ಪ್ರಧಾನ ಮಂತ್ರಿಯವರ ಕಛೇರಿ
ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ
ಯೋಗವು ಇಡೀ ಜಗತ್ತನ್ನು ಒಂದುಗೂಡಿಸಿದೆ: ಪ್ರಧಾನಮಂತ್ರಿ
ಗಡಿಗಳನ್ನು ಮೀರಿ, ಹಿನ್ನೆಲೆಗಳನ್ನು ಮೀರಿ, ವಯಸ್ಸು ಅಥವಾ ಸಾಮರ್ಥ್ಯ ಮೀರಿ ಎಲ್ಲರಿಗಾಗಿ ಯೋಗವಿದೆ: ಪ್ರಧಾನಮಂತ್ರಿ
ಯೋಗವು ನಮ್ಮನ್ನು ಪ್ರಪಂಚದೊಂದಿಗೆ ಏಕತೆಯೆಡೆಗಿನ ಪಯಣಕ್ಕೆ ಕೊಂಡೊಯ್ಯುತ್ತದೆ, ನಾವು ಪ್ರತ್ಯೇಕ ವ್ಯಕ್ತಿಗಳಲ್ಲ, ಪ್ರಕೃತಿಯ ಭಾಗ ಎಂದು ಕಲಿಸುತ್ತದೆ: ಪ್ರಧಾನಮಂತ್ರಿ
ಯೋಗವು ನಮ್ಮನ್ನು 'ನಾನು' ಎನ್ನುವುದರಿಂದ 'ನಾವು' ಎನ್ನುವುದರ ಕಡೆಗೆ ಕೊಂಡೊಯ್ಯುವ ಒಂದು ವ್ಯವಸ್ಥೆ: ಪ್ರಧಾನಮಂತ್ರಿ
ಯೋಗವು ಮಾನವೀಯತೆಗೆ ಅಗತ್ಯವಿರುವ 'ವಿರಾಮ ಬಟನ್'; ಉಸಿರಾಡಲು, ಸಮತೋಲನ ಸಾಧಿಸಲು, ಮತ್ತೊಮ್ಮೆ ಪರಿಪೂರ್ಣರಾಗಲು: ಪ್ರಧಾನಮಂತ್ರಿ
ಈ ಯೋಗ ದಿನವು 'ಮಾನವೀಯತೆಗಾಗಿ ಯೋಗ 2.0'ರ ಆರಂಭವಾಗಲಿ, ಅಲ್ಲಿ ಆಂತರಿಕ ಶಾಂತಿಯು ಜಾಗತಿಕ ನೀತಿಯಾಗಲಿ: ಪ್ರಧಾನಮಂತ್ರಿ
Posted On:
21 JUN 2025 7:52AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಪ್ರಧಾನಮಂತ್ರಿಯವರು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವ ವಹಿಸಿ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಭಾರತ ಮತ್ತು ಪ್ರಪಂಚದಾದ್ಯಂತ ಇರುವ ಜನರಿಗೆ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳನ್ನು ತಿಳಿಸಿದರು. ಈ ವರ್ಷವು 11ನೇ ಬಾರಿಗೆ ಜೂನ್ 21ರಂದು ಜಗತ್ತು ಒಟ್ಟಾಗಿ ಸೇರಿ ಯೋಗವನ್ನು ಸಾಮೂಹಿಕವಾಗಿ ಅಭ್ಯಾಸ ಮಾಡುತ್ತಿದೆ ಎಂಬುದನ್ನು ಅವರು ಒತ್ತಿ ಹೇಳಿದರು. ಯೋಗದ ಸಾರಾಂಶವು "ಒಗ್ಗೂಡಿಸುವುದು" ಎಂದು ಅವರು ಹೇಳಿದರು ಮತ್ತು ಯೋಗವು ಜಗತ್ತನ್ನು ಒಗ್ಗೂಡಿಸಿರುವುದನ್ನು ನೋಡುವುದು ಸಂತೋಷದ ಸಂಗತಿ ಎಂದರು. ಕಳೆದ ದಶಕದಲ್ಲಿ ಯೋಗದ ಪಯಣವನ್ನು ನೆನಪಿಸಿಕೊಂಡ ಶ್ರೀ ಮೋದಿ ಅವರು, ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಭಾರತವು ಪ್ರಸ್ತಾಪಿಸಿದ ಕ್ಷಣವನ್ನು ಸ್ಮರಿಸಿದರು. 