ಆಯುಷ್
ವಿಶಾಖಪಟ್ಟಣದಲ್ಲಿ ನಡೆದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ 3 ಲಕ್ಷ ನಾಗರಿಕರನ್ನು ಒಳಗೊಂಡ ವಿಶ್ವದ ಅತಿದೊಡ್ಡ ಯೋಗ ಸಭೆಯ ನೇತೃತ್ವ ವಹಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
ಯೋಗವು ಗಡಿಗಳು, ಹಿನ್ನೆಲೆಗಳು ಅಥವಾ ಸಾಮರ್ಥ್ಯಗಳನ್ನು ಮೀರಿ ಜಗತ್ತನ್ನು ಒಂದುಗೂಡಿಸಿದೆ: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
ಉಸಿರಾಡಲು, ಸಮತೋಲನಕ್ಕೆ, ಮತ್ತು ಪೂರ್ಣತೆ ಸಾಧಿಸಲು ಯೋಗವು ಮಾನವೀಯತೆಗೆ ಅಗತ್ಯವಿರುವ ವಿರಾಮದ ಸ್ಥಳವಾಗಿದೆ: ಪ್ರಧಾನಮಂತ್ರಿ
ನಾನು ಎಂಬಲ್ಲಿಂದ ನಾವು ಎನ್ನುವವರೆಗೆ, ಯೋಗವು ಕೇವಲ ವೈಯಕ್ತಿಕ ಶಿಸ್ತು ಮಾತ್ರವಲ್ಲ, ಬದಲಾಗಿ ಸಾಮೂಹಿಕ ಪ್ರಯಾಣ: ಪ್ರಧಾನಮಂತ್ರಿ
ಪ್ರಧಾನಮಂತ್ರಿಯವರ ದೃಷ್ಟಿಕೋನವು ಯೋಗವನ್ನು ಜಾಗತಿಕ ಸಾರ್ವಜನಿಕ ಆರೋಗ್ಯ ಆಂದೋಲನವನ್ನಾಗಿ ಪರಿವರ್ತಿಸಿದೆ: ಆಯುಷ್ ಸಚಿವರಾದ ಶ್ರೀ ಪ್ರತಾಪ್ರಾವ್ ಜಾಧವ್
ಡಿಜಿಟಲ್ ಯುಗದಲ್ಲಿ ಯೋಗವು ಪ್ರಬಲ ಸ್ವಾಸ್ಥ್ಯ ಸಾಧನವಾಗಿದೆ: ಶ್ರೀ ಚಂದ್ರಬಾಬು ನಾಯ್ಡು
Posted On:
21 JUN 2025 5:08PM by PIB Bengaluru
ವಿಶಾಖಪಟ್ಟಣದ ಮೋಡಿಮಾಡುವ ಕರಾವಳಿಯಲ್ಲಿ ಸುವರ್ಣದಂತೆ ಕಂಗೊಳಿಸುವ ಸೂರ್ಯನ ಉದಯವು ಮೂಡಿಬರುತ್ತಿರುವಾಗ ಮತ್ತು ಬಂಗಾಳ ಕೊಲ್ಲಿಯ ಅಲೆಗಳು ಲಯಬದ್ಧವಾಗಿ ಪಿಸುಗುಟ್ಟುತ್ತಿರುವಾಗ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 11ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುವಲ್ಲಿ ರಾಷ್ಟ್ರ ಮತ್ತು ಪ್ರಪಂಚದಾದ್ಯಂತದ ಯೋಗ ಉತ್ಸಾಹಿಗಳಿಗೆ ಮುಂಚೂಣಿಯಲ್ಲಿ ನಿಂತು ನಾಯಕತ್ವ ನೀಡಿ ಮುನ್ನಡೆಸಿದರು. ಈಗ ಗಿನ್ನಿಸ್ ವಿಶ್ವ ದಾಖಲೆಗಳಲ್ಲಿ ದಾಖಲಾಗಿರುವ ವಿಶ್ವದ ಅತಿದೊಡ್ಡ ಯೋಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಗಳು, ಸಮುದ್ರ ತೀರದಲ್ಲಿ ನಡೆದ ಐತಿಹಾಸಿಕ ಯೋಗ ಅಧಿವೇಶನದಲ್ಲಿ ಭಾರತ ಮತ್ತು ವಿದೇಶಗಳಿಂದ ಭಾಗವಹಿಸಿದ ಸಾವಿರಾರು ಉತ್ಸಾಹಿಗಳೊಂದಿಗೆ ಸೇರಿಕೊಂಡರು.
