ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಗೋವಾ ರಾಜಧಾನಿ ಪಣಜಿಯಲ್ಲಿ ಮಾದಕ ವಸ್ತು ನಿಯಂತ್ರಣ ಕುರಿತು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು



ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ನಾವು 2029 ರ ವೇಳೆಗೆ ‘ಮಾದಕ ವಸ್ತು ಮುಕ್ತ ಭಾರತ’ದ ಸಂಕಲ್ಪವನ್ನು ಈಡೇರಿಸುತ್ತೇವೆ

ದೇಶದಿಂದ ನಕ್ಸಲಿಸಂ ಅನ್ನು ನಿರ್ಮೂಲನೆ ಮಾಡಿದಂತೆಯೇ, ನಾವು ಮಾದಕ ವಸ್ತುಗಳ ಸಮಸ್ಯೆಯನ್ನು ಸಹ ನಿರ್ಮೂಲನೆ ಮಾಡುತ್ತೇವೆ

ಎಲ್ಲಾ ಗುರಿಗಳನ್ನು ನಿಗದಿತ ಸಮಯದೊಳಗೆ ಸಾಧಿಸುವ ಸಂಕಲ್ಪದೊಂದಿಗೆ, 'ಮಾದಕ ವಸ್ತು ಮುಕ್ತ ಭಾರತ ನಿರ್ಮಿಸಲು ಜುಲೈ 2026 ರಿಂದ ಜುಲೈ 2029 ರವರೆಗಿನ ಮೂರು ವರ್ಷಗಳ ಕಾರ್ಯಯೋಜನೆ ಸಿದ್ಧವಾಗಿದೆ

ಮಾದಕ ವಸ್ತು ಮುಕ್ತ ಭಾರತಕ್ಕಾಗಿನ ಕಾರ್ಯಯೋಜನೆಯು ನಾಲ್ಕು ಸ್ತಂಭಗಳನ್ನು ಆಧರಿಸಿದೆ – ಗುಪ್ತಚರ ಮಾಹಿತಿ ಮತ್ತು ಕಾರ್ಯಾಚರಣೆ ಆಧಾರಿತ ಜಾರಿ, ಪ್ರಿಕರ್ಸರ್ ಮತ್ತು ಸಿಂಥೆಟಿಕ್ ಡ್ರಗ್ಸ್ ನಿಯಂತ್ರಣ, ಬೇಡಿಕೆ ಮತ್ತು ಹಾನಿ ಕಡಿತ, ಮತ್ತು ಸಾಮರ್ಥ್ಯ ವೃದ್ಧಿ ಮತ್ತು ಸಮನ್ವಯ

ಚತುಷ್ಕೋನ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳುವ ಮೂಲಕ, ಡೆತ್ ಟ್ರಯಾಂಗಲ್ ಮತ್ತು ಡೆತ್ ಕ್ರೆಸೆಂಟ್ ಮಾರ್ಗಗಳ ಮೂಲಕ ದೇಶಕ್ಕೆ ಮಾದಕ ವಸ್ತುಗಳ ಕಳ್ಳಸಾಗಣೆಯನ್ನು ತಡೆಯಲು ನಾವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ

ಮೋದಿ ಸರ್ಕಾರವು ಮಾದಕ ವಸ್ತುಗಳ ವಿರುದ್ಧದ ಹೋರಾಟವನ್ನು ರಾಷ್ಟ್ರೀಯ ಭದ್ರತೆಯ ಆದ್ಯತೆಯನ್ನಾಗಿ ಮಾಡಿದೆ

ಶಿಕ್ಷಣ ಸಚಿವಾಲಯ, ಯುವಜನ ಮತ್ತು ಕ್ರೀಡಾ ಸಚಿವಾಲಯಗಳು, ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸೇರಿ ಶೈಕ್ಷಣಿಕ ಸಂಸ್ಥೆಗಳನ್ನು ಮಾದಕ ವಸ್ತು ಮುಕ್ತಗೊಳಿಸಲು ಸಂಕಲ್ಪ ಮಾಡುತ್ತಿವೆ

ಎನ್‌ ಸಿ ಸಿ, ಎನ್ ಎಸ್‌ ಎಸ್ ಮತ್ತು ಮೈ ಭಾರತ್ ಮೂಲಕ ಲಕ್ಷಾಂತರ ‘ನಶಾ ಮುಕ್ತ ಭಾರತ ಮಿತ್ರ’ರನ್ನು ಸಜ್ಜುಗೊಳಿಸಲಾಗುವುದು

ಆರ್ಥಿಕ ತನಿಖೆಗಳು ಮತ್ತು ಪಿಐಟಿ-ಎನ್‌ ಡಿ ಪಿ ಎಸ್‌ ಗೆ ವಿಶೇಷ ಒತ್ತು ನೀಡುವ ಮೂಲಕ, ಮೋದಿ ಸರ್ಕಾರವು ತನಿಖೆಗೆ ಬಾಟಮ್-ಟು-ಟಾಪ್ ಮತ್ತು ಟಾಪ್-ಟು-ಬಾಟಮ್ ಎಂಬ ಹೊಸ ವಿಧಾನವನ್ನು ಅಳವಡಿಸಿಕೊಂಡಿದೆ

2004 ರಿಂದ 2014 ರವರೆಗೆ, ₹40,000 ಕೋಟಿ ಮೌಲ್ಯದ 2.6 ಮಿಲಿಯನ್ ಕಿಲೋಗ್ರಾಂಗಳಷ್ಟು ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು, ಆದರೆ 2014 ರಿಂದ 2026 ರವರೆಗೆ, ₹1.89 ಲಕ್ಷ ಕೋಟಿ ಮೌಲ್ಯದ 11.9 ಮಿಲಿಯನ್ ಕಿಲೋಗ್ರಾಂಗಳಿಗೂ ಹೆಚ್ಚು ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ

