ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತ-ಇಟಲಿ ಜಂಟಿ ಘೋಷಣೆ

ಪ್ರಕಟಣಾ ದಿನಾಂಕ: 20 MAY 2026 7:33PM by PIB Bengaluru

 ಇಟಲಿಯ ಪ್ರಧಾನಮಂತ್ರಿ ಜಾರ್ಜಿಯಾ ಮೆಲೋನಿ ಅವರ ಆಹ್ವಾನದ ಮೇರೆಗೆ, ಭಾರತದ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು 19-20 ಮೇ 2026 ರಂದು ಇಟಲಿಗೆ ಅಧಿಕೃತ ಭೇಟಿ ನೀಡಿದರು. ಜಿ7 ಶೃಂಗಸಭೆಗಾಗಿ ಜೂನ್ 2024ರಲ್ಲಿ ಪ್ರಧಾನಮಂತ್ರಿ ಮೋದಿ ಅವರು ಇಟಲಿಗೆ ನೀಡಿದ್ದ ಭೇಟಿ ಮತ್ತು 2023ರಲ್ಲಿ ಜಿ20 ಶೃಂಗಸಭೆಗಾಗಿ ಪ್ರಧಾನಮಂತ್ರಿ ಮೆಲೋನಿ ಅವರು ಭಾರತಕ್ಕೆ ನೀಡಿದ್ದ ಭೇಟಿಯ ಮುಂದುವರಿಕೆಯಾಗಿ ನಡೆದ ಈ ಭೇಟಿಯು, ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ಉತ್ತೇಜನವನ್ನು ನೀಡಿತು. ಉಭಯ ನಾಯಕರು ಭಾರತ-ಇಟಲಿ ಸಂಬಂಧಗಳನ್ನು 'ವಿಶೇಷ ಕಾರ್ಯತಂತ್ರದ ಪಾಲುದಾರಿಕೆ'ಯ ಮಟ್ಟಕ್ಕೆ ಏರಿಸಲು ನಿರ್ಧರಿಸಿದರು.

ರಾಜಕೀಯ ಸಂವಾದ

ಉನ್ನತ ಮಟ್ಟದ ವಿನಿಮಯಗಳ ಬಲವಾದ ವೇಗವನ್ನು ಉಭಯ ಪ್ರಧಾನಮಂತ್ರಿಗಳು ಸ್ವಾಗತಿಸಿದರು ಮತ್ತು ಬಹುಪಕ್ಷೀಯ ಕಾರ್ಯಕ್ರಮಗಳ ಸಂದರ್ಭದಲ್ಲಿ ನಡೆಯುವ ಭೇಟಿಗಳು ಸೇರಿದಂತೆ ನಾಯಕರ ವಾರ್ಷಿಕ ಸಭೆಗಳನ್ನು ನಡೆಸಲು, ಹಾಗೆಯೇ ನಿಯಮಿತ ಸಚಿವರು ಮತ್ತು ಸಾಂಸ್ಥಿಕ ಮಟ್ಟದ ಸಭೆಗಳನ್ನು ನಡೆಸಲು ಒಪ್ಪಿಕೊಂಡರು.

ನವೆಂಬರ್ 2024ರಲ್ಲಿ ರಿಯೊ ಡಿ ಜನೈರೊದಲ್ಲಿ ನಡೆದ ಜಿ20 ಶೃಂಗಸಭೆಯ ಸಂದರ್ಭದಲ್ಲಿ ಉಭಯ ನಾಯಕರು ತಮ್ಮ ಸಭೆಯಲ್ಲಿ ಅಂಗೀಕರಿಸಿದ್ದ 'ಜಂಟಿ ಕಾರ್ಯತಂತ್ರದ ಕ್ರಿಯಾ ಯೋಜನೆ 2025-2029' ರ ವಿವಿಧ ಪ್ರಮುಖ ಸ್ತಂಭಗಳಲ್ಲಿ ಸಾಧಿಸಲಾದ ಗಣನೀಯ ಪ್ರಗತಿಯನ್ನು ಶ್ಲಾಘಿಸಿದರು. ಭಾರತ-ಇಟಲಿ ಜಂಟಿ ಕಾರ್ಯತಂತ್ರದ ಕ್ರಿಯಾ ಯೋಜನೆ 2025-29 ಅನ್ನು ಪರಾಮರ್ಶಿಸಲು ಮತ್ತು ಭಾರತ-ಇಟಲಿ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಗೆ ಕಾರ್ಯತಂತ್ರದ ಮಾರ್ಗದರ್ಶನವನ್ನು ಒದಗಿಸಲು ವಿದೇಶಾಂಗ ಸಚಿವರ ನೇತೃತ್ವದ ಕಾರ್ಯವಿಧಾನವೊಂದನ್ನು ಸ್ಥಾಪಿಸಲು ಅವರು ಒಪ್ಪಿಕೊಂಡರು.

ಆರ್ಥಿಕ ಸಹಕಾರ ಮತ್ತು ಹೂಡಿಕೆಗಳು

ಕಳೆದ ವರ್ಷದಿಂದೀಚೆಗೆ ಮೂರು ಉನ್ನತ ಮಟ್ಟದ ಉದ್ಯಮ ವೇದಿಕೆಗಳು ನಡೆದಿರುವುದರೊಂದಿಗೆ, ದ್ವಿಪಕ್ಷೀಯ ಆರ್ಥಿಕ ಮತ್ತು ಕೈಗಾರಿಕಾ ಸಹಕಾರದ ಬೆಳೆಯುತ್ತಿರುವ ಚಲನಶೀಲತೆಯ ಬಗ್ಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಭಾರತದ ಕ್ಷಿಪ್ರ ಮತ್ತು ನಿರಂತರ ಆರ್ಥಿಕ ಬೆಳವಣಿಗೆಯಿಂದ ಉಂಟಾಗುತ್ತಿರುವ ಅವಕಾಶಗಳು ಹಾಗೂ ಇಯು -ಭಾರತ ಮುಕ್ತ ವ್ಯಾಪಾರ ಒಪ್ಪಂದದ ಸಮಾಲೋಚನೆಗಳ ಯಶಸ್ವಿ ಮುಕ್ತಾಯದ ಆಧಾರದ ಮೇಲೆ, ಅವರು 2029 ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ಎರಡೂ ದಿಕ್ಕುಗಳಲ್ಲಿ ವಿಸ್ತರಿಸಿ € 20 ಬಿಲಿಯನ್ (20 ಶತಕೋಟಿ ಯುರೋ) ತಲುಪಿಸುವ ಹಂಚಿಕೆಯ ಗುರಿಯನ್ನು ಪುನರುಚ್ಚರಿಸಿದರು.