ರಾಷ್ಟ್ರೀಯ ಕಾರ್ಯಕ್ರಮದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರೊಂದಿಗೆ ಆಂಧ್ರಪ್ರದೇಶದ ರಾಜ್ಯಪಾಲ ಶ್ರೀ ಅಬ್ದುಲ್ ನಜೀರ್ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ಶ್ರೀ ಎನ್. ಚಂದ್ರಬಾಬು ನಾಯ್ಡು ಅವರು ಭಾಗವಹಿಸಿದ್ದರು. ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಶ್ರೀ ರಾಮ್ ಮೋಹನ್ ನಾಯ್ಡು ಗಾರು ಮತ್ತು ಕೇಂದ್ರ ಸಹಾಯಕ (ಸ್ವತಂತ್ರ ನಿರ್ವಹಣೆ) ಆಯುಷ್ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ (ಎಂ.ಒ.ಎಚ್.ಎಫ್.ಡಬ್ಲ್ಯು.-MoHFW) ಸಹಾಯಕ ಸಚಿವರಾದ ಶ್ರೀ ಪ್ರತಾಪ್ರಾವ್ ಜಾಧವ್ ಅವರು ಕೇಂದ್ರ ಸಹಾಯಕ ಸಚಿವ ಡಾ. ಚಂದ್ರಶೇಖರ್ ಪೆಮ್ಮಸಾನಿ ಅವರೊಂದಿಗೆ ಉಪಸ್ಥಿತರಿದ್ದರು. ಉಪ ಮುಖ್ಯಮಂತ್ರಿ ಶ್ರೀ ಪವನ್ ಕಲ್ಯಾಣ್ ಗಾರು ಮತ್ತು ರಾಜ್ಯ ಕ್ಯಾಬಿನೆಟ್ ಸಚಿವ ಶ್ರೀ ನಾರಾ ಲೋಕೇಶ್ ಗಾರು ಅವರು ಈ ಸಂದರ್ಭದಲ್ಲಿ ಹಾಜರಿದ್ದರು.
ಅಂತಾರಾಷ್ಟ್ರೀಯ ಯೋಗ ದಿನದಂದು ಭಾರತ ಮತ್ತು ಪ್ರಪಂಚದಾದ್ಯಂತದ ಜನರಿಗೆ ಆತ್ಮೀಯ ಶುಭಾಶಯಗಳನ್ನು ವ್ಯಕ್ತಪಡಿಸಿದ ಪ್ರಧಾನಿ, ಈ ವರ್ಷ ಜೂನ್ 21 ರಂದು ಜಗತ್ತು ಸಾಮೂಹಿಕವಾಗಿ ಯೋಗಾಭ್ಯಾಸ ಮಾಡಲು ಒಟ್ಟುಗೂಡಿದ್ದು ಇದು 11ನೇ ಬಾರಿ ಎಂದು ಒತ್ತಿ ಹೇಳಿದರು. ಯೋಗದ ಸಾರವು "ಒಗ್ಗೂಡಿಸುವುದು" ಎಂದು ಅವರು ಹೇಳಿದರು ಮತ್ತು ಯೋಗವು ಜಗತ್ತನ್ನು ಹೇಗೆ ಒಗ್ಗೂಡಿಸಿದೆ ಎಂಬುದನ್ನು ನೋಡುವುದು ಕೂಡ ಹೃದಯಸ್ಪರ್ಶಿ ಅನುಭವ ಎಂದವರು ಹೇಳಿದರು.