'ನಶಾ ಮುಕ್ತ ಭಾರತ ಅಭಿಯಾನದ ಅಡಿಯಲ್ಲಿ, 250 ಮಿಲಿಯನ್ ನಾಗರಿಕರನ್ನು ತಲುಪಿ ಪ್ರತಿಜ್ಞಾವಿಧಿ ಬೋಧಿಸಲಾಗಿದೆ, ಹಾಗೆಯೇ ಚಿಕಿತ್ಸೆ ಮತ್ತು ಪುನರ್ವಸತಿಯ ಮೂಲಕ 5.70 ಲಕ್ಷ ನಾಗರಿಕರನ್ನು ಮಾದಕ ವಸ್ತು ವ್ಯಸನದಿಂದ ಮುಕ್ತಗೊಳಿಸಲಾಗಿದೆ

ಸಾಮಾಜಿಕ ನ್ಯಾಯ ಇಲಾಖೆ, ಆರೋಗ್ಯ ಇಲಾಖೆ ಮತ್ತು ಕಾರಾಗೃಹ ಆಡಳಿತವು ಜಂಟಿಯಾಗಿ ಮಾದಕ ವಸ್ತು ಮುಕ್ತಿ ಕೇಂದ್ರಗಳ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸಿ 1,751 ಕ್ಕೆ ಏರಿಸಲು ಕಾರ್ಯನಿರ್ವಹಿಸುತ್ತಿವೆ

ಅಪರಾಧಗಳನ್ನು ಎಸಗಿ ದೇಶದಿಂದ ಓಡಿಹೋಗಿ ತಲೆಮರೆಸಿಕೊಂಡ ಅಪರಾಧಿಗಳ ವಿರುದ್ಧ ದೇಶವ್ಯಾಪಿ ಅಭಿಯಾನ ನಡೆಯುತ್ತಿದೆ; ಆರ್ಥಿಕ ಅಪರಾಧಗಳು, ಭಯೋತ್ಪಾದನೆ, ಮಾದಕ ವಸ್ತುಗಳು ಮತ್ತು ಗ್ಯಾಂಗ್ ವಾರ್‌ ಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಅಪರಾಧಿಗಳನ್ನು ಭಾರತೀಯ ನ್ಯಾಯಾಲಯಗಳ ಕಟಕಟೆಯಲ್ಲಿ ನಿಲ್ಲಿಸಲಾಗಿದೆ

