ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಾರ್ಚ್ 13-14 ರಂದು ಅಸ್ಸಾಂಗೆ ಪ್ರಧಾನಮಂತ್ರಿ ಭೇಟಿ


₹47,800 ಕೋಟಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ

ಈಶಾನ್ಯ ಭಾರತದ ಮೊದಲ ಪ್ರವೇಶ ನಿಯಂತ್ರಿತ ಗ್ರೀನ್‌ಫೀಲ್ಡ್ ನಾಲ್ಕು ಪಥದ ಹೈ-ಸ್ಪೀಡ್ ಕಾರಿಡಾರ್ - ಶಿಲ್ಲಾಂಗ್-ಸಿಲ್ಚಾರ್ ಕಾರಿಡಾರ್‌ನ ಭೂಮಿ ಪೂಜೆಯನ್ನು ನೆರವೇರಿಸಲಿದ್ದಾರೆ ಪ್ರಧಾನಮಂತ್ರಿ

ಅಸ್ಸಾಂ ಮಾಲಾ 3.0 ರ ಭೂಮಿ ಪೂಜೆಯನ್ನು ಪ್ರಧಾನಮಂತ್ರಿ  ನೆರವೇರಿಸಲಿದ್ದಾರೆ - ಇದು ಪ್ರಮುಖ ರಸ್ತೆ ಮೂಲಸೌಕರ್ಯ ಉಪಕ್ರಮ

ಚಹಾ ತೋಟಗಾರರಿಗೆ ಭೂ ಪಟ್ಟಾಗಳನ್ನು ವಿತರಿಸುವ ಮೂಲಕ  ಚಹಾ ತೋಟಗಾರ ಸಮುದಾಯಕ್ಕೆ ವಾಸ ಸ್ಥಳದ ಭೂಮಿಯ ಹಕ್ಕುಗಳನ್ನು ಒದಗಿಸುವಲ್ಲಿ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಲಿದ್ದಾರೆ ಪ್ರಧಾನಮಂತ್ರಿ

ಇಂಧನ ಮೂಲಸೌಕರ್ಯವನ್ನು ಬಲಪಡಿಸಲು, ಕೊಪಿಲಿ ಜಲವಿದ್ಯುತ್ ಯೋಜನೆ, ನುಮಲಿಗಢ-ಸಿಲಿಗುರಿ ಪೈಪ್‌ಲೈನ್ ಸಾಮರ್ಥ್ಯ ವರ್ಧನೆಯನ್ನು ಪ್ರಧಾನಮಂತ್ರಿ  ಲೋಕಾರ್ಪಣೆ ಮಾಡಲಿದ್ದಾರೆ ಮತ್ತು ಈಶಾನ್ಯ ಅನಿಲ ಗ್ರಿಡ್‌ನ 1 ನೇ ಹಂತವನ್ನು ಉದ್ಘಾಟಿಸಲಿದ್ದಾರೆ

ದೇಶಾದ್ಯಂತ 9.3 ಕೋಟಿಗೂ ಹೆಚ್ಚು ರೈತರಿಗೆ ಪಿಎಂ-ಕಿಸಾನ್ ನ 22 ನೇ ಕಂತು ಬಿಡುಗಡೆ ಮಾಡಲಿದ್ದಾರೆ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 12 MAR 2026 5:33PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಮಾರ್ಚ್ 13-14 ರಂದು ಅಸ್ಸಾಂಗೆ ಭೇಟಿ ನೀಡಲಿದ್ದಾರೆ. ಈ ಭೇಟಿಯ ಸಮಯದಲ್ಲಿ, ಪ್ರಧಾನಮಂತ್ರಿ ಅವರು ಕೊಕ್ರಝಾರ್, ಗುವಾಹಟಿ ಮತ್ತು ಸಿಲ್ಚಾರ್‌ನಲ್ಲಿ ₹47,800 ಕೋಟಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸುತ್ತಾರೆ, ರಾಷ್ಟ್ರಕ್ಕೆ ಸಮರ್ಪಿಸುತ್ತಾರೆ, ಶಿಲಾನ್ಯಾಸ ಮಾಡುತ್ತಾರೆ, ಹಾಗು ಭೂಮಿ ಪೂಜೆ ಮಾಡುತ್ತಾರೆ ಮತ್ತು ಹಸಿರು ನಿಶಾನೆ ತೋರಲಿದ್ದಾರೆ. .