ಪ್ರಮುಖ ವಲಯಗಳಲ್ಲಿ ದ್ವಿಪಕ್ಷೀಯ ಹೂಡಿಕೆಗಳ ಹೆಚ್ಚಳವನ್ನು ಅವರು ಸ್ವಾಗತಿಸಿದರು ಮತ್ತು ಸ್ಥಿತಿಸ್ಥಾಪಕತ್ವ ಹೊಂದಿರುವ ಪೂರೈಕೆ ಸರಪಳಿಗಳನ್ನು ನಿರ್ಮಿಸಲು ಕೈಗಾರಿಕಾ ಮತ್ತು ತಂತ್ರಜ್ಞಾನ ಪಾಲುದಾರಿಕೆಗಳನ್ನು ರೂಪಿಸಿಕೊಳ್ಳಲು ಆಯಾ ಉದ್ಯಮಗಳಿಗೆ ಕರೆ ನೀಡಿದರು. ವಿಶೇಷವಾಗಿ ಜವಳಿ, ಸ್ವಚ್ಛ ತಂತ್ರಜ್ಞಾನಗಳು, ಸೆಮಿಕಂಡಕ್ಟರ್‌ ಗಳು, ಆಟೋಮೋಟಿವ್, ಇಂಧನ, ಪ್ರವಾಸೋದ್ಯಮ, ಔಷಧಗಳು ಮತ್ತು ವೈದ್ಯಕೀಯ ತಂತ್ರಜ್ಞಾನಗಳು, ಡಿಜಿಟಲ್ ತಂತ್ರಜ್ಞಾನಗಳು, ನಿರ್ಣಾಯಕ ಕಚ್ಚಾ ವಸ್ತುಗಳು, ಉಕ್ಕು, ಬಂದರುಗಳು ಮತ್ತು ಮೂಲಸೌಕರ್ಯಗಳಲ್ಲಿ ಹೆಚ್ಚಿನ ಹೂಡಿಕೆಗಳ ಸಾಧ್ಯತೆಯನ್ನು ಅವರು ಸ್ವಾಗತಿಸಿದರು. ವ್ಯಾಪಾರ ಸಂಪರ್ಕಗಳು ಮತ್ತು ಉತ್ಪಾದನಾ ಸೌಲಭ್ಯಗಳನ್ನು ಹೆಚ್ಚಿಸಲು ಎರಡೂ ದೇಶಗಳಲ್ಲಿ ಜಾರಿಯಲ್ಲಿರುವ ನೀತಿ ಪ್ರೋತ್ಸಾಹಕಗಳು ಮತ್ತು ಯೋಜನೆಗಳನ್ನು ಬಳಸಿಕೊಳ್ಳಲು ಅವರು ಉದ್ಯಮಗಳಿಗೆ ಕರೆ ನೀಡಿದರು.

ಷೇರು ಮಾರುಕಟ್ಟೆಗಳು, ಹೂಡಿಕೆ ನಿಧಿಗಳು, ವೆಂಚರ್ ಕ್ಯಾಪಿಟಲ್, ಬ್ಯಾಂಕುಗಳು, ವಿಮಾ ಕಂಪನಿಗಳು ಮತ್ತು ಹಣಕಾಸು ಸಂಸ್ಥೆಗಳ ನಡುವೆ ಸಂವಾದ ಮತ್ತು ಸಹಕಾರವನ್ನು ಉತ್ತೇಜಿಸಲು ಉಭಯ ಪ್ರಧಾನ ಮಂತ್ರಿಗಳು ಒಪ್ಪಿಕೊಂಡರು.

ಪೂರೈಕೆ ಸರಪಳಿಗಳ ಆಳವಾದ ಏಕೀಕರಣವನ್ನು ಉತ್ತೇಜಿಸಲು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ನಡುವೆ ಕೈಗಾರಿಕಾ ಪಾಲುದಾರಿಕೆಗಳನ್ನು ಸುಗಮಗೊಳಿಸಲು ಅವರು ಒಪ್ಪಿಕೊಂಡರು. ಮುಂಬರುವ ತಿಂಗಳುಗಳಲ್ಲಿ ಪರಸ್ಪರ ಆಸಕ್ತಿಯ ಆದ್ಯತೆಯ ಕ್ಷೇತ್ರಗಳಲ್ಲಿ ಹೊಸ ವಲಯದ ನಿಯೋಗಗಳ ಭೇಟಿಯನ್ನು ಅವರು ಪ್ರೋತ್ಸಾಹಿಸಿದರು.

ನಿರ್ಣಾಯಕ ಖನಿಜಗಳ ಸಹಕಾರಕ್ಕಾಗಿ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಉಭಯ ಪ್ರಧಾನ ಮಂತ್ರಿಗಳು ಸ್ವಾಗತಿಸಿದರು. ಸುಸ್ಥಿರತೆ ಮತ್ತು ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳಿಗೆ ವಿಶೇಷ ಒತ್ತು ನೀಡುವ ಮೂಲಕ, ಸಹಯೋಗಕ್ಕಾಗಿ ಒಂದು ವ್ಯವಸ್ಥಿತ ಚೌಕಟ್ಟನ್ನು ಸ್ಥಾಪಿಸುವ ಮೂಲಕ ನಿರ್ಣಾಯಕ ಖನಿಜಗಳ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಮತ್ತು ವಿಸ್ತರಿಸಲು ಅವರು ಒಪ್ಪಿಕೊಂಡರು. ಮರುಬಳಕೆ ಆರ್ಥಿಕತೆಯ ಉಪಕ್ರಮಗಳ ಒಂದು ಅವಿಭಾಜ್ಯ ಅಂಗವಾಗಿ, ಎಲೆಕ್ಟ್ರಾನಿಕ್ ತ್ಯಾಜ್ಯ ಮತ್ತು ಗಣಿ ತ್ಯಾಜ್ಯಗಳು ಸೇರಿದಂತೆ ಅಸಾಂಪ್ರದಾಯಿಕ ಮೂಲಗಳಿಂದ ನಿರ್ಣಾಯಕ ಖನಿಜಗಳನ್ನು ಮರುಪಡೆಯುವಲ್ಲಿ ಜಂಟಿ ಪ್ರಯತ್ನಗಳನ್ನು ಉತ್ತೇಜಿಸುವ ಮಹತ್ವವನ್ನು ಅವರು ಒತ್ತಿಹೇಳಿದರು. ಆಯಾ ಸಚಿವಾಲಯಗಳು ಮತ್ತು ಸಂಸ್ಥೆಗಳ ನಡುವೆ ಕೃಷಿ ಮತ್ತು ಕೃಷಿ ಸಂಶೋಧನಾ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿರುವುದಕ್ಕೆ ಅವರು ತೃಪ್ತಿ ವ್ಯಕ್ತಪಡಿಸಿದರು.

ಸಂಪರ್ಕ

ಜಾಗತಿಕ ವ್ಯಾಪಾರ, ಸಂಪರ್ಕ ಮತ್ತು ಸಮೃದ್ಧಿಯನ್ನು ಮರುರೂಪಿಸುವಲ್ಲಿ ಮತ್ತು ಉತ್ತೇಜಿಸುವಲ್ಲಿ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (ಐಎಂಇಸಿ) ಹೊಂದಿರುವ ಪರಿವರ್ತಕ ಸಾಮರ್ಥ್ಯವನ್ನು ಗುರುತಿಸಿ, ಅದರ ಮೇಲೆ ಸಹಕರಿಸಲು ಉಭಯ ಪ್ರಧಾನ ಮಂತ್ರಿಗಳು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಯೋಜನೆಯ ಸುತ್ತ ನಡೆದ ಪ್ರಾಥಮಿಕ ಚರ್ಚೆಗಳನ್ನು ಶ್ಲಾಘಿಸಿದ ಅವರು, 2026 ರಲ್ಲಿ ಈ ಉಪಕ್ರಮವನ್ನು ಮುನ್ನಡೆಸಲು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮೊದಲ ಐಎಂಇಸಿ ಸಚಿವ ಮಟ್ಟದ ಸಭೆಗೆ ಕರೆ ನೀಡಿದರು.