ಪ್ರಕಟಣಾ ದಿನಾಂಕ: 06 SEP 2026 6:38PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಗೋವಾ ರಾಜಧಾನಿ ಪಣಜಿಯಲ್ಲಿ ಮಾದಕ ವಸ್ತು ನಿಯಂತ್ರಣ ಕುರಿತು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಶ್ರೀ ಪ್ರಮೋದ್ ಸಾವಂತ್ ಅವರೂ ಉಪಸ್ಥಿತರಿದ್ದರು.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು, ಶ್ರೀ ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ, ದೇಶದ ಆಂತರಿಕ ಭದ್ರತೆಯನ್ನು ಬಲಪಡಿಸಲು ಭಾರತ ಸರ್ಕಾರವು ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದರು. ಮೋದಿಯವರು ಪ್ರಧಾನಿಯಾದಾಗ, ದೇಶವು ಮೂರು ಭೀಕರ ಸಮಸ್ಯೆಗಳನ್ನು ಎದುರಿಸುತ್ತಿತ್ತು, ಇದರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚುತ್ತಿದ್ದ ಭಯೋತ್ಪಾದನೆ, ನಕ್ಸಲಿಸಂ ಮತ್ತು ಈಶಾನ್ಯದ ಹಲವಾರು ಸಶಸ್ತ್ರ ಸಂಘಟನೆಗಳು ಸೃಷ್ಟಿಸಿದ ಅಶಾಂತಿ ಸೇರಿದ್ದವು ಎಂದು ಅವರು ಹೇಳಿದರು. ಇದರ ಜೊತೆಗೆ, ಆಂತರಿಕ ಭದ್ರತೆಯ ವಿಷಯದಲ್ಲಿ, ದೇಶವು ಹಲವಾರು ಬಾಂಬ್ ಸ್ಫೋಟಗಳಿಂದ ತೀವ್ರ ತೊಂದರೆಗೊಳಗಾಗಿತ್ತು. ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಬೃಹತ್ ಮಟ್ಟದ ಚಳವಳಿಗಳು ನಡೆದವು. ಸರಿಯಾಗಿ ಆ ಅವಧಿಯಲ್ಲೇ ಮೋದಿಯವರು ದೇಶದ ಪ್ರಧಾನಿ ಹುದ್ದೆಯನ್ನು ವಹಿಸಿಕೊಂಡರು. ಅವರ ನಾಯಕತ್ವದಲ್ಲಿ 2019 ರಿಂದ ಇಲ್ಲಿಯವರೆಗೆ ಹಿಂತಿರುಗಿ ನೋಡಿದರೆ, ಪರಿಸ್ಥಿತಿ ಗಮನಾರ್ಹವಾಗಿ ಬದಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ, ಪ್ರತ್ಯೇಕತಾವಾದದ ಭಾವನೆ ಗಣನೀಯವಾಗಿ ಕಡಿಮೆಯಾಗಿದೆ. ಭಯೋತ್ಪಾದನೆಯ ಅಂಕಿಅಂಶಗಳು ಕ್ರಮೇಣ ಕುಗ್ಗುತ್ತಿದ್ದು, ಶೂನ್ಯದತ್ತ ಸಾಗುತ್ತಿವೆ ಮತ್ತು ಜಮ್ಮು ಮತ್ತು ಕಾಶ್ಮೀರವು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆದಿದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ದೇಶದ ಉಳಿದ ಭಾಗಗಳ ನಡುವೆ ಇದ್ದ ಮಾನಸಿಕ ಅಂತರವನ್ನು ಕಡಿಮೆ ಮಾಡಲು ಯಶಸ್ವಿ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದರು. ಐದು ದಶಕಗಳಷ್ಟು ಹಳೆಯದಾದ ನಕ್ಸಲಿಸಂ ಸಮಸ್ಯೆ ಇಂದು ಬಹುತೇಕ ಭೂತಕಾಲದ ವಿಷಯವಾಗಿದೆ. ರೆಡ್ ಕಾರಿಡಾರ್ ಅನ್ನು ಕಲ್ಪಿಸಿಕೊಂಡಿದ್ದ ಹೆಚ್ಚಿನ ಜನರು ಇಂದು ಆಯುಧಗಳನ್ನು ಕೆಳಗಿಟ್ಟು ಶರಣಾಗಿದ್ದಾರೆ ಮತ್ತು ಮುಖ್ಯವಾಹಿನಿಗೆ ಸೇರುತ್ತಿದ್ದಾರೆ. ಅದೇ ರೀತಿ, ಈಶಾನ್ಯದಲ್ಲೂ ಸುಮಾರು 11,000 ಯುವಕರು ಆಯುಧಗಳನ್ನು ತ್ಯಜಿಸಿದ್ದಾರೆ. ಭಾರತ ಸರ್ಕಾರವು ಅವರೊಂದಿಗೆ 14 ಕ್ಕೂ ಹೆಚ್ಚು ಒಪ್ಪಂದಗಳಿಗೆ ಸಹಿ ಹಾಕಿದೆ, ಇಂದು ಈಶಾನ್ಯವೂ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವರಾದರು ಹೇಳಿದರು. 2019 ರ ನಂತರ, ಅಪರಾಧಗಳನ್ನು ಎಸಗಿ ಓಡಿಹೋಗಿ ತಲೆಮರೆಸಿಕೊಂಡ ಅಪರಾಧಿಗಳ ವಿರುದ್ಧವೂ ಅಭಿಯಾನವನ್ನು ಪ್ರಾರಂಭಿಸಲಾಗಿದೆ. 2019 ರಿಂದ ಜುಲೈ 2026 ರವರೆಗೆ, 36 ದೇಶಗಳಿಂದ 274 ತಲೆಮರೆಸಿಕೊಂಡ ಅಪರಾಧಿಗಳನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ. ಇವರಲ್ಲಿ ಆರ್ಥಿಕ ಅಪರಾಧಗಳು, ಭಯೋತ್ಪಾದನೆ, ಮಾದಕ ವಸ್ತುಗಳು ಮತ್ತು ಗ್ಯಾಂಗ್ ವಾರ್‌ ಗಳಂತಹ ಗಂಭೀರ ಅಪರಾಧಗಳಲ್ಲಿ ಭಾಗಿಯಾದವರು ಸೇರಿದ್ದಾರೆ. ಅವರೆಲ್ಲರನ್ನೂ ಭಾರತದ ನ್ಯಾಯಾಲಯಗಳ ಮುಂದೆ ಹಾಜರುಪಡಿಸಲಾಗಿದೆ. ಕಳೆದ ಮೂರು ವರ್ಷಗಳಲ್ಲಿ, 401 ರೆಡ್ ಕಾರ್ನರ್ ನೋಟಿಸ್‌ ಗಳನ್ನು ಜಾರಿಗೊಳಿಸಲಾಗಿದೆ. 2026 ರಲ್ಲೇ, ಜುಲೈವರೆಗೆ, 182 ರೆಡ್ ಕಾರ್ನರ್ ನೋಟಿಸ್‌ ಗಳನ್ನು ಜಾರಿಗೊಳಿಸುವ ಇಡೀ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಇದಕ್ಕಾಗಿ ‘ಭಾರತ್‌ ಪೋಲ್’ (BHARATPOL) ರೂಪದಲ್ಲಿ ಹೊಸ ವ್ಯವಸ್ಥೆಯನ್ನು ಸೃಷ್ಟಿಸಲಾಗಿದೆ. 14 ಕ್ಕೂ ಹೆಚ್ಚು ಕೇಂದ್ರ ಸಂಸ್ಥೆಗಳು ಮತ್ತು ಎಲ್ಲಾ ರಾಜ್ಯಗಳ ಪೊಲೀಸರು ‘ಭಾರತ್‌ ಪೋಲ್’ಗೆ ಸಂಪರ್ಕ ಹೊಂದಿದ್ದಾರೆ. ಪ್ರತಿಯೊಂದು ರಾಜ್ಯದಿಂದ ತಲೆಮರೆಸಿಕೊಂಡ ಅಪರಾಧಿಗಳ ಹಸ್ತಾಂತರಕ್ಕಾಗಿ ‘ಭಾರತ್‌ ಪೋಲ್’ ಮೂಲಕ ಸಂಘಟಿತ ವ್ಯವಸ್ಥೆಯನ್ನು ಸಿದ್ಧಪಡಿಸಲಾಗಿದೆ. 2019 ರಿಂದ 2026 ರವರೆಗೆ, ತಲೆಮರೆಸಿಕೊಂಡ ಅಪರಾಧಿಗಳಿಗೆ ಸೇರಿದ ಸುಮಾರು ₹₹17,874 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಅಥವಾ ವಶಪಡಿಸಿಕೊಳ್ಳಲಾಗಿದೆ. ಹೊಸ ಅಪರಾಧ ಕಾನೂನುಗಳು ಮತ್ತು ನ್ಯಾಯ ಸಂಹಿತೆಗಳು ತಲೆಮರೆಸಿಕೊಂಡ ಅಪರಾಧಿಗಳ ವಿರುದ್ಧ ಕಾನೂನು ಕ್ರಮದ ಹಾದಿಯನ್ನು ಸುಲಭಗೊಳಿಸಿವೆ ಎಂದು ಅವರು ಹೇಳಿದರು.

