ರೈಲ್ವೇ ಸಚಿವಾಲಯ
azadi ka amrit mahotsav

‘ಸುಧಾರಣಾ ಎಕ್ಸ್‌ ಪ್ರೆಸ್’ ಅಡಿಯಲ್ಲಿ ಭಾರತದ ಸರಕು ಸಾಗಣೆ ಕಾರ್ಯಾಚರಣೆಯನ್ನು ಬಲಪಡಿಸಲು ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಂದ ಮತ್ತೆ ಎಂಟು ಪ್ರಮುಖ ರಚನಾತ್ಮಕ ಸುಧಾರಣೆಗಳ ಅನಾವರಣ


ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿತಗೊಳಿಸಲು, ಪೂರೈಕೆ ಸರಪಳಿಯನ್ನು ಸುಧಾರಿಸಲು, ಖಾಸಗಿ ಹೂಡಿಕೆಯನ್ನು ಉತ್ತೇಜಿಸಲು ಮತ್ತು ಸ್ವಚ್ಛ ಸರಕು ಸಾಗಣೆಗೆ ಉತ್ತೇಜನ ನೀಡಲು ಹೊಸ ನೀತಿಗಳು

ರೈಲ್ವೆ ಪರಿಸರ ವ್ಯವಸ್ಥೆಯಲ್ಲಿ ವೇಗವಾಗಿ ಯೋಜನೆಗಳ ಅನುಷ್ಠಾನ ಹಾಗೂ ನಾವೀನ್ಯತೆಯನ್ನು ಉತ್ತೇಜಿಸಲಿರುವ ಸುಧಾರಣೆಗಳು: ಅಶ್ವಿನಿ ವೈಷ್ಣವ್

प्रविष्टि तिथि: 14 JUL 2026 5:50PM by PIB Bengaluru

‘ಸುಧಾರಣಾ ಎಕ್ಸ್‌ ಪ್ರೆಸ್’ ಅನ್ನು ಮುಂದುವರಿಸಿರುವ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು, ಭಾರತೀಯ ರೈಲ್ವೆಯನ್ನು ಆಧುನೀಕರಿಸಲು ಇಂದು ಮತ್ತೆ ಎಂಟು ರಚನಾತ್ಮಕ ಸುಧಾರಣೆಗಳನ್ನು ಪ್ರಕಟಿಸಿದ್ದಾರೆ. ಇದರೊಂದಿಗೆ, ಈ ಉಪಕ್ರಮದ ಅಡಿಯಲ್ಲಿ ಜಾರಿಗೊಳಿಸಲಾದ ಒಟ್ಟು ಸುಧಾರಣೆಗಳ ಸಂಖ್ಯೆ 17ಕ್ಕೆ ತಲುಪಿದೆ. ಹೊಸ ಸುಧಾರಣೆಗಳು ಸರಕು ಸಾಗಣೆ, ಲಾಜಿಸ್ಟಿಕ್ಸ್, ನಿರ್ಮಾಣ ಪದ್ಧತಿಗಳು, ಯೋಜನೆಗಳ ಅನುಷ್ಠಾನ, ವ್ಯಾಗನ್ ವಿನ್ಯಾಸ, ಕೌಶಲ್ಯ ವೃದ್ಧಿ ಮತ್ತು ಉದ್ಯಮ ಸ್ನೇಹಿ ವಾತಾವರಣದಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲಿವೆ.

ನವದೆಹಲಿಯ ರೈಲು ಭವನದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀ ವೈಷ್ಣವ್ ಅವರು, ಭವಿಷ್ಯದ ಅಗತ್ಯಗಳಿಗೆ ಸಜ್ಜಾದ ರೈಲ್ವೆ ವ್ಯವಸ್ಥೆಯನ್ನು ನಿರ್ಮಿಸಲು ಭಾರತೀಯ ರೈಲ್ವೆಯು ಸರಣಿ ಸುಧಾರಣೆಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದರು. ದಕ್ಷತೆಯನ್ನು ಹೆಚ್ಚಿಸಲು, ನಾವೀನ್ಯತೆಯನ್ನು ಉತ್ತೇಜಿಸಲು ಮತ್ತು ರೈಲ್ವೆ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು 52 ವಾರಗಳಲ್ಲಿ 52 ಸುಧಾರಣೆಗಳನ್ನು ಜಾರಿಗೆ ತರುವ ಸಚಿವಾಲಯದ ಗುರಿಯ ಭಾಗವಾಗಿ ಸುಧಾರಣೆಗಳನ್ನು ತರಲಾಗಿದೆ. ಸುಧಾರಣಾ ಎಕ್ಸ್‌ ಪ್ರೆಸ್ ಉಪಕ್ರಮದ ಅಡಿಯಲ್ಲಿ ಹಿಂದೆ ಪ್ರಕಟಿಸಲಾದ ಸುಧಾರಣೆಗಳು ಈಗಾಗಲೇ ಉತ್ತೇಜಕ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸಿವೆ ಎಂದು ಶ್ರೀ ವೈಷ್ಣವ್ ಹೇಳಿದರು.

ಸುಧಾರಣೆ 10: ಫ್ಲೈ ಆಶ್ (ಹಾರು ಬೂದಿ) ಸಾಗಣೆ

ಭಾರತವು ವಾರ್ಷಿಕವಾಗಿ ಸುಮಾರು 340 ಮಿಲಿಯನ್ ಟನ್ ಹಾರು ಬೂದಿಯನ್ನು ಉತ್ಪಾದಿಸುತ್ತದೆ, ಅದರಲ್ಲಿ ಸುಮಾರು 96 ಮಿಲಿಯನ್ ಟನ್ ಬೂದಿಯನ್ನು ಸಿಮೆಂಟ್ ಉದ್ಯಮವು ಬಳಸಿಕೊಳ್ಳುತ್ತದೆ ಎಂದು ಶ್ರೀ ವೈಷ್ಣವ್ ಹೇಳಿದರು. ಭಾರತೀಯ ರೈಲ್ವೆಯು 2025-26ರ ಆರ್ಥಿಕ ವರ್ಷದಲ್ಲಿ ಸುಮಾರು 13 ಮಿಲಿಯನ್ ಟನ್ ಹಾರು ಬೂದಿಯನ್ನು ಸಾಗಿಸಿದೆ, ಇದು ದೇಶದ ಒಟ್ಟು ಹಾರು ಬೂದಿ ಉತ್ಪಾದನೆಯ ಸುಮಾರು ಶೇಕಡಾ ನಾಲ್ಕರಷ್ಟಾಗಿದೆ ಎಂದು ಅವರು ಹೇಳಿದರು.

