ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಕೇಂದ್ರ ಆರೋಗ್ಯ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಅವರು ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ವಲಯದ ಪ್ರಾದೇಶಿಕ ಸಮಿತಿಯ 77ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು


ಭಾರತದ ಆರೋಗ್ಯ ವ್ಯವಸ್ಥೆಯು ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಸಾಧಿಸಲು "ಇಡೀ ಸರ್ಕಾರ" ಮತ್ತು "ಇಡೀ ಸಮಾಜದ" ವಿಧಾನವನ್ನು ಅಳವಡಿಸಿಕೊಂಡಿದೆ, ಪ್ರಾಥಮಿಕ ಆರೋಗ್ಯ ಮತ್ತು ಅಗತ್ಯ ಸೇವೆಗಳನ್ನು ಬಲಪಡಿಸಲು ಒತ್ತು ನೀಡುತ್ತಿದೆ: ಶ್ರೀ ಜೆ ಪಿ ನಡ್ಡಾ

"ಕೇಂದ್ರ ಸರ್ಕಾರವು ವಿಶ್ವದ ಅತಿದೊಡ್ಡ ಸಾರ್ವಜನಿಕ ಅನುದಾನಿತ ಆರೋಗ್ಯ ಭರವಸೆ ಯೋಜನೆಯಾದ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ - ಜನ ಆರೋಗ್ಯ ಯೋಜನೆ ಪ್ರಾರಂಭಿಸಿದೆ. ಈ ಉಪಕ್ರಮವು 120 ಮಿಲಿಯನ್ ಕುಟುಂಬಗಳನ್ನು ಒಳಗೊಳ್ಳುತ್ತದೆ, ಇದು ಪ್ರತಿ ಕುಟುಂಬಕ್ಕೆ $6,000 ವಾರ್ಷಿಕ ಆಸ್ಪತ್ರೆ ಪ್ರಯೋಜನವನ್ನು ಒದಗಿಸುತ್ತದೆ”

"ಎನ್‌ ಸಿ ಡಿ ಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಭಾರತದ ರಾಷ್ಟ್ರೀಯ ಕಾರ್ಯಕ್ರಮವು ಆರಂಭಿಕ ಹಂತದಲ್ಲಿ ತಡೆಗಟ್ಟುವ ಕ್ರಮಗಳ ಮೇಲೆ ಕೇಂದ್ರೀಕರಿಸಲು 753 ಎನ್‌ ಸಿ ಡಿ ಕ್ಲಿನಿಕ್‌ ಗಳು, 356 ಡೇ ಕೇರ್ ಸೆಂಟರ್‌ ಗಳು ಮತ್ತು 6,238 ಸಮುದಾಯ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿದೆ"

"ಭಾರತವು ಡಿಜಿಟಲ್ ಆರೋಗ್ಯ ಕ್ಷೇತ್ರದಲ್ಲಿ ದಾರಿದೀಪ ರಾಷ್ಟ್ರವಾಗಿ, ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್, ಇ-ಸಂಜೀವಿನಿ, ಐ ಎಚ್‌ ಐ ಪಿ, ಸಕ್ಷಮ್‌ ಮುಂತಾದ ಡಿಜಿಟಲ್‌ ಸಾರ್ವಜನಿಕ ಮೂಲಸೌಕರ್ಯಗಳನ್ನು ಡಬ್ಲು ಎಚ್‌ ಒ ನಿರ್ವಹಣೆಯ ಜಾಲವಾದ ಜಾಗತಿಕ ಡಿಜಿಟಲ್ ಆರೋಗ್ಯ ಉಪಕ್ರಮಗಳ ಮೂಲಕ ತಾಂತ್ರಿಕ ಮತ್ತು ಆರ್ಥಿಕ ಬೆಂ

