Farmer's Welfare
ಸಹಕಾರದಿಂದ ಸಮೃದ್ಧಿ
प्रविष्टि तिथि:
06 JUL 2026 14:33 PM
ಭಾರತದ ಸಹಕಾರಿ ಚಳವಳಿಯನ್ನು ಬಲಪಡಿಸುವ ಐದು ವರ್ಷಗಳು
ಭಾರತದ ಸಹಕಾರಿ ಪಯಣ: ಸಾಮೂಹಿಕ ಬೆಳವಣಿಗೆಯ ಬೇರುಗಳು
ಭಾರತದ ಸಹಕಾರಿ ಚಳವಳಿಯು 'ವಸುಧೈವ ಕುಟುಂಬಕಂ' ಎಂಬ ತತ್ವದಲ್ಲಿ ಆಳವಾಗಿ ಬೇರೂರಿದೆ, ಅಂದರೆ ಇಡೀ ಜಗತ್ತು ಒಂದೇ ಕುಟುಂಬ ಎಂಬ ನಂಬಿಕೆ. ಸಹಕಾರ ಸಂಘಗಳು ದೀರ್ಘಕಾಲದಿಂದ ಹಂಚಿಕೆಯ ಒಡೆತನ, ಪರಸ್ಪರ ಬೆಂಬಲ ಮತ್ತು ಅಂತರ್ಗತ ಅಭಿವೃದ್ಧಿಯ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುತ್ತಿವೆ. ಗ್ರಾಮೀಣ ಸಾಲದಿಂದ ಹಿಡಿದು ಹೈನುಗಾರಿಕೆ, ಮೀನುಗಾರಿಕೆ, ವಸತಿ ಮತ್ತು ಮಾರುಕಟ್ಟೆಯವರೆಗೆ, ಸಹಕಾರ ಸಂಘಗಳು ಲಕ್ಷಾಂತರ ಜನರಿಗೆ ಮಾರುಕಟ್ಟೆ, ಹಣಕಾಸು ಮತ್ತು ಜೀವನೋಪಾಯವನ್ನು ಪಡೆಯಲು ಅನುವು ಮಾಡಿಕೊಟ್ಟಿವೆ. ಜುಲೈ 6, 2021 ರಂದು ಸ್ಥಾಪನೆಯಾದ ಸಹಕಾರ ಸಚಿವಾಲಯವು, ಸಹಕಾರಿ ಸಂಸ್ಥೆಗಳನ್ನು ಬಲಪಡಿಸುವ ಮೂಲಕ ಮತ್ತು ಅವುಗಳನ್ನು ಭವಿಷ್ಯಕ್ಕೆ ಸಿದ್ಧಗೊಳಿಸುವ ಮೂಲಕ ಸಹಕಾರಿ ವಲಯದ ಪರಿವರ್ತನಾ ಸಾಮರ್ಥ್ಯವನ್ನು ಅನಾವರಣಗೊಳಿಸುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
|
ಡಿಜಿಟಲ್ ಮತ್ತು ಸಾಂಸ್ಥಿಕ ಸುಧಾರಣೆಗಳನ್ನು ಮುನ್ನಡೆಸುವುದು
ಸಹಕಾರ ಸಚಿವಾಲಯದ 5ನೇ ಸ್ಥಾಪನಾ ದಿನಾಚರಣೆಯನ್ನು 2026ರ ಜುಲೈ 6ರಂದು ನವದೆಹಲಿಯ ಭಾರತ್ ಮಂಟಪದಲ್ಲಿ ಆಚರಿಸಲಾಯಿತು. ಈ ಸಂದರ್ಭವು ಹಲವು ಪ್ರಮುಖ ಡಿಜಿಟಲ್ ಮತ್ತು ಮೂಲಸೌಕರ್ಯ ಉಪಕ್ರಮಗಳ ಮೂಲಕ ಭಾರತದ ಸಹಕಾರಿ ಪರಿಸರ ವ್ಯವಸ್ಥೆಯನ್ನು ಬಲಪಡಿಸುವಲ್ಲಿನ ಗಮನಾರ್ಹ ಪ್ರಗತಿಯನ್ನು ಗುರುತಿಸಿತು. ಇದರಲ್ಲಿ 50,000 ಪ್ರಾಥಮಿಕ ಕೃಷಿ ಸಾಲ ಸಂಘಗಳನ್ನು (ಪಿಎಸಿಎಸ್) ಇ-ಪಿಎಸಿಎಸ್ ಆಗಿ ಪರಿವರ್ತಿಸಿದ ಪ್ರಮುಖ ಅಂಶವು ಸೇರಿದೆ.