ಸಾಂಪ್ರದಾಯಿಕವಾಗಿ ಹಾರು ಬೂದಿಯನ್ನು ತೆರೆದ ವ್ಯಾಗನ್‌ ಗಳ ಮೂಲಕ ಸಾಗಿಸಲಾಗುತ್ತಿತ್ತು, ಇದು ಲೋಡಿಂಗ್, ಸಾಗಣೆ ಮತ್ತು ಅನ್‌ಲೋಡಿಂಗ್ ಸಮಯದಲ್ಲಿ ಧೂಳಿನ ಮಾಲಿನ್ಯಕ್ಕೆ ಕಾರಣವಾಗುತ್ತಿತ್ತು ಎಂದು ಅವರು ಹೇಳಿದರು. ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ದೊಡ್ಡ ಬೂದಿ ಕೊಳಗಳಲ್ಲಿ ಹಾರುಬೂದಿಯನ್ನು ಸಂಗ್ರಹಿಸಿಡುವುದು ಕೂಡ ದೊಡ್ಡ ಪರಿಸರ ಸವಾಲನ್ನು ಒಡ್ಡುತ್ತದೆ ಎಂದು ಅವರು ಹೇಳಿದರು.

ಸಮಸ್ಯೆಗಳನ್ನು ಪರಿಹರಿಸಲು, ಭಾರತೀಯ ರೈಲ್ವೆಯು ಹಾರುಬೂದಿಗಾಗಿ ಹೊಸ ಕಂಟೇನರ್ ಆಧಾರಿತ ಸಾಗಣೆ ವ್ಯವಸ್ಥೆಯನ್ನು ಪರಿಚಯಿಸಿದೆ. ಹೊಸ ನೀತಿಯಡಿಯಲ್ಲಿ, ಸಾಗಣೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಎಸ್ ಒ-ಸ್ಟ್ಯಾಂಡರ್ಡ್ ಕಂಟೇನರ್‌ ಗಳನ್ನು ಬಳಸಲಾಗುತ್ತದೆ. ಈ ಕಂಟೇನರ್‌ ಗಳನ್ನು ಟಾಪ್-ಲೋಡಿಂಗ್ ವ್ಯವಸ್ಥೆಗಳ ಮೂಲಕ ನೇರವಾಗಿ ವಿದ್ಯುತ್ ಸ್ಥಾವರದಿಂದ ಲೋಡ್ ಮಾಡಬಹುದು ಮತ್ತು ಧೂಳಿನ ಮಾಲಿನ್ಯವನ್ನು ಉಂಟುಮಾಡದೆ ಸೈಡ್-ಡಿಸ್ಚಾರ್ಜ್ ಅಥವಾ ನ್ಯೂಮ್ಯಾಟಿಕ್ ಸಿಸ್ಟಮ್‌ ಗಳನ್ನು ಬಳಸಿ ಅನ್‌ಲೋಡ್ ಮಾಡಬಹುದು ಎಂದು ಅವರು ಹೇಳಿದರು.‌

ಮುಚ್ಚಿದ ಕಂಟೇನರ್ ವ್ಯವಸ್ಥೆಯು ಮಾಲಿನ್ಯ ಮುಕ್ತ ಸಾಗಣೆಯನ್ನು ಸಕ್ರಿಯಗೊಳಿಸುತ್ತದೆ, ಸಿಮೆಂಟ್ ಕಾರ್ಖಾನೆಗಳಿಗೆ ಅಗತ್ಯವಿರುವವರೆಗೆ ಆವರಣದೊಳಗೆ ಸುರಕ್ಷಿತವಾಗಿ ಸಂಗ್ರಹಿಸಲು ಅನುಕೂಲ ಮಾಡಿಕೊಡುತ್ತದೆ ಮತ್ತು ಲಾಜಿಸ್ಟಿಕ್ಸ್ ದಕ್ಷತೆಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ ಎಂದು ಶ್ರೀ ವೈಷ್ಣವ್ ಹೇಳಿದರು. ಈ ಕಂಟೇನರ್‌ ಗಳನ್ನು ರೀಚ್ ಸ್ಟ್ಯಾಕರ್‌ ಗಳ ಮೂಲಕ ನಿರ್ವಹಿಸಬಹುದು, ಇದು ವಿದ್ಯುತ್ ಸ್ಥಾವರಗಳಿಂದ ಸಿಮೆಂಟ್ ಕಾರ್ಖಾನೆಗಳಿಗೆ ತಡೆರಹಿತ ಆರಂಭದಿಂದ ಅಂತ್ಯದವರೆಗೆ (ಎಂಡ್-ಟು-ಎಂಡ್) ಚಲನೆಯನ್ನು ಅನುಮತಿಸುತ್ತದೆ. ಈ ಸುಧಾರಣೆಯು ಹಾರುಬೂದಿಯ ರೈಲು ಸಾಗಣೆಯನ್ನು ಹೆಚ್ಚಿಸುವ, ರಸ್ತೆ ಸಾರಿಗೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮತ್ತು ಪರಿಸರ ಸವಾಲನ್ನು ಆರ್ಥಿಕವಾಗಿ ಉತ್ಪಾದಕ ಸಂಪನ್ಮೂಲವನ್ನಾಗಿ ಪರಿವರ್ತಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ಸುಧಾರಣೆ 11: ಕಂಟೇನರ್ ವಲಯದಲ್ಲಿ ಸುಧಾರಣೆಗಳು

ಬೃಹತ್ ಸರಕುಗಳನ್ನು ಹೊರತುಪಡಿಸಿ ರೈಲ್ವೆ ಸರಕು ಸಾಗಣೆಯನ್ನು ವೈವಿಧ್ಯಗೊಳಿಸಲು ಹೆಚ್ಚಿನ ಕಂಟೇನರೀಕರಣದ ಅಗತ್ಯವಿದೆ. ಕಂಟೇನರ್ ಸಂಚಾರವನ್ನು ಉತ್ತೇಜಿಸಲು, ಭಾರತೀಯ ರೈಲ್ವೆಯು ಕಂಟೇನರ್ ರೈಲು ಆಪರೇಟರ್ ಪರವಾನಗಿ ಚೌಕಟ್ಟಿನಲ್ಲಿ ಪ್ರಮುಖ ರಚನಾತ್ಮಕ ಸುಧಾರಣೆಯನ್ನು ಕೈಗೊಂಡಿದೆ ಎಂದು ಕೇಂದ್ರ ಸಚಿವರು ಹೇಳಿದರು.

ಅಸ್ತಿತ್ವದಲ್ಲಿರುವ ವ್ಯವಸ್ಥೆಯಡಿಯಲ್ಲಿ, ಕಂಟೇನರ್ ರೈಲು ಆಪರೇಟರ್ (ಸಿಟಿಒ) ಪರವಾನಗಿಗಳನ್ನು ನಾಲ್ಕು ವರ್ಗಗಳ ಅಡಿಯಲ್ಲಿ (ವರ್ಗ I-IV) ನೀಡಲಾಗುತ್ತಿತ್ತು, ವರ್ಗ-I ಕ್ಕೆ ₹₹50 ಕೋಟಿ ಮತ್ತು ಇತರ ಪ್ರತಿಯೊಂದು ವರ್ಗಗಳಿಗೆ ₹10 ಕೋಟಿ ನೋಂದಣಿ ಶುಲ್ಕ ಇರುತ್ತಿತ್ತು, ಜೊತೆಗೆ ಮಾರ್ಗ-ನಿರ್ದಿಷ್ಟ ನಿರ್ಬಂಧಗಳು ಮತ್ತು ವಿಭಿನ್ನ ನೋಂದಣಿ ಅವಶ್ಯಕತೆಗಳಿದ್ದವು. ಇದನ್ನು ಈಗ ಒಂದೇ ಏಕೀಕೃತ ಪ್ಯಾನ್-ಇಂಡಿಯಾ (ಸಮಗ್ರ ಭಾರತ) ಕಂಟೇನರ್ ರೈಲು ಆಪರೇಟರ್ ಪರವಾನಗಿಯೊಂದಿಗೆ ಬದಲಾಯಿಸಲಾಗಿದೆ ಎಂದು ಅವರು ಹೇಳಿದರು.