ಕಡಲ ಸಾರಿಗೆ ಮತ್ತು ಬಂದರುಗಳ ಕುರಿತಾದ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಅವರು ಸ್ವಾಗತಿಸಿದರು ಮತ್ತು ಈ ಒಪ್ಪಂದವನ್ನು ಆದಷ್ಟು ಬೇಗ ಅನುಷ್ಠಾನಗೊಳಿಸಲು ಜಂಟಿ ಕಾರ್ಯಕಾರಿ ಗುಂಪನ್ನು ಸ್ಥಾಪಿಸುವಂತೆ ತಮ್ಮ ಆಯಾ ಸಚಿವಾಲಯಗಳು/ಇಲಾಖೆಗಳಿಗೆ ನಿರ್ದೇಶನ ನೀಡಿದರು.

ವಿಜ್ಞಾನ, ತಂತ್ರಜ್ಞಾನ, ನಾವೀನ್ಯತೆ, ನವೋದ್ಯಮಗಳು ಮತ್ತು ಕೃತಕ ಬುದ್ಧಿಮತ್ತೆ

ನಾವೀನ್ಯತೆ, ವಿಜ್ಞಾನ ಮತ್ತು ತಂತ್ರಜ್ಞಾನಗಳು ಭಾರತ-ಇಟಲಿ ಪಾಲುದಾರಿಕೆಯ ಪ್ರಮುಖ ಚಾಲಕ ಶಕ್ತಿಗಳು ಎಂಬುದನ್ನು ಉಭಯ ಪ್ರಧಾನ ಮಂತ್ರಿಗಳು ಪುನರುಚ್ಚರಿಸಿದರು.

ಆಯಾ ನಾವೀನ್ಯತೆ ಪರಿಸರ ವ್ಯವಸ್ಥೆಗಳ ನಡುವಿನ ಸಹಕಾರವನ್ನು ಬಲಪಡಿಸಲು, ನವೋದ್ಯಮ ವೇಗವರ್ಧನೆ ಕಾರ್ಯಕ್ರಮಗಳು, ಮಾರುಕಟ್ಟೆ ಪ್ರವೇಶ ಮತ್ತು ಉದ್ಯಮ ಹೊಂದಾಣಿಕೆ, ಜಂಟಿ ಸಂಶೋಧನೆ, ವಿಶ್ವವಿದ್ಯಾಲಯಗಳ ಸಹಯೋಗ ಮತ್ತು ಪ್ರತಿಭೆಗಳ ಚಲನಶೀಲತೆಯನ್ನು ಬೆಂಬಲಿಸುವ ಗುರಿಯನ್ನು ಹೊಂದಿರುವ, ಭಾರತದಲ್ಲಿ ನೆಲೆಗೊಂಡಿರುವ 'ಇನ್ನೋವಿಟ್ ಇಂಡಿಯಾ' (INNOVIT India) ಎಂಬ ನಾವೀನ್ಯತೆ ಕೇಂದ್ರದ ಸ್ಥಾಪನೆಯನ್ನು ಅವರು ಘೋಷಿಸಿದರು. ಇದು ಫಿನ್‌ಟೆಕ್, ಆರೋಗ್ಯ ರಕ್ಷಣೆ, ಸೆಮಿಕಂಡಕ್ಟರ್‌ ಗಳು, ಲಾಜಿಸ್ಟಿಕ್ಸ್ ಮತ್ತು ಪೂರೈಕೆ ಸರಪಳಿಗಳು, ಅಗ್ರಿಟೆಕ್, ಇಂಧನ, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಕೃತಕ ಬುದ್ಧಿಮತ್ತೆ ಸೇರಿದಂತೆ ವಿವಿಧ ವಲಯಗಳನ್ನು ಒಳಗೊಂಡಿರುತ್ತದೆ. ಏಪ್ರಿಲ್ 2025 ರಲ್ಲಿ ದೆಹಲಿಯಲ್ಲಿ ನಡೆದ ಭಾರತೀಯ ಮತ್ತು ಇಟಾಲಿಯನ್ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಕೇಂದ್ರಗಳ ನಡುವಿನ ಉದ್ಘಾಟನಾ ವಿಜ್ಞಾನ ಮತ್ತು ನಾವೀನ್ಯತೆ ಸಂವಾದವನ್ನು ಉಭಯ ನಾಯಕರು ಸ್ವಾಗತಿಸಿದರು ಮತ್ತು ಈ ವರ್ಷದ ಕೊನೆಯಲ್ಲಿ ಇಟಲಿಯಲ್ಲಿ ಅದರ ಮುಂದಿನ ಆವೃತ್ತಿಯನ್ನು ನಡೆಸಲು ಆಶಿಸಿದರು.

ಮುಕ್ತವಾದ, ಸುರಕ್ಷಿತವಾದ, ಸ್ಥಿರವಾದ, ಸುಲಭವಾಗಿ ಪ್ರವೇಶಿಸಬಹುದಾದ ಮತ್ತು ಶಾಂತಿಯುತ ಐಸಿಟಿ ಪರಿಸರದ ಮಹತ್ವವನ್ನು ಉಭಯ ನಾಯಕರು ಒತ್ತಿಹೇಳಿದರು, ಇದು ನಾವೀನ್ಯತೆ ಮತ್ತು ಆರ್ಥಿಕ ಬೆಳವಣಿಗೆಗೆ ಪೂರಕವಾಗಿದೆ. ನವದೆಹಲಿಯಲ್ಲಿ 19 ಫೆಬ್ರವರಿ 2026 ರಂದು ನಡೆದ 'ಎಐ ಇಂಪ್ಯಾಕ್ಟ್ ಶೃಂಗಸಭೆ'ಯಲ್ಲಿ ಇಟಲಿಯ ರಚನಾತ್ಮಕ ಭಾಗವಹಿಸುವಿಕೆಗಾಗಿ ಪ್ರಧಾನಮಂತ್ರಿ ಮೋದಿ ಅವರು ಪ್ರಧಾನಮಂತ್ರಿ ಮೆಲೋನಿ ಅವರಿಗೆ ಧನ್ಯವಾದ ಅರ್ಪಿಸಿದರು. ಉಭಯ ನಾಯಕರು ಮಾನವ ಕೇಂದ್ರಿತ, ಸುರಕ್ಷಿತ, ವಿಶ್ವಾಸಾರ್ಹ ಮತ್ತು ದೃಢವಾದ ಕೃತಕ ಬುದ್ಧಿಮತ್ತೆಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಮೂರನೇ ದೇಶಗಳಲ್ಲಿ ಸೇರಿದಂತೆ ಈ ವಲಯದಲ್ಲಿ ಸಹಕರಿಸಲು ಅವರು ಒಪ್ಪಿಕೊಂಡರು.

ಉಭಯ ಪ್ರಧಾನಮಂತ್ರಿಗಳು ಸೂಪರ್ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಸಹಕಾರದ ಅವಕಾಶಗಳಿಗೆ ವಿಶೇಷ ಒತ್ತು ನೀಡಿದರು.