ಕಾರ್ಯಕ್ರಮದಲ್ಲಿ ಸಹಕಾರಿ ಶೇಖರಣಾ ಮೂಲಸೌಕರ್ಯವನ್ನು ಹೆಚ್ಚಿಸಲು 47 ಧಾನ್ಯ ಸಂಗ್ರಹಣಾ ಉಗ್ರಾಣಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಹಾಲಿನ ಸಂಗ್ರಹಣೆ ಮತ್ತು ವಿತರಣೆಯ ನಿರ್ವಹಣೆಯನ್ನು ಸುಧಾರಿಸಲು ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿಗಾಗಿ 'ಮಿಲ್ಕ್ ಸಪ್ಲೈ ರಿವ್ಯೂ ಡ್ಯಾಶ್ಬೋರ್ಡ್ ಪೋರ್ಟಲ್' ಅನ್ನು ಪ್ರಾರಂಭಿಸಲಾಯಿತು. ಹೆಚ್ಚುವರಿಯಾಗಿ, ರಾಷ್ಟ್ರೀಯ ನಗರ ಸಹಕಾರಿ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಎರಡು ಪ್ರಮುಖ ಉಪಕ್ರಮಗಳನ್ನು ಅನಾವರಣಗೊಳಿಸಲಾಯಿತು - ಸಹಕಾರ್ ಸಿಬಿಎಸ್ ಮತ್ತು ಸಹಕಾರ್ ಸಹಯೋಗಿ. ಸಹಕಾರ್ ಸಿಬಿಎಸ್ ಎನ್ನುವುದು ನಗರ ಸಹಕಾರಿ ಬ್ಯಾಂಕುಗಳಿಗಾಗಿ ಕೇಂದ್ರೀಕೃತ ಕೋರ್ ಬ್ಯಾಂಕಿಂಗ್ ಪರಿಹಾರವಾಗಿದೆ. ಸಹಕಾರ್ ಸಹಯೋಗಿ ಎನ್ನುವುದು ಗ್ರಾಹಕ ಸೇವೆಗಳು ಮತ್ತು ಬ್ಯಾಂಕಿಂಗ್ ಕಾರ್ಯಾಚರಣೆಗಳನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಸಂವಾದಾತ್ಮಕ ಕೃತಕ ಬುದ್ಧಿಮತ್ತೆ ಆಧಾರಿತ ವೇದಿಕೆಯಾಗಿದೆ.
|
ಭಾರತದಲ್ಲಿ ಸಹಕಾರ ಸಂಘಗಳು: ಒಂದು ನೋಟದಲ್ಲಿ
ಇಂದು ಭಾರತವು ವಿಶ್ವದ ಅತಿದೊಡ್ಡ ಸಹಕಾರಿ ಪರಿಸರ ವ್ಯವಸ್ಥೆಗಳಲ್ಲಿ ಒಂದನ್ನು ಹೊಂದಿದೆ, ಇದು ಆರ್ಥಿಕತೆಯ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ವ್ಯಾಪಿಸಿದೆ. ಈ ಸಂಸ್ಥೆಗಳು ತಳಮಟ್ಟದ ಆರ್ಥಿಕ ಭಾಗವಹಿಸುವಿಕೆಯ ಬೆನ್ನೆಲುಬಾಗಿವೆ. ಇವು ರೈತರು, ಹೈನುಗಾರರು, ಮೀನುಗಾರರು, ಕುಶಲಕರ್ಮಿಗಳು ಮತ್ತು ಕಾರ್ಮಿಕರನ್ನು ಆದಾಯ ಗಳಿಸುವ ಅವಕಾಶಗಳೊಂದಿಗೆ ಸಂಪರ್ಕಿಸುತ್ತವೆ.

ರಚನಾತ್ಮಕ ಸುಧಾರಣೆಗಳ ಮೂಲಕ ಸಹಕಾರ ಸಂಘಗಳನ್ನು ಬಲಪಡಿಸುವುದು
ಕಳೆದ ಐದು ವರ್ಷಗಳಲ್ಲಿ, ಭಾರತದ ಸಹಕಾರಿ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರವು ಪರಿವರ್ತನಾತ್ಮಕ ಸುಧಾರಣೆಗಳನ್ನು ಕೈಗೊಂಡಿದೆ. ಈ ಸುಧಾರಣೆಗಳು ಸಹಕಾರ ಸಂಘಗಳನ್ನು ಹೆಚ್ಚು ಅಂತರ್ಗತ, ಪಾರದರ್ಶಕ, ಡಿಜಿಟಲ್ ದೃಷ್ಟಿಯಿಂದ ಸಬಲ ಮತ್ತು ಆರ್ಥಿಕವಾಗಿ ಕ್ರಿಯಾಶೀಲವಾಗಿಸುವತ್ತ ಗಮನಹರಿಸಿವೆ. ಈ ಪ್ರಯತ್ನಗಳು ಸಹಕಾರ ಸಂಘಗಳು ತಳಮಟ್ಟದ ಸಮೃದ್ಧಿ ಮತ್ತು ಅಂತರ್ಗತ ಸಾಮಾಜಿಕ-ಆರ್ಥಿಕ ಬೆಳವಣಿಗೆಯ ಪ್ರಬಲ ಎಂಜಿನ್ಗಳಾಗಿ ಹೊರಹೊಮ್ಮಲು ಸಹಾಯ ಮಾಡಿವೆ. ಸಹಕಾರ ಸಚಿವಾಲಯದ ಸ್ಥಾಪನೆಯಾದಾಗಿನಿಂದ 152 ಕ್ಕೂ ಹೆಚ್ಚು ಪ್ರಮುಖ ಉಪಕ್ರಮಗಳನ್ನು ಪ್ರಾರಂಭಿಸಲಾಗಿದೆ. ಈ ಉಪಕ್ರಮಗಳು ಸಾಂಪ್ರದಾಯಿಕ ಸಹಕಾರಿ ಸಂಸ್ಥೆಗಳನ್ನು ಆಧುನೀಕರಿಸುವ ಜೊತೆಗೆ ಬೆಳವಣಿಗೆ ಮತ್ತು ವೈವಿಧ್ಯೀಕರಣಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸಿವೆ.
