ಪ್ರಧಾನ ಮಂತ್ರಿಯವರ ಕಛೇರಿ

ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ದಿನಾಂಕ 25.08.2024 ರಂದು ಮಾಡಿದ ‘ಮನ್ ಕಿ ಬಾತ್’ – 113 ನೇ ಸಂಚಿಕೆಯ ಕನ್ನಡ ಅವತರಣಿಕೆ

Posted On: 25 AUG 2024 11:41AM by PIB Bengaluru

ನನ್ನ ಪ್ರಿಯ ದೇಶವಾಸಿಗಳೆ ನಮಸ್ಕಾರ. ಮತ್ತೊಮ್ಮೆ, 'ಮನದ ಮಾತಿಗೆ' ನನ್ನ ಕುಟುಂಬದ ಎಲ್ಲಾ ಸದಸ್ಯರಿಗೆ ಸ್ವಾಗತ. ಇಂದು ಮತ್ತೊಮ್ಮೆ ನಾವು ದೇಶದ ಸಾಧನೆಗಳು ಮತ್ತು ದೇಶದ ಜನತೆಯ ಸಾಮೂಹಿಕ ಪ್ರಯತ್ನಗಳ ಬಗ್ಗೆ ಮಾತನಾಡಲಿದ್ದೇವೆ. 21 ನೇ ಶತಮಾನದ ಭಾರತದಲ್ಲಿ ವಿಕಸಿತ ಭಾರತದ ಅಡಿಪಾಯವನ್ನು ಬಲಪಡಿಸುವ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಉದಾಹರಣೆಗೆ, ಇದೇ ಆಗಸ್ಟ್ 23 ರಂದು, ನಾವೆಲ್ಲರೂ ಪ್ರಥಮ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಿದೆವು. ನೀವೆಲ್ಲರೂ ಈ ದಿನವನ್ನು ಆಚರಿಸಿರಬಹುದು ಎಂದು ನಾನು ಭಾವಿಸುತ್ತೇನೆ, ಮತ್ತೊಮ್ಮೆ ಚಂದ್ರಯಾನ-3 ರ ಯಶಸ್ಸನ್ನು ಆಚರಿಸಿರಬಹುದು. ಕಳೆದ ವರ್ಷ, ಇದೇ ದಿನದಂದು, ಚಂದ್ರಯಾನ-3 ಚಂದ್ರನ ದಕ್ಷಿಣ ಭಾಗದಲ್ಲಿರುವ ಶಿವ-ಶಕ್ತಿ ಪಾಯಿಂಟ್‌ನಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿತ್ತು. ಭಾರತ ಈ ಅಮೋಘ ಸಾಧನೆ ಮಾಡಿದ ವಿಶ್ವದ ಮೊದಲ ದೇಶವಾಯಿತು.

ಸ್ನೇಹಿತರೇ, ದೇಶದ ಯುವಕರಿಗೆ ಸಹ ಬಾಹ್ಯಾಕಾಶ ಕ್ಷೇತ್ರದ ಸುಧಾರಣೆಗಳಿಂದ ಸಾಕಷ್ಟು ಪ್ರಯೋಜನವಾಗಿದೆ, ಹಾಗಾಗಿ ಇಂದು 'ಮನದ ಮಾತಿನಲ್ಲಿ' ಬಾಹ್ಯಾಕಾಶ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ನನ್ನ ಕೆಲವು ಯುವ ಸ್ನೇಹಿತರೊಂದಿಗೆ ಮಾತನಾಡಲು ಯೋಚಿಸಿದ್ದೇನೆ. Spacetech Start-Up ನ ಸಂಸ್ಥೆಯಾದ GalaxEye ತಂಡವು ನನ್ನೊಂದಿಗೆ ಮಾತನಾಡಲು ಸಿದ್ಧವಿದೆ. ಈ ಸ್ಟಾರ್ಟ್-ಅಪ್ ಅನ್ನು ಐಐಟಿ-ಮದ್ರಾಸ್‌ನ ಹಳೆಯ ವಿದ್ಯಾರ್ಥಿಗಳು ಪ್ರಾರಂಭಿಸಿದ್ದರು. ಈ ಎಲ್ಲಾ ಯುವಕರು ಇಂದು ನಮ್ಮೊಂದಿಗೆ ಫೋನ್ ಲೈನ್‌ನಲ್ಲಿ ಇದ್ದಾರೆ - ಸುಯಶ್, ಡೇನಿಲ್, ರಕ್ಷಿತ್, ಕಿಶನ್ ಮತ್ತು ಪ್ರಣೀತ್. ಬನ್ನಿ, ಈ ಯುವಕರ ಅನುಭವಗಳನ್ನು ತಿಳಿಯೋಣ.

ಪ್ರಧಾನಮಂತ್ರಿ: ಹಲೋ!

ಎಲ್ಲಾ ಯುವಕರು: ಹಲೋ!

ಪ್ರಧಾನಮಂತ್ರಿ: ನಮಸ್ಕಾರ!

ಎಲ್ಲಾ ಯುವಕರು (ಒಟ್ಟಿಗೆ): ನಮಸ್ಕಾರ ಸಾರ್!

ಪ್ರಧಾನಮಂತ್ರಿ: ಸ್ನೇಹಿತರೇ, ಐಐಟಿ – ಮದ್ರಾಸ್ ನಿಂದ ಆರಂಭವಾದ ನಿಮ್ಮ ಅಚಲ ಸ್ನೇಹವು ಇಂದಿಗೂ ಗಟ್ಟಿಯಾಗಿ ಉಳಿದಿದೆ ಎಂಬುದನ್ನು ನೋಡಿ ನನಗೆ ಸಂತೋಷವಾಗಿದೆ. ಆದ್ದರಿಂದಲೇ ನೀವೆಲ್ಲ ಸೇರಿ GalaxEye ಅನ್ನು ಪ್ರಾರಂಭಿಸಲು ನಿರ್ಧರಿಸಿದ್ದೀರಿ. ಮತ್ತು ಇಂದು ನಾನು ಅದರ ಬಗ್ಗೆ ತಿಳಿದುಕೊಳ್ಳಲು ಬಯಸುತ್ತೇನೆ. ಇದರ ಬಗ್ಗೆ ತಿಳಿಸಿ. ಜೊತೆಗೆ ನಿಮ್ಮ ತಂತ್ರಜ್ಞಾನದಿಂದ ದೇಶಕ್ಕೆ ಎಷ್ಟು ಲಾಭವಾಗಲಿದೆ ಎಂಬುದನ್ನು ಸಹ ತಿಳಿಸಿ.