175 ದೇಶಗಳು ಈ ಪ್ರಸ್ತಾಪವನ್ನು ಬೆಂಬಲಿಸಿದವು, ಇದು ಅಂತಹ ವ್ಯಾಪಕ ಜಾಗತಿಕ ಏಕತೆಗೆ ಅಪರೂಪದ ಉದಾಹರಣೆಯಾಗಿದೆ ಎಂದು ಅವರು ಹೇಳಿದರು. ಇದು ಕೇವಲ ಒಂದು ಪ್ರಸ್ತಾಪಕ್ಕೆ ದೊರೆತ ಬೆಂಬಲವಲ್ಲ, ಬದಲಿಗೆ ಮಾನವೀಯತೆಯ ಉನ್ನತ ಒಳಿತಿಗಾಗಿ ಜಗತ್ತು ಮಾಡಿದ ಸಾಮೂಹಿಕ ಪ್ರಯತ್ನವನ್ನು ಇದು ಪ್ರತಿನಿಧಿಸುತ್ತದೆ ಎಂದು ಅವರು ಒತ್ತಿ ಹೇಳಿದರು. "ಹನ್ನೊಂದು ವರ್ಷಗಳ ನಂತರ, ಯೋಗವು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಜೀವನಶೈಲಿಯ ಅವಿಭಾಜ್ಯ ಅಂಗವಾಗಿದೆ" ಎಂದು ಅವರು ಸೇರಿಸಿದರು. ದಿವ್ಯಾಂಗ ವ್ಯಕ್ತಿಗಳು ಬ್ರೈಲ್ನಲ್ಲಿ ಯೋಗ ಪಠ್ಯಗಳನ್ನು ಓದುತ್ತಿರುವುದನ್ನು ಮತ್ತು ವಿಜ್ಞಾನಿಗಳು ಅಂತರಿಕ್ಷದಲ್ಲಿ ಯೋಗವನ್ನು ಅಭ್ಯಾಸ ಮಾಡುತ್ತಿರುವುದನ್ನು ನೋಡಿ ಪ್ರಧಾನಮಂತ್ರಿಯವರು ಹೆಮ್ಮೆ ವ್ಯಕ್ತಪಡಿಸಿದರು. ಗ್ರಾಮೀಣ ಪ್ರದೇಶದ ಯುವಕರು ಯೋಗ ಒಲಿಂಪಿಯಾಡ್ ಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿರುವುದನ್ನು ಸಹ ಅವರು ಗಮನಿಸಿದರು. ಸಿಡ್ನಿ ಒಪೇರಾ ಹೌಸ್ನ ಮೆಟ್ಟಿಲುಗಳಾಗಿರಲಿ, ಮೌಂಟ್ ಎವರೆಸ್ಟ್ನ ಶಿಖರವಾಗಿರಲಿ ಅಥವಾ ಸಾಗರದ ವಿಶಾಲ ವ್ಯಾಪ್ತಿಯಾಗಿರಲಿ, "ಯೋಗ ಎಲ್ಲರಿಗೂ ಮತ್ತು ಎಲ್ಲದಕ್ಕೂ, ಗಡಿಗಳನ್ನು ಮೀರಿ, ಹಿನ್ನೆಲೆಗಳನ್ನು ಮೀರಿ, ವಯಸ್ಸು ಅಥವಾ ಸಾಮರ್ಥ್ಯವನ್ನು ಮೀರಿ" ಎಂಬ ಸಂದೇಶ ಒಂದೇ ಆಗಿರುತ್ತದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು.
ವಿಶಾಖಪಟ್ಟಣಂನಲ್ಲಿ ಇರುವುದಕ್ಕೆ ತೃಪ್ತಿ ವ್ಯಕ್ತಪಡಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ನಗರವನ್ನು ಪ್ರಕೃತಿ ಮತ್ತು ಪ್ರಗತಿಯ ಸಂಗಮ ಎಂದು ಬಣ್ಣಿಸಿದರು. ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ಆಯೋಜಿಸಿದ್ದಕ್ಕಾಗಿ ಜನರನ್ನು ಶ್ಲಾಘಿಸಿದ ಅವರು, ನಾಯಕತ್ವಕ್ಕಾಗಿ ಶ್ರೀ ಚಂದ್ರಬಾಬು ನಾಯ್ಡು ಮತ್ತು ಶ್ರೀ ಪವನ್ ಕಲ್ಯಾಣ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಅವರ ನಾಯಕತ್ವದಲ್ಲಿ ಆಂಧ್ರಪ್ರದೇಶವು ಗಮನಾರ್ಹ ಉಪಕ್ರಮವಾದ 'ಯೋಗಾಂಧ್ರ ಅಭಿಯಾನ'ವನ್ನು ಪ್ರಾರಂಭಿಸಿದೆ ಎಂದು ಪ್ರಧಾನಿ ಎತ್ತಿ ತೋರಿಸಿದರು. ಶ್ರೀ ನಾರಾ ಲೋಕೇಶ್ ಅವರ ಪ್ರಯತ್ನಗಳನ್ನು ಅವರು ವಿಶೇಷವಾಗಿ ಶ್ಲಾಘಿಸಿದರು, ಯೋಗವು ನಿಜವಾದ ಸಾಮಾಜಿಕ ಆಚರಣೆಯಾಗಿ ಹೇಗೆ ಹೊರಹೊಮ್ಮಿದೆ ಮತ್ತು ಸಮಾಜದ ಪ್ರತಿಯೊಂದು ವರ್ಗವನ್ನು ಹೇಗೆ ಇದರಲ್ಲಿ ಸೇರಿಸಿಕೊಳ್ಳಬಹುದು ಎಂಬುದನ್ನು ಅವರು ತೋರಿಸಿದ್ದಾರೆ ಎಂದು ಹೇಳಿದರು. ಕಳೆದ ಒಂದರಿಂದ ಒಂದೂವರೆ ತಿಂಗಳಲ್ಲಿ, ಶ್ರೀ ಲೋಕೇಶ್ ಅವರು ಯೋಗಾಂಧ್ರ ಅಭಿಯಾನದ ಮೂಲಕ ಅನುಕರಣೀಯ ಬದ್ಧತೆಯನ್ನು ತೋರಿಸಿದ್ದಾರೆ ಮತ್ತು ಅವರ ಪ್ರಯತ್ನಗಳು ಪ್ರಶಂಸೆಗೆ ಅರ್ಹವಾಗಿವೆ ಎಂದು ಶ್ರೀ ಮೋದಿ ನುಡಿದರು.