ಹೊಸ ಚೌಕಟ್ಟಿನಡಿಯಲ್ಲಿ, ಆಪರೇಟರ್‌ ಗಳು ಯಾವುದೇ ವರ್ಗ ಆಧಾರಿತ ನಿರ್ಬಂಧಗಳಿಲ್ಲದೆ ಇಡೀ ಭಾರತೀಯ ರೈಲ್ವೆ ಜಾಲದಾದ್ಯಂತ ಕಂಟೇನರ್ ರೈಲುಗಳನ್ನು ಓಡಿಸಲು ಸಾಧ್ಯವಾಗುತ್ತದೆ. ನೋಂದಣಿ ವ್ಯವಸ್ಥೆಯನ್ನು ಸಹ ಎಲ್ಲಾ ಮಾರ್ಗಗಳಿಗೂ ಅನ್ವಯವಾಗುವಂತೆ ₹25 ಕೋಟಿಯ ಏಕರೂಪದ ಮರುಪಾವತಿಸಲಾಗದ ನೋಂದಣಿ ಶುಲ್ಕದ ಮೂಲಕ ಸರಳಗೊಳಿಸಲಾಗಿದೆ.

ಅನುಮತಿಗಳು ಇಪ್ಪತ್ತು ವರ್ಷಗಳವರೆಗೆ ಮಾನ್ಯವಾಗಿರುತ್ತವೆ ಮತ್ತು ಯಶಸ್ವಿ ಕಾರ್ಯಾಚರಣೆಗಳಿಗೆ ಒಳಪಟ್ಟು ಯಾವುದೇ ನವೀಕರಣ ಅಥವಾ ವಿಸ್ತರಣೆ ಶುಲ್ಕವನ್ನು ಪಾವತಿಸದೆಯೇ ನಂತರ ವಿಸ್ತರಿಸಬಹುದು ಎಂದು ಶ್ರೀ ವೈಷ್ಣವ್ ಹೇಳಿದರು. ಸರಳಗೊಳಿಸಲಾದ ಪರವಾನಗಿ ಚೌಕಟ್ಟು ಉದ್ಯಮ ಸ್ನೇಹಿ ವಾತಾವರಣವನ್ನು ಸುಧಾರಿಸುವ, ಹೆಚ್ಚಿನ ಖಾಸಗಿ ಭಾಗವಹಿಸುವಿಕೆಯನ್ನು ಉತ್ತೇಜಿಸುವ, ಕಂಟೇನರೀಕರಣವನ್ನು ಹೆಚ್ಚಿಸುವ, ರೈಲ್ವೆಗೆ ಹೆಚ್ಚಿನ ಬೃಹತ್ ಅಲ್ಲದ ಸರಕುಗಳನ್ನು ಆಕರ್ಷಿಸುವ, ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡುವ ಮತ್ತು ದೇಶದ ಸರಕು ಸಾಗಣೆ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ನಿರೀಕ್ಷೆಯಿದೆ.

ಸುಧಾರಣೆ 12: ರಸಗೊಬ್ಬರ ಸಾಗಣೆ

ಕೃಷಿ ವಲಯಕ್ಕೆ ರಸಗೊಬ್ಬರ ಸಾಗಣೆಯ ಪ್ರಾಮುಖ್ಯತೆಯನ್ನು ಉಲ್ಲೇಖಿಸಿದ ಶ್ರೀ ವೈಷ್ಣವ್, ಭಾರತೀಯ ರೈಲ್ವೆಯು ಪ್ರಸ್ತುತ ದೇಶದಲ್ಲಿ ರಸಗೊಬ್ಬರ ಸಾಗಣೆಯ ಸುಮಾರು ಶೇಕಡಾ 85 ರಷ್ಟನ್ನು ನಿಭಾಯಿಸುತ್ತಿದೆ ಎಂದು ಹೇಳಿದರು.

ಅಸ್ತಿತ್ವದಲ್ಲಿರುವ ಸರಕು ಸಾಗಣೆ ಶುಲ್ಕ ವ್ಯವಸ್ಥೆಯು ಸುಮಾರು ಐವತ್ತು ವಿಭಿನ್ನ ಸ್ಲ್ಯಾಬ್‌ ಗಳನ್ನು ಹೊಂದಿದ್ದು, ಕಾರ್ಯಾಚರಣೆಯನ್ನು ಸಂಕೀರ್ಣಗೊಳಿಸಿತ್ತು ಎಂದು ಅವರು ಹೇಳಿದರು. ಹೊಸ ಸುಧಾರಣೆಯ ಅಡಿಯಲ್ಲಿ, ಸರಕು ಸಾಗಣೆ ಶುಲ್ಕವನ್ನು ಪ್ರತಿ ಟನ್‌ ಗೆ ಪ್ರತಿ ಕಿಲೋಮೀಟರ್ ಆಧಾರದ ಮೇಲೆ ಮೂರು ವ್ಯತ್ಯಾಸಗಳನ್ನು ಒಳಗೊಂಡ ತರ್ಕಬದ್ಧ ಸುಂಕ ರಚನೆಯೊಂದಿಗೆ ಸರಳಗೊಳಿಸಲಾಗಿದೆ ಎಂದು ಹೇಳಿದರು.

ಸುಧಾರಣೆಯು ಕಂಟೇನರ್‌ ಗಳ ಮೂಲಕ ರಸಗೊಬ್ಬರಗಳನ್ನು ಸಾಗಿಸಲು ಅನುಮತಿಸುತ್ತದೆ. ಒಂದೇ ಗಮ್ಯಸ್ಥಾನದಲ್ಲಿ ಸಂಪೂರ್ಣ ಅನ್‌ಲೋಡಿಂಗ್ ಆಗುವವರೆಗೆ ಇಡೀ ರೇಕ್ ಅನ್ನು ತಡೆಹಿಡಿಯಲಾಗುತ್ತಿದ್ದ ಹಿಂದಿನ ವ್ಯವಸ್ಥೆಯಂತಲ್ಲದೆ, ವೈಯಕ್ತಿಕ ಕಂಟೇನರ್‌ ಗಳನ್ನು ಈಗ ಬೇಡಿಕೆಗೆ ಅನುಗುಣವಾಗಿ ರೇಕ್ ಪಾಯಿಂಟ್‌ ಗಳಲ್ಲಿ ಅನ್‌ಲೋಡ್ ಮಾಡಬಹುದು ಮತ್ತು ಸಂಗ್ರಹಿಸಬಹುದು. ಇದು ವಿತರಕರ ಅಗತ್ಯತೆಗಳು ಮತ್ತು ಸಾಮರ್ಥ್ಯದ ಆಧಾರದ ಮೇಲೆ ಹಂತ-ಹಂತದ ವಿತರಣೆಯನ್ನು ಸಕ್ರಿಯಗೊಳಿಸುತ್ತದೆ.

