ಸಹಕಾರ ಸಚಿವಾಲಯ
azadi ka amrit mahotsav

ಬಿಹಾರದ ಪಾಟ್ನಾದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ 800 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು


ಫಲವತ್ತಾದ ಭೂಮಿ, ನೀರು ಮತ್ತು ಇತರ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿರುವ ಬಿಹಾರವು ಸಹಕಾರಿ ಕ್ಷೇತ್ರದಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತದೆ

ಪ್ರತಿಪಕ್ಷಗಳ ಸರ್ಕಾರಗಳು ತಮ್ಮ ಅಧಿಕಾರಾವಧಿಯಲ್ಲಿ ಬಿಹಾರದಲ್ಲಿ ಸಹಕಾರಿ ಕ್ಷೇತ್ರವನ್ನು ಸಂಪೂರ್ಣವಾಗಿ ಹಾಳುಮಾಡಿದವು

ಪ್ರಧಾನಮಂತ್ರಿ ಮೋದಿ ಅವರ ನೇತೃತ್ವದ ಸರ್ಕಾರವು ಬಿಹಾರದಲ್ಲಿ ಮುಚ್ಚಿದ 30 ಸಕ್ಕರೆ ಗಿರಣಿಗಳನ್ನು ಪುನರಾರಂಭಿಸಲಿದೆ

1990 ರಿಂದ 2005 ರವರೆಗೆ, ಪ್ರತಿಪಕ್ಷಗಳು ಬಿಹಾರದಲ್ಲಿ ಕೊಲೆ, ಅಪಹರಣ, ಸುಲಿಗೆ, ದರೋಡೆ ಮತ್ತು ಲೂಟಿಯ ಉದ್ಯಮವನ್ನು ನಡೆಸುತ್ತಿದ್ದವು, ಇದು ರಾಜ್ಯವನ್ನು ಸಂಪೂರ್ಣವಾಗಿ ನಾಶಮಾಡಿತು

ಬಿಹಾರದಲ್ಲಿ ವಿರೋಧ ಪಕ್ಷದ ಆಳ್ವಿಕೆಯಲ್ಲಿ, ಜಾತಿ ಹತ್ಯಾಕಾಂಡಗಳು ಮತ್ತು ಸರ್ಕಾರಿ ಪ್ರಾಯೋಜಿತ ಭ್ರಷ್ಟಾಚಾರಗಳು ನಡೆದವು ಮತ್ತು ಮೇವು ಹಗರಣವು ದೇಶ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯಕ್ಕೆ ಅಪಖ್ಯಾತಿ ತಂದಿತು

ವಿರೋಧ ಪಕ್ಷಗಳ ಅಧಿಕಾರಾವಧಿಯನ್ನು ಬಿಹಾರದ ಇತಿಹಾಸದಲ್ಲಿ "ಜಂಗಲ್ ರಾಜ್" ಎಂದು ಶಾಶ್ವತವಾಗಿ ನೆನಪಿಸಿಕೊಳ್ಳಲಾಗುತ್ತದೆ ಮತ್ತು ಅದು ನಮ್ಮ ಸರ್ಕಾರದೊಂದಿಗೆ ಕೊನೆಗೊಂಡಿತು

2004 ರಿಂದ 2014 ರವರೆಗೆ ಕೇಂದ್ರ ಸರ್ಕಾರ ಬಿಹಾರಕ್ಕೆ 2.8 ಲಕ್ಷ ಕೋಟಿ ರೂ. ನೀಡಿದ್ದರೆ, ಮೋದಿ ಸರ್ಕಾರ ಕಳೆದ 10 ವರ್ಷಗಳಲ್ಲಿ ಬಿಹಾರಕ್ಕೆ 9.23 ಲಕ್ಷ ಕೋಟಿ ರೂ. ನೀಡಿದೆ

Posted On: 30 MAR 2025 4:20PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಬಿಹಾರದ ಪಾಟ್ನಾದಲ್ಲಿ 800 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಿವಿಧ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಬಿಹಾರ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ಮತ್ತು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಶ್ರೀ ನಿತ್ಯಾನಂದ ರೈ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.