WhatsApp Image 2026-09-06 at 18.21.03.jpeg

ಸೈಬರ್ ಅಪರಾಧಗಳಿಗಾಗಿಯೂ ವ್ಯವಸ್ಥಿತ ಕಾರ್ಯವಿಧಾನವನ್ನು ಸಿದ್ಧಪಡಿಸಲಾಗಿದ್ದು, ಇದನ್ನು ಪ್ರಧಾನಮಂತ್ರಿ ಶ್ರೀ ಮೋದಿಯವರೇ ಸ್ವತಃ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಹೇಳಿದರು. ಇಂದು 1930 ಹೆಲ್ಪ್‌ ಲೈನ್ ಸೈಬರ್ ಅಪರಾಧಗಳ ವಿರುದ್ಧ ರಕ್ಷಣೆಗೆ ಪರಿಣಾಮಕಾರಿ ಮಾಧ್ಯಮವಾಗಿದೆ. ರಾಜ್ಯಗಳ ಸಹಯೋಗದೊಂದಿಗೆ ಗೃಹ ಸಚಿವಾಲಯದ ಮೂಲಕ ಪೊಲೀಸ್ ಠಾಣೆ ಮಟ್ಟದವರೆಗೆ ಮೂರು ಹೊಸ ಅಪರಾಧ ಕಾನೂನುಗಳನ್ನು ಅನುಷ್ಠಾನಗೊಳಿಸುವಲ್ಲಿ ಯಶಸ್ಸು ಸಾಧಿಸಲಾಗಿದೆ. ಹೊಸ ನ್ಯಾಯ ಸಂಹಿತೆ ಮತ್ತು ಮೂರು ಅಪರಾಧ ಕಾನೂನುಗಳನ್ನು ಇಷ್ಟೊಂದು ಕಡಿಮೆ ಅವಧಿಯಲ್ಲಿ ಜಾರಿಗೆ ತಂದು ರಾಜ್ಯದಲ್ಲಿ ಶಿಕ್ಷೆಯ ಪ್ರಮಾಣವನ್ನು ಶೇಕಡಾ 53.2 ಕ್ಕೆ ಹೆಚ್ಚಿಸಿದ್ದಕ್ಕಾಗಿ ಅವರು ಗೋವಾ ಮುಖ್ಯಮಂತ್ರಿ ಮತ್ತು ಗೋವಾ ಪೊಲೀಸರಿಗೆ ಧನ್ಯವಾದ ತಿಳಿಸಿದರು. ಇದರರ್ಥ ನೋಂದಾಯಿತ ಎಫ್‌ ಆರ್‌ ಗಳಲ್ಲಿ ಶಿಕ್ಷೆಯನ್ನು ಖಚಿತಪಡಿಸುವ ದರದಲ್ಲಿ ಸುಮಾರು ಶೇಕಡಾ 30 ರಷ್ಟು ಹೆಚ್ಚಳವಾಗಿದೆ ಎಂದು ಅವರು ಹೇಳಿದರು.

ಮಾದಕ ವಸ್ತುಗಳು ನಮ್ಮ ಮುಂದಿನ ಪೀಳಿಗೆಯನ್ನು ನಾಶಪಡಿಸುವ ಅಪರಾಧವಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಮಾದಕ ವಸ್ತುಗಳಿಂದ ಬರುವ ಗಳಿಕೆಯನ್ನು ಭಯೋತ್ಪಾದನೆಗೂ ಬಳಸಲಾಗುತ್ತದೆ ಎಂದು ಅವರು ಹೇಳಿದರು. ನಾರ್ಕೋ-ಟೆರರ್ ಮಾಡ್ಯೂಲ್ ವಿಶ್ವದ ಅನೇಕ ದೇಶಗಳಲ್ಲಿ ಸಕ್ರಿಯವಾಗಿದೆ ಮತ್ತು ಇಡೀ ಜಗತ್ತು ಇಂದು ಈ ಸಮಸ್ಯೆಯೊಂದಿಗೆ ಹೋರಾಡುತ್ತಿದೆ. 2019 ರಿಂದ, ಇದನ್ನು ತಡೆಯಲು ನಾವು ದೃಢವಾದ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇವೆ ಎಂದು ಅವರು ಹೇಳಿದರು. ಇದಕ್ಕಾಗಿ ನಾವು ವ್ಯವಸ್ಥೆಗಳನ್ನು ಬದಲಾಯಿಸಿದ್ದೇವೆ, ಜಾಲಗಳನ್ನು ಹಿಡಿದಿದ್ದೇವೆ, ಹಣಕಾಸಿನ ಸರಪಳಿಯನ್ನು ಮುರಿದಿದ್ದೇವೆ ಮತ್ತು ವ್ಯಸನಿಗಳನ್ನು ಮಾದಕ ವಸ್ತುವಿನಿಂದ ಮುಕ್ತಗೊಳಿಸಲು ಅವರಿಗೆ ಬೆಂಬಲವನ್ನೂ ನೀಡಿದ್ದೇವೆ ಎಂದು ಶ್ರೀ ಶಾ ಹೇಳಿದರು. 2014 ಕ್ಕೂ ಮೊದಲು, ಈ ಹೋರಾಟವನ್ನು ಬಿಡಿ ಬಿಡಿಯಾಗಿ ನಡೆಸಲಾಗುತ್ತಿತ್ತು, ಮತ್ತು ಸಣ್ಣ ಪ್ರಮಾಣದ ವಶಪಡಿಸಿಕೊಳ್ಳುವಿಕೆಗಳು ಹಾಗೂ ಸಣ್ಣ ಆರೋಪಿಗಳನ್ನು ಹಿಡಿಯುವ ಮೂಲಕ ತೃಪ್ತಿ ಪಡಲಾಗುತ್ತಿತ್ತು ಎಂದು ಶ್ರೀ ಶಾ ಹೇಳಿದರು. ಆದರೆ 2019 ರಿಂದ, ಮೋದಿ ಸರ್ಕಾರವು ಈ ವಿಷಯವನ್ನು ರಾಷ್ಟ್ರೀಯ ಭದ್ರತೆಯ ಆದ್ಯತೆಯನ್ನಾಗಿ ಮಾಡಿದೆ. ಮಾದಕ ವಸ್ತುಗಳ ವಿರುದ್ಧದ ಹೋರಾಟವು ಕಡತಗಳು ಮತ್ತು ಪ್ರತ್ಯೇಕ ಸಂಸ್ಥೆಗಳ ಕ್ರಮಗಳನ್ನು ಮೀರಿ ಬೆಳೆದಿದೆ ಮತ್ತು ಈಗ ರಾಷ್ಟ್ರೀಯ ಮಟ್ಟದಲ್ಲಿ ಸಮನ್ವಯದೊಂದಿಗೆ ನಿರಂತರ ಅಭಿಯಾನವಾಗಿದೆ ಎಂದು ಅವರು ಹೇಳಿದರು.