ಕಂಟೇನರ್ ಆಧಾರಿತ ಸಾಗಣೆಯು ವ್ಯಾಗನ್ ಟರ್ನ್‌ಅರೌಂಡ್ (ತಿರುಗುವಿಕೆ ಸಮಯ) ಅನ್ನು ಸುಧಾರಿಸುತ್ತದೆ, ರೇಕ್‌ ಗಳ ತಡೆಹಿಡಿಯುವಿಕೆಯನ್ನು ಕಡಿಮೆ ಮಾಡುತ್ತದೆ, ವಿತರಣೆಯನ್ನು ಸುಲಭಗೊಳಿಸುತ್ತದೆ, ರಸಗೊಬ್ಬರಗಳನ್ನು ಮಳೆ ಮತ್ತು ಹವಾಮಾನ ಸಂಬಂಧಿತ ಹಾನಿಗಳಿಂದ ರಕ್ಷಿಸುತ್ತದೆ ಮತ್ತು ಒಟ್ಟಾರೆ ಲಾಜಿಸ್ಟಿಕ್ಸ್ ದಕ್ಷತೆಯನ್ನು ಸುಧಾರಿಸುತ್ತದೆ ಎಂದು ಸಚಿವರು ಹೇಳಿದರು.

ಸುಧಾರಣೆ 13: ರೈಲ್ವೆ ಯೋಜನೆಗಳು ಮತ್ತು ಕಾಮಗಾರಿಗಳಲ್ಲಿ ಕುಶಲಕರ್ಮಿಗಳ ಕೌಶಲ್ಯ ತರಬೇತಿ ನೀತಿ

ರೈಲ್ವೆ ಮೂಲಸೌಕರ್ಯ ಯೋಜನೆಗಳು ವಿಶೇಷ ಕೌಶಲ್ಯಗಳು, ನಿಖರ ಎಂಜಿನಿಯರಿಂಗ್ ಮತ್ತು ಕಟ್ಟುನಿಟ್ಟಾದ ಗುಣಮಟ್ಟದ ಮಾನದಂಡಗಳ ಪಾಲನೆಯನ್ನು ಬಯಸುವ ಸುರಕ್ಷತೆ-ಸೂಕ್ಷ್ಮ ಕಾರ್ಯಾಚರಣೆಗಳನ್ನು ಒಳಗೊಂಡಿರುತ್ತವೆ ಎಂದು ಶ್ರೀ ವೈಷ್ಣವ್ ಹೇಳಿದರು.

ಸಮರ್ಥ ಮಾನವಶಕ್ತಿಯ ನಿಯೋಜನೆಯನ್ನು ಖಚಿತಪಡಿಸಿಕೊಳ್ಳಲು, ಭಾರತೀಯ ರೈಲ್ವೆಯು ರೈಲ್ವೆ ಯೋಜನೆಗಳು ಮತ್ತು ಕಾಮಗಾರಿಗಳಲ್ಲಿ ತೊಡಗಿರುವ ಕುಶಲಕರ್ಮಿಗಳಿಗೆ ಕೌಶಲ್ಯ ತರಬೇತಿ ನೀಡಲು ಸಮಗ್ರ ನೀತಿಯನ್ನು ಪರಿಚಯಿಸಿದೆ. ಈ ನೀತಿಯು ವೆಲ್ಡಿಂಗ್, ಫಿಟ್ಟಿಂಗ್, ಕಲ್ಲು ಕೆಲಸ ಮತ್ತು ಇತರ ವಿಶೇಷ ನಿರ್ಮಾಣ ಚಟುವಟಿಕೆಗಳಂತಹ ನಿರ್ಣಾಯಕ ವೃತ್ತಿಗಳಲ್ಲಿ ತೊಡಗಿರುವ ಕಾರ್ಮಿಕರ ಗುರುತಿಸುವಿಕೆ, ಮೌಲ್ಯಮಾಪನ ಮತ್ತು ಪ್ರಮಾಣೀಕರಣಕ್ಕಾಗಿ ರಚನಾತ್ಮಕ ಚೌಕಟ್ಟನ್ನು ಸ್ಥಾಪಿಸುತ್ತದೆ ಎಂದು ಅವರು ತಿಳಿಸಿದರು.

ಹೊಸ ಚೌಕಟ್ಟಿನಡಿಯಲ್ಲಿ, ಯೋಜನೆ-ನಿರ್ದಿಷ್ಟ ಕೌಶಲ್ಯದ ಅವಶ್ಯಕತೆಗಳನ್ನು ವ್ಯಾಖ್ಯಾನಿಸಲಾಗುತ್ತದೆ ಮತ್ತು ಕಾರ್ಮಿಕರು ನಿಯೋಜಿತ ಪರೀಕ್ಷಾ ಪ್ರಾಧಿಕಾರಗಳ ಮೂಲಕ ಪ್ರಾಯೋಗಿಕ ಮತ್ತು ಮೌಖಿಕ ಮೌಲ್ಯಮಾಪನಗಳಿಗೆ ಒಳಗಾಗುತ್ತಾರೆ. ಯಶಸ್ವಿ ಅಭ್ಯರ್ಥಿಗಳು ನೇರ ಪರಿಶೀಲನಾ ಡೇಟಾಬೇಸ್‌ ಗೆ ಲಿಂಕ್ ಮಾಡಲಾದ ಕ್ಯೂಆರ್ ಕೋಡ್ ಒಳಗೊಂಡ ಕೌಶಲ್ಯ ಪ್ರಮಾಣಪತ್ರಗಳನ್ನು ಸ್ವೀಕರಿಸುತ್ತಾರೆ.

ಸೇತುವೆಗಳು ಮತ್ತು ಸುರಂಗಗಳು ಸೇರಿದಂತೆ ಪ್ರಮುಖ ಮತ್ತು ಸಂಕೀರ್ಣ ರೈಲ್ವೆ ಯೋಜನೆಗಳೊಂದಿಗೆ ನೀತಿಯ ಅನುಷ್ಠಾನವು ಪ್ರಾರಂಭವಾಗಲಿದ್ದು, ಮುಂದಿನ ಇಪ್ಪತ್ತನಾಲ್ಕು ತಿಂಗಳುಗಳಲ್ಲಿ ಎಲ್ಲಾ ವಲಯ ರೈಲ್ವೆಗಳು ಮತ್ತು ಉತ್ಪಾದನಾ ಘಟಕಗಳಿಗೆ ವಿಸ್ತರಿಸಲಾಗುವುದು ಎಂದು ಸಚಿವರು ಹೇಳಿದರು.