ಎರಡು ಕೋಟಿಗೂ ಹೆಚ್ಚು ಜನರು 'ಯೋಗಾಂಧ್ರ ಅಭಿಯಾನ'ದಲ್ಲಿ ಭಾಗವಹಿಸಿರುವುದು ಸಾರ್ವಜನಿಕ ಉತ್ಸಾಹದ ಒಂದು ಸ್ಪಷ್ಟ ಪ್ರತಿಬಿಂಬ ಎಂದು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. ಇದೇ ಉತ್ಸಾಹವು ವಿಕಸಿತ ಭಾರತದ ಅಡಿಪಾಯ ಎಂದು ಅವರು ಒತ್ತಿ ಹೇಳಿದರು. ಯಾವುದೇ ಉದ್ದೇಶವನ್ನು ನಾಗರಿಕರು ಸ್ವತಃ ತಮ್ಮದಾಗಿಸಿಕೊಂಡು ಸಕ್ರಿಯವಾಗಿ ಭಾಗವಹಿಸಿದಾಗ, ಯಾವುದೇ ಗುರಿ ತಲುಪಲು ಅಸಾಧ್ಯವಾಗುವುದಿಲ್ಲ ಎಂದು ಪ್ರಧಾನಿ ಹೇಳಿದರು. ವಿಶಾಖಪಟ್ಟಣಂನಲ್ಲಿ ನಡೆದ ಈ ಕಾರ್ಯಕ್ರಮದುದ್ದಕ್ಕೂ ಜನರ ಸದ್ಭಾವನೆ ಮತ್ತು ಉತ್ಸಾಹಭರಿತ ಪ್ರಯತ್ನಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದವು ಎಂದು ಅವರು ನುಡಿದರು.
ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನದ ಧ್ಯೇಯವಾದ " ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ" ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಈ ಧ್ಯೇಯವಾಕ್ಯವು ಅತಿದೊಡ್ಡ ಸತ್ಯವೊಂದನ್ನು ತೆರೆದಿಡುತ್ತದೆ ಎಂದರು: ಅದೆಂದರೆ, ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ಆರೋಗ್ಯವೂ ಪರಸ್ಪರ ಹೆಣೆದುಕೊಂಡಿದೆ. ನಮ್ಮ ಆಹಾರವನ್ನು ನೀಡುವ ಮಣ್ಣು, ನೀರನ್ನು ಪೂರೈಸುವ ನದಿಗಳು, ಪರಿಸರ ವ್ಯವಸ್ಥೆ ಹಂಚಿಕೊಳ್ಳುವ ಪ್ರಾಣಿಗಳು ಮತ್ತು ನಮಗೆ ಪೋಷಣೆ ನೀಡುವ ಸಸ್ಯಗಳ ಆರೋಗ್ಯದ ಮೇಲೆ ಮಾನವರ ಯೋಗಕ್ಷೇಮ ಅವಲಂಬಿತವಾಗಿದೆ ಎಂದು ಅವರು ವಿವರಿಸಿದರು. ಯೋಗವು ಈ ಪರಸ್ಪರ ಸಂಬಂಧವನ್ನು ನಮಗೆ ಅರಿವು ಮೂಡಿಸುತ್ತದೆ ಮತ್ತು