Posted On: 07 OCT 2024 12:07PM by PIB Bengaluru

ಭಾರತದ ಆರೋಗ್ಯ ವ್ಯವಸ್ಥೆಯು ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು (ಯುಹೆಚ್‌ಸಿ) ಸಾಧಿಸಲು "ಇಡೀ ಸರ್ಕಾರ" ಮತ್ತು "ಇಡೀ ಸಮಾಜದ" ವಿಧಾನವನ್ನು ಅಳವಡಿಸಿಕೊಂಡಿದೆ, ಪ್ರಾಥಮಿಕ ಆರೋಗ್ಯ ಮತ್ತು ಅಗತ್ಯ ಸೇವೆಗಳನ್ನು ಬಲಪಡಿಸಲು ಒತ್ತು ನೀಡುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಅವರು ಇಂದು ಇಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ವಲಯದ (ಎಸ್‌ ಇ ಎ ಆರ್‌ ಒ) 77 ನೇ ಅಧಿವೇಶನದಲ್ಲಿ ತಮ್ಮ ಉದ್ಘಾಟನಾ ಭಾಷಣದಲ್ಲಿ ಹೇಳಿದರು.

ಪ್ರಾದೇಶಿಕ ಸಮಿತಿ ಸಭೆಯ ಆರಂಭಿಕ ಅಧಿವೇಶನವು ಪದಾಧಿಕಾರಿಗಳ ಆಯ್ಕೆ, "ಸಂಕಲ್ಪಗಳು ಮತ್ತು ನಿರ್ಧಾರಗಳಿಗಾಗಿ ಕರಡು ರಚನೆಯ ಗುಂಪು" ಸ್ಥಾಪನೆ, ಅಧಿವೇಶನದ ನಡವಳಿಕೆಯನ್ನು ನಿಯಂತ್ರಿಸಲು "ವಿಶೇಷ ಕಾರ್ಯವಿಧಾನಗಳ" ಅಳವಡಿಕೆ ಮತ್ತು ಕಾರ್ಯಸೂಚಿಯ ತಾತ್ಕಾಲಿಕ ಅಂಗೀಕಾರವನ್ನು ಒಳಗೊಂಡಿತ್ತು. ಕಾರ್ಯಕ್ರಮದಲ್ಲಿ ಡಾ ರಜಿಯಾ ಪೆಂಡ್ಸೆ, ಚೆಫ್ ಡಿ ಕ್ಯಾಬಿನೆಟ್, ಡಬ್ಲ್ಯು ಎಚ್‌ ಒ ಪ್ರಧಾನ ಕಛೇರಿ; ಶ್ರೀ ಲಿಯಾನ್ಪೊ ಟಂಡಿನ್ ವಾಂಗ್ಚುಕ್, ಆರೋಗ್ಯ ಸಚಿವರು, ಭೂತಾನ್; ಶ್ರೀ ಅಬ್ದುಲ್ಲಾ ನಜೀಮ್ ಇಬ್ರಾಹಿಂ, ಆರೋಗ್ಯ ಸಚಿವರು, ಮಾಲ್ಡೀವ್ಸ್; ಶ್ರೀ ಪ್ರದೀಪ್ ಪೌಡೆಲ್, ನೇಪಾಳದ ಆರೋಗ್ಯ ಮತ್ತು ಜನಸಂಖ್ಯಾ ಸಚಿವರು; ಡಾ ಎಲಿಯಾ ಆಂಟೋನಿಯೊ ಡಿ ಅರೌಜೊ ಡಾಸ್ ರೀಸ್ ಅಮರಲ್, ಆರೋಗ್ಯ ಸಚಿವರು, ಟಿಮೋರ್ ಲೆಸ್ಟೆ; ಶ್ರೀ ಎಂಎ ಅಕ್ಮಲ್ ಹೊಸೈನ್ ಆಜಾದ್, ಹಿರಿಯ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಬಾಂಗ್ಲಾದೇಶ; ಶ್ರೀ ಕುಂಟಾ ವಿಬಾವ ದಾಸ ನುಗ್ರಹ, ಪ್ರಧಾನ ಕಾರ್ಯದರ್ಶಿ, ಆರೋಗ್ಯ ಸಚಿವಾಲಯ, ಇಂಡೋನೇಷ್ಯಾ; ಡಾ.ಪಿ.ಜಿ.ಮಹಿಪಾಲ, ಕಾರ್ಯದರ್ಶಿ, ಆರೋಗ್ಯ ಸಚಿವಾಲಯ, ಶ್ರೀಲಂಕಾ; ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾದ ಭಾರತದ ರಾಯಭಾರಿ ಶ್ರೀ ಚೋ ಹುಯಿ ಚೋಲ್ ಮತ್ತು ಥೈಲ್ಯಾಂಡ್ ಸಾರ್ವಜನಿಕ ಆರೋಗ್ಯ ಸಚಿವಾಲಯದ ಉಪ ಖಾಯಂ ಕಾರ್ಯದರ್ಶಿ ಡಾ ವೀರವುತ್ ಇಮ್ಸಾಮ್ರಾನ್ ಅವರು ಭಾಗವಹಿಸಿದರು.