ಕಳೆದ ದಶಕದಲ್ಲಿ ಯೋಗದ ಪ್ರಯಾಣವನ್ನು ಪ್ರತಿಬಿಂಬಿಸುತ್ತಾ, ಭಾರತವು ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಕಲ್ಪನೆಯನ್ನು ಪ್ರಸ್ತಾಪಿಸಿದ ಕ್ಷಣವನ್ನು ಶ್ರೀ ಮೋದಿ ನೆನಪಿಸಿಕೊಂಡರು. 175 ದೇಶಗಳು ಈ ಪ್ರಸ್ತಾಪವನ್ನು ಬೆಂಬಲಿಸಿದವು, ಇದು ಅಂತಹ ವಿಶಾಲ ಜಾಗತಿಕ ಏಕತೆಯ ಅಪರೂಪದ ಉದಾಹರಣೆಯಾಗಿದೆ ಎಂದು ಅವರು ಗಮನ ಸೆಳೆದರು. ಬೆಂಬಲವು ಕೇವಲ ಒಂದು ಪ್ರಸ್ತಾವನೆಗಾಗಿ ಅಲ್ಲ, ಬದಲಾಗಿ ಅದು ಮಾನವೀಯತೆಯ ಹೆಚ್ಚಿನ ಒಳಿತಿಗಾಗಿ ಪ್ರಪಂಚದ ಸಾಮೂಹಿಕ ಪ್ರಯತ್ನವನ್ನು ಪ್ರತಿನಿಧಿಸುತ್ತದೆ ಎಂದು ಅವರು ಒತ್ತಿ ಹೇಳಿದರು. "ಹನ್ನೊಂದು ವರ್ಷಗಳ ನಂತರ, ಯೋಗವು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಜೀವನಶೈಲಿಯ ಅವಿಭಾಜ್ಯ ಅಂಗವಾಗಿದೆ" ಎಂದು ಅವರು ನುಡಿದರು.

ದಿವ್ಯಾಂಗ ವ್ಯಕ್ತಿಗಳು ಬ್ರೈಲ್ ಲಿಪಿಯಲ್ಲಿ ಯೋಗ ಗ್ರಂಥಗಳನ್ನು ಓದುತ್ತಿರುವುದನ್ನು ಮತ್ತು ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ ಯೋಗಾಭ್ಯಾಸ ಮಾಡುತ್ತಿರುವುದನ್ನು ನೋಡಿ ಪ್ರಧಾನಿ ಹೆಮ್ಮೆ ವ್ಯಕ್ತಪಡಿಸಿದರು. ಯೋಗ ಒಲಿಂಪಿಯಾಡ್ಗಳಲ್ಲಿ ಗ್ರಾಮೀಣ ಪ್ರದೇಶದ ಯುವಜನರು ಉತ್ಸಾಹದಿಂದ ಭಾಗವಹಿಸುತ್ತಿರುವುದನ್ನು ಅವರು ಗಮನಿಸಿದರು. ಸಿಡ್ನಿ ಒಪೇರಾ ಹೌಸ್ನ ಮೆಟ್ಟಿಲುಗಳಾಗಿರಲಿ, ಮೌಂಟ್ ಎವರೆಸ್ಟ್ ಶಿಖರವಾಗಿರಲಿ ಅಥವಾ ಸಾಗರದ ವಿಶಾಲ ಮೇಲ್ಮೈ-ವಿಸ್ತಾರವಾಗಿರಲಿ, "ಯೋಗ ಪ್ರತಿಯೊಬ್ಬರಿಗೂ ಮತ್ತು ಎಲ್ಲರಿಗೂ, ಗಡಿಗಳನ್ನು ಮೀರಿ, ಹಿನ್ನೆಲೆಗಳನ್ನು ಮೀರಿ, ವಯಸ್ಸು ಅಥವಾ ಸಾಮರ್ಥ್ಯದ ಆಚೆಗೆ" ಎಂಬ ಸಂದೇಶ ಒಂದೇ ಆಗಿರುತ್ತದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು.

