸಲು ಸಜ್ಜಾಗಿದೆ ಎಂದ ಪ್ರಧಾನಮಂತ್ರಿ, ಭಾರತದೊಂದಿಗೆ ವಾಣಿಜ್ಯ ನಡೆಸಲು ದೊಡ್ಡ ಅವಕಾಶವಿದೆ  ಹೀಗಾಗಿ ಭಾರತದಲ್ಲಿ ಹೂಡಿಕೆ ಮಾಡಿ ಎಂದು ವಾಣಿಜ್ಯೋದ್ಯಮಿಗಳಿಗೆ ಕರೆ, ಪ್ರಜಾಪ್ರಭುತ್ವ, ಜನಶಕ್ತಿ  ಒದಗಿಸುವ ಮತ್ತು ಆರ್ಥಿಕತೆಯ ಬಲವರ್ಧನೆಗೆ ಆಳವಾದ ವಿನ್ಯಾಸಿತ ಸುಧಾರಣೆ ಬಯಸುವ ರಾಷ್ಟ್ರ ಭಾರತವೊಂದೇ :ಪ್ರಧಾನಮಂತ್ರಿ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ಗಾಂಧಿನಗರದ ಮಹಾತ್ಮಾ ಮಂದಿರದ ವಸ್ತುಪ್ರದರ್ಶನ ಸಹಿತ ಸಮಾವೇಶ ಕೇಂದ್ರದಲ್ಲಿ ವೈಬ್ರೆಂಟ್ ಗುಜರಾತ್ ಶೃಂಗಸಭೆಯ 9ನೇ ಆವೃತ್ತಿಯನ್ನು ಉದ್ಘಾಟಿಸಿದರು. ಉಜ್ಬೇಕಿಸಿತಾನ, ರವಾಂಡಾ, ಡೆನ್ಮಾರ್ಕ್, ಜೆಕ್ ಗಣರಾಜ್ಯ ಮತ್ತು ಮಾಲ್ಟಾ ಸೇರಿ ಐದು ರಾಷ್ಟ್ರಗಳ ಮುಖ್ಯಸ್ಥರು ಮತ್ತು ಕೈಗಾರಿಕೆಗಳ ಮುಖ್ಯಸ್ಥರು ಮತ್ತು ದೇಶ ವಿದೇಶಗಳ ವಿವಿಧ ವಲಯಗಳ 30 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.

 

ಪ್ರಧಾನಮಂತ್ರಿಯವರು ಭಾರತದಲ್ಲಿ ಈಗ ಅಗತ್ಯ ಮೂಲಸೌಕರ್ಯ ಮತ್ತು ಸೌಲಭ್ಯಗಳಿದ್ದು ಹೂಡಿಕೆ ಮಾಡಲು ಹೆಚ್ಚು ಸ್ನೇಹಮಯ ವಾತಾವರಣವಿದೆ, ಭಾರತಕ್ಕೆ ಬಂದು ಹೂಡಿಕೆ ಮಾಡುವಂತೆ ಜಾಗತಿಕ ವಾಣಿಜ್ಯ ನಾಯಕರು ಮತ್ತು ಕಂಪನಿಗಳಿಗೆ ಆಹ್ವಾನ ನೀಡಿದರು. “ಭಾರತ ಈಗ ವಾಣಿಜ್ಯಕ್ಕೆ ಸಜ್ಜಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ನಾವು ಸುಗಮ ವಾಣಿಜ್ಯ ನಡೆಸುವ ಜಾಗತಿಕ ಶ್ರೇಯಾಂಕದಲ್ಲಿ 65 ಸ್ಥಾನ ಜಿಗಿದಿದ್ದೇವೆ. ಮುಂದಿನ ವರ್ಷ 50ನೇ ಸ್ಥಾನ ತಲುಪಲು ಶ್ರಮಿಸುವಂತೆ ತಮ್ಮ ತಂಡಕ್ಕೆ ಹೇಳಿರುವುದಾಗಿ”  ಪ್ರಧಾನಮಂತ್ರಿಯವರು  ತಿಳಿಸಿದರು.