ಮಾರ್ಚ್ 13 ರಂದು ಮಧ್ಯಾಹ್ನ 1:30 ರ ಸುಮಾರಿಗೆ, ಪ್ರಧಾನ ಮಂತ್ರಿ ಅವರು ಕೊಕ್ರಝಾರ್‌ನಲ್ಲಿ ₹4,570 ಕೋಟಿಗೂ ಹೆಚ್ಚು ಮೌಲ್ಯದ ಯೋಜನೆಗಳಿಗೆ ಭೂಮಿ ಪೂಜೆ ನೆರವೇರಿಸುತ್ತಾರೆ ಹಾಗು ಹಸಿರು ನಿಶಾನೆ ತೋರಿಸುತ್ತಾರೆ. ನಂತರ ಸಂಜೆ 5 ಗಂಟೆಗೆ ಗುವಾಹಟಿಯಲ್ಲಿ ಪ್ರಧಾನ ಮಂತ್ರಿ ಅವರು ಭೂಮಿ ಪೂಜೆ ನೆರವೇರಿಸುತ್ತಾರೆ, ಸುಮಾರು ₹19,680 ಕೋಟಿ ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸುತ್ತಾರೆ ಮತ್ತು ರಾಷ್ಟ್ರಕ್ಕೆ ಅರ್ಪಿಸುತ್ತಾರೆ.

ಮಾರ್ಚ್ 14 ರಂದು ಬೆಳಿಗ್ಗೆ 10:45 ರ ಸುಮಾರಿಗೆ, ಪ್ರಧಾನ ಮಂತ್ರಿ ಅವರು ಸಿಲ್ಚಾರ್‌ನಲ್ಲಿ ಸುಮಾರು ₹23,550 ಕೋಟಿ ಮೌಲ್ಯದ ವಿವಿಧ ಯೋಜನೆಗಳಿಗೆ  ಭೂಮಿ ಪೂಜೆ ನೆರವೇರಿಸುತ್ತಾರೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸುತ್ತಾರೆ.

ಕೊಕ್ರಝಾರ್‌ನಲ್ಲಿ ಪ್ರಧಾನಮಂತ್ರಿ

ಪ್ರಧಾನಮಂತ್ರಿಯವರು ₹3,200 ಕೋಟಿಗೂ ಹೆಚ್ಚು ಮೌಲ್ಯದ ಪ್ರಮುಖ ರಸ್ತೆ ಮೂಲಸೌಕರ್ಯ ಉಪಕ್ರಮವಾದ ಅಸ್ಸಾಂ ಮಾಲಾ 3.0 ಯ ಭೂಮಿ ಪೂಜೆಯನ್ನು ನೆರವೇರಿಸಲಿದ್ದಾರೆ. ಈ ಯೋಜನೆಯಡಿಯಲ್ಲಿ, ಅಂತರರಾಜ್ಯ ಸಂಪರ್ಕವನ್ನು ಸುಧಾರಿಸಲು ಮತ್ತು ರಾಷ್ಟ್ರೀಯ ಹೆದ್ದಾರಿಗಳು ಹಾಗು ಗ್ರಾಮೀಣ ರಸ್ತೆಗಳ ನಡುವಿನ ಸಂಪರ್ಕವನ್ನು ಬಲಪಡಿಸಲು ಅಸ್ಸಾಂನಾದ್ಯಂತ 900 ಕಿಲೋಮೀಟರ್‌ಗಳಿಗೂ ಹೆಚ್ಚು ರಸ್ತೆಗಳನ್ನು ನಿರ್ಮಿಸಲಾಗುವುದು.

