ಪ್ರಧಾನ ಮಂತ್ರಿಯವರ ಕಛೇರಿ
ಸಹಾಯಕ ಕಾರ್ಯದರ್ಶಿಗಳಾಗಿ ನೇಮಕಗೊಂಡ 2024 ರ ತಂಡದ ತರಬೇತಿ ಪಡೆದ ಐಎಎಸ್ ಅಧಿಕಾರಿಗಳೊಂದಿಗೆ ಪ್ರಧಾನಮಂತ್ರಿ ಸಂವಾದ
'ನಾಗರಿಕ ದೇವೋ ಭವ'ದ ಬಗ್ಗೆ ಒತ್ತಿ ಹೇಳಿದ ಪ್ರಧಾನಮಂತ್ರಿ, ನಾಗರಿಕರನ್ನು ಆಡಳಿತದ ಕೇಂದ್ರದಲ್ಲಿರಿಸುವಂತೆ ಅಧಿಕಾರಿಗಳನ್ನು ಆಗ್ರಹಿಸಿದರು
ಅಭಿವೃದ್ಧಿಯ ಸವಾಲುಗಳನ್ನು ನಿಭಾಯಿಸಲು ಸಂಪೂರ್ಣ ಸರ್ಕಾರದ ವಿಧಾನ ಅನುಸರಣೆ ಮತ್ತು ಅಡೆತಡೆಗಳನ್ನು ನಿವಾರಿಸಲು ಪ್ರಧಾನಮಂತ್ರಿ ಕರೆ
ವಿಕಸಿತ ಭಾರತ @2047 ರತ್ತ ಭಾರತದ ಪಯಣವನ್ನು ಮುನ್ನಡೆಸುವಂತೆ ಯುವ ನಾಗರಿಕ ಸೇವಕರಿಗೆ ಪ್ರಧಾನಮಂತ್ರಿ ಕರೆ
ಭವಿಷ್ಯದ ಆಡಳಿತದ ಪ್ರಮುಖ ಅನುವುಕಾರಕ ಶಕ್ತಿಗಳಾಗಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ಚಾಲಿತ ಆಡಳಿತವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ
प्रविष्टि तिथि:
23 JUN 2026 2:13PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೊಸದಿಲ್ಲಿಯ ಸೇವಾ ತೀರ್ಥದಲ್ಲಿ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಸಹಾಯಕ ಕಾರ್ಯದರ್ಶಿಗಳಾಗಿ ನೇಮಕಗೊಂಡಿರುವ ಐಎಎಸ್ 2024 ತಂಡದಲ್ಲಿ ತರಬೇತಿ ಪಡೆದ 183 ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.
ಯುವ ಅಧಿಕಾರಿ ತರಬೇತಿನಿರತರು ತಮ್ಮ ಕ್ಷೇತ್ರ ತರಬೇತಿಯ ಅನುಭವಗಳನ್ನು ಮತ್ತು ಸಚಿವಾಲಯಗಳಲ್ಲಿನ ತಮ್ಮ ಬಾಂಧವ್ಯವನ್ನು ಹಂಚಿಕೊಂಡರು. ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಎರಡು ವರ್ಷಗಳ ಕ್ಷೇತ್ರ ಅನುಭವ ಮತ್ತು ಆಡಳಿತಾತ್ಮಕ ಕಲಿಕೆಯ ನಂತರ, ತಾವೆಲ್ಲ ಈಗ ನಿರ್ಣಾಯಕ ಹಂತದಲ್ಲಿದ್ದೀರಿ, ಅಲ್ಲಿ ನಿಮ್ಮ ನಿರ್ಧಾರಗಳು ನಿಮ್ಮ ವೃತ್ತಿಜೀವನವನ್ನು ಮಾತ್ರವಲ್ಲದೆ ಕೋಟ್ಯಂತರ ನಾಗರಿಕರ ಭವಿಷ್ಯವನ್ನು ರೂಪಿಸುತ್ತವೆ ಎಂದು ಹೇಳಿದರು. ಸಾರ್ವಜನಿಕ ಸೇವೆಯ ನಿಜವಾದ ಪರೀಕ್ಷೆಯು ನಿಜ ಜೀವನದ ಸಂದರ್ಭಗಳನ್ನು ಸಮಗ್ರತೆ, ಸೂಕ್ಷ್ಮತೆ ಮತ್ತು ಬದ್ಧತೆಯಿಂದ ನಿರ್ವಹಿಸುವ ಮೂಲಕ ಪ್ರಾರಂಭವಾಗುತ್ತದೆ ಎಂದು ಅವರು ಒತ್ತಿ ಹೇಳಿದರು.