1. ಪಿಎಸಿಎಸ್ ಪುನಶ್ಚೇತನ: ಸಾಲ ನೀಡುವ ಸಂಸ್ಥೆಗಳಿಂದ ಗ್ರಾಮೀಣ ಅಭಿವೃದ್ಧಿ ಕೇಂದ್ರಗಳವರೆಗೆ
ಪ್ರಾಥಮಿಕ ಕೃಷಿ ಸಾಲ ಸಂಘಗಳು (ಪಿಎಸಿಎಸ್) ಅಲ್ಪಾವಧಿಯ ಸಹಕಾರಿ ಸಾಲ ರಚನೆಯ ತಳಮಟ್ಟದ ಅಡಿಪಾಯವಾಗಿವೆ. ಇವು ಗ್ರಾಮೀಣ ಆರ್ಥಿಕ ಸೇವೆಗಳ ಮೊದಲ ಸಂಪರ್ಕ ಬಿಂದುವಾಗಿ ಕಾರ್ಯನಿರ್ವಹಿಸುವ ಬಹು-ಸೇವಾ ಸಂಸ್ಥೆಗಳಾಗಿ ಸಕ್ರಿಯವಾಗಿ ಕೆಲಸ ಮಾಡುತ್ತಿವೆ.
2026ರ ಜೂನ್ ಅಂತ್ಯದವರೆಗೆ, ಪ್ರಾಥಮಿಕ ಕೃಷಿ ಸಾಲ ಸಂಘಗಳಿಗೆ (ಪಿಎಸಿಎಸ್) ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಸಾಧಿಸಲಾದ ಪ್ರಮುಖ ಪ್ರಗತಿಯು ಈ ಕೆಳಗಿನಂತಿದೆ:
- ಮಾದರಿ ಉಪ-ನಿಯಮಗಳು 32 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಿಎಸಿಎಸ್ ಸಂಸ್ಥೆಗಳು 25ಕ್ಕೂ ಹೆಚ್ಚು ವ್ಯವಹಾರ ಚಟುವಟಿಕೆಗಳನ್ನು ಕೈಗೊಳ್ಳಲು ಅನುವು ಮಾಡಿಕೊಟ್ಟಿವೆ.
- ಪಿಎಸಿಎಸ್ ಈಗ ಕೇವಲ ಸಾಲದ ಕೆಲಸವಷ್ಟೇ ಅಲ್ಲದೆ, ಚಿಲ್ಲರೆ ವ್ಯಾಪಾರ, ಸಂಗ್ರಹಣೆ, ಆರೋಗ್ಯ ಸೇವೆ, ಇಂಧನ ಮತ್ತು ಡಿಜಿಟಲ್ ಸೇವೆಗಳನ್ನು ಒದಗಿಸುತ್ತಿದೆ.
- 394 ಪಿಎಸಿಎಸ್ ಸಂಸ್ಥೆಗಳು ಚಿಲ್ಲರೆ ಇಂಧನ ಮಳಿಗೆಗಳಿಗಾಗಿ ಅರ್ಜಿ ಸಲ್ಲಿಸಿವೆ ಮತ್ತು 3 ಮಳಿಗೆಗಳನ್ನು ಕಾರ್ಯಾರಂಭ ಮಾಡಲಾಗಿದೆ.
- 39,177 ಪಿಎಸಿಎಸ್ ಸಂಸ್ಥೆಗಳು ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ.
- 54,117 ಪಿಎಸಿಎಸ್ ಸಂಸ್ಥೆಗಳು ಸಾಮಾನ್ಯ ಸೇವಾ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ.
- 4,248 ಪಿಎಸಿಎಸ್ ಸಂಸ್ಥೆಗಳಿಗೆ ಜನೌಷಧಿ ಕೇಂದ್ರಗಳಿಗಾಗಿ ಅನುಮೋದನೆ ನೀಡಲಾಗಿದೆ; ಅವುಗಳಲ್ಲಿ 843 ಕೇಂದ್ರಗಳು ಕಾರ್ಯನಿರ್ವಹಿಸಲು ಸಿದ್ಧವಾಗಿವೆ.
ಈ ವೈವಿಧ್ಯೀಕರಣವು ಗ್ರಾಮ ಮಟ್ಟದಲ್ಲಿ ಅಗತ್ಯ ಸೇವೆಗಳ ಲಭ್ಯತೆಯನ್ನು ಸುಧಾರಿಸಿದೆ.
