ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮೂರನೇ ʻಭಾರತ-ಆಸ್ಟ್ರೇಲಿಯಾ ವಾರ್ಷಿಕ ಶೃಂಗಸಭೆʼಯ ಜಂಟಿ ಹೇಳಿಕೆ

प्रविष्टि तिथि: 09 JUL 2026 10:58AM by PIB Bengaluru

ಆಸ್ಟ್ರೇಲಿಯಾದ ಗೌರವಾನ್ವಿತ ಪ್ರಧಾನಮಂತ್ರಿ ಆಂಥೋನಿ ಅಲ್ಬನೀಸ್ ಎಂಪಿ ಅವರ ಆಹ್ವಾನದ ಮೇರೆಗೆ, ಭಾರತದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕುಲಿನ್ ರಾಷ್ಟ್ರದ ವುರುಂಡ್ಜೇರಿ ವೊಯ್-ವುರುಂಗ್ ಮತ್ತು ಬುನುರಾಂಗ್ / ಬೂನ್ ವುರುಂಗ್ ಜನರ ಸಾಂಪ್ರದಾಯಿಕ ಭೂಮಿಯಾದ ಮೆಲ್ಬೋರ್ನ್ (ನಾರ್ಮ್‌) ನಲ್ಲಿ ನಡೆದ ಮೂರನೇ ಆಸ್ಟ್ರೇಲಿಯಾ-ಭಾರತ ವಾರ್ಷಿಕ ಶೃಂಗಸಭೆಗಾಗಿ 2026 ರ ಜುಲೈ 8-10 ರವರೆಗೆ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದ್ದರು.

ಐತಿಹಾಸಿಕ ಸಂಬಂಧಗಳು, ಜನರ ನಡುವಿನ ಸಂಪರ್ಕಗಳು, ಹಂಚಿಕೆಯ ಕಾರ್ಯತಂತ್ರದ ಹಿತಾಸಕ್ತಿಗಳು ಮತ್ತು ಪರಸ್ಪರ ಗೌರವದಲ್ಲಿ ನೆಲೆಯೂರಿರುವ ಉಭಯ ರಾಷ್ಟ್ರಗಳ ನಡುವಿನ ದೀರ್ಘಕಾಲದ ಸ್ನೇಹವನ್ನು ಉಭಯ ನಾಯಕರು ಸ್ಮರಿಸಿದರು. ವೇಗವಾಗಿ ಬದಲಾಗುತ್ತಿರುವ ಜಾಗತಿಕ ಪರಿಸರದಲ್ಲಿ ಉದ್ಭವಿಸುತ್ತಿರುವ ಸವಾಲುಗಳನ್ನು ಎದುರಿಸಲು ಮತ್ತು ನಮ್ಮ ಹಂಚಿಕೆಯ ವಲಯದ ಶಾಂತಿ, ಸಮೃದ್ಧಿ ಹಾಗೂ ಸ್ಥಿರತೆಗೆ ಪ್ರಯೋಜನಕಾರಿಯಾದ ಹೊಸ ಸಹಕಾರದ ಕ್ಷೇತ್ರಗಳನ್ನು ಅನ್ವೇಷಿಸಲು ಭಾರತ-ಆಸ್ಟ್ರೇಲಿಯಾ ಸಮಗ್ರ ವ್ಯೂಹಾತ್ಮಕ ಪಾಲುದಾರಿಕೆಯನ್ನು (ಸಿಎಸ್‌ಪಿ) ಮತ್ತಷ್ಟು ಬಲಪಡಿಸಲು ಮತ್ತು ವಿಸ್ತರಿಸಲು ತಮ್ಮ ಹಂಚಿಕೆಯ ಬದ್ಧತೆಯನ್ನು ಪುನರುಚ್ಚರಿಸಿದರು."

ರಕ್ಷಣೆ ಮತ್ತು ಕಡಲ ಭದ್ರತೆ ಸಹಕಾರವನ್ನು ಆಳಗೊಳಿಸುವುದು

ಹೆಚ್ಚುತ್ತಿರುವ ಸಂಕೀರ್ಣ ವ್ಯೂಹಾತ್ಮಕ ವಾತಾವರಣದಲ್ಲಿ ಪಾಲುದಾರಿಕೆಯ ಮೂಲಾಧಾರವಾಗಿದೆ ಎಂದು ಪ್ರಧಾನಮಂತ್ರಿಗಳು ಪುನರುಚ್ಚರಿಸಿದರು. ಅವರು ರಕ್ಷಣಾ ಮತ್ತು ಭದ್ರತಾ ಸಹಕಾರದ ಜಂಟಿ ಘೋಷಣೆಯನ್ನು ಘೋಷಿಸಿದರು, ಇದು ದ್ವಿಪಕ್ಷೀಯ ರಕ್ಷಣಾ ಮತ್ತು ಭದ್ರತಾ ಸಂಬಂಧದ ಆಳ ಮತ್ತು ಮಹತ್ವಾಕಾಂಕ್ಷೆಯಲ್ಲಿ ಒಂದು ಹೆಜ್ಜೆ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ, ಪ್ರಾದೇಶಿಕ ಶಕ್ತಿ ಮತ್ತು ಭದ್ರತೆಗೆ ಕೊಡುಗೆ ನೀಡುತ್ತದೆ.

ಸಮಾಲೋಚನೆ ಮತ್ತು ಸಹಕಾರವನ್ನು ಹೆಚ್ಚಿಸುವ ಕಾರ್ಯವಿಧಾನವಾಗಿ ರಕ್ಷಣಾ ಸಚಿವರ ವಾರ್ಷಿಕ ಸಂವಾದವನ್ನು ಸ್ಥಾಪಿಸಿರುವುದನ್ನು ಪ್ರಧಾನಮಂತ್ರಿಗಳು ಸ್ವಾಗತಿಸಿದರು. ಪರಸ್ಪರ ಬೆಂಬಲ ವ್ಯವಸ್ಥೆಯ ಅಡಿಯಲ್ಲಿ ರಕ್ಷಣಾ ಸಮರಾಭ್ಯಾಸಗಳು ಮತ್ತು ಹೆಚ್ಚುತ್ತಿರುವ ವಿನಿಮಯಗಳ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು. ರಕ್ಷಣಾ ಪಾಲುದಾರಿಕೆಯು ಈಗ ಎಲ್ಲಾ ಕ್ಷೇತ್ರಗಳಲ್ಲಿ ವಿಸ್ತರಿಸಿರುವ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದರು. ಬಹುಪಕ್ಷೀಯ ಪಾಲುದಾರರು ಸೇರಿದಂತೆ ಪರಸ್ಪರ ಕಾರ್ಯಸಾಧ್ಯತೆಯನ್ನು ಆಳಗೊಳಿಸುವ ಮಹತ್ವವನ್ನು ಒತ್ತಿ ಹೇಳಿದರು.

