ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

ಭಾರತದಿಂದ ಸಿಂಗಾಪುರಕ್ಕೆ ಪ್ರೀಮಿಯಂ ಬಂಗನಪಲ್ಲಿ ಮಾವಿನ ಹಣ್ಣುಗಳ ಮೊದಲ ವಾಣಿಜ್ಯ ಸಮುದ್ರ ಸಾಗಣೆಯನ್ನು ಎ ಪಿ ಇ ಡಿ ಎ ಸುಗಮಗೊಳಿಸಿದೆ

प्रविष्टि तिथि: 25 JUN 2026 12:42PM by PIB Bengaluru

ಭಾರತದ ತಾಜಾ ಉತ್ಪನ್ನಗಳ ರಫ್ತು ವಲಯಕ್ಕೆ ಗಮನಾರ್ಹ ಉತ್ತೇಜನ ನೀಡುವ ನಿಟ್ಟಿನಲ್ಲಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಬರುವ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವು (ಎ ಪಿ ಇ ಡಿ ಎ), ಲಕ್ನೋದ ಐಸಿಎಆರ್-ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಫಾರ್ ಸಬ್‌ ಟ್ರಾಪಿಕಲ್ ಹಾರ್ಟಿಕಲ್ಚರ್ (ಸಿ ಎಸ್‌ ಎಚ್) ಸಹಯೋಗದೊಂದಿಗೆ, ಭಾರತದಿಂದ ಸಿಂಗಾಪುರಕ್ಕೆ ಪ್ರೀಮಿಯಂ ಬಂಗನಪಲ್ಲಿ ಮಾವಿನ ಹಣ್ಣುಗಳ ಮೊದಲ ವಾಣಿಜ್ಯ ಸಮುದ್ರ ರವಾನೆಯನ್ನು ಯಶಸ್ವಿಯಾಗಿ ಸುಗಮಗೊಳಿಸಿದೆ.

5 ಮೆಟ್ರಿಕ್ ಟನ್ ಬಂಗನಪಲ್ಲಿ ಮಾವಿನ ಹಣ್ಣುಗಳನ್ನು ಒಳಗೊಂಡಿದ್ದ ಸರಕನ್ನು ಮೆಸರ್ಸ್ ಓಸಮ್ ಫುಡ್ ಸೊಲ್ಯೂಷನ್ಸ್ ಎಲ್‌ ಎಲ್‌ ಪಿ ಸಂಸ್ಥೆಯು 11 ಜೂನ್ 2026 ರಂದು ರಫ್ತು ಮಾಡಿತ್ತು ಮತ್ತು ಇದು 24 ಜೂನ್ 2026 ರಂದು ಸಿಂಗಾಪುರವನ್ನು ತಲುಪಿದೆ. ಈ ಯಶಸ್ವಿ ರಫ್ತು ಪ್ರಕ್ರಿಯೆಯು ಪ್ರೀಮಿಯಂ ಭಾರತೀಯ ಮಾವಿನ ಹಣ್ಣುಗಳಿಗೆ ಮಾರುಕಟ್ಟೆ ಪ್ರವೇಶವನ್ನು ವಿಸ್ತರಿಸುವುದರ ಜೊತೆಗೆ, ಭಾರತದ ತೋಟಗಾರಿಕಾ ಉತ್ಪನ್ನಗಳಿಗೆ ವೆಚ್ಚ-ಪರಿಣಾಮಕಾರಿ ಮತ್ತು ಸುಸ್ಥಿರ ರಫ್ತು ಲಾಜಿಸ್ಟಿಕ್ಸ್ ಅನ್ನು ಉತ್ತೇಜಿಸುವಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ಗುರುತಿಸಿದೆ.

ಮಾವಿನ ಹಣ್ಣುಗಳನ್ನು ಆಂಧ್ರಪ್ರದೇಶದ ಉತ್ತಮ ಕೃಷಿ ಪದ್ಧತಿಗಳ (ಜಿಎಪಿ) ಪ್ರಮಾಣೀಕೃತ ತೋಟಗಳಿಂದ ಪಡೆದುಕೊಳ್ಳಲಾಗಿತ್ತು ಮತ್ತು ಕರ್ನಾಟಕದಲ್ಲಿರುವ ಅಪೆಡಾ ಮಾನ್ಯತೆ ಪಡೆದ ಪ್ಯಾಕ್‌ಹೌಸ್‌ ನಲ್ಲಿ ಸಂಸ್ಕರಿಸಿ ಪ್ಯಾಕ್ ಮಾಡಲಾಗಿತ್ತು. ಇಡೀ ಸರಕನ್ನು ಸಿಂಗಾಪುರವು ನಿಗದಿಪಡಿಸಿದ ಗುಣಮಟ್ಟ ಮತ್ತು ಫೈಟೊಸ್ಯಾನಿಟರಿ ಅಗತ್ಯತೆಗಳಿಗೆ ಅನುಗುಣವಾಗಿ ನಿರ್ವಹಿಸಲಾಗಿತ್ತು.