ಬೋಡೋಲ್ಯಾಂಡ್ ಪ್ರಾದೇಶಿಕ ಮಂಡಳಿ (ಬಿಟಿಸಿ) ಪ್ರದೇಶದಲ್ಲಿ ನಾಲ್ಕು ಮೇಲ್ಸೇತುವೆಗಳು ಮತ್ತು ಎರಡು ಸೇತುವೆಗಳು ಸೇರಿದಂತೆ ಸುಮಾರು ₹1,100 ಕೋಟಿ ಹೂಡಿಕೆಯೊಂದಿಗೆ ಆರು ರಸ್ತೆ ಮೂಲಸೌಕರ್ಯ ಯೋಜನೆಗಳಿಗೆ ಪ್ರಧಾನಮಂತ್ರಿ ಯವರು ಭೂಮಿ ಪೂಜೆಯನ್ನು ನೆರವೇರಿಸಲಿದ್ದಾರೆ. ಈ ಯೋಜನೆಗಳು ಕೊಕ್ರಝಾರ್ ಜಿಲ್ಲೆಯಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಸಂಪರ್ಕ, ಪ್ರವಾಸೋದ್ಯಮ, ಕೃಷಿ ಲಭ್ಯತೆ, ಆರೋಗ್ಯ ರಕ್ಷಣೆ ಲಭ್ಯತೆ ಮತ್ತು ಗ್ರಾಮೀಣ ಚಲನಶೀಲತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಕೊಕ್ರಝಾರ್ ಜಿಲ್ಲೆಯ ಬಾಷ್ಬರಿಯಲ್ಲಿ  ರೈಲ್ವೇ ಲೋಕೋಮೋಟಿವ್, ವ್ಯಾಗನ್ , ಕೋಚ್ ಗಳಲ್ಲಿ ಸುರಕ್ಷತೆ ಮತ್ತು ರಾಚನಿಕ ಸದೃಢತೆ ಸಹಿತ ಸಮಗ್ರ ತಪಾಸಣೆ ನಡೆಸುವ ವಿಶೇಷ ಕಾರ್ಯಾಗಾರವಾದ   ಆವರ್ತಕ/ಅವಧಿ ಬದ್ದ ದುರಸ್ತಿ /ಪರಿಷ್ಕರಣೆ (ಪಿಒಎಚ್) ಕಾರ್ಯಾಗಾರಕ್ಕೆ ಪ್ರಧಾನಮಂತ್ರಿ  ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಕಾರ್ಯಾಗಾರವು ರೈಲ್ವೆ ನಿರ್ವಹಣಾ ಮೂಲಸೌಕರ್ಯವನ್ನು ಬಲಪಡಿಸುತ್ತದೆ, ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ಪ್ರದೇಶದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

ಅಸ್ಸಾಂ ಮತ್ತು ಈಶಾನ್ಯ ಪ್ರದೇಶದಲ್ಲಿ ಸಂಪರ್ಕವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಮೂರು ಹೊಸ ರೈಲು ಸೇವೆಗಳಿಗೆ ಪ್ರಧಾನಮಂತ್ರಿ  ಹಸಿರು ನಿಶಾನೆ ತೋರಲಿದ್ದಾರೆ. ಇವುಗಳಲ್ಲಿ ಈಶಾನ್ಯ ಮತ್ತು ದಕ್ಷಿಣ ಭಾರತದ ನಡುವೆ ನೇರ ರೈಲು ಸಂಪರ್ಕವನ್ನು ಒದಗಿಸುವ ಕಾಮಾಖ್ಯ-ಚರ್ಲಪಲ್ಲಿ ಅಮೃತ್ ಭಾರತ್ ಎಕ್ಸ್‌ಪ್ರೆಸ್; ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ನಡುವೆ ಸಂಪರ್ಕವನ್ನು ಹೆಚ್ಚಿಸುವ ಗುವಾಹಟಿ-ನ್ಯೂ ಜಲ್ಪೈಗುರಿ ಎಕ್ಸ್‌ಪ್ರೆಸ್; ಮತ್ತು ಅಸ್ಸಾಂ ಹಾಗು ತ್ರಿಪುರಾ ನಡುವಿನ ಸಂಪರ್ಕವನ್ನು ಸುಧಾರಿಸುವ ಮತ್ತು ಪ್ರಯಾಣಿಕರು, ವ್ಯಾಪಾರಿಗಳು ಮತ್ತು ಪ್ರವಾಸಿಗರಿಗೆ ಸುಗಮ ಅಂತರ-ರಾಜ್ಯ ಪ್ರಯಾಣವನ್ನು ಒದಗಿಸುವ ನಾರಂಗಿ-ಅಗರ್ತಲಾ ಎಕ್ಸ್‌ಪ್ರೆಸ್ ಸೇರಿವೆ.