ಸಹಕಾರಿ ಕ್ಷೇತ್ರ ಮತ್ತು ಇತರ ಇಲಾಖೆಗಳಿಗೆ ಸಂಬಂಧಿಸಿದ ಹಲವಾರು ಯೋಜನೆಗಳನ್ನು ಇಂದು ಉದ್ಘಾಟಿಸಲಾಯಿತು ಮತ್ತು ಅವುಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು ಎಂದು ಶ್ರೀ ಅಮಿತ್ ಶಾ ಹೇಳಿದರು. ಕಳೆದ 10 ವರ್ಷಗಳಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ದೇಶಾದ್ಯಂತ ಕೋಟ್ಯಂತರ ಬಡ ಜನರ ಕಲ್ಯಾಣಕ್ಕಾಗಿ ಹಲವಾರು ಉಪಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಅವರು ಒತ್ತಿ ಹೇಳಿದರು. ಪ್ರಧಾನಮಂತ್ರಿ ಮೋದಿ ಅವರು ವಸತಿ, ವಿದ್ಯುತ್, ಅನಿಲ, ಕುಡಿಯುವ ನೀರು, ಶೌಚಾಲಯಗಳು, ಔಷಧಿಗಳು ಮತ್ತು 5 ಕೆಜಿ ಉಚಿತ ಆಹಾರ ಧಾನ್ಯಗಳಂತಹ ಅಗತ್ಯ ಅಗತ್ಯಗಳನ್ನು ಪೂರೈಸಲು ವ್ಯವಸ್ಥೆ ಮಾಡಿದ್ದಾರೆ, ಆದರೆ ಹಿಂದಿನ ವಿರೋಧ ಪಕ್ಷ ಸರ್ಕಾರಗಳು ಬಡವರನ್ನು ನಿರ್ಲಕ್ಷಿಸಿದ್ದವು ಎಂದು ಶ್ರೀ ಶಾ ಟೀಕಿಸಿದರು. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ 80 ಕೋಟಿ ಜನರು ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆಜಿ ಉಚಿತ ಆಹಾರ ಧಾನ್ಯಗಳನ್ನು ಪಡೆಯುತ್ತಿದ್ದಾರೆ, 4 ಕೋಟಿ ಜನರಿಗೆ ಮನೆಗಳನ್ನು ನೀಡಲಾಗಿದೆ, 11 ಕೋಟಿ ಅನಿಲ ಸಂಪರ್ಕಗಳನ್ನು ವಿತರಿಸಲಾಗಿದೆ, 12 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದೆ ಮತ್ತು 5 ಲಕ್ಷ ರೂ.ಗಳವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ಸಿಗುತ್ತಿದೆ ಎಂದು ಅವರು ಒತ್ತಿ ಹೇಳಿದರು.