2. ಪಿಎಸಿಎಸ್ ನ ಡಿಜಿಟಲ್ ರೂಪಾಂತರ
ಸಹಕಾರಿ ಆಡಳಿತ ಮತ್ತು ದಕ್ಷತೆಯನ್ನು ಬಲಪಡಿಸುವಲ್ಲಿ ತಂತ್ರಜ್ಞಾನವು ಕೇಂದ್ರಬಿಂದುವಾಗಿದೆ. 2026ರ ಜೂನ್ ಅಂತ್ಯದವರೆಗೆ, ಪಿಎಸಿಎಸ್ ನ ಡಿಜಿಟಲೀಕರಣದಲ್ಲಿ ಈ ಕೆಳಗಿನ ಪ್ರಗತಿಯನ್ನು ಸಾಧಿಸಲಾಗಿದೆ:
- ಒಟ್ಟು ಹಣಕಾಸಿನ ಮೊತ್ತವನ್ನು 2022ರಲ್ಲಿ ಇದ್ದ ಆರಂಭಿಕ ಹಂಚಿಕೆ ₹2,516 ಕೋಟಿಯಿಂದ 2025ರಲ್ಲಿ ₹2,925.39 ಕೋಟಿಗೆ ಹೆಚ್ಚಿಸಲಾಗಿದೆ.
- 63,000 ಪಿಎಸಿಎಸ್ ಗಳ ಗಣಕೀಕರಣದ ಕಾಲಮಿತಿಯು ಮಾರ್ಚ್ 31, 2027 ರವರೆಗೆ ಇರುತ್ತದೆ.
- 79,630 ಪಿಎಸಿಎಸ್ ಗಳಿಗೆ ಮಂಜೂರಾತಿ ನೀಡಲಾಗಿದೆ; ಸದ್ಯಕ್ಕೆ 63,428 ಪಿಎಸಿಎಸ್ ಗಳು ಇಆರ್ಪಿ ತಂತ್ರಾಂಶವನ್ನು ಬಳಸುತ್ತಿವೆ.
- 65 ಸಾವಿರಕ್ಕೂ ಹೆಚ್ಚು ಪಿಎಸಿಎಸ್ ಗಳಿಗೆ ಹಾರ್ಡ್ವೇರ್ ತಲುಪಿಸಲಾಗಿದೆ.
- 42,700 ಕ್ಕೂ ಹೆಚ್ಚು ಪಿಎಸಿಎಸ್ ಗಳಲ್ಲಿ ಆನ್ಲೈನ್ ಲೆಕ್ಕಪರಿಶೋಧನೆ ಪೂರ್ಣಗೊಂಡಿದೆ.
- ಇಆರ್ಪಿ ತಂತ್ರಾಂಶವನ್ನು 14 ಭಾಷೆಗಳಲ್ಲಿ ಲಭ್ಯವಾಗಿಸಲಾಗಿದೆ.
ಪಿಎಸಿಎಸ್ ನ ಡಿಜಿಟಲೀಕರಣವು ಪಾರದರ್ಶಕತೆ, ಲೆಕ್ಕಪತ್ರ ನಿರ್ವಹಣೆ ಮತ್ತು ಸೇವಾ ವಿತರಣೆಯನ್ನು ಗಮನಾರ್ಹವಾಗಿ ಸುಧಾರಿಸಿದೆ.
3. ತಳಮಟ್ಟದ ಸಹಕಾರಿ ವ್ಯಾಪ್ತಿಯ ವಿಸ್ತರಣೆ
ಪ್ರತಿಯೊಂದು ಪಂಚಾಯತ್ ಸಹಕಾರಿ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಗಮನಹರಿಸಿದೆ:
- ಇಲ್ಲಿಯವರೆಗೆ 37,454 ಹೊಸ ಬಹುಪಯೋಗಿ ಪಿಎಸಿಎಸ್, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಹಕಾರ ಸಂಘಗಳನ್ನು ನೋಂದಾಯಿಸಲಾಗಿದೆ.
- ಪಿಎಸಿಎಸ್ 2.55 ಲಕ್ಷಕ್ಕೂ ಹೆಚ್ಚು ಗ್ರಾಮ ಪಂಚಾಯತ್ಗಳಲ್ಲಿ ಲಭ್ಯವಿದೆ.
- ಹೈನುಗಾರಿಕೆ ಸಹಕಾರ ಸಂಘಗಳು 87,159 ಕ್ಕೂ ಹೆಚ್ಚು ಗ್ರಾಮ ಪಂಚಾಯತ್ಗಳನ್ನು ಒಳಗೊಂಡಿವೆ.
- ಮೀನುಗಾರಿಕೆ ಸಹಕಾರ ಸಂಘಗಳು 29,964 ಕ್ಕೂ ಹೆಚ್ಚು ಗ್ರಾಮ ಪಂಚಾಯತ್ಗಳನ್ನು ಒಳಗೊಂಡಿವೆ.
ಈ ವಿಸ್ತರಣೆಯು ಸೇವಾ ವಂಚಿತ ಪ್ರದೇಶಗಳಲ್ಲಿ ಸಹಕಾರಿ ಪ್ರವೇಶವನ್ನು ಬಲಪಡಿಸುತ್ತಿದೆ.