ಶಾಂತಿಯುತ, ಸ್ಥಿರ ಮತ್ತು ಸಮೃದ್ಧ ಇಂಡೋ ಪೆಸಿಫಿಕ್‌ ಪ್ರದೇಶಕ್ಕಾಗಿ ತಮ್ಮ ಹಂಚಿಕೆಯ ದೃಷ್ಟಿಕೋನಕ್ಕೆ ಕಡಲ ಸಹಕಾರದ ಮಹತ್ವವನ್ನು ಪ್ರಧಾನಮಂತ್ರಿಗಳು ಒತ್ತಿಹೇಳಿದರು. ಭಾರತ-ಆಸ್ಟ್ರೇಲಿಯಾ ಕಡಲ ಭದ್ರತಾ ಸಹಯೋಗದ ಮಾರ್ಗಸೂಚಿಯ ಮೂಲಕ ಕಡಲ ಸಹಕಾರವನ್ನು ಹೆಚ್ಚಿಸಲು ನಾಯಕರು ಒಪ್ಪಿಕೊಂಡರು. ಈ ಮೂಲಕ, ಭಾರತ ಮತ್ತು ಆಸ್ಟ್ರೇಲಿಯಾ ಶಾಂತಿಯುತ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್‌ಗೆ ತಮ್ಮ ಹಂಚಿಕೆಯ ಬದ್ಧತೆಯನ್ನು ಪುನರುಚ್ಚರಿಸುತ್ತವೆ. ಪ್ರಾದೇಶಿಕ ಭದ್ರತೆಗೆ ಪರಿಣಾಮಕಾರಿ ಕಡಲ ಸಹಕಾರ ಅತ್ಯಗತ್ಯ ಎಂದು ಗುರುತಿಸುತ್ತವೆ. ಮಾಹಿತಿ ಹಂಚಿಕೆ, ಸಾಮರ್ಥ್ಯ ಅಭಿವೃದ್ಧಿ ಮತ್ತು ಕಾರ್ಯಾಚರಣೆಯ ಸಮನ್ವಯ ಕ್ಷೇತ್ರಗಳಲ್ಲಿ ಸಹಕರಿಸಲು ಅವರು ಒಪ್ಪಿಕೊಂಡರು. ಸುರಕ್ಷಿತ ಕಡಲ ಪರಿಸರವನ್ನು ಬೆಂಬಲಿಸಲು ಕಡಲ ಗಡಿ ಕಮಾಂಡ್ ಮತ್ತು ಭಾರತೀಯ ಕರಾವಳಿ ಕಾವಲು ಪಡೆ ನಡುವಿನ ತಿಳಿವಳಿಕೆ ಒಪ್ಪಂದದ ಅಂತಿಮಗೊಳಿಸಿರುವುದನ್ನು ನಾಯಕರು ಸ್ವಾಗತಿಸಿದರು.

ರಕ್ಷಣಾ ಉದ್ಯಮ, ಸಂಶೋಧನೆ ಮತ್ತು ವಸ್ತು ಸಹಕಾರದ ಮಹತ್ವವನ್ನು ಪ್ರಧಾನಮಂತ್ರಿಗಳು ಒಪ್ಪಿಕೊಂಡರು. ರಕ್ಷಣಾ ಲೇಖನಗಳು ಮತ್ತು ರಕ್ಷಣಾ ಸೇವೆಗಳನ್ನು ಒದಗಿಸಲು ತಿಳಿವಳಿಕೆ ಒಪ್ಪಂದವನ್ನು ಅಭಿವೃದ್ಧಿಪಡಿಸಲು ನಡೆಯುತ್ತಿರುವ ಕೆಲಸವನ್ನು ನಾಯಕರು ಸ್ವಾಗತಿಸಿದರು. ಭಾರತಕ್ಕೆ ಆಸ್ಟ್ರೇಲಿಯಾದ ಮೊದಲ ರಕ್ಷಣಾ ವ್ಯಾಪಾರ ಮಿಷನ್ ಮತ್ತು ಆಸ್ಟ್ರೇಲಿಯಾ-ಭಾರತ ರಕ್ಷಣಾ ಉದ್ಯಮ ದುಂಡುಮೇಜಿನ ಸಭೆ ಮೂಲಕ ಆಸ್ಟ್ರೇಲಿಯಾ ಮತ್ತು ಭಾರತೀಯ ರಕ್ಷಣಾ ಉದ್ಯಮಗಳ ನಡುವೆ ಸಂಪರ್ಕವನ್ನು ಉತ್ತೇಜಿಸುವ ಪ್ರಯತ್ನಗಳನ್ನು ಸ್ವಾಗತಿಸಿದರು.

ವೃತ್ತಿಪರ ಮಿಲಿಟರಿ ಶಿಕ್ಷಣ, ಜಂಟಿ ಸಂಶೋಧನೆ, ʻವಾರ್ ಗೇಮಿಂಗ್ʼ ಮತ್ತು ಭವಿಷ್ಯ ಸನ್ನದ್ಧ ಮಿಲಿಟರಿ ಸಿಬ್ಬಂದಿಗೆ ಸಾಮರ್ಥ್ಯ ವೃದ್ಧಿ ಉಪಕ್ರಮಗಳ ಮಹತ್ವವನ್ನು ಪ್ರಧಾನಮಂತ್ರಿಗಳು ಸಹಮತಿಸಿದರು. ವೃತ್ತಿಪರ ಮಿಲಿಟರಿ ಶಿಕ್ಷಣದಲ್ಲಿ ಸಹಕಾರವನ್ನು ಬಲಪಡಿಸಲು ನಡೆಯುತ್ತಿರುವ ಪ್ರಯತ್ನಗಳನ್ನು ಎತ್ತಿ ತೋರಿದರು. ಎರಡೂ ದೇಶಗಳ ಮಿಲಿಟರಿ ಶಿಕ್ಷಣ ಸಂಸ್ಥೆಗಳ ನಡುವಿನ ಸಂಪರ್ಕವನ್ನು ಬಲಪಡಿಸುವುದನ್ನು ನಾಯಕರು ಪ್ರೋತ್ಸಾಹಿಸಿದರು. 2028-2029ರಲ್ಲಿ ಆಸ್ಟ್ರೇಲಿಯಾದ ರಕ್ಷಣಾ ಕಾಲೇಜಿನಲ್ಲಿ ಭಾರತದಿಂದ ಭೇಟಿ ನೀಡುವ ಮಿಲಿಟರಿ ಬೋಧಕರನ್ನು ನಿಯೋಜಿಸುವ ನಿರೀಕ್ಷೆಯನ್ನು ಉಭಯ ನಾಯಕರು ವ್ಯಕ್ತಪಡಿಸಿದರು. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮುಂದಿನ ʻಜನರಲ್ ರಾವತ್ ಭಾರತ-ಆಸ್ಟ್ರೇಲಿಯಾ ಯುವ ಅಧಿಕಾರಿಗಳ ವಿನಿಮಯ ಕಾರ್ಯಕ್ರಮʼದ ನಾಲ್ಕನೇ ಪುನರಾವರ್ತನೆಯನ್ನು ಅವರು ಸ್ವಾಗತಿಸಿದರು.

ಎರಡೂ ದೇಶಗಳ ಪರಿಸರ ವ್ಯವಸ್ಥೆಯನ್ನು ಸಂಪರ್ಕಿಸಲು ಮತ್ತು ಸರ್ಕಾರಗಳು, ಕೈಗಾರಿಕೆಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಸಂಶೋಧನಾ ಸಂಸ್ಥೆಗಳ ನಡುವೆ ಸಹಯೋಗವನ್ನು ವೇಗಗೊಳಿಸಲು ದ್ವಿಪಕ್ಷೀಯ ನಾವೀನ್ಯತೆ ನೀತಿಯನ್ನು ಸ್ಥಾಪಿಸಲು ಪ್ರಧಾನಮಂತ್ರಿಗಳು ಒಪ್ಪಿಗೆ ಸೂಚಿಸಿದರು. ಸುಧಾರಿತ ಸಾಮರ್ಥ್ಯದ ಆದ್ಯತೆಗಳಿಗೆ ನವೀನ ಪರಿಹಾರಗಳನ್ನು ಉತ್ತೇಜಿಸಲು ರಕ್ಷಣಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ಸಹಕಾರವನ್ನು ಹೊಸ ಕ್ಷೇತ್ರಗಳಿಗೆ ವಿಸ್ತರಿಸುವ ಮಹತ್ವವನ್ನು ಅವರು ಒತ್ತಿಹೇಳಿದರು.