ಸ್ವಾತಂತ್ರ್ಯದ 75 ವರ್ಷಗಳ ನಂತರ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸಲು ಸಹಕಾರ ಸಚಿವಾಲಯವನ್ನು ಸ್ಥಾಪಿಸಿದರು, ಇದು ರೈತರು, ಮಹಿಳೆಯರು, ಹೈನುಗಾರಿಕೆ, ಮೀನುಗಾರಿಕೆ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಪ್ರಯೋಜನಕಾರಿಯಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ದಶಕಗಳಿಂದ ಸಹಕಾರಿ ಕ್ಷೇತ್ರದ ಬಲವರ್ಧನೆಗೆ ಯಾವುದೇ ಸರಕಾರ ಆದ್ಯತೆ ನೀಡಿರಲಿಲ್ಲ ಎಂದರು. ಬಿಹಾರವು ತನ್ನ ಹೇರಳವಾದ ಭೂಮಿ, ನೀರು ಮತ್ತು ನೈಸರ್ಗಿಕ ಸಂಪನ್ಮೂಲಗಳೊಂದಿಗೆ ಮುಂಬರುವ ವರ್ಷಗಳಲ್ಲಿ ಸಹಕಾರಿ ಕ್ಷೇತ್ರದಿಂದ ಹೆಚ್ಚು ಪ್ರಯೋಜನ ಪಡೆಯಲಿದೆ ಎಂದು ಶ್ರೀ ಶಾ ಒತ್ತಿ ಹೇಳಿದರು. ಬಿಹಾರದಲ್ಲಿ ಹಿಂದಿನ ಪ್ರತಿಪಕ್ಷ ಸರ್ಕಾರಗಳು ಸಹಕಾರ ಕ್ಷೇತ್ರವನ್ನು ನಿರ್ಲಕ್ಷಿಸಿದ್ದು ಈ ಕ್ಷೇತ್ರದ ಅವನತಿಗೆ ಕಾರಣವಾಯಿತು ಮತ್ತು ನೂರಾರು ಸಕ್ಕರೆ ಕಾರ್ಖಾನೆಗಳು ಮುಚ್ಚಲ್ಪಟ್ಟವು ಎಂದು ಅವರು ಟೀಕಿಸಿದರು. ಬಿಹಾರ ಒಂದು ಕಾಲದಲ್ಲಿ ದೇಶದ ಸಕ್ಕರೆ ಉತ್ಪಾದನೆಯಲ್ಲಿ ಶೇ.30 ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತಿತ್ತು, ಆದರೆ ವಿರೋಧ ಪಕ್ಷದ ಆಡಳಿತದಲ್ಲಿ ಈ ಪಾಲು ಶೇ.6 ಕ್ಕಿಂತ ಕಡಿಮೆಯಾಯಿತುದೆ ಎಂದು ಅವರು ಹೇಳಿದರು. ಮುಚ್ಚಿಹೋಗಿರುವ ರಾಜ್ಯದ ಸಕ್ಕರೆ ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸಲು ಮೋದಿ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.

ಪ್ರಾಥಮಿಕ ಕೃಷಿ ಪತ್ತಿನ ಸಂಘಗಳನ್ನು (ಪಿಎಸಿಎಸ್) ಬಲಪಡಿಸಲು ಮೋದಿ ಸರ್ಕಾರ ಗಣನೀಯ ಪ್ರಯತ್ನಗಳನ್ನು ಕೈಗೊಂಡಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಬಿಹಾರದಲ್ಲಿ ಮಖಾನಾ ಮಂಡಳಿಯನ್ನು ಸ್ಥಾಪಿಸಲಾಗಿದೆ ಮತ್ತು 1,000 ಕೋಟಿ ರೂ. ಹೂಡಿಕೆಯೊಂದಿಗೆ ಮೆಕ್ಕೆಜೋಳ ಸಂಶೋಧನಾ ಕೇಂದ್ರವನ್ನು ಪುನರುಜ್ಜೀವನಗೊಳಿಸುವ ಮತ್ತು ಮೆಕ್ಕೆಜೋಳ ರೈತರನ್ನು ಬೆಂಬಲಿಸುವ ವಿವಿಧ ಯೋಜನೆಗಳನ್ನು ಘೋಷಿಸಿದರು. ಭಾರತ ಸರ್ಕಾರವು ಈಗ ರೈತರಿಂದ ಸಂಪೂರ್ಣ ಮೆಕ್ಕೆಜೋಳ, ದ್ವಿದಳ ಧಾನ್ಯಗಳು, ಗೋಧಿ ಮತ್ತು ಭತ್ತವನ್ನು ಕನಿಷ್ಠ ಬೆಂಬಲ ಬೆಲೆಗೆ (ಎಂ ಎಸ್‌ ಪಿ) ಖರೀದಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು. ಕೃಷಿ ಉತ್ಪಾದನೆಯಲ್ಲಿ ಬಿಹಾರವು ಪ್ರಮುಖ ಸ್ಥಾನವನ್ನು ಹೊಂದಿದೆ, ಲಿಚಿ, ಅಣಬೆ ಮತ್ತು ಮಖಾನಾ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ; ಮೆಕ್ಕೆಜೋಳದಲ್ಲಿ ಎರಡನೇ ಸ್ಥಾನದಲ್ಲಿದೆ; ಮಸೂರ ಮತ್ತು ಜೇನುತುಪ್ಪ ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿದೆ; ಹೆಸರುಕಾಳು ಮತ್ತು ಕಬ್ಬಿನಲ್ಲಿ ಐದನೇ ಸ್ಥಾನದಲ್ಲಿದೆ; ಮತ್ತು ಗೋಧಿ ಮತ್ತು ಅಕ್ಕಿ ಉತ್ಪಾದನೆಯಲ್ಲಿ ಆರನೇ ಸ್ಥಾನದಲ್ಲಿದೆ ಎಂದು ಶ್ರೀ ಶಾ ಹೇಳಿದರು. ಬಿಹಾರವು ಕೃಷಿ ಮತ್ತು ಸಹಕಾರಿ ವಲಯದ ಅಭಿವೃದ್ಧಿಯಲ್ಲಿ ಅಪಾರ ಸಾಮರ್ಥ್ಯವನ್ನು ಹೊಂದಿದೆ, ಇದನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಾಗುವುದು ಎಂದು ಶ್ರೀ ಶಾ ಹೇಳಿದರು. ರಾಜ್ಯದಲ್ಲಿ ಮುಚ್ಚಿಹೋಗಿರುವ ಎಲ್ಲಾ 30 ಸಕ್ಕರೆ ಕಾರ್ಖಾನೆಗಳನ್ನು ಸಂಪೂರ್ಣ ಸಮರ್ಪಣೆ ಮತ್ತು ಪ್ರಯತ್ನದಿಂದ ಪುನರುಜ್ಜೀವನಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಭರವಸೆ ನೀಡಿದರು.

