ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ದಕ್ಷಿಣ ರಾಜ್ಯಗಳಲ್ಲಿ ಗ್ರಾಹಕ ನ್ಯಾಯ ಬಲಪಡಿಸಲು ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಚೆನ್ನೈನಲ್ಲಿ ಪ್ರಾದೇಶಿಕ ಕಾರ್ಯಾಗಾರ


ದಕ್ಷಿಣ ರಾಜ್ಯಗಳಿಂದ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯಲ್ಲಿ 23% ದೂರುಗಳು ಬಂದಿವೆ: ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ

2025ರಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯ ಗ್ರಾಹಕ ಆಯೋಗಗಳು 100%ಗಿಂತ ಹೆಚ್ಚಿನ ದೂರು ವಿಲೇವಾರಿ ದರಗಳೊಂದಿಗೆ ಮುಂಚೂಣಿಯಲ್ಲಿವೆ

Posted On: 14 JUN 2025 10:48AM by PIB Bengaluru

ಗ್ರಾಹಕರ ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳನ್ನು ಬಲಪಡಿಸಲು ಮತ್ತು ಸಾಂಸ್ಥಿಕ ದಕ್ಷತೆ ಉತ್ತೇಜಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸಲು ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯು, 2025 ಜೂನ್ 13ರಂದು ಚೆನ್ನೈನಲ್ಲಿ "ದಕ್ಷಿಣ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಗ್ರಾಹಕ ರಕ್ಷಣೆ" ಕುರಿತು ಪ್ರಾದೇಶಿಕ ಕಾರ್ಯಾಗಾರ ಆಯೋಜಿಸಿತ್ತು.

ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ನಿಧಿ ಖರೆ ತಮ್ಮ ಮುಖ್ಯ ಭಾಷಣದಲ್ಲಿ, ಡಿಜಿಟಲ್ ಯುಗಕ್ಕೆ ಹೊಂದಾಣಿಕೆಯ ಕಾನೂನು ಮತ್ತು ಡಿಜಿಟಲ್ ಕಾರ್ಯವಿಧಾನಗಳು ಬೇಕಾಗುತ್ತವೆ. ದುರಸ್ತಿ ಹಕ್ಕು ಪೋರ್ಟಲ್, ಇ-ಜಾಗೃತಿ ಮತ್ತು ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯನ್ನು ಬಲಪಡಿಸುವುದು ಮುಂತಾದ ಮಹತ್ವದ ಉಪಕ್ರಮಗಳಿಗೆ ಒತ್ತು ನೀಡಬೇಕಿದೆ. ಇದು ಗ್ರಾಹಕರ ಕುಂದುಕೊರತೆಗಳನ್ನು ಪೂರ್ವಭಾವಿ ಹಂತದಲ್ಲಿ ಪರಿಹರಿಸುವ ವೇಗವಾದ, ರಗಳೆಮುಕ್ತ ಮತ್ತು ಅಗ್ಗದ ವಿಧಾನವಾಗಿದೆ. ಕರಾಳ ಮಾದರಿಗಳು, ನಕಲಿ ವಿಮರ್ಶೆಗಳು ಮತ್ತು ದಾರಿ ತಪ್ಪಿಸುವ ಜಾಹೀರಾತುಗಳನ್ನು ನಿಗ್ರಹಿಸಲು CCPA ಯ ನಿಯಂತ್ರಕ ಕ್ರಮಗಳು ಅಗತ್ಯ. ದಕ್ಷಿಣ ರಾಜ್ಯಗಳ ಅನುಕರಣೀಯ ಕಾರ್ಯಕ್ಷಮತೆಯನ್ನು, ವಿಶೇಷವಾಗಿ ಪ್ರಕರಣ ವಿಲೇವಾರಿ ದರಗಳನ್ನು ಅವರು ಶ್ಲಾಘಿಸಿದರು. ನಿರಂತರ ನಾವೀನ್ಯತೆ, ಸಹಯೋಗ ಮತ್ತು ವಿಶ್ವ ದರ್ಜೆಯ ಕುಂದುಕೊರತೆ ಪರಿಹಾರಕ್ಕೆ, ವಿಶೇಷವಾಗಿ ಮಧ್ಯಸ್ಥಿಕೆ ಮತ್ತು ವರ್ಚುವಲ್ ವಿಚಾರಣೆಗಳ ಮೂಲಕ ಸಮಗ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂದು ಅವರು ಕರೆ ನೀಡಿದರು.

