ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಶಾಂತಿಯುತ ಮತ್ತು ಸಮೃದ್ಧ ಈಶಾನ್ಯದ ದೃಷ್ಟಿಕೋನವನ್ನು ಸಾಕಾರಗೊಳಿಸುವ ಮತ್ತೊಂದು ಮಹತ್ವದ ಹೆಜ್ಜೆಯಾಗಿ ಭಾರತ ಸರ್ಕಾರ, ನಾಗಾಲ್ಯಾಂಡ್‌ ಸರ್ಕಾರ ಮತ್ತು ಇಎನ್‌ಪಿಒ ಪ್ರತಿನಿಧಿಗಳ ನಡುವೆ ನವದೆಹಲಿಯಲ್ಲಿ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಲಾಯಿತು


ಒಪ್ಪಂದವು ನಾಗಾಲ್ಯಾಂಡ್‌ನ ಆರು ಜಿಲ್ಲೆಗಳಿಗೆ ನಾಗಲ್ಯಾಂಡ್‌ ಪ್ರಾದೇಶಿಕ ಪ್ರಾಧಿಕಾರ (ಎಫ್‌ಎನ್‌ಟಿಎ) ರಚನೆಗೆ ದಾರಿ ಮಾಡಿಕೊಡುತ್ತದೆ

ಈ ವ್ಯವಸ್ಥೆಯಡಿಯಲ್ಲಿ, 46 ವಿಷಯಗಳಿಗೆ ಸಂಬಂಧಿಸಿದ ಅಧಿಕಾರಗಳನ್ನು ಎಫ್‌ಎನ್‌ಟಿಎಗೆ ವರ್ಗಾಯಿಸಲಾಗುವುದು

ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಪ್ರತಿಯೊಂದು ವಿವಾದಕ್ಕೂ ಪರಿಹಾರ ಕಂಡುಕೊಳ್ಳಲು ಬದ್ಧವಾಗಿದೆ

ಹಿಂದಿನ ಸರ್ಕಾರಗಳು ಒಪ್ಪಂದಗಳಿಗೆ ಮಾತ್ರ ಸಹಿ ಹಾಕಿದವು, ಆದರೆ ನರೇಂದ್ರ ಮೋದಿ ಸರ್ಕಾರವು ಅವುಗಳನ್ನು ಅಕ್ಷರಶಃ ಅನುಷ್ಠಾನಗೊಳಿಸುತ್ತದೆ

ಭಾರತ ಸರ್ಕಾರವು ಪೂರ್ವ ನಾಗಾಲ್ಯಾಂಡ್‌ ಅಭಿವೃದ್ಧಿಗೆ ಸಹಾಯ ಮಾಡುತ್ತದೆ ಮತ್ತು ಅದರ ಜವಾಬ್ದಾರಿಯನ್ನು ಸಹ ನಿಭಾಯಿಸುತ್ತದೆ

ಪ್ರತಿ ವರ್ಷ ನಿಗದಿತ ಮೊತ್ತವನ್ನು ಹಂಚಿಕೆ ಮಾಡಲಾಗುವುದು ಮತ್ತು ಆರಂಭಿಕ ಸ್ಥಾಪನಾ ವೆಚ್ಚವನ್ನು ಕೇಂದ್ರ ಗೃಹ ಸಚಿವಾಲಯವೂ ಭರಿಸಲಿದೆ

ಈಗ, ಪೂರ್ವ ನಾಗಾಲ್ಯಾಂಡ್‌ ಅಭಿವೃದ್ಧಿಯ ಹಾದಿಯಲ್ಲಿ ಯಾವುದೇ ಅಡೆತಡೆಗಳು ಇರುವುದಿಲ್ಲ

ಈ ಒಪ್ಪಂದವು ಜನರ ನೈಜ ಆಕಾಂಕ್ಷೆಗಳನ್ನು ಈಡೇರಿಸಲು ಎಲ್ಲಾ ವಿವಾದಾತ್ಮಕ ಸಮಸ್ಯೆಗಳನ್ನು ಪರಿಹರಿಸುವ ನಮ್ಮ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ

ಪ್ರಕಟಣಾ ದಿನಾಂಕ: 05 FEB 2026 8:21PM by PIB Bengaluru

ಶಾಂತಿಯುತ ಮತ್ತು ಸಮೃದ್ಧ ಈಶಾನ್ಯದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು ಈಡೇರಿಸುವ ಮತ್ತೊಂದು ಮಹತ್ವದ ಮೈಲಿಗಲ್ಲಾಗಿ, ಭಾರತ ಸರ್ಕಾರ, ನಾಗಾಲ್ಯಾಂಡ್‌ ಸರ್ಕಾರ ಮತ್ತು ನಾಗಾಲ್ಯಾಂಡ್‌ನ ಆರು ಪೂರ್ವ ಜಿಲ್ಲೆಗಳ ಎಂಟು ಮಾನ್ಯತೆ ಪಡೆದ ನಾಗಾ ಬುಡಕಟ್ಟು ಜನಾಂಗದವರನ್ನು ಪ್ರತಿನಿಧಿಸುವ ಅತ್ಯುನ್ನತ ಸಂಸ್ಥೆಯಾದ ಪೂರ್ವ ನಾಗಾಲ್ಯಾಂಡ್‌ ಪೀಪಲ್ಸ್‌ ಆರ್ಗನೈಸೇಶನ್‌ (ಇಎನ್‌ಪಿಒ) ಪ್ರತಿನಿಧಿಗಳ ನಡುವೆ ಇಂದು ನವದೆಹಲಿಯಲ್ಲಿ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ ಮತ್ತು ನಾಗಾಲ್ಯಾಂಡ್‌ ಮುಖ್ಯಮಂತ್ರಿ ಶ್ರೀ ನೈಫಿಯು ರಿಯೊ ಅವರ ಉಪಸ್ಥಿತಿಯಲ್ಲಿಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದವು ನಾಗಾಲ್ಯಾಂಡ್‌ನ ಆರು ಜಿಲ್ಲೆಗಳಾದ ಟುಯೆನ್ಸಾಂಗ್‌, ಮೊನ್‌, ಕಿಫೈರ್‌, ಲಾಂಗ್ಲೆಂಗ್‌, ನೊಕ್ಲಾಕ್‌ ಮತ್ತು ಶಮಾಟೋರ್‌ಗಳಿಗೆ ನಾಗಲ್ಯಾಂಡ್‌ ಪ್ರಾದೇಶಿಕ ಪ್ರಾಧಿಕಾರ (ಎಫ್‌.ಎನ್‌.ಟಿ.ಎ.) ರಚನೆಗೆ ದಾರಿ ಮಾಡಿಕೊಡುತ್ತದೆ ಮತ್ತು ಎಫ್‌.ಎನ್‌.ಟಿ.ಎ.ಗೆ 46 ವಿಷಯಗಳಿಗೆ ಸಂಬಂಧಿಸಿದಂತೆ ಅಧಿಕಾರ ಹಂಚಿಕೆಗೆ ಅವಕಾಶ ನೀಡುತ್ತದೆ.