ಸುಯಶ್: ಸರ್, ನನ್ನ ಹೆಸರು ಸುಯಶ್. ನೀವು ಹೇಳಿದಂತೆ ನಾವೆಲ್ಲ ಒಟ್ಟಿಗೆ ಇದ್ದೇವೆ. ಐಐಟಿ-ಮದ್ರಾಸ್‌ನಲ್ಲಿ ಎಲ್ಲರೂ ಭೇಟಿಯಾದೆವು. ಅಲ್ಲಿ ನಾವೆಲ್ಲರೂ ಇಂಜಿನಿಯರಿಂಗ್ ಪದವಿಯ ಬೇರೆ ಬೇರೆ ವರ್ಷದ ವಿಭಾಗಗಳಲ್ಲಿ ಓದುತ್ತಿದ್ದೆವು. ಮತ್ತು ಅದೇ ಸಮಯದಲ್ಲಿ ಹೈಪರ್ಲೂಪ್ ಎಂಬ ಪ್ರಾಜೆಕ್ಟ್ ಇದೆ ಎಂದು ನಮಗೆ ತಿಳಿಯಿತು ಅದನ್ನು ನಾವು ಒಟ್ಟಿಗೆ ಮಾಡಬಯಸಿದ್ದೆವು. ಅದೇ ಸಮಯದಲ್ಲಿ, ನಾವು ಒಂದು ತಂಡವನ್ನು ರಚಿಸಿದೆವು, ಅದರ ಹೆಸರು 'ಆವಿಷ್ಕಾರ್ ಹೈಪರ್ಲೂಪ್', ಅದೇ ತಂಡದೊಂದಿಗೆ ನಾವು ಅಮೇರಿಕಾಕ್ಕೆ ಕೂಡ ಭೇಟಿ ನೀಡಿದೆವು. ಆ ವರ್ಷ ಅಲ್ಲಿಗೆ ಹೋಗಿ ನಮ್ಮ ದೇಶದ ಧ್ವಜವನ್ನು ಹಾರಿಸಿದ ಏಷ್ಯಾದ ಏಕೈಕ ತಂಡ ನಮ್ಮದಾಗಿತ್ತು . ಅಲ್ಲದೆ ಪ್ರಪಂಚದಾದ್ಯಂತದ ಸುಮಾರು 1500 ತಂಡಗಳ ಪೈಕಿ ನಾವು ಅಗ್ರ 20 ತಂಡಗಳಲ್ಲಿ ಒಂದಾಗಿದ್ದೆವು.

ಪ್ರಧಾನಮಂತ್ರಿ: ಬನ್ನಿ! ಮತ್ತಷ್ಟು ನಿಮ್ಮಿಂದ ಕೇಳುವ ಮೊದಲು, ನಿಮ್ಮ ಸಾಧನೆಗೆ ನಿಮ್ಮನ್ನು ಅಭಿನಂದಿಸಬಯಸುತ್ತೇನೆ.

ಸುಯಶ್: ತುಂಬಾ ಧನ್ಯವಾದಗಳು. ಈ ಸಾಧನೆಯ ಅವಧಿಯಲ್ಲಿ ನಮ್ಮ ಸ್ನೇಹ ಗಾಢವಾಯಿತು ಮತ್ತು ಈ ರೀತಿಯಲ್ಲಿ ಕ್ಲಿಷ್ಟ ಮತ್ತು ಕಠಿಣ ಪ್ರಾಜೆಕ್ಟ್ ಗಳನ್ನು ಮಾಡುವ ಆತ್ಮವಿಶ್ವಾಸವೂ ಬೆಳೆಯಿತು. ಅದೇ ಸಮಯದಲ್ಲಿ, SpaceX ನೋಡಿ ಅಂದರೆ ನೀವು 2020 ರಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿನ ಖಾಸಗೀಕರಣ ಮಾಡಿದ್ದು, ನನ್ನ ಒಂದು ಮಹತ್ತರ  ನಿರ್ಧಾರವಾಗಿತ್ತು. ಅದನ್ನು ಕಂಡು ನಾವು ತುಂಬಾ ಉತ್ಸುಕರಾಗಿದ್ದೆವು. ನಾವು ಏನನ್ನು ನಿರ್ಮಿಸುತ್ತಿದ್ದೇವೆ ಎಂಬುದರ ಬಗ್ಗೆ ಮಾತನಾಡಲು ಮತ್ತು ಅದರ ಪ್ರಯೋಜನವೇನು ಎಂದು ತಿಳಿಸಲು ನಾನು ರಕ್ಷಿತ್ ಅವರನ್ನು ಆಹ್ವಾನಿಸಲು ಬಯಸುತ್ತೇನೆ? ಧನ್ಯವಾದ.

ರಕ್ಷಿತ್: ಸರ್, ನನ್ನ ಹೆಸರು ರಕ್ಷಿತ್. ಈ ತಂತ್ರಜ್ಞಾನದಿಂದ ನಾವು ಹೇಗೆ ಪ್ರಯೋಜನ ಪಡೆಯಬಹುದು ಎಂಬುದಕ್ಕೆ ನಾನು ಉತ್ತರಿಸುತ್ತನೆ.

ಪ್ರಧಾನಮಂತ್ರಿ: ರಕ್ಷಿತ್, ನೀವು ಉತ್ತರಾಖಂಡದಲ್ಲಿ ಯಾವ ಪ್ರಾಂತ್ಯದವರು?

ರಕ್ಷಿತ್: ಸರ್, ನಾನು ಅಲ್ಮೋರಾ ನಿವಾಸಿ.

ಪ್ರಧಾನಮಂತ್ರಿ: ಹಾಗಾದರೆ ನೀವು ಬಾಲ್ ಮಿಠಾಯಿ ಪ್ರೇಮಿಯೇ?

