ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕೋಟಾ ವಿಮಾನ ನಿಲ್ದಾಣ ನಿರ್ಮಾಣದ ಶಿಲಾನ್ಯಾಸ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ​​​​​​​ ವೀಡಿಯೊ ಕಾನ್ಫರೆನ್ಸ್ ಭಾಷಣ

ಪ್ರಕಟಣಾ ದಿನಾಂಕ: 07 MAR 2026 3:58PM by PIB Bengaluru

ಕೋಟಾ ಮತ್ತು ಇಡೀ ಹಡೋತಿ ಪ್ರದೇಶದ ನನ್ನ ಪ್ರೀತಿಯ ಒಡನಾಡಿಗಳೆ, ಮತ್ತೊಮ್ಮೆ ನಮಸ್ಕಾರ.

ಕಳೆದ ವಾರವಷ್ಟೇ ನನಗೆ ರಾಜಸ್ಥಾನಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕಿತು. ಪವಿತ್ರ ಭೂಮಿ ಅಜ್ಮೀರ್‌ನಿಂದ, ಸಾವಿರಾರು ಕೋಟಿ ರೂಪಾಯಿ ಮೊತ್ತದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಿಲಾನ್ಯಾಸ ನೆರವೇರಿಸಿದ್ದೇವೆ. ಅದೇ ಕಾರ್ಯಕ್ರಮದಲ್ಲಿ, ರಾಜಸ್ಥಾನದ 21,000ಕ್ಕೂ ಹೆಚ್ಚು ಯುವಕರಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಲಾಯಿತು. ಅಜ್ಮೀರ್ ಭೇಟಿಯ ಕೆಲವೇ ದಿನಗಳ ನಂತರ, ಇಂದು ಕೋಟಾಗೆ ಸಂಪರ್ಕ ಹೊಂದಿದ ಈ ಪ್ರಮುಖ ವಿಮಾನ ನಿಲ್ದಾಣ ಯೋಜನೆಯನ್ನು ಪ್ರಾರಂಭಿಸುವ ಸೌಭಾಗ್ಯ ನನಗೆ ಸಿಕ್ಕಿದೆ. ಒಂದೇ ವಾರದೊಳಗೆ, ರಾಜಸ್ಥಾನದಲ್ಲಿನ ಈ 2 ಪ್ರಮುಖ ಅಭಿವೃದ್ಧಿ ಕಾರ್ಯಕ್ರಮಗಳು ಪ್ರಬಲ ಸಂದೇಶವನ್ನು ರವಾನಿಸುತ್ತವೆ. ರಾಜಸ್ಥಾನ ಇಂದು ಎಷ್ಟು ವೇಗವಾಗಿ ಪ್ರಗತಿ ಸಾಧಿಸುತ್ತಿದೆ ಎಂಬುದನ್ನು ಅವು ತೋರಿಸುತ್ತವೆ. ಅದು ಮೂಲಸೌಕರ್ಯವಾಗಿರಲಿ, ಯುವಕರಿಗೆ ಉದ್ಯೋಗಾವಕಾಶಗಳಾಗಲಿ, ರೈತರು ಮತ್ತು ಮಹಿಳೆಯರ ಯೋಜನೆಗಳಾಗಲಿ ಅಥವಾ ಪ್ರತಿಯೊಂದು ವಲಯದ ಉಪಕ್ರಮಗಳು ರಾಜಸ್ಥಾನದಾದ್ಯಂತ ಹೆಚ್ಚಿನ ವೇಗದಲ್ಲಿ ನಡೆಯುತ್ತಿವೆ.

ಸ್ನೇಹಿತರೆ,

ಇಂದು ಕೋಟಾ, ಬುಂಡಿ, ಬರಾನ್, ಝಲಾವರ್ ಮತ್ತು ಇಡೀ ಹಡೋಟಿ ಪ್ರದೇಶಕ್ಕೆ ಹೊಸ ಭರವಸೆ ಮತ್ತು ಸಾಧನೆಯ ದಿನ. ಸುಮಾರು 1,500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಈ ಆಧುನಿಕ ವಿಮಾನ ನಿಲ್ದಾಣವು ಮುಂಬರುವ ವರ್ಷಗಳಲ್ಲಿ ಇಡೀ ಪ್ರದೇಶದ ಅಭಿವೃದ್ಧಿಯನ್ನು ವೇಗಗೊಳಿಸುತ್ತದೆ. ಈ ಪ್ರಮುಖ ವಿಮಾನ ನಿಲ್ದಾಣ ಯೋಜನೆಯ ಶಿಲಾನ್ಯಾಸ ಸಂದರ್ಭದಲ್ಲಿ ಕೋಟಾ ಮತ್ತು ಹಡೋಟಿಯ ಜನರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೆ,