ಈ ಸಂದರ್ಭದಲ್ಲಿಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ ಅವರು, ವಿವಾದ ಮುಕ್ತ ಈಶಾನ್ಯಕ್ಕೆ ಇಂದು ಬಹಳ ಮಹತ್ವದ ದಿನವಾಗಿದೆ ಎಂದು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಂಡಾಯ, ಹಿಂಸಾಚಾರ, ವಿವಾದಗಳಿಂದ ಮುಕ್ತವಾದ ಮತ್ತು ಅಭಿವೃದ್ಧಿ ಹೊಂದಿದ ಈಶಾನ್ಯವನ್ನು ಕಲ್ಪಿಸಿಕೊಂಡಿದ್ದಾರೆ. ಇಂದು, ಆ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿನಾವು ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದೇವೆ. ಹನ್ನೊಂದು ವರ್ಷಗಳ ಹಿಂದೆ, ಈಶಾನ್ಯದ ಹಲವಾರು ಸಶಸ್ತ್ರ ಗುಂಪುಗಳು ಮತ್ತು ವಿವಾದಗಳು ಈ ಪ್ರದೇಶವನ್ನು ವಿಘಟನೆಯತ್ತ ತಳ್ಳುತ್ತಿದ್ದವು ಮತ್ತು ಅದರ ಶಾಂತಿಯನ್ನು ಭಂಗಗೊಳಿಸುತ್ತಿದ್ದವು ಎಂದು ಅವರು ಹೇಳಿದರು. ಅದೇ ಸಮಯದಲ್ಲಿ, ಅನೇಕ ಅಂತರ-ರಾಜ್ಯ ವಿವಾದಗಳು ರಾಜ್ಯಗಳ ಶಾಂತಿಯನ್ನು ಭಂಗಗೊಳಿಸುತ್ತಿದ್ದವು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಪ್ರತಿಯೊಂದು ವಿವಾದಕ್ಕೂ ಪರಿಹಾರ ಕಂಡುಕೊಳ್ಳಲು ಬದ್ಧವಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. 2019ರಿಂದ ನರೇಂದ್ರ ಮೋದಿ ಸರ್ಕಾರವು ಈಶಾನ್ಯದಲ್ಲಿ12 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದೆ ಎಂದು ಅವರು ಹೇಳಿದರು. ಹೊಸ ಸರ್ಕಾರಗಳು ಒಪ್ಪಂದಗಳಿಗೆ ಮಾತ್ರ ಸಹಿ ಹಾಕುತ್ತವೆ, ಆದರೆ ನರೇಂದ್ರ ಮೋದಿ ಸರ್ಕಾರವು ಅವುಗಳನ್ನು ಅಕ್ಷರಶಃ ಅನುಷ್ಠಾನಗೊಳಿಸುತ್ತದೆ ಎಂದು ಅವರು ಹೇಳಿದರು.ಪೂರ್ವ ನಾಗಾಲ್ಯಾಂಡ್‌ ಅಭಿವೃದ್ಧಿಗೆ ಭಾರತ ಸರ್ಕಾರ ಸಹಾಯ ಮಾಡುತ್ತದೆ ಮತ್ತು ಅದರ ಜವಾಬ್ದಾರಿಯನ್ನು ಹೊರುತ್ತದೆ ಎಂದು ಇಎನ್‌ಪಿಒ ಪ್ರತಿನಿಧಿಗಳಿಗೆ ಭರವಸೆ ನೀಡಲು ಬಯಸುತ್ತೇನೆ ಎಂದು ಗೃಹ ಸಚಿವರು ಹೇಳಿದರು. ಪ್ರತಿ ವರ್ಷ ನಿಗದಿತ ಮೊತ್ತವನ್ನು ನಿರ್ಧರಿಸಲಾಗುವುದು ಮತ್ತು ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯವು ಸ್ಥಾಪನೆಗೆ ಆರಂಭಿಕ ವೆಚ್ಚವನ್ನು ಸಹ ಒದಗಿಸುತ್ತದೆ ಎಂದು ಶ್ರೀ ಅಮಿತ್‌ ಶಾ ಹೇಳಿದರು.