ರಕ್ಷಿತ್: ಹೌದು ಸರ್. ಹೌದು ಸರ್. ಬಾಲ್ ಮಿಠಾಯಿ ನನಗೆ ಅಚ್ಚುಮೆಚ್ಚು.

ಪ್ರಧಾನಮಂತ್ರಿ: ನಮ್ಮ ಲಕ್ಷಸೇನ್ ಇದ್ದಾರಲ್ಲಾ, ನನಗೆ ಅವರು ನಿಯಮಿತವಾಗಿ ಬಾಲ್ ಮಿಠಾಯಿ ತಂದುಕೊಡುತ್ತಾರೆ

ಹಾಂ ರಕ್ಷಿತ್ ಹೇಳಿ

ರಕ್ಷಿತ್: ನಮ್ಮ ಈ ತಂತ್ರಜ್ಞಾನವು ಬಾಹ್ಯಾಕಾಶದಿಂದ ಮೋಡಗಳನ್ನು ಎರಡೂ ಬದಿಯಿಂದ ಮತ್ತು ರಾತ್ರಿಯಲ್ಲಿಯೂ ಸಹ ನೋಡಬಲ್ಲದು. ಆದ್ದರಿಂದ ನಾವು ದೇಶದ ಯಾವುದೇ ಮೂಲೆಯಲ್ಲಿ ಪ್ರತಿ ದಿನವೂ ಸ್ಪಷ್ಟವಾದ ಚಿತ್ರವನ್ನು ತೆಗೆಯಬಹುದು.ಮತ್ತು ನಾವು ಈ ದತ್ತಾಂಶವನ್ನು ಎರಡು ಕ್ಷೇತ್ರಗಳಲ್ಲಿ ಅಭಿವೃದ್ಧಿಗೆ ಬಳಸುತ್ತೇವೆ. ಮೊದಲನೆಯದು ಭಾರತವನ್ನು ಅತ್ಯಂತ ಸುರಕ್ಷಿತಗೊಳಿಸುವುದಾಗಿದೆ. ನಮ್ಮ ಗಡಿಗಳು, ನಮ್ಮ ಸಾಗರಗಳು ಮತ್ತು ಸಮುದ್ರಗಳ ಮೇಲೆ ನಾವು ಪ್ರತಿದಿನ ನಿಗಾವಹಿಸಬಹುದು. ಜೊತೆಗೆ ಶತ್ರುಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸುತ್ತೇವೆ ಮತ್ತು ನಮ್ಮ ಸಶಸ್ತ್ರ ಪಡೆಗಳಿಗೆ ಗುಪ್ತಚರ ಮಾಹಿತಿಯನ್ನು ನೀಡುತ್ತದೆ. ಎರಡನೆಯದು -  ಭಾರತದ ರೈತರ ಸಬಲೀಕರಣ. ನಾವು ಈಗಾಗಲೇ ಭಾರತದ ಸೀಗಡಿ ಕೃಷಿಕರಿಗಾಗಿ ತಮ್ಮ ಕೊಳಗಳ ನೀರಿನ ಗುಣಮಟ್ಟವನ್ನು ಪ್ರಸ್ತುತ ವೆಚ್ಚದ 1/10 ರಷ್ಟು ಕಡಿಮೆ ವೆಚ್ಚದಲ್ಲಿ ಅಳೆಯುವ ಉತ್ಪನ್ನವನ್ನು ಸಿದ್ಧಪಡಿಸಿದ್ದೇವೆ. ಮುಂದುವರಿದಂತೆ ವಿಶ್ವಕ್ಕಾಗಿ ಉತ್ತಮ ಗುಣಮಟ್ಟದ ಉಪಗ್ರಹ ಚಿತ್ರಗಳನ್ನು  ಲಭ್ಯವಾಗಿಸಬಯಸುತ್ತೇವೆ ಮತ್ತು ಜಾಗತಿಕ ತಾಪಮಾನದಂತಹ ಜಾಗತಿಕ ಸಮಸ್ಯೆಗಳ ವಿರುದ್ಧ ಹೋರಾಡಲು, ನಾವು ಜಗತ್ತಿಗೆ ಉತ್ತಮ ಗುಣಮಟ್ಟದ ಉಪಗ್ರಹ ದತ್ತಾಂಶವನ್ನು ಒದಗಿಸಲು ಇಚ್ಛಿಸುತ್ತೇವೆ.

ಪ್ರಧಾನಮಂತ್ರಿ: ಅಂದರೆ ನಿಮ್ಮ ತಂಡ ಜೈ ಜವಾನ್, ಜೈ ಕಿಸಾನ್ ಎರಡನ್ನೂ ಸಾಧಿಸುತ್ತದೆ.

ರಕ್ಷಿತ್: ಹೌದು ಸಾರ್, ಖಂಡಿತಾ.

ಪ್ರಧಾನಮಂತ್ರಿ: ಸ್ನೇಹಿತರೇ, ನೀವು ಇಂತಹ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದೀರಿ, ನಿಮ್ಮ ತಂತ್ರಜ್ಞಾನ ಎಷ್ಟು ನಿಖರವಾದದ್ದು ಎಂದು ಸಹ ನಾನು ತಿಳಿದುಕೊಳ್ಳಲು ಬಯಸುತ್ತೇನೆ?

ರಕ್ಷಿತ್: ಸರ್, ನಾವು 50 ಸೆಂಟಿಮೀಟರ್‌ಗಿಂತ ಕಡಿಮೆ ರೆಸಲ್ಯೂಶನ್‌ ವರೆಗೂ ಹೋಗಲು ಸಾಧ್ಯ. ಮತ್ತು ನಾವು ಒಂದು ಸಮಯದಲ್ಲಿ ಸರಿಸುಮಾರು 300 ಚದರ ಕಿಲೋಮೀಟರ್ ಪ್ರದೇಶದ ವ್ಯಾಪ್ತಿಯನ್ನು ಚಿತ್ರದಲ್ಲಿ ಸೆರೆ ಹಿಡಿಯಲು ಸಾಧ್ಯ.