 

ಅಂತಾರಾಷ್ಟ್ರೀಯ ಸಂಸ್ಥೆಗಳಾದ ವಿಶ್ವಬ್ಯಾಂಕ್, ಐ.ಎಂ.ಎಫ್. ಮತ್ತು ಮೂಡಿ ಭಾರತದ ಆರ್ಥಿಕತೆ ಮತ್ತು ಇತ್ತೀಚೆಗೆ ಕೈಗೊಂಡ ಸುಧಾರಣೆಗಳ ಮೇಲೆ ವಿಶ್ವಾಸ ವ್ಯಕ್ತಪಡಿಸಿವೆ ಎಂದೂ ತಿಳಿಸಿದರು. “ನಾವು ವಾಣಿಜ್ಯ ನಡೆಸುವುದನ್ನು ಅಗ್ಗ ಮಾಡಿದ್ದೇವೆ. ಜಿಎಸ್ಟಿಯ ಜಾರಿಯಿಂದ ಮತ್ತು ಇತರ ತೆರಿಗೆ ಸರಳೀಕರಣ ಕ್ರಮಗಳಿಂದ ನಾವು ವಹಿವಾಟಿನ ವೆಚ್ಚವನ್ನು ತಗ್ಗಿಸಿದ್ದೇವೆ ಮತ್ತು ಈ ಪ್ರಕ್ರಿಯೆಯನ್ನು ಸಮರ್ಥಗೊಳಿಸಿದ್ದೇವೆ ಎಂದು ಹೇಳಿದರು. ನಾವು ಡಿಜಿಟಲ್ ಪ್ರಕ್ರಿಯೆ ಮತ್ತು ಒಂದು ಅಂಶದ ಇಂಟರ್ ಫೇಸ್ ಮೂಲಕ ವಾಣಿಜ್ಯ ನಡೆಸುವುದನ್ನು ತ್ವರಿತಗೊಳಿಸಿದ್ದೇವೆ.” ಎಂದರು.

 

ಭಾರತದ ಪ್ರಗತಿಯ ಮತ್ತು ಅದರ ಬಲವಾದ ಆರ್ಥಿಕ ಮೂಲಭೂತತ್ವದ ಮಹತ್ವವನ್ನು ಒತ್ತಿ ಹೇಳಿದ  ಪ್ರಧಾನಮಂತ್ರಿ  , “ಭಾರತ ಉದಾರೀಕರಣ ಪ್ರಕ್ರಿಯೆ ಆರಂಭಿಸಿದ ತರುವಾಯ 1991ರಿಂದ ಈಚೆಗೆ ಯಾವುದೇ ಸರ್ಕಾರದ ಅತ್ಯಧಿಕ ಅಂದರೆ ಶೇಕಡ 7.3ರ ದರದ ಜಿಡಿಪಿ ವೃದ್ಧಿಯನ್ನು ದಾಖಲಿಸಿದೆ. ಅದೇ ವೇಳೆ ಹಣದುಬ್ಬರದ ಸರಾಸರಿ ದರ ಶೇ.4.6ಇದ್ದು ಇದು 1991ರಿಂದೀಚೆಗೆ ಯಾವುದೇ ಸರ್ಕಾರದ ಅವಧಿಯ ಅತಿ ಕಡಿಮೆ ದರ ಆಗಿದೆ.”ಎಂದರು.