ಉಪಕ್ರಮವು ಪ್ರಮಾಣೀಕೃತ ಕುಶಲಕರ್ಮಿಗಳು ಮತ್ತು ಮೇಲ್ವಿಚಾರಕರನ್ನು ಮಾತ್ರ ವಿಶೇಷ ರೈಲ್ವೆ ಕಾಮಗಾರಿಗಳಲ್ಲಿ ನಿಯೋಜಿಸುವುದನ್ನು ಖಚಿತಪಡಿಸುತ್ತದೆ, ಭಾರತೀಯ ರೈಲ್ವೆಯಾದ್ಯಂತ ಕೌಶಲ್ಯ ಮೌಲ್ಯಮಾಪನವನ್ನು ಪ್ರಮಾಣೀಕರಿಸುತ್ತದೆ, ಅರ್ಹತೆಗಳ ನೈಜ-ಸಮಯದ ಪರಿಶೀಲನೆಯನ್ನು ಸುಗಮಗೊಳಿಸುತ್ತದೆ, ಕೆಲಸದ ಗುಣಮಟ್ಟವನ್ನು ಸುಧಾರಿಸುತ್ತದೆ, ಗುಣಮಟ್ಟದ ಭರವಸೆಯನ್ನು ಬಲಪಡಿಸುತ್ತದೆ ಮತ್ತು ದೇಶದ ಮೂಲಸೌಕರ್ಯ ವಲಯದಾದ್ಯಂತ ಕೌಶಲ್ಯ ಮೇಲ್ದರ್ಜೀಕರಣವನ್ನು ಉತ್ತೇಜಿಸುತ್ತದೆ ಎಂದು ಅವರು ಹೇಳಿದರು.

ಸುಧಾರಣೆ 14: ನಿರ್ಮಾಣ ಸುಧಾರಣೆಗಳು

ವರ್ಷದ ಆರಂಭದಲ್ಲಿ ಪರಿಚಯಿಸಲಾದ ಗುತ್ತಿಗೆದಾರರ ಅರ್ಹತಾ ಸುಧಾರಣೆಗಳ ಯಶಸ್ಸಿನ ನಂತರ, ಭಾರತೀಯ ರೈಲ್ವೆಯು ಈಗ ನಿರ್ಮಾಣ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಯೋಜನೆಗಳ ಅನುಷ್ಠಾನವನ್ನು ಸುಧಾರಿಸಲು ಇನ್ನಷ್ಟು ಪ್ರಮುಖ ಸುಧಾರಣೆಗಳನ್ನು ಕೈಗೊಂಡಿದೆ ಎಂದು ಶ್ರೀ ಅಶ್ವಿನಿ ವೈಷ್ಣವ್ ಹೇಳಿದರು.

ಗಂಭೀರ ಮತ್ತು ಸಮರ್ಥ ಗುತ್ತಿಗೆದಾರರನ್ನು ಉತ್ತೇಜಿಸುವುದು, ನಿರ್ಮಾಣದ ಗುಣಮಟ್ಟವನ್ನು ಸುಧಾರಿಸುವುದು, ವಿವಾದಗಳನ್ನು ಕಡಿಮೆ ಮಾಡುವುದು ಮತ್ತು ರೈಲ್ವೆ ಮೂಲಸೌಕರ್ಯ ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳುವುದು ಸುಧಾರಣೆಗಳ ಉದ್ದೇಶವಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.

ಸುಧಾರಣೆಗಳ ಭಾಗವಾಗಿ, ಚಾಲ್ತಿಯಲ್ಲಿರುವ ಬಿಲ್‌ ಗಳಿಂದ ಕಡಿತಗೊಳಿಸುವ ಮೂಲಕ ವಸೂಲಿ ಮಾಡುವ ಬದಲು ಗುತ್ತಿಗೆಯ ಪ್ರಾರಂಭದಲ್ಲಿಯೇ ಶೇಕಡಾ 10 ರಷ್ಟು ಕಾರ್ಯಕ್ಷಮತೆ ಭದ್ರತೆಯನ್ನು ಪಡೆಯಲಾಗುತ್ತದೆ. ಇದು ಗಂಭೀರ ಗುತ್ತಿಗೆದಾರರು ಮಾತ್ರ ರೈಲ್ವೆ ಯೋಜನೆಗಳಲ್ಲಿ ಭಾಗವಹಿಸುವುದನ್ನು ಖಚಿತಪಡಿಸುತ್ತದೆ ಮತ್ತು ಅನುಷ್ಠಾನದ ಸಮಯದಲ್ಲಿ ಹೊಣೆಗಾರಿಕೆಯನ್ನು ಬಲಪಡಿಸುತ್ತದೆ.

ಮೊಕದ್ದಮೆ-ಚಾಲಿತ ಗುತ್ತಿಗೆ ಪದ್ಧತಿಗಳನ್ನು ನಿರುತ್ಸಾಹಗೊಳಿಸಲು, ಕಟ್ಟುನಿಟ್ಟಾದ ಅರ್ಹತಾ ಮಾನದಂಡಗಳನ್ನು ಸಹ ಪರಿಚಯಿಸಲಾಗಿದೆ. ತಮ್ಮ ನಿವ್ವಳ ಮೌಲ್ಯದ ಶೇಕಡಾ 50 ಕ್ಕಿಂತ ಹೆಚ್ಚಿನ ಬಾಕಿ ಇರುವ ಮೊಕದ್ದಮೆಗಳನ್ನು ಹೊಂದಿರುವ ಗುತ್ತಿಗೆದಾರರು ರೈಲ್ವೆ ಟೆಂಡರ್‌ ಗಳಲ್ಲಿ ಭಾಗವಹಿಸಲು ಅರ್ಹರಾಗಿರುವುದಿಲ್ಲ.

ಯೋಜನೆಯ ಅನುಷ್ಠಾನದ ಸಮಯದಲ್ಲಿ ಅಪಾಯ ನಿರ್ವಹಣೆಯನ್ನು ಬಲಪಡಿಸಲು ಮತ್ತು ನಿರ್ಮಾಣ ಸಂಬಂಧಿತ ಅಪಾಯಗಳ ವಿರುದ್ಧ ರಕ್ಷಣೆ ನೀಡಲು ಗುತ್ತಿಗೆದಾರರ ಎಲ್ಲಾ ಅಪಾಯಗಳ ವಿಮೆ ಮತ್ತು ವೃತ್ತಿಪರ ನಷ್ಟ ಪರಿಹಾರ ವಿಮೆಯನ್ನು ಸುಧಾರಣೆಗಳು ಪರಿಚಯಿಸುತ್ತವೆ.

ವಿವಾದಗಳನ್ನು ಕನಿಷ್ಠಗೊಳಿಸಲು ಮತ್ತು ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಪ್ರಾರಂಭಿಸಲು ಭಾರತೀಯ ರೈಲ್ವೆಯು ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಮತ್ತು ಅನುಕ್ರಮವಾದ ಭೂಮಿ ಹಸ್ತಾಂತರ ಕಾರ್ಯವಿಧಾನವನ್ನು ಸ್ಥಾಪಿಸಿದೆ ಎಂದು ಶ್ರೀ ವೈಷ್ಣವ್ ಹೇಳಿದರು.

