ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವಿಶ್ವ ವನ್ಯಜೀವಿ ದಿನದಂದು ವನ್ಯಜೀವಿ ಸಂರಕ್ಷಣೆಗೆ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿ; ಸಂಸ್ಕೃತ ಸುಭಾಷಿತ ಹಂಚಿಕೊಂಡರು

ಪ್ರಕಟಣಾ ದಿನಾಂಕ: 03 MAR 2026 8:56AM by PIB Bengaluru

ವಿಶ್ವ ವನ್ಯಜೀವಿ ದಿನವು ನಮ್ಮ ಭೂಮಿಯನ್ನು ಸಮೃದ್ಧಗೊಳಿಸುವ ಮತ್ತು ನಮ್ಮ ಪರಿಸರ ವ್ಯವಸ್ಥೆಗಳನ್ನು ಉಳಿಸುವ ಅದ್ಭುತ ಪ್ರಾಣಿ ವೈವಿಧ್ಯತೆಯನ್ನು ಆಚರಿಸುವ ದಿನವಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು. ವನ್ಯಜೀವಿ ರಕ್ಷಣೆಗಾಗಿ ಶ್ರಮಿಸುತ್ತಿರುವ ಪ್ರತಿಯೊಬ್ಬರನ್ನು ಅಭಿನಂದಿಸಲು ಮತ್ತು ವನ್ಯಜೀವಿಗಳು ನಿರಂತರವಾಗಿ ವೃದ್ಧಿಯಾಗಲು ಪೂರಕವಾದ ಸಂರಕ್ಷಣೆ, ಸುಸ್ಥಿರ ಪದ್ಧತಿಗಳು ಹಾಗೂ ವಾಸಸ್ಥಾನಗಳ ರಕ್ಷಣೆಯ ಬಗ್ಗೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸಲು ಇದು ಸುಸಮಯವಾಗಿದೆ ಎಂದು ಅವರು ತಿಳಿಸಿದರು.

ವಿಶ್ವದ ಕೆಲವು ಅತ್ಯಂತ ಅಸಾಧಾರಣ ವನ್ಯಜೀವಿಗಳಿಗೆ ಭಾರತವು ನೆಲೆಯಾಗಿರುವುದನ್ನು ನಾವು ಹೆಮ್ಮೆಯಿಂದ ಸ್ಮರಿಸುತ್ತೇವೆ ಎಂದು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. ಭಾರತವು ವಿಶ್ವದ ಶೇ. 70ಕ್ಕೂ ಹೆಚ್ಚು ಹುಲಿಗಳ ಸಂಖ್ಯೆಗೆ ನೆಲೆಯಾಗಿದೆ, ಅತಿ ಹೆಚ್ಚು ಸಂಖ್ಯೆಯ ಒಂದು ಕೊಂಬಿನ ಖಡ್ಗಮೃಗಗಳನ್ನು ಮತ್ತು ಗರಿಷ್ಠ ಸಂಖ್ಯೆಯ ಏಷ್ಯನ್ ಆನೆಗಳನ್ನು ಹೊಂದಿದೆ ಎಂದು ಅವರು ಹೇಳಿದರು. ಅಲ್ಲದೆ, ಭವ್ಯವಾದ ಏಷ್ಯನ್ ಸಿಂಹಗಳು ವಾಸಿಸುವ ವಿಶ್ವದ ಏಕೈಕ ಸ್ಥಳ ಭಾರತವಾಗಿದೆ ಎಂದು ಅವರು ತಿಳಿಸಿದರು.