2025ರಲ್ಲಿ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ 5.41 ಲಕ್ಷ ದೂರುಗಳು ಬಂದಿವೆ, ಅದರಲ್ಲಿ 23% ದಕ್ಷಿಣ ರಾಜ್ಯಗಳಿಂದ ಬಂದಿವೆ, ಇದು ಬಲವಾದ ಪ್ರಾದೇಶಿಕ ಭಾಗವಹಿಸುವಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದರು. ರಾಷ್ಟ್ರೀಯವಾಗಿ ದಾಖಲಾದ 28.54 ಲಕ್ಷ ಪ್ರಕರಣಗಳಲ್ಲಿ, ಕೇವಲ 5.62 ಲಕ್ಷ ಪ್ರಕರಣಗಳು ಬಾಕಿ ಉಳಿದಿವೆ, ದಕ್ಷಿಣ ರಾಜ್ಯಗಳ ದೂರು ಪ್ರಕರಣಗಳು ಕೇವಲ 13.34%ರಷ್ಟಿವೆ. ಕರ್ನಾಟಕ ಮತ್ತು ಕೇರಳ ಆಯೋಗಗಳು ದಾಖಲಾದ ಪ್ರಕರಣಗಳಿಗಿಂತ ಹೆಚ್ಚಿನ ಪ್ರಕರಣಗಳನ್ನು ವಿಲೇವಾರಿ ಮಾಡಿವೆ, ಹಲವಾರು ಜಿಲ್ಲಾ ಆಯೋಗಗಳು ಸತತ 3 ವರ್ಷಗಳಲ್ಲಿ 100%+ ದೂರು ವಿಲೇವಾರಿ ದರ ಸಾಧಿಸಿವೆ ಎಂದು ಅವರು ಆ ಪ್ರದೇಶದ ಕಾರ್ಯಕ್ಷಮತೆಯನ್ನು ಶ್ಲಾಘಿಸಿದರು. ವರ್ಚುವಲ್ ನ್ಯಾಯಾಲಯಗಳ ಮೂಲಕ 11,900ಕ್ಕೂ ಹೆಚ್ಚು ಪ್ರಕರಣಗಳನ್ನು ಆಲಿಸಲಾಗಿದೆ. ಎಐ-ಚಾಲಿತ ಏಕೀಕೃತ ವೇದಿಕೆಯಾದ ಇ-ಜಾಗೃತಿ ಪ್ರಸ್ತಾಪಿಸಿದ ಅವರು, ಚಾಟ್‌ಬಾಟ್ ಆಧಾರಿತ ನೋಂದಣಿ, ಬಹುಭಾಷಾ ಪ್ರವೇಶ ಮತ್ತು ಕಾನೂನು ವೃತ್ತಿಪರರು ಮತ್ತು ವಿಕಲಚೇತನ ಬಳಕೆದಾರರಿಗೆ ಬೆಂಬಲದಂತಹ ವೈಶಿಷ್ಟ್ಯಗಳನ್ನು ನೀಡುವ ಇ-ಡಾಖಿಲ್ ಮತ್ತು ಕಾನ್ಫೋನೆಟ್‌ನಂತಹ ಪ್ರಮುಖ ವ್ಯವಸ್ಥೆಗಳ ಏಕೀಕರಣವನ್ನು ಅವರು ಪ್ರಸ್ತಾಪಿಸಿದರು.