ಆರ್ಥಿಕ ಭದ್ರತೆ ಮತ್ತು ಸಮೃದ್ಧಿಯನ್ನು ಮುನ್ನಡೆಸುವುದು

ಭಾರತ-ಆಸ್ಟ್ರೇಲಿಯಾ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದ (ಇಸಿಟಿಎ) ಅಡಿಯಲ್ಲಿ ದ್ವಿಮುಖ ವ್ಯಾಪಾರದಲ್ಲಿ ನಿರಂತರ ಬೆಳವಣಿಗೆಯನ್ನು ಪ್ರಧಾನಮಂತ್ರಿಗಳು ಸ್ವಾಗತಿಸಿದರು. ಇದೇವೇಳೆ, ಸುಂಕ ರಹಿತ ಅಡೆತಡೆಗಳನ್ನು ಕಡಿಮೆ ಮಾಡಿರುವುದನ್ನು ಸ್ವಾಗತಿಸಿದರು. ಎರಡೂ ದೇಶಗಳಲ್ಲಿನ ವ್ಯವಹಾರಗಳು ಮತ್ತು ಗ್ರಾಹಕರಿಗೆ ಇದರಿಂದ ದೊರೆತ ಸ್ಪಷ್ಟ ಪ್ರಯೋಜನಗಳನ್ನು ಗಮನಿಸಿದರು. ಆರ್ಥಿಕ ಸಂಬಂಧದ ಸಂಪೂರ್ಣ ಸಾಮರ್ಥ್ಯವನ್ನು ಅನಾವರಣಗೊಳಿಸಲು ಮತ್ತು ಎರಡೂ ದೇಶಗಳ ಸಮೃದ್ಧಿಯನ್ನು ಬಲಪಡಿಸಲು ಮಹತ್ವಾಕಾಂಕ್ಷೆಯ, ಸಮತೋಲಿತ ಮತ್ತು ಪರಸ್ಪರ ಲಾಭದಾಯಕ ಸಮಗ್ರ ಆರ್ಥಿಕ ಸಹಕಾರ ಒಪ್ಪಂದಕ್ಕೆ (ಸಿಇಸಿಎ) ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಹೂಡಿಕೆಯನ್ನು ಹೆಚ್ಚಿಸುವ ಮಹತ್ವವನ್ನು ಪ್ರಧಾನಮಂತ್ರಿಗಳು ಒತ್ತಿಹೇಳಿದರು ಮತ್ತು ಎರಡೂ ದೇಶಗಳ ಸಂಬಂಧಿತ ಸಂಸ್ಥೆಗಳ ನಡುವೆ ಹಣಕಾಸಿನ ಬಲವಾದ ಸಮನ್ವಯದ ಮೂಲಕ ಖಾಸಗಿ ವಲಯದ ಹೂಡಿಕೆದಾರರ ನಡುವೆ ಹೆಚ್ಚಿನ ಪಾಲ್ಗೊಳ್ಳುವಿಕೆಯನ್ನು ಬೆಂಬಲಿಸಿದರು.

ಉದ್ಯಮ ನೇತೃತ್ವದ ಕಾರ್ಯಕ್ರಮಗಳ ಮಹತ್ವವನ್ನು ಒತ್ತಿಹೇಳಿದ ಪ್ರಧಾನಮಂತ್ರಿಗಳು, ಭೇಟಿಯ ವೇಳೆ ʻಸಿಇಒ ವೇದಿಕೆʼಯ ಸಭೆಯನ್ನು ಸ್ವಾಗತಿಸಿದರು ಮತ್ತು ಬಲವಾದ ವ್ಯಾಪಾರ ಸಂಪರ್ಕಕ್ಕೆ ಬೆಂಬಲವನ್ನು ಪುನರುಚ್ಚರಿಸಿದರು. "ಮೇಕ್ ಇನ್ ಇಂಡಿಯಾ" ಮತ್ತು "ಫ್ಯೂಚರ್ ಮೇಡ್ ಇನ್ ಆಸ್ಟ್ರೇಲಿಯಾ" ನಡುವಿನ ಪೂರಕತೆಯನ್ನು ಗಮನಿಸಿದರು. ಉತ್ಪಾದನೆ, ತಂತ್ರಜ್ಞಾನ ಮತ್ತು ಹೂಡಿಕೆಯಾದ್ಯಂತ ಆಳವಾದ ಸಹಕಾರದ ವ್ಯಾಪ್ತಿಯನ್ನು ನಾಯಕರು ಒಪ್ಪಿಕೊಂಡರು. ಭಾರತದೊಂದಿಗೆ ಆಸ್ಟ್ರೇಲಿಯಾದ ಆರ್ಥಿಕ ಕಾರ್ಯಕ್ರಮಕ್ಕಾಗಿ ಹೊಸ ಮಾರ್ಗಸೂಚಿಯ ನಿರಂತರ ಅನುಷ್ಠಾನವನ್ನು ನಾಯಕರು ಶ್ಲಾಘಿಸಿದರು ಮತ್ತು ವಿಸ್ತೃತ ಸಹಕಾರಕ್ಕಾಗಿ ಪ್ರಾಯೋಗಿಕ ಮಾರ್ಗಗಳನ್ನು ರೂಪಿಸುವಲ್ಲಿ 2026 ರ ಮೇ ತಿಂಗಳಲ್ಲಿ ಸಿಡ್ನಿಯಲ್ಲಿ ನಡೆದ ʻಟ್ರ್ಯಾಕ್ 1.5ʼ ಸಂವಾದದ ಕೊಡುಗೆಗಳನ್ನು ಸ್ವಾಗತಿಸಿದರು.

ನಿರ್ಣಾಯಕ ಖನಿಜಗಳ ಸಹಕಾರಕ್ಕೆ ಪ್ರಧಾನ ಮಂತ್ರಿಗಳು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಹೂಡಿಕೆಯನ್ನು ಉತ್ತೇಜಿಸಲು, ದೀರ್ಘಕಾಲೀನ ಪೂರೈಕೆ ಮತ್ತು ಖರೀದಿ ವ್ಯವಸ್ಥೆಗಳನ್ನು ಸುರಕ್ಷಿತಗೊಳಿಸಲು ಹಾಗೂ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಸಾಮರ್ಥ್ಯಗಳ ಅಭಿವೃದ್ಧಿಯನ್ನು ಬೆಂಬಲಿಸಲು ಭಾರತೀಯ ಮತ್ತು ಆಸ್ಟ್ರೇಲಿಯಾ ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ಮತ್ತು ಖಾಸಗಿ ಕಂಪನಿಗಳು ಹಾಗೂ ಸಂಶೋಧನಾ ಸಂಸ್ಥೆಗಳ ನಡುವಿನ ಸಹಭಾಗಿತ್ವದ ಮಹತ್ವವನ್ನು ಅವರು ಒತ್ತಿಹೇಳಿದರು. ಪಾರದರ್ಶಕ, ಸುರಕ್ಷಿತ ಮತ್ತು ಸದೃಢ ಪೂರೈಕೆ ಸರಪಳಿಗಳು ನಮ್ಮ ಆರ್ಥಿಕ ಭದ್ರತೆಯ ಕೇಂದ್ರಬಿಂದುವಾಗಿವೆ ಎಂದು ನಾಯಕರು ದೃಢಪಡಿಸಿದರು. ದ್ವಿಪಕ್ಷೀಯ ಉಪಕ್ರಮಗಳು ಮತ್ತು ಬಹುಪಕ್ಷೀಯ ವೇದಿಕೆಗಳ ಮೂಲಕ ಪೂರೈಕೆ ಸರಪಳಿ ಸಹಯೋಗವನ್ನು ಬೆಂಬಲಿಸಲು, ವಿಶೇಷವಾಗಿ ಇಂಧನ ಮತ್ತು ನಿರ್ಣಾಯಕ ಖನಿಜಗಳಿಗೆ ಒಟ್ಟಾಗಿ ಕೆಲಸ ಮಾಡುವ ಮಹತ್ವವನ್ನು ಅವರು ಒಪ್ಪಿಕೊಂಡರು.

ಇಂಧನ, ಹವಾಮಾನ, ಬಾಹ್ಯಾಕಾಶ ಮತ್ತು ತಂತ್ರಜ್ಞಾನ ಸಹಯೋಗಕ್ಕೆ ಚಾಲನೆ

ನಮ್ಮಆರ್ಥಿಕತೆಗಳಿಗೆ ಇಂಧನ ಭದ್ರತೆ ಮತ್ತು ಸಂಪನ್ಮೂಲ ಸಹಯೋಗದ ಹೆಚ್ಚುತ್ತಿರುವ ಮಹತ್ವವನ್ನು ಪ್ರಧಾನಮಂತ್ರಿಗಳು ಒತ್ತಿ ಹೇಳಿದರು. ವಿಶ್ವಾಸಾರ್ಹ, ಕೈಗೆಟುಕುವ ಮತ್ತು ಸುಸ್ಥಿರ ಇಂಧನ ಪೂರೈಕೆಯನ್ನು ಬೆಂಬಲಿಸಲು, ಇಂಧನ ಪರಿವರ್ತನೆಯನ್ನು ವೇಗಗೊಳಿಸುವಲ್ಲಿ ನವೀಕರಿಸಬಹುದಾದ ಇಂಧನ ಮತ್ತು ವಿದ್ಯುದೀಕರಣದ ನಿರ್ಣಾಯಕ ಪಾತ್ರವನ್ನು ಗುರುತಿಸಿದರು. ಈ ನಿಟ್ಟಿನಲ್ಲಿ  ಇಂಧನ ಭದ್ರತೆಯನ್ನು ಬಲಪಡಿಸಲು ಮತ್ತು ದೀರ್ಘಕಾಲೀನ ಆರ್ಥಿಕ ಸಮೃದ್ಧಿಯನ್ನು ಬೆಂಬಲಿಸಲು ಸಹಕಾರವನ್ನು ಆಳಗೊಳಿಸುವ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಈ ನಿಟ್ಟಿನಲ್ಲಿ, ಅವರು ಇಂಧನ ಭದ್ರತೆ ಕುರಿತ ಜಂಟಿ ಹೇಳಿಕೆಯನ್ನು ಸ್ವಾಗತಿಸಿದರು.