ಪಿಎಸಿಎಸ್ ಈಗ ವಿವಿಧ ರೀತಿಯ ಕೆಲಸಗಳನ್ನು ಮಾಡುತ್ತಿದೆ, ಅವುಗಳನ್ನು ಗಣಕೀಕರಣಗೊಳಿಸಲಾಗಿದೆ ಮತ್ತು ಅವುಗಳ ಮೂಲಕ ಜಿಲ್ಲಾ ಮಟ್ಟದ ಬ್ಯಾಂಕುಗಳನ್ನು ಸಶಕ್ತಗೊಳಿಸುವ ಯೋಜನೆಯನ್ನು ಬಿಹಾರದಾದ್ಯಂತ ಜಾರಿಗೊಳಿಸಲಾಗುತ್ತಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. 1990 ಮತ್ತು 2005 ರ ನಡುವೆ, ಬಿಹಾರದಲ್ಲಿ ವಿರೋಧಪಕ್ಷಗಳ ಸರ್ಕಾರಗಳು ಕೊಲೆ, ಅಪಹರಣ, ಸುಲಿಗೆ, ಡಕಾಯಿತಿ ಮತ್ತು ಲೂಟಿಯ ಉದ್ಯಮವನ್ನು ನಡೆಸಿದವು, ಇದು ರಾಜ್ಯವನ್ನು ಸಂಪೂರ್ಣವಾಗಿ ಹಾಳುಮಾಡಿತು ಎಂದು ಅವರು ಹೇಳಿದರು. ಬಿಹಾರದಲ್ಲಿ ಪ್ರತಿಪಕ್ಷಗಳ ಸರ್ಕಾರಗಳ ಆಳ್ವಿಕೆಯಲ್ಲಿ ಜಾತಿ ಹತ್ಯಾಕಾಂಡಗಳು ನಡೆದವು, ಸರ್ಕಾರಿ ಪ್ರಾಯೋಜಿತ ಭ್ರಷ್ಟಾಚಾರ ನಡೆಯಿತು ಮತ್ತು ಮೇವು ಹಗರಣವು ದೇಶ ಮತ್ತು ವಿಶ್ವದಲ್ಲಿ ರಾಜ್ಯಕ್ಕೆ ಕೆಟ್ಟ ಹೆಸರನ್ನು ತಂದಿತು ಎಂದು ಶ್ರೀ ಶಾ ಹೇಳಿದರು. ಬಿಹಾರದ ಇತಿಹಾಸದಲ್ಲಿ ಪ್ರತಿಪಕ್ಷದ ಸರ್ಕಾರವು ‘ಜಂಗಲ್ ರಾಜ್’ಎಂದೇ ಸದಾ ನೆನಪಿನಲ್ಲಿ ಉಳಿಯುತ್ತದೆ ಎಂದು ಅವರು ಹೇಳಿದರು.