ವೈಜ್ಞಾನಿಕ ಸಹಕಾರಕ್ಕಾಗಿ 2025-2027 ರ ಕಾರ್ಯಕಾರಿ ಕಾರ್ಯಕ್ರಮದ ಆಧಾರದ ಮೇಲೆ, ಅವರು ಜಂಟಿ ಯೋಜನೆಗಳ ಅನುಷ್ಠಾನವನ್ನು ಮತ್ತು ಕ್ವಾಂಟಮ್ ತಂತ್ರಜ್ಞಾನಗಳು, ನವೀಕರಿಸಬಹುದಾದ ಇಂಧನ, ಹಸಿರು ಹೈಡ್ರೋಜನ್ ಮತ್ತು ಸುಸ್ಥಿರ ನೀಲಿ ಆರ್ಥಿಕತೆಯ ಕ್ಷೇತ್ರದಲ್ಲಿ ಸಂಶೋಧಕರ ಚಲನಶೀಲತೆಯನ್ನು ಸುಗಮಗೊಳಿಸುವುದನ್ನು ಬೆಂಬಲಿಸಿದರು. ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತಿಳುವಳಿಕಾ ಒಪ್ಪಂದದ ಅನುಷ್ಠಾನ ಮತ್ತು ಸಂಶೋಧನಾ ಯೋಜನೆಗಳಿಗೆ ಧನಸಹಾಯ ನೀಡಲು ಜಂಟಿ ಪ್ರಸ್ತಾಪಗಳ ಕರೆಯನ್ನು ಪ್ರಾರಂಭಿಸುವುದನ್ನು ಅವರು ಸ್ವಾಗತಿಸಿದರು.

ಭಾರತೀಯ ಶೈಕ್ಷಣಿಕ ವಲಯ ಮತ್ತು ಟ್ರಿಯೆಸ್ಟೆಯಲ್ಲಿರುವ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಥಿಯರೆಟಿಕಲ್ ಫಿಸಿಕ್ಸ್ (ಐಸಿಟಿಪಿ) ನಡುವಿನ ದೀರ್ಘಕಾಲದ ವೈಜ್ಞಾನಿಕ ಸಹಯೋಗವನ್ನು ಉಭಯ ಪ್ರಧಾನ ಮಂತ್ರಿಗಳು ಒಪ್ಪಿಕೊಂಡರು ಮತ್ತು ಭಾರತೀಯ ಸಂಶೋಧಕರಿಗೆ ಎಲೆಕ್ಟ್ರಾದಲ್ಲಿನ ಸಿಂಕ್ರೊಟ್ರಾನ್ ವಿಕಿರಣ ಸೌಲಭ್ಯದ ಪ್ರವೇಶಕ್ಕೆ ಸಂಬಂಧಿಸಿದ ಚಟುವಟಿಕೆಗಳ ಬೆಂಬಲಕ್ಕಾಗಿ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಇಟಲಿಯ ಟ್ರಿಯೆಸ್ಟೆಯಲ್ಲಿರುವ ಎಲೆಟ್ರಾ ಸಿಂಕ್ರೊಟ್ರಾನ್ ಕೇಂದ್ರದ ನಡುವೆ ಆಶಯ ಪತ್ರಕ್ಕೆ ಸಹಿ ಹಾಕಿರುವುದನ್ನು ಸ್ವಾಗತಿಸಿದರು.

ಬಾಹ್ಯಾಕಾಶ

ಇಟಾಲಿಯನ್ ಬಾಹ್ಯಾಕಾಶ ಸಂಸ್ಥೆ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ನಡುವೆ ನಡೆಯುತ್ತಿರುವ ಸಹಯೋಗವನ್ನು ಶ್ಲಾಘಿಸುತ್ತಾ, ಉಭಯ ನಾಯಕರು ಭೂ ವೀಕ್ಷಣೆ, ಹೆಲಿಯೊಫಿಸಿಕ್ಸ್ ಮತ್ತು ಬಾಹ್ಯಾಕಾಶ ಪರಿಶೋಧನೆಯಲ್ಲಿ ಪಾಲುದಾರಿಕೆಯನ್ನು ಬಲಪಡಿಸಲು ಒಪ್ಪಿಕೊಂಡರು, ಜೊತೆಗೆ ವಿಷಯಾಧಾರಿತ ತೊಡಗಿಸಿಕೊಳ್ಳುವಿಕೆಯೊಂದಿಗೆ ಬಾಹ್ಯಾಕಾಶ ಪ್ರವೇಶ ಮತ್ತು ಬಾಹ್ಯಾಕಾಶ ಮೂಲಸೌಕರ್ಯಗಳ ರಕ್ಷಣೆಯ ಕುರಿತು ಸಹಕಾರವನ್ನು ಅನ್ವೇಷಿಸಲು ಒಪ್ಪಿಕೊಂಡರು. ತಮ್ಮ ಆಯಾ ಬಾಹ್ಯಾಕಾಶ ಉದ್ಯಮದ ನಿಯೋಗಗಳ ಇತ್ತೀಚಿನ ಪರಸ್ಪರ ಭೇಟಿಗಳ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು ಮತ್ತು ಮೂರನೇ ದೇಶಗಳಲ್ಲಿಯೂ ಸಹ ತಜ್ಞರ ವಿನಿಮಯ ಮತ್ತು ಜಂಟಿ ಉಪಕ್ರಮಗಳ ಮೂಲಕ ವಾಣಿಜ್ಯ ಸಹಯೋಗವನ್ನು ಮತ್ತಷ್ಟು ಉತ್ತೇಜಿಸಲು ಆಶಿಸಿದರು.

ರಕ್ಷಣೆ

ಸಚಿವರ ಮಟ್ಟದ ವಿನಿಮಯಗಳು, ಸೇವೆಗಳ ನಡುವಿನ ಸಂಬಂಧಗಳು, ಬಂದರು ಭೇಟಿಗಳು ಸೇರಿದಂತೆ ರಕ್ಷಣಾ ಸಹಕಾರದ ಆಳವಾಗುವಿಕೆಯ ಬಗ್ಗೆ ಉಭಯ ಪ್ರಧಾನ ಮಂತ್ರಿಗಳು ತೃಪ್ತಿ ವ್ಯಕ್ತಪಡಿಸಿದರು ಮತ್ತು ಜಂಟಿ ಉದ್ದೇಶದ ಘೋಷಣೆ ಹಾಗೂ ರಕ್ಷಣಾ ಕೈಗಾರಿಕಾ ಮಾರ್ಗಸೂಚಿಯ ಅಂಗೀಕಾರವನ್ನು ಸ್ವಾಗತಿಸಿದರು. ಇದು ಹೆಲಿಕಾಪ್ಟರ್‌ ಗಳು, ನೌಕಾ ವೇದಿಕೆಗಳು, ನೌಕಾ ಶಸ್ತ್ರಾಸ್ತ್ರಗಳು ಮತ್ತು ಎಲೆಕ್ಟ್ರಾನಿಕ್ ಯುದ್ಧ ತಂತ್ರಜ್ಞಾನಗಳು ಸೇರಿದಂತೆ ತಾಂತ್ರಿಕ ಸಹಕಾರ, ಸಹ-ಉತ್ಪಾದನೆ ಮತ್ತು ಸಹ-ಅಭಿವೃದ್ಧಿ ಯೋಜನೆಗಳ ಪಾಲುದಾರಿಕೆಯನ್ನು ಉತ್ತೇಜಿಸುತ್ತದೆ. ಕೈಗಾರಿಕಾ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವ ಮೂಲಕ ನಿರ್ಣಾಯಕ ಮೂಲಸೌಕರ್ಯಗಳನ್ನು ಮತ್ತು ಅವುಗಳಿಗೆ ಸಂಬಂಧಿಸಿದ ಪೂರೈಕೆ ಸರಪಳಿಗಳನ್ನು ರಕ್ಷಿಸುವ ಮಹತ್ವವನ್ನು ಅವರು ಗುರುತಿಸಿದರು.

