ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಮಾಲ್ದೀವ್ಸ್ ಅಧ್ಯಕ್ಷ ಶ್ರೀ ಇಬ್ರಾಹಿಂ ಮೊಹಮದ್ ಸೊಲಿಹ್ ನಡುವಿನ ಮಾತುಕತೆಯ ಬಳಿಕ ನೀಡಿದ ಜಂಟಿ ಪತ್ರಿಕಾ ಹೇಳಿಕೆ 

Posted On: 17 NOV 2018 7:39PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಮಾಲ್ದೀವ್ಸ್ ಅಧ್ಯಕ್ಷ ಶ್ರೀ ಇಬ್ರಾಹಿಂ ಮೊಹಮದ್ ಸೊಲಿಹ್ ನಡುವಿನ ಮಾತುಕತೆಯ ಬಳಿಕ ನೀಡಿದ ಜಂಟಿ ಪತ್ರಿಕಾ ಹೇಳಿಕೆ 
 

ಅಧ್ಯಕ್ಷೀಯ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳಲು ಮಾಲ್ದೀವ್ಸ್ ಗೆ ಭೇಟಿ ನೀಡಿದ ಭಾರತದ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ನರೇಂದ್ರ ಮೋದಿ ಅವರನ್ನು ಮಾಲ್ದೀವ್ಸ್ ಅಧ್ಯಕ್ಷ ಘನತೆವೆತ್ತ ಶ್ರೀ ಇಬ್ರಾಹಿಂ ಮೊಹಮದ್ ಸೊಲಿಹ್ ಅವರು ಸ್ವಾಗತಿಸಿದರು ಮತ್ತು ಅವರಿಗೆ ಧನ್ಯವಾದ ತಿಳಿಸಿದರು. 

ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸುವ ವಿಶೇಷ ಆಸಕ್ತಿ ತೋರಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಧ್ಯಕ್ಷ ಶ್ರೀ ಸೊಲಿಹ್ ಅವರನ್ನು ಅಭಿನಂದಿಸಿದರು. ಶಾಂತಿ, ಪ್ರಗತಿ ಮತ್ತು ಸ್ಥಿರತೆಗೆ ಆವಶ್ಯಕವಾಗಿರುವ ಪ್ರಜಾಪ್ರಭುತ್ವವನ್ನು ಸದೃಢಗೊಳಿಸಿದ್ದಕ್ಕಾಗಿ ಮಾಲ್ದೀವ್ಸ್ ಗಣರಾಜ್ಯದ ಜನತೆಗೆ ಭಾರತದ ಜನತೆಯ ಶುಭಾಶಯ ಮತ್ತು ಅಭಿನಂದನೆಗಳನ್ನು ತಿಳಿಸಿದರು. 

ಭಾರತ ಮತ್ತು ಮಾಲ್ದೀವ್ಸ್ ನಡುವಿನ ಸಂಬಂಧಗಳ ಸ್ಥಿತಿಸ್ಥಾಪಕತ್ವ ಗುರುತಿಸಿದ ಇಬ್ಬರೂ ನಾಯಕರು, ಮಾಲ್ದೀವ್ಸ್ ನ ನೂತನ ಅಧ್ಯಕ್ಷರಾಗಿ ಶ್ರೀ ಸೊಲಿಹ್ ಅವರು ಈಗ ಆಯ್ಕೆಯಾಗಿರುವುದರಿಂದಾಗಿ ಎರಡೂ ದೇಶಗಳ ನಡುವೆ ಸಹಕಾರ ಮತ್ತು ಗೆಳೆತನಗಳ ಆತ್ಮೀಯ ಸಂಬಂಧಗಳು ನವೀಕರಿಸಲ್ಪಡುವ ವಿಶ್ವಾಸವನ್ನು ವ್ಯಕ್ತಪಡಿಸಿದರು. 