2019 ರಲ್ಲಿ ನಾಲ್ಕು ಹಂತಗಳ NCORD ವ್ಯವಸ್ಥೆಯನ್ನು ಸೃಷ್ಟಿಸಲಾಗಿದೆ ಎಂದು ಗೃಹ ಸಚಿವರಾದರು ಹೇಳಿದರು. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮೀಸಲಾದ ಮಾದಕ ವಸ್ತು ನಿಗ್ರಹ ಕಾರ್ಯಪಡೆಗಳ ರಚನೆಗಾಗಿ ಮಾದರಿಯನ್ನು ಕಳುಹಿಸಲಾಗಿದೆ ಮತ್ತು ಜಂಟಿ ಸಮನ್ವಯ ಸಮಿತಿಯನ್ನು ರಚಿಸಲಾಗಿದೆ. ಕೇಂದ್ರ ಸಂಸ್ಥೆಗಳು, ರಾಜ್ಯ ಸರ್ಕಾರಗಳು ಮತ್ತು ಅವುಗಳ ಇಲಾಖೆಗಳ ಸಮನ್ವಯದೊಂದಿಗೆ, ಬೃಹತ್ ಜಾಲಗಳು, ಅಂತರರಾಜ್ಯ ಮತ್ತು ಅಂತರರಾಷ್ಟ್ರೀಯ ಸಂಪರ್ಕಗಳು ಹಾಗೂ ಕಾರ್ಯಾಚರಣೆಯ ಕೊರತೆಗಳನ್ನು ಪರಿಹರಿಸಲು ವೈಜ್ಞಾನಿಕ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ. ಮಾದಕ ವಸ್ತು ವ್ಯಸನಿ ಯುವಜನರ ಪುನರ್ವಸತಿಗಾಗಿ ‘1933’ ಮಾನಸ್ ಹೆಲ್ಪ್‌ ಲೈನ್ ಪ್ರಾರಂಭಿಸಲಾಯಿತು. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ ಸಿ ಬಿ) ದ ಸಿಬ್ಬಂದಿ ವ್ಯವಸ್ಥೆಯನ್ನು ಪುನರ್ರಚಿಸಲಾಯಿತು. ನಿದಾನ್ (NIDAAN) ಪೋರ್ಟಲ್ ಮೂಲಕ ಮಾದಕ ವಸ್ತು ಅಪರಾಧಿಗಳ ರಾಷ್ಟ್ರೀಯ ಡೇಟಾಬೇಸ್ ಅನ್ನು ರಚಿಸಲಾಯಿತು. CCTNS ಡೇಟಾ ಮತ್ತು ಸಮಗ್ರ ಡೇಟಾ ಸಂಯೋಜನೆಯ ಮೂಲಕ, ದೇಶಾದ್ಯಂತ ಹಾಟ್‌ಸ್ಪಾಟ್‌ ಗಳು, ಕಾರ್ಯವಿಧಾನಗಳು ಮತ್ತು ವಶಪಡಿಸಿಕೊಳ್ಳುವಿಕೆಗಳ ಡೇಟಾ-ಆಧಾರಿತ ನಕ್ಷೆಯನ್ನು ಸಿದ್ಧಪಡಿಸಲಾಯಿತು. ಬಾಟಮ್-ಟು-ಟಾಪ್ ಮತ್ತು ಟಾಪ್-ಟು-ಬಾಟಮ್ ಎರಡೂ ವಿಧಾನಗಳೊಂದಿಗೆ ತನಿಖೆಯ ಹೊಸ ಕಲ್ಪನೆಯನ್ನು ಅಳವಡಿಸಿಕೊಳ್ಳಲಾಯಿತು. ಈಗ ಸಣ್ಣ ಪ್ರಮಾಣದ ಮಾದಕ ವಸ್ತು ಪ್ಯಾಕೆಟ್ ವಶಪಡಿಸಿಕೊಂಡರೂ, ಅದು ದೇಶದಲ್ಲಿ ಎಲ್ಲಿಂದ ಹುಟ್ಟಿಕೊಂಡಿತು ಎಂಬುದನ್ನು ತನಿಖೆ ಮಾಡಲಾಗುತ್ತದೆ ಎಂದು ಅವರು ಹೇಳಿದರು. ಅದೇ ರೀತಿ, ಗಡಿಯಲ್ಲಿ ದೊಡ್ಡ ರವಾನೆಯನ್ನು ವಶಪಡಿಸಿಕೊಂಡರೆ, ಅದು ಸಣ್ಣ ಪ್ಯಾಕೆಟ್‌ ಗಳ ರೂಪದಲ್ಲಿ ಯುವಕರನ್ನು ಹೇಗೆ ತಲುಪಲಿದೆ ಎಂಬುದನ್ನು ಪತ್ತೆಹಚ್ಚಲಾಗುತ್ತದೆ. ಈ ರೀತಿಯಾಗಿ, ಇಡೀ ಜಾಲದ ರಿವರ್ಸ್ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಸಚಿವರಾದರು ಹೇಳಿದರು.