ವನ್ಯಜೀವಿಗಳ ಸಂರಕ್ಷಣೆಗಾಗಿ ಸರ್ಕಾರವು ಅನೇಕ ಪ್ರಯತ್ನಗಳನ್ನು ಕೈಗೊಂಡಿದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಇತರ ರಾಷ್ಟ್ರಗಳೊಂದಿಗೆ ಉತ್ತಮ ಸಂರಕ್ಷಣಾ ಪದ್ಧತಿಗಳನ್ನು ಹಂಚಿಕೊಳ್ಳಲು ಒಂದು ವಿಶಿಷ್ಟ ವೇದಿಕೆಯಾಗಿ 'ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್' (International Big Cat Alliance) ಅನ್ನು ಸ್ಥಾಪಿಸಿರುವುದು ಇವುಗಳಲ್ಲಿ ಸೇರಿದೆ. ಗ್ರೇಟ್ ಇಂಡಿಯನ್ ಬಸ್ಟರ್ಡ್, ಘರಿಯಾಲ್ ಮತ್ತು ಕರಡಿಗಳನ್ನು ರಕ್ಷಿಸುವ ಉದ್ದೇಶದ ಉಪಕ್ರಮಗಳು ಹಾಗೂ ಚೀತಾಗಳ ಸ್ಥಳಾಂತರವು ಇತರ ಪ್ರಮುಖ ಪ್ರಯತ್ನಗಳಾಗಿವೆ.

ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ನಮ್ಮ ಶಾಸ್ತ್ರಗಳು ಎಲ್ಲಾ ಜೀವಿಗಳ ಕಲ್ಯಾಣಕ್ಕಾಗಿ ಪ್ರಾರ್ಥಿಸುತ್ತವೆ ಮತ್ತು ಸಂರಕ್ಷಣೆಯ ಜೊತೆಗೆ ವನ್ಯಜೀವಿಗಳ ಬಗ್ಗೆ ಸಂವೇದನಾಶೀಲತೆಯನ್ನು ಪ್ರೇರೇಪಿಸುತ್ತವೆ ಎಂದು ಹೇಳಿದರು. ಅವರು ಈ ಸಂದರ್ಭದಲ್ಲಿ ಸಂಸ್ಕೃತದ ಸುಭಾಷಿತವೊಂದನ್ನು ಹಂಚಿಕೊಂಡರು:

“निर्वनो वध्यते व्याघ्रो निर्व्याघ्रं छिद्यते वनम्। तस्माद् व्याघ्रो वनं रक्षेद् वनं व्याघ्रं च पालयेत्॥”

ಈ ಸುಭಾಷಿತವು ಕಾಡುಗಳಿಲ್ಲದೆ ಹುಲಿಗಳು ನಶಿಸುತ್ತವೆ ಮತ್ತು ಹುಲಿಗಳಿಲ್ಲದೆ ಕಾಡುಗಳು ನಾಶವಾಗುತ್ತವೆ ಎಂಬ ಅರ್ಥವನ್ನು ನೀಡುತ್ತದೆ. ಆದ್ದರಿಂದ, ಹುಲಿಯು ಕಾಡನ್ನು ರಕ್ಷಿಸುತ್ತದೆ ಮತ್ತು ಕಾಡು ಹುಲಿಯನ್ನು ರಕ್ಷಿಸುತ್ತದೆ; ಇದು ಪ್ರಕೃತಿಯ ಆಳವಾದ ಪರಸ್ಪರ ಅವಲಂಬನೆಯನ್ನು ಎತ್ತಿ ತೋರಿಸುತ್ತದೆ.

ಎಕ್ಸ್ (X) ಜಾಲತಾಣದ ಸರಣಿ ಪೋಸ್ಟ್ ಗಳಲ್ಲಿ ಶ್ರೀ ಮೋದಿಯವರು ಹೀಗೆ ಹೇಳಿದ್ದಾರೆ: 

“ವಿಶ್ವ ವನ್ಯಜೀವಿ ದಿನವು ನಮ್ಮ ಗ್ರಹವನ್ನು ಸಮೃದ್ಧಗೊಳಿಸುವ ಮತ್ತು ನಮ್ಮ ಪರಿಸರ ವ್ಯವಸ್ಥೆಗಳನ್ನು ಪೋಷಿಸುವ ಅದ್ಭುತ ಪ್ರಾಣಿ ಸಂಕುಲದ ವೈವಿಧ್ಯತೆಯನ್ನು ಆಚರಿಸುವ ದಿನವಾಗಿದೆ. ವನ್ಯಜೀವಿ ರಕ್ಷಣೆಗಾಗಿ ಶ್ರಮಿಸುತ್ತಿರುವ ಪ್ರತಿಯೊಬ್ಬರನ್ನೂ ಗೌರವಿಸಲು ಇದು ಒಂದು ದಿನವಾಗಿದೆ. ನಮ್ಮ ವನ್ಯಜೀವಿಗಳು ನಿರಂತರವಾಗಿ ವೃದ್ಧಿಯಾಗಲು ಪೂರಕವಾದ ಸಂರಕ್ಷಣೆ, ಸುಸ್ಥಿರ ಅಭ್ಯಾಸಗಳು ಮತ್ತು ಆವಾಸಸ್ಥಾನಗಳ ರಕ್ಷಣೆಯತ್ತ ನಾವು ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ.”