ಗುವಾಹಟಿಯಲ್ಲಿ ಪ್ರಧಾನಮಂತ್ರಿ

ಪ್ರಧಾನಮಂತ್ರಿಯವರು ಚಹಾ ತೋಟದ ಕಾರ್ಮಿಕರಿಗೆ ಭೂ ಪಟ್ಟಾಗಳನ್ನು ವಿತರಿಸಲಿದ್ದಾರೆ, ಇದು ಚಹಾ ತೋಟದ ಸಮುದಾಯಕ್ಕೆ ವಾಸ ಸ್ಥಾನ ಭೂಮಿಯ ಹಕ್ಕುಗಳನ್ನು ಒದಗಿಸುವಲ್ಲಿ ಐತಿಹಾಸಿಕ ಮೈಲಿಗಲ್ಲನ್ನು ಗುರುತಿಸುತ್ತದೆ. ಸುರಕ್ಷಿತ ಭೂ ಮಾಲೀಕತ್ವವು ವಸತಿ ಭದ್ರತೆಯನ್ನು ಸುಧಾರಿಸುತ್ತದೆ, ಸಾಂಸ್ಥಿಕ ಸಾಲ ಮತ್ತು ಕಲ್ಯಾಣ ಯೋಜನೆಗಳಿಗೆ ಉತ್ತಮ ಪ್ರವೇಶ ಲಭ್ಯತೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ದೀರ್ಘಕಾಲೀನ ಸಾಮಾಜಿಕ ಹಾಗು ಆರ್ಥಿಕ ಚಲನಶೀಲತೆಯನ್ನು ಉತ್ತೇಜಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಪ್ರಧಾನಮಂತ್ರಿಯವರು ದೇಶಾದ್ಯಂತ 9.3 ಕೋಟಿಗೂ ಹೆಚ್ಚು ರೈತರಿಗೆ ಪಿ.ಎಂ.-ಕಿಸಾನ್ (PM-KISAN)  ಯೋಜನೆಯ 22 ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ, ಇದರ ಅಡಿಯಲ್ಲಿ ಅರ್ಹ ರೈತರು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ₹2,000 ಪಡೆಯುತ್ತಾರೆ.

ದಿಮಾ ಹಸಾವೊ ಮತ್ತು ಪಶ್ಚಿಮ ಕರ್ಬಿ ಅಂಗ್ಲಾಂಗ್ ಜಿಲ್ಲೆಗಳಲ್ಲಿರುವ ಕೊಪಿಲಿ ಜಲವಿದ್ಯುತ್ ಯೋಜನೆಯನ್ನು ಪ್ರಧಾನಮಂತ್ರಿ ಯವರು ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ. ₹2,300 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ಯೋಜನೆಯು ಶುದ್ಧ ಇಂಧನ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಈ ಪ್ರದೇಶದಲ್ಲಿ ಗ್ರಿಡ್ ಸ್ಥಿರತೆಯನ್ನು ಸುಧಾರಿಸುತ್ತದೆ ಮತ್ತು ಮನೆಗಳು, ರೈತರು ಹಾಗು ಕೈಗಾರಿಕೆಗಳಿಗೆ ವಿಶ್ವಾಸಾರ್ಹ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸುತ್ತದೆ.