ಜಂಟಿ ರಕ್ಷಣಾ ಸಮಿತಿ ಮತ್ತು ಮಿಲಿಟರಿ ಸಹಕಾರ ಗುಂಪಿನ ಕೆಲಸಕ್ಕೆ ಪೂರಕವಾಗಿ, ವಾರ್ಷಿಕ ಉನ್ನತ ಮಟ್ಟದ ಮಿಲಿಟರಿ ವ್ಯವಸ್ಥಿತ ಸಂವಾದವನ್ನು ಸ್ಥಾಪಿಸುವ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು ಮತ್ತು ಜಂಟಿ ಸಮರಾಭ್ಯಾಸಗಳು ಹಾಗೂ ಅಂತರ-ಪಡೆ ಕೋರ್ಸ್‌ಗಳನ್ನು ಉತ್ತೇಜಿಸಲು ಉಭಯ ಕಡೆಯವರು ಒಪ್ಪಿಕೊಂಡರು.

ಕಡಲ ಭದ್ರತಾ ಸಹಕಾರ, ಸಮನ್ವಯ ಮತ್ತು ಕಡಲ ವಲಯದಲ್ಲಿ ಮಾಹಿತಿ ಮತ್ತು ಉತ್ತಮ ಪದ್ಧತಿಗಳ ವಿನಿಮಯವನ್ನು ಹೆಚ್ಚಿಸುವ ಉದ್ದೇಶದಿಂದ ಕಡಲ ಭದ್ರತೆಯ ಕುರಿತು ಸಂವಾದವನ್ನು ಪ್ರಾರಂಭಿಸಲು ಉಭಯ ನಾಯಕರು ಒಪ್ಪಿಕೊಂಡರು.

ಭದ್ರತೆ

ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಎಲ್ಲಾ ರೀತಿಯ ಭಯೋತ್ಪಾದನೆ ಮತ್ತು ಹಿಂಸಾತ್ಮಕ ಉಗ್ರವಾದವನ್ನು ಉಭಯ ನಾಯಕರು ತೀವ್ರವಾಗಿ ಖಂಡಿಸಿದರು. ಉಭಯ ನಾಯಕರು ಏಪ್ರಿಲ್ 2025ರ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿದರು ಮತ್ತು ಭಯೋತ್ಪಾದಕರು, ಭಯೋತ್ಪಾದಕ ಗುಂಪುಗಳು ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267 ನಿರ್ಬಂಧಗಳ ಆಡಳಿತದಲ್ಲಿ ಪಟ್ಟಿ ಮಾಡಲಾದ ಅವರ ಅಂಗಸಂಸ್ಥೆಗಳ ವಿರುದ್ಧದ ಹೋರಾಟದಲ್ಲಿ ಸಹಕರಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಭಯೋತ್ಪಾದಕರ ಸುರಕ್ಷಿತ ತಾಣಗಳು ಮತ್ತು ಮೂಲಸೌಕರ್ಯಗಳನ್ನು ನಿರ್ಮೂಲನೆ ಮಾಡಲು, ಭಯೋತ್ಪಾದಕ ಜಾಲಗಳನ್ನು ನಾಶಪಡಿಸಲು ಮತ್ತು ಹಣಕಾಸು ಕ್ರಿಯಾ ಕಾರ್ಯಪಡೆಯ (ಎಫ್‌ ಎ ಟಿ ಎಫ್) ಮಾರ್ಗಸೂಚಿಗಳಿಗೆ ಅನುಗುಣವಾಗಿ ಭಯೋತ್ಪಾದನೆಗೆ ಹಣಕಾಸು ಒದಗಿಸುವುದನ್ನು ತಡೆಯಲು ನಿರಂತರವಾಗಿ ಕೆಲಸ ಮಾಡುವಂತೆ ಅವರು ಎಲ್ಲಾ ದೇಶಗಳಿಗೆ ಕರೆ ನೀಡಿದರು. ವಿಶ್ವಸಂಸ್ಥೆ, ಎಫ್‌ ಎ ಟಿ ಎಫ್ ಮತ್ತು ಇತರ ಬಹುಪಕ್ಷೀಯ ವೇದಿಕೆಗಳಲ್ಲಿ ಒಟ್ಟಾಗಿ ಕೆಲಸ ಮಾಡಲು ಉಭಯ ನಾಯಕರು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.

ಭಯೋತ್ಪಾದನೆಗೆ ಹಣಕಾಸು ಒದಗಿಸುವುದನ್ನು ತಡೆಯುವ ಕುರಿತು ಭಾರತ ಮತ್ತು ಇಟಲಿ ನಡುವಿನ ಖಾಯಂ ಕಾರ್ಯಪಡೆಯ ಮೊದಲ ಸಭೆ ಮತ್ತು ಭಯೋತ್ಪಾದನೆ ನಿಗ್ರಹ ಜಂಟಿ ಕಾರ್ಯಕಾರಿ ಗುಂಪಿನ ಮುಂಬರುವ ಸಭೆಯನ್ನು ಉಭಯ ನಾಯಕರು ಸ್ವಾಗತಿಸಿದರು.

ಇಟಲಿಯ ಗಾರ್ಡಿಯಾ ಡಿ ಫಿನಾನ್ಜಾ ಮತ್ತು ಭಾರತದ ಜಾರಿ ನಿರ್ದೇಶನಾಲಯದ ನಡುವಿನ ತಿಳುವಳಿಕಾ ಒಪ್ಪಂದದ ಮುಕ್ತಾಯವನ್ನು ಉಭಯ ನಾಯಕರು ಸ್ವಾಗತಿಸಿದರು ಮತ್ತು ವರ್ಗೀಕೃತ ಮಾಹಿತಿಯ ವಿನಿಮಯ ಮತ್ತು ಪರಸ್ಪರ ರಕ್ಷಣೆ ಕುರಿತ ಒಪ್ಪಂದ ಹಾಗೂ ಪೊಲೀಸ್ ಸಹಕಾರವನ್ನು ಬಲಪಡಿಸುವ ಒಪ್ಪಂದದ ತ್ವರಿತ ಮುಕ್ತಾಯವನ್ನು ಎದುರು ನೋಡುತ್ತಿದ್ದಾರೆ. ಹಸ್ತಾಂತರ ಒಪ್ಪಂದ ಮತ್ತು ಪರಸ್ಪರ ಕಾನೂನು ನೆರವು ಒಪ್ಪಂದ ಸೇರಿದಂತೆ ಇತರ ಒಪ್ಪಂದಗಳ ಕುರಿತು ನಡೆಯುತ್ತಿರುವ ಚರ್ಚೆಗಳನ್ನು ಅವರು ಸ್ವಾಗತಿಸಿದರು.

