ಆಯುಷ್
ಸುಲಭವಾಗಿ ಲಭ್ಯವಾಗುವ, ಜನಕೇಂದ್ರಿತ ಮತ್ತು ಗುಣಮಟ್ಟದ ಆಯುಷ್ ಸೇವೆಗಳಿಗೆ ಪ್ರಾಮುಖ್ಯತೆ ನೀಡುವಂತೆ ಕೇಂದ್ರ ಸಚಿವರಾದ ಶ್ರೀ ಪ್ರತಾಪರಾವ್ ಜಾಧವ್ ಕರೆ
ಆಯುಷ್ ವ್ಯವಸ್ಥೆಯನ್ನು ಬಲಪಡಿಸುವ ಕುರಿತು ನೀತಿ ಆಯೋಗದ ರಾಷ್ಟ್ರೀಯ ಕಾರ್ಯಾಗಾರ ಕೇಂದ್ರ ಸರ್ಕಾರದೊಂದಿಗೆ 30ಕ್ಕೂ ಹೆಚ್ಚು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಟ್ಟಿಗೆ ತರುತ್ತದೆ
ಪ್ರಕಟಣಾ ದಿನಾಂಕ:
09 SEP 2026 12:25PM by PIB Bengaluru
ಕೇಂದ್ರ ಆಯುಷ್ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ನಿರ್ವಹಣೆ) ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವರಾದ ಶ್ರೀ ಪ್ರತಾಪರಾವ್ ಜಾಧವ್ ಅವರು, ದೇಶಾದ್ಯಂತ ಸುಲಭವಾಗಿ ಸಿಗುವ, ಜನಕೇಂದ್ರೀಯ ಮತ್ತು ಗುಣಮಟ್ಟದ ಆಯುಷ್ ಸೇವೆಗಳ ವಿತರಣೆಯನ್ನು ಬಲಪಡಿಸಲು ರಾಜ್ಯಗಳು ಮತ್ತು ಕೇಂದ್ರಡಳಿತ ಪ್ರದೇಶಗಳಿಗೆ ಕರೆ ನೀಡಿದರು. ಅವರು ನಿನ್ನೆ ಹೈದರಾಬಾದ್ನ ಕನ್ಹಾ ಶಾಂತಿ ವನದಲ್ಲಿ ನೀತಿ ಆಯೋಗ ಆಯೋಜಿಸಿದ್ದ ‘ರಾಜ್ಯಗಳು ಮತ್ತು ಕೇಂದ್ರಡಳಿತ ಪ್ರದೇಶಗಳಲ್ಲಿ ಆಯುಷ್ ಅನುಕೂಲಕರ ವಾತಾವರಣವನ್ನು ಬಲಪಡಿಸುವುದು’ ಎಂಬ ವಿಷಯದ ಮೇಲಿನ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದರು.
ಈ ಕಾರ್ಯಾಗಾರವು ಹಂಚಿಕೆಯ ಅನುಭವಗಳು, ಅತ್ಯುತ್ತಮ ಅಭ್ಯಾಸಗಳು ಮತ್ತು ಜಂಟಿ ಕ್ರಿಯೆಯ ಮೂಲಕ ಆಯುಷ್ ಅನುಕೂಲಕರ ವಾತಾವರಣವನ್ನು ಬಲಪಡಿಸುವ ಕುರಿತು ಚರ್ಚಿಸಲು ಕೇಂದ್ರ ಸರ್ಕಾರ, 30ಕ್ಕೂ ಹೆಚ್ಚು ರಾಜ್ಯಗಳು ಮತ್ತು ಕೇಂದ್ರಡಳಿತ ಪ್ರದೇಶಗಳ ಹಿರಿಯ ಅಧಿಕಾರಿಗಳು ಹಾಗೂ ವಿವಿಧ ಸಂಸ್ಥೆಗಳ ತಜ್ಞರನ್ನು ಒಂದೆಡೆ ಸೇರಿಸಿತು.
ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಪ್ರತಾಪರಾವ್ ಜಾಧವ್ ಅವರು ಮುಖ್ಯ ಅತಿಥಿಯಾಗಿ, ನೀತಿ ಆಯೋಗದ ಸದಸ್ಯರಾದ (ಆರೋಗ್ಯ) ಪ್ರೊ. (ಡಾ.) ಎಂ. ಶ್ರೀನಿವಾಸ್ ಮತ್ತು ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೇಚಾ ಅವರೊಂದಿಗೆ ಭಾಗವಹಿಸಿದ್ದರು.