ಆರ್ಥಿಕ ತನಿಖೆ ಮತ್ತು ಪಿಐಟಿ-ಎನ್‌ ಡಿ ಪಿ ಎಸ್‌ ಗೆ ವಿಶೇಷ ಒತ್ತು ನೀಡಲಾಗಿದೆ ಮತ್ತು ಉನ್ನತ ಮಟ್ಟದ ಮೀಸಲಾದ ಕಾರ್ಯಪಡೆಯನ್ನು ರಚಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಡಾರ್ಕ್ ನೆಟ್, ಎನ್‌ಕ್ರಿಪ್ಟ್ ಮಾಡಿದ ಸಂವಹನ, ಕ್ರಿಪ್ಟೋ ವಹಿವಾಟುಗಳು ಮತ್ತು ಡೆಡ್ ಡ್ರಾಪ್ ಡೆಲಿವರಿ ವಿರುದ್ಧ ತಂತ್ರಜ್ಞಾನ ಆಧಾರಿತ ತನಿಖೆಯನ್ನು ಪ್ರಾರಂಭಿಸಲಾಗಿದೆ. ಎ ಎನ್‌ ಟಿ ಎಫ್‌ ನಲ್ಲಿ ಮೀಸಲಾದ ಡಾರ್ಕ್ ನೆಟ್-ಕ್ರಿಪ್ಟೋ ಸೆಲ್ ಅನ್ನು ರಚಿಸುವ ಕೆಲಸ ಪ್ರಾರಂಭವಾಗಿದೆ. ಪ್ರಿಕರ್ಸರ್‌ ಗಳು ಮತ್ತು ಸಿಂಥೆಟಿಕ್ ಡ್ರಗ್ಸ್‌ ಗಾಗಿ ಅಂತರ-ಸಚಿವಾಲಯ ವ್ಯವಸ್ಥೆಯನ್ನು ಸಹ ರಚಿಸಲಾಗಿದೆ. ಈ ಪ್ರಯತ್ನಗಳು ಉತ್ತಮ ಫಲಿತಾಂಶಗಳನ್ನು ನೀಡಿವೆ ಎಂದು ಅವರು ಹೇಳಿದರು. 2004 ರಿಂದ 2014 ರವರೆಗೆ, ವಿರೋಧ ಪಕ್ಷದ ಆಡಳಿತದಲ್ಲಿ, ಸುಮಾರು ₹40,000 ಕೋಟಿ ಮೌಲ್ಯದ 26 ಲಕ್ಷ ಕಿಲೋಗ್ರಾಂಗಳಷ್ಟು ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಶ್ರೀ ಶಾ ಹೇಳಿದರು. ಮತ್ತೊಂದೆಡೆ, ಮೋದಿಯವರ ನಾಯಕತ್ವದಲ್ಲಿ 2014 ರಿಂದ 2026 ರವರೆಗೆ, ಈ ವಶಪಡಿಸಿಕೊಳ್ಳುವಿಕೆ 1 ಕೋಟಿ 19 ಲಕ್ಷ ಕಿಲೋಗ್ರಾಂಗಿಂತಲೂ ಹೆಚ್ಚಾಗಿದ್ದು, ಇದರ ಮೌಲ್ಯ ಸುಮಾರು ₹1 ಲಕ್ಷ 89 ಸಾವಿರ ಕೋಟಿಯಾಗಿದೆ ಎಂದು ಶ್ರೀ ಶಾ ಹೇಳಿದರು. 2004 ರಿಂದ 2014 ರವರೆಗೆ, 3 ಲಕ್ಷ 36 ಸಾವಿರ ಕಿಲೋಗ್ರಾಂಗಳಷ್ಟು ಮಾದಕ ವಸ್ತುಗಳನ್ನು ನಾಶಪಡಿಸಲಾಗಿತ್ತು, ಆದರೆ 2014-26 ರಲ್ಲಿ, 48 ಲಕ್ಷ 68 ಸಾವಿರ ಕಿಲೋಗ್ರಾಂಗಳಷ್ಟು ಮಾದಕ ವಸ್ತುಗಳನ್ನು ನಾಶಪಡಿಸಲಾಗಿದೆ ಎಂದು ಅವರು ಹೇಳಿದರು.

NCORD ಯ 10 ಉನ್ನತ ಸಭೆಗಳು, 7 ಕಾರ್ಯಕಾರಿ ಸಭೆಗಳು, 277 ರಾಜ್ಯ ಮಟ್ಟದ ಸಭೆಗಳು ಮತ್ತು 16,798 ಜಿಲ್ಲಾ ಮಟ್ಟದ ಸಭೆಗಳು ನಡೆದಿವೆ ಎಂದು ಕೇಂದ್ರ ಗೃಹ ಸಚಿವರಾದರು ಹೇಳಿದರು. ಅಂತರರಾಷ್ಟ್ರೀಯ ಸಹಕಾರಕ್ಕಾಗಿ 46 ದೇಶಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ನಶಾ ಮುಕ್ತ ಭಾರತ ಅಭಿಯಾನದಡಿ 25 ಕೋಟಿ ನಾಗರಿಕರನ್ನು ಸಂಪರ್ಕಿಸಿ ಪ್ರಮಾಣ ವಚನ ಬೋಧಿಸಲಾಗಿದೆ. ಚಿಕಿತ್ಸೆ ಮತ್ತು ಪುನರ್ವಸತಿ ಅಡಿಯಲ್ಲಿ 5 ಲಕ್ಷದ 70 ಸಾವಿರ ನಾಗರಿಕರನ್ನು ವ್ಯಸನ ಮುಕ್ತಗೊಳಿಸಲಾಗಿದೆ. ಗೋವಾದಲ್ಲೂ ಇದೇ ಅವಧಿಯಲ್ಲಿ ಕ್ರಮವು ಸುಮಾರು ಮೂರು ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು.