4. ಸಹಕಾರ ಸಂಘಗಳ ಮೂಲಕ ಗ್ರಾಮೀಣ ಮೂಲಸೌಕರ್ಯ ನಿರ್ಮಾಣ
ಸರ್ಕಾರವು ಸಹಕಾರ ಸಂಘಗಳ ಮೂಲಕ ವಿಶ್ವದ ಅತಿದೊಡ್ಡ ವಿಕೇಂದ್ರೀಕೃತ ಧಾನ್ಯ ಸಂಗ್ರಹಣಾ ಯೋಜನೆಯನ್ನು ಜಾರಿಗೆ ತರುತ್ತಿದೆ:
- 145 ಪಿಎಸಿಎಸ್ ಗಳಲ್ಲಿ ಉಗ್ರಾಣಗಳ ನಿರ್ಮಾಣ ಪೂರ್ಣಗೊಂಡಿದೆ.
- ಸೃಷ್ಟಿಸಲಾದ ಸಂಗ್ರಹಣಾ ಸಾಮರ್ಥ್ಯ: 68,702 ಮೆಟ್ರಿಕ್ ಟನ್ ಗೂ ಹೆಚ್ಚು.
ಈ ಉಪಕ್ರಮವು ಸುಗ್ಗಿಯ ನಂತರದ ನಷ್ಟವನ್ನು ಕಡಿಮೆ ಮಾಡಲು ಮತ್ತು ಸ್ಥಳೀಯವಾಗಿ ದಾಸ್ತಾನು ಮಾಡುವ ಹಾಗೂ ಮಾರುಕಟ್ಟೆಯ ಉತ್ತಮ ಸಮಯವನ್ನು ಬಳಸಿಕೊಳ್ಳುವ ಮೂಲಕ ರೈತರ ಆದಾಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
5. ರೈತ ಉತ್ಪಾದಕ ಸಂಸ್ಥೆಗಳ ಬಲವರ್ಧನೆ
ಉತ್ತಮ ಒಗ್ಗೂಡುವಿಕೆ ಮತ್ತು ಮಾರುಕಟ್ಟೆಯ ಪ್ರವೇಶಕ್ಕಾಗಿ ಸಹಕಾರ ಸಂಘಗಳನ್ನು ಆಧುನಿಕ ರೈತ ಗುಂಪುಗಳೊಂದಿಗೆ ಸಂಯೋಜಿಸಲಾಗುತ್ತಿದೆ:
- ಸಹಕಾರಿ ವಲಯದಲ್ಲಿ 1,863 ಎಪ್ಪಿಒಗಳನ್ನು ರಚಿಸಲಾಗಿದೆ.
- ಪಿಎಸಿಎಸ್ ಗಳ ಮೂಲಕ 1,117 ಎಪ್ಪಿಒಗಳನ್ನು ರಚಿಸಲಾಗಿದೆ.
- 1,070 ಮೀನುಗಾರಿಕೆ ಎಪ್ಪಿಒಗಳನ್ನು ರಚಿಸಲಾಗಿದ್ದು, ಅವುಗಳ ಪ್ರಯೋಜನಕ್ಕಾಗಿ ₹98 ಕೋಟಿ ವಿತರಿಸಲಾಗಿದೆ.
ಇದು ಮಾರುಕಟ್ಟೆ ಸಂಪರ್ಕ, ಸಂಸ್ಕರಣೆ ಮತ್ತು ರೈತರ ಆದಾಯ ಗಳಿಕೆಯನ್ನು ಸುಧಾರಿಸುತ್ತಿದೆ.
6. ತೆರಿಗೆ ವಿನಾಯಿತಿ ಮತ್ತು ಸುಗಮ ವ್ಯಾಪಾರ
ನೀತಿ ಸುಧಾರಣೆಗಳು ಸಹಕಾರ ಸಂಘಗಳ ಆರ್ಥಿಕ ಆರೋಗ್ಯವನ್ನು ಸುಧಾರಿಸಿವೆ. ಸಹಕಾರ ಸಂಘಗಳಿಗಾಗಿ ಪರಿಚಯಿಸಲಾದ ಪ್ರಮುಖ ತೆರಿಗೆ ವಿನಾಯಿತಿ ಕ್ರಮಗಳು ಈ ಕೆಳಗಿನಂತಿವೆ:
- ₹1-10 ಕೋಟಿ ಆದಾಯವಿರುವ ಸಹಕಾರ ಸಂಘಗಳಿಗೆ ಸರ್ಚಾರ್ಜ್ ಅನ್ನು 12% ರಿಂದ 7% ಕ್ಕೆ ಇಳಿಸಲಾಗಿದೆ.
- ಕನಿಷ್ಠ ಪರ್ಯಾಯ ತೆರಿಗೆಯನ್ನು 18.5% ರಿಂದ 15% ಕ್ಕೆ ಇಳಿಸಲಾಗಿದೆ.
- ನಗದು ಹಿಂಪಡೆಯುವಿಕೆಯ ಟಿಡಿಎಸ್ ಮಿತಿಯನ್ನು ₹1 ಕೋಟಿಯಿಂದ ₹3 ಕೋಟಿಗೆ ಹೆಚ್ಚಿಸಲಾಗಿದೆ.