ವಲಸೆ ಮತ್ತು ಚಲನಶೀಲತೆ

ವಿಶೇಷವಾಗಿ ಸ್ಟೆಮ್ (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ) ವಲಯಗಳಲ್ಲಿ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ನುರಿತ ಕಾರ್ಮಿಕರ ಚಲನಶೀಲತೆಯನ್ನು ಹೆಚ್ಚಿಸಲು ಮತ್ತು ಭಾರತದಿಂದ ಇಟಲಿಗೆ ದಾದಿಯರ ಚಲನಶೀಲತೆಯನ್ನು ಸುಗಮಗೊಳಿಸುವ ನಿರ್ದಿಷ್ಟ ಜಂಟಿ ಉದ್ದೇಶದ ಘೋಷಣೆಯ ಮೂಲಕ ಕಾರ್ಮಿಕ ಮಾರುಕಟ್ಟೆಯ ಅಗತ್ಯತೆಗಳಿಗೆ ಅನುಗುಣವಾಗಿ ಕೌಶಲ್ಯ ಅಭಿವೃದ್ಧಿಯ ಸಹಕಾರವನ್ನು ವಿಸ್ತರಿಸಲು ಉಭಯ ನಾಯಕರು ಒಪ್ಪಿಕೊಂಡರು. ಈ ಸಂದರ್ಭದಲ್ಲಿ, ಸಾಮಾಜಿಕ ಭದ್ರತಾ ಒಪ್ಪಂದದ (ಎಸ್‌ ಎಸ್‌ ಎ) ಕುರಿತು ಸಂಬಂಧಿತ ಏಜೆನ್ಸಿಗಳ ನಡುವೆ ನಡೆಯುತ್ತಿರುವ ಚರ್ಚೆಗಳನ್ನು ಅವರು ಸ್ವಾಗತಿಸಿದರು.

ಇಟಾಲಿಯನ್ ವಿಶ್ವವಿದ್ಯಾಲಯಗಳಲ್ಲಿ ದಾಖಲಾದ ಭಾರತೀಯ ವಿದ್ಯಾರ್ಥಿಗಳ ಪ್ರತಿಭೆಯನ್ನು ಹೆಚ್ಚಿಸುವ ಉದ್ದೇಶದಿಂದ "ಐಸಿಐ - ಇಟಲಿ ಕಾಲ್ಸ್ ಇಂಡಿಯಾ: ಒಂದು ವಿಶ್ವವಿದ್ಯಾಲಯ-ಉದ್ಯಮ ಪ್ರತಿಭಾ ಸೇತುವೆ" ಯ ಪ್ರಾರಂಭವನ್ನು ಅವರು ಸ್ವಾಗತಿಸಿದರು, ಇದು ಇಟಾಲಿಯನ್ ಉದ್ಯಮಗಳಲ್ಲಿ ಮಾರ್ಗದರ್ಶನ, ಹೊಂದಾಣಿಕೆ ಮತ್ತು ಅರ್ಹ ಏಕೀಕರಣಕ್ಕಾಗಿ ದೃಢವಾದ ಮಾರ್ಗಗಳನ್ನು ನೀಡುತ್ತದೆ.

ಸುರಕ್ಷಿತ ಮತ್ತು ಕಾನೂನುಬದ್ಧ ವಲಸೆಯನ್ನು ಖಚಿತಪಡಿಸಿಕೊಳ್ಳಲು ಅನಿಯಮಿತ ವಲಸೆ, ಕಾರ್ಮಿಕ ಶೋಷಣೆ ಮತ್ತು ಮಾನವ ಕಳ್ಳಸಾಗಣೆ ವಿರುದ್ಧ ಹೋರಾಡಲು ಸಹಕಾರವನ್ನು ಬಲಪಡಿಸುವ ಸಾಧ್ಯತೆಯ ಬಗ್ಗೆಯೂ ಅವರು ಚರ್ಚಿಸಿದರು.

ಸಂಸ್ಕೃತಿ ಮತ್ತು ಶೈಕ್ಷಣಿಕ ವಿನಿಮಯಗಳು

ಉಭಯ ನಾಯಕರು ಸಂಸ್ಕೃತಿಯನ್ನು ದ್ವಿಪಕ್ಷೀಯ ಸಂವಾದದ ಪ್ರಮುಖ ಸ್ತಂಭ ಎಂದು ಹೇಳಿದರು ಮತ್ತು ಲೋಥಾಲ್‌ ನಲ್ಲಿರುವ ರಾಷ್ಟ್ರೀಯ ಕಡಲ ಪರಂಪರೆ ಸಂಕೀರ್ಣದ ಅಭಿವೃದ್ಧಿಯಲ್ಲಿ ಇಟಲಿಯ ಭಾಗವಹಿಸುವಿಕೆಗೆ ಸಂಬಂಧಿಸಿದ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಸ್ವಾಗತಿಸಿದರು. ಅವರು 2026 ರ ವೆನಿಸ್ ಆರ್ಟ್ ಬಿನಾಲೆ ಇಂಟರ್ನ್ಯಾಷನಲ್ ನಲ್ಲಿ ಭಾರತೀಯ ರಾಷ್ಟ್ರೀಯ ಪೆವಿಲಿಯನ್ ಅನ್ನು ಶ್ಲಾಘಿಸಿದರು. ಅವರು 2027 ಅನ್ನು "ಇಟಲಿ ಮತ್ತು ಭಾರತದ ನಡುವಿನ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ವರ್ಷ" ಎಂದು ಆಚರಿಸುವ ತಮ್ಮ ಉದ್ದೇಶವನ್ನು ವ್ಯಕ್ತಪಡಿಸಿದರು, ಇದು ಉಪಕ್ರಮಗಳ ವಿಶಾಲವಾದ ಕ್ಯಾಲೆಂಡರ್ ಅನ್ನು ಒಳಗೊಂಡಿರುತ್ತದೆ ಮತ್ತು ಇಟಲಿ ಮತ್ತು ಭಾರತದ ನಡುವಿನ ಪ್ರಾಚೀನ ಸಾಂಸ್ಕೃತಿಕ ಸಂಬಂಧಗಳ ಕುರಿತು ಪ್ರಮುಖ ಪ್ರದರ್ಶನಕ್ಕೆ ದಾರಿ ಮಾಡಿಕೊಡುತ್ತದೆ, ಇದನ್ನು ಉಭಯ ಸಂಸ್ಕೃತಿ ಸಚಿವಾಲಯಗಳು ಜಂಟಿಯಾಗಿ ಆಯೋಜಿಸಲಿವೆ.

ಉಭಯ ನಾಯಕರು ಸಂಸ್ಥೆಗಳು, ತಜ್ಞರು ಮತ್ತು ಸೃಜನಶೀಲ ಉದ್ಯಮಗಳ ಪ್ರತಿನಿಧಿಗಳನ್ನು ಒಟ್ಟುಗೂಡಿಸುವ ಇಟಲಿ-ಭಾರತ ಸಾಂಸ್ಕೃತಿಕ ವೇದಿಕೆಯ ಸಂಘಟನೆಯನ್ನು ಪ್ರೋತ್ಸಾಹಿಸಿದರು. ಸಾಂಸ್ಕೃತಿಕ ಪರಂಪರೆಯ ರಕ್ಷಣೆ, ವರ್ಧನೆ ಮತ್ತು ನಿರ್ವಹಣೆಯಲ್ಲಿ ಸಹಕಾರವನ್ನು ಬಲಪಡಿಸುವ ಗುರಿಯನ್ನು ಹೊಂದಿರುವ, ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ದಾಖಲಾದ ಭಾರತೀಯ ಮತ್ತು ಇಟಾಲಿಯನ್ ತಾಣಗಳ ನಡುವಿನ ಟ್ವಿನ್ನಿಂಗ್ ಪ್ರೋಗ್ರಾಂ ಪ್ರಾರಂಭವನ್ನು ಉಭಯ ನಾಯಕರು ಶ್ಲಾಘಿಸಿದರು.

