ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಇಸ್ರೇಲ್ ಸಂಸತ್ತನ್ನು (ನೆಸ್ಸೆಟ್)‌ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

ಪ್ರಕಟಣಾ ದಿನಾಂಕ: 25 FEB 2026 10:41PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜೆರುಸಲೇಂನಲ್ಲಿ ಇಸ್ರೇಲ್‌ ಸಂಸತ್ತಿನ (ನೆಸ್ಸೆಟ್) ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದರು. ಆ ಮೂಲಕ ಇಸ್ರೇಲ್ ಸಂಸತ್ತಿನಲ್ಲಿ ಭಾಷಣ ಮಾಡಿದ ಮೊದಲ ಭಾರತೀಯ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದರು.

ಕನೆಸೆಟ್‌ಗೆ ಆಗಮಿಸಿದ ಪ್ರಧಾನಮಂತ್ರಿಯವರನ್ನು ನೆಸ್ಸೆಟ್ ನ ಸ್ಪೀಕರ್ ಘನತೆವೆತ್ತ ಅಮೀರ್ ಓಹಾನಾ ಸ್ವಾಗತಿಸಿದರು ಮತ್ತು ವಿಧ್ಯುಕ್ತ ಸ್ವಾಗತ ನೀಡಿದರು. ಇಸ್ರೇಲ್ ಪ್ರಧಾನಮಂತ್ರಿ, ಘನತೆವೆತ್ತ ಶ್ರೀ ಬೆಂಜಮಿನ್ ನೆತನ್ಯಾಹು; ವಿರೋಧ ಪಕ್ಷದ ನಾಯಕರಾದ ಘನತೆವೆತ್ತ ಶ್ರೀ ಯಾಯಿರ್ ಲಾಪಿಡ್; ಮತ್ತು ಸ್ಪೀಕರ್ ಒಹಾನಾ ಅವರು ಪ್ರಧಾನಮಂತ್ರಿಯವರ ಭಾಷಣಕ್ಕೂ ಮುನ್ನ ಅಧಿವೇಶನದಲ್ಲಿ ಮಾತನಾಡಿ, ಭಾರತ-ಇಸ್ರೇಲ್ ಸಂಬಂಧಗಳಿಗೆ ಬಲವಾದ ದ್ವಿಪಕ್ಷೀಯ ಬೆಂಬಲವನ್ನು ವ್ಯಕ್ತಪಡಿಸಿದರು.