ವಿಶಾಖಪಟ್ಟಣಂನಲ್ಲಿರುವುದಕ್ಕೆ ಪ್ರಧಾನಿ ಸಂತೋಷ ವ್ಯಕ್ತಪಡಿಸಿದರು, ಇದು ನೈಸರ್ಗಿಕ ಸೌಂದರ್ಯ ಮತ್ತು ಆಧುನಿಕ ಪ್ರಗತಿಯ ರೋಮಾಂಚಕ ಮಿಶ್ರಣ ಎಂದು ಬಣ್ಣಿಸಿದರು. ಅಂತರರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದ ನಿಖರ ಸಂಘಟನೆಯನ್ನು ಶ್ಲಾಘಿಸಿದ ಅವರು, ಶ್ರೀ ಎನ್. ಚಂದ್ರಬಾಬು ನಾಯ್ಡು ಮತ್ತು ಶ್ರೀ ಪವನ್ ಕಲ್ಯಾಣ್ ಅವರ ದೂರದೃಷ್ಟಿಯ ನಾಯಕತ್ವಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ರಾಜ್ಯವು ಪ್ರವರ್ತಕ ಉಪಕ್ರಮವಾದ ಯೋಗಾಂಧ್ರ ಅಭಿಯಾನವನ್ನು ಅವರ ಉಸ್ತುವಾರಿಯಲ್ಲಿ ಪ್ರಾರಂಭಿಸಿದ್ದಕ್ಕಾಗಿ ಪ್ರಧಾನ ಮಂತ್ರಿ ಶ್ಲಾಘನೆ ವ್ಯಕ್ತಪಡಿಸಿದರು.
ಅಭಿಯಾನಕ್ಕೆ ಶ್ರೀ ನಾರಾ ಲೋಕೇಶ್ ಅವರ ಅನುಕರಣೀಯ ಸಮರ್ಪಣೆಗೆ ವಿಶೇಷ ಪ್ರಶಂಸೆಯನ್ನು ವ್ಯಕ್ತಪಡಿಸಲಾಯಿತು. ಯೋಗವನ್ನು ನಿಜವಾಗಿಯೂ ಎಲ್ಲರನ್ನೂ ಒಳಗೊಳ್ಳುವ ಸಾಮಾಜಿಕ ಸಂಭ್ರಮದ ಆಚರಣೆಯಾಗಿ ಅವರು ಯಶಸ್ವಿಯಾಗಿ ಪರಿವರ್ತಿಸಿದ್ದಾರೆ ಎಂಬುದನ್ನು ಪ್ರಧಾನಿಯವರು ಈ ಸಂದರ್ಭದಲ್ಲಿ ಗಮನಿಸಿದರು. ಕಳೆದ ಹಲವಾರು ವಾರಗಳಲ್ಲಿ, ಶ್ರೀ ಲೋಕೇಶ್ ಅವರ ಪ್ರಯತ್ನಗಳು ವ್ಯಾಪಕವಾದ ಸಮುದಾಯ ತೊಡಗಿಸಿಕೊಳ್ಳುವಿಕೆಯನ್ನು ಸಜ್ಜುಗೊಳಿಸಿವೆ, ಸಮಾಜದ ಪ್ರತಿಯೊಂದು ವರ್ಗದಿಂದ ಭಾಗವಹಿಸುವಿಕೆಯನ್ನು ಸೆಳೆದಿವೆ.
ಯೋಗಾಂಧ್ರ ಅಭಿಯಾನದಲ್ಲಿ ಎರಡು ಕೋಟಿಗೂ ಹೆಚ್ಚು ಜನರು ಭಾಗವಹಿಸಿದ್ದಾರೆ ಎಂಬುದನ್ನು ಒತ್ತಿ ಹೇಳಿದ ಪ್ರಧಾನಿ, ಈ ಅಗಾಧವಾದ ಸಾರ್ವಜನಿಕ ಪ್ರತಿಕ್ರಿಯೆಯು ವಿಕ್ಷಿತ ಭಾರತದ ಅಡಿಪಾಯವನ್ನು ರೂಪಿಸುವ ಜನ ಭಾಗೀದಾರಿಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ನಾಗರಿಕರು ರಾಷ್ಟ್ರೀಯ ಧ್ಯೇಯಗಳ ಮಾಲೀಕತ್ವವನ್ನು ತೆಗೆದುಕೊಂಡಾಗ, ಯಾವುದೇ ಗುರಿಯು ಬಹಳ ದೊಡ್ಡ ಮಹತ್ವಾಕಾಂಕ್ಷೆಯಾಗಿರುವುದಿಲ್ಲ ಎಂದು ಅವರು ಒತ್ತಿ ಹೇಳಿದರು. ವಿಶಾಖಪಟ್ಟಣದಲ್ಲಿ ನಡೆದ ಆಚರಣೆಗಳ ಉದ್ದಕ್ಕೂ ಜನರ ಶಕ್ತಿ, ಬದ್ಧತೆ ಮತ್ತು ಸದ್ಭಾವನೆ ಬಹಳ ಸ್ಪಷ್ಟವಾಗಿ ಕಂಡುಬಂದಿತು.