ಜಗತ್ತಿನೊಂದಿಗೆ ಏಕತೆ ಸಾಧಿಸುವ ಪಯಣದಲ್ಲಿ ನಮ್ಮನ್ನು ಮಾರ್ಗದರ್ಶಿಸುತ್ತದೆ ಎಂದು ಶ್ರೀ ಮೋದಿ ನುಡಿದರು. "ನಾವು ಪ್ರತ್ಯೇಕ ವ್ಯಕ್ತಿಗಳಲ್ಲ, ಬದಲಿಗೆ ಪ್ರಕೃತಿಯ ಅವಿಭಾಜ್ಯ ಅಂಗಗಳು ಎಂದು ಯೋಗ ಕಲಿಸುತ್ತದೆ. ಆರಂಭದಲ್ಲಿ, ನಾವು ನಮ್ಮ ಸ್ವಂತ ಆರೋಗ್ಯ ಮತ್ತು ಯೋಗಕ್ಷೇಮ ನೋಡಿಕೊಳ್ಳಲು ಕಲಿಯುತ್ತೇವೆ, ಆದರೆ ಕ್ರಮೇಣ, ಈ ಕಾಳಜಿ ನಮ್ಮ ಪರಿಸರ, ಸಮಾಜ ಮತ್ತು ಇಡೀ ಗ್ರಹಕ್ಕೆ ವಿಸ್ತರಿಸುತ್ತದೆ. ಯೋಗವು ಆಳವಾದ ವೈಯಕ್ತಿಕ ಶಿಸ್ತಾಗಿದ್ದು, ಅದೇ ಸಮಯದಲ್ಲಿ, ಅದು ಒಂದು ಸಾಮೂಹಿಕ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ – ಇದು ವ್ಯಕ್ತಿಗಳನ್ನು 'ನಾನು' ಎಂಬ ಭಾವನೆಯಿಂದ 'ನಾವು' ಎಂಬ ಸಮಷ್ಟಿ ಚಿಂತನೆಗೆ ಕೊಂಡೊಯ್ಯುತ್ತದೆ" ಎಂದು ಪ್ರಧಾನಮಂತ್ರಿಗಳು ತಿಳಿಸಿದರು.
"ನಾನು" ಇಂದ "ನಾವು" ಎಂಬ ಮನೋಭಾವವು ಭಾರತದ ಆತ್ಮವನ್ನು ಒಳಗೊಂಡಿದೆ ಎಂದು ಶ್ರೀ ಮೋದಿ ಹೇಳಿದರು. ವ್ಯಕ್ತಿಯು ಸ್ವಾರ್ಥವನ್ನು ಮೀರಿ ನಿಂತು ವಿಶಾಲ ಸಮಾಜದ ಬಗ್ಗೆ ಯೋಚಿಸಲು ಪ್ರಾರಂಭಿಸಿದಾಗ, ಎಲ್ಲ ಮಾನವಕುಲದ ಕಲ್ಯಾಣ ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಭಾರತೀಯ ಸಂಸ್ಕೃತಿಯನ್ನು ಉಲ್ಲೇಖಿಸಿದ ಅವರು, "ಸರ್ವೇ ಭವಂತು ಸುಖಿನಃ" - ಎಲ್ಲರ ಕಲ್ಯಾಣವು ಒಬ್ಬನ ಪವಿತ್ರ ಕರ್ತವ್ಯ ಮತ್ತು 'ನಾನು' ಇಂದ 'ನಾವು' ಗೆ ಸಾಗುವ ಈ ಪಯಣವು ಸೇವೆ, ಸಮರ್ಪಣೆ ಮತ್ತು ಸಹಬಾಳ್ವೆಯ ಅಡಿಪಾಯ ರೂಪಿಸುವುದನ್ನು ನಮಗೆ ಕಲಿಸುತ್ತದೆ ಎಂದು ಹೇಳಿದರು. ಇದೇ ಚಿಂತನೆಯು ಸಾಮಾಜಿಕ ಸಾಮರಸ್ಯ ಬೆಳೆಸುತ್ತದೆ ಎಂದು ಪ್ರಧಾನಮಂತ್ರಿ ಅವರು ತಿಳಿಸಿದರು.