ಪ್ರಧಾನಮಂತ್ರಿ: ಇದನ್ನು ಕೇಳಿದಾಗ ದೇಶವಾಸಿಗಳು ತುಂಬಾ ಹೆಮ್ಮೆಪಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಆದರೆ ನಾನು ಇನ್ನೊಂದು ಪ್ರಶ್ನೆಯನ್ನು ಕೇಳಲು ಬಯಸುತ್ತೇನೆ.

ರಕ್ಷಿತ್: ಆಗಲಿ ಸರ್.

ಪ್ರಧಾನಮಂತ್ರಿ: ಬಾಹ್ಯಾಕಾಶ ಪರಿಸರ ವ್ಯವಸ್ಥೆಯು ಅತ್ಯಂತ ರೋಮಾಂಚಕಾರಿಯಾಗುತ್ತಿದೆ. ನಿಮ್ಮ ತಂಡ ಇದರಲ್ಲಿ ಯಾವ ಬದಲಾವಣೆಗಳನ್ನು ಕಂಡಿದೆ?

ಕಿಶನ್: ನನ್ನ ಹೆಸರು ಕಿಶನ್, ನಾವು GalaxEye ಪ್ರಾರಂಭವಾದಾಗಿನಿಂದ IN-SPAce ಯೋಜನೆಯ ಅಭಿವೃದ್ಧಿಯನ್ನು ನೋಡಿದ್ದೇವೆ ಜೊತೆಗೆ ಹಲವಾರು ನೀತಿಗಳು ಜಾರಿಗೊಳ್ಳುವುದನ್ನು ಕಂಡಿದ್ದೇವೆ. ಅಂದರೆ  'ಜಿಯೋ-ಸ್ಪೇಷಿಯಲ್ ಡೇಟಾ ಪಾಲಿಸಿ' ಮತ್ತು ಇಂಡಿಯಾ ಸ್ಪೇಸ್ ಪಾಲಿಸಿ' ನಂತಹ ನೀತಿಗಳು ಜಾರಿಗೊಳ್ಳುತ್ತಿರುವುದನ್ನು ನಾವು ಕಂಡಿದ್ದೇವೆ. ಕಳೆದ 3 ವರ್ಷಗಳಲ್ಲಿ ನಾವು ಬಹಳಷ್ಟು ಬದಲಾವಣೆಗಳನ್ನು ನೋಡಿದ್ದೇವೆ, ಮತ್ತು ಬಹಳಷ್ಟು ಪ್ರಕ್ರಿಯೆಗಳು, ಬಹಳಷ್ಟು ಮೂಲಸೌಕರ್ಯಗಳು ಮತ್ತು ಸಾಕಷ್ಟು ಸೌಲಭ್ಯಗಳನ್ನು ಕೂಡ ಕಂಡಿದ್ದೇವೆ. ಇಸ್ರೋದ ಲಭ್ಯತೆ, ಹೀಗೆ ಇನ್ನೂ ಹಲವಾರು ಬದಲಾವಣೆಗಳಾಗಿವೆ. ಉದಾಹರಣೆಗೆ ನಮ್ಮ ಹಾರ್ಡ್‌ವೇರ್ ಅನ್ನು ಇಸ್ರೋನಲ್ಲಿ ನಾವು ಪರೀಕ್ಷಿಸಬಹುದು, ಇದನ್ನು ಈಗ ತುಂಬಾ ಸುಲಭವಾಗಿ ಮಾಡಬಹುದಾಗಿದೆ. 3 ವರ್ಷಗಳ ಹಿಂದೆ, ಆ ಸೌಲಭ್ಯಗಳು ಅಷ್ಟಾಗಿ ಇರಲಿಲ್ಲ ಮತ್ತು ಈಗ ಇದು ನಮಗೆ ಮತ್ತು ಇತರ ಅನೇಕ ಸ್ಟಾರ್ಟ್-ಅಪ್‌ಗಳಿಗೆ ತುಂಬಾ ಸಹಾಯಕರವಾಗಿದೆ. ಇತ್ತೀಚಿನ ಎಫ್‌ಡಿಐ ನೀತಿಗಳಿಂದಾಗಿ ಮತ್ತು ಸೌಲಭ್ಯಗಳ ಲಭ್ಯತೆಯಿಂದಾಗಿ, ಸ್ಟಾರ್ಟ್-ಅಪ್‌ಗಳಿಗೆ ಸಾಕಷ್ಟು ಪ್ರೋತ್ಸಾಹವಿದೆ. ಸಾಮಾನ್ಯವಾಗಿ ಅಂತಹ ಸ್ಟಾರ್ಟ್-ಅಪ್‌ಗಳು ಅಭಿವೃದ್ಧಿ ಹೊಂದಲು ಬಹಳ ದುಬಾರಿ ಮತ್ತು ಸಮಯ ತೆಗೆದುಕೊಳ್ಳುವಂತಹ ಕ್ಷೇತ್ರದಲ್ಲಿ ಬಹಳ ಸುಲಭವಾಗಿ ಮತ್ತು ಉತ್ತಮವಾಗಿ ಅಭಿವೃದ್ಧಿ ಹೊಂದಬಹುದು. ಆದರೆ ಪ್ರಸ್ತುತ ನೀತಿಗಳು ಮತ್ತು ಇನ್-ಸ್ಪೇಸ್ ಆಗಮನದ ನಂತರ, ಸ್ಟಾರ್ಟ್-ಅಪ್‌ಗಳಿಗೆ ಅನೇಕ ವಿಷಯಗಳು ಸುಲಭವಾಗಿವೆ. ನನ್ನ ಸ್ನೇಹಿತ ಡೇನಿಲ್ ಚಾವ್ಡಾ ಕೂಡ ಈ ಬಗ್ಗೆ ವಿಷಯ ಹಂಚಿಕೊಳ್ಳಬಯಸುತ್ತಾರೆ.