ವಿಶೇಷ ಗೌರವಕ್ಕಾಗಿ ಸ್ಪೀಕರ್ ಅವರಿಗೆ ಧನ್ಯವಾದ ಹೇಳುವ ಮೂಲಕ ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಪ್ರಾರಂಭಿಸಿದರು.  ಭಾರತ ಮತ್ತು ಇಸ್ರೇಲ್ ನಡುವಿನ ಸ್ನೇಹದ ಬಲವಾದ ಬಂಧಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಉಭಯ ದೇಶಘಳ ಜನರು ಪ್ರಾಚೀನ ನಾಗರಿಕತೆಯ ಸಂಬಂಧಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ತಂತ್ರಜ್ಞಾನ, ನಾವೀನ್ಯತೆ, ರಕ್ಷಣೆ, ಭದ್ರತೆ ಮತ್ತು ಕಾರ್ಯತಂತ್ರದ ಸಮನ್ವಯದ ಆಧಾರದ ಮೇಲೆ ದೃಢವಾದ ಸಮಕಾಲೀನ ಪಾಲುದಾರಿಕೆಯನ್ನು ಹಂಚಿಕೊಂಡಿದ್ದಾರೆ ಎಂದು ಹೇಳಿದರು. ಕೃಷಿ, ಗ್ರಾಮೀಣಾಭಿವೃದ್ಧಿ, ನೀರಿನ ನಿರ್ವಹಣೆ, ಸುಸ್ಥಿರತೆ ಮತ್ತು ಉದ್ಯಮದಲ್ಲಿನ ಸಹಕಾರದ ಅಡಿಪಾಯದ ಮೇಲೆ ಜನರ ನಡುವಿನ ಸದೃಢ ಸಂಬಂಧಗಳು ಈ ಬಾಂಧವ್ಯಕ್ಕೆ ಕ್ರಿಯಾತ್ಮಕ ದೃಷ್ಟಿಕೋನವನ್ನು ನೀಡಿವೆ ಎಂದು ಅವರು ಹೇಳಿದರು. ಉಭಯ ದೇಶಗಳ ನಡುವಿನ ಐತಿಹಾಸಿಕ ಸಂಪರ್ಕಗಳು ಮತ್ತು ಜನರ ದ್ವಿಮುಖ ಚಲನೆಯನ್ನು ಒತ್ತಿಹೇಳಿದ ಪ್ರಧಾನಮಂತ್ರಿಯವರು, ಇಸ್ರೇಲ್‌ನಲ್ಲಿರುವ ಭಾರತೀಯ ಸಮುದಾಯ ಮತ್ತು ಭಾರತದಲ್ಲಿರುವ ಯಹೂದಿ ವಲಸಿಗರು ಎರಡೂ ದೇಶಗಳ ಪ್ರಗತಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಉಭಯ ದೇಶಗಳು ಭಯೋತ್ಪಾದನೆಯ ಬಗ್ಗೆ ಹೊಂದಿರುವ ಶೂನ್ಯ ಸಹಿಷ್ಣುತೆಯ ರಾಜಿಯಾಗದ ನೀತಿಯನ್ನು ಸ್ಮರಿಸಿದ ಪ್ರಧಾನಿಯವರು, ಅಕ್ಟೋಬರ್ 7ರ ಭಯೋತ್ಪಾದಕ ದಾಳಿಗೆ ಸಂತಾಪ ಸೂಚಿಸಿದರು ಮತ್ತು ಇಂತಹ ಕ್ರೌರ್ಯವನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಈ ಪ್ರದೇಶದಲ್ಲಿ ಶಾಶ್ವತ ಶಾಂತಿ ಮತ್ತು ಸ್ಥಿರತೆಗೆ ಕೊಡುಗೆ ನೀಡುವ ಎಲ್ಲಾ ಪ್ರಯತ್ನಗಳಿಗೆ ಭಾರತದ ಬೆಂಬಲವನ್ನು ಅವರು ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅನುಮೋದಿಸಿದ ʻಗಾಜಾ ಶಾಂತಿ ಉಪಕ್ರಮʼಕ್ಕೆ ಭಾರತದ ದೃಢ ಬೆಂಬಲವನ್ನು ಅವರು ಒತ್ತಿ ಹೇಳಿದರು. ಬಹುಪಕ್ಷೀಯ ಕ್ಷೇತ್ರದಲ್ಲಿ ಭಾರತ ಮತ್ತು ಇಸ್ರೇಲ್ ನಡುವೆ ಸಹಯೋಗವನ್ನು ಉಲ್ಲೇಖಿಸಿದ ಅವರು, ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (ಐಎಂಇಸಿ) ಮತ್ತು ʻಐ2ಯು2ʼ ನೀತಿಯಲ್ಲಿ ಉಭಯ ದೇಶಗಳ ನಡುವೆ ಆಳವಾದ ಸಂವಹನಕ್ಕೆ ಕರೆ ನೀಡಿದರು.

ಪ್ರಧಾನಮಂತ್ರಿಯವರು ಭಾರತದ ಬೆಳವಣಿಗೆಯ ಯಶೋಗಾಥೆಯನ್ನು ಉಲ್ಲೇಖಿಸಿದರು. ಇದೇವೇಳೆ ವ್ಯಾಪಾರ, ಹೂಡಿಕೆ, ಮೂಲಸೌಕರ್ಯ ಅಭಿವೃದ್ಧಿ, ಹಸಿರು ಬೆಳವಣಿಗೆ, ನವೋದ್ಯಮಗಳು, ಡಿಜಿಟಲ್ ಪರಿಹಾರಗಳು ಮತ್ತು ಉದಯೋನ್ಮುಖ ತಂತ್ರಜ್ಞಾನಗಳು, ಯುವಕರ ನಾವೀನ್ಯತೆ ಮತ್ತು ಸೃಜನಶೀಲತೆಯನ್ನು ಅನಾವರಣಗೊಳಿಸುವ ಕ್ಷೇತ್ರಗಳಲ್ಲಿ ಹೆಚ್ಚಿನ ದ್ವಿಪಕ್ಷೀಯ ಸಹಯೋಗವನ್ನು ಕೋರಿದರು. ದ್ವಿಪಕ್ಷೀಯ ಹೂಡಿಕೆ ಒಪ್ಪಂದದ ತೀರ್ಮಾನದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಅವರು, ಬಳಕೆಯಾಗದ ವ್ಯಾಪಾರ ಸಾಮರ್ಥ್ಯವನ್ನು ಅರಿತುಕೊಳ್ಳಲು ಮಹತ್ವಾಕಾಂಕ್ಷೆಯ ʻಮುಕ್ತ ವ್ಯಾಪಾರ ಒಪ್ಪಂದʼವನ್ನು ಶೀಘ್ರವಾಗಿ ಅಂತಿಮಗೊಳಿಸುವಂತೆ ಕರೆ ನೀಡಿದರು.