ಉದ್ದೇಶಕ್ಕೆ ಸಂಬಂಧಿಸಿ ಬಲವಾದ ಭಾವನೆ, ನಾವೀನ್ಯತೆ ಮತ್ತು ನಾಗರಿಕ ಕೇಂದ್ರಿತ ಆಡಳಿತದೊಂದಿಗೆ ರಾಷ್ಟ್ರ ನಿರ್ಮಾಣಕ್ಕೆ ತಮ್ಮನ್ನು ತಾವು ಅರ್ಪಿಸಿಕೊಳ್ಳುವಂತೆ ಪ್ರಧಾನಮಂತ್ರಿ ಯುವ ನಾಗರಿಕ ಸೇವಕರನ್ನು ಒತ್ತಾಯಿಸಿದರು. ಪ್ರತಿಯೊಂದು ಆಡಳಿತಾತ್ಮಕ ಕಡತದ ಹಿಂದಿನ ಮಾನವ ಪ್ರಭಾವವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವಂತೆ ಅವರು ಅಧಿಕಾರಿಗಳನ್ನು ಒತ್ತಾಯಿಸಿದರು. ಪ್ರತಿಯೊಂದು ಕಡತವು ಅಸಂಖ್ಯಾತ ನಾಗರಿಕರ ಆಕಾಂಕ್ಷೆಗಳು, ಕಾಳಜಿಗಳು ಮತ್ತು ಜೀವನವನ್ನು ಪ್ರತಿನಿಧಿಸುತ್ತದೆ ಎಂದು ಅವರು ಹೇಳಿದರು. "ನಾಗರಿಕ ದೇವೋ ಭವ" ಎಂಬ ಮಂತ್ರವನ್ನು ಒತ್ತಿ ಹೇಳಿದ ಅವರು, ಪ್ರತಿಯೊಂದು ನಿರ್ಧಾರದ ಕೇಂದ್ರದಲ್ಲಿ ನಾಗರಿಕರನ್ನು ಇರಿಸಿಕೊಳ್ಳುವಂತೆ ಮತ್ತು ಆಡಳಿತವು ಸಹಾನುಭೂತಿ, ಸ್ಪಂದಿಸುವಿಕೆ ಹಾಗು ಎಲ್ಲರನ್ನೂ ಒಳಗೊಳ್ಳುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಕರೆ ನೀಡಿದರು.
ಸರ್ಕಾರಕ್ಕೆ ಸಂಬಂಧಿಸಿ ಸಂಪೂರ್ಣ ವಿಧಾನಕ್ಕೆ ಕರೆ ನೀಡಿದ ಪ್ರಧಾನಮಂತ್ರಿ, ಪ್ರಮುಖ ಅಭಿವೃದ್ಧಿ ಸವಾಲುಗಳನ್ನು ಏಕಾಂಗಿತನದಿಂದ ಅಥವಾ ಸ್ಥಾಗಿತ್ಯದಿಂದ ಪರಿಹರಿಸಲಾಗುವುದಿಲ್ಲ ಎಂದು ಒತ್ತಿ ಹೇಳಿದರು. ಅರ್ಥಪೂರ್ಣ ಮತ್ತು ಶಾಶ್ವತ ಫಲಿತಾಂಶಗಳನ್ನು ಸಾಧಿಸಲು ಇಲಾಖೆಗಳಾದ್ಯಂತ ಪರಿಣಾಮಕಾರಿ ಸಮನ್ವಯವು ಅತ್ಯಗತ್ಯ ಎಂದು ಅವರು ಪ್ರತಿಪಾದಿಸಿದರು.
2047ರ ವಿಕಸಿತ ಭಾರತ ಮುನ್ನೋಟವನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತ, ಮುಂಬರುವ ದಶಕಗಳಲ್ಲಿ ಪ್ರತಿಯೊಂದು ನೀತಿ ಮತ್ತು ಆಡಳಿತಾತ್ಮಕ ನಿರ್ಧಾರವು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಕೊಡುಗೆ ನೀಡಬೇಕು ಎಂದು ಪ್ರಧಾನಮಂತ್ರಿ ಹೇಳಿದರು. ಇಂದಿನ ಭಾರತದ ಆದ್ಯತೆಗಳಲ್ಲಿ ಆತ್ಮನಿರ್ಭರ್ ಭಾರತ್, ಮೇಕ್ ಇನ್ ಇಂಡಿಯಾ, ಉತ್ಪಾದನಾ ಬೆಳವಣಿಗೆ, ಇಂಧನ ಭದ್ರತೆ ಮತ್ತು ಯುವಜನರಿಗೆ ಅವಕಾಶಗಳನ್ನು ಸೃಷ್ಟಿಸುವುದು ಸೇರಿವೆ ಎಂದು ಅವರು ಒತ್ತಿ ಹೇಳಿದರು.