“ವಿಶ್ವದ ಕೆಲವು ಅತ್ಯಂತ ಅಸಾಧಾರಣ ವನ್ಯಜೀವಿಗಳಿಗೆ ಭಾರತವು ನೆಲೆಯಾಗಿರುವುದನ್ನು ನಾವು ಹೆಮ್ಮೆಯಿಂದ ಸ್ಮರಿಸುತ್ತೇವೆ. ನಾವು ವಿಶ್ವದ ಶೇ. 70ಕ್ಕೂ ಹೆಚ್ಚು ಹುಲಿಗಳ ಸಂಖ್ಯೆಗೆ ನೆಲೆಯಾಗಿದ್ದೇವೆ. ನಮ್ಮಲ್ಲಿ ಅತಿ ಹೆಚ್ಚು ಸಂಖ್ಯೆಯ ಒಂದು ಕೊಂಬಿನ ಖಡ್ಗಮೃಗಗಳು ಮತ್ತು ಗರಿಷ್ಠ ಸಂಖ್ಯೆಯ ಏಷ್ಯನ್ ಆನೆಗಳಿವೆ. ಭವ್ಯವಾದ ಏಷ್ಯನ್ ಸಿಂಹಗಳು ವಾಸಿಸುವ ವಿಶ್ವದ ಏಕೈಕ ಸ್ಥಳ ಭಾರತವಾಗಿದೆ.”

“ಎನ್.ಡಿ.ಎ (NDA) ಸರ್ಕಾರವು ವನ್ಯಜೀವಿಗಳ ರಕ್ಷಣೆಗಾಗಿ ಹಲವಾರು ಪ್ರಯತ್ನಗಳನ್ನು ಕೈಗೊಂಡಿದೆ. ಇತರ ರಾಷ್ಟ್ರಗಳೊಂದಿಗೆ ಉತ್ತಮ ಪದ್ಧತಿಗಳನ್ನು ಹಂಚಿಕೊಳ್ಳಲು ಒಂದು ವಿಶಿಷ್ಟ ವೇದಿಕೆಯಾದ 'ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್' ಅನ್ನು ಸ್ಥಾಪಿಸಿರುವುದು ಇವುಗಳಲ್ಲಿ ಸೇರಿದೆ. ಗ್ರೇಟ್ ಇಂಡಿಯನ್ ಬಸ್ಟರ್ಡ್, ಘರಿಯಾಲ್, ಕರಡಿಗಳನ್ನು ರಕ್ಷಿಸುವ ಉದ್ದೇಶದ ಪ್ರಯತ್ನಗಳು ಮತ್ತು ಚೀತಾಗಳ ಸ್ಥಳಾಂತರವು ಇತರ ಪ್ರಮುಖ ಪ್ರಯತ್ನಗಳಾಗಿವೆ.”

“आज World Wildlife Day है। हमारे शास्त्रों में सभी जीवों के कल्याण की कामना की गई है। उनसे हमें वन्यजीवों के संरक्षण के साथ-साथ उनके प्रति संवेदनशील होने की प्रेरणा भी मिलती है। उसका एक उदाहरण यह है…

निर्वनो वध्यते व्याघ्रो निर्व्याघ्रं छिद्यते वनम्।

तस्माद् व्याघ्रो वनं रक्षेद् वनं व्याघ्रं च पालयेत्॥”

 

*****


(ಪ್ರಕಟಣೆ ಐ.ಡಿ.: 2234886) ವಿಸಿಟರ್ ಕೌಂಟರ್ : 69