ಹವಾಮಾನ ಬದಲಾವಣೆಯನ್ನು ಪರಿಹರಿಸುವ ಪ್ರಯತ್ನಗಳನ್ನು ತ್ವರಿತಗೊಳಿಸುವ ಮಹತ್ವವನ್ನು ಇಬ್ಬರೂ ಪ್ರಧಾನಮಂತ್ರಿಗಳು ಪುನರುಚ್ಚರಿಸಿದರು. ಸಮಾನವಾದ, ಸಾಮಾನ್ಯವಾದ, ಆದರೆ ವಿಭಿನ್ನ ಜವಾಬ್ದಾರಿಗಳು ಮತ್ತು ಸಾಮರ್ಥ್ಯಗಳ ತತ್ವವನ್ನು ಪ್ರತಿಬಿಂಬಿಸಲು ʻಪ್ಯಾರಿಸ್ ಒಪ್ಪಂದʼವನ್ನು ಜಾರಿ  ಮತ್ತು ʻಸಿಒಪಿ 31ʼ ಮಾತುಕತೆಗಳ ಅಧ್ಯಕ್ಷರಾಗಿ ಆಸ್ಟ್ರೇಲಿಯಾದ ನಾಯಕತ್ವವನ್ನು ಸ್ವಾಗತಿಸಿದರು. ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರಗಳಂತಹ ಸಣ್ಣ ದ್ವೀಪ ರಾಷ್ಟ್ರಗಳು ಮತ್ತು ಇತರ ದುರ್ಬಲ ಅಭಿವೃದ್ಧಿಶೀಲ ರಾಷ್ಟ್ರಗಳು ವಿಶೇಷವಾಗಿ ಹವಾಮಾನ ಬದಲಾವಣೆಯ ಪರಿಣಾಮಗಳಿಂದ ಪ್ರಭಾವಿತವಾಗಿವೆ ಎಂದು ನಾಯಕರು ಒಪ್ಪಿಕೊಂಡರು. ಜಾಗತಿಕ ಹವಾಮಾನ ಕ್ರಮದ ವೇಗವನ್ನು ಕಾಪಾಡಿಕೊಳ್ಳುವ ಅಗತ್ಯವನ್ನು ಅವರು ಪುನರುಚ್ಚರಿಸಿದರು ಮತ್ತು ಹವಾಮಾನ ಹಣಕಾಸು, ತಂತ್ರಜ್ಞಾನ ವರ್ಗಾವಣೆ ಮತ್ತು ಸಾಮರ್ಥ್ಯ ವರ್ಧನೆಯ ಬೆಂಬಲದ ಮಹತ್ವವನ್ನು ಒತ್ತಿಹೇಳಿದರು. ಮೇಲ್ಛಾವಣಿ ಸೌರ ಅಕಾಡೆಮಿಯ ಸ್ಥಾಪನೆ ಮತ್ತು ಕಾರ್ಯಾಚರಣೆಯಂತಹ ಉಪಕ್ರಮಗಳು ಸೇರಿದಂತೆ ಭಾರತ-ಆಸ್ಟ್ರೇಲಿಯಾ ನವೀಕರಿಸಬಹುದಾದ ಇಂಧನ ಪಾಲುದಾರಿಕೆಯ ಅಡಿಯಲ್ಲಿ ಪ್ರಗತಿಯನ್ನು ನಾಯಕರು ಗುರುತಿಸಿದರು.

ಭವಿಷ್ಯದ ಬೆಳವಣಿಗೆಗೆ ಚಾಲನೆ ನೀಡಲು ಮತ್ತು ಹಂಚಿಕೆಯ ಸವಾಲುಗಳನ್ನು ಎದುರಿಸಲು ತಂತ್ರಜ್ಞಾನ ಮತ್ತು ನಾವೀನ್ಯತೆಯನ್ನು ಬಳಸಿಕೊಳ್ಳುವ ಮಹತ್ವವನ್ನು ಪ್ರಧಾನಮಂತ್ರಿಗಳು ಒತ್ತಿಹೇಳಿದರು. ತಂತ್ರಜ್ಞಾನದ ಸಹಕಾರ ಮತ್ತು ಬೆಳವಣಿಗೆಗೆ ಆಧಾರವಾಗಿರುವ ಜನರ ನಡುವಿನ ಬಲವಾದ ಸಂಪರ್ಕವನ್ನು ಒಪ್ಪಿಕೊಂಡರು. ನಿರ್ಣಾಯಕ ತಂತ್ರಜ್ಞಾನಗಳು, ಪೂರೈಕೆ ಸರಪಳಿ ವೈವಿಧ್ಯೀಕರಣ, ಸೈಬರ್ ಭದ್ರತೆ, ಡಿಜಿಟಲ್ ಸ್ಥಿತಿ ಮತ್ತು ರಕ್ಷಣಾ ಸಂಶೋಧನೆಯ ಮಹತ್ವಾಕಾಂಕ್ಷೆಯನ್ನು ಹೆಚ್ಚಿಸಲು ಸೈಬರ್, ನಿರ್ಣಾಯಕ ತಂತ್ರಜ್ಞಾನಗಳು ಮತ್ತು ಪೂರೈಕೆ ಸರಪಳಿಗಳ (ಪಿಎಸಿಟಿಎಸ್) ಆಸ್ಟ್ರೇಲಿಯಾ-ಭಾರತ ಸಹಭಾಗಿತ್ವಕ್ಕೆ ಇಬ್ಬರೂ ನಾಯಕರು ಸಹಮತ ಸೂಚಿಸಿದರು. ಆಸ್ಟ್ರೇಲಿಯಾ-ಕೆನಡಾ-ಭಾರತ ತಂತ್ರಜ್ಞಾನ ಮತ್ತು ನಾವಿನ್ಯತೆ (ಎಸಿಐಟಿಐ) ಪಾಲುದಾರಿಕೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿನ ಸಹಕಾರಕ್ಕೆ ಅಡಿಪಾಯವಾಗಿ ವಿಶ್ವಾಸಾರ್ಹ ಸಹಭಾಗಿತ್ವಕ್ಕೆ ತಮ್ಮ ಹಂಚಿಕೆಯ ಬದ್ಧತೆಯನ್ನು ಪುನರುಚ್ಚರಿಸಿದರು.

ಉದ್ಯಮದಿಂದ ಉದ್ಯಮದ ಪಾಲುದಾರಿಕೆ ಸೇರಿದಂತೆ ಬಾಹ್ಯಾಕಾಶ ಸಹಕಾರವನ್ನು ಬಲಪಡಿಸುವ ಮಹತ್ವವನ್ನು ಪ್ರಧಾನಮಂತ್ರಿಗಳು ಒತ್ತಿ ಹೇಳಿದರು. ಕೊಕೊಸ್ ಕೀಲಿಂಗ್ ದ್ವೀಪಗಳಲ್ಲಿ ತಾತ್ಕಾಲಿಕ ಬಾಹ್ಯಾಕಾಶ ಟ್ರ್ಯಾಕಿಂಗ್ ಟರ್ಮಿನಲ್ ಕಾರ್ಯಾರಂಭ ಸೇರಿದಂತೆ ಭಾರತದ ಗಗನಯಾನ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮಕ್ಕೆ ಆಸ್ಟ್ರೇಲಿಯಾದ ನಿರಂತರ ಬೆಂಬಲವನ್ನು ನಾಯಕರು ಸ್ವಾಗತಿಸಿದರು ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆ (ಎಎಸ್ಎ) ನಡುವಿನ ಸಹಯೋಗವನ್ನು ಮತ್ತಷ್ಟು ಗಾಢವಾಗಿಸುವ ಭರವಸೆಯನ್ನು ವ್ಯಕ್ತಪಡಿಸಿದರು.