ಜುಲೈ 2026 ರಿಂದ ಜುಲೈ 2029 ರವರೆಗಿನ ಮೂರು ವರ್ಷಗಳ ಕಾರ್ಯಯೋಜನೆ ಸಿದ್ಧಪಡಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಎಲ್ಲಾ ಗುರಿಗಳನ್ನು ನಿಗದಿತ ಸಮಯದೊಳಗೆ ಸಾಧಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ನಾವು ಮಾದಕ ವಸ್ತುಗಳ ವಿರುದ್ಧದ ಹೋರಾಟವನ್ನು ದೇಶದ ಅತಿದೊಡ್ಡ ರಾಷ್ಟ್ರೀಯ ಹೋರಾಟಗಳಲ್ಲಿ ಒಂದಾಗಿ ಮುನ್ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು. 2047 ರ ವೇಳೆಗೆ ಮಾದಕ ವಸ್ತು ಮುಕ್ತ ಯುವಶಕ್ತಿಯು ವಿಕಸಿತ ಭಾರತದ ಅಡಿಪಾಯವಾಗಬೇಕು ಎಂಬುದು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಗುರಿಯಾಗಿದೆ ಎಂದು ಅವರು ಹೇಳಿದರು. ಈ ಮಿಷನ್ ಅನ್ನು ಯಶಸ್ವಿಗೊಳಿಸಲು, ಗೃಹ ಸಚಿವಾಲಯ ಮತ್ತು ಎಲ್ಲಾ ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. 2026 ರಿಂದ 2029 ರವರೆಗಿನ ಅವಧಿಯನ್ನು ಮಿಷನ್ ಮೋಡ್ ಎಂದು ಘೋಷಿಸಲಾಗಿದೆ ಎಂದು ಅವರು ಹೇಳಿದರು. ಗಡುವುಗಳನ್ನು ನಿಗದಿಪಡಿಸಲಾಗಿದೆ, ವಿವಿಧ ಸಚಿವಾಲಯಗಳಿಗೆ ಹೊಣೆಗಾರಿಕೆಯನ್ನು ವಹಿಸಲಾಗಿದೆ, ಅಳೆಯಬಹುದಾದ ಫಲಿತಾಂಶಗಳನ್ನು ನಿಗದಿಪಡಿಸಲಾಗಿದೆ ಮತ್ತು ಫಲಿತಾಂಶ ಆಧಾರಿತ ಹೊಣೆಗಾರಿಕೆಯೊಂದಿಗೆ ತ್ರೈಮಾಸಿಕ ಪರಿಶೀಲನೆಗಳನ್ನು ಖಚಿತಪಡಿಸಲಾಗುವುದು. ಈ ಕಾರ್ಯಯೋಜನೆಯು ನಾಲ್ಕು ಆಧಾರಸ್ತಂಭಗಳನ್ನು ಹೊಂದಿದೆ ಎಂದು ಅವರು ಹೇಳಿದರು. ಮೊದಲನೆಯದು - ಗುಪ್ತಚರ ಮತ್ತು ಕಾರ್ಯಾಚರಣೆ ಆಧಾರಿತ ಜಾರಿ; ಎರಡನೆಯದು - ಪ್ರಿಕರ್ಸರ್ ಮತ್ತು ಸಿಂಥೆಟಿಕ್ ಡ್ರಗ್ಸ್ ನಿಯಂತ್ರಣ; ಮೂರನೆಯದು - ಬೇಡಿಕೆ ಮತ್ತು ಹಾನಿ ಕಡಿತ; ಮತ್ತು ನಾಲ್ಕನೆಯದು - ಸಾಮರ್ಥ್ಯ ವೃದ್ಧಿ ಮತ್ತು ಸಮನ್ವಯ. ಈ ಎಲ್ಲಾ ಸ್ತಂಭಗಳ ಮೂಲಕ ಮಾದಕ ವಸ್ತು ಕಿಂಗ್‌ಪಿನ್‌ ಗಳ ವಿವರಗಳನ್ನು ಸಿದ್ಧಪಡಿಸಲಾಗುವುದು, ಮಾದಕ ವಸ್ತುಗಳ ಜಾಲದ ಹಿಂದಿನ ಮತ್ತು ಮುಂದಿನ ಸಂಪರ್ಕಗಳ ಬಗ್ಗೆ ಸಮನ್ವಯ ಸಾಧಿಸಲಾಗುವುದು ಹಾಗೂ ವಾಣಿಜ್ಯ ಪ್ರಮಾಣದ ಮಾದಕ ವಸ್ತುಗಳನ್ನು ಒಳಗೊಂಡ ಪ್ರತಿಯೊಂದು ಪ್ರಕರಣದಲ್ಲೂ ಹಣಕಾಸು ತನಿಖೆಯ ಮೂಲಕ ಆರೋಪಿಗಳ ವಿರುದ್ಧ ಕ್ರಮವನ್ನು ಮತ್ತಷ್ಟು ಬಿಗಿಗೊಳಿಸಲಾಗುವುದು ಎಂದು ಅವರು ಹೇಳಿದರು. ಸ್ಕ್ಯಾನರ್‌ ಗಳ ಮೂಲಕ ಚುರುಕಾದ ಕಾವಲು ಕಾಯಲು ಬಿ ಎಸ್‌ ಎಫ್, ಸಿ ಐ ಎಸ್‌ ಎಫ್, ಭಾರತೀಯ ಕರಾವಳಿ ಕಾವಲು ಪಡೆ, ಕಸ್ಟಮ್ಸ್ ಮತ್ತು ಡಿ ಆರ್‌ ಐ ಗಳು ಅಪಾಯ-ಆಧಾರಿತ ಪ್ರೊಫೈಲಿಂಗ್ ಅನ್ನು ಕೈಗೊಳ್ಳಲಿವೆ ಮತ್ತು ಭೂ ಗಡಿಗಳು, ಬಂದರುಗಳು, ವಿಮಾನ ನಿಲ್ದಾಣಗಳು ಮತ್ತು ಕಾರ್ಗೋಗಳಲ್ಲಿ ಸ್ಕ್ಯಾನರ್‌ ಗಳನ್ನು ಅಳವಡಿಸಲಿವೆ ಎಂದು ಗೃಹ ಸಚಿವರಾದರು ಹೇಳಿದರು. ಸಿಬಿಐ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಇಂಟರ್‌ಪೋಲ್ ತಲೆಮರೆಸಿಕೊಂಡ ಅಪರಾಧಿಗಳನ್ನು ಕರೆತರುತ್ತವೆ. ಜಾರಿ ನಿರ್ದೇಶನಾಲಯ, ಹಣಕಾಸು ಗುಪ್ತಚರ ಘಟಕ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯು ಹಣದ ಜಾಡನ್ನು ಪತ್ತೆ ಹಚ್ಚುತ್ತವೆ ಎಂದು ಅವರು ಹೇಳಿದರು.