ಮಾತುಕತೆಯ ಸಂದರ್ಭದಲ್ಲಿ, ಈ ವಲಯದ ಸ್ಥಿರತೆಯ ಆಕಾಂಕ್ಷೆ ಮತ್ತು ಪರಸ್ಪರ ಕಾಳಜಿಗಳನ್ನು ಗಮನದಲ್ಲಿಟ್ಟುಕೊಂಡು, ಹಿಂದೂ ಮಹಾಸಾಗರದಲ್ಲಿ ಶಾಂತಿ ಮತ್ತು ಸುರಕ್ಷತೆಯ ಪ್ರಾಧಾನ್ಯತೆಯನ್ನು ಇಬ್ಬರೂ ನಾಯಕರು ಒಪ್ಪಿಕೊಂಡರು. 

ಈ ವಲಯದಲ್ಲಿ ಮತ್ತು ಇತರಡೆ ಭಯೋತ್ಪಾದನೆಯ ನಿಗ್ರಹಕ್ಕಾಗಿ ಸಹಕಾರಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಚಲ ಬದ್ಧತೆ ಮತ್ತು ಬೆಂಬಲಗಳನ್ನು ಇಬ್ಬರೂ ನಾಯಕರು ವ್ಯಕ್ತಪಡಿಸಿದರು. 

ತಾನು ಅಧಿಕಾರ ಸ್ವೀಕರಿಸುವಾಗ ದೇಶವು ಎದುರಿಸುತ್ತಿರುವ ಆರ್ಥಿಕ ಸಂಕಷ್ಟದ ಪರಿಸ್ಥಿತಿಯನ್ನು ಅಧ್ಯಕ್ಷ ಶ್ರೀ ಸೋಲಿಹ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ವಿವರಿಸಿದರು. ಮಾಲ್ದೀವ್ಸ್ ಜನತೆಗೆ ನೂತನ ಸರಕಾರ ಮಾಡಿರುವ ಸುಧಾರಣೆಯ ವಾಗ್ದಾನಗಳನ್ನು ಪೂರೈಸುವ ನಿಟ್ಟಿನಲ್ಲಿ ಸಹಾಯಮಾಡಲು ಭಾರತವು ಅಭಿವೃದ್ಧಿಯ ಪಾಲುದಾರರಾಗಿ ಮುಂದುವರಿಯುವ ಮಾರ್ಗಗಳನ್ನು ಈ ಸಂದರ್ಭದಲ್ಲಿ ಇಬ್ಬರೂ ನಾಯಕರು ವಿಶೇಷವಾಗಿ ಚರ್ಚಿಸಿದರು. 

ಈ ಹೊರವಲಯದ ದ್ವೀಪ ದೇಶದಲ್ಲಿ ಪ್ರಮುಖವಾಗಿ ಹೆಚ್ಚುತ್ತಿರುವ ವಸತಿ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಯ ಜೊತೆಯಲ್ಲಿ ಜಲಸೌಕರ್ಯ ಮತ್ತು ಒಳಚರಂಡಿ ವ್ಯವಸ್ಥೆಗಳ ಸ್ಥಾಪನೆಯ ಅಗತ್ಯಗಳನ್ನೂ ಅಧ್ಯಕ್ಷ ಶ್ರೀ ಸೋಲಿಹ್ ಅವರು ವಿವರಿಸಿದರು. 

ಸುಸ್ಥಿರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವ ನಿಟ್ಟಿನಲ್ಲಿ ಮಾಲ್ದೀವ್ಸ್ ಗೆ ಸಹಾಯಮಾಡುವ ಭಾರತದ ಅಚಲ ಬದ್ಧತೆಯ ಭರವಸೆಯನ್ನು ಅಧ್ಯಕ್ಷ ಶ್ರೀ ಸೋಲಿಹ್ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀಡಿದರು. 