ಪರಮಾಣು ಪೂರೈಕೆದಾರರ ಗುಂಪಿನ ಭಾರತದ ಸದಸ್ಯತ್ವಕ್ಕೆ ಆಸ್ಟ್ರೇಲಿಯಾ ತನ್ನ ಬಲವಾದ ಬೆಂಬಲವನ್ನು ಪುನರುಚ್ಚರಿಸಿತು ಮತ್ತು ಆಸ್ಟ್ರೇಲಿಯಾ-ಭಾರತ ಪರಮಾಣು ಸಹಕಾರ ಒಪ್ಪಂದವನ್ನು ನಿರ್ಮಿಸಿ, ಇಬ್ಬರೂ ಪ್ರಧಾನ ಮಂತ್ರಿಗಳು ಆಡಳಿತಾತ್ಮಕ ವ್ಯವಸ್ಥೆಯನ್ನು ಅಂತಿಮಗೊಳಿಸಿ ಮತ್ತು ಸಹಿ ಹಾಕುವುದನ್ನು ಸ್ವಾಗತಿಸಿದರು, ಇದು ಪ್ರತ್ಯೇಕವಾಗಿ ಶಾಂತಿಯುತ ಉದ್ದೇಶಗಳಿಗಾಗಿ ಮತ್ತು ಐಎಇಎ ಸುರಕ್ಷತಾ ಕ್ರಮಗಳ ಅಡಿಯಲ್ಲಿ ಭಾರತಕ್ಕೆ ದೀರ್ಘಕಾಲೀನ ಆಸ್ಟ್ರೇಲಿಯಾದ ಯುರೇನಿಯಂ ರಫ್ತು ಮಾಡಲು ಅನುವು ಮಾಡಿಕೊಡುತ್ತದೆ.

ಶಿಕ್ಷಣ, ಕೌಶಲ್ಯ ಮತ್ತು ಜನರ ನಡುವಿನ ಸಂಪರ್ಕವನ್ನು ಬಲಪಡಿಸುವುದು

ಜನರು ಪಾಲುದಾರಿಕೆಯ ಹೃದಯಭಾಗದಲ್ಲಿದ್ದಾರೆ ಎಂದು ಒತ್ತಿಹೇಳಿದ ಪ್ರಧಾನಮಂತ್ರಿಗಳು, ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಸಮುದಾಯವು ಈಗ ಆಸ್ಟ್ರೇಲಿಯಾದ ಅತಿದೊಡ್ಡ ಸಾಗರೋತ್ತರ ಮೂಲದ ಗುಂಪು ಎಂದು ಹೇಳಿದರು. ಆಸ್ಟ್ರೇಲಿಯಾದ ರೋಮಾಂಚಕ, ಬಹುಸಾಂಸ್ಕೃತಿಕ ಸಮಾಜದಲ್ಲಿ ಭಾರತೀಯ ಆಸ್ಟ್ರೇಲಿಯಾ ಸಮುದಾಯವು ವಹಿಸಿದ ಪ್ರಮುಖ ಪಾತ್ರವನ್ನು ನಾಯಕರು ಗೌರವಿಸಿದರು. ಜೊತೆಗೆ ಆರ್ಥಿಕ ಸಹಯೋಗ ಮತ್ತು ಜನರ ನಡುವಿನ ಸಂಪರ್ಕವನ್ನು ಗಾಢವಾಗಿಸಲು ಆಸ್ಟ್ರೇಲಿಯಾ-ಭಾರತ ಸಂಬಂಧಗಳ ಕೇಂದ್ರದ ಮೈತ್ರಿ ಅನುದಾನಕ್ಕಾಗಿ 10 ದಶಲಕ್ಷ ಡಾಲರ್ ಘೋಷಣೆಯನ್ನು ಸ್ವಾಗತಿಸಿದರು. ನಿಯಮಿತ ಉನ್ನತ ಮಟ್ಟದ ಮತ್ತು ಸಚಿವರ ಮಾತುಕತೆಗಳ ಆಧಾರದ ಮೇಲೆ, ಸಂಸದೀಯ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸಲಾಗಿದೆ. ವಿಶೇಷವಾಗಿ ಆಸ್ಟ್ರೇಲಿಯಾದ ಸಂಸತ್ತಿನಲ್ಲಿ ʻಪಾರ್ಲಿಮೆಂಟರಿ ಫ್ರೆಂಡ್ಸ್ ಆಫ್ ಇಂಡಿಯಾʼ ಗುಂಪಿನಂತೆಯೇ ಭಾರತದ ಲೋಕಸಭೆಯಲ್ಲಿ ʻಆಸ್ಟ್ರೇಲಿಯಾದೊಂದಿಗೆ ಸಂಸದೀಯ ಸ್ನೇಹ ಗುಂಪುʼ ಸ್ಥಾಪಿಸಲಾಗಿದೆ ಎಂದು ಪ್ರಧಾನ ಮಂತ್ರಿಗಳು ಒಪ್ಪಿಕೊಂಡರು. ಸಂಸತ್ತು ಸೇರಿದಂತೆ ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ಸಹಕಾರ ಮುಂದುವರಿಯಬೇಕು ಎಂದು ಇಬ್ಬರೂ ಪ್ರಧಾನ ಮಂತ್ರಿಗಳು ಒಪ್ಪಿಕೊಂಡರು.

ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಸ್ಟ್ರೇಲಿಯಾದ ವಿಶ್ವವಿದ್ಯಾಲಯ ಕ್ಯಾಂಪಸ್‌ಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಅಥವಾ ಹಾಗೆ ಮಾಡಲು ಅನುಮೋದನೆ ನೀಡಿರುವುದರಿಂದ ವಿಸ್ತರಣೆಯಾಗುತ್ತಿರುವ ಶಿಕ್ಷಣ ಸಹಯೋಗವನ್ನು ಪ್ರಧಾನಮಂತ್ರಿಗಳು ಎತ್ತಿ ತೋರಿಸಿದರು.  ಬೆಂಗಳೂರಿನಲ್ಲಿ ತನ್ನ ಕ್ಯಾಂಪಸ್ ಸ್ಥಾಪಿಸಲು ʻಫ್ಲಿಂಡರ್ಸ್ ವಿಶ್ವವಿದ್ಯಾಲಯʼಕ್ಕೆ ಭಾರತದ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಆಶಯ ಪತ್ರ (ಎಲ್ಒಐ) ನೀಡಿರುವುದನ್ನು ಮತ್ತು ಗುರುಗ್ರಾಮದಲ್ಲಿ ತನ್ನ ಕ್ಯಾಂಪಸ್ ಅನ್ನು ಕಾರ್ಯಗತಗೊಳಿಸಲು ವಿಕ್ಟೋರಿಯಾ ವಿಶ್ವವಿದ್ಯಾಲಯಕ್ಕೆ ಅನುಮೋದನೆ ಪತ್ರ (ಎಲ್ಒಎ) ನೀಡಿರುವುದನ್ನು ಸ್ವಾಗತಿಸಿದರು. ಆಸ್ಟ್ರೇಲಿಯಾದಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಗುತ್ತದೆ ಮತ್ತು ಅವರು ಆಸ್ಟ್ರೇಲಿಯಾದ ತರಗತಿಗಳು, ಕ್ಯಾಂಪಸ್‌ಗಳು ಮತ್ತು ಸಮುದಾಯಗಳ ಮೌಲ್ಯಯುತ ಸದಸ್ಯರಾಗಿದ್ದಾರೆ ಎಂದು ಪ್ರಧಾನಿ ಅಲ್ಬನೀಸ್ ಒತ್ತಿ ಹೇಳಿದರು. ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಸಹಕಾರವನ್ನು ವಿಸ್ತರಿಸಲು ಒಡಿಶಾದ ಭುವನೇಶ್ವರದಲ್ಲಿರುವ ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆಯಲ್ಲಿ ಗಣಿಗಾರಿಕೆಯಲ್ಲಿ ಕೌಶಲ್ಯಕ್ಕಾಗಿ ರಾಷ್ಟ್ರೀಯ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಲು ಬೆಂಬಲಿಸಲು ಪಶ್ಚಿಮ ಆಸ್ಟ್ರೇಲಿಯಾ ಸರ್ಕಾರ ಮತ್ತು ಭಾರತ ಸರ್ಕಾರದ ನಡುವಿನ ಒಪ್ಪಂದವನ್ನು ನಾಯಕರು ಸ್ವಾಗತಿಸಿದರು.