 

ಭಾರತಕ್ಕೆ ನಿಯಮಿತವಾಗಿ ಬಂದು ಹೋಗುವವರಿಗೆ ಗಾಳಿಯಲ್ಲೇ ಬದಲಾವಣೆ ಕಾಣುತ್ತದೆ. ಅದು ದಿಶೆ ಮತ್ತು ತೀವ್ರತೆ ಎರಡರಲ್ಲೂ ಕಾಣುತ್ತದೆ. ಕಳೆದ ನಾಲ್ಕು ವರ್ಷಗಳಲ್ಲಿ ನಮ್ಮ ಸರ್ಕಾರದ ಗುರಿ, ಸರ್ಕಾರವನ್ನು ಕಡಿಮೆ ಮಾಡಿ, ಆಡಳಿತವನ್ನು ಹೆಚ್ಚಿಸುವುದಾಗಿದೆ. ಆರ್ಥಿಕ ಬಲವರ್ಧನೆಗಾಗಿ ನಾವು ಆಳವಾದ ವಿನ್ಯಾಸಿತ ಸುಧಾರಣೆ ಕೈಗೊಳ್ಳಲು ಬಯಸುತ್ತೇವೆ. ನಾವು ವಿಶ್ವದಲ್ಲಿ ತ್ವರಿತವಾಗಿ ಬೆಳೆಯುತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿ  ಮುಂದುವರಿಯಲು ಬಯಸುತ್ತೇವೆ" ಎಂದು  ಪ್ರಧಾನಿ ಸಭಿಕರಿಗೆ ತಿಳಿಸಿದರು.

 

ಭಾರತವು ಈಗ ನವೋದ್ಯಮಗಳ ವಿಚಾರದಲ್ಲಿ ಅತಿ ದೊಡ್ಡ ಪರಿಸರ ವ್ಯವಸ್ಥೆಯಾಗಿದ್ದು, ಅದರ ವಿಶ್ವ ದರ್ಜೆಯ ಸಂಶೋಧನಾ ಸೌಲಭ್ಯಗಳು ಹೂಡಿಕೆಗೆ ಸೂಕ್ತ ವಾತಾವರಣ ಒದಗಿಸುತ್ತಿವೆ’’ ಎಂದು ಪ್ರಧಾನಿ ಹೇಳಿದರು. “ನಮ್ಮ ಯುವಜನರಿಗೆ ಉದ್ಯೋಗ ಸೃಷ್ಟಿಸಲು ನಾವು ಉತ್ಪಾದನಾ ವಲಯದ ಉತ್ತೇಜನಕ್ಕೆ ಶ್ರಮಿಸುತ್ತಿದ್ದೇವೆ. ನಮ್ಮ ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಡಿಜಿಟಲ್ ಇಂಡಿಯಾ ಮತ್ತು ಸ್ಕಿಲ್ ಇಂಡಿಯಾ ” ಬೆಂಬಲವಾಗಿವೆ ಎಂದರು.

 

“2017ರಲ್ಲಿ ನಾವು ಅತಿ ಹೆಚ್ಚು ವೃದ್ಧಿಸುತ್ತಿರುವ ಪ್ರವಾಸೋದ್ಯಮ ತಾಣಗಳಲ್ಲಿ ಒಂದಾಗಿದ್ದೇವೆ. 2016ರಲ್ಲಿ ವಿಶ್ವ ಶೇ.7ರ ವೃದ್ಧಿ ಸಾಧಿಸಿದ್ದಾಗ ಭಾರತ ಶೇ.14ರ ವೃದ್ಧಿ ಸಾಧಿಸಿತ್ತು. ನಾವು ಕಳೆದ ನಾಲ್ಕು ವರ್ಷಗಳಲ್ಲಿ ಪ್ರಯಾಣಿಕರ ಟಿಕೆಟಿಂಗ್ ವಿಚಾರದಲ್ಲಿ ಎರಡಂಕಿಯ ವೃದ್ದಿಯೊಂದಿಗೆ ವಾಯುಯಾನ ಮಾರುಕಟ್ಟೆಯಲ್ಲಿಯೂ ವಿಶ್ವದಲ್ಲಿ ತ್ವರಿತವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದ್ದೇವೆ.” ಎಂದೂ  ಪ್ರಧಾನಮಂತ್ರಿ  ಹೇಳಿದರು. ಭಾರತ ವಿಪುಲ ಅವಕಾಶಗಳ ತಾಣವಾಗಿದ್ದು, ಇದು ಬೇಡಿಕೆ, ಪ್ರಜಾಪ್ರಭುತ್ವ ಮತ್ತು ಜನಸಂಖ್ಯಾ ಶಕ್ತಿಯನ್ನು ಒದಗಿಸುವ ಏಕೈಕ ರಾಷ್ಟ್ರ ಎಂದರು.