- ಪಿಎಸಿಎಸ್ ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕುಗಳಿಗೆ ಹೆಚ್ಚಿನ ನಗದು ವಹಿವಾಟು ಮಿತಿಗಳನ್ನು ನೀಡಲಾಗಿದೆ.
ಈ ಕ್ರಮಗಳು ದ್ರವ್ಯತೆಯನ್ನು ಹೆಚ್ಚಿಸಿವೆ ಮತ್ತು ಅನುಸರಣೆಯ ಹೊರೆಯನ್ನು ಕಡಿಮೆ ಮಾಡಿವೆ.
7. ಶ್ವೇತ ಕ್ರಾಂತಿ 2.0
ಸಹಕಾರಿ ಹೈನುಗಾರಿಕೆ ವಲಯವನ್ನು ಶ್ವೇತ ಕ್ರಾಂತಿ 2.0 ಅಡಿಯಲ್ಲಿ ಬಲಪಡಿಸಲಾಗುತ್ತಿದೆ. ಇದು 2028-29 ರ ವೇಳೆಗೆ ಹಾಲಿನ ಸಂಗ್ರಹಣೆಯನ್ನು 50% ರಷ್ಟು ಹೆಚ್ಚಿಸುವ ಗುರಿಯನ್ನು ಹೊಂದಿದೆ.
- ಇಲ್ಲಿಯವರೆಗೆ 25,282 ಹೈನುಗಾರಿಕೆ ಸಹಕಾರ ಸಂಘಗಳನ್ನು ನೋಂದಾಯಿಸಲಾಗಿದೆ.
- ಮಹಿಳೆಯರ ನೇತೃತ್ವದ ಹೈನುಗಾರಿಕೆ ಸಹಕಾರ ಸಂಘಗಳು ಮತ್ತು ಹೆಚ್ಚಿನ ಸಹಕಾರಿ ವ್ಯಾಪ್ತಿಯ ಮೇಲೆ ಗಮನಹರಿಸಲಾಗಿದೆ.
8. ಹೊಸ ರಾಷ್ಟ್ರೀಯ ಸಹಕಾರಿ ಸಂಸ್ಥೆಗಳು
ವಲಯ-ನಿರ್ದಿಷ್ಟ ಬೆಳವಣಿಗೆಯನ್ನು ಬಲಪಡಿಸಲು, ಮೂರು ಹೊಸ ರಾಷ್ಟ್ರೀಯ ಬಹು-ರಾಜ್ಯ ಸಹಕಾರಿ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ ಮತ್ತು ಅವುಗಳ ಪ್ರಗತಿಯನ್ನು ಇಲ್ಲಿಯವರೆಗೆ ದಾಖಲಿಸಲಾಗಿದೆ:

- ನ್ಯಾಷನಲ್ ಕೋಆಪರೇಟಿವ್ ಎಕ್ಸ್ಪೋರ್ಟ್ಸ್ ಲಿಮಿಟೆಡ್: ದೇಶದಾದ್ಯಂತ ವಿವಿಧ ಸಹಕಾರ ಸಂಘಗಳು ಉತ್ಪಾದಿಸುವ ಹೆಚ್ಚುವರಿ ಸರಕುಗಳು/ಸೇವೆಗಳನ್ನು ರಫ್ತು ಮಾಡಲು ಎನ್ಸಿಇಎಲ್ ಒಂದು ಸಮಗ್ರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. 2026ರ ಜೂನ್ ಅಂತ್ಯದವರೆಗೆ, ಎನ್ಸಿಇಎಲ್ 38 ದೇಶಗಳಿಗೆ ₹6,295 ಕೋಟಿ ಮೌಲ್ಯದ 15.4 ಲಕ್ಷ ಮೆಟ್ರಿಕ್ ಟನ್ ಸರಕುಗಳನ್ನು ರಫ್ತು ಮಾಡಿದೆ.
- ನ್ಯಾಷನಲ್ ಕೋಆಪರೇಟಿವ್ ಆರ್ಗ್ಯಾನಿಕ್ಸ್ ಲಿಮಿಟೆಡ್: ಎನ್ಸಿಒಎಲ್ ಸಾವಯವ ಉತ್ಪನ್ನಗಳ ಸಂಗ್ರಹಣೆ, ಖರೀದಿ, ಪ್ರಮಾಣೀಕರಣ, ಪರೀಕ್ಷೆ, ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆಗಾಗಿ ಸಮಗ್ರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. 2026ರ ಜೂನ್ ಅಂತ್ಯದವರೆಗೆ ಇದು 14,286 ಸದಸ್ಯ ಸಹಕಾರ ಸಂಘಗಳನ್ನು ಹೊಂದಿದೆ.
- ಭಾರತೀಯ ಬೀಜ ಸಹಕಾರಿ ಸಮಿತಿ ಲಿಮಿಟೆಡ್: ಬಿಬಿಎಸ್ಎಸ್ಎಲ್ ಸಹಕಾರಿ ಜಾಲದ ಮೂಲಕ "ಭಾರತ ಬೀಜ" ಎಂಬ ಬ್ರ್ಯಾಂಡ್ ಹೆಸರಿನಲ್ಲಿ ಗುಣಮಟ್ಟದ ಬೀಜಗಳ ಉತ್ಪಾದನೆ, ಖರೀದಿ ಮತ್ತು ವಿತರಣೆಯನ್ನು ಕೈಗೊಳ್ಳುತ್ತದೆ. 2026ರ ಜೂನ್ ಅಂತ್ಯದವರೆಗೆ ಇದು 38,665 ಸದಸ್ಯ ಸಹಕಾರ ಸಂಘಗಳನ್ನು ಹೊಂದಿದೆ.