ತಮ್ಮ ಮುಖ್ಯ ಭಾಷಣದಲ್ಲಿ, ಶ್ರೀ ಜಾಧವ್ ಅವರು ಆಯುಷ್ ಪದ್ಧತಿಗಳ ತಲುಪುವಿಕೆ ಮತ್ತು ಪ್ರಭಾವವನ್ನು ವಿಸ್ತರಿಸಲು ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಡಳಿತ ಪ್ರದೇಶಗಳ ಸಂಘಟಿತ ಪ್ರಯತ್ನಗಳ ಅಗತ್ಯವನ್ನು ಒತ್ತಿಹೇಳಿದರು. ಸಾರ್ವಜನಿಕರ ಬದಲಾಗುತ್ತಿರುವ ಆರೋಗ್ಯ ಅಗತ್ಯಗಳನ್ನು ಪೂರೈಸಲು ಆಯುಷ್ ಆರೋಗ್ಯ ರಕ್ಷಣಾ ಸೇವೆಗಳ ಗುಣಮಟ್ಟ, ಲಭ್ಯತೆ ಮತ್ತು ಜನಕೇಂದ್ರೀಯ ವಿತರಣೆಯ ಮೇಲೆ ಹೆಚ್ಚಿನ ಗಮನ ಹರಿಸಬೇಕೆಂದು ಅವರು ಕರೆ ನೀಡಿದರು.

ಪ್ರೊ. (ಡಾ.) ಎಂ. ಶ್ರೀನಿವಾಸ್ ಅವರು ಭಾರತದಲ್ಲಿ ಮತ್ತು ಹೊರಗೆ ಆರೋಗ್ಯದ ಫಲಿತಾಂಶಗಳನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿರುವ ಸಮಗ್ರ ಆರೋಗ್ಯ ರಕ್ಷಣೆಗೆ ತಂತ್ರಜ್ಞಾನ-ಸಂಯೋಜಿತ ಮತ್ತು ಸಾಕ್ಷ್ಯಾಧಾರಿತ ವಿಧಾನಗಳ ಪ್ರಾಮುಖ್ಯತೆಯನ್ನು ಎತ್ತಿಹಿಡಿದರು.
ವೈದ್ಯ ರಾಜೇಶ್ ಕೊಟೇಚಾ ಅವರು ಆಯುಷ್ ಅನುಕೂಲಕರ ವಾತಾವರಣವನ್ನು ಬಲಪಡಿಸುವಲ್ಲಿ ಮತ್ತು ತಳಮಟ್ಟದಲ್ಲಿ ಆಯುಷ್ ಸೇವೆಗಳ ಪರಿಣಾಮಕಾರಿ ಅನುಷ್ಠಾನ ಮತ್ತು ವಿತರಣೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ರಾಜ್ಯಗಳು ಮತ್ತು ಕೇಂದ್ರಡಳಿತ ಪ್ರದೇಶಗಳ ಪ್ರಮುಖ ಪಾತ್ರವನ್ನು ಒತ್ತಿಹೇಳಿದರು.
ಆಯುಷ್ ಆರೋಗ್ಯ ರಕ್ಷಣೆ ವಿತರಣೆ, ಶಿಕ್ಷಣ, ಸಂಶೋಧನೆ, ಸಾಮರ್ಥ್ಯ ವರ್ಧನೆ ಮತ್ತು ವಿಶಾಲವಾದ ಆರೋಗ್ಯ ರಕ್ಷಣಾ ವ್ಯವಸ್ಥೆಯೊಂದಿಗೆ ಸಂಯೋಜನೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಅನುಭವಗಳು, ಅತ್ಯುತ್ತಮ ಅಭ್ಯಾಸಗಳು ಮತ್ತು ನೂತನ ವಿಧಾನಗಳನ್ನು ಹಂಚಿಕೊಳ್ಳಲು ಈ ಕಾರ್ಯಾಗಾರವು ರಾಜ್ಯಗಳು ಮತ್ತು ಕೇಂದ್ರಡಳಿತ ಪ್ರದೇಶಗಳಿಗೆ ಒಂದು ವೇದಿಕೆಯನ್ನು ಒದಗಿಸಿತು.
ಚರ್ಚೆಗಳು ಬಲವಾದ, ಸುಲಭವಾಗಿ ಸಿಗುವ ಮತ್ತು ಜನಕೇಂದ್ರೀಯ ಆಯುಷ್ ಅನುಕೂಲಕರ ವಾತಾವರಣವನ್ನು ನಿರ್ಮಿಸುವಲ್ಲಿ ಮತ್ತು ಎಲ್ಲರಿಗೂ ಸಮಗ್ರ ಹಾಗೂ ಸಂಯೋಜಿತ ಆರೋಗ್ಯ ರಕ್ಷಣೆಯ ಸರ್ಕಾರದ ದೂರದೃಷ್ಟಿಯನ್ನು ಮುನ್ನಡೆಸುವಲ್ಲಿ ಕೇಂದ್ರ-ರಾಜ್ಯ ಸಹಕಾರದ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದವು.

*****
(ಪ್ರಕಟಣೆ ಐ.ಡಿ.: 2308204)
ವಿಸಿಟರ್ ಕೌಂಟರ್ : 4