ಆಯಿಲ್ ಇಂಡಿಯಾ ಲಿಮಿಟೆಡ್‌ನ ನುಮಲಿಗಢ-ಸಿಲಿಗುರಿ ಉತ್ಪನ್ನ ಪೈಪ್‌ಲೈನ್ (ಎನ್‌ಎಸ್‌ಪಿಎಲ್) ನ ಸಾಮರ್ಥ್ಯ ವರ್ಧನೆ ಯೋಜನೆಯನ್ನು ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ. ಈ ಯೋಜನೆಯು ಹೆಚ್ಚುವರಿ ಪೆಟ್ರೋಲಿಯಂ ಉತ್ಪನ್ನಗಳನ್ನು ಸ್ಥಳಾಂತರಿಸುವ ಮೂಲಕ ನುಮಲಿಗಢ ಸಂಸ್ಕರಣಾಗಾರವನ್ನು 3 ಎಂಎಂಟಿಪಿಎ ಯಿಂದ 9 ಎಂಎಂಟಿಪಿಎಗೆ ವಿಸ್ತರಿಸಲು ಅನುಕೂಲ ಒದಗಿಸಲಿದೆ. ಗುವಾಹಟಿಯನ್ನು ನುಮಲಿಗಢ, ಗೋಹ್‌ಪುರ ಮತ್ತು ಇಟಾನಗರದೊಂದಿಗೆ ಸಂಪರ್ಕಿಸುವ ಪ್ರಮುಖ ಪೈಪ್‌ಲೈನ್ ಯೋಜನೆಯಾದ ಈಶಾನ್ಯ ಅನಿಲ ಗ್ರಿಡ್‌ನ ಹಂತ 1 ಅನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ ಮತ್ತು ದಿಮಾಪುರಕ್ಕೆ ವಿಸ್ತರಿಸುವ ಶಾಖೆಯ ಮಾರ್ಗವನ್ನು ಸಹ ಪ್ರಧಾನಮಂತ್ರಿ ಯವರು ಉದ್ಘಾಟಿಸಲಿದ್ದಾರೆ. ಹೈಲಕಂಡಿ ಜಿಲ್ಲೆಯ ಪಂಚಗ್ರಾಮ್‌ನಲ್ಲಿ ನುಮಲಿಗಢ ಸಂಸ್ಕರಣಾ ಲಿಮಿಟೆಡ್‌ನ (ಎನ್‌ಆರ್‌ಎಲ್) ರೈಲ್-ಫೆಡ್ ಪಿಒಎಲ್ ಟರ್ಮಿನಲ್‌ಗೆ ಪ್ರಧಾನಮಂತ್ರಿ ಯವರು ಅಡಿಪಾಯ ಹಾಕಲಿದ್ದಾರೆ. ಈ ಯೋಜನೆಗಳು ಈಶಾನ್ಯದಲ್ಲಿ ಇಂಧನ ಮೂಲಸೌಕರ್ಯವನ್ನು ಗಮನಾರ್ಹವಾಗಿ ಬಲಪಡಿಸುತ್ತವೆ ಮತ್ತು ರಾಷ್ಟ್ರೀಯ ಇಂಧನ ಭದ್ರತೆಯನ್ನು ಹೆಚ್ಚಿಸುತ್ತವೆ.