ಜಗತ್ತಿನ ಹಲವೆಡೆ ಹೆಚ್ಚುತ್ತಿರುವ ಒತ್ತಡ, ಅಶಾಂತಿ ಮತ್ತು ಅಸ್ಥಿರತೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಇಂತಹ ಸಮಯದಲ್ಲಿ ಯೋಗವು ಶಾಂತಿಗೆ ಮಾರ್ಗವನ್ನು ತೋರಿಸುತ್ತದೆ ಎಂದು ಹೇಳಿದರು. "ಯೋಗವು ಮಾನವಕುಲಕ್ಕೆ ಅಗತ್ಯವಿರುವ ಒಂದು ವಿರಾಮ ಬಟನ್ (pause button) ಇದ್ದಂತೆ – ಉಸಿರಾಡಲು, ಸಮತೋಲನ ಸಾಧಿಸಲು ಮತ್ತು ಮತ್ತೆ ಪರಿಪೂರ್ಣವಾಗಲು" ಎಂದು ಅವರು ಪ್ರತಿಪಾದಿಸಿದರು. ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು ಜಾಗತಿಕ ಸಮುದಾಯಕ್ಕೆ ವಿಶೇಷ ಮನವಿ ಮಾಡಿದರು: "ಈ ಯೋಗ ದಿನವು 'ಮಾನವೀಯತೆಗಾಗಿ ಯೋಗ 2.0' ರ ಪ್ರಾರಂಭವಾಗಲಿ, ಅಲ್ಲಿ ಆಂತರಿಕ ಶಾಂತಿಯೇ ಜಾಗತಿಕ ನೀತಿಯಾಗಲಿ." ಯೋಗ ಕೇವಲ ವೈಯಕ್ತಿಕ ಅಭ್ಯಾಸವಾಗಿ ಉಳಿಯಬಾರದು, ಬದಲಾಗಿ ಜಾಗತಿಕ ಸಹಭಾಗಿತ್ವಕ್ಕೆ ಒಂದು ಮಾಧ್ಯಮವಾಗಿ ಬೆಳೆಯಬೇಕು ಎಂದು ಅವರು ಒತ್ತಿ ಹೇಳಿದರು. ಪ್ರತಿಯೊಂದು ರಾಷ್ಟ್ರ ಮತ್ತು ಪ್ರತಿಯೊಂದು ಸಮಾಜವು ಯೋಗವನ್ನು ತಮ್ಮ ಜೀವನಶೈಲಿ ಮತ್ತು ಸಾರ್ವಜನಿಕ ನೀತಿಯಲ್ಲಿ ಅಳವಡಿಸಿಕೊಳ್ಳುವಂತೆ ಅವರು ಕರೆ ನೀಡಿದರು. ಶಾಂತಿಯುತ, ಸಮತೋಲಿತ ಮತ್ತು ಸುಸ್ಥಿರ ಜಗತ್ತನ್ನು ಮುನ್ನಡೆಸಲು ಸಾಮೂಹಿಕ ಪ್ರಯತ್ನವನ್ನು ಶ್ರೀ ಮೋದಿ ಆಶಿಸಿದರು. "ಯೋಗವು ಜಗತ್ತನ್ನು ಸಂಘರ್ಷದಿಂದ ಸಹಕಾರದತ್ತ ಮತ್ತು ಒತ್ತಡದಿಂದ ಪರಿಹಾರಗಳತ್ತ ಕೊಂಡೊಯ್ಯಬೇಕು" ಎಂದು ಅವರು ಸೇರಿಸಿದರು.
ಯೋಗವನ್ನು ಜಾಗತಿಕವಾಗಿ ಪ್ರಚಾರ ಮಾಡಲು ಆಧುನಿಕ ಸಂಶೋಧನೆಯ ಮೂಲಕ ಅದರ ವೈಜ್ಞಾನಿಕ ಆಧಾರವನ್ನು ಬಲಪಡಿಸುವ ಭಾರತದ ಪ್ರಯತ್ನಗಳನ್ನು ಪ್ರಧಾನಮಂತ್ರಿಯವರು ಎತ್ತಿ ತೋರಿಸಿದರು. ದೇಶದ ಪ್ರಮುಖ ವೈದ್ಯಕೀಯ ಸಂಸ್ಥೆಗಳು ಯೋಗ ಸಂಶೋಧನೆಯಲ್ಲಿ ಸಕ್ರಿಯವಾಗಿ ತೊಡಗಿವೆ ಎಂದ ಅವರು, ಸಮಕಾಲೀನ ವೈದ್ಯಕೀಯ ಪದ್ಧತಿಗಳಲ್ಲಿ ಯೋಗದ ವೈಜ್ಞಾನಿಕ ಪ್ರಸ್ತುತತೆ ಸ್ಥಾಪಿಸುವುದು ಇದರ ಗುರಿ ಎಂದು ತಿಳಿಸಿದರು. ಭಾರತವು ತನ್ನ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಗಳ ಮೂಲಕ ಯೋಗ ಕ್ಷೇತ್ರದಲ್ಲಿ ಆಧಾರ-ಆಧಾರಿತ ಚಿಕಿತ್ಸೆ (evidence-based therapy) ಯನ್ನು ಉತ್ತೇಜಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಯ ಅನುಕರಣೀಯ ಕೊಡುಗೆಯನ್ನು ಶ್ರೀ ಮೋದಿ ಶ್ಲಾಘಿಸಿದರು. ಏಮ್ಸ್ನ ಸಂಶೋಧನಾ ವರದಿಗಳನ್ನು ಉಲ್ಲೇಖಿಸಿ, ಹೃದಯ ಮತ್ತು ನರವೈಜ್ಞಾನಿಕ ಕಾಯಿಲೆಗಳ ಚಿಕಿತ್ಸೆಯಲ್ಲಿ ಹಾಗೂ ಮಹಿಳೆಯರ ಆರೋಗ್ಯ ಮತ್ತು ಮಾನಸಿಕ ಯೋಗಕ್ಷೇಮವನ್ನು ಸುಧಾರಿಸುವಲ್ಲಿ ಯೋಗವು ಗಮನಾರ್ಹ ಪರಿಣಾಮ ಬೀರಿದೆ ಎಂದು ಅವರು ಹೇಳಿದರು.