2023 ನವೆಂಬರ್ ನಲ್ಲಿ ನಾನು ಕೋಟಾಗೆ ಬಂದಾಗ, ಇಲ್ಲಿನ ಜನರಿಗೆ ನೀಡಿದ್ದ ಭರವಸೆಯನ್ನು ನಾನೀಗ ನೆನಪಿಸಿಕೊಳ್ಳುತ್ತೇನೆ. ವಿಮಾನ ನಿಲ್ದಾಣವು ಕೇವಲ ಕನಸಾಗಿ ಉಳಿಯುವುದಿಲ್ಲ, ಆದರೆ ಅದನ್ನು ವಾಸ್ತವಕ್ಕೆ ತರಲಾಗುವುದು ಎಂದು ನಾನು ಹೇಳಿದ್ದೆ. ಇಂದು ಕೋಟಾ ವಿಮಾನ ನಿಲ್ದಾಣ ನಿರ್ಮಾಣ ಪ್ರಾರಂಭವಾಗುವ ಕ್ಷಣ ಬಂದಿದೆ ಎಂಬುದರಿಂದ ನನಗೆ ಸಂತೋಷವಾಗಿದೆ. ಇಲ್ಲಿಯವರೆಗೆ, ಕೋಟಾದ ಜನರು ವಿಮಾನಗಳನ್ನು ಹಿಡಿಯಲು ಜೈಪುರ ಅಥವಾ ಜೋಧ್‌ಪುರಕ್ಕೆ ಪ್ರಯಾಣಿಸಬೇಕಾಗಿತ್ತು. ಇದು ಬಹಳಷ್ಟು ಸಮಯ ತೆಗೆದುಕೊಂಡು ಅನನುಕೂಲತೆ ಉಂಟುಮಾಡುತ್ತಿದೆ. ಆ ಪರಿಸ್ಥಿತಿ ಈಗ ಬದಲಾಗಲಿದೆ. ಈ ವಿಮಾನ ನಿಲ್ದಾಣವು ಕಾರ್ಯರೂಪಕ್ಕೆ ಬಂದ ನಂತರ, ಪ್ರಯಾಣ ಸುಲಭವಾಗುತ್ತದೆ. ಕೋಟಾ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವ್ಯಾಪಾರವು ವೇಗವಾಗಿ ಬೆಳೆಯುತ್ತದೆ.

ಸ್ನೇಹಿತರೆ,

ಕೋಟಾ ಶಿಕ್ಷಣದ ಕೇಂದ್ರ ಮಾತ್ರವಲ್ಲದೆ, ಪ್ರಮುಖ ಇಂಧನ ಕೇಂದ್ರವೂ ಆಗಿದೆ. ಪರಮಾಣು, ಕಲ್ಲಿದ್ದಲು ಆಧಾರಿತ, ಅನಿಲ ಮತ್ತು ನೀರಿನಿಂದ ಬಹುತೇಕ ಎಲ್ಲಾ ಮೂಲಗಳಿಂದ ವಿದ್ಯುತ್ ಉತ್ಪಾದಿಸುವ ವಿಶಿಷ್ಟ ಪ್ರದೇಶ ಇದು. ಹಡೋತಿಯ ಭೂಮಿ ತನ್ನ ಪರಂಪರೆಗೆ ಸಮಾನವಾಗಿ ಪ್ರಸಿದ್ಧವಾಗಿದೆ. ಕೋಟಾ ಕಚೋರಿಯ ರುಚಿ, ಕೋಟಾ ಡೋರಿಯಾ ಸೀರೆಗಳ ಸೊಬಗು ಮತ್ತು ಕೋಟಾ ಕಲ್ಲು ಮತ್ತು ಮರಳುಗಲ್ಲಿನ ಹೊಳಪು ವಿಶ್ವಾದ್ಯಂತ ಮನ್ನಣೆ ಗಳಿಸಿದೆ. ಇಲ್ಲಿಂದ ಬರುವ ಕೊತ್ತಂಬರಿ, ಬುಂಡಿಯ ಬಾಸ್ಮತಿ ಯ ಸುವಾಸನೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳನ್ನು ತಲುಪುತ್ತದೆ. ಈ ಪ್ರದೇಶವು ತನ್ನ ಕಠಿಣ ಪರಿಶ್ರಮ, ಉತ್ಪಾದನೆ ಮತ್ತು ಅಪಾರ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಈಗ, ಕೋಟಾದ ಈ ಹೊಸ ವಿಮಾನ ನಿಲ್ದಾಣವು ಈ ಎಲ್ಲಾ ಸಾಧ್ಯತೆಗಳನ್ನು ಹಲವು ಪಟ್ಟು ಹೆಚ್ಚಿಸುತ್ತದೆ.