ಭಾರತದಲ್ಲಿ ಇತ್ತೀಚೆಗೆ ಇಸ್ರೇಲ್‌ಗಾಗಿ ರಚಿಸಲಾದ ʻಸಂಸದೀಯ ಸ್ನೇಹ ಗುಂಪಿʼನ ಲಾಭವನ್ನು ಬಳಸಿಕೊಂಡು ಎರಡು ಸದೃಢ ಪ್ರಜಾಪ್ರಭುತ್ವಗಳ ನಡುವೆ ಹೆಚ್ಚಿನ ಸಂಸದೀಯ ಸಂವಹನಕ್ಕೆ ಪ್ರಧಾನಿ ಕರೆ ನೀಡಿದರು. ಎರಡು ನಾಗರಿಕತೆಗಳ ನೀತಿಗಳ ನಡುವೆ ಹೋಲಿಕೆಗಳನ್ನು ಮುಂದಿಟ್ಟ ಪ್ರಧಾನಮಂತ್ರಿಯವರು, ಭಾರತದ ತತ್ವವಾದ ʻವಸುಧೈವ ಕುಟುಂಬಕಂʼ(ಜಗತ್ತು ಒಂದು ಕುಟುಂಬ)  ಮತ್ತು ಇಸ್ರೇಲಿ ತತ್ವವಾದ ʻಟಿಕ್ಕುಮ್ ಓಲಮ್ʼ (ಜಗತ್ತಿಗೆ ಉಪಶಮನ) ಎರಡೂ ಸಹ ಸಾಮರಸ್ಯದ ಸಮಾಜದತ್ತ ಹಂಚಿಕೆಯ ವಿಧಾನಗಳ ಬಗ್ಗೆ ಮಾತನಾಡುತ್ತದೆ ಎಂದು ಹೇಳಿದರು. ಭಾರತ-ಇಸ್ರೇಲ್ ಬಾಂಧವ್ಯಕ್ಕೆ ನೀಡಿದ ಕೊಡುಗೆಗಾಗಿ ʻಕನೆಸೆಟ್ʼ ಸದಸ್ಯರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಿಯವರು, ಮುಂಬರುವ ʻಪುರಿಮ್ʼ ಹಬ್ಬಕ್ಕೆ ಶುಭ ಹಾರೈಸಿದರು.

ಪ್ರಧಾನಮಂತ್ರಿ ಮೋದಿ ಅವರ ಭಾಷಣದ ನಂತರ, ಕೆನೆಸೆಟ್ ನ ಸ್ಪೀಕರ್ ಘನತೆವೆತ್ತ ಅಮೀರ್ ಒಹಾನಾ ಅವರು ಪ್ರಧಾನಮಂತ್ರಿಯವರಿಗೆ “ಮೆಡಲ್ ಆಫ್ ದಿ ಕೆನೆಸೆಟ್” ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಪ್ರಧಾನಮಂತ್ರಿಯವರು ಈ ಗೌರವವನ್ನು ಭಾರತ ಮತ್ತು ಇಸ್ರೇಲ್ ನಡುವಿನ ಶಾಶ್ವತ ಸ್ನೇಹಕ್ಕೆ ಸಮರ್ಪಿಸಿದರು. ಪ್ರಧಾನಮಂತ್ರಿಯವರ ಪೂರ್ಣ ಭಾಷಣವನ್ನು ಇಲ್ಲಿ ನೋಡಬಹುದು. [link]

 

*****


(ಪ್ರಕಟಣೆ ಐ.ಡಿ.: 2232920) ವಿಸಿಟರ್ ಕೌಂಟರ್ : 24
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Manipuri , Gujarati , Malayalam