ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರೋಮ್ ನಲ್ಲಿ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ ಎ ಒ) ವತಿಯಿಂದ ಪ್ರಧಾನಮಂತ್ರಿ ಅವರಿಗೆ ಅಗ್ರಿಕೋಲಾ ಪದಕ ಪ್ರದಾನ

ಪ್ರಕಟಣಾ ದಿನಾಂಕ: 20 MAY 2026 10:55PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಇಂದು ರೋಮ್ನಲ್ಲಿರುವ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ ಎ ಒ) ಯ ಪ್ರಧಾನ ಕಚೇರಿಯಲ್ಲಿ 2026 ರ ಪ್ರತಿಷ್ಠಿತ 'ಅಗ್ರಿಕೋಲಾ ಪದಕ'ವನ್ನು  ನೀಡಿ ಗೌರವಿಸಲಾಯಿತು. ಭಾರತದಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಆಹಾರ ಭದ್ರತೆ, ಸುಸ್ಥಿರ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಅವರು ತೋರಿದ ಅಸಾಧಾರಣ ನಾಯಕತ್ವವನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು.

ಎಫ್ ಎ ಒನ ಮಹಾನಿರ್ದೇಶಕರಾದ ಡಾ. ಕ್ಯು ಡಾಂಗ್ಯು ಅವರಿಂದ ಪ್ರಧಾನಮಂತ್ರಿಯವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಅವರು ಈ ಗೌರವವನ್ನು ಭಾರತೀಯರಿಗೆ ಮತ್ತು ವಿಶ್ವದಾದ್ಯಂತದ ಜನರಿಗೆ ಆಹಾರ ಭದ್ರತೆ ಮತ್ತು ಪೌಷ್ಟಿಕಾಂಶವನ್ನು ಖಚಿತಪಡಿಸಿಕೊಳ್ಳಲು ದಣಿವಿಲ್ಲದೆ ಶ್ರಮಿಸುತ್ತಿರುವ ಭಾರತೀಯ ರೈತರು ಮತ್ತು ಭಾರತೀಯ ಕೃಷಿ ವಿಜ್ಞಾನಿ ಸಮುದಾಯಕ್ಕೆ ಅರ್ಪಿಸಿದರು. ಈ ಮನ್ನಣೆಯು ಮಾನವ ಕಲ್ಯಾಣ, ಆಹಾರ ಭದ್ರತೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಭಾರತ ಹೊಂದಿರುವ ಬದ್ಧತೆಗೆ ಸಂದ ಗೌರವವಾಗಿದೆ ಎಂದು ಅವರು ಒತ್ತಿಹೇಳಿದರು. ಭಾರತದಲ್ಲಿ ಕೃಷಿ ಜೀವನದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದ ಪ್ರಧಾನಮಂತ್ರಿಯವರು, ಕೃಷಿಯು ಭೂತಾಯಿ ಮತ್ತು ಭಾರತೀಯ ಜನರ ನಡುವಿನ ಒಂದು ಪವಿತ್ರ ಬಂಧವಾಗಿದೆ ಎಂದು ಒತ್ತಿ ಹೇಳಿದರು.