ಎನ್‌ ಸಿ ಸಿ, ಎನ್‌ ಎಸ್‌ ಎಸ್ ಮತ್ತು ಮೈ ಭಾರತ್ ಮೂಲಕ ಲಕ್ಷಾಂತರ ‘ನಶಾಮುಕ್ತಿ ಮಿತ್ರ’ರನ್ನು ಸಜ್ಜುಗೊಳಿಸಲಾಗುವುದು ಎಂದು ಶ್ರೀ ಅಮಿತ್ ಶಾ ಹೇಳಿದರು. ಶಿಕ್ಷಣ, ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯಗಳು, ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸೇರಿ ಶೈಕ್ಷಣಿಕ ಸಂಸ್ಥೆಗಳನ್ನು ಮಾದಕ ವಸ್ತು ಮುಕ್ತಗೊಳಿಸಲು ಸಂಕಲ್ಪ ಮಾಡುತ್ತಿವೆ ಎಂದು ಅವರು ಹೇಳಿದರು. ಸಾಮಾಜಿಕ ನ್ಯಾಯ, ಆರೋಗ್ಯ ಇಲಾಖೆ ಮತ್ತು ಕಾರಾಗೃಹ ಆಡಳಿತ ಒಟ್ಟಾಗಿ ಮಾದಕ ವಸ್ತು ಮುಕ್ತಿ ಕೇಂದ್ರಗಳ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸಿ 1,751 ಕ್ಕೆ ಕೊಂಡೊಯ್ಯಲಿವೆ. ಸುಮಾರು 10,000 ಸ್ವಯಂಸೇವಕರು ಈ ಅಭಿಯಾನದಲ್ಲಿ ಸೇವೆ ಸಲ್ಲಿಸಲಿದ್ದಾರೆ. ಸಾಮರ್ಥ್ಯ ವೃದ್ಧಿಗಾಗಿ, ಮಾರ್ಚ್ 2027 ರ ವೇಳೆಗೆ ಪ್ರತಿಯೊಂದು ರಾಜ್ಯದಲ್ಲಿ ಸಂಪೂರ್ಣ ಸಜ್ಜುಗೊಂಡ ಮಾದಕ ವಸ್ತು ನಿಗ್ರಹ ಕಾರ್ಯಪಡೆಯನ್ನು ರಚಿಸಲು ಶೇಕಡಾ 7 ರಷ್ಟು ಕೇಂದ್ರ ನೆರವು ನೀಡಲಾಗುವುದು. ವಿಧಿವಿಜ್ಞಾನ ವರದಿಗಳನ್ನು 30 ದಿನಗಳ ಒಳಗೆ ಪಡೆಯಲು ಗೃಹ ಸಚಿವಾಲಯವು ವ್ಯವಸ್ಥೆ ಮಾಡಲಿದೆ. ಈ ನಾಲ್ಕು ಸ್ತಂಭಗಳಲ್ಲಿ, 25 ಘಟಕಗಳು ಮತ್ತು 200 ಕ್ಕೂ ಹೆಚ್ಚು ಕ್ರಿಯಾ ಬಿಂದುಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ವಿದೇಶಿಯರಿಗೆ ಭಾರತಕ್ಕೆ ಸ್ವಾಗತವಿದೆ, ಆದರೆ ಮಾದಕ ವಸ್ತುಗಳೊಂದಿಗೆ ಅಲ್ಲ ಎಂದು ಕೇಂದ್ರ ಗೃಹ ಸಚಿವರಾದರು ಹೇಳಿದರು. ಚತುಷ್ಕೋನ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ, ಡೆತ್ ಟ್ರಯಾಂಗಲ್ ಮತ್ತು ಡೆತ್ ಕ್ರೆಸೆಂಟ್ ಮಾರ್ಗಗಳ ಮೂಲಕ ದೇಶಕ್ಕೆ ಮಾದಕ ವಸ್ತುಗಳ ಕಳ್ಳಸಾಗಣೆಯನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು. ದೇಶದಿಂದ ನಕ್ಸಲಿಸಂ ಅನ್ನು ನಿರ್ಮೂಲನೆ ಮಾಡಿದಂತೆಯೇ, ಮಾದಕ ವಸ್ತುಗಳ ಸಮಸ್ಯೆಯನ್ನು ಸಹ ಅದೇ ಸಂಕಲ್ಪದೊಂದಿಗೆ ನಿರ್ಮೂಲನೆ ಮಾಡಲಾಗುವುದು ಎಂದು ಅವರು ಹೇಳಿದರು.

 

******


(ಪ್ರಕಟಣೆ ಐ.ಡಿ.: 2307253) ವಿಸಿಟರ್ ಕೌಂಟರ್ : 12
ಪ್ರಕಟಣೆಯನ್ನು ಇದರಲ್ಲಿ ಓದಿ: Tamil , English , Urdu , Marathi , हिन्दी , Gujarati , Odia , Malayalam