ಸುಮಾರು ₹420 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ರಂಗಿಯಾ-ಮುರ್ಕೊಂಗ್ಸೆಲೆಕ್ ರೈಲು ಮಾರ್ಗದ ವಿದ್ಯುದ್ದೀಕರಣ (558 ಕಿಮೀ) ಮತ್ತು ಸುಮಾರು ₹1,180 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಚಾಪರ್ಮುಖ್-ದಿಬ್ರುಗಢ ರೈಲು ಮಾರ್ಗದ ವಿದ್ಯುದ್ದೀಕರಣ (571 ಕಿಮೀ), ಸುಮಾರು ₹650 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಬದರ್ಪುರ್-ಸಿಲ್ಚಾರ್ ಮತ್ತು ಬದರ್ಪುರ್-ಚುರೈಬಾರಿ ರೈಲು ಮಾರ್ಗಗಳು ಸೇರಿದಂತೆ ಪ್ರಮುಖ ರೈಲ್ವೆ ವಿದ್ಯುದ್ದೀಕರಣ ಯೋಜನೆಗಳನ್ನು ಪ್ರಧಾನಮಂತ್ರಿ ಯವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಯೋಜನೆಗಳು ಬ್ರಹ್ಮಪುತ್ರ ಮತ್ತು ಬರಾಕ್ ಕಣಿವೆ ಪ್ರದೇಶಗಳಲ್ಲಿ ಸಂಪರ್ಕವನ್ನು ಸುಧಾರಿಸುವುದರ ಜೊತೆಗೆ ವೇಗವಾದ, ಇಂಧನ-ಸಮರ್ಥ ಮತ್ತು ಪರಿಸರ ಸುಸ್ಥಿರ ರೈಲು ಕಾರ್ಯಾಚರಣೆಗಳನ್ನು ಸಕ್ರಿಯಗೊಳಿಸುತ್ತವೆ.

₹3,600 ಕೋಟಿಗೂ ಹೆಚ್ಚು ವೆಚ್ಚದ ಫರ್ಕೇಟಿಂಗ್-ಟಿನ್ಸುಕಿಯಾ ರೈಲು ಮಾರ್ಗ ದ್ವಿಗುಣಗೊಳಿಸುವ ಯೋಜನೆಗೆ (194 ಕಿಮೀ) ಪ್ರಧಾನಮಂತ್ರಿ  ಶಂಕುಸ್ಥಾಪನೆ ನೆರವೇರಿಸಲಿದ್ದಾರೆ, ಇದು ಮಾರ್ಗ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚುವರಿ ಪ್ರಯಾಣಿಕ ಹಾಗು ಸರಕು ರೈಲುಗಳ ಕಾರ್ಯಾಚರಣೆಗೆ ಅನುವು ಮಾಡಿಕೊಡುತ್ತದೆ.  

ಜಲಮಾರ್ಗ ವಲಯದಲ್ಲಿ, ಬಿಸ್ವಾನಾಥ್ ಜಿಲ್ಲೆಯ ಬಿಸ್ವಾನಾಥ್ ಘಾಟ್ ಮತ್ತು ಜೋರ್ಹತ್ ಜಿಲ್ಲೆಯ ನೀಮತಿಯಲ್ಲಿ ಕ್ರೂಸ್ ಟರ್ಮಿನಲ್‌ಗಳಿಗೆ ಪ್ರಧಾನಮಂತ್ರಿ ಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ದಿಬ್ರುಗಢದ ಬೋಗಿಬೀಲ್‌ನಲ್ಲಿರುವ ಪ್ರಾದೇಶಿಕ ಶ್ರೇಷ್ಠತಾ ಕೇಂದ್ರ (ಆರ್‌ಸಿಒಇ) ಕ್ಕಾಗಿ ಪ್ರಧಾನಮಂತ್ರಿ ಯವರು ಭೂಮಿ ಪೂಜೆಯನ್ನು ನೆರವೇರಿಸಲಿದ್ದಾರೆ, ಇದು ಈಶಾನ್ಯ ಪ್ರದೇಶಕ್ಕೆ ಪ್ರಮುಖ ಸಮುದ್ರ ತರಬೇತಿ ಮತ್ತು ಸಂಶೋಧನಾ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಪಾಂಡು ಜೆಟ್ಟಿಯನ್ನು ರಾಷ್ಟ್ರೀಯ ಹೆದ್ದಾರಿ-27 ಗೆ ಸಂಪರ್ಕಿಸುವ ರಸ್ತೆಯನ್ನು ಪ್ರಧಾನಮಂತ್ರಿ ಯವರು ಉದ್ಘಾಟಿಸಲಿದ್ದಾರೆ.