ಭೂಸ್ವಾಧೀನದ ಸಮಗ್ರ ನಿರ್ವಹಣೆಗಾಗಿ ಕ್ರಿಸ್ (ಸಿ ಆರ್‌ ಐ ಎಸ್) ಅಭಿವೃದ್ಧಿಪಡಿಸಿದ ವೆಬ್ ಆಧಾರಿತ ಪ್ಲಾಟ್‌ಫಾರ್ಮ್ ‘ರೈಲ್ ಭೂಮಿ’ ಕುರಿತು ಸಚಿವರು ಪ್ರಸ್ತಾಪಿಸಿದರು. ಈ ಪ್ಲಾಟ್‌ಫಾರ್ಮ್ ಆರ್‌ ಪಿ ಎಸ್‌ ಎಂ, ಐಪಿಎಎಸ್ ಮತ್ತು ಎಚ್‌ ಆರ್‌ ಎಂ ಎಸ್ ರಿದಂತೆ ವಿವಿಧ ರೈಲ್ವೆ ಅಪ್ಲಿಕೇಶನ್‌ ಗಳನ್ನು ಸಂಯೋಜಿಸುತ್ತದೆ, ತಡೆರಹಿತ ಮಾಹಿತಿ ವಿನಿಮಯ, ಪ್ರಮುಖ ಭೂಸ್ವಾಧೀನ ಹಂತಗಳ ಆನ್‌ಲೈನ್ ಪ್ರಕ್ರಿಯೆ, ದಕ್ಷ ಕೆಲಸದ ಹರಿವಿನ ನಿರ್ವಹಣೆ ಮತ್ತು ಡ್ಯಾಶ್‌ಬೋರ್ಡ್‌ಗಳು ಹಾಗೂ ಮ್ಯಾನೇಜ್‌ಮೆಂಟ್ ಇನ್ಫರ್ಮೇಷನ್ ಸಿಸ್ಟಮ್ಸ್ ಮೂಲಕ ನೈಜ-ಸಮಯದ ಮೇಲ್ವಿಚಾರಣೆಯನ್ನು ಸಕ್ರಿಯಗೊಳಿಸುತ್ತದೆ. ಈ ಪೋರ್ಟಲ್ ಭೂಸ್ವಾಧೀನವನ್ನು ವೇಗಗೊಳಿಸುವ, ಯೋಜನೆಯನ್ನು ಸುಧಾರಿಸುವ ಮತ್ತು ರೈಲ್ವೆ ಮೂಲಸೌಕರ್ಯ ಕಾಮಗಾರಿಗಳ ಸಮಯೋಚಿತ ಅನುಷ್ಠಾನವನ್ನು ಸುಗಮಗೊಳಿಸುವ ನಿರೀಕ್ಷೆಯಿದೆ ಎಂದು ಸಚಿವರು ಹೇಳಿದರು.

ಸುಧಾರಣೆ 15: ವ್ಯಾಗನ್ ವಿನ್ಯಾಸ ಅನುಮೋದನೆ ನೀತಿ

ಮತ್ತೊಂದು ಪ್ರಮುಖ ರಚನಾತ್ಮಕ ಸುಧಾರಣೆಯನ್ನು ಉಲ್ಲೇಖಿಸಿದ ಶ್ರೀ ವೈಷ್ಣವ್, ನಾವೀನ್ಯತೆಯನ್ನು ಉತ್ತೇಜಿಸುವ ಮತ್ತು ವಿಶೇಷ ಸರಕು ವ್ಯಾಗನ್‌ ಗಳ ವಿನ್ಯಾಸದಲ್ಲಿ ಉದ್ಯಮದ ಭಾಗವಹಿಸುವಿಕೆಯನ್ನು ಸಕ್ರಿಯಗೊಳಿಸುವ ಉದ್ದೇಶದಿಂದ ಹೊಸ ವ್ಯಾಗನ್ ವಿನ್ಯಾಸ ಅನುಮೋದನೆ ನೀತಿಯನ್ನು ಪ್ರಕಟಿಸಿದರು.

ಅಸ್ತಿತ್ವದಲ್ಲಿರುವ ವ್ಯವಸ್ಥೆಯಡಿಯಲ್ಲಿ, ವ್ಯಾಗನ್ ವಿನ್ಯಾಸಗಳನ್ನು ಹೆಚ್ಚಾಗಿ ರಿಸರ್ಚ್ ಡಿಸೈನ್ಸ್ ಅಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ (ಆರ್‌ ಡಿ ಎಸ್‌ ಒ) ಅಭಿವೃದ್ಧಿಪಡಿಸುತ್ತಿತ್ತು, ಬೋಗಿಗಳು, ಕಪ್ಲರ್‌ ಗಳು ಮತ್ತು ಬ್ರೇಕಿಂಗ್ ಸಿಸ್ಟಮ್‌ ಗಳಂತಹ ಹಲವಾರು ನಿರ್ಣಾಯಕ ಘಟಕಗಳನ್ನು ನಿಗದಿತ ಮಾನದಂಡಗಳಿಗೆ ಸೀಮಿತಗೊಳಿಸಲಾಗಿತ್ತು. ಇದು ವಿನ್ಯಾಸದ ನಮ್ಯತೆಯನ್ನು ಸೀಮಿತಗೊಳಿಸಿತು ಮತ್ತು ನಾವೀನ್ಯತೆಯನ್ನು ನಿರ್ಬಂಧಿಸಿತು ಎಂದು ಸಚಿವರು ಹೇಳಿದರು.

ಹೊಸ ನೀತಿಯಡಿಯಲ್ಲಿ, ವಿನ್ಯಾಸಕರು, ತಯಾರಕರು ಮತ್ತು ಉದ್ಯಮಗಳು ನಿರ್ದಿಷ್ಟ ಸರಕುಗಳು ಮತ್ತು ಕಾರ್ಯಾಚರಣೆಯ ಅವಶ್ಯಕತೆಗಳಿಗೆ ಸೂಕ್ತವಾದ ವ್ಯಾಗನ್ ವಿನ್ಯಾಸಗಳನ್ನು ಅಭಿವೃದ್ಧಿಪಡಿಸಲು ಮತ್ತು ಪ್ರಸ್ತಾಪಿಸಲು ಸಾಧ್ಯವಾಗುತ್ತದೆ.

ಆರ್‌ ಡಿ ಎಸ್‌ ಒ ಪ್ರಸ್ತಾವಿತ ವಿನ್ಯಾಸವನ್ನು ಮೌಲ್ಯಮಾಪನ ಮಾಡುತ್ತದೆ ಮತ್ತು ತಾತ್ವಿಕ ಅನುಮೋದನೆಯ ನಂತರ, ಮೂಲಮಾದರಿಯ ಅಭಿವೃದ್ಧಿಗೆ ಅನುಮತಿ ನೀಡುತ್ತದೆ. ವಿವರವಾದ ವಿನ್ಯಾಸ, ಮೂಲಮಾದರಿಯ ತಯಾರಿಕೆ ಮತ್ತು ಕಟ್ಟುನಿಟ್ಟಾದ ಸ್ಥಿರ ಹಾಗೂ ಕ್ರಿಯಾತ್ಮಕ ಪರೀಕ್ಷೆಯ ನಂತರ, ಸುರಕ್ಷತಾ ಪ್ರಮಾಣೀಕರಣ, ರೈಲ್ವೆ ಸುರಕ್ಷತೆಯ ಮುಖ್ಯ ಆಯುಕ್ತರ ಪರಿಶೀಲನೆ ಮತ್ತು ಸೇವೆಗೆ ಸೇರಿಸಲು ರೈಲ್ವೆ ಮಂಡಳಿಯ ಅನುಮೋದನೆಗೆ ಮುಂಚಿತವಾಗಿ ಸಂಪೂರ್ಣ ರೇಕ್ ಕ್ಷೇತ್ರ ಪ್ರಯೋಗಗಳಿಗೆ ಒಳಗಾಗುತ್ತದೆ.