ಶ್ರೀ ಮೋದಿ ಅವರು ರಾಷ್ಟ್ರೀಯ ಆಯುಷ್ ಮಿಷನ್ನ ಮೂಲಕ ದೇಶಾದ್ಯಂತ ಯೋಗ ಮತ್ತು ಆರೋಗ್ಯದ ಸಂದೇಶವನ್ನು ಸಕ್ರಿಯವಾಗಿ ಮುನ್ನಡೆಸಲಾಗುತ್ತಿದೆ ಎಂದು ಹೇಳಿದರು. ಈ ಪ್ರಯತ್ನದಲ್ಲಿ ಡಿಜಿಟಲ್ ತಂತ್ರಜ್ಞಾನವು ಮಹತ್ವದ ಪಾತ್ರವನ್ನು ವಹಿಸಿದೆ ಎಂದು ಅವರು ಅಭಿಪ್ರಾಯಪಟ್ಟರು. ಯೋಗ ಪೋರ್ಟಲ್ ಮತ್ತು ಯೋಗಾಂದ್ರ ಪೋರ್ಟಲ್ ಮೂಲಕ ದೇಶಾದ್ಯಂತ ಹತ್ತು ಲಕ್ಷಕ್ಕೂ ಹೆಚ್ಚು ಕಾರ್ಯಕ್ರಮಗಳು ದಾಖಲಾಗಿವೆ, ಇದು ದೇಶಾದ್ಯಂತ ಯೋಗದ ವ್ಯಾಪ್ತಿಯ ಗಮನಾರ್ಹ ವಿಸ್ತರಣೆಯನ್ನು ಸೂಚಿಸುತ್ತದೆ. ಭಾರತದ ಮೂಲೆಮೂಲೆಯಲ್ಲೂ ನಡೆಯುತ್ತಿರುವ ಕಾರ್ಯಕ್ರಮಗಳ ಪ್ರಮಾಣವು ಯೋಗದ ಬೆಳೆಯುತ್ತಿರುವ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ತಿಳಿಸಿದರು.
"ಹೀಲ್ ಇನ್ ಇಂಡಿಯಾ" ಮಂತ್ರದ ಜಾಗತಿಕ ಜನಪ್ರಿಯತೆ ಹೆಚ್ಚುತ್ತಿರುವುದನ್ನು ಗಮನಿಸಿದ ಶ್ರೀ ಮೋದಿ ಅವರು, ಭಾರತವು ಚಿಕಿತ್ಸೆಗಾಗಿ ಪ್ರಮುಖ ತಾಣವಾಗಿ ಹೊರಹೊಮ್ಮುತ್ತಿದೆ ಎಂದು ಒತ್ತಿ ಹೇಳಿದರು ಮತ್ತು ಯೋಗವು ಈ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದರು. ಅಭ್ಯಾಸವನ್ನು ಪ್ರಮಾಣೀಕರಿಸಲು ಸಾಮಾನ್ಯ ಯೋಗ ಪ್ರೋಟೋಕಾಲ್ ಅಭಿವೃದ್ಧಿಪಡಿಸಲಾಗಿದೆ ಎಂಬುದು ತೃಪ್ತಿ ತಂದಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. 6.5 ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರಿಗೆ ತರಬೇತಿ ನೀಡಿದ ಮತ್ತು ಸುಮಾರು 130 ಸಂಸ್ಥೆಗಳನ್ನು ಗುರುತಿಸಿದ ಯೋಗ ಪ್ರಮಾಣೀಕರಣ ಮಂಡಳಿಯ ಪ್ರಯತ್ನಗಳನ್ನು ಒತ್ತಿಹೇಳಿದ ಪ್ರಧಾನಮಂತ್ರಿಯವರು, ಸಮಗ್ರ ಆರೋಗ್ಯ ಪರಿಸರ ವ್ಯವಸ್ಥೆ ನಿರ್ಮಿಸುವ ಭಾಗವಾಗಿ ವೈದ್ಯಕೀಯ ಕಾಲೇಜುಗಳಲ್ಲಿ 10 ದಿನಗಳ ಯೋಗ ಮಾಡ್ಯೂಲ್ ಸೇರಿಸಲಾಗಿದೆ ಎಂದು ಸಹ ಉಲ್ಲೇಖಿಸಿದರು. ದೇಶಾದ್ಯಂತದ ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ತರಬೇತಿ ಪಡೆದ ಯೋಗ ಶಿಕ್ಷಕರನ್ನು ನಿಯೋಜಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಭಾರತದ ಆರೋಗ್ಯ ಪರಿಸರ ವ್ಯವಸ್ಥೆಯ ಲಾಭವು ಜಾಗತಿಕ ಸಮುದಾಯಕ್ಕೆ ಸಿಗುವಂತೆ ಮಾಡಲು, ವಿಶೇಷ ಇ-ಆಯುಷ್ ವೀಸಾಗಳನ್ನು ಒದಗಿಸುವುದಾಗಿ ಪ್ರಧಾನಮಂತ್ರಿ ಅವರು ಘೋಷಿಸಿದರು.