ಉದ್ಘಾಟನಾ ಕಲಾಪ ಉದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗ(ಎನ್‌ಸಿಡಿಆರ್‌ಸಿ)ದ ಅಧ್ಯಕ್ಷ ನ್ಯಾಯಮೂರ್ತಿ ಅಮರೇಶ್ವರ ಪ್ರತಾಪ್ ಸಾಹಿ, ಗ್ರಾಹಕ ಸಂರಕ್ಷಣಾ ಕಾಯ್ದೆಯ ವಿಕಸನಗೊಳ್ಳುತ್ತಿರುವ ವ್ಯಾಪ್ತಿ ಮತ್ತು ಸಾಂಪ್ರದಾಯಿಕ ನ್ಯಾಯಾಲಯಗಳಿಂದ ಗ್ರಾಹಕ ಆಯೋಗಗಳಿಗೆ ಮೊಕದ್ದಮೆಗಳ ಬದಲಾವಣೆ ಹೆಚ್ಚುತ್ತಿವೆ. ಜಿಲ್ಲಾ ಗ್ರಾಹಕ ಆಯೋಗಗಳಿಗೆ ಅವರು ಅಮೂಲ್ಯವಾದ ಮಾರ್ಗದರ್ಶನ ನೀಡಿ, ಗ್ರಾಹಕ ವಿವಾದ ಪರಿಹಾರದಲ್ಲಿ ದಕ್ಷತೆ ಮತ್ತು ಪ್ರವೇಶ ಹೆಚ್ಚಿಸಲು ಹೆಚ್ಚಾಗಿ ಡಿಜಿಟಲ್ ಸ್ನೇಹಿ ಮತ್ತು ತಂತ್ರಜ್ಞಾನ-ಸಕ್ರಿಯಗೊಳಿಸಿದ ವಿಧಾನವನ್ನು ಅಳವಡಿಸಿಕೊಳ್ಳುವಂತೆ ಒತ್ತಾಯಿಸಿದರು. ವೇಗವಾಗಿ ಬದಲಾಗುತ್ತಿರುವ ಪರಿಸರದ ಬೇಡಿಕೆಗಳನ್ನು ಪೂರೈಸಲು ಡಿಜಿಟಲ್ ಮೂಲಸೌಕರ್ನ್ನು ನಿರ್ಮಿಸುವ ಮತ್ತು ತಂತ್ರಜ್ಞಾನ ಬಳಸಿಕೊಳ್ಳುವ ಪ್ರಾಮುಖ್ಯತೆ ಇದೆ. ಆಯೋಗದ ಆದೇಶಗಳ ಪರಿಣಾಮಕಾರಿ ಜಾರಿಯನ್ನು ಖಚಿತಪಡಿಸಿಕೊಳ್ಳಲು ಆಡಳಿತ ಸಂಸ್ಥೆಗಳೊಂದಿಗೆ ಪೂರ್ವಭಾವಿಯಾಗಿ ತೊಡಗಿಸಿಕೊಳ್ಳಬೇಕು. ವೈದ್ಯಕೀಯ ನಿರ್ಲಕ್ಷ್ಯ ಅಥವಾ ಆಟೋಮೊಬೈಲ್ ವಿವಾದಗಳನ್ನು ಒಳಗೊಂಡಂತಹ ತಜ್ಞರ ಅಭಿಪ್ರಾಯಗಳ ಅಗತ್ಯವಿರುವ ಪ್ರಕರಣಗಳಲ್ಲಿ ಸಮಯೋಚಿತ ಸಮನ್ವಯ ಸಾಧಿಸಬೇಕು.  ಇದರಿಂದಾಗಿ ತನಿಖೆಗಳಿಗೆ ನ್ಯಾಯ ಒದಗಿಸಲು ವಿಳಂಬ ಆಗುವುದಿಲ್ಲ, ಗ್ರಾಹಕರಿಗೆ ಸಕಾಲಿಕ ಪರಿಹಾರವನ್ನು ಖಚಿತಪಡಿಸಿಕೊಳ್ಳಬಹುದು ಎಂದರು.

