ಪ್ರಧಾನ ಮಂತ್ರಿಯವರ ಕಛೇರಿ

ರಾಂಚಿಯಲ್ಲಿ ಆಯುಷ್ಮಾನ್ ಭಾರತ – ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (ಪಿ.ಎಮ್.ಜೆ.ಐ.ವೈ) ಯನ್ನು ಪ್ರಧಾನಮಂತ್ರಿ ಉದ್ಘಾಟಿಸಿದರು 

Posted On: 23 SEP 2018 4:14PM by PIB Bengaluru

ರಾಂಚಿಯಲ್ಲಿ ಆಯುಷ್ಮಾನ್ ಭಾರತ – ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (ಪಿ.ಎಮ್.ಜೆ.ಐ.ವೈ) ಯನ್ನು ಪ್ರಧಾನಮಂತ್ರಿ ಉದ್ಘಾಟಿಸಿದರು 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಝಾರ್ಖಂಡ್ ನ ರಾಂಚಿಯಲ್ಲಿ ಇಂದು ಆರೋಗ್ಯ ಭರವಸೆಯ ಯೋಜನೆ : ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ( ಪಿ.ಎಮ್.ಜೆ.ಐ.ವೈ) ಯನ್ನು ಉದ್ಘಾಟಿಸಿದರು 

ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ( ಪಿ.ಎಮ್.ಜೆ.ಐ.ವೈ) ಉದ್ಘಾಟನೆಗೂ ಮುನ್ನ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿದ ಪ್ರಧಾನಮಂತ್ರಿ ಅವರು, ಆ ನಂತರ ಬೃಹತ್ ಸಭಿಕರು ನೆರೆದಿದ್ದ ಸಭೆಯ ವೇದಿಕೆಗೆ ತೆರಳಿದರು. 

ಈ ವೇದಿಕೆಯಲ್ಲಿ ಚಾಯಿಬಾಸಾ ಮತ್ತು ಕೊಡೆರ್ಮಾಗಳ ವೈದ್ಯಕೀಯ ಕಾಲೇಜುಗಳಿಗೆ ಅಡಿಗಲ್ಲು ಹಾಕುವ ಫಲಕದ ಅನಾವರಣವನ್ನು ಪ್ರಧಾನಮಂತ್ರಿ ಅವರು ಮಾಡಿದರು ಹಾಗೂ 10 ಆರೋಗ್ಯ ಮತ್ತು ಸ್ವಾಸ್ಥ ಕೇಂದ್ರಗಳನ್ನೂ ಉದ್ಘಾಟಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು ಬಡವರಲ್ಲಿ ಅತಿಬಡವರಿಗೆ ಮತ್ತು ಸಮಾಜದ ಅವಕಾಶವಂಚಿತ ವರ್ಗಕ್ಕೆ ಉತ್ತಮ ಸ್ವಾಸ್ಥ್ಯ ಸೇವೆ ಮತ್ತು ಉತ್ತಮ ಆರೋಗ್ಯ ಸೇವೆ ಪೂರೈಸುವ ಸಂಕಲ್ಪದಲ್ಲಿ ಯೋಜನೆಯನ್ನು ಉದ್ಘಾಟಿಸಲಾಗಿದೆ. ದೇಶದ 50 ಕೋಟಿ ಜನರಿಗೆ ಪ್ರತಿವರ್ಷಕ್ಕೆ ರೂ 5 ಲಕ್ಷ ಮೌಲ್ಯದ ಆರೋಗ್ಯ ಭರವಸೆಯ ಸಂಕಲ್ಪದಲ್ಲಿ ರೂಪುಗೊಂಡ ಈ ಆರೋಗ್ಯ ಯೋಜನೆಯು ವಿಶ್ವದ ಅತಿದೊಡ್ಡ ಆರೋಗ್ಯ ಭರವಸೆ ಯೋಜನೆಯಾಗಿದೆ. ಈ ಯೋಜನೆಯ ಫಲಾನುಭವಿಗಳ ಸಂಖ್ಯೆಯು ಸರಾಸರಿ ಯುರೋಪ್ ಒಕ್ಕೂಟಗಳ ಜನಸಂಖ್ಯೆ ಅಥವಾ ಅಮೇರಿಕಾ, ಕೆನಡಾ ಮತ್ತು ಮೆಕ್ಸಿಕೋಗಳ ಒಟ್ಟಾರೆ ಜನಸಂಖ್ಯೆಯಷ್ಟಿದೆ ಎಂದು ಹೇಳಿದರು. 