ಬಿಹಾರದ ನಿತೀಶ್ ಕುಮಾರ್‌ ಅವರ ಸರ್ಕಾರದ 10 ವರ್ಷಗಳ ಅವಧಿಯಲ್ಲಿ ರಸ್ತೆಗಳು, ವಿದ್ಯುತ್ ಮತ್ತು ನಲ್ಲಿ ನೀರು ಪ್ರತಿಯೊಂದು ಹಳ್ಳಿಯನ್ನು ತಲುಪಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಪ್ರಧಾನಿ ಮೋದಿ ಅವರು ಮನೆ, ಶೌಚಾಲಯ, ನೀರು, ಔಷಧ ಮತ್ತು ಪಡಿತರವನ್ನು ಒದಗಿಸುವ ಮೂಲಕ ಬಿಹಾರದ ಬಡವರ ಕಲ್ಯಾಣಕ್ಕಾಗಿ ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದರು. ಹಿಂದಿನ ಕೇಂದ್ರ ಸರ್ಕಾರದ 10 ವರ್ಷಗಳ ಅವಧಿಯಲ್ಲಿ ಬಿಹಾರಕ್ಕೆ 2.8 ಲಕ್ಷ ಕೋಟಿ ರೂ.ಗಳನ್ನು ನೀಡಲಾಗಿತ್ತು, ಆದರೆ ಮೋದಿ ಸರ್ಕಾರದ 10 ವರ್ಷಗಳಲ್ಲಿ ಬಿಹಾರಕ್ಕೆ 9.23 ಲಕ್ಷ ಕೋಟಿ ರೂ.ಗಳನ್ನು ಹಂಚಿಕೆ ಮಾಡಿದೆ ಎಂದು ಅವರು ಹೇಳಿದರು. ಬಿಹಾರವು ರಸ್ತೆಗಳು ಮತ್ತು ಸೇತುವೆಗಳಿಗೆ 4 ಲಕ್ಷ ಕೋಟಿ ರೂ.ಗಳು, ರೈಲ್ವೆ ಯೋಜನೆಗಳಿಗೆ 1 ಲಕ್ಷ ಕೋಟಿ ರೂ.ಗಳು ಮತ್ತು ವಿಮಾನ ನಿಲ್ದಾಣ ಯೋಜನೆಗಳಿಗೆ 2,000 ಕೋಟಿ ರೂ.ಗಳನ್ನು ಪಡೆದುಕೊಂಡಿದೆ ಎಂದು ಶ್ರೀ ಶಾ ಹೇಳಿದರು. ಬಿಹಾರದಲ್ಲಿ 8,000 ಕೋಟಿ ರೂ.ಗಳಲ್ಲಿ ಏಳು ಪ್ರಮುಖ ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ ಮತ್ತು 31,000 ಕೋಟಿ ರೂ.ಗಳಲ್ಲಿ 5,000 ಕಿಲೋಮೀಟರ್ ಉದ್ದದ ರೈಲು ಮಾರ್ಗವನ್ನು ನಿರ್ಮಿಸಲಾಗುತ್ತಿದೆ ಮತ್ತು ಮೊದಲ ಕಿಸಾನ್‌ ರೈಲನ್ನು ಸಹ ಬಿಹಾರದಿಂದ ಪ್ರಾರಂಭಿಸಳಾಗುತ್ತಿದೆ ಎಂದು ಅವರು ಹೇಳಿದರು. ಮೋದಿ ಸರ್ಕಾರವು ಬಿಹಾರದಲ್ಲಿ ಮಖಾನಾ ಮಂಡಳಿಯನ್ನು ಸ್ಥಾಪಿಸಿದೆ ಮತ್ತು ಕೇಂದ್ರ ಸರ್ಕಾರದ ಸಹಾಯದಿಂದ, ಬರೌನಿ ರಸಗೊಬ್ಬರ ಘಟಕ ಸೇರಿದಂತೆ 766 ಇತರ ಯೋಜನೆಗಳನ್ನು ರಾಜ್ಯದಲ್ಲಿ ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು. ನಮ್ಮ ಸರ್ಕಾರವು 20 ವರ್ಷಗಳ ಅಭಿವೃದ್ಧಿಯ ದಾಖಲೆಯನ್ನು ಹೊಂದಿದೆ ಮತ್ತು ‘ಜಂಗಲ್ ರಾಜ್’ಯುಗವು ಈಗ ಕೊನೆಗೊಂಡಿದೆ ಎಂದು ಅವರು ಒತ್ತಿ ಹೇಳಿದರು.