ಪ್ರಧಾನಿ: ಡೇನಿಲ್, ಹೇಳಿ

ಡೇನಿಲ್: ಸರ್, ನಾವು ಇನ್ನೂ ಒಂದು ವಿಷಯವನ್ನು ಗಮನಿಸಿದ್ದೇವೆ, ನಾವು ಎಂಜಿನಿಯರಿಂಗ್ ವಿದ್ಯಾರ್ಥಿಗಳ ಆಲೋಚನೆಯಲ್ಲಿ ಬದಲಾವಣೆಯನ್ನು ಕಂಡಿದ್ದೇವೆ. ಮೊದಲು ಅವರು ಹೊರದೇಶಕ್ಕೆ ಹೋಗಿ ಉನ್ನತ ವ್ಯಾಸಂಗ ಮಾಡಲು ಬಯಸುತ್ತಿದ್ದರು ಮತ್ತು ಅಲ್ಲಿ ಬಾಹ್ಯಾಕಾಶ ಕ್ಷೆತ್ರದಲ್ಲಿ ಕೆಲಸ ಮಾಡಲು ಇಚ್ಛಿಸುತ್ತಿದ್ದರು, ಆದರೆ ಈಗ ಭಾರತದಲ್ಲಿ ಬಾಹ್ಯಾಕಾಶ ಪರಿಸರ ವ್ಯವಸ್ಥೆ ಉತ್ತಮವಾಗಿದೆ, ಹಾಗಾಗಿ ಅವರು ಭಾರತಕ್ಕೆ ಹಿಂತಿರುಗಿ ಈ ಪರಿಸರದಲ್ಲಿ ಕೆಲಸ ಮಾಡಲು ಬಯಸುತ್ತಿದ್ದಾರೆ. ಈ ವ್ಯವಸ್ಥೆಯ ಭಾಗವಾಗಲು ಇಚ್ಛಿಸುತ್ತಿದ್ದಾರೆ. ಆದ್ದರಿಂದ ನಮಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ ಮತ್ತು ಇದೇ ಕಾರಣದಿಂದ ನಮ್ಮ ಕಂಪನಿಯ ಕೆಲವರು ಹಿಂತಿರುಗಿ ಬಂದು ಕೆಲಸ ಮಾಡುತ್ತಿದ್ದಾರೆ.

ಪ್ರಧಾನಿ: ಕಿಶನ್ ಮತ್ತು ಡೇನಿಯಲ್ ಪ್ರಸ್ತಾಪಿಸಿದ ಅಂಶಗಳನ್ನು ಗಮನಿಸಿದಾಗ, ಒಂದು ಕ್ಷೇತ್ರದಲ್ಲಿ ಸುಧಾರಣೆಯಾದಾಗ, ಅದರ ಪರಿಣಾಮಗಳ ವ್ಯಾಪ್ತಿ ಎಷ್ಟು ವಿಶಾಲವಾಗಿರುತ್ತದೆ, ಎಷ್ಟು ಜನರು ಪ್ರಯೋಜನ ಪಡೆದಿದ್ದಾರೆ ಎಂಬುದರ ಬಗ್ಗೆ ಬಹಳಷ್ಟು ಜನರ ಗಮನ ಹರಿದಿರಲಿಕ್ಕಿಲ್ಲ ಎಂದು ನಾನು ಖಂಡಿತವಾಗಿ ನಂಬುತ್ತೇನೆ. ನೀವು ಈ ಕ್ಷೇತ್ರದಲ್ಲಿಯೇ ಇರುವುದರಿಂದ ದೇಶದ ಯುವಕರು ಈಗ ಈ ಕ್ಷೇತ್ರದಲ್ಲಿ ನಮ್ಮ ದೇಶದಲ್ಲೇ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಪ್ರಯತ್ನಿಸಲು ಬಯಸುತ್ತಾರೆ ಎಂಬುದನ್ನು ನೀವು ಗಮನಿಸಿದ್ದೀರಿ ಎಂಬುದು ನಿಮ್ಮ ವಿವರಣೆಯಿಂದ  ತಿಳಿದುಬರುತ್ತದೆ. ನಿಮ್ಮ ವೀಕ್ಷಣೆ ತುಂಬಾ ಚೆನ್ನಾಗಿದೆ. ಇನ್ನೊಂದು ಪ್ರಶ್ನೆ ಕೇಳಲು ಬಯಸುತ್ತೇನೆ, ಸ್ಟಾರ್ಟ್‌ಅಪ್‌ಗಳು ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಲು ಬಯಸುವ ಯುವಕರಿಗೆ ನೀವು ಯಾವ ಸಂದೇಶವನ್ನು ನೀಡಬಯಸುತ್ತೀರಿ?

ಪ್ರಣಿತ್: ನಾನು ಪ್ರಣಿತ್ ಮಾತನಾಡುತ್ತಿದ್ದೇನೆ ಮತ್ತು ನಾನು ಉತ್ತರಿಸುತ್ತೇನೆ.

ಪ್ರಧಾನಮಂತ್ರಿ: ಹಾಂ ಪ್ರಣಿತ್, ಹೇಳಿ.