ಕ್ರೀಡೆಯು ಕೇವಲ ಪರಸ್ಪರ ಹಂಚಿಕೊಂಡ ಉತ್ಸಾಹಕ್ಕಿಂತಲೂ ಮಿಗಿಲಾದದ್ದು ಪ್ರಧಾನಮಂತ್ರಿಗಳು ಒಪ್ಪಿಕೊಂಡರು. ಇದು ನಮ್ಮ ದ್ವಿಪಕ್ಷೀಯ ಸಂಬಂಧದ ಪ್ರಮುಖ ಅಂಶವಾಗಿದ್ದು ವ್ಯಾಪಾರ, ಪ್ರವಾಸೋದ್ಯಮ ಮತ್ತು ಹೂಡಿಕೆಯನ್ನು ಹೆಚ್ಚಿಸಲು ಕೊಡುಗೆ ನೀಡುತ್ತದೆ. ಬ್ರಿಸ್ಬೇನ್‌ನಲ್ಲಿ 2032ರ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಮತ್ತು 2030ರಲ್ಲಿ ಅಹಮದಾಬಾದ್‌ನಲ್ಲಿ ನಡೆಯಲಿರುವ ಕಾಮನ್ ವೆಲ್ತ್ ಕ್ರೀಡಾಕೂಟದ ಆತಿಥ್ಯ ವಹಿಸಲು ಭಾರತ ಮತ್ತು ಆಸ್ಟ್ರೇಲಿಯಾ ಸಜ್ಜಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಮುಖ ಕ್ರೀಡಾ ಕಾರ್ಯಕ್ರಮಗಳು ಸೇರಿದಂತೆ ಪ್ರಮುಖ ಕ್ರೀಡಾಕೂಟಗಳು ಸೇರಿದಂತೆ ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ಕ್ರೀಡಾ ಸಹಕಾರವನ್ನು ಗಾಢವಾಗಿಸಲು ಭಾರತ-ಆಸ್ಟ್ರೇಲಿಯಾ ಕ್ರೀಡಾ ಸಹಯೋಗದ ಮಾರ್ಗಸೂಚಿಯನ್ನು ನಾಯಕರು ಸ್ವಾಗತಿಸಿದರು.

ಸಾಂಸ್ಕೃತಿಕ ಸಹಕಾರ ಮತ್ತು ಸಾಂಸ್ಕೃತಿಕ ಪರಂಪರೆಯ ರಕ್ಷಣೆ ಹಾಗೂ ಸಂರಕ್ಷಣೆಯ ಮಹತ್ವವನ್ನು ಒತ್ತಿಹೇಳಿದ ಪ್ರಧಾನಮಂತ್ರಿಗಳು, ಭಾರತದಲ್ಲಿ ಬಂಧನಕ್ಕೊಳಗಾಗಿದ್ದ ಪ್ರಥಮ ರಾಷ್ಟ್ರಗಳ ಪೂರ್ವಜರ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ತೆಲುಗರ ಸ್ವಯಂಪ್ರೇರಿತ ಮತ್ತು ಬೇಷರತ್ತಾದ ವಾಪಸಾತಿಯ ಪ್ರಗತಿಯನ್ನು ಸ್ವಾಗತಿಸಿದರು. ಆಸ್ಟ್ರೇಲಿಯಾದ ಸಂಗ್ರಹಣಾ ಸಂಸ್ಥೆಗಳಲ್ಲಿ ಇರಿಸಲಾದ ಹಲವಾರು ಸಾಂಸ್ಕೃತಿಕ ಕಲಾಕೃತಿಗಳನ್ನು ಸ್ವಯಂಪ್ರೇರಿತ ಭಾರತಕ್ಕೆ ಮರಳಿಸಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಅಲ್ಬನೀಸ್ ಅವರಿಗೆ ಧನ್ಯವಾದ ಅರ್ಪಿಸಿದರು.

ಶಾಂತಿಯುತ, ಸ್ಥಿರ ಮತ್ತು ಸಮೃದ್ಧ ಇಂಡೋ ಪೆಸಿಫಿಕ್‌ಗೆ ಉತ್ತೇಜನ

ಮುಕ್ತ ಮತ್ತು ನಿಯಮ ಆಧಾರಿತ ಇಂಡೋ ಪೆಸಿಫಿಕ್‌ಗೆ ತಮ್ಮ ಹಂಚಿಕೆಯ ಬದ್ಧತೆಯನ್ನು ಪ್ರಧಾನಮಂತ್ರಿಗಳು ಪುನರುಚ್ಚರಿಸಿದರು. ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಚಲಾಯಿಸಲು ಸಾಧ್ಯವಾಗುವ ಮಹತ್ವವನ್ನು ಅವರು ಒತ್ತಿಹೇಳಿದರು, ವಿಶೇಷವಾಗಿ ವಿಶ್ವಸಂಸ್ಥೆಯ ಸಮುದ್ರ ಕಾನೂನಿನ ಸಮಾವೇಶ (ಯುಎನ್‌ಸಿಎಲ್ಒಎಸ್), ನೌಕಾಯಾನ ಮತ್ತು ವಾಯುಯಾನದ ಸ್ವಾತಂತ್ರ್ಯ ಸೇರಿದಂತೆ ಮತ್ತು ವಿವಾದಗಳನ್ನು ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಶಾಂತಿಯುತವಾಗಿ ಪರಿಹರಿಸಬೇಕು ಎಂದು ಒತ್ತಿ ಹೇಳಿದರು. ಯಥಾಸ್ಥಿತಿಯನ್ನು ಬದಲಾಯಿಸಲು ಮತ್ತು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ದುರ್ಬಲಗೊಳಿಸಲು ಯಾವುದೇ ಅಸ್ಥಿರಗೊಳಿಸುವ ಅಥವಾ ಏಕಪಕ್ಷೀಯ ಕ್ರಮವನ್ನು ಅವರು ಬಲವಾಗಿ ವಿರೋಧಿಸಿದರು.

ಪರಸ್ರಪ ಸಮಾನ ಸವಾಲುಗಳನ್ನು ಎದುರಿಸಲು ಪ್ರಾದೇಶಿಕ ಮತ್ತು ಬಹುಪಕ್ಷೀಯ ಸಂಸ್ಥೆಗಳ ಮೂಲಕ ಸಹಕಾರವನ್ನು ಬಲಪಡಿಸುವ ಬದ್ಧತೆಯನ್ನು ಪ್ರಧಾನಮಂತ್ರಿಗಳು ಪುನರುಚ್ಚರಿಸಿದರು. ಇಂಡೋ ಪೆಸಿಫಿಕ್ ದೇಶಗಳಿಗೆ ಪ್ರಾಯೋಗಿಕ ಮತ್ತು ದೃಢವಾದ ಪ್ರಯೋಜನವನ್ನು ನೀಡುವ ಪಾಲುದಾರಿಕೆಯಾಗಿ ʻಕ್ವಾಡ್ʼನ ಮಹತ್ವವನ್ನು ಅವರು ಪುನರುಚ್ಚರಿಸಿದರು. ಮತ್ತು ಮೇ 2026 ರಲ್ಲಿ ನವದೆಹಲಿಯಲ್ಲಿ ʻಕ್ವಾಡ್ʼ ವಿದೇಶಾಂಗ ಸಚಿವರು ಒಪ್ಪಿಕೊಂಡ ಗಣನೀಯ ಫಲಿತಾಂಶಗಳನ್ನು ಸ್ವಾಗತಿಸಿದರು.