ಸ್ನೇಹಿತರೆ,

ಕೋಟಾ ಮತ್ತು ಹಡೋಟಿಯ ಭೂಮಿ ಉದ್ಯಮ ಮತ್ತು ನಂಬಿಕೆಯ ಉತ್ತಮ ಕೇಂದ್ರವಾಗಿದೆ. ಶತಮಾನಗಳಿಂದ ದೇಶ ಮತ್ತು ವಿಶ್ವಾದ್ಯಂತದ ಭಕ್ತರು ಪವಿತ್ರ ಮಥುರಾಧೀಶ್ ಜಿ ಪೀಠ, ಕೇಶವ್ ರಾಯ್ ಪಠಾಣ್ ತೀರ್ಥಯಾತ್ರೆ, ಖಾಡೆ ಗಣೇಶ್ ಜಿ ಮಹಾರಾಜ್ ಮತ್ತು ಗೋದಾವರಿ ಬಾಲಾಜಿ ಧಾಮ್‌ಗೆ ಭೇಟಿ ನೀಡಲು ಇಲ್ಲಿಗೆ ಬರುತ್ತಾರೆ. ಗರಾಡಿಯಾ ಮಹಾದೇವ್‌ನಿಂದ ಚಂಬಲ್‌ನ ನೋಟ ಎಲ್ಲರನ್ನೂ ಮಂತ್ರಮುಗ್ಧಗೊಳಿಸುತ್ತದೆ. ಮುಕುಂದ್ರ ಬೆಟ್ಟಗಳು ಮತ್ತು ರಾಮಗಢ ವಿಶ್ಧಾರಿಯಂತಹ ವನ್ಯಜೀವಿ ಅಭಯಾರಣ್ಯಗಳು ಈ ಪ್ರದೇಶವನ್ನು ವನ್ಯಜೀವಿ ಪ್ರವಾಸೋದ್ಯಮದ ಪ್ರಮುಖ ಕೇಂದ್ರವನ್ನಾಗಿ ಮಾಡುತ್ತವೆ. ಹೆಚ್ಚಿದ ವೈಮಾನಿಕ ಸಂಪರ್ಕದೊಂದಿಗೆ, ದೇಶ ಮತ್ತು ವಿಶ್ವಾದ್ಯಂತದ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಇದು ಯುವಕರು, ವ್ಯಾಪಾರಿಗಳು ಮತ್ತು ಸ್ಥಳೀಯ ಆರ್ಥಿಕತೆಗೆ ನೇರವಾಗಿ ಪ್ರಯೋಜನ ನೀಡುತ್ತದೆ.