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಬಿಹಾರದಲ್ಲಿ ಉದ್ಘಾಟಿಸಿದ ಮತ್ತು ಶಿಲಾನ್ಯಾಸ ಮಾಡಿದ ಯೋಜನೆಗಳಲ್ಲಿ ವಿಶ್ವದ ಅತಿದೊಡ್ಡ ಆಹಾರ ಸಂಗ್ರಹಣಾ ಯೋಜನೆಯಡಿಯಲ್ಲಿ ಒಟ್ಟು ಇಪ್ಪತ್ತೈದು ಪಿಎಸಿಎಸ್‌ ಗಳಲ್ಲಿ ಅರವತ್ತೆರಡು ಸಾವಿರದ ಐದು ನೂರು ಮೆಟ್ರಿಕ್ ಟನ್‌ ಸಂಗ್ರಹಣಾ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ರೂ. 83.16 ಕೋಟಿ ವೆಚ್ಚದ ಯೋಜನೆಯ ಶಂಕುಸ್ಥಾಪನೆಯೂ ಸೇರಿದೆ. ಇದರ ಜೊತೆಗೆ, ಗೃಹ ಇಲಾಖೆಯ ಒಟ್ಟು 133 ಪೊಲೀಸ್ ಕಟ್ಟಡಗಳ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು, ಇದು 181.14 ಕೋಟಿ ರೂ. ವೆಚ್ಚದ ಯೋಜನೆಯಾಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಮೂರು ಯೋಜನೆಗಳಿಗೆ ಇಂದು ಶಿಲಾನ್ಯಾಸ ನೆರವೇರಿಸಲಾಯಿತು, ಇದರ ಒಟ್ಟು ವೆಚ್ಚ 109.16 ಕೋಟಿ ರೂ. ಆಗಿದೆ. ಇದಲ್ಲದೆ, ಪಾಟ್ನಾದ ದೀಪ್ ನಾರಾಯಣ್ ಸಿಂಗ್ ಪ್ರಾದೇಶಿಕ ಸಹಕಾರಿ ನಿರ್ವಹಣಾ ಸಂಸ್ಥೆಯಲ್ಲಿ 27.29 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಹಾಸ್ಟೆಲ್ ಅನ್ನು ಉದ್ಘಾಟಿಸಲಾಯಿತು. ಸಮಗ್ರ ಸಹಕಾರಿ ಅಭಿವೃದ್ಧಿ ಯೋಜನೆಯಡಿ 46 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಮಖಾನಾ ಸಂಸ್ಕರಣಾ ಮತ್ತು ಮಾರುಕಟ್ಟೆ ಕೇಂದ್ರ ಮತ್ತು 2.27 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಒಟ್ಟು 11 ಗೋದಾಮುಗಳನ್ನು ಸಹ ಇಂದು ಉದ್ಘಾಟಿಸಲಾಯಿತು. ಇದರೊಂದಿಗೆ ನಗರ ವಸತಿ ಮತ್ತು ಅಭಿವೃದ್ಧಿ ಇಲಾಖೆಯ ಅಮೃತ್-1 ಯೋಜನೆಯಡಿ 421.41 ಕೋಟಿ ರೂ.ಗಳ ಒಟ್ಟು ಐದು ಕುಡಿಯುವ ನೀರು ಸರಬರಾಜು ಯೋಜನೆಗಳನ್ನು ಸಹ ಇಂದು ಉದ್ಘಾಟಿಸಲಾಯಿತು.

 

*****


(Release ID: 2116943)