ಸರಕು ತಲುಪಿದ ನಂತರ, ಸಿಂಗಾಪುರದ ಆಮದುದಾರ ಸಂಸ್ಥೆಯಾದ ಇಸಿ-ಲಿಂಕ್ಸ್ ಪ್ರೈವೇಟ್ ಲಿಮಿಟೆಡ್, ಹಣ್ಣುಗಳ ಅತ್ಯುತ್ತಮ ಗುಣಮಟ್ಟವನ್ನು ವರದಿ ಮಾಡಿದೆ ಹಾಗೂ ಮಾವಿನ ಹಣ್ಣುಗಳ ಸಿಹಿ, ಏಕರೂಪದ ಮಾಗುವಿಕೆ, ಬಾಳಿಕೆ ಅವಧಿ (ಶೆಲ್ಫ್ ಲೈಫ್) ಮತ್ತು ಒಟ್ಟಾರೆ ಫೈಟೊಸ್ಯಾನಿಟರಿ ಸ್ಥಿತಿಯನ್ನು ಶ್ಲಾಘಿಸಿದೆ. ಈ ರಫ್ತು ಸರಕು ಎಲ್ಲಾ ಆಮದು ಅಗತ್ಯತೆಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಸಮುದ್ರ ಸಾರಿಗೆಯ ಸಮಯದಲ್ಲಿ ವೈಜ್ಞಾನಿಕ ಕೊಯ್ಲೋತ್ತರ ನಿರ್ವಹಣಾ ಪದ್ಧತಿಗಳು ಮತ್ತು ಕೋಲ್ಡ್-ಚೈನ್ ಲಾಜಿಸ್ಟಿಕ್ಸ್‌ ನ ಪರಿಣಾಮಕಾರಿತ್ವವನ್ನು ಪ್ರದರ್ಶಿಸಿದೆ.

ರಫ್ತು ರೈತರಿಗೂ ಗಣನೀಯ ಆರ್ಥಿಕ ಪ್ರಯೋಜನಗಳನ್ನು ತಂದುಕೊಟ್ಟಿದೆ. ದೇಶೀಯ ಮಾರುಕಟ್ಟೆ ಬೆಲೆಗಳು ಪ್ರತಿ ಕಿಲೋಗ್ರಾಂಗೆ ₹25 ರಿಂದ ₹26 ರಷ್ಟಿದ್ದರೆ, ರಫ್ತು ಮಾಡಿದ ಸರಕಿಗೆ ಪ್ರತಿ ಕಿಲೋಗ್ರಾಂಗೆ ಸರಿಸುಮಾರು ₹50 ದೊರೆತಿದೆ. ಇದು ರೈತರ ಆದಾಯವನ್ನು ಸುಮಾರು ದುಪ್ಪಟ್ಟುಗೊಳಿಸಿದೆ ಮತ್ತು ಬೆಳೆಗಾರರಿಗೆ ಹೆಚ್ಚಿನ ಮೌಲ್ಯವನ್ನು ಸೃಷ್ಟಿಸಿದೆ.

ಯಶಸ್ವಿ ರವಾನೆಯು ತಾಜಾ ಹಣ್ಣುಗಳಿಗೆ ವೆಚ್ಚ-ಪರಿಣಾಮಕಾರಿ, ಪರಿಸರ ಸುಸ್ಥಿರ ಮತ್ತು ವಾಣಿಜ್ಯಿಕವಾಗಿ ವಿಸ್ತರಿಸಬಹುದಾದ ಸಾರಿಗೆ ವಿಧಾನವಾಗಿ ಸಮುದ್ರ ಸರಕು ಸಾಗಣೆಯ ಹೆಚ್ಚುತ್ತಿರುವ ಕಾರ್ಯಸಾಧ್ಯತೆಯನ್ನು ಎತ್ತಿ ತೋರಿಸುತ್ತದೆ. ದೃಢವಾದ ಕೋಲ್ಡ್-ಚೈನ್ ಮೂಲಸೌಕರ್ಯ, ವೈಜ್ಞಾನಿಕ ನಿರ್ವಹಣಾ ಪದ್ಧತಿಗಳು ಮತ್ತು ದಕ್ಷ ಲಾಜಿಸ್ಟಿಕ್ಸ್ ನಿರ್ವಹಣೆಯ ಬೆಂಬಲದೊಂದಿಗೆ, ಸಮುದ್ರ ಸಾರಿಗೆಯು ಭಾರತೀಯ ತೋಟಗಾರಿಕಾ ರಫ್ತುಗಳ ಜಾಗತಿಕ ಸ್ಪರ್ಧಾತ್ಮಕತೆಯನ್ನು ಬಲಪಡಿಸಲು ಗಮನಾರ್ಹ ಸಾಮರ್ಥ್ಯವನ್ನು ಒದಗಿಸುತ್ತದೆ.