ಭಾರತದ ಅಧ್ಯಕ್ಷತೆಯಲ್ಲಿ ಹಿಂದೂ ಮಹಾಸಾಗರ ರಿಮ್ ಅಸೋಸಿಯೇಷನ್ (ಐಒಆರ್‌ಎ) ಸೇರಿದಂತೆ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸಹಕಾರವನ್ನು ಆಳಗೊಳಿಸುವ ಮಹತ್ವವನ್ನು ಪ್ರಧಾನಮಂತ್ರಿಗಳು ಒತ್ತಿಹೇಳಿದರು ಮತ್ತು ಪ್ರಾದೇಶಿಕ ಉಪಕ್ರಮಗಳ ಅಡಿಯಲ್ಲಿ ನಿರಂತರ ತೊಡಗಿಸಿಕೊಳ್ಳುವಿಕೆಯನ್ನು ಸ್ವಾಗತಿಸಿದರು. ಜೂನ್‌ನಲ್ಲಿ ಚೆನ್ನೈನ ಕಡಲ ರಕ್ಷಣಾ ಸಮನ್ವಯ ಕೇಂದ್ರದಲ್ಲಿ (ಎಂಆರ್‌ಸಿಸಿ) ಆಸ್ಟ್ರೇಲಿಯಾ ಮತ್ತು ಭಾರತ ಜಂಟಿಯಾಗಿ ನಡೆಸಿದ ʻಐಒಆರ್‌ಎʼ ಸದಸ್ಯ ರಾಷ್ಟ್ರಗಳಿಗೆ ಶೋಧ ಮತ್ತು ರಕ್ಷಣಾ ತರಬೇತಿಯನ್ನು ಅವರು ಸ್ವಾಗತಿಸಿದರು. ಅಲ್ಲದೆ, ಜೂನ್‌ನಲ್ಲಿ ಪರ್ತ್‌ನಲ್ಲಿ ಕಡಲ ಸುರಕ್ಷತೆ ಮತ್ತು ಭದ್ರತೆ ಕುರಿತ ʻಐಒಆರ್‌ಎʼ ಕಾರ್ಯಕಾರಿ ಗುಂಪಿನ ಆರನೇ ಸಭೆಯನ್ನು ಆಸ್ಟ್ರೇಲಿಯಾ ಆಯೋಜಿಸಿದ್ದನ್ನು ಸ್ವಾಗತಿಸಿದರು. ಇಂಡೋ-ಪೆಸಿಫಿಕ್ ಸಾಗರ ಉಪಕ್ರಮ (ಐಪಿಒಐ) ಅಡಿಯಲ್ಲಿ ಪ್ರಸ್ತುತ ಸಹಕಾರ ಚಟುವಟಿಕೆಗಳನ್ನು ಅವರು ಸ್ವಾಗತಿಸಿದರು. ಕಡಲ ಕ್ಷೇತ್ರದ ಜಾಗೃತಿ, ಸಮುದ್ರ ಮಾಲಿನ್ಯ, ನೀಲಿ ಆರ್ಥಿಕತೆ ಮತ್ತು ಪ್ರಾದೇಶಿಕ ಸಂಸ್ಥೆಗಳ ಮೂಲಕ ಅವಕಾಶಗಳನ್ನು ಅನ್ವೇಷಿಸುವುದು ಸೇರಿದಂತೆ ಆಸ್ಟ್ರೇಲಿಯಾ-ಭಾರತ-ಇಂಡೋನೇಷ್ಯಾ ತ್ರಿಪಕ್ಷೀಯ ಕಾರ್ಯವಿಧಾನದ ಮೂಲಕ ಹೆಚ್ಚಿನ ಸಹಕಾರವನ್ನು ಉಭಯ ನಾಯಕರು ಸ್ವಾಗತಿಸಿದರು.

ಉಭಯ ಪ್ರಧಾನಮಂತ್ರಿಗಳು ಪೆಸಿಫಿಕ್ ದ್ವೀಪಗಳ ವೇದಿಕೆಗೆ (ಪಿಐಎಫ್) ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ನೀಲಿ ಪೆಸಿಫಿಕ್ ಖಂಡಕ್ಕಾಗಿ ಅದರ 2050 ಕಾರ್ಯತಂತ್ರದ ಮಹತ್ವ ಮತ್ತು ಪೆಸಿಫಿಕ್ ಪ್ರದೇಶದ ಸಾಮೂಹಿಕ ಆದ್ಯತೆಗಳನ್ನು ಪ್ರತಿಬಿಂಬಿಸುವ ಪಾಲುದಾರಿಕೆಯನ್ನು ಗುರುತಿಸಿದರು. ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರ ವೇದಿಕೆ (ಎಫ್ಐಪಿಐಸಿ) ಚೌಕಟ್ಟಿನ ಮೂಲಕ ಪೆಸಿಫಿಕ್ ದ್ವೀಪ ರಾಷ್ಟ್ರಗಳಿಗೆ ಅಭಿವೃದ್ಧಿ ಪಾಲುದಾರಿಕೆಯನ್ನು ವಿಸ್ತರಿಸುವಲ್ಲಿ ಭಾರತದ ಪಾತ್ರವನ್ನು ಪ್ರಧಾನಿ ಅಲ್ಬನೀಸ್ ಗುರುತಿಸಿದರು. ಪ್ರಧಾನ ಮಂತ್ರಿಗಳು ʻಆಸಿಯಾನ್ʼ ಕೇಂದ್ರೀಯತೆ ಮತ್ತು ʻಆಸಿಯಾನ್ʼ ನೇತೃತ್ವದ ಪ್ರಾದೇಶಿಕ ವ್ಯವಸ್ಥೆಗೆ ತಮ್ಮ ಬೆಂಬಲವನ್ನು ಪುನರುಚ್ಚರಿಸಿದರು. ಇಂಡೋ ಪೆಸಿಫಿಕ್ (ಎಒಐಪಿ) ಕುರಿತು ಆಸಿಯಾನ್ ದೃಷ್ಟಿಕೋನದ ಅನುಷ್ಠಾನಕ್ಕೆ ಅಚಲ ಬೆಂಬಲವನ್ನು ವ್ಯಕ್ತಪಡಿಸಿದರು.

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಬಗ್ಗೆ ಪ್ರಧಾನಮಂತ್ರಿಗಳು ಕಳವಳ ವ್ಯಕ್ತಪಡಿಸಿದರು ಮತ್ತು ಎಲ್ಲ ದೇಶಗಳಿಗೂ ಸಂಯಮ ತೋರಲು, ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ನಾಗರಿಕರ ರಕ್ಷಣೆ ಹಾಗೂ ಇಂಧನ ಪೂರೈಕೆ ಮತ್ತು ವಾಣಿಜ್ಯದ ನಿರಂತರ ಹರಿವನ್ನು ಖಾತ್ರಿಪಡಿಸಿಕೊಳ್ಳಲು ಕರೆ ನೀಡಿದರು. ಸಂಘರ್ಷಕ್ಕೆ ಶಾಂತಿಯುತ ಮತ್ತು ಶಾಶ್ವತ ಪರಿಹಾರವನ್ನು ಸಾಧಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆ ಮತ್ತು ಅಂತರರಾಷ್ಟ್ರೀಯ ಕಾನೂನಿನ ಅನುಸರಣೆಯ ಮಹತ್ವವನ್ನು ಅವರು ಪುನರುಚ್ಚರಿಸಿದರು. ಪ್ರಧಾನ ಮಂತ್ರಿಗಳು ಉಕ್ರೇನ್‌ನಲ್ಲಿನ ಯುದ್ಧದ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಮಾನವೀಯ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು ಮತ್ತು ಸಂಘರ್ಷಕ್ಕೆ ಶಾಂತಿಯುತ ಪರಿಹಾರಕ್ಕೆ ಕರೆ ನೀಡಿದರು. ಮ್ಯಾನ್ಮಾರ್ ನಲ್ಲಿನ ಪರಿಸ್ಥಿತಿ ಮತ್ತು ಪ್ರದೇಶದ ಮೇಲೆ ಅದರ ಪರಿಣಾಮದ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ಐದು ಅಂಶಗಳ ಒಮ್ಮತ ಸೇರಿದಂತೆ ಆಸಿಯಾನ್ ನೇತೃತ್ವದ ಪ್ರಯತ್ನಗಳಿಗೆ ತಮ್ಮ ಬೆಂಬಲವನ್ನು ಪುನರುಚ್ಚರಿಸಿದರು.