ಹೊಸ ಚೌಕಟ್ಟು ಉಕ್ಕು, ಪೆಟ್ರೋಲಿಯಂ, ರಾಸಾಯನಿಕಗಳು, ಹಾಲು, ಪ್ಲಾಸ್ಟಿಕ್ ಮತ್ತು ಕಸ್ಟಮೈಸ್ ಮಾಡಿದ ಸಾಗಣೆ ಪರಿಹಾರಗಳ ಅಗತ್ಯವಿರುವ ಇತರ ಕೈಗಾರಿಕೆಗಳಂತಹ ವಲಯಗಳಿಗೆ ವಿಶೇಷ ವ್ಯಾಗನ್‌ ಗಳ ಅಭಿವೃದ್ಧಿಯನ್ನು ಸುಗಮಗೊಳಿಸುತ್ತದೆ ಎಂದು ಶ್ರೀ ವೈಷ್ಣವ್ ಹೇಳಿದರು. ಈ ಸುಧಾರಣೆಯು ವ್ಯಾಗನ್ ವಿನ್ಯಾಸ ಮತ್ತು ಉತ್ಪಾದನೆಗೆ ಹೊಸ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವ, ತಾಂತ್ರಿಕ ನಾವೀನ್ಯತೆಯನ್ನು ಉತ್ತೇಜಿಸುವ ಮತ್ತು ವಲಯಗಳಾದ್ಯಂತ ಸರಕು ಸಾಗಣೆ ದಕ್ಷತೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ಸುಧಾರಣೆ 16: ಪೆಟ್ರೋಲಿಯಂ ಉತ್ಪನ್ನಗಳ ಸಾಗಣೆ

ಪೆಟ್ರೋಲಿಯಂ, ತೈಲ ಮತ್ತು ಲೂಬ್ರಿಕೆಂಟ್ (ಪಿಒಎಲ್) ಉತ್ಪನ್ನಗಳ ಸಾಗಣೆಗೆ ವಿಶೇಷ ಟ್ಯಾಂಕ್ ವ್ಯಾಗನ್‌‌ ಗಳ ಅಗತ್ಯವಿರುತ್ತದೆ ಎಂದು ಶ್ರೀ ಅಶ್ವಿನಿ ವೈಷ್ಣವ್ ಹೇಳಿದರು. ಭಾರತೀಯ ರೈಲ್ವೆಯು ಎಲ್ಲಾ ಟ್ಯಾಂಕ್ ವ್ಯಾಗನ್‌ ಗಳನ್ನು ಹೊಂದಿದ್ದ ಅಸ್ತಿತ್ವದಲ್ಲಿರುವ ವ್ಯವಸ್ಥೆಯು, ತೈಲ ಕಂಪನಿಗಳು ತಮ್ಮ ಕಾರ್ಯಾಚರಣೆಯ ಅವಶ್ಯಕತೆಗಳಿಗೆ ಸೂಕ್ತವಾದ ವಿಶೇಷ ವ್ಯಾಗನ್‌ ಗಳನ್ನು ಪರಿಚಯಿಸುವ ನಮ್ಯತೆಯನ್ನು ನಿರ್ಬಂಧಿಸಿತ್ತು ಎಂದು ಅವರು ಹೇಳಿದರು.

ಇದನ್ನು ಪರಿಹರಿಸಲು, ಭಾರತೀಯ ರೈಲ್ವೆಯು ಪೆಟ್ರೋಲಿಯಂ ಟ್ಯಾಂಕ್ ವ್ಯಾಗನ್‌ ಗಳ ವಿನ್ಯಾಸ ಮತ್ತು ಸೇರ್ಪಡೆಯನ್ನು ನಿಯಂತ್ರಿಸುವ ರಚನಾತ್ಮಕ ಅಡೆತಡೆಗಳನ್ನು ತೆಗೆದುಹಾಕಿದೆ. ತೈಲ ಕಂಪನಿಗಳು ಈಗ ವಿಶೇಷ ವ್ಯಾಗನ್‌ ಗಳನ್ನು ನೇರವಾಗಿ ಖರೀದಿಸಲು ಅಥವಾ ಗುತ್ತಿಗೆ ಏಜೆನ್ಸಿಗಳ ಮೂಲಕ ಗುತ್ತಿಗೆಗೆ ಪಡೆಯಲು ಮತ್ತು ವಿಶೇಷ ಅವಶ್ಯಕತೆಗಳಿಗಾಗಿ ಭಾರತೀಯ ರೈಲ್ವೆ ಜಾಲದಲ್ಲಿ ಅವುಗಳನ್ನು ಸೇರಿಸಲು ಸಾಧ್ಯವಾಗುತ್ತದೆ.

ಸುಧಾರಣೆಯು ವಿಶೇಷ ಟ್ಯಾಂಕ್ ವ್ಯಾಗನ್‌ ಗಳ ಪರಿಚಯವನ್ನು ಸಕ್ರಿಯಗೊಳಿಸುತ್ತದೆ, ಲಾಜಿಸ್ಟಿಕ್ಸ್ ಯೋಜನೆಯನ್ನು ಸುಧಾರಿಸುತ್ತದೆ, ಸಾಗಣೆ ವೆಚ್ಚವನ್ನು ಕಡಿಮೆ ಮಾಡುತ್ತದೆ, ರೈಲು ಮೂಲಕ ಪೆಟ್ರೋಲಿಯಂ ಉತ್ಪನ್ನಗಳ ಹೆಚ್ಚಿನ ಚಲನೆಯನ್ನು ಉತ್ತೇಜಿಸುತ್ತದೆ ಮತ್ತು ಉತ್ಪನ್ನ ನಷ್ಟ ಮತ್ತು ಕಲಬೆರಕೆ ಸೇರಿದಂತೆ ರಸ್ತೆ ಸಾರಿಗೆಗೆ ಸಂಬಂಧಿಸಿದ ಅಪಾಯಗಳನ್ನು ಕನಿಷ್ಠಗೊಳಿಸುತ್ತದೆ ಎಂದು ಸಚಿವರು ಹೇಳಿದರು.

ಸುಧಾರಣೆ 17: ಆಹಾರ ಧಾನ್ಯಗಳು, ಹಿಟ್ಟು ಮತ್ತು ದ್ವಿದಳ ಧಾನ್ಯಗಳ ಸಾಗಣೆ

ಸರಕು ಸಾಗಣೆ ಶುಲ್ಕವನ್ನು ಸರಳಗೊಳಿಸುವ ಮತ್ತು ಕಂಟೇನರ್ ಚಲನೆಯನ್ನು ಉತ್ತೇಜಿಸುವ ಮೂಲಕ ಆಹಾರ ಧಾನ್ಯಗಳು, ಹಿಟ್ಟು ಮತ್ತು ದ್ವಿದಳ ಧಾನ್ಯಗಳ ಸಾಗಣೆಗಾಗಿ ಭಾರತೀಯ ರೈಲ್ವೆಯು ಪ್ರಮುಖ ಸುಧಾರಣೆಯನ್ನು ಪರಿಚಯಿಸಿದೆ ಎಂದು ಶ್ರೀ ವೈಷ್ಣವ್ ಹೇಳಿದರು.