ಕೇಂದ್ರ ಆಯುಷ್ ಖಾತೆ ಸಹಾಯಕ ಸಚಿವರಾದ (ಐಸಿ) ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಹಾಯಕ ಸಚಿವರಾದ ಶ್ರೀ ಪ್ರತಾಪ್ರಾವ್ ಜಾಧವ್ ತಮ್ಮ ಸ್ವಾಗತ ಭಾಷಣದಲ್ಲಿ, "ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸುವ ನಿಟ್ಟಿನಲ್ಲಿ ಅಭೂತಪೂರ್ವ ಹೆಜ್ಜೆಯನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ಅವರು ಪ್ರಾರಂಭಿಸಿದರು. ಈ ಉಪಕ್ರಮವು ಈಗ 180ಕ್ಕೂ ಹೆಚ್ಚು ದೇಶಗಳಲ್ಲಿ ಆಚರಿಸಲಾಗುವ ಜಾಗತಿಕ ಸಾರ್ವಜನಿಕ ಆರೋಗ್ಯ ಆಂದೋಲನವಾಗಿ ರೂಪಾಂತರಗೊಂಡಿದೆ" ಎಂದು ಹೇಳಿದರು.
ಈ ಆಂದೋಲನದ ಒಂದು ದಶಕವನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ, "ನಾವು ಈ ವರ್ಷ 10 ಪ್ರಮುಖ ವಿಶಿಷ್ಟ ಸಿಗ್ನೇಚರ್ ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದೇವೆ. ಇವುಗಳಲ್ಲಿ ಗಿಡ ನೆಡುವಿಕೆಯೊಂದಿಗೆ ಹರಿತ್ ಯೋಗ (ಹಸಿರು ಯೋಗ), ಸಂಪರ್ಕ ಯೋಗ, ಯೋಗ ಉದ್ಯಾನವನಗಳು, ಯೋಗ ಬಂಧನ, ಯೋಗ ಮಹಾಕುಂಭ ಮತ್ತು ಯೋಗ ಸಂಗಮ ಸೇರಿವೆ, ಇವುಗಳನ್ನು ದೇಶಾದ್ಯಂತ 10 ಲಕ್ಷಕ್ಕೂ ಹೆಚ್ಚು (1 ಮಿಲಿಯನ್) ಸಂಸ್ಥೆಗಳು ಆಚರಿಸುತ್ತಿವೆ" ಎಂದು ಶ್ರೀ ಪ್ರತಾಪ್ರಾವ್ ಜಾಧವ್ ಹೇಳಿದರು.
ಆಂಧ್ರಪ್ರದೇಶ ಸರ್ಕಾರವನ್ನು ಅಭಿನಂದಿಸಿದ ಕೇಂದ್ರ ಆಯುಷ್ ಸಚಿವರು, "ಮುಖ್ಯಮಂತ್ರಿ ಶ್ರೀ ಚಂದ್ರಬಾಬು ನಾಯ್ಡು ಅವರ ನೇತೃತ್ವದಲ್ಲಿ, ಮೇ 21 ರಂದು ಆಂಧ್ರಪ್ರದೇಶದಲ್ಲಿ 'ಯೋಗಆಂಧ್ರ ಅಭಿಯಾನ'ವನ್ನು ಪ್ರಾರಂಭಿಸಲಾಯಿತು. ಈ ಅಭಿಯಾನದ ಭಾಗವಾಗಿ, 22,000ಕ್ಕೂ ಹೆಚ್ಚು ಬುಡಕಟ್ಟು ವಿದ್ಯಾರ್ಥಿಗಳು ನಿನ್ನೆ 15 ನಿಮಿಷಗಳಲ್ಲಿ 12 ಸುತ್ತು ಸೂರ್ಯ ನಮಸ್ಕಾರವನ್ನು ಪ್ರದರ್ಶಿಸಿದರು, ಗಿನ್ನಿಸ್ ವಿಶ್ವ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರುಗಳನ್ನು ದಾಖಲಿಸಿದರು" ಎಂದು ಹೇಳಿದರು.