ಸ್ನೇಹಿತರೆ,

ಕೋಟಾ ಈಗಾಗಲೇ ಸಂಪರ್ಕದಲ್ಲಿ ವೇಗವಾಗಿ ಮುಂದುವರಿಯುತ್ತಿದೆ. ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ, ಕೋಟಾದ 2 ಪ್ರಮುಖ ರೈಲು ನಿಲ್ದಾಣಗಳನ್ನು ಆಧುನಿಕ ಸೌಲಭ್ಯಗಳೊಂದಿಗೆ ಸಜ್ಜುಗೊಳಿಸಲಾಗುತ್ತಿದೆ. ಕೋಟಾ ಮತ್ತು ಬುಂಡಿ ಮೂಲಕ ಹಾದುಹೋಗುವ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಇಡೀ ಪ್ರದೇಶಕ್ಕೆ ಅಭಿವೃದ್ಧಿಯ ಹೊಸ ಬಾಗಿಲುಗಳನ್ನು ತೆರೆಯುತ್ತಿದೆ. ಈಗ ದೆಹಲಿ, ವಡೋದರಾ ಮತ್ತು ಮುಂಬೈನಂತಹ ದೊಡ್ಡ ನಗರಗಳು ಕೆಲವೇ ತಾಸುಗಳ ಪ್ರಯಾಣ ದೂರದಲ್ಲಿವೆ. ಉತ್ತಮ ರಸ್ತೆ ಮತ್ತು ರೈಲು ಸಂಪರ್ಕದೊಂದಿಗೆ, ಇಲ್ಲಿ ಹೊಸ ಕೈಗಾರಿಕೆಗಳು ಸ್ಥಾಪನೆಯಾಗುತ್ತಿವೆ. ವಿಶೇಷವಾಗಿ ಕೃಷಿ ಆಧಾರಿತ ಕೈಗಾರಿಕೆಗಳಿಗೆ ಈ ಪ್ರದೇಶವು ಪ್ರಮುಖ ಕೇಂದ್ರವಾಗಲಿದೆ. ರೈಲು ಮತ್ತು ರಸ್ತೆಯ ನಂತರ, ವಾಯು ಸಂಪರ್ಕದ ಈ ಹೊಸ ಅಧ್ಯಾಯವು ಕೋಟಾದ ಅಭಿವೃದ್ಧಿಯನ್ನು ಮತ್ತಷ್ಟು ವೇಗಗೊಳಿಸುತ್ತದೆ. ಕೋಟಾ ವಿಮಾನ ನಿಲ್ದಾಣವು ಇಡೀ ಹಡೋಟಿ ಪ್ರದೇಶ ಮತ್ತು ಹತ್ತಿರದ ಜಿಲ್ಲೆಗಳಿಗೆ ಪ್ರಗತಿಯ ಹೊಸ ಅವಕಾಶಗಳನ್ನು ತರುತ್ತದೆ.

ಸ್ನೇಹಿತರೆ,

ಈ ಮಹತ್ವದ ಯೋಜನೆಗಾಗಿ ಕೋಟಾದ ಸಂಸತ್ ಸದಸ್ಯ ಶ್ರೀ ಓಂ ಪ್ರಕಾಶ್ ಬಿರ್ಲಾ ಜಿ ಅವರ ನಿರಂತರ ಪ್ರಯತ್ನಗಳನ್ನು ನಾನು ಶ್ಲಾಘಿಸಲು ಬಯಸುತ್ತೇನೆ. ಕೋಟಾದ ಜನರ ಜೀವನ ಸುಧಾರಿಸುವುದು ಮತ್ತು ಅವರಿಗೆ ಹೊಸ ಅವಕಾಶಗಳನ್ನು ಒದಗಿಸುವುದು ಅವರ ನಿರಂತರ ಪ್ರಯತ್ನವಾಗಿದೆ. ಅದು ವಿಮಾನ ನಿಲ್ದಾಣವಾಗಲಿ, ಐಐಐಟಿಯ ಹೊಸ ಕ್ಯಾಂಪಸ್ ಆಗಿರಲಿ ಅಥವಾ ರಸ್ತೆಗಳ ವಿಸ್ತರಣೆಯಾಗಲಿ, ಅವರು ಕೋಟಾದ ಅಭಿವೃದ್ಧಿಗಾಗಿ ಅವಿಶ್ರಾಂತವಾಗಿ ಶ್ರಮಿಸುತ್ತಿದ್ದಾರೆ. ಅವರ ಪ್ರಯತ್ನಗಳಿಂದಾಗಿ ಕೋಟಾ ಮತ್ತು ಇಡೀ ಪ್ರದೇಶವು ಬೆಳವಣಿಗೆಯಲ್ಲಿ ಹೊಸ ಆವೇಗ ಕಾಣುತ್ತಿದೆ.