ಕಳೆದ ದಶಕದಲ್ಲಿ ಆಡಳಿತದಲ್ಲಿನ ಪರಿವರ್ತನೆಯನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು, ಆಡಳಿತವು ಪ್ರಕ್ರಿಯೆ ಕೇಂದ್ರಿತ ಮಾದರಿಯಿಂದ ಫಲಿತಾಂಶ-ಆಧಾರಿತ ವಿಧಾನಕ್ಕೆ ಬದಲಾಗಿದೆ ಎಂದು ಹೇಳಿದರು. ಸೇವಾ ವಿತರಣೆಯನ್ನು ಸುಧಾರಿಸುವಲ್ಲಿ ಡಿಜಿಟಲ್ ಆಡಳಿತ, ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನದ ಹೆಚ್ಚುತ್ತಿರುವ ಪಾತ್ರವನ್ನು ಅವರು ಉಲ್ಲೇಖಿಸಿದರು, ಇವು ನಾಗರಿಕರು ಸುಲಭವಾಗಿ ಮತ್ತು ಪಾರದರ್ಶಕತೆಯಿಂದ ಸೇವೆಗಳನ್ನು ಪಡೆಯಲು ಅನುವು ಮಾಡಿಕೊಡುತ್ತಿವೆ ಎಂದರು..
ದತ್ತಾಂಶ ಆಧಾರಿತ ಆಡಳಿತದ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ, ದತ್ತಾಂಶವನ್ನು ಕೇವಲ ಸಂಖ್ಯೆಗಳಾಗಿ ನೋಡಬಾರದು, ಬದಲಾಗಿ ಲಕ್ಷಾಂತರ ಜನರ ಸಾಮೂಹಿಕ ಜೀವನ, ಸವಾಲುಗಳು ಮತ್ತು ಆಕಾಂಕ್ಷೆಗಳ ಪ್ರತಿಬಿಂಬವಾಗಿ ನೋಡಬೇಕು ಎಂದು ಹೇಳಿದರು. ನೀತಿಗಳು ಪರಿಣಾಮಕಾರಿಯಾಗಿ ಫಲಿತಾಂಶಗಳಾಗಿ ರೂಪಾಂತರಗೊಳ್ಳುತ್ತಿವೆಯೇ ಎಂದು ನಿಯಮಿತವಾಗಿ ಪರಿಶೀಲಿಸುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದರು.
ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರ ಪಾತ್ರವು ಹೆಚ್ಚುತ್ತಿರುವುದನ್ನು ಪ್ರಧಾನಮಂತ್ರಿಯವರು ಎತ್ತಿ ತೋರಿಸಿದರು, ಪ್ರಸ್ತುತ ಬ್ಯಾಚ್ನಲ್ಲಿ ಶೇಕಡಾ 40 ಕ್ಕಿಂತ ಹೆಚ್ಚು ಮಹಿಳಾ ಅಧಿಕಾರಿಗಳಿದ್ದಾರೆ ಎಂಬುದರತ್ತ ಅವರು ಗಮನ ಸೆಳೆದರು.
ಯುವ ಅಧಿಕಾರಿಗಳು ರಾಷ್ಟ್ರ ನಿರ್ಮಾಣಕ್ಕೆ ತಮ್ಮ ಕೊಡುಗೆಯನ್ನು ನಿರಂತರವಾಗಿ ಮೌಲ್ಯಮಾಪನ ಮಾಡಬೇಕು ಅವರು ತಮ್ಮ ಹುದ್ದೆಗಳಿಂತ ತೃಪ್ತಿ ಪಡೆಯುವುದಕ್ಕೆ ಬದಲು ಸಾಧಿಸಿದ ಅಳೆಯಬಹುದಾದ ಫಲಿತಾಂಶಗಳಿಂದ ತೃಪ್ತಿಯನ್ನು ಪಡೆಯಬೇಕು ಎಂದು ಪ್ರಧಾನಮಂತ್ರಿ ಆಗ್ರಹಿಸಿದರು. ಭಾರತದ ಅಭಿವೃದ್ಧಿ ಪ್ರಯಾಣವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಅವರ ಶಕ್ತಿ, ಪ್ರತಿಭೆ ಮತ್ತು ಸಮರ್ಪಣೆ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ವಿಶ್ವಾಸವನ್ನು ಪ್ರಧಾನಮಂತ್ರಿ ವ್ಯಕ್ತಪಡಿಸಿದರು.
ಸಂವಾದದ ಸಂದರ್ಭದಲ್ಲಿ ಸಹಾಯಕ ಸಚಿವರಾದ (ಸಿಬ್ಬಂದಿ) ಶ್ರೀ ಜಿತೇಂದ್ರ ಸಿಂಗ್, ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಶ್ರೀ ಪಿ.ಕೆ. ಮಿಶ್ರಾ, ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ -2 ಶ್ರೀ ಶಕ್ತಿಕಾಂತ ದಾಸ್, ಸಂಪುಟ ಕಾರ್ಯದರ್ಶಿ ಶ್ರೀ ಟಿ.ವಿ. ಸೋಮನಾಥನ್, ಕಾರ್ಯದರ್ಶಿ (ಡಿಒಪಿಟಿ) ಶ್ರೀಮತಿ ರಚನಾ ಶಾ, ಎಲ್ಬಿಎಸ್ಎನ್ಎಎ ನಿರ್ದೇಶಕರಾದ ಶ್ರೀ ಶ್ರೀರಾಮ್ ತರಣಿಕಾಂತಿ, ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
*****
(रिलीज़ आईडी: 2277037)
आगंतुक पटल : 9