ಆಯುಷ್ಮಾನ್ ಭಾರತದ ಮೊದಲ ಭಾಗವಾಗಿ - ಬಾಬಾ ಸಾಹೆಬ್ ಅಂಬೇಡ್ಕರ್ ಅವರ ಜನ್ಮಜಯಂತಿಯಂದು ಆರೋಗ್ಯ ಮತ್ತ ಸ್ವಾಸ್ಥ್ಯ ಕೇಂದ್ರಗಳನ್ನು ಉದ್ಘಾಟಿಸಲಾಯಿತು ಮತ್ತು ಎರಡನೇ ಭಾಗವಾಗಿ – ಆರೋಗ್ಯ ಭರವಸೆಯ ಯೋಜನೆಯನ್ನು ದೀನ ದಯಾಳ ಉಪಾಧ್ಯಾಯರ ಜನ್ಮ ಜಯಂತಿಗೆ ಎರಡು ದಿನಗಳ ಮುಂಚಿತವಾಗಿ ಉದ್ಘಾಟಿಸಲಾಯಿತು. 

ಅರ್ಬುದ ( ಕ್ಯಾನ್ಸರ್) ಮತ್ತು ಹೃದಯ ಅನಾರೋಗ್ಯಗಳೂ ಸೇರಿದಂತೆ ಒಟ್ಟು 1300 ಕಾಯಿಲೆಗಳನ್ನು ವ್ಯಾಪ್ತಿಗೆ ಸೇರಿಸಿದ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ( ಪಿ.ಎಮ್.ಜೆ.ಐ.ವೈ) ಯು ಒಂದು ಸಮಗ್ರ ಆರೋಗ್ಯ ಯೋಜನೆಯಾಗಿದೆ ಖಾಸಗಿ ಆಸ್ಪತ್ರೆಗಳೂ ಕೂಡಾ ಈ ಯೋಜನೆಯಲ್ಲಿ ಭಾಗಿಗಳಾವೆ ಎಂದು ಪ್ರಧಾನಮಂತ್ರಿ ಅವರು ತಿಳಿಸಿದರು. 

ಆರೋಗ್ಯ ಭರವಸೆಯ ರೂ 5 ಲಕ್ಷ ಮೊತ್ತದಲ್ಲಿ, ಆರೋಗ್ಯ ತಪಾಸಣೆಗಳು, ಔಷಧಗಳು, ಆಸ್ಪತ್ರೆ ಸೇರ್ಪಡೆಗೂ ಮೊದಲಿನ ಖರ್ಚು-ವೆಚ್ಚಗಳು ಮುಂತಾದವುಗಳೆಲ್ಲಾ ಸೇರಿವೆ. ವ್ಯಕ್ತಿ ಈಗಾಗಲೇ ಹೊಂದಿರುವ ಅನಾರೋಗ್ಯವನ್ನೂ ಈ ಯೋಜನೆಯು ತನ್ನ ವ್ಯಾಪ್ತಿಯಲ್ಲಿ ಸೇರಿಸುತ್ತದೆ. ದೂರವಾಣಿ ಸಂಖ್ಯೆ 14555 ಕ್ಕೆ ಕರೆಮಾಡಿ ಅಥವಾ ಸಾಮಾನ್ಯ ಸೇವಾ ಕೇಂದ್ರಗಳನ್ನು ಸಂಪರ್ಕಿಸಿ ಸಾರ್ವಜನಿಕರು ಸುಲಭವಾಗಿ ಅಧಿಕ ಮಾಹಿತಿ ಪಡೆಯಬಹುದು ಎಂದು ಪ್ರಧಾನಮಂತ್ರಿ ಅವರು ತಿಳಿಸಿದರು. 

ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ( ಪಿ.ಎಮ್.ಜೆ.ಐ.ವೈ)ಯ ಭಾಗವಾಗಿರುವ ರಾಜ್ಯ ಸರಕಾರಗಳ ಜನರು ಯಾವುದೇ ರಾಜ್ಯಕ್ಕೆ ಹೋದರೂ ಕೂಡಾ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ . ಈ ತನಕ ದೇಶಾದ್ಯಂತದ 13000 ಆಸ್ಪತ್ರೆಗಳು ಯೋಜನೆಗೆ ಕೈಜೋಡಿಸಿವೆ ಎಂದು ಪ್ರಧಾನಮಂತ್ರಿ ಅವರು ತಿಳಿಸಿದರು. 

ಇಂದು ಉದ್ಘಾಟನೆಗೊಂಡ 10 ಆರೋಗ್ಯ ಮತ್ತು ಸ್ವಾಸ್ಥ ಕೇಂದ್ರಗಳ ಬಗ್ಗೆಯೂ ಪ್ರಧಾನಮಂತ್ರಿ ಅವರು ಮಾತನಾಡಿದರು. ಇಂತಹ ಕೇಂದ್ರಗಳ ಸಂಖ್ಯೆ ಇಂದು ದೇಶಾದ್ಯಂತ 2300ಕ್ಕೂ ಅಧಿಕವಾಗಿದೆ, ಮುಂಬರುವ ನಾಲ್ಕು ವರ್ಷಗಳ ಒಳಗೆ ಭಾರತದಲ್ಲಿ 1.5 ಲಕ್ಷ ಕೇಂದ್ರಗಳ ಸ್ಥಾಪನೆಯ ಗುರಿಯಿದೆ ಎಂದು ಪ್ರಧಾನಮಂತ್ರಿ ಅವರು ತಿಳಿಸಿದರು. 

ದೇಶದ ಆರೋಗ್ಯ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಕೇಂದ್ರ ಸರಕಾರವು ಸಮಗ್ರ ರೀತಿಯಲ್ಲಿ ಕಾರ್ಯ ಪ್ರವೃತ್ತವಾಗಿದೆ. ಈ ನಿಟ್ಟಿನಲ್ಲಿ “ಕೈಗೆಟಕುವ ಬೆಲೆಯಲ್ಲಿ ಸ್ವಾಸ್ಥ್ಯ” ಮತ್ತು “ಪ್ರತಿಬಂಧಕ ಸ್ವಾಸ್ಥ್ಯ” ಗಳೆರಡಕ್ಕೂ ಗಮನ ಕೇಂದ್ರೀಕರಿಸಲಾಗಿದೆ ಎಂದು ಪ್ರಧಾನಮಂತ್ರಿ ಅವರು ತಿಳಿಸಿದರು. 

ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ( ಪಿ.ಎಮ್.ಜೆ.ಐ.ವೈ) ಯಲ್ಲಿ ಭಾಗಿಯಾಗಿರುವ ಎಲ್ಲರ ಪ್ರಯತ್ನಗಳಿಂದ ಮತ್ತು ಸಮರ್ಪಿತ ವೈದ್ಯರು, ದಾದಿಯರು, ಸ್ವಾಸ್ಥ ಸೇವಾ ಪೂರೈಕೆಯವರು, ಆಶಾ, ಎ.ಎನ್.ಎಮ್. ಕಾರ್ಯಕರ್ತರು ಮುಂತಾದವರಿಂದ ಈ ಯೋಜನೆ ಅತ್ಯಂತ ಯಶಸ್ವಿಯಾಗಲಿದೆ ಎಂಬ ವಿಶ್ವಾಸವನ್ನು ಪ್ರಧಾನಮಂತ್ರಿ ಅವರು ವ್ಯಕ್ತಪಡಿಸಿದರು. 



(Release ID: 1547173) Visitor Counter : 124