ಪ್ರಧಾನಮಂತ್ರಿಯವರಿಂದ ಪ್ರೇರಿತರಾಗಿ, ಆಯುಷ್ ಸಚಿವಾಲಯವು ಸಾರ್ವಜನಿಕರಲ್ಲಿ ಆರೋಗ್ಯಕರ ಆಹಾರವನ್ನು ಉತ್ತೇಜಿಸಲು ಒಂದು ಸಣ್ಣ ಉಪಕ್ರಮವನ್ನು ತೆಗೆದುಕೊಂಡಿದೆ ಮತ್ತು ಇಂದು, ದಿಲ್ಲಿಯ 70 ಸ್ಥಳಗಳಲ್ಲಿ, ಸಚಿವಾಲಯವು ಈ ಐ.ಡಿ.ವೈ. (IDY) ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಆಯುಷ್ ಆಹಾರವನ್ನು ವಿತರಿಸುತ್ತಿದೆ ಎಂದು ಅವರು ಹೇಳಿದರು. "ಈ ಆಯುಷ್ ಆಹಾರವು ಮೊರಿಂಗಾ ಆಧಾರಿತ ಆಹಾರ ಉತ್ಪನ್ನಗಳನ್ನು ಆಧರಿಸಿದೆ ಮತ್ತು ಜನರಿಗೆ ಆರೋಗ್ಯಕರ ಹಾಗು ರುಚಿಕರವಾದ ಆಹಾರಕ್ಕೆ ಪರ್ಯಾಯವಾಗಿ ಹೊರಹೊಮ್ಮಲಿದೆ" ಎಂದೂ ಅವರು ಹೇಳಿದರು.
ಈ ಐತಿಹಾಸಿಕ ಕಾರ್ಯಕ್ರಮವನ್ನು ಆಯೋಜಿಸುವ ಗೌರವವನ್ನು ಆಂಧ್ರಪ್ರದೇಶಕ್ಕೆ ನೀಡಿದ ಪ್ರಧಾನಿಗೆ ಧನ್ಯವಾದ ಹೇಳಿದ ಮುಖ್ಯಮಂತ್ರಿ ಶ್ರೀ ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶವು 11 ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಅಭೂತಪೂರ್ವ ಉತ್ಸಾಹದಿಂದ ಆಚರಿಸಿದೆ, 3 ಲಕ್ಷಕ್ಕೂ ಹೆಚ್ಚು ನಾಗರಿಕರು ವಿಶಾಖಪಟ್ಟಣದಲ್ಲಿ ಸಾಮೂಹಿಕ ಯೋಗ ಪ್ರದರ್ಶನಕ್ಕಾಗಿ ಒಟ್ಟುಗೂಡಿದರು ಎಂದರು. "ಈ ಕಾರ್ಯಕ್ರಮವು ರಾಜ್ಯಾದ್ಯಂತ 2.17 ಕೋಟಿ ಭಾಗವಹಿಸುವವರನ್ನು ಒಳಗೊಂಡು ಒಂದು ತಿಂಗಳ ಕಾಲ ನಡೆದ ಯಶಸ್ವಿ ಯೋಗಾಂಧ್ರ ಅಭಿಯಾನದೊಂದಿಗೆ ಸಮಾರೋಪಗೊಂಡಿತು, ಇದು ಹಲವಾರು ದಾಖಲೆಗಳನ್ನು ಸೃಷ್ಟಿಸಿತು" ಎಂದು ಅವರು ಹೇಳಿದರು.
ಕೇಂದ್ರ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಉಧಂಪುರದಲ್ಲಿ ನಡೆದ ಐಡಿವೈ ಆಚರಣೆಗಳಲ್ಲಿ ಭಾಗವಹಿಸಿದರು. "ನಮ್ಮ ಋಷಿಮುನಿಗಳು ನೀಡಿದ ಯೋಗದ ಪ್ರಾಚೀನ ಸಂಪ್ರದಾಯವನ್ನು ಈಗ ಜಾಗತಿಕವಾಗಿ ಅನುಸರಿಸಲಾಗುತ್ತಿದೆ. ಭಾರತದಲ್ಲಿ, ಯೋಗವು ಕೇವಲ ಒಂದು ಅಭ್ಯಾಸವಲ್ಲ, ಅದು ಜೀವನ ವಿಧಾನವಾಗಿದೆ." ಎಂದವ್ರು ಹೇಳಿದರು.