9. ಸಾಮರ್ಥ್ಯ ವರ್ಧನೆ ಮತ್ತು ಸಹಕಾರಿ ಶಿಕ್ಷಣ
ಶಿಕ್ಷಣ ಮತ್ತು ಸಾಂಸ್ಥಿಕ ಅಭಿವೃದ್ಧಿಯ ಮೂಲಕ ಸರ್ಕಾರವು ಸಹಕಾರ ಸಂಘಗಳನ್ನು ಬಲಪಡಿಸುತ್ತಿದೆ.
ಭಾರತದ ಮೊದಲ ಸಹಕಾರಿ ವಿಶ್ವವಿದ್ಯಾನಿಲಯವಾಗಿ ತ್ರಿಭುವನ್ ಸಹಕಾರಿ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲಾಗಿದೆ.
ಈ ವಿಶ್ವವಿದ್ಯಾನಿಲಯವು ಸಹಕಾರಿ ವಲಯದಲ್ಲಿ ಶಿಕ್ಷಣ, ಸಂಶೋಧನೆ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಬೆಂಬಲಿಸುತ್ತದೆ.
ರಾಷ್ಟ್ರೀಯ ಸಹಕಾರಿ ತರಬೇತಿ ಮಂಡಳಿ ಮತ್ತು ನಬಾರ್ಡ್ ಮೂಲಕ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಈ ಉಪಕ್ರಮಗಳು ಸಹಕಾರ ಸಂಘಗಳಲ್ಲಿ ಆಡಳಿತ, ನಾಯಕತ್ವ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಬಲಪಡಿಸುತ್ತವೆ.
ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ: ಹೂಡಿಕೆಯನ್ನು ಉತ್ತೇಜಿಸುವುದು
ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮವು ಸಹಕಾರ ಸಂಘಗಳ ಬೆಳವಣಿಗೆಗೆ ಹಣಕಾಸು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. 2025-26ರ ಆರ್ಥಿಕ ವರ್ಷದಲ್ಲಿ,ಎನ್ಸಿಡಿಸಿ ₹1.55 ಲಕ್ಷ ಕೋಟಿ ಮಂಜೂರು ಮಾಡಿದೆ ಮತ್ತು ₹1.27 ಲಕ್ಷ ಕೋಟಿ ವಿತರಿಸಿದೆ. ಅಲ್ಲದೆ, 2026ರ ಮೇ ಅಂತ್ಯದವರೆಗೆ, 10,000 ರೈತ ಉತ್ಪಾದಕ ಸಂಸ್ಥೆಗಳ ರಚನೆ ಮತ್ತು ಉತ್ತೇಜನ ಯೋಜನೆಯಡಿ, ಎಫ್ಪಿಒಗಳು/ಕ್ಲಸ್ಟರ್ ಆಧಾರಿತ ವ್ಯಾಪಾರ ಸಂಸ್ಥೆಗಳಿಗೆ ₹2,320 ಕೋಟಿಗಳನ್ನು ವಿತರಿಸಿದೆ. ಈ ನಿರಂತರ ಹಣಕಾಸು ನೆರವು ವಿವಿಧ ವಲಯಗಳಲ್ಲಿ ಸಹಕಾರಿ ವಿಸ್ತರಣೆಯನ್ನು ವೇಗಗೊಳಿಸುತ್ತಿದೆ.
ಭಾರತ್ ಟ್ಯಾಕ್ಸಿ: ಭಾರತದ ಮೊದಲ ಸಹಕಾರಿ ಆಧಾರಿತ ಮೊಬಿಲಿಟಿ ಪ್ಲಾಟ್ಫಾರ್ಮ್
ಭಾರತ್ ಟ್ಯಾಕ್ಸಿ ಎಂಬುದು ಸಹಕಾರ್ ಟ್ಯಾಕ್ಸಿ ಕೋಆಪರೇಟಿವ್ ಲಿಮಿಟೆಡ್ನ ಒಂದು ಉಪಕ್ರಮವಾಗಿದೆ. ಸಹಕಾರ್ ಟ್ಯಾಕ್ಸಿ ಕೋಆಪರೇಟಿವ್ ಲಿಮಿಟೆಡ್ ಎಂಬುದು ಸಹಕಾರಿ ಮಾದರಿಯನ್ನು ಆಧರಿಸಿದ ಚಾಲಕ-ಕೇಂದ್ರಿತ ಮೊಬಿಲಿಟಿ ಪ್ಲಾಟ್ಫಾರ್ಮ್ ಆಗಿದೆ. ಇದು ಸಾರ್ವಜನಿಕರಿಗೆ ಕೈಗೆಟುಕುವ, ಸುರಕ್ಷಿತ ಮತ್ತು ವಿಶ್ವಾಸಾರ್ಹ ಸಾರಿಗೆ ಸೇವೆಗಳನ್ನು ನೀಡುವಾಗ ಚಾಲಕರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ.