ಶ್ರೀ ನಡ್ಡಾ ಅವರು ಮಾತನಾಡಿ, “ಎಲ್ಲರಿಗೂ ಆರೋಗ್ಯ ರಕ್ಷಣೆಯನ್ನು ಒದಗಿಸುವ ಬದ್ಧತೆಗೆ ಅನುಗುಣವಾಗಿ, ಕೇಂದ್ರ ಸರ್ಕಾರವು ವಿಶ್ವದ ಅತಿದೊಡ್ಡ ಸಾರ್ವಜನಿಕ ಅನುದಾನಿತ ಆರೋಗ್ಯ ಭರವಸೆ ಯೋಜನೆಯಾದ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ - ಜನ ಆರೋಗ್ಯ ಯೋಜನೆಯನ್ನು (ಎಬಿಪಿಎಂ-ಜೆಎವೈ) ಪ್ರಾರಂಭಿಸಿತು. ಈ ಉಪಕ್ರಮವು 120 ಮಿಲಿಯನ್ ಕುಟುಂಬಗಳನ್ನು ಒಳಗೊಳ್ಳುತ್ತದೆ, ಇದು ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ $6,000 ಆಸ್ಪತ್ರೆ ಪ್ರಯೋಜನವನ್ನು ಒದಗಿಸುತ್ತದೆ. ಸರ್ಕಾರವು ಇತ್ತೀಚೆಗೆ 70 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಈ ಯೋಜನೆಯನ್ನು ವಿಸ್ತರಿಸಿದೆ ಎಂದು ಹೇಳಿದರು. "ಈ ವಿಸ್ತರಣೆಯು 60 ಮಿಲಿಯನ್ ಹಿರಿಯ ಜನಸಂಖ್ಯೆಯನ್ನು ಒಳಗೊಂಡ ಸುಮಾರು 45 ಮಿಲಿಯನ್ ಕುಟುಂಬಗಳಿಗೆ ಉಚಿತ ಆರೋಗ್ಯ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ಇದು ಭಾರತದ ಬೆಳೆಯುತ್ತಿರುವ ಹಿರಿಯ ನಾಗರಿಕರ ಜನಸಂಖ್ಯೆಗೆ ಸಾರ್ವತ್ರಿಕ ಮತ್ತು ಅಂತರ್ಗತ ಆರೋಗ್ಯ ರಕ್ಷಣೆಯನ್ನು ಖಾತ್ರಿಪಡಿಸುವ ಸರ್ಕಾರದ ಬದ್ಧತೆಯನ್ನು ಒತ್ತಿಹೇಳುತ್ತದೆ”ಎಂದು ಅವರು ಹೇಳಿದರು.

ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದ (ಎನ್‌ ಸಿ ಡಿ) ಹೆಚ್ಚುತ್ತಿರುವ ಸಾರ್ವಜನಿಕ ಆರೋಗ್ಯ ಸವಾಲುಗಳನ್ನು ಗುರುತಿಸಿದ ಕೇಂದ್ರ ಆರೋಗ್ಯ ಸಚಿವರು, “ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೃದಯರಕ್ತನಾಳದ ಕಾಯಿಲೆಗಳಂತಹ ಪರಿಸ್ಥಿತಿಗಳನ್ನು ನಿಭಾಯಿಸಲು ಭಾರತವು 2010 ರಿಂದ ಎನ್‌ ಸಿ ಡಿ ಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಈ ಉಪಕ್ರಮವು ಆರಂಭಿಕ ಹಂತದಲ್ಲಿ ತಡೆಗಟ್ಟುವ ಕ್ರಮಗಳ ಮೇಲೆ ಕೇಂದ್ರೀಕರಿಸಲು 753 ಎನ್‌ ಸಿ ಡಿ ಕ್ಲಿನಿಕ್‌ ಗಳು, 356 ಡೇ ಕೇರ್ ಸೆಂಟರ್‌ ಗಳು ಮತ್ತು 6,238 ಸಮುದಾಯ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲು ಕಾರಣವಾಯಿತು ಎಂದು ಅವರು ಹೇಳಿದರು.

ಭಾರತವು ಡಿಜಿಟಲ್ ಆರೋಗ್ಯ ಕ್ಷೇತ್ರದಲ್ಲಿ ದಾರಿದೀಪ ರಾಷ್ಟ್ರವಾಗಿ, ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್, ಇ-ಸಂಜೀವಿನಿ, ಐ ಎಚ್‌ ಐ ಪಿ, ಸಕ್ಷಮ್‌ ಮುಂತಾದ ಡಿಜಿಟಲ್‌ ಸಾರ್ವಜನಿಕ ಮೂಲಸೌಕರ್ಯಗಳನ್ನು ಭಾರತದ ಜಿ20 ಅಧ್ಯಕ್ಷತೆಯ ಸಮಯದಲ್ಲಿ ಪ್ರಾರಂಭಿಸಲಾದ ಡಬ್ಲು ಎಚ್‌ ಒ ನಿರ್ವಹಣೆಯ ಜಾಲವಾದ ಜಾಗತಿಕ ಡಿಜಿಟಲ್ ಆರೋಗ್ಯ ಉಪಕ್ರಮಗಳ ಮೂಲಕ ತಾಂತ್ರಿಕ ಮತ್ತು ಆರ್ಥಿಕ ಬೆಂಬಲವನ್ನು ಹಂಚಿಕೊಳ್ಳಲು ಸಿದ್ಧವಾಗಿದೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಕೋವಿನ್ ಡಿಜಿಟಲ್ ಪ್ಲಾಟ್‌ಫಾರ್ಮ್‌‌ ನ ಗಮನಾರ್ಹ ಯಶಸ್ಸನ್ನು ಅನುಸರಿಸಿ, ಭಾರತವು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮಕ್ಕಾಗಿ ಆನ್‌ಲೈನ್ ಡಿಜಿಟಲ್ ಪ್ಲಾಟ್‌ಫಾರ್ಮ್-UWIN ಪರಿಕಲ್ಪನೆಯನ್ನು ಮಾಡಿದೆ. ಈ ಪೋರ್ಟಲ್ ಎಲ್ಲಾ ಲಸಿಕೆ ಕಾರ್ಯಕ್ರಮಗಳನ್ನು  ನೋಂದಾಯಿಸುತ್ತದೆ, ಟ್ರ್ಯಾಕ್ ಮಾಡುತ್ತದೆ ಮತ್ತು ಮೇಲ್ವಿಚಾರಣೆ ಮಾಡುತ್ತದೆ ಎಂದು ಅವರು ಹೇಳಿದರು.