ಪ್ರಧಾನಮಂತ್ರಿಯವರು ಗುವಾಹಟಿಯಲ್ಲಿ ಪಿಎಂ ಏಕ್ತಾ ಮಾಲ್ ಉದ್ಘಾಟಿಸಲಿದ್ದಾರೆ. ಈ ಮಾಲ್ ಅಸ್ಸಾಂ ಮತ್ತು ಈಶಾನ್ಯ ಪ್ರದೇಶದ ಪ್ರಮುಖ ವಾಣಿಜ್ಯ ಮತ್ತು ಪ್ರವಾಸೋದ್ಯಮ ಕೇಂದ್ರವಾಗಿ ರೂಪಿತವಾಗಿದ್ದು, ಅಸ್ಸಾಂ ಮತ್ತು ಇತರ ರಾಜ್ಯಗಳ ಒಂದು ಜಿಲ್ಲೆ ಒಂದು ಉತ್ಪನ್ನ-(ಒನ್ ಡಿಸ್ಟ್ರಿಕ್ಟ್ ಒನ್ ಪ್ರಾಡಕ್ಟ್ -ODOP) ವಸ್ತುಗಳು, ಜಿಐ-ಟ್ಯಾಗ್ ಮಾಡಲಾದ ಉತ್ಪನ್ನಗಳು, ಕರಕುಶಲ ವಸ್ತುಗಳು ಮತ್ತು ಕೈಮಗ್ಗ ಸರಕುಗಳಿಗೆ ಶಾಶ್ವತ ಮಳಿಗೆಗಳನ್ನು ಒಳಗೊಂಡಿದೆ. ಈ ಸೌಲಭ್ಯವು ಪ್ರಮುಖ ಭಾರತೀಯ ಬ್ರ್ಯಾಂಡ್‌ಗಳ ಶೋ ರೂಂಗಳು, ಆಹಾರ ಮಳಿಗೆಗಳು (ಫುಡ್ ಕೋರ್ಟ್) , ಆಧುನಿಕ ಸೌಲಭ್ಯಗಳು, ಪಾರ್ಕಿಂಗ್ ಮತ್ತು ಡಿಜಿಟಲ್ ಕಿಯೋಸ್ಕ್‌ಗಳನ್ನು ಒಳಗೊಂಡಿದ್ದು, ಸ್ಥಳೀಯ ಕುಶಲಕರ್ಮಿಗಳಿಗೆ ವೇದಿಕೆಯನ್ನು ಒದಗಿಸುತ್ತದೆ ಮತ್ತು ಪ್ರಾದೇಶಿಕ ಸಂಸ್ಕೃತಿ ಹಾಗು ಉದ್ಯಮವನ್ನು ಉತ್ತೇಜಿಸುತ್ತದೆ.

ಸಿಲ್ಚಾರ್‌ನಲ್ಲಿ ಪ್ರಧಾನಮಂತ್ರಿ

ಈಶಾನ್ಯ ಭಾರತದ ಮೊದಲ ಪ್ರವೇಶ-ನಿಯಂತ್ರಿತ ಗ್ರೀನ್‌ಫೀಲ್ಡ್ ನಾಲ್ಕು-ಪಥದ ಹೈ-ಸ್ಪೀಡ್ ಕಾರಿಡಾರ್ ಆಗಿರುವ ಶಿಲ್ಲಾಂಗ್-ಸಿಲ್ಚಾರ್ ಕಾರಿಡಾರ್‌ನ ಭೂಮಿ ಪೂಜೆಯನ್ನು ಪ್ರಧಾನಮಂತ್ರಿ ನೆರವೇರಿಸಲಿದ್ದಾರೆ. ಸುಮಾರು ₹22,860 ಕೋಟಿ ಹೂಡಿಕೆಯೊಂದಿಗೆ 166 ಕಿಮೀ ಉದ್ದದ ಕಾರಿಡಾರ್ ಮೇಘಾಲಯ ಮತ್ತು ಅಸ್ಸಾಂ ನಡುವಿನ ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಈ ಯೋಜನೆಯು ಗುವಾಹಟಿ ಮತ್ತು ಸಿಲ್ಚಾರ್ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ ಮತ್ತು ಪ್ರಯಾಣದ ಸಮಯವನ್ನು 8.5 ಗಂಟೆಗಳಿಂದ ಸುಮಾರು 5 ಗಂಟೆಗಳವರೆಗೆ ಕಡಿತಗೊಳಿಸುತ್ತದೆ, ಈ ಪ್ರದೇಶದಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಗಡಿಯಾಚೆಗಿನ ವ್ಯಾಪಾರವನ್ನು ಹೆಚ್ಚಿಸುತ್ತದೆ.