ಗೃಹ ಸಚಿವರಾದ ಶ್ರೀ ಅಮಿತ್ ಶಾ ಅಹಮದಾಬಾದ್ನಲ್ಲಿ ನಡೆದ ಐಡಿವೈ ಆಚರಣೆಗಳಲ್ಲಿ ಭಾಗವಹಿಸಿದರು ಮತ್ತು "ಎಕ್ಸ್" ನಲ್ಲಿ ಅವರು ಯೋಗವು ಮನಸ್ಸು, ದೇಹ ಮತ್ತು ಮೆದುಳಿನ ನಡುವೆ ಏಕತೆಯನ್ನು ತರುತ್ತದೆ ಹಾಗು ಪ್ರಪಂಚದಾದ್ಯಂತದ ಜನರ ದೈನಂದಿನ ದಿನಚರಿಯ ಅವಿಭಾಜ್ಯ ಅಂಗವಾಗಿದೆ ಎಂದು ಬರೆದಿದ್ದಾರೆ.

ರಾಷ್ಟ್ರವ್ಯಾಪಿ ಉತ್ಸಾಹಕ್ಕೆ ಮತ್ತಷ್ಟು ಮೆರುಗು ನೀಡುವಂತೆ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಅವರು ಹೊಸದಿಲ್ಲಿಯ ಕರ್ತವ್ಯ ಪಥದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದರು. ಕಳೆದ ದಶಕದಲ್ಲಿ ಯೋಗದ ಪರಿವರ್ತನಾ ಪ್ರಯಾಣವನ್ನು ಪ್ರತಿಬಿಂಬಿಸುತ್ತಾ, ಅವರು ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಪೋಸ್ಟ್ ಮಾಡಿದ್ದಾರೆ, "ಯೋಗವು ನಮ್ಮ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆಯಾಮಗಳಲ್ಲಿ ಸಮತೋಲನವನ್ನು ಪೋಷಿಸುತ್ತದೆ, ಆರೋಗ್ಯಕರ ಮತ್ತು ಹೆಚ್ಚು ತೃಪ್ತಿಕರ ಜೀವನವನ್ನು ಶಕ್ತಗೊಳಿಸುತ್ತದೆ. ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಿಂದಾಗಿ ಯೋಗವು ಜಾಗತಿಕ ಮನ್ನಣೆಯನ್ನು ಗಳಿಸಿದೆ. ಕಳೆದ 10 ವರ್ಷಗಳಲ್ಲಿ, ಪ್ರಪಂಚದಾದ್ಯಂತ ಜನರು ಯೋಗವನ್ನು ತಮ್ಮ ದೈನಂದಿನ ಜೀವನದ ಅತ್ಯಗತ್ಯ ಭಾಗವಾಗಿ ಸ್ವೀಕರಿಸಿದ್ದಾರೆ." ಎಂದು ಅದರಲ್ಲಿ ಹೇಳಿದ್ದಾರೆ. 11ನೇ ಅಂತಾರಾಷ್ಟ್ರೀಯ ಯೋಗ ದಿನದಂದು ಶ್ರೀ ನಡ್ಡಾ ಅವರು ಎಲ್ಲಾ ನಾಗರಿಕರಿಗೆ ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದರು, ಯೋಗವನ್ನು ಜೀವನ ವಿಧಾನವಾಗಿ ಅಭ್ಯಾಸ ಮಾಡುವುದನ್ನು ಮತ್ತು ಉತ್ತೇಜಿಸುವುದನ್ನು ಮುಂದುವರಿಸಲು ಒತ್ತಾಯಿಸಿದರು.
11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಇಂದು ದಿಲ್ಲಿಯಲ್ಲಿ 100ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು ಎಂಬುದು ಗಮನಾರ್ಹ.
*****
(Release ID: 2138558)