ಪ್ರಣೀತ್: ಸಾರ್, ನನ್ನ ಕೆಲವು ವರ್ಷಗಳ ಅನುಭವದಿಂದ ಎರಡು ವಿಷಯಗಳನ್ನು ಹೇಳಬಯಸುತ್ತೇನೆ. ಮೊದಲನೆಯದಾಗಿ ನೀವು start up ಆರಂಭಿಸಬಯಸಿದಲ್ಲಿ, ಇದು ಉತ್ತಮ ಅವಕಾಶವಾಗಿದೆ. ಏಕೆಂದರೆ ಇಡೀ ಜಗತ್ತಿನಲ್ಲಿ, ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ದೇಶವಾಗಿದೆ. ಇದರರ್ಥ ನಿಮಗೆ ಸಾಕಷ್ಟು ಅವಕಾಶಗಳಿವೆ. ನಾನು ನನ್ನ  24 ನೇ ವಯಸ್ಸಿನಲ್ಲಿ,  ಮುಂದಿನ ವರ್ಷ ನಾವು ಉಪಗ್ರಹ ಉಡಾವಣೆ ಮಾಡಲಿದ್ದೇವೆ, ಇದರ ಆಧಾರದ ಮೇಲೆ ಸರ್ಕಾರ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಅದರಲ್ಲಿ ನಮ್ಮದು ಒಂದು ಚಿಕ್ಕ ಕೊಡುಗೆಯಿದೆ ಎಂದು ಯೋಚಿಸಿ ಹೆಮ್ಮೆ ಅನಿಸುತ್ತದೆ. ಅಂತಹ ಕೆಲವು ರಾಷ್ಟ್ರ ಮಟ್ಟದ ಪರಿಣಾಮ ಬೀರುವ ಯೋಜನೆಗಳಲ್ಲಿ ಕೆಲಸ ಮಾಡುವ ಅವಕಾಶ ದೊರೆತಿದೆ. ಇದು ಎಂತಹ ಉದ್ಯಮ ಮತ್ತು ಇದು ಎಂತಹ ಸಮಯವೆಂದರೆ, ಈ ಬಾಹ್ಯಾಕಾಶ ಉದ್ಯಮ ಇಂದು ಪ್ರಾರಂಭವಾಗುತ್ತಿದೆ. ಹಾಗಾಗಿ ಇದು ರಾಷ್ಟ್ರವ್ಯಾಪಿ ಪ್ರಭಾವ ಬೀರುವುದು ಮಾತ್ರವಲ್ಲ, ಅವರ ಸ್ವಂತ ಆರ್ಥಿಕ ಬೆಳವಣಿಗೆಗೆ ಮತ್ತು ಜಾಗತಿಕ ಸಮಸ್ಯೆಯನ್ನು ಪರಿಹರಿಸಲು ಒಂದು ಅವಕಾಶ ಎಂದು ನನ್ನ ಯುವ ಸ್ನೇಹಿತರಿಗೆ ಹೇಳಲು ಬಯಸುತ್ತೇನೆ. ಹಾಗಾಗಿ ನಾವು ಬಾಲ್ಯದಲ್ಲಿ ದೊಡ್ಡವರಾದ ನಂತರ ನಾವು ನಟರಾಗುತ್ತೇವೆ, ಕ್ರೀಡಾಪಟುಗಳಾಗುತ್ತೇವೆ ಎಂದು ನಮ್ಮೊಳಗೆ ಮಾತನಾಡಿಕೊಳ್ಳವ ಕಾಲವಿತ್ತು, ಆದರೆ ಇಂದು ಮಕ್ಕಳು ನಾವು ದೊಡ್ಡವರಾದ ಮೇಲೆ, ಉದ್ಯಮಿಯಾಗಬಯಸುತ್ತೇವೆ, ಬಾಹ್ಯಾಕಾಶ ಉದ್ಯಮದಲ್ಲಿ ಕೆಲಸ ಮಾಡಲು ಬಯಸುತ್ತೇವೆ ಎಂದು ಹೇಳುತ್ತಾರೆ. ಈ ಸಂಪೂರ್ಣ ಪರಿವರ್ತನೆಯಲ್ಲಿ ನಾವು ಸಣ್ಣ ಪಾತ್ರವನ್ನು ವಹಿಸುತ್ತಿದ್ದೇವೆ ಎಂಬುದು ನಮಗೆ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ.

ಪ್ರಧಾನಮಂತ್ರಿ: ಸ್ನೇಹಿತರೇ, ಒಂದು ರೀತಿಯಲ್ಲಿ ಹೇಳಬೇಕೆಂದರೆ, ಪ್ರಣೀತ್, ಕಿಶನ್, ಡ್ಯಾನಿಲ್, ರಕ್ಷಿತ್, ಸುಯಶ್, ನಿಮ್ಮ ನಡುವಿನ ಸ್ನೇಹ ಎಷ್ಟು ಗಾಢವಾಗಿದೆಯೋ ನಿಮ್ಮ ನವೋದ್ಯಮ ಕೂಡಾ ಅಷ್ಟೇ ದೃಢವಾಗಿದೆ. ಹೀಗಾಗಿಯೇ ನೀವು ಇಂತಹ ಅದ್ಭುತ ಕೆಲಸ ಮಾಡುತ್ತಿದ್ದೀರಿ. ಕೆಲವು ವರ್ಷಗಳ ಹಿಂದೆ ಐಐಟಿ- ಮದ್ರಾಸ್ ಗೆ ಭೇಟಿ ನೀಡುವ ಅವಕಾಶ ನನಗೆ ದೊರೆತಿತ್ತು, ಆ ಸಂಸ್ಥೆಯ ಉತ್ಕೃಷ್ಠತೆಯ ಪ್ರತ್ಯಕ್ಷ  ಅನುಭವ ನನಗಾಯಿತು.  ಅಂತೆಯೇ ಇಡೀ ಜಗತ್ತಿನಲ್ಲೇ ಐಐಟಿಗಳ ಬಗ್ಗೆ ಗೌರವದ ಭಾವನೆ ಇದೆ ಮತ್ತು ಇವುಗಳಿಂದ ಹೊರಹೊಮ್ಮುವ ನಮ್ಮ ಜನರು ಭಾರತಕ್ಕಾಗಿ ಕೆಲಸ ಮಾಡುವಾಗ, ಅವರು ಖಂಡಿತವಾಗಿಯೂ ದೇಶಕ್ಕೆ ಉತ್ತಮ ಕೊಡುಗೆಯನ್ನೇ ನೀಡುತ್ತಾರೆ. ನಿಮ್ಮೆಲ್ಲರಿಗೂ ಹಾಗೂ ಬಾಹ್ಯಾಕಾಶ ವಲಯದಲ್ಲಿ ಕೆಲಸ ಮಾಡುತ್ತಿರುವ ಇತರ ಎಲ್ಲಾ ನವೋದ್ಯಮಗಳಿಗೂ ನನ್ನ ಅನೇಕಾನೇಕ ಶುಭಾಶಯಗಳು. ಸ್ನೇಹಿತರಾಗಿರುವ ನಿಮ್ಮ ಐವರೊಂದಿಗೆ ಮಾತನಾಡಿ ನನಗೆ ಬಹಳ ಸಂತೋಷವಾಗಿದೆ. ಅನೇಕಾನೇಕ ಧನ್ಯವಾದ ಗೆಳೆಯರೇ.

ಸುಯಶ್    : ಧನ್ಯವಾದ.!    