ಕೃಷಿಗೆ ಭಾರತವು ಅಳವಡಿಸಿಕೊಂಡಿರುವ ವೈಜ್ಞಾನಿಕ ಮತ್ತು ನಾವೀನ್ಯತೆ ಆಧಾರಿತ ವಿಧಾನವು ಸುಸ್ಥಿರ, ಹವಾಮಾನ ಚೇತರಿಕೆ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುತ್ತಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಈ ನಿಟ್ಟಿನಲ್ಲಿ, ‘ಪ್ರತಿ ಹನಿಗೂ ಹೆಚ್ಚು ಬೆಳೆ’ ಯಂತಹ ಪದ್ಧತಿಗಳು ಮತ್ತು ಸೂಕ್ಷ್ಮ ನೀರಾವರಿ ಹಾಗೂ ನಿಖರ ಬೇಸಾಯಕ್ಕೆ  ಮಿಷನ್ ಆಧಾರಿತ ವಿಧಾನಗಳು ಭಾರತದ ಕೃಷಿ ನೀತಿಗಳಿಗೆ ಮಾರ್ಗದರ್ಶನ ನೀಡುತ್ತಿವೆ ಎಂದು ಅವರು ಹೇಳಿದರು. ತಂತ್ರಜ್ಞಾನ ಆಧಾರಿತ ಕೃಷಿ ಪರಿಹಾರಗಳ ಬಗ್ಗೆ ವಿವರಿಸಿದ ಅವರು, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಎಐ ಆಧಾರಿತ ಸಲಹಾ ವ್ಯವಸ್ಥೆಗಳು, ಡ್ರೋನ್ ಗಳು, ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನಗಳು ಮತ್ತು ಸೆನ್ಸರ್ (ಸಂವೇದಕ) ಆಧಾರಿತ ಯಂತ್ರೋಪಕರಣಗಳು ಭಾರತೀಯ ರೈತರಿಗೆ ಉತ್ತಮ ಇಳುವರಿ ಮತ್ತು ಹೆಚ್ಚಿನ ಕೃಷಿ ಆದಾಯವನ್ನು ಪಡೆಯಲು ಸಹಾಯ ಮಾಡುತ್ತಿವೆ ಎಂದು ತಿಳಿಸಿದರು. ಕಳೆದ 10 ವರ್ಷಗಳಲ್ಲಿ ಭಾರತವು ಸುಮಾರು 3,000 ಹವಾಮಾನ-ಚೇತರಿಕೆ ಬೆಳೆ ತಳಿಗಳನ್ನು ಅಭಿವೃದ್ಧಿಪಡಿಸಿದೆ ಎಂದು ಅವರು ಹೇಳಿದರು. ಭಾರತದ ವಿಜ್ಞಾನ ಆಧಾರಿತ ಕೃಷಿಯು ಜಾಗತಿಕ ಆಹಾರ ಭದ್ರತೆಯನ್ನು, ವಿಶೇಷವಾಗಿ ಜಾಗತಿಕ ದಕ್ಷಿಣದ  ದೇಶಗಳಿಗೆ ಬಲಪಡಿಸುತ್ತಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು.

ಎಫ್ ಎ ಒನ ಸ್ಥಾಪಕ ಸದಸ್ಯ ರಾಷ್ಟ್ರವಾಗಿ, ಜಾಗತಿಕ ಆಹಾರ ಭದ್ರತೆ, ಸುಸ್ಥಿರ ಕೃಷಿ ಮತ್ತು ಹಸಿವು ಮುಕ್ತ ಜಗತ್ತನ್ನು ಉತ್ತೇಜಿಸಲು ಈ ಸಂಸ್ಥೆಯೊಂದಿಗೆ ಕೆಲಸ ಮಾಡುವ ಸೌಭಾಗ್ಯ ಭಾರತಕ್ಕೆ ಸಿಕ್ಕಿದೆ ಎಂದು ಪ್ರಧಾನಮಂತ್ರಿಯವರು ಸ್ಮರಿಸಿದರು. ‘ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ’ದ ಆಚರಣೆಯ ಮೂಲಕ ಆರೋಗ್ಯಕರ ಆಹಾರದ ಆಯ್ಕೆಗಳನ್ನು ಉತ್ತೇಜಿಸಲು ಭಾರತದೊಂದಿಗೆ ಕೈಜೋಡಿಸಿದ್ದಕ್ಕಾಗಿ ಅವರು ಎಫ್ ಎ ಒಗೆ ಧನ್ಯವಾದಗಳನ್ನು ಅರ್ಪಿಸಿದರು.

ಪ್ರಧಾನಮಂತ್ರಿ ಮೋದಿಯವರ ಎಫ್ ಎ ಒನ ಪ್ರಧಾನ ಕಚೇರಿಯ ಭೇಟಿಯು, ಕಳೆದ 30 ವರ್ಷಗಳಲ್ಲಿ ಭಾರತದ ಸರ್ಕಾರದ ಮುಖ್ಯಸ್ಥರೊಬ್ಬರು ನೀಡಿದ ಮೊದಲ ಭೇಟಿಯಾಗಿದೆ.


*****


(ಪ್ರಕಟಣೆ ಐ.ಡಿ.: 2263573) ವಿಸಿಟರ್ ಕೌಂಟರ್ : 3
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , Manipuri , Bengali , Assamese , Gujarati , Malayalam