ಭಾರತದ ಅತ್ಯಂತ ಪ್ರಸಿದ್ಧ ಮಾವಿನ ತಳಿಗಳಲ್ಲಿ ಒಂದಾದ ಬಂಗನಪಲ್ಲಿಯು ತನ್ನ ಚಿನ್ನದಂತಹ ಹಳದಿ ಬಣ್ಣ, ಆಹ್ಲಾದಕರ ಸುಗಂಧ, ನಾರಿಲ್ಲದ ತಿರುಳು ಮತ್ತು ಸಮೃದ್ಧ ಸಿಹಿಗೆ ಹೆಸರುವಾಸಿಯಾಗಿದೆ. ಈ ತಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಲವಾದ ಬೇಡಿಕೆಯಿದ್ದು, ಭಾರತದ ಮಾವಿನ ರಫ್ತಿನ ಮತ್ತಷ್ಟು ವಿಸ್ತರಣೆಗೆ ಗಣನೀಯ ಸಾಮರ್ಥ್ಯವನ್ನು ಹೊಂದಿದೆ.

ಅಂತರರಾಷ್ಟ್ರೀಯ ಗುಣಮಟ್ಟದ ಮಾನದಂಡಗಳನ್ನು ಪೂರೈಸಲು ಮಾರುಕಟ್ಟೆ ಅಭಿವೃದ್ಧಿ ಉಪಕ್ರಮಗಳು, ಮೂಲಸೌಕರ್ಯ ಬೆಂಬಲ ಮತ್ತು ರಫ್ತುದಾರರ ಸಾಮರ್ಥ್ಯ ವೃದ್ಧಿ ಕ್ರಮಗಳ ಮೂಲಕ ತಾಜಾ ಹಣ್ಣು ಮತ್ತು ತರಕಾರಿ ರಫ್ತುಗಳಿಗಾಗಿ ಸಮುದ್ರ ಸರಕು ಸಾಗಣೆಯ ಬಳಕೆಯನ್ನು ಅಪೆಡಾ ಸಕ್ರಿಯವಾಗಿ ಉತ್ತೇಜಿಸುತ್ತಿದೆ. ಸಿಂಗಾಪುರಕ್ಕೆ ಯಶಸ್ವಿಯಾಗಿ ರಫ್ತು ಮಾಡಿರುವುದು ತೋಟಗಾರಿಕಾ ರಫ್ತುಗಳಿಗಾಗಿ ಸಮುದ್ರ ಸಾರಿಗೆಯ ವ್ಯಾಪಕ ಬಳಕೆಯನ್ನು ಉತ್ತೇಜಿಸುವ ನಿರೀಕ್ಷೆಯಿದೆ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಉತ್ತಮ ಗುಣಮಟ್ಟದ ಕೃಷಿ ಉತ್ಪನ್ನಗಳ ವಿಶ್ವಾಸಾರ್ಹ ಪೂರೈಕೆದಾರನಾಗಿ ಭಾರತದ ಕೀರ್ತಿಯನ್ನು ಮತ್ತಷ್ಟು ಬಲಪಡಿಸಲಿದೆ.

ಉಪಕ್ರಮವು ದಕ್ಷ ಮತ್ತು ಸುಸ್ಥಿರ ರಫ್ತು ಮಾರ್ಗಗಳ ಮೂಲಕ ಕೃಷಿ ರಫ್ತುಗಳನ್ನು ಹೆಚ್ಚಿಸುವ, ರೈತರ ಆದಾಯವನ್ನು ಸುಧಾರಿಸುವ ಮತ್ತು ಭಾರತೀಯ ಕೃಷಿ ಉತ್ಪನ್ನಗಳ ಜಾಗತಿಕ ಹೆಜ್ಜೆಯನ್ನು ವಿಸ್ತರಿಸುವ ಭಾರತ ಸರ್ಕಾರದ ವಿಶಾಲ ಉದ್ದೇಶಕ್ಕೆ ಅನುಗುಣವಾಗಿದೆ.

 

*****


(रिलीज़ आईडी: 2277813) आगंतुक पटल : 17
इस विज्ञप्ति को इन भाषाओं में पढ़ें: English , Urdu , हिन्दी , Bengali , Bengali-TR , Punjabi , Tamil , Telugu