ಭಯೋತ್ಪಾದನೆಗೆ ಪೂರಕವಾದ ಚಟುವಟಿಕೆಗಳು ಮತ್ತು ಹಿಂಸಾತ್ಮಕ ವಿಧ್ವಂಸಕತೆಯನ್ನು ಪ್ರಧಾನ ಮಂತ್ರಿಗಳು ನಿಸ್ಸಂದಿಗ್ಧವಾಗಿ ಖಂಡಿಸಿದರು. ಭಯೋತ್ಪಾದನೆಯ ಬೆದರಿಕೆಯನ್ನು ಸಮಗ್ರ ಮತ್ತು ನಿರಂತರ ರೀತಿಯಲ್ಲಿ ಎದುರಿಸುವ ಎಲ್ಲಾ ದೇಶಗಳ ಮಹತ್ವವನ್ನು ಅವರು ಒತ್ತಿ ಹೇಳಿದರು. ʻವಿಶ್ವಸಂಸ್ಥೆಯ ಭದ್ರತಾ ಮಂಡಳಿ 1267 ನಿರ್ಬಂಧ ಸಮಿತಿʼ ಪಟ್ಟಿ ಮಾಡಿರುವ ಭಯೋತ್ಪಾದಕರು ಮತ್ತು ಅವರ ಪ್ರಾಕ್ಸಿಗಳು, ಅಂಗಸಂಸ್ಥೆಗಳು, ಪ್ರಾಯೋಜಕರು ಮತ್ತು ಹಣಕಾಸು ಸಂಸ್ಥೆಗಳು ಸೇರಿದಂತೆ ಜಾಗತಿಕವಾಗಿ ನಿಷೇಧಿತ ಭಯೋತ್ಪಾದಕರು ಮತ್ತು ಭಯೋತ್ಪಾದಕ ಘಟಕಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರೆ ನೀಡಿದರು. ಭಯೋತ್ಪಾದನೆ ಎದುರಿಸುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಹಕಾರವನ್ನು ಹೆಚ್ಚಿಸುವ ಅಗತ್ಯವನ್ನು ಪ್ರಧಾನಮಂತ್ರಿಗಳು ಗುರುತಿಸಿದರು. ನಮ್ಮ ಪ್ರದೇಶದಲ್ಲಿನ ಭಯೋತ್ಪಾದಕ ಬೆದರಿಕೆಗಳ ಬಗ್ಗೆ ಮಾಹಿತಿ ಹಂಚಿಕೆಯನ್ನು ಹೆಚ್ಚಿಸಲು ಮತ್ತು ಆನ್‌ಲೈನ್‌ ಮೂಲಭೂತವಾದ, ಭಯೋತ್ಪಾದನೆಗೆ ಅನುಕೂಲಕರವಾದ ಹಿಂಸಾತ್ಮಕ ಉಗ್ರವಾದ ಮತ್ತು ಭಯೋತ್ಪಾದಕ ಉದ್ದೇಶಗಳಿಗಾಗಿ ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನದ ಬಳಕೆಯ ಸವಾಲನ್ನು ಎದುರಿಸುವುದು, ಭಯೋತ್ಪಾದನೆಗೆ ಹಣಕಾಸು, ನಿರ್ಣಾಯಕ ಮೂಲಸೌಕರ್ಯ ಮತ್ತು ಕಡಲ ಕ್ಷೇತ್ರಕ್ಕೆ ಬೆದರಿಕೆಗಳು ಸೇರಿದಂತೆ ಮೂಲಭೂತವಾದವನ್ನು ಎದುರಿಸಲು ವರ್ಧಿತ ಸಹಯೋಗದ ಅವಕಾಶಗಳನ್ನು ಅನ್ವೇಷಿಸಲು ಬದ್ಧತೆಯನ್ನು ಉಭಯ ನಾಯಕರು ವ್ಯಕ್ತಪಡಿಸಿದರು. ಪಹಲ್ಗಾಮ್ ಮತ್ತು ಬೊಂಡಿ ಕಡಲತೀರದಲ್ಲಿ ನಡೆದ ಭಯಾನಕ ದಾಳಿ ಸೇರಿದಂತೆ ಭಯೋತ್ಪಾದಕ ದಾಳಿಗಳನ್ನು ಖಂಡಿಸಿದರು.

ಸಮಕಾಲೀನ ಭೌಗೋಳಿಕ ರಾಜಕೀಯ ವಾಸ್ತವಗಳನ್ನು ಉತ್ತಮವಾಗಿ ಪ್ರತಿಬಿಂಬಿಸಲು ಹೆಚ್ಚಿನ ಶಾಶ್ವತ ಮತ್ತು ಶಾಶ್ವತವಲ್ಲದ ಪ್ರಾತಿನಿಧ್ಯ ಸೇರಿದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯು.ಎನ್.ಎಸ್.ಸಿ.) ತುರ್ತು ಸುಧಾರಣೆಯ ಅಗತ್ಯವನ್ನು ಪ್ರಧಾನಮಂತ್ರಿಗಳು ಒತ್ತಿಹೇಳಿದರು. ಬಹುಪಕ್ಷೀಯತೆ ಮತ್ತು ವಿಶ್ವಸಂಸ್ಥೆಗೆ ಭಾರತದ ದೀರ್ಘಕಾಲದ ಕೊಡುಗೆಗಳನ್ನು ಗಮನದಲ್ಲಿಟ್ಟುಕೊಂಡು, ಸುಧಾರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನಕ್ಕಾಗಿ ಭಾರತದ ಉಮೇದುವಾರಿಕೆಗೆ ಆಸ್ಟ್ರೇಲಿಯಾ ತನ್ನ ಬೆಂಬಲವನ್ನು ಪುನರುಚ್ಚರಿಸಿತು. 2028-2029ರ ಅವಧಿಗೆ ಭಾರತ ಮತ್ತು 2029-2030ರ ಅವಧಿಗೆ ಆಸ್ಟ್ರೇಲಿಯಾ - ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಪರಸ್ಪರರ ಶಾಶ್ವತವಲ್ಲದ ಉಮೇದುವಾರಿಕೆಗಳಿಗೆ ಪರಸ್ಪರ ಪರಸ್ಪರ ಬೆಂಬಲವನ್ನು ಇಬ್ಬರೂ ನಾಯಕರು ಪುನರುಚ್ಚರಿಸಿದರು. ಸಂಸ್ಥೆಯ ದಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಹೆಚ್ಚಿಸಲು ವಿಶ್ವಸಂಸ್ಥೆಯ ಸುಧಾರಣೆಗಳ ವ್ಯಾಪಕ ಅಗತ್ಯವನ್ನು ಅವರು ಒತ್ತಿ ಹೇಳಿದರು.

ದ್ವಿಪಕ್ಷೀಯ ಕಾರ್ಯಕ್ರಮಗಳ ಪ್ರಗತಿಯ ಬಗ್ಗೆ ಪ್ರಧಾನಮಂತ್ರಿಗಳು ತೃಪ್ತಿ ವ್ಯಕ್ತಪಡಿಸಿದರು. ಪರಸ್ಪರ ಅನುಕೂಲಕ್ಕಾಗಿ ಮತ್ತು ಮುಕ್ತ, ನಿಯಮ ಆಧಾರಿತ, ಶಾಂತಿಯುತ ಹಾಗೂ ಸಮೃದ್ಧ ಇಂಡೋ-ಪೆಸಿಫಿಕ್‌ಗಾಗಿ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವದ ಮುಂದಿನ ಹಂತವನ್ನು ರೂಪಿಸುವ ತಮ್ಮ ಬದ್ಧತೆಯನ್ನು ದೃಢಪಡಿಸಿದರು.

 

*****


(रिलीज़ आईडी: 2282774) आगंतुक पटल : 17
इस विज्ञप्ति को इन भाषाओं में पढ़ें: English , Urdu , हिन्दी , Assamese , Bengali , Bengali-TR , Punjabi , Gujarati , Tamil , Telugu , Malayalam