ಸಾಧ್ಯವಿರುವ ಎಲ್ಲ ರೀತಿಯ ಸಹಾಯಗಳನ್ನು ಮಾಡಲು ಭಾರತವು ಸದಾ ಸಿದ್ದವಿದೆ, ಈ ನಿಟ್ಟಿನಲ್ಲಿ ಮಾಲ್ದೀವ್ಸ್ ನ ಅಗತ್ಯತೆಗಳ ವಿವರಗಳನ್ನು ಕಲೆಹಾಕಲು ಎರಡೂ ದೇಶಗಳು ಆದಷ್ಟು ಬೇಗನೆ ಭೇಟಿಯಾಗಿ ಮಾತುಕತೆ ನಡೆಸಬೇಕು ಎಂದು ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ತಿಳಿಸಿದರು. 

ಎರಡೂ ರಾಷ್ಟ್ರಗಳ ಪರಸ್ಪರ ಪ್ರಯೋಜನಕ್ಕಾಗಿ, ಮಾಲ್ದೀವ್ಸ್ ನ ವಿವಿಧ ಕ್ಷೇತ್ರಗಳಲ್ಲಿ ಭಾರತೀಯ ಸಂಸ್ಥೆಗಳ ಹೂಡಿಕೆಯ ಅವಕಾಶಗಳ ವಿಸ್ತರಣೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಾಗತಿಸಿದರು. ಎರಡೂ ದೇಶಗಳ ಪ್ರಜೆಗಳು, ಪರಸ್ಪರ ಎರಡೂ ದೇಶಗಳಲ್ಲಿ ವ್ಯಾಪಕವಾಗಿ ಸಂಚಾರ ಮಾಡುವುದನ್ನು ಗುರುತಿಸಿದ ನಾಯಕರು, ವೀಸಾ ಪ್ರಕ್ರಿಯೆಯನ್ನು ಸರಳಗೊಳಿಸುವ ಅಗತ್ಯತೆಯನ್ನು ಒಪ್ಪಿಕೊಂಡರು. 

ಸಮಯಾವಕಾಶ ಮಾಡಿಕೊಂಡು ಆದಷ್ಟು ಬೇಗನೆ ಭಾರತಕ್ಕೆ ಭೇಟಿ ನೀಡಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಧ್ಯಕ್ಷ ಶ್ರೀ ಸೋಲಿಹ್ ಅವರನ್ನು ಆಮಂತ್ರಿಸಿದರು. ಅಧ್ಯಕ್ಷ ಶ್ರೀ ಸೋಲಿಹ್ ಅವರು ಈ ಆಮಂತ್ರಣವನ್ನು ಸಂತೋಷದಿಂದ ಸ್ವೀಕರಿಸಿದರು. 

ಅಧ್ಯಕ್ಷ ಶ್ರೀ ಸೋಲಿಹ್ ಅವರ ಮುಂಬರುವ ಭಾರತ ಭೇಟಿಯ ಹಿನ್ನಲೆಯಲ್ಲಿ ಪೂರ್ವ ತಯಾರಿಗಾಗಿ ಹಾಗೂ ವಿಸೃತ ಮಾತುಕತೆಗಾಗಿ ಮಾಲ್ದೀವ್ಸ್ ವಿದೇಶಾಂಗ ವ್ಯವಹಾರಗಳ ಸಚಿವರು ಭಾರತಕ್ಕೆ ನವೆಂಬರ್ 26, 2018ರಂದು ಭೇಟಿ ನೀಡಲಿದ್ದಾರೆ. 

ಮುಂಬರುವ ದಿನಗಳಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಲ್ದೀವ್ಸ್ ಗೆ ಅಧಿಕೃತ ಭೇಟಿ ನೀಡುವ ನಿರೀಕ್ಷೆಯನ್ನು ಅಧ್ಯಕ್ಷ ಶ್ರೀ ಸೋಲಿಹ್ ಅವರು ವ್ಯಕ್ತಡಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ಆಮಂತ್ರಣವನ್ನು ಕೃತಜ್ಞಾಪೂರ್ವಕ ಸ್ವೀಕರಿಸಿದರು. 
 

***



(Release ID: 1553095) Visitor Counter : 119