ದ್ವಿಪಕ್ಷೀಯ ಸಹ-ಉತ್ಪಾದನಾ ಒಪ್ಪಂದದಿಂದ ಒದಗಿಸಲಾದ ಕಾನೂನು ಚೌಕಟ್ಟಿನ ಮೇಲೆ ಮತ್ತು ಅವರ ಕೈಗಾರಿಕೆಗಳ ಸಾಮರ್ಥ್ಯ ಮತ್ತು ನವೀನ ಶಕ್ತಿಗಳ ಮೇಲೆ ನಿರ್ಮಿಸುವ ಮೂಲಕ ಉಭಯ ರಾಷ್ಟ್ರಗಳ ನಡುವೆ ಚಲನಚಿತ್ರ ಮತ್ತು ಶ್ರವ್ಯ-ದೃಶ್ಯ ಸಹಕಾರವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಉಭಯ ನಾಯಕರು ಒಪ್ಪಿಕೊಂಡರು.

ಉಭಯ ಪ್ರಧಾನಮಂತ್ರಿಗಳು ಉನ್ನತ ಶಿಕ್ಷಣದಲ್ಲಿ ಸಹಕಾರವನ್ನು ಬಲಪಡಿಸುವ ತಮ್ಮ ಉದ್ದೇಶವನ್ನು ಪುನರುಚ್ಚರಿಸಿದರು ಮತ್ತು ಉನ್ನತ ಶಿಕ್ಷಣ ಮತ್ತು ಸಂಶೋಧನೆಯ ಕುರಿತಾದ ಇಂಡೋ-ಇಟಾಲಿಯನ್ ಮಾರ್ಗಸೂಚಿಯ ಅಳವಡಿಕೆಯನ್ನು ಸ್ವಾಗತಿಸಿದರು. ಭಾರತದ ಹೊಸ ಶಿಕ್ಷಣ ನೀತಿಯಡಿ ಭಾರತದಲ್ಲಿ ಕ್ಯಾಂಪಸ್‌ ಗಳನ್ನು ತೆರೆಯುವಂತೆ ಪ್ರಧಾನಮಂತ್ರಿ ಮೋದಿ ಅವರು ಇಟಾಲಿಯನ್ ವಿಶ್ವವಿದ್ಯಾಲಯಗಳು ಮತ್ತು ಶ್ರೇಷ್ಠತಾ ಸಂಸ್ಥೆಗಳನ್ನು ಆಹ್ವಾನಿಸಿದರು.

ಭಾರತ-ಇಯು ಸಂಬಂಧಗಳು

27 ಜನವರಿ 2026 ರಂದು ನಡೆದ ಭಾರತ-ಇಯು ಶೃಂಗಸಭೆಯಲ್ಲಿ ಅಂಗೀಕರಿಸಲಾದ ಹೊಸ ಜಂಟಿ ಭಾರತ-ಇಯು ಸಮಗ್ರ ಕಾರ್ಯತಂತ್ರದ ಕಾರ್ಯಸೂಚಿ ಮತ್ತು ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದದ ಸಮಾಲೋಚನೆಗಳ ಮುಕ್ತಾಯವನ್ನು ನಾಯಕರು ಸ್ವಾಗತಿಸಿದರು, ಇದು ಮಾರುಕಟ್ಟೆ ಪ್ರವೇಶವನ್ನು ಹೆಚ್ಚಿಸುವ, ವ್ಯಾಪಾರ ಅಡೆತಡೆಗಳನ್ನು ಕಡಿಮೆ ಮಾಡುವ ಮತ್ತು ವೈವಿಧ್ಯಮಯ ಮೌಲ್ಯ ಸರಪಳಿಗಳು ಹಾಗೂ ಹೊಸ ಮಾರುಕಟ್ಟೆ ಅವಕಾಶಗಳ ಮೂಲಕ ಆರ್ಥಿಕ ಭದ್ರತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಬಲಪಡಿಸಿ ಸಂಬಂಧಗಳನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುತ್ತದೆ.

ವ್ಯಾಪಾರ, ನಿರ್ಣಾಯಕ ತಂತ್ರಜ್ಞಾನಗಳು ಮತ್ತು ಆರ್ಥಿಕ ಭದ್ರತೆಯಲ್ಲಿ ಸಹಕಾರಕ್ಕಾಗಿ ಪ್ರಮುಖ ವೇದಿಕೆಯಾಗಿ ಭಾರತ-ಇಯು ವ್ಯಾಪಾರ ಮತ್ತು ತಂತ್ರಜ್ಞಾನ ಮಂಡಳಿಯನ್ನು ಬಲಪಡಿಸಲು ಅವರು ತಮ್ಮ ಬೆಂಬಲವನ್ನು ಪುನರುಚ್ಚರಿಸಿದರು. ನಾಯಕರು ಭಾರತ-ಇಯು ಭದ್ರತೆ ಮತ್ತು ರಕ್ಷಣಾ ಪಾಲುದಾರಿಕೆಯನ್ನು ಸ್ವಾಗತಿಸಿದರು ಮತ್ತು ಸಮಗ್ರ ಚೌಕಟ್ಟಿನ ಚಲನಶೀಲತೆಯ ತಿಳುವಳಿಕಾ ಒಪ್ಪಂದ ಸೇರಿದಂತೆ ಚಲನಶೀಲತೆಯ ಸಹಕಾರದಲ್ಲಿನ ಪ್ರಗತಿಯನ್ನು ಶ್ಲಾಘಿಸಿದರು.

ಬಹುಪಕ್ಷೀಯ ಸಹಕಾರ

ವಿಶ್ವಸಂಸ್ಥೆಯನ್ನು ಇಂದಿನ ವಾಸ್ತವಗಳಿಗೆ ಹೆಚ್ಚು ಪ್ರಾತಿನಿಧಿಕ ಮತ್ತು ಸೂಕ್ತವಾಗಿಸಲು ಅದನ್ನು ಸುಧಾರಿಸುವ ತುರ್ತು ಅಗತ್ಯವನ್ನು ಉಭಯ ನಾಯಕರು ಒತ್ತಿಹೇಳಿದರು.

ಬಹುಪಕ್ಷೀಯತೆಯನ್ನು ರಕ್ಷಿಸಲು ಮತ್ತು ನಿಯಮಾಧಾರಿತ ಅಂತರರಾಷ್ಟ್ರೀಯ ವ್ಯವಸ್ಥೆಯನ್ನು ಎತ್ತಿಹಿಡಿಯಲು ವಿಶ್ವಸಂಸ್ಥೆ ಮತ್ತು ಜಿ20 ಸೇರಿದಂತೆ ಇತರ ಜಾಗತಿಕ ವೇದಿಕೆಗಳಲ್ಲಿ ಒಟ್ಟಾಗಿ ಕೆಲಸ ಮಾಡುವ ಮಹತ್ವವನ್ನು ಉಭಯ ನಾಯಕರು ಒತ್ತಿಹೇಳಿದರು.