ನನ್ನ ಪ್ರೀತಿಯ ದೇಶವಾಸಿಗಳೇ, ನಾನು ಈ ಬಾರಿ ಕೆಂಪು ಕೋಟೆಯಿಂದ, ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ ಒಂದು ಲಕ್ಷ ಯುವಜನರಿಗೆ ರಾಜಕೀಯ ವ್ಯವಸ್ಥೆಯೊಂದಿಗೆ ತೊಡಗಿಕೊಳ್ಳಬೇಕೆಂದು ಕರೆ ನೀಡಿದೆ. ನನ್ನ ಈ ಮಾತಿಗೆ ಅದ್ಭುತ ಪ್ರತಿಕ್ರಿಯೆ ದೊರೆಯಿತು. ಭಾರೀ ಸಂಖ್ಯೆಯ ನಮ್ಮ ಯುವಜನತೆ ರಾಜಕೀಯಕ್ಕೆ ಬರಲು ಸಿದ್ಧರಾಗಿದ್ದಾರೆಂದು ಇದರಿಂದ ತಿಳಿದುಬರುತ್ತದೆ. ಅವರು ಸರಿಯಾದ ಅವಕಾಶ ಮತ್ತು ಸರಿಯಾದ ಮಾರ್ಗದರ್ಶನಕ್ಕಾಗಿ ಎದುರು ನೋಡುತ್ತಿದ್ದಾರೆ. ಈ ವಿಷಯ ಕುರಿತಂತೆ ನನಗೆ ದೇಶಾದ್ಯಂತ ಯುವಜನರಿಂದ ಪತ್ರಗಳು ಕೂಡಾ ಬಂದಿವೆ. ಸಾಮಾಜಿಕ ಮಾಧ್ಯಮದಲ್ಲಿ ಕೂಡಾ ಸಾಕಷ್ಟು ಪ್ರತಿಕ್ರಿಯೆಗಳು ದೊರೆಯುತ್ತಿವೆ. ಜನರು ನನಗೆ ಹಲವು ರೀತಿಯ ಸಲಹೆಗಳನ್ನು ಕೂಡಾ ನೀಡಿದ್ದಾರೆ. ಇದು ನಿಜಕ್ಕೂ ತಮ್ಮ ಊಹೆಗೂ ನಿಲುಕದ ಸಂಗತಿ ಎಂದು ಕೆಲವು ಯುವಕರು ಪತ್ರ ಬರೆದಿದ್ದಾರೆ. ಅಜ್ಜ, ಅಥವಾ ತಾಯಿ-ತಂದೆಯ ಯಾವುದೇ ರಾಜಕೀಯ ಪರಂಪರೆ ಇಲ್ಲದ ಕಾರಣದಿಂದಾಗಿ, ರಾಜಕೀಯಕ್ಕೆ ಬರಲು ಇಚ್ಛೆಯಿದ್ದರೂ ಬರಲು ಸಾಧ್ಯವಾಗುತ್ತಿಲ್ಲವೆಂದು ಬರೆದಿದ್ದಾರೆ. ತಳಮಟ್ಟದಲ್ಲಿ ಕೆಲಸ ಮಾಡುವ ಉತ್ತಮ ಅನುಭವ ಇರುವುದಾಗಿ, ಆದ್ದರಿಂದ ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ತಾವು ಸಹಾಯ ಮಾಡಬಹುದೆಂದು ಕೆಲವು ಯುವಕರು ಬರೆದಿದ್ದಾರೆ. ಕುಟುಂಬ ರಾಜಕೀಯವು ಹೊಸ ಪ್ರತಿಭೆಗಳನ್ನು ಬೆಳಕಿಗೆ ಬರದಂತೆ ತಡೆಯುತ್ತಿದೆ ಎಂದು ಕೂಡಾ ಕೆಲ ಯುವಜನರು ಬರೆದಿದ್ದಾರೆ. ಇಂತಹ ಪ್ರಯತ್ನಗಳು ನಮ್ಮ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಕೆಲವರು ಹೇಳಿದ್ದಾರೆ. ಈ ವಿಷಯ ಕುರಿತಂತೆ ಸಲಹೆಗಳನ್ನು ಕಳುಹಿಸಿದ್ದಕ್ಕಾಗಿ ಎಲ್ಲರಿಗೂ ನನ್ನ ಧನ್ಯವಾದಗಳು. ಈಗ ನಮ್ಮ ಸಾಮೂಹಿಕ ಪ್ರಯತ್ನದಿಂದ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ ಇಂತಹ ಯುವಕರು ಕೂಡ ರಾಜಕೀಯದಲ್ಲಿ ಮುಂದೆ ಬರುವಂತಾಗುತ್ತದೆ, ಅವರ ಅನುಭವ ಮತ್ತು ಅವರ ಉತ್ಸಾಹ ದೇಶಕ್ಕೆ ಉಪಯುಕ್ತವಾಗುತ್ತದೆ ಎಂಬ ಭರವಸೆ ನನಗಿದೆ.