2021-22 ರಲ್ಲಿ, ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಪ್ರತಿಯೊಂದು ವಿವಾದಕ್ಕೂ ಪರಿಹಾರವನ್ನು ಕಂಡುಹಿಡಿಯಲು ಬದ್ಧವಾಗಿದೆ ಎಂದು ಇಎನ್‌ಪಿಒ ಪ್ರತಿನಿಧಿಗಳಿಗೆ ತಾವು ಹೇಳಿದ್ದಾಗಿ ಶ್ರೀ ಅಮಿತ್‌ ಶಾ ಹೇಳಿದರು. ನಂಬಿಕೆಯನ್ನು ಉಳಿಸಿಕೊಳ್ಳಲು ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿಭಾಗವಹಿಸಲು ಅವರು ಭರವಸೆ ನೀಡಿದ್ದರು ಮತ್ತು ಅವರು ಖಂಡಿತವಾಗಿಯೂ ನ್ಯಾಯಯುತ ನ್ಯಾಯ ಮತ್ತು ಸೂಕ್ತ ಗೌರವವನ್ನು ಪಡೆಯುತ್ತಾರೆ ಎಂದು ಭರವಸೆ ನೀಡಿದ್ದರು. ಗೃಹ ಸಚಿವಾಲಯದ ಅಧಿಕಾರಿಗಳು ಇಎನ್‌ಪಿಒ ಮತ್ತು ನಾಗಾಲ್ಯಾಂಡ್‌ ಸರ್ಕಾರದ ನಡುವಿನ ಸೇತುವೆಯಾಗಿ ದೀರ್ಘಕಾಲ ಕೆಲಸ ಮಾಡಿದ ನಂತರ, ಇಂದು ನಾವು ಈ ವಿವಾದವನ್ನು ಪರಿಹರಿಸಲು ಸಾಧ್ಯವಾಗಿರುವುದರಿಂದ ಇಂದು ನಾನು ಅಪಾರ ಸಂತೋಷವನ್ನು ಅನುಭವಿಸುತ್ತಿದ್ದೇನೆ ಎಂದು ಗೃಹ ಸಚಿವರು ಹೇಳಿದರು.

ಇಎನ್‌ಪಿಒ ಪ್ರದೇಶ ಮತ್ತು ಅದರ ಕಾರ್ಯತಂತ್ರದ ಪ್ರಾಮುಖ್ಯತೆಯ ಬಗ್ಗೆ ನಮಗೆಲ್ಲರಿಗೂ ಚೆನ್ನಾಗಿ ತಿಳಿದಿದೆ ಎಂದು ಗೃಹ ಸಚಿವರು ಹೇಳಿದರು. ನಾಗಾಲ್ಯಾಂಡ್‌ ರಚನೆಯಾದಾಗಿನಿಂದಲೂ, ಪೂರ್ವ ನಾಗಾಲ್ಯಾಂಡ್‌ನ ನಾಗರಿಕರು ತಮಗೆ ನ್ಯಾಯ ಸಿಗುತ್ತಿಲ್ಲಎಂದು ತಮ್ಮ ಹೃದಯದಲ್ಲಿನಿರಂತರವಾಗಿ ಭಾವಿಸಿದ್ದಾರೆ. ನಾಗಾಲ್ಯಾಂಡ್‌ ಮುಖ್ಯಮಂತ್ರಿ ಶ್ರೀ ನೈಫಿಯು ರಿಯೊ ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಇಎನ್‌ಪಿಒದ ಎಲ್ಲಾ ಬೇಡಿಕೆಗಳನ್ನು ಮುಕ್ತ ಹೃದಯದಿಂದ ಆಲಿಸುತ್ತೇನೆ, ಅವುಗಳನ್ನು ಚರ್ಚಿಸುತ್ತೇನೆ ಮತ್ತು ಅವುಗಳನ್ನು ಸ್ವೀಕರಿಸುತ್ತೇನೆ ಎಂದು ಶ್ರೀ ರಿಯೊ ಅವರು ತುಂಬಾ ಸಂತೋಷದಿಂದ ಹೇಳಿದ್ದಾರೆ ಎಂದು ಶ್ರೀ ಅಮಿತ್‌ ಶಾ ಹೇಳಿದರು. ಮುಖ್ಯಮಂತ್ರಿ ಶ್ರೀ ನೈಫಿಯು ರಿಯೊ ಅವರಿಗೆ ಕೃತಜ್ಞತೆ ಸಲ್ಲಿಸಿದ ಗೃಹ ಸಚಿವರು, ನಾಗಾಲ್ಯಾಂಡ್‌ ಸರ್ಕಾರ, ಶ್ರೀ ರಿಯೊ ಅವರ ಸಂಪುಟ ಸಹೋದ್ಯೋಗಿಗಳು ಮತ್ತು ರಾಜ್ಯದ ಇಬ್ಬರೂ ಸಂಸತ್‌ ಸದಸ್ಯರು ಬಹಳ ಔದಾರ್ಯದಿಂದ ಈ ಮಾತುಕತೆಯನ್ನು ಅದರ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿದ್ದಾರೆ ಎಂದು ಹೇಳಿದರು.