ಹೊಸ ನೀತಿಯಡಿಯಲ್ಲಿ, ಹಿಂದಿನ ಸಂಕೀರ್ಣ ಸ್ಲ್ಯಾಬ್ ಆಧಾರಿತ ಸರಕು ಸಾಗಣೆ ರಚನೆಯನ್ನು ಸರಳಗೊಳಿಸಲಾದ ಪ್ರತಿ ಟನ್‌ ಗೆ ಪ್ರತಿ ಕಿಲೋಮೀಟರ್ ದರ ರಚನೆಯೊಂದಿಗೆ ಬದಲಾಯಿಸಲಾಗಿದೆ. ಈ ಸುಧಾರಣೆಯು ಕಂಟೇನರ್‌ ಗಳ ಮೂಲಕ ಆಹಾರ ಧಾನ್ಯಗಳು, ಹಿಟ್ಟು ಮತ್ತು ದ್ವಿದಳ ಧಾನ್ಯಗಳನ್ನು ಸಾಗಿಸಲು ಅನುಮತಿಸುತ್ತದೆ, ಇದು ಸುಲಭ ನಿರ್ವಹಣೆ, ಸಂಗ್ರಹಣೆ ಮತ್ತು ಕಾರ್ಯಾಚರಣೆಯ ಅವಶ್ಯಕತೆಗಳ ಆಧಾರದ ಮೇಲೆ ಹಂತ-ಹಂತದ ವಿತರಣೆಯನ್ನು ಸಕ್ರಿಯಗೊಳಿಸುತ್ತದೆ.

ಕಂಟೇನರ್‌ ಗಳನ್ನು ಮಾರಾಟಗಾರರು ಅಥವಾ ಖರೀದಿದಾರರ ಆವರಣದಲ್ಲಿ ಸಂಗ್ರಹಿಸಬಹುದು ಮತ್ತು ಇಡೀ ರೇಕ್ ಅನ್ನು ತಡೆಹಿಡಿಯದೆಯೇ ಬೇಡಿಕೆಗೆ ಅನುಗುಣವಾಗಿ ವಿತರಿಸಬಹುದು ಎಂದು ಸಚಿವರು ಹೇಳಿದರು. ಕಂಟೇನರ್‌ ಗಳು ಮುಚ್ಚಿ ಮೊಹರು ಮಾಡಲ್ಪಟ್ಟಿರುವುದರಿಂದ, ಕಲುಷಿತಗೊಳ್ಳುವ ಸಾಧ್ಯತೆಯು ಗಮನಾರ್ಹವಾಗಿ ಕಡಿಮೆಯಾಗುತ್ತದೆ, ಆ ಮೂಲಕ ಲಾಜಿಸ್ಟಿಕ್ಸ್ ದಕ್ಷತೆಯು ಹೆಚ್ಚಾಗಿ ಆಹಾರ ಧಾನ್ಯ ಸಾಗಣೆಯ ಸುರಕ್ಷತೆ ಮತ್ತು ಗುಣಮಟ್ಟವನ್ನು ಸುಧಾರಿಸುತ್ತದೆ ಎಂದು ಸಚಿವರು ಹೇಳಿದರು.

ಸುಧಾರಣಾ ಎಕ್ಸ್‌ ಪ್ರೆಸ್ ಉಪಕ್ರಮದ ಅಡಿಯಲ್ಲಿ, ಭಾರತೀಯ ರೈಲ್ವೆಯು ಹಿಂದೆ ಒಂಬತ್ತು ಪ್ರಮುಖ ರಚನಾತ್ಮಕ ಸುಧಾರಣೆಗಳನ್ನು ಜಾರಿಗೆ ತಂದಿತ್ತು, ಇದರಲ್ಲಿ ನಿರಂತರ ಆನ್-ಬೋರ್ಡ್ ರೈಲು ಸ್ವಚ್ಛಗೊಳಿಸುವಿಕೆ, ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ ಗಳ ವಿಸ್ತರಣೆ, ರೈಲ್‌ ಟೆಕ್ ನೀತಿ ಮತ್ತು ಪೋರ್ಟಲ್, ರೈಲ್ವೆ ಕ್ಲೈಮ್ಸ್ ಟ್ರಿಬ್ಯುನಲ್‌ ನ ಡಿಜಿಟಲೀಕರಣ, ಉಪ್ಪು ಮತ್ತು ಆಟೋಮೊಬೈಲ್ ಸಾಗಣೆಗಾಗಿ ವಿಶೇಷ ಕಂಟೇನರ್‌ ಗಳು, ಏಳು ನಿರ್ಮಾಣ-ಗುಣಮಟ್ಟದ ಸುಧಾರಣೆಗಳು, ಸರಳಗೊಳಿಸಲಾದ ಟಿಕೆಟ್ ರದ್ದತಿ ಮತ್ತು ಮರುಪಾವತಿ ನಿಯಮಗಳು ಮತ್ತು ಬೋರ್ಡಿಂಗ್ ಪಾಯಿಂಟ್‌ ನ ಡಿಜಿಟಲ್ ಬದಲಾವಣೆ ಸೇರಿವೆ.

ಹೊಸ ಸುಧಾರಣೆಗಳು ರಸ್ತೆಯಿಂದ ರೈಲಿಗೆ ಸರಕು ಸಾಗಣೆಯ ಹೆಚ್ಚಿನ ಪಾಲನ್ನು ವರ್ಗಾಯಿಸಲು ಸಹಾಯ ಮಾಡುತ್ತದೆ, ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಗಣನೀಯ ಪರಿಸರ ಪ್ರಯೋಜನಗಳನ್ನು ನೀಡುತ್ತದೆ ಎಂದು ಶ್ರೀ ವೈಷ್ಣವ್ ಹೇಳಿದರು. ರಸ್ತೆ ಸಾರಿಗೆಗಿಂತ ರೈಲು ಸಾರಿಗೆಯು ಸುಮಾರು ಶೇಕಡಾ 90 ರಷ್ಟು ಕಡಿಮೆ ಕಾರ್ಬನ್ ಹೊರಸೂಸುವಿಕೆಗೆ ಕಾರಣವಾಗುತ್ತದೆ ಎಂದು ಅವರು ಹೇಳಿದರು. ಹೆಚ್ಚುವರಿ ಸರಕುಗಳ ಹಂತ-ಹಂತದ ಕಂಟೇನರೀಕರಣವು ಭಾರತೀಯ ರೈಲ್ವೆಯ ಸರಕು ಸಾಗಣೆ ಬುಟ್ಟಿಯನ್ನು ಸಾಂಪ್ರದಾಯಿಕ ಬೃಹತ್ ಸರಕುಗಳನ್ನು ಹೊರತುಪಡಿಸಿ ವೈವಿಧ್ಯಗೊಳಿಸುತ್ತದೆ ಮತ್ತು ಅದರ ಸರಕು ಸಾಗಣೆ ವ್ಯವಹಾರವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಸಚಿವರು ಹೇಳಿದರು.

 

*****

 

 


(रिलीज़ आईडी: 2284681) आगंतुक पटल : 27
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Gujarati , Odia