 

ಗುಜರಾತ್ ವೈಬ್ರೆಂಟ್ ಶೃಂಗಸಭೆಯ ಕುರಿತಂತೆ ಮಾತನಾಡಿದ ಅವರು “ ಈಗ ಅದು ಜಾಗತಿಕ ವೇದಿಕೆಯಾಗಿ ಹೊರಹೊಮ್ಮಿದ್ದು, ಹಲವು ನಾಯಕರ ಉಪಸ್ಥಿತಿ, ಅಂತಾರಾಷ್ಟ್ರೀಯ ಸಹಕಾರವನ್ನು ತೋರಿಸುತ್ತದೆ. ಇದು ಈಗ ಕೇವಲ ರಾಷ್ಟ್ರೀಯ ರಾಜಧಾನಿಗೆ ಸೀಮಿತವಾಗಿರದೆ, ರಾಜ್ಯಗಳ ರಾಜಧಾನಿಗೂ ವಿಸ್ತರಿಸಿದೆ” ಎಂದರು.

 

ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ, ನೀತಿ ಚಾಲಿತ ಆಡಲಿತ ಮತ್ತು ದೂರದರ್ಶಿತ್ವದ ನಾಯಕತ್ವಕ್ಕಾಗಿ ಪ್ರಧಾನಮಂತ್ರಿ ಮೋದಿ ಅವರನ್ನು ಶ್ಲಾಘಿಸಿ, ಸುಗಮ ವಾಣಿಜ್ಯಕ್ಕೆ ಎಲ್ಲ ಅಗತ್ಯ ಸೌಲಭ್ಯದ ಬೆಂಬಲದ ಭರವಸೆ ನೀಡಿದರು.

 

ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶೋಭೆ ತಂದ ಐದು ರಾಷ್ಟ್ರಗಳ ಮುಖ್ಯಸ್ಥರಲ್ಲಿ ಉಜ್ಬೇಕಿಸ್ತಾನದ ಅಧ್ಯಕ್ಷ ಶೌಖತ್ ಮಿರ್ಜಿಯೋಯೋವ್, ಡೆನ್ಮಾರ್ಕ್ ಪ್ರಧಾನಿ ಲಾರ್ಸ್ ಲೊಕ್ಕೆ ರಸ್ಮುಸ್ಸೆನ್, ಜೆಕ್ ಗಣರಾಜ್ಯದ ಆಂದ್ರೆಜ್ ಬಬಿಸ್ ಮತ್ತು ಮಾಲ್ಟಾದ ಡಾ. ಜೋಸೆಫ್ ಮಸ್ಕಟ್ ಸೇರಿದ್ದರು.

 

ವೈಬ್ರೆಂಟ್ ಗುಜರಾತ್ 2019ರ ಮುಖ್ಯಾಂಶಗಳ ಪೈಕಿ, ಇಸ್ರೇಲ್ ಪ್ರಧಾನಮಂತ್ರಿ ಬೆಂಜಿಮಿನ್ ನೆತನ್ಯಾಹು ಅವರ ವಿಡಿಯೋ ಸಂವಾದದ ವಿಶೇಷ ಸಂದೇಶವೂ ಒಂದಾಗಿದ್ದು, ಅವರು ಗುಜರಾತ್ ನಮ್ಮ ಎರಡೂ ದೇಶಗಳ ಜನರ ನಡುವಿನ ಬಲಿಷ್ಠ ಸಂಪರ್ಕದ ಸಂಕೇತವಾಗಿದೆ. ಜೊತೆಯಾಗಿ ನಾವು ಭವಿಷ್ಯಕ್ಕೆ ಅಮಿತ ಸಾಧ್ಯತೆಗಳನ್ನು ಕಟ್ಟುತ್ತಿದ್ದೇವೆ ಎಂದು ಹೇಳಿದರು.