ಜಾಗತಿಕ ಸವಾಲಾಗಿ ಬೆಳೆಯುತ್ತಿರುವ ಬೊಜ್ಜಿನ ಸಮಸ್ಯೆಯತ್ತ ಗಮನ ಸೆಳೆದ ಪ್ರಧಾನಮಂತ್ರಿ ನರೇಂದ್ರ ಮೋದಿ, ಈ ವಿಷಯದ ಕುರಿತು 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ತಾವು ವಿವರವಾಗಿ ಚರ್ಚಿಸಿದ್ದನ್ನು ಮತ್ತು ದೈನಂದಿನ ಆಹಾರದಲ್ಲಿ ತೈಲ ಬಳಕೆಯನ್ನು 10 ಪ್ರತಿಶತದಷ್ಟು ಕಡಿಮೆ ಮಾಡಲು ಒಂದು ಸವಾಲನ್ನು ಪ್ರಾರಂಭಿಸಿದ್ದನ್ನು ನೆನಪಿಸಿಕೊಂಡರು. ಈ ಉಪಕ್ರಮದಲ್ಲಿ ಭಾಗವಹಿಸುವಂತೆ ಭಾರತ ಮತ್ತು ವಿಶ್ವದ ನಾಗರಿಕರಿಗೆ ಅವರು ಮತ್ತೆ ಮನವಿ ಮಾಡಿದರು. ಪ್ರತಿ ವ್ಯಕ್ತಿಯೂ ತಮ್ಮ ಊಟದಲ್ಲಿ ತೈಲ ಬಳಕೆಯನ್ನು ಕನಿಷ್ಠ 10 ಪ್ರತಿಶತದಷ್ಟು ಹೇಗೆ ಕಡಿಮೆ ಮಾಡಬಹುದು ಎಂಬ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವನ್ನು ಒತ್ತಿ ಹೇಳಿದ ಶ್ರೀ ಮೋದಿ, ತೈಲವನ್ನು ಕಡಿಮೆ ಮಾಡುವುದು, ಅನಾರೋಗ್ಯಕರ ಆಹಾರ ಪದ್ಧತಿಗಳನ್ನು ತ್ಯಜಿಸುವುದು ಮತ್ತು ಯೋಗಾಭ್ಯಾಸ ಮಾಡುವುದು ಆರೋಗ್ಯಕರ ಜೀವನಶೈಲಿಯ ಪ್ರಮುಖ ಅಂಶಗಳು ಎಂದು ತಿಳಿಸಿದರು.
ಯೋಗವನ್ನು 'ಜನ ಆಂದೋಲನ' – ಜನರ ಚಳುವಳಿಯನ್ನಾಗಿ ಪರಿವರ್ತಿಸುವಂತೆ ಎಲ್ಲರಿಗೂ ಕರೆ ನೀಡಿದ ಪ್ರಧಾನಮಂತ್ರಿಯವರು, ಈ ಚಳುವಳಿಯು ಜಗತ್ತನ್ನು ಶಾಂತಿ, ಆರೋಗ್ಯ ಮತ್ತು ಸಾಮರಸ್ಯದೆಡೆಗೆ ಕೊಂಡೊಯ್ಯುತ್ತದೆ ಎಂದು ಹೇಳಿದರು. ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಜೀವನದಲ್ಲಿ ಸಮತೋಲನ ತರಲು ಯೋಗದೊಂದಿಗೆ ದಿನವನ್ನು ಪ್ರಾರಂಭಿಸಬೇಕು ಮತ್ತು ಪ್ರತಿಯೊಂದು ಸಮಾಜವೂ ಒತ್ತಡದಿಂದ ಮುಕ್ತವಾಗಲು ಯೋಗವನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
"ಯೋಗವು ಮಾನವಕುಲವನ್ನು ಒಟ್ಟಿಗೆ ಹೆಣೆಯುವ ಒಂದು ದಾರವಾಗಿ ಕಾರ್ಯನಿರ್ವಹಿಸಬೇಕು. 'ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ' ಒಂದು ಜಾಗತಿಕ ಸಂಕಲ್ಪವಾಗಬೇಕು" ಎಂದು ಹೇಳುವ ಮೂಲಕ ಪ್ರಧಾನಮಂತ್ರಿಗಳು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
ಹಿನ್ನೆಲೆ