ಪ್ರಸ್ತುತ, ಭಾರತ್ ಟ್ಯಾಕ್ಸಿಯಲ್ಲಿ 6.37 ಲಕ್ಷ ನೋಂದಾಯಿತ ಚಾಲಕರು ಮತ್ತು 35.77 ಲಕ್ಷ ನೋಂದಾಯಿತ ಗ್ರಾಹಕರಿದ್ದಾರೆ. ಈ ಸೇವೆಯು ದೆಹಲಿ-ಎನ್ಸಿಆರ್, ಗುಜರಾತ್, ಲಕ್ನೋ, ಚಂಡೀಗಢ, ಮುಂಬೈ, ಜೈಪುರ್ ಮತ್ತು ಕಾನ್ಪುರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ ಕೆಲವು ತಿಂಗಳಲ್ಲಿ ರಾಂಚಿ, ಪಾಟ್ನಾ, ಗುವಾಹಟಿ, ಭೋಪಾಲ್, ಕೋಲ್ಕತ್ತಾ, ಇಂದೋರ್ ಮತ್ತು ನಾಗ್ಪುರದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಯೋಜಿಸಲಾಗಿದೆ.

ಸಹಕಾರ ಸಂಘಗಳು ವಿಕಸಿತ ಭಾರತವನ್ನು ಬಲಪಡಿಸುತ್ತಿವೆ
ಐದು ವರ್ಷಗಳಲ್ಲಿ, ಸಹಕಾರ ಸಚಿವಾಲಯವು ಸಹಕಾರ ಸಂಘಗಳನ್ನು ಸಮಗ್ರ ಬೆಳವಣಿಗೆಯ ಎಂಜಿನ್ಗಳನ್ನಾಗಿ ಪರಿವರ್ತಿಸಿದೆ. ಬಲವಾದ ಸಂಸ್ಥೆಗಳು, ಸುಧಾರಿತ ಸೇವಾ ವಿತರಣೆ ಮತ್ತು ವ್ಯಾಪಕವಾದ ಡಿಜಿಟಲ್ ಅಳವಡಿಕೆಯು ತಳಮಟ್ಟದ ಪರಿಣಾಮವನ್ನು ಹೆಚ್ಚಿಸಿವೆ. ವಿಸ್ತರಿಸಿದ ಮೂಲಸೌಕರ್ಯ ಮತ್ತು ಉತ್ತಮ ಮಾರುಕಟ್ಟೆಯ ಪ್ರವೇಶವು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಿವೆ. ಸಹಕಾರ-ನೇತೃತ್ವದ ಅಭಿವೃದ್ಧಿಯ ಮೂಲಕ ಮಹಿಳೆಯರು ಮತ್ತು ರೈತರು ಈಗ ಹೆಚ್ಚಿನ ಅವಕಾಶಗಳನ್ನು ಹೊಂದಿದ್ದಾರೆ.
ಭಾರತವು ತನ್ನ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಿರುವಾಗ, ಸಹಕಾರ ಸಂಘಗಳು ಸಮಾನ ಬೆಳವಣಿಗೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಉತ್ತೇಜಿಸುವುದನ್ನು ಮುಂದುವರಿಸುತ್ತವೆ. "ಸಹಕಾರ್ ಸೆ ಸಮೃದ್ಧಿ" (ಸಹಕಾರದಿಂದ ಸಮೃದ್ಧಿ) ಎಂಬ ದೃಷ್ಟಿಕೋನದಿಂದ ಮಾರ್ಗದರ್ಶಿಸಲ್ಪಟ್ಟ ಈ ಸಹಕಾರಿ ಚಳವಳಿಯು, ಸ್ಥಿತಿಸ್ಥಾಪಕ, ಸ್ವಾವಲಂಬಿ ಮತ್ತು ಸಮೃದ್ಧ ಭಾರತವನ್ನು ನಿರ್ಮಿಸುವುದನ್ನು ಮುಂದುವರಿಸಿದೆ.
References
Ministry of Cooperation
https://cooperation.gov.in/en/about-primary-agriculture-cooperative-credit-societies-pacs
https://www.pib.gov.in/PressReleasePage.aspx?PRID=2146717®=48&lang=2
https://www.pib.gov.in/PressReleasePage.aspx?PRID=2241955®=3&lang=1
https://www.pib.gov.in/PressReleasePage.aspx?PRID=2214633®=3&lang=2
https://www.pib.gov.in/PressReleasePage.aspx?PRID=2201729®=3&lang=1
https://www.pib.gov.in/PressReleasePage.aspx?PRID=2281327®=48&lang=1
https://sansad.in/getFile/annex/270/AU4161_Yqq3fo.pdf?source=pqars
PIB Backgrounder
https://www.pib.gov.in/PressNoteDetails.aspx?NoteId=156980&ModuleId=3®=22&lang=13
Click here to see pdf
*****
(तथ्य सामग्री आईडी: 150737)
आगंतुक पटल : 13
Provide suggestions / comments