 

ಮೂರು ದಿನಗಳ ಸಭೆಯಲ್ಲಿನ ಪ್ರಮುಖ ಕಾರ್ಯಕ್ರಮಗಳಲ್ಲಿ ಜಾಗತಿಕ ಹಣಕಾಸು ಮುಖ್ಯಸ್ಥರೊಂದಿಗಿನ ದುಂಡು ಮೇಜಿನ ಸಭೆ, ಆಫ್ರಿಕಾ ದಿನ, ಎಂ.ಎಸ್.ಎಂ.ಇ. ಸಮಾವೇಶ, ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತಶಾಸ್ತ್ರ (ಎಸ್.ಟಿ.ಇ.ಎಂ.)ಶಿಕ್ಷಣ ಮತ್ತು ಸಂಶೋಧನೆ ಕುರಿತ ದುಂಡು ಮೇಜಿನ ಸಭೆಯೂ ಸೇರಿದೆ. ಇದರ ಜೊತೆಗೆ ಭವಿಷ್ಯದ ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಶೋಧನೆ ಕುರಿತ ವಸ್ತು ಪ್ರದರ್ಶನ, ಬಂದರು ನೇತೃತ್ವದ ಅಭಿವೃದ್ಧಿ ಮತ್ತು ಏಷ್ಯಾದ ಸರಕು ಸಾಗಣೆ ತಾಣವಾಗಿ ಭಾರತವನ್ನು ರೂಪಿಸುವ ಕಾರ್ಯತಂತ್ರ ಕುರಿತ ವಿಚಾರ ಸಂಕಿರಣ ಮತ್ತು ಮೇಕ್ ಇನ್ ಇಂಡಿಯಾ ಯಶೋಗಾಥೆಗಳನ್ನು ಪ್ರದರ್ಶಿಸುವ ಮೇಕ್ ಇನ್ ಇಂಡಿಯಾ ಕುರಿತ ವಿಚಾರಗೋಷ್ಠಿ ಮತ್ತು ಸರ್ಕಾರದಿಂದ ಪ್ರಮುಖ ಮಧ್ಯಸ್ಥಿಕಿ ಇತ್ಯಾದಿ ಆಯೋಜಿಸಲಾಗಿದೆ.

 

ಗುಜರಾತ್ ನಲ್ಲಿ ಹೂಡಿಕೆಗೆ ಇಂಬು ನೀಡಲು ವೈಬ್ರೆಂಟ್ ಗುಜರಾತ್ ಶೃಂಗಸಭೆಯ ಪ್ರಥಮ ಆವೃತ್ತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಂದಿನ ಗುಜರಾತ್ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಅವರ ಮಾರ್ಗದರ್ಶನದಲ್ಲಿ 2003ರಲ್ಲಿ ಆಯೋಜಿಸಲಾಗಿತ್ತು. ಅಲ್ಲಿಂದೀಚೆಗೆ ಇದು ದೇಶದಾದ್ಯಂತದ ರಾಜ್ಯಗಳಲ್ಲಿ ಇಂಥ ಹಲವು ವಾರ್ಷಿಕ ಶೃಂಗ ಸಭೆಗಳ ಆಯೋಜನೆಯಲ್ಲಿ ಮಹತ್ವದ ಪಾತ್ರ ವಹಿಸಿದೆ.

 

*****



(Release ID: 1560712) Visitor Counter : 93