ಬಹಳ ದೀರ್ಘಕಾಲದ ವಿವಾದವು ಇಂದು ಸಂತೋಷದ ತೀರ್ಮಾನವನ್ನು ತಲುಪಿದೆ ಎಂದು ಶ್ರೀ ಅಮಿತ್‌ ಶಾ ಹೇಳಿದರು. ಪೂರ್ವ ನಾಗಾಲ್ಯಾಂಡ್‌ನ ಎಲ್ಲಾ ಜನರು, ಇಎನ್‌ಪಿಒದ ಎಲ್ಲಾ ಹೆಣಗಾಡುತ್ತಿರುವ ಸಂಘಟನೆಗಳು, ನಾಗಾಲ್ಯಾಂಡ್‌ ಮುಖ್ಯಮಂತ್ರಿ, ಅವರ ಸಚಿವ ಸಂಪುಟ ಮತ್ತು ಸಂಸತ್‌ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸಿದ ಅವರು, ನಾಗಾಲ್ಯಾಂಡ್‌ನಲ್ಲಿನ ಎಲ್ಲಾ ವಿವಾದಗಳನ್ನು ಕೊನೆಗೊಳಿಸುವ ದಿಕ್ಕಿನಲ್ಲಿಇಂದು ನಾವು ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದೇವೆ ಎಂದು ಹೇಳಿದರು. ಈಗ ಪೂರ್ವ ನಾಗಾಲ್ಯಾಂಡ್‌ ಅಭಿವೃದ್ಧಿಯ ಹಾದಿಯಲ್ಲಿ ಯಾವುದೇ ಅಡೆತಡೆಗಳಿಲ್ಲಎಂದು ಅವರು ಹೇಳಿದರು. ಜನರ ನೈಜ ಆಕಾಂಕ್ಷೆಗಳನ್ನು ಈಡೇರಿಸಲು ಎಲ್ಲಾ ವಿವಾದಾತ್ಮಕ ಸಮಸ್ಯೆಗಳನ್ನು ಪರಿಹರಿಸುವ ನಮ್ಮ ಸರ್ಕಾರದ ಬದ್ಧತೆಯನ್ನು ಈ ಒಪ್ಪಂದವು ಪ್ರತಿಬಿಂಬಿಸುತ್ತದೆ ಎಂದು ಗೃಹ ಸಚಿವರು ಹೇಳಿದರು. ಭಾರತ ಸರ್ಕಾರ ಮತ್ತು ನಾಗಾಲ್ಯಾಂಡ್‌ ಸರ್ಕಾರ ಎರಡೂ ಜಂಟಿಯಾಗಿ ಪೂರ್ವ ನಾಗಾಲ್ಯಾಂಡ್‌ ಅಭಿವೃದ್ಧಿಯನ್ನು ಮುನ್ನಡೆಸಲಿವೆ ಎಂದು ಅವರು ಹೇಳಿದರು.