ಪ್ರಧಾನಮಂತ್ರಿಯವರು ರಾಷ್ಟ್ರೀಯ ಹೆದ್ದಾರಿ-306 ರಲ್ಲಿ ಕ್ಯಾಪಿಟಲ್ ಪಾಯಿಂಟ್ ಬಳಿಯ ಟ್ರಂಕ್ ರಸ್ತೆಯಿಂದ ಸಿಲ್ಚಾರ್‌ನ ರಂಗೀರ್ಖಾರಿ ಪಾಯಿಂಟ್‌ವರೆಗೆ (ಹಂತ-I) ಎತ್ತರದ ಕಾರಿಡಾರ್‌ಗೆ ಭೂಮಿ ಪೂಜೆಯನ್ನು ನೆರವೇರಿಸಲಿದ್ದಾರೆ. ಈ ಯೋಜನೆಯು ಸಿಲ್ಚಾರ್‌ನ ಅತ್ಯಂತ ಜನನಿಬಿಡ ರಸ್ತೆಗಳಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡುತ್ತದೆ, ಮಿಜೋರಾಂ, ತ್ರಿಪುರ ಮತ್ತು ಮಣಿಪುರದಂತಹ ನೆರೆಯ ರಾಜ್ಯಗಳೊಂದಿಗೆ ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಬರಾಕ್ ಕಣಿವೆಯ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ.

ಇದಲ್ಲದೆ, ಕರೀಮ್‌ಗಂಜ್ ಜಿಲ್ಲೆಯ ಪಥರ್‌ಕಂಡಿಯಲ್ಲಿ ಹೊಸ ಕೃಷಿ ಕಾಲೇಜಿಗೆ ಪ್ರಧಾನಮಂತ್ರಿ ಯವರು ಅಡಿಪಾಯ ಹಾಕಲಿದ್ದಾರೆ. ಈ ಸಂಸ್ಥೆಯು ಅಸ್ಸಾಂನಲ್ಲಿ ಕೃಷಿ ಶಿಕ್ಷಣ ಮತ್ತು ಸಂಶೋಧನೆಯ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಬರಾಕ್ ಕಣಿವೆ ಹಾಗು ನೆರೆಯ ಪ್ರದೇಶಗಳ ವಿದ್ಯಾರ್ಥಿಗಳಿಗೆ ಮನೆಗೆ ಹತ್ತಿರದಲ್ಲಿ ಉತ್ತಮ ಗುಣಮಟ್ಟದ ಕೃಷಿ ಶಿಕ್ಷಣವನ್ನು ಪಡೆಯಲು ಅವಕಾಶ ನೀಡುತ್ತದೆ.

 

*****


(ಪ್ರಕಟಣೆ ಐ.ಡಿ.: 2239426) ವಿಸಿಟರ್ ಕೌಂಟರ್ : 3
ಪ್ರಕಟಣೆಯನ್ನು ಇದರಲ್ಲಿ ಓದಿ: Malayalam , Assamese , English , Urdu , Marathi , हिन्दी , Bengali , Manipuri , Punjabi , Gujarati , Tamil , Telugu