ಸ್ನೇಹಿತರೆ,

ಓಂ ಬಿರ್ಲಾ ಅವರು ಸಂಸತ್ತಿನ ಅತ್ಯುತ್ತಮ ಸದಸ್ಯರಷ್ಟೇ ಅಲ್ಲ, ಲೋಕಸಭೆಯ ಮರೆಯಲಾಗದ ಸ್ಪೀಕರ್ ಆಗಿದ್ದಾರೆ. ಅವರು ಸಂವಿಧಾನಕ್ಕೆ ಸಂಪೂರ್ಣವಾಗಿ ಸಮರ್ಪಿತರಾಗಿದ್ದು, ಸಂಸದೀಯ ಸಂಪ್ರದಾಯಗಳಿಗೆ ಆಳವಾಗಿ ಬದ್ಧರಾಗಿದ್ದಾರೆ. ಇಂದು ಅವರು ಯಾವುದೇ ಪಕ್ಷ ಮತ್ತು ವಿಪಕ್ಷವನ್ನು ಮೀರಿ ನಿಲ್ಲುತ್ತಾರೆ, ತಟಸ್ಥತೆಯನ್ನು ಸಾಕಾರಗೊಳಿಸುತ್ತಾರೆ. ನಾನು ಅವರನ್ನು ಸದನದಲ್ಲಿ ನೋಡಿದಾಗ, ಬಹುಶಃ ಶಿಕ್ಷಣದ ನಗರದಿಂದ ಬಂದಿರುವುದು ಅವರ ಸ್ಪೀಕರ್ ಪಾತ್ರದ ಮೇಲೆ ಪ್ರಭಾವ ಬೀರಿದೆ ಎಂದು ನನಗೆ ಆಗಾಗ್ಗೆ ಅನಿಸುತ್ತದೆ. ಅವರು ಕುಟುಂಬದ ಉತ್ತಮ ಮುಖ್ಯಸ್ಥರಂತೆ ಸದನವನ್ನು ಮುನ್ನಡೆಸುತ್ತಾರೆ, ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುತ್ತಾರೆ. ಅವರು ಸಂಸತ್ತಿನ ಎಲ್ಲಾ ಸದಸ್ಯರ ಭಾವನೆಗಳು ಮತ್ತು ಮನವಿಗಳನ್ನು ಗೌರವಿಸುತ್ತಾರೆ. ಅವರು ಸ್ವಾಭಾವಿಕವಾಗಿ ಸಂಸದರನ್ನು ಹೆಚ್ಚು ಗೌರವಿಸುವ ಸ್ಪೀಕರ್. ಕೆಲವು ದುರಹಂಕಾರಿ ಮತ್ತು ವಿಚ್ಛಿದ್ರಕಾರಕ ವ್ಯಕ್ತಿಗಳು ಸಾಂದರ್ಭಿಕವಾಗಿ ಗೊಂದಲಗಳನ್ನು ಸೃಷ್ಟಿಸಿದಾಗಲೂ, ಅವರು ಎಲ್ಲವನ್ನೂ ಘನತೆಯಿಂದ ನಿರ್ವಹಿಸುತ್ತಾರೆ, ಯಾರನ್ನೂ ಎಂದಿಗೂ ಅವಮಾನಿಸುವುದಿಲ್ಲ, ಕಠಿಣ ಮಾತುಗಳನ್ನು ತಾಳ್ಮೆಯಿಂದ ಸಹಿಸಿಕೊಳ್ಳುತ್ತಾರೆ, ಯಾವಾಗಲೂ ನಗು ಮುಖ ಹೊಂದಿರುತ್ತಾರೆ. ಬಹುಶಃ ಅವರು ಸದನದಲ್ಲಿ ಸಾರ್ವತ್ರಿಕವಾಗಿ ಮೆಚ್ಚುಗೆ ಪಡೆಯಲು ಇದು ಒಂದು ಕಾರಣವಾಗಿರಬಹುದು.