11ನೇ ಅಂತಾರಾಷ್ಟ್ರೀಯ ಯೋಗ ದಿನ (IDY) ದ ಅಂಗವಾಗಿ, ಪ್ರಧಾನಮಂತ್ರಿಗಳು ವಿಶಾಖಪಟ್ಟಣಂ ನಗರದಿಂದ ರಾಷ್ಟ್ರೀಯ ಆಚರಣೆಯ ನೇತೃತ್ವ ವಹಿಸಿದ್ದರು. ವಿಶಾಖಪಟ್ಟಣಂ ಕಡಲತೀರದಲ್ಲಿ ನಡೆದ ಕಾಮನ್ ಯೋಗ ಪ್ರೋಟೋಕಾಲ್ (CYP) ಅಧಿವೇಶನದಲ್ಲಿ, ಅಂದಾಜು 5 ಲಕ್ಷಕ್ಕೂ ಅಧಿಕ ಜನರೊಂದಿಗೆ ಅವರು ಸಾಮರಸ್ಯದ ಯೋಗ ಪ್ರದರ್ಶನವನ್ನು ಮುನ್ನಡೆಸಿದರು. ಇದೇ ಸಂದರ್ಭದಲ್ಲಿ, ಭಾರತದಾದ್ಯಂತ 3.5 ಲಕ್ಷಕ್ಕೂ ಹೆಚ್ಚು ಸ್ಥಳಗಳಲ್ಲಿ ಯೋಗ ಸಂಗಮ ಕಾರ್ಯಕ್ರಮಗಳು ಏಕಕಾಲದಲ್ಲಿ ನಡೆದವು. ಈ ವರ್ಷದ ಆಚರಣೆಯಲ್ಲಿ ಸಾಮೂಹಿಕ ಭಾಗವಹಿಸುವಿಕೆ ಉತ್ತೇಜಿಸಲು ಹೊಸ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಮೈಗವ್ (MyGov) ಮತ್ತು ಮೈಭಾರತ್ (MyBharat) ನಂತಹ ವೇದಿಕೆಗಳಲ್ಲಿ 'ಕುಟುಂಬದೊಂದಿಗೆ ಯೋಗ' (Yoga with Family) ಎಂಬ ವಿಶೇಷ ಸ್ಪರ್ಧೆಗಳು ಹಾಗೂ ಯುವಜನರನ್ನು ಗುರಿಯಾಗಿಸಿಕೊಂಡು 'ಯೋಗ ಅನ್ಪ್ಲಗ್ಡ್' (Yoga Unplugged) ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ.
ಈ ವರ್ಷದ ಪರಿಕಲ್ಪನೆ "ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ" ಎಂಬುದು ಮಾನವ ಮತ್ತು ಭೂಮಿಯ ಆರೋಗ್ಯಗಳ ನಡುವಿನ ಆಳವಾದ ಪರಸ್ಪರ ಸಂಬಂಧವನ್ನು ಎತ್ತಿ ತೋರಿಸುತ್ತದೆ. ಇದು ಸಾಮೂಹಿಕ ಯೋಗಕ್ಷೇಮದ ಜಾಗತಿಕ ದೃಷ್ಟಿಕೋನವನ್ನು ಪ್ರತಿಧ್ವನಿಸುತ್ತದೆ ಮತ್ತು ಭಾರತದ ಪುರಾತನ ತತ್ವಶಾಸ್ತ್ರವಾದ "ಸರ್ವೇ ಸಂತು ನಿರಾಮಯ" (ಎಲ್ಲರೂ ರೋಗಮುಕ್ತರಾಗಲಿ) ಎಂಬುದರಲ್ಲಿ ಬೇರೂರಿದೆ. 2015ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ (UNGA) ಜೂನ್ 21 ದಿನವನ್ನು ಅಂತಾರಾಷ್ಟ್ರೀಯ ಯೋಗ ದಿನವಾಗಿ ಆಚರಿಸುವ ಭಾರತದ ಪ್ರಸ್ತಾಪವನ್ನು ಅಳವಡಿಸಿಕೊಂಡಾಗಿನಿಂದ, ಪ್ರಧಾನಮಂತ್ರಿಯವರು ನವದೆಹಲಿ, ಚಂಡೀಗಢ, ಲಕ್ನೋ, ಮೈಸೂರು, ನ್ಯೂಯಾರ್ಕ್ ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಮತ್ತು ಶ್ರೀನಗರ ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳಿಂದ ಈ ಆಚರಣೆಗಳನ್ನು ಮುನ್ನಡೆಸಿದ್ದಾರೆ. ಕಳೆದ ಒಂದು ದಶಕದಲ್ಲಿ, ಅಂತಾರಾಷ್ಟ್ರೀಯ ಯೋಗ ದಿನ ಒಂದು ಪ್ರಬಲ ಜಾಗತಿಕ ಆರೋಗ್ಯ ಆಂದೋಲನವಾಗಿ ಅದ್ಭುತವಾಗಿ ವಿಕಸನಗೊಂಡಿದೆ.
*****
(Release ID: 2138233)
Read this release in:
Odia
,
Malayalam
,
English
,
Urdu
,
Marathi
,
Hindi
,
Nepali
,
Manipuri
,
Assamese
,
Assamese
,
Bengali
,
Punjabi
,
Gujarati
,
Tamil
,
Telugu