ಆಫ್ರಿಕಾಕ್ಕೆ ಎರಡೂ ದೇಶಗಳು ನೀಡುವ ಕಾರ್ಯತಂತ್ರದ ಆದ್ಯತೆಯನ್ನು ಗುರುತಿಸಿ, ಉಭಯ ಪ್ರಧಾನ ಮಂತ್ರಿಗಳು ಆಫ್ರಿಕಾದಲ್ಲಿ ಭಾರತದ ಅಭಿವೃದ್ಧಿ ಪಾಲುದಾರಿಕೆ ಮತ್ತು ಇಟಲಿಯ ಮಟ್ಟೈ ಯೋಜನೆಗೆ ಅನುಗುಣವಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಕೃಷಿ, ಶಿಕ್ಷಣ, ಆರೋಗ್ಯ ರಕ್ಷಣೆ, ಕೃತಕ ಬುದ್ಧಿಮತ್ತೆ, ಸಂಪರ್ಕ ಮತ್ತು ಮೂಲಸೌಕರ್ಯ ಹಾಗೂ ನವೀಕರಿಸಬಹುದಾದ ಇಂಧನದಂತಹ ಕ್ಷೇತ್ರಗಳಲ್ಲಿ ಆಫ್ರಿಕನ್ ಪಾಲುದಾರರೊಂದಿಗೆ ತ್ರಿಪಕ್ಷೀಯ ಉಪಕ್ರಮಗಳಲ್ಲಿ ಒಟ್ಟಾಗಿ ಕೆಲಸ ಮಾಡಲು ಒಪ್ಪಿಕೊಂಡರು.

ಅನ್ಕ್ಲೋಸ್ (UNCLOS) ಸೇರಿದಂತೆ ಅಂತರರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಮುಕ್ತ, ಶಾಂತಿಯುತ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್‌ ಗೆ ನಾಯಕರು ತಮ್ಮ ಹಂಚಿಕೆಯ ಬದ್ಧತೆಯನ್ನು ಪುನರುಚ್ಚರಿಸಿದರು. ಇಂಡೋ-ಪೆಸಿಫಿಕ್ ಸಾಗರಗಳ ಉಪಕ್ರಮಗಳ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಶೈಕ್ಷಣಿಕ ಸಹಕಾರದ ಸ್ತಂಭದಲ್ಲಿ ತಮ್ಮ ನಿರಂತರ ಪಾಲುದಾರಿಕೆಯನ್ನು ಅವರು ಎದುರು ನೋಡುತ್ತಿದ್ದಾರೆ.

ಉಭಯ ನಾಯಕರು ಪಶ್ಚಿಮ ಏಷ್ಯಾ/ಮಧ್ಯಪ್ರಾಚ್ಯದ ಪರಿಸ್ಥಿತಿ ಮತ್ತು ಈ ಪ್ರದೇಶದ ಹಾಗೂ ಪ್ರಪಂಚದ ಉಳಿದ ಭಾಗಗಳ ಮೇಲಿನ ಅದರ ಪರಿಣಾಮಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ನಾಯಕರು 8 ಏಪ್ರಿಲ್ 2026 ರಂದು ಘೋಷಿಸಲಾದ ಕದನ ವಿರಾಮವನ್ನು ಸ್ವಾಗತಿಸಿದರು ಮತ್ತು ಪಶ್ಚಿಮ ಏಷ್ಯಾ/ಮಧ್ಯಪ್ರಾಚ್ಯದಲ್ಲಿ ಶಾಶ್ವತ ಶಾಂತಿಗಾಗಿ ಉದ್ವಿಗ್ನತೆಯನ್ನು ಕಡಿಮೆ ಮಾಡುವುದು, ಸಂವಾದ ಮತ್ತು ರಾಜತಾಂತ್ರಿಕತೆಯ ಮಹತ್ವವನ್ನು ಒತ್ತಿಹೇಳಿದರು. ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸುವ ಸ್ವಾತಂತ್ರ್ಯ ಮತ್ತು ಜಾಗತಿಕ ಹರಿವಿನ ಪುನರಾರಂಭಕ್ಕೂ ಅವರು ಕರೆ ನೀಡಿದರು.

ಉಕ್ರೇನ್‌ ನಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ಉಭಯ ನಾಯಕರು ಕಳವಳ ವ್ಯಕ್ತಪಡಿಸಿದರು, ಇದು ಅಪಾರ ಮಾನವ ಸಂಕಷ್ಟ ಮತ್ತು ನಕಾರಾತ್ಮಕ ಜಾಗತಿಕ ಪರಿಣಾಮಗಳನ್ನು ಉಂಟುಮಾಡುತ್ತಲೇ ಇದೆ. ಅಂತರರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ಚಾರ್ಟರ್‌ ನ ತತ್ವಗಳಿಗೆ ಅನುಗುಣವಾಗಿ, ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಉಕ್ರೇನ್‌ ನಲ್ಲಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತ ಶಾಂತಿಯನ್ನು ಸಾಧಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಬೆಂಬಲಿಸುವುದನ್ನು ಮುಂದುವರಿಸಲು ಅವರು ಒಪ್ಪಿಕೊಂಡರು.

ಉಪಸಂಹಾರ

ಭಾರತ-ಇಟಲಿ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯ ಪ್ರಭಾವಶಾಲಿ ಬೆಳವಣಿಗೆ ಮತ್ತು ಆಳವಾಗುವುದನ್ನು ಗಮನಿಸಿ, ಉಭಯ ನಾಯಕರು ಎಲ್ಲಾ ವಲಯಗಳಲ್ಲಿ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ಮತ್ತು ಪ್ರಮುಖ ಜಾಗತಿಕ ಮತ್ತು ಪ್ರಾದೇಶಿಕ ಬೆಳವಣಿಗೆಗಳ ಕುರಿತು ನಿಕಟ ಉನ್ನತ ಮಟ್ಟದ ಸಮಾಲೋಚನೆಗಳನ್ನು ಮುಂದುವರಿಸಲು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.

ಇಟಾಲಿಯನ್ ಸರ್ಕಾರ ಮತ್ತು ಜನರು ನೀಡಿದ ಆತ್ಮೀಯ ಆತಿಥ್ಯಕ್ಕಾಗಿ ಪ್ರಧಾನಮಂತ್ರಿ ಮೋದಿ ಅವರು ಪ್ರಧಾನಮಂತ್ರಿ ಮೆಲೋನಿ ಅವರಿಗೆ ಧನ್ಯವಾದ ಅರ್ಪಿಸಿದರು ಮತ್ತು ಪರಸ್ಪರ ಅನುಕೂಲಕರ ಸಮಯದಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಮಂತ್ರಿ ಮೆಲೋನಿ ಅವರನ್ನು ಆಹ್ವಾನಿಸಿದರು. 

 

*****

 


(ಪ್ರಕಟಣೆ ಐ.ಡಿ.: 2263500) ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati , Tamil