ಸ್ನೇಹಿತರೆ,

ಸಂಪರ್ಕ ಹೆಚ್ಚಾದಾಗ, ಅಭಿವೃದ್ಧಿಯ ವೇಗವೂ ಹೆಚ್ಚಾಗುತ್ತದೆ. ಕಳೆದ 11 ವರ್ಷಗಳಲ್ಲಿ, ದೇಶದ ವಿವಿಧ ಭಾಗಗಳಲ್ಲಿ ನಿರ್ಮಿಸಲಾದ ಹೊಸ ವಿಮಾನ ನಿಲ್ದಾಣಗಳು ಬೆಳವಣಿಗೆಗೆ ಹೊಸ ಆವೇಗ ನೀಡಿವೆ. 2014ಕ್ಕಿಂತ ಮೊದಲು ದೇಶದಲ್ಲಿ ಸುಮಾರು 70 ವಿಮಾನ ನಿಲ್ದಾಣಗಳಿದ್ದವು. ಇಂದು ಆ ಸಂಖ್ಯೆ 160ಕ್ಕಿಂತ ಹೆಚ್ಚಾಗಿದೆ. ಈ ಹೊಸ ವಿಮಾನ ನಿಲ್ದಾಣಗಳು ವಿಮಾನ ಪ್ರಯಾಣವನ್ನು ಸುಲಭಗೊಳಿಸಿವೆ, ಪ್ರವಾಸೋದ್ಯಮವನ್ನು ಹೆಚ್ಚಿಸಿವೆ, ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿವೆ, ಪ್ರಾದೇಶಿಕ ಅಭಿವೃದ್ಧಿಯನ್ನು ವೇಗಗೊಳಿಸಿವೆ. ದೆಹಲಿಯ ಸುತ್ತಲೂ ಸಹ ಹಿಸಾರ್, ಹಿಂಡನ್, ಜೆವಾರ್ ಸೇರಿದಂತೆ ಹಲವಾರು ಹೊಸ ವಿಮಾನ ನಿಲ್ದಾಣಗಳು ಬಂದಿವೆ. ಹೊಸ ವಿಮಾನ ನಿಲ್ದಾಣಗಳು ಮತ್ತು ಟರ್ಮಿನಲ್‌ಗಳನ್ನು ನಿರ್ಮಿಸಿದಾಗ, ಹೊಸ ಉದ್ಯಮಗಳು ಮತ್ತು ಕಂಪನಿಗಳು ಸಣ್ಣ ನಗರಗಳನ್ನು ಸಹ ತಲುಪುತ್ತವೆ. ಕೋಟಾದ ಹೊಸ ವಿಮಾನ ನಿಲ್ದಾಣವು ಮುಂಬರುವ ದಿನಗಳಲ್ಲಿ ಈ ಪ್ರದೇಶದ ಅಭಿವೃದ್ಧಿಗೆ ಹೊಸ ಆವೇಗ ನೀಡುತ್ತದೆ ಎಂಬ ವಿಶ್ವಾಸ ನನಗಿದೆ.

ಸ್ನೇಹಿತರೆ,

ರಾಜ್ಯ ಮತ್ತು ಕೇಂದ್ರ ಸರ್ಕಾರ ಒಟ್ಟಾಗಿ ಕೆಲಸ ಮಾಡಿದಾಗ, ಉದ್ದೇಶಗಳು ಸ್ಪಷ್ಟವಾದಾಗ ಮತ್ತು ನಿರ್ಣಯವು ಬಲವಾಗಿದ್ದಾಗ, ಅಭಿವೃದ್ಧಿಯ ವೇಗವು ಹೆಚ್ಚಾಗುತ್ತದೆ. ಇಂದು ರಾಜಸ್ಥಾನದಲ್ಲಿ ನಿಖರವಾಗಿ ಅದೇ ಆಗುತ್ತಿದೆ. ಅಭಿವೃದ್ಧಿ ಹೊಂದಿದ ರಾಜಸ್ಥಾನದ ಈ ಬಲವಾದ ಅಡಿಪಾಯವು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪಕ್ಕೆ ಹೆಚ್ಚಿನ ಶಕ್ತಿ ನೀಡುತ್ತಿದೆ. ಒಟ್ಟಾಗಿ ನಾವು ಸಮೃದ್ಧ, ಬಲವಾದ ಮತ್ತು ಅವಕಾಶಗಳಿಂದ ತುಂಬಿರುವ ರಾಜಸ್ಥಾನವನ್ನು ನಿರ್ಮಿಸುವಲ್ಲಿ ಯಶಸ್ವಿಯಾಗುತ್ತೇವೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ಈ ನಂಬಿಕೆಯೊಂದಿಗೆ, ಈ ಶಿಲಾನ್ಯಾಸ ಸಮಾರಂಭದಲ್ಲಿ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ತುಂಬು ಧನ್ಯವಾದಗಳು. ವಂದೇ ಮಾತರಂ.

 

*****

 


(ಪ್ರಕಟಣೆ ಐ.ಡಿ.: 2236894) ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Manipuri , Assamese , Bengali , Punjabi , Gujarati , Odia , Telugu