ಕಾರ್ಯಾಗಾರದಲ್ಲಿ 4 ವಿಷಯಾಧಾರಿತ ತಾಂತ್ರಿಕ ಕಲಾಪಗಳು ಮತ್ತು 2 ಸಮಾನಾಂತರ ಕಲಾಪಗಳು ಜರುಗಿದವು. ನ್ಯಾಯಮೂರ್ತಿ ಅಮರೇಶ್ವರ ಪ್ರತಾಪ್ ಸಾಹಿ ಅಧ್ಯಕ್ಷತೆಯಲ್ಲಿ ಮತ್ತು ಶ್ರೀಮತಿ ನಿಧಿ ಖರೆ ಸಹ-ಅಧ್ಯಕ್ಷತೆಯಲ್ಲಿ, ಪ್ರಮುಖ ವಲಯಗಳಲ್ಲಿ ಗ್ರಾಹಕರ ಕುಂದುಕೊರತೆಗಳಿಗೆ ಪರಿಹಾರಗಳನ್ನು ಬಲಪಡಿಸುವತ್ತ ಗಮನ ಹರಿಸಲಾಯಿತು. ಕಲಾಪಗಳಲ್ಲಿ ಇ-ಜಾಗೃತಿ, ರಿಯಲ್ ಎಸ್ಟೇಟ್ ಮತ್ತು ವಿಮಾ ಕುಂದುಕೊರತೆ ಕಾರ್ಯವಿಧಾನಗಳು ಮತ್ತು ವೈದ್ಯಕೀಯ ನಿರ್ಲಕ್ಷ್ಯ ಪರಿಹಾರದ ಮೂಲಕ ಡಿಜಿಟಲ್ ನಾವೀನ್ಯತೆಗೆ ಒತ್ತು ನೀಡಲಾಯಿತು. ಇದರಲ್ಲಿ ನ್ಯಾಯಾಂಗ ಕ್ಷೇತ್ರದ ನಾಯಕರು, ರಾಜ್ಯ ಅಧಿಕಾರಿಗಳು ಮತ್ತು ಕಾನೂನು ತಜ್ಞರು ಸಕ್ರಿಯವಾಗಿ ಭಾಗವಹಿಸಿದ್ದರು. ಸಮಾನಾಂತರ ಕಲಾಪಗಳಲ್ಲಿ ಕಾನೂನು ಮಾಪನಶಾಸ್ತ್ರ ಜಾರಿಯನ್ನು ಜನ್ ವಿಶ್ವಾಸ್ ಕಾಯ್ದೆ-2023ರೊಂದಿಗೆ ಜೋಡಿಸುವ ಪ್ರಾಮುಖ್ಯತೆ ಮತ್ತು ದಕ್ಷಿಣ ರಾಜ್ಯಗಳಲ್ಲಿ ಗ್ರಾಹಕ ರಕ್ಷಣೆ ಮತ್ತು ಉದ್ಯಮದ ಹೊಣೆಗಾರಿಕೆ ಬಲಪಡಿಸುವ ಮೂಲಕ ಉತ್ಪನ್ನ ಗುಣಮಟ್ಟ ಮತ್ತು ಸುರಕ್ಷತೆ ಖಾತ್ರಿಪಡಿಸುವಲ್ಲಿ ರಾಷ್ಟ್ರೀಯ ಪರೀಕ್ಷಾ ಸದನದ ನಿರ್ಣಾಯಕ ಪಾತ್ರವಿದೆ ಎಂದು ಎತ್ತಿ ತೋರಿಸಿದವು.

ದೇಶಾದ್ಯಂತ ಗ್ರಾಹಕ ಪ್ರಕರಣಗಳ ನಿಯಮಿತ ಮೇಲ್ವಿಚಾರಣೆಗಾಗಿ ಇಲಾಖೆಯು ಕೇಂದ್ರೀಕೃತ ಪ್ರಯತ್ನಗಳನ್ನು ಕೈಗೊಳ್ಳುತ್ತಿದೆ. ಈ ಅಭಿಯಾನವು ಭಾರತದ ವಿವಿಧ ಭಾಗಗಳಲ್ಲಿ ಒಂದು ದಿನದ ಪ್ರಾದೇಶಿಕ ಕಾರ್ಯಾಗಾರಗಳು ಮತ್ತು ರಾಜ್ಯ-ನಿರ್ದಿಷ್ಟ ಸಭೆಗಳನ್ನು ಆಯೋಜಿಸುವುದನ್ನು ಒಳಗೊಂಡಿದೆ. ಗ್ರಾಹಕ ಪ್ರಕರಣಗಳ ಬಾಕಿ ಇರುವ ಸಮಸ್ಯೆಗಳನ್ನು ಚರ್ಚಿಸಲು, ವೇಗವಾದ ಮತ್ತು ಹೆಚ್ಚು ಪರಿಣಾಮಕಾರಿ ಪರಿಹಾರವನ್ನು ಖಚಿತಪಡಿಸಿಕೊಳ್ಳಲು ಪ್ರಾಯೋಗಿಕ ಪರಿಹಾರಗಳನ್ನು ಗುರುತಿಸಲು ಈ ಸಂವಾದಗಳು ಪ್ರಮುಖ ವೇದಿಕೆಗಳಾಗಿ ಕಾರ್ಯ ನಿರ್ವಹಿಸಿವೆ.

ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಭರತ್ ಖೇರಾ ಅವರು, ನೈತಿಕ ವ್ಯಾಪಾರದಲ್ಲಿ ಭಾರತದ ಐತಿಹಾಸಿಕ ಬೇರುಗಳು ಮತ್ತು ಗ್ರಾಹಕ ಸಂರಕ್ಷಣಾ ಕಾಯ್ದೆ-2019ರ ಪರಿವರ್ತನೀಯಕ ಪರಿಣಾಮಗಳನ್ನು ಪ್ರಸ್ತಾಪಿಸಿದರು. ತಮಿಳುನಾಡು ಸರ್ಕಾರದ ಸಹಕಾರ, ಆಹಾರ ಮತ್ತು ಗ್ರಾಹಕ ಸಂರಕ್ಷಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ತಿರು ಸತ್ಯಬ್ರತ ಸಾಹೂ ಅವರು ಗ್ರಾಹಕ ಸಂರಕ್ಷಣಾ ಸಂಸ್ಥೆಗಳನ್ನು ಬಲಪಡಿಸಲು ಸಾಮರ್ಥ್ಯ ವೃದ್ಧಿ ಮತ್ತು ತರಬೇತಿಯ ಅಗತ್ಯವಿದೆ. ಗ್ರಾಹಕ ನ್ಯಾಯ ಖಾತ್ರಿಪಡಿಸುವಲ್ಲಿ ನೀತಿ ನಿರೂಪಕರ ನಿರ್ಣಾಯಕ ಪಾತ್ರವಿದೆ ಎಂದರು.

ರಾಜ್ಯಗಳು ಮತ್ತು ಪಾಲುದಾರರು ತಮ್ಮ ತಮ್ಮ ನ್ಯಾಯ ವ್ಯಾಪ್ತಿಯಲ್ಲಿ ಗ್ರಾಹಕ ರಕ್ಷಣಾ ಕಾರ್ಯವಿಧಾನಗಳನ್ನು ಬಲಪಡಿಸಲು ಒಟ್ಟಾಗಿ ಕೆಲಸ ಮಾಡುವ ಬದ್ಧತೆಯೊಂದಿಗೆ ಕಾರ್ಯಾಗಾರ ಸಮಾಪನಗೊಂಡಿತು. ದಕ್ಷಿಣ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ದೇಶಾದ್ಯಂತ ಗ್ರಾಹಕರ ಕಲ್ಯಾಣಕ್ಕಾಗಿ ಗ್ರಾಹಕ ರಕ್ಷಣಾ ಕಾನೂನುಗಳು, ನಿಯಮಗಳು ಮತ್ತು ಉಪಕ್ರಮಗಳ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಗ್ರಾಹಕ ವ್ಯವಹಾರಗಳ ಇಲಾಖೆಯು, ರಾಜ್ಯಗಳು ಮತ್ತು ಇತರೆ ಪಾಲುದಾರರೊಂದಿಗೆ ಸಹಭಾಗಿತ್ವ ಮುಂದುವರಿಸುತ್ತದೆ.

ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಲಕ್ಷದ್ವೀಪ, ಪುದುಚೇರಿ, ಅಂಡಮಾನ್-ನಿಕೋಬಾರ್ ದ್ವೀಪಗಳು ಸೇರಿದಂತೆ ದಕ್ಷಿಣ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸಚಿವಾಲಯದ ಅಧಿಕಾರಿಗಳು, ರಾಜ್ಯ ಆಯೋಗಗಳ ಸದಸ್ಯರು, ಜಿಲ್ಲಾ ಆಯೋಗಗಳ ಅಧ್ಯಕ್ಷರು ಮತ್ತು ಇತರೆ ಗಣ್ಯರು ಭಾಗವಹಿಸಿದ್ದರು. ಅಲ್ಲದೆ, ಈ ಪ್ರದೇಶಗಳ ಸ್ವಯಂಸೇವಾ ಗ್ರಾಹಕ ಸಂಘಟನೆಗಳ ಉಪಸ್ಥಿತಿಯೂ ಇತ್ತು.

 

*****

 


(Release ID: 2136318)