ಸ್ನೇಹಿತರೇ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕೂಡಾ ರಾಜಕೀಯ ಹಿನ್ನೆಲೆಯಿಲ್ಲದ ಸಮಾಜದ ಎಲ್ಲಾ ವರ್ಗದ ಜನರು ಮುಂದೆ ಬಂದಿದ್ದರು. ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡರು. ಇಂದು ನಮಗೆ ಮತ್ತೊಮ್ಮೆ ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸಲು ಅದೇ ಮನೋಭಾವದ ಅಗತ್ಯವಿದೆ. ನನ್ನ ಎಲ್ಲಾ ಯುವ ಸ್ನೇಹಿತರಿಗೆ ಖಂಡಿತವಾಗಿ ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕೆಂದು ನಾನು ಮನವಿ ಮಾಡುತ್ತೇನೆ. ನಿಮ್ಮ ಈ ಹೆಜ್ಜೆ ನಿಮ್ಮ ಮತ್ತು ದೇಶದ ಭವಿಷ್ಯವನ್ನು ಬದಲಾಯಿಸುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ, ‘ಮನೆ ಮನೆಯಲ್ಲೂ ತ್ರಿವರ್ಣ ಧ್ವಜ ಮತ್ತು ಇಡೀ ದೇಶ ತ್ರಿವರ್ಣ ಧ್ವಜ’ ಎಂಬ ಅಭಿಯಾನವು ಈ ಬಾರಿ ಉತ್ತುಂಗವನ್ನು ಮುಟ್ಟಿತು. ದೇಶಧ ಮೂಲೆ ಮೂಲೆಯಿಂದ ಈ ಅಭಿಯಾನಕ್ಕೆ ಕೈಜೋಡಿಸಿದ್ದ ಅದ್ಭುತ ದೃಶ್ಯಗಳು ಕಂಡುಬಂದವು. ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಾಡುವುದನ್ನು ಕಂಡೆವು, ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳ ಮೇಲೂ ತ್ರಿವರ್ಣ ಧ್ವಜ ಹಾರಾಡಿದ್ದನ್ನು ನೋಡಿದೆವು. ಜನರು ತಮ್ಮ ಅಂಗಡಿಗಳು, ಕಛೇರಿಗಳಲ್ಲಿ ತ್ರಿವರ್ಣ ಧ್ವಜ ಹಾರಿಸಿದರು. ಜನರು ತಮ್ಮ ಡೆಸ್ಕ್ ಟಾಪ್, ಮೊಬೈಲ್ ಮತ್ತು ವಾಹನಗಳ ಮೇಲೆ ಕೂಡಾ ತ್ರಿವರ್ಣ ಧ್ವಜ ನೆಲೆಗೊಳಿಸಿದ್ದರು. ಜನರು           ಒಗ್ಗಟ್ಟಾಗಿ ತಮ್ಮ ಭಾವನೆಯನ್ನು ವ್ಯಕ್ತಪಡಿಸಿದಾಗ, ಇಂತಹ ಅಭಿಯಾನಕ್ಕೆ ಮತ್ತಷ್ಟು ಮೆರುಗು ಬರುತ್ತದೆ. ಈಗ ನೀವು ನಿಮ್ಮ ಟಿವಿ ಪರದೆಯ ಮೇಲೆ ನೋಡುತ್ತಿರುವುದು ಜಮ್ಮು-ಕಾಶ್ಮೀರದ ರಿಯಾಸಿಯ ಚಿತ್ರವಾಗಿದೆ. ಇಲ್ಲಿ ವಿಶ್ವದಲ್ಲೇ ಅತ್ಯಂತ ಎತ್ತರದ ಚಿನಾಬ್ ರೈಲು ಸೇತುವೆಯ ಮೇಲೆ  750 ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ರಾಲಿ ನಡೆಸಲಾಯಿತು. ಈ ದೃಶ್ಯವನ್ನು ನೋಡಿದವರೆಲ್ಲರ ಮನದಲ್ಲಿ ಅತೀವ ಸಂತೋಷ ಮನೆಮಾಡಿತು. ಶ್ರೀನಗರದ ಡಾಲ್ ಸರೋವರದಲ್ಲಿ ಕೂಡಾ ತ್ರಿವರ್ಣ ಧ್ವಜದ ಆಕರ್ಷಕ ಯಾತ್ರೆಯನ್ನು ನಾವೆಲ್ಲರೂ ನೋಡಿದೆವು. ಅರುಣಾಚಲ ಪ್ರದೇಶದ ಪೂರ್ವ ಕಾಮೆಂಗ್ ಜಿಲ್ಲೆಯಲ್ಲಿ ಕೂಡಾ 600 ಅಡಿ ಉದ್ದದ ತ್ರಿವರ್ಣ ಧ್ವಜದೊಂದಿಗೆ ರಾಲಿ ನಡೆಸಲಾಯಿತು. ದೇಶದ ಇತರ ರಾಜ್ಯಗಳಲ್ಲಿ ಕೂಡಾ ಇದೇ ರೀತಿಯಲ್ಲಿ, ಎಲ್ಲಾ ವಯೋಮಾನದ ಜನರು ಇಂತಹ ತ್ರಿವರ್ಣ ಧ್ವಜ ಯಾತ್ರೆಯಲ್ಲಿ ಪಾಲ್ಗೊಂಡರು. ಸ್ವಾತಂತ್ರ್ಯ ದಿನಾಚರಣೆ ಎನ್ನುವುದು ಈಗ ಸಾರ್ವಜನಿಕ ಹಬ್ಬವಾಗುತ್ತಿದೆ. ಇದರ ಅನುಭವ ತಮಗೆಲ್ಲರಿಗೂ ಕೂಡಾ ಆಗಿರಬಹುದು. ಜನರು ತಮ್ಮ ಮನೆಗಳನ್ನು ತ್ರಿವರ್ಣ ಧ್ವಜದ ಹಾರಗಳಿಂದ ಅಲಂಕರಿಸುತ್ತಾರೆ. ‘ಸ್ವ ಸಹಾಯ ಗುಂಪು’ ಗಳೊಂದಿಗೆ ತೊಡಗಿಸಿಕೊಂಡಿರುವ ಮಹಿಳೆಯರು ಲಕ್ಷಾಂತರ ಧ್ವಜಗಳನ್ನು ಸಿದ್ಧಪಡಿಸುತ್ತಾರೆ. ಇ-ವಾಣಿಜ್ಯ ವೇದಿಕೆಯಲ್ಲಿ ಬಣ್ಣದ ಸಾಮಾಗ್ರಿಗಳ ಮಾರಾಟ ಹೆಚ್ಚಾಗುತ್ತದೆ. ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ದೇಶದ ಪ್ರತಿಯೊಂದು ಮೂಲೆಯಲ್ಲೂ, ಸಾಗರ, ಭೂಮಿ, ಆಕಾಶ ಎಲ್ಲೆಡೆಯಲ್ಲೂ ನಮ್ಮ ಧ್ವಜದ ತ್ರಿವರ್ಣಗಳು ಕಂಡು ಬಂದವು. ಹರ್ ಘರ್ ತಿರಂಗಾ ಜಾಲತಾಣದಲ್ಲಿ ಐದು ಕೋಟಿಗೂ ಅಧಿಕ ಸೆಲ್ಫಿ ಪೋಸ್ಟ್ ಮಾಡಲಾಯಿತು. ಈ ಅಭಿಯಾನವು ಇಡೀ ದೇಶವನ್ನು ಒಂದು ಎಳೆಯಲ್ಲಿ  ಬಂಧಿಸಿತು. ಇದೇ ಅಲ್ಲವೇ ‘ಒಂದು ಭಾರತ-ಶ್ರೇಷ