ಈ ಒಪ್ಪಂದವು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ ನೇತೃತ್ವದ ಎಫ್‌ಎನ್‌ಟಿಎಗೆ ಮಿನಿ-ಸೆಕ್ರೆಟರಿಯೇಟ್‌ಅನ್ನು ಒದಗಿಸುತ್ತದೆ, ಪೂರ್ವ ನಾಗಾಲ್ಯಾಂಡ್‌ ಪ್ರದೇಶಕ್ಕೆ ಜನಸಂಖ್ಯೆ ಮತ್ತು ಪ್ರದೇಶಕ್ಕೆ ಅನುಗುಣವಾಗಿ ಅಭಿವೃದ್ಧಿ ವೆಚ್ಚವನ್ನು ಹಂಚಿಕೊಳ್ಳುತ್ತದೆ. ಆದಾಗ್ಯೂ, ಈ ಒಪ್ಪಂದವು ಭಾರತದ ಸಂವಿಧಾನದ 371 (ಎ) ಅನುಚ್ಛೇದದ ನಿಬಂಧನೆಗಳ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ.

ಈ ವಿಶಿಷ್ಟ ವ್ಯವಸ್ಥೆಯು ಆರ್ಥಿಕ ಸ್ವಾಯತ್ತತೆ, ವರ್ಧಿತ ನಿರ್ಧಾರ ತೆಗೆದುಕೊಳ್ಳುವಿಕೆಯ ಮೂಲಕ ಪೂರ್ವ ನಾಗಾಲ್ಯಾಂಡ್‌ನ ಒಟ್ಟಾರೆ ಅಭಿವೃದ್ಧಿಯನ್ನು ಕಲ್ಪಿಸುತ್ತದೆ, ಇದು ವೇಗ ವರ್ಧಿತ  ಮೂಲಸೌಕರ್ಯ ಅಭಿವೃದ್ಧಿ, ಆರ್ಥಿಕ ಸಬಲೀಕರಣ ಮತ್ತು ಗರಿಷ್ಠ ಸಂಪನ್ಮೂಲ ಬಳಕೆಗೆ ಕಾರಣವಾಗುತ್ತದೆ.

ಈ ಒಪ್ಪಂದವು ಈಶಾನ್ಯ ಭಾಗದ ಜನರ ನೈಜ ಆಶೋತ್ತರಗಳನ್ನು ಈಡೇರಿಸಲು ಮಾತುಕತೆಯ ಮೂಲಕ ಎಲ್ಲಾ ವಿವಾದಾತ್ಮಕ ಸಮಸ್ಯೆಗಳನ್ನು ಪರಿಹರಿಸುವ ಭಾರತ ಸರ್ಕಾರದ ಬದ್ಧತೆಯನ್ನು ಬಿಂಬಿಸುತ್ತದೆ ಮತ್ತು ಹಿಂಸಾಚಾರ ಮತ್ತು ಸಶಸ್ತ್ರ ಸಂಘರ್ಷದ ಬದಲು ಪರಸ್ಪರ ಗೌರವ ಮತ್ತು ಮಾತುಕತೆಯ ಆಧಾರದ ಮೇಲೆ ಮಾತುಕತೆಗಳ ಮೂಲಕ ಮಾತ್ರ ಪರಿಹಾರಗಳನ್ನು ಸಾಧಿಸಬಹುದು ಎಂಬ ಪ್ರಜಾಪ್ರಭುತ್ವದ ಮೂಲ ಸಿದ್ಧಾಂತವನ್ನು ಸಾಬೀತುಪಡಿಸುತ್ತದೆ.

ನಾಗಾಲ್ಯಾಂಡ್‌ನ ಉಪಮುಖ್ಯಮಂತ್ರಿ ಶ್ರೀ ಯಂತುಂಗೊ ಪ್ಯಾಟನ್‌, ಅವರ ಸಂಪುಟ ಸಹೋದ್ಯೋಗಿಗಳು ಮತ್ತು ಇತರ ಗಣ್ಯರು, ಕೇಂದ್ರ ಗೃಹ ಸಚಿವಾಲಯ ಮತ್ತು ನಾಗಾಲ್ಯಾಂಡ್‌ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 

*****


(ಪ್ರಕಟಣೆ ಐ.ಡಿ.: 2224138) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Assamese , Gujarati , Odia