ಆಗ್ನೇಯ ಏಷ್ಯಾದ ಹಲವಾರು ಸದಸ್ಯ ರಾಷ್ಟ್ರಗಳಲ್ಲಿ ಸಾಂಪ್ರದಾಯಿಕ ಮತ್ತು ಪೂರಕ ಔಷಧವು ವಹಿಸುವ ಪ್ರಮುಖ ಪಾತ್ರವನ್ನು ಪ್ರಸ್ತಾಪಿಸಿದ ಶ್ರೀ ನಡ್ಡಾ, ಜಾಗತಿಕ ಮಟ್ಟದಲ್ಲಿ ಈ ವ್ಯವಸ್ಥೆಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಜಾಗತಿಕ ಸಾಂಪ್ರದಾಯಿಕ ಔಷಧ ಕೇಂದ್ರವನ್ನು ರಚಿಸುವಲ್ಲಿ ಭಾರತವು ವಿಶ್ವ ಆರೋಗ್ಯ ಸಂಸ್ಥೆಯನ್ನು ಬೆಂಬಲಿಸಿದೆ ಎಂದು ಒತ್ತಿ ಹೇಳಿದರು. ಸಾಂಪ್ರದಾಯಿಕ ವೈದ್ಯಕೀಯ ವ್ಯವಸ್ಥೆಯೊಂದಿಗೆ ಈ ವ್ಯವಸ್ಥೆಯನ್ನು ಸಂಯೋಜಿಸುವಲ್ಲಿ ಭಾರತದ ಅನುಭವವು ಸಮಗ್ರ ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ ಕಾರಣವಾಗಿದೆ, ಇದು ಒಟ್ಟಾರೆ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ ಮತ್ತು ಆರೋಗ್ಯ ಸೇವೆಗಳ ವ್ಯಾಪ್ತಿಯನ್ನು ವಿಸ್ತರಿಸುತ್ತದೆ ಎಂದು ಅವರು ಹೇಳಿದರು. ನಮ್ಮ ಆಯುಷ್ಮಾನ್ ಆರೋಗ್ಯ ಮಂದಿರಗಳು ಸಮುದಾಯ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು ನಾಗರಿಕರ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಖಾತ್ರಿಪಡಿಸುವ  ಸಾಂಪ್ರದಾಯಿಕ ಮತ್ತು ಪಾರಂಪರಿಕ ಔಷಧಗಳ ಮೂಲಕ ಸಮಗ್ರ ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ ಮಹತ್ವದ್ದಾಗಿವೆ ಎಂದು ಅವರು ಹೇಳಿದರು.

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿಯವರ 'ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್, ಸಬ್ಕಾ ಪ್ರಯಾಸ್' ಎಂಬ ದೃಷ್ಟಿಕೋನವನ್ನು ಕೇಂದ್ರ ಆರೋಗ್ಯ ಸಚಿವರು ಎತ್ತಿ ತೋರಿಸಿದರು. ಇದರರ್ಥ 'ಎಲ್ಲರ ಒಳಗೊಳ್ಳುವಿಕೆ, ಎಲ್ಲರ ಅಭಿವೃದ್ಧಿ, ಎಲ್ಲರ ನಂಬಿಕೆ, ಎಲ್ಲರ ಪ್ರಯತ್ನಗಳು', ಇದು ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಏಕತೆಯನ್ನು ರೂಪಿಸುತ್ತದೆ, ಅಂತರ್ಗತ, ಮಾನವ-ಕೇಂದ್ರಿತ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಆಕಾಂಕ್ಷೆಗಳನ್ನು ಅಂಗೀಕರಿಸುವ ಮೂಲಕ ಮತ್ತು ಜಾಗತಿಕ ಒಳಿತಿಗಾಗಿ ಪ್ರತಿ ರಾಷ್ಟ್ರದ ಶಕ್ತಿಯನ್ನು ಬಳಸಿಕೊಳ್ಳುವ ಮೂಲಕ ವಿಶ್ವಾಸವನ್ನು ನಿರ್ಮಿಸುತ್ತದೆ ಎಂದು ಅವರು ಹೇಳಿದರು. "ಸಾಮೂಹಿಕ ಅನುಭವಗಳು ದೇಶಗಳಾದ್ಯಂತ ಪರಿವರ್ತನೆಗಳನ್ನು ತರಬಹುದು ಎಂಬ ವಿಶ್ವಾಸ ನಮಗಿದೆ. ಆರೋಗ್ಯವು ಗಡಿಗಳನ್ನು ಮೀರುವುದರಿಂದ, ಸಮಗ್ರ ಮತ್ತು ಸಹಯೋಗ ವಿಧಾನದ ಅಗತ್ಯವಿರುತ್ತದೆ. ಪರಸ್ಪರರ ಯಶಸ್ಸು ಮತ್ತು ಸವಾಲುಗಳಿಂದ ಕಲಿಯುವ ಮೂಲಕ ನಾವು ಆರೋಗ್ಯ ವ್ಯವಸ್ಥೆಗಳ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಬಹುದು”ಎಂದು ಅವರು ಹೇಳಿದರು.

ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಡಬ್ಲ್ಯು ಎಚ್‌ ಒ ಎಸ್‌ ಇ ಎ ಆರ್‌ ಒ ಪ್ರಾದೇಶಿಕ ನಿರ್ದೇಶಕ ಸೈಮಾ ವಾಝೆದ್, “1948 ರಲ್ಲಿ, ಆಗ್ನೇಯ ಏಷ್ಯಾದ ಮೊದಲ ಪ್ರಾದೇಶಿಕ ಸಮಿತಿಯನ್ನು ರಚಿಸಿದಾಗ, ಜಾಗತಿಕವಾಗಿ ಶಿಶು ಮರಣ ಪ್ರಮಾಣವು 147 ರಷ್ಟಿತ್ತು. ಇಂದು ಅದು 25 ಕ್ಕೆ ಕಡಿಮೆಯಾಗಿದೆ. ನಂತರ, ಪ್ರತಿಜೀವಕ ಯುಗ ಆಗಷ್ಟೇ ಶುರುವಾಗಿತ್ತು. ಇಂದು ನಾವು ಆಂಟಿಮೈಕ್ರೊಬಿಯಲ್ ಪ್ರತಿರೋಧವನ್ನು ಎದುರಿಸುತ್ತಿದ್ದೇವೆ. ಆದ್ದರಿಂದ, ನಾವು ಹಳೆಯ ಅಪಾಯಗಳನ್ನು ಜಯಿಸಿದಾಗ, ನಾವು ಹೊಸದನ್ನು ಎದುರಿಸುತ್ತೇವೆ. ಸಾಮೂಹಿಕ ಬುದ್ಧಿವಂತಿಕೆಯಿಂದ ಮತ್ತು 21 ನೇ ಶತಮಾನದ ಸಾಧನಗಳೊಂದಿಗೆ ಇಂದಿನ ಅಪಾಯಗಳನ್ನು ಎದುರಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅವರು ಹೇಳಿದರು.

ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀಮತಿ ಪುಣ್ಯ ಸಲಿಲಾ ಶ್ರೀವಾಸ್ತವ, ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಗಳಾದ ಶ್ರೀಮತಿ ಹೆಕಾಲಿ ಝಿಮೊಮಿ ಹಾಗೂ ಶ್ರೀಮತಿ ಆರಾಧನಾ ಪಟ್ನಾಯಕ್, ಭಾರತಕ್ಕೆ ಡಬ್ಲ್ಯು ಎಚ್‌ ಒ ಪ್ರತಿನಿಧಿ ಡಾ ರೋಡ್ರಿಗೋ ಆಫ್ರಿನ್ ಮತ್ತು ಕೇಂದ್ರ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

*****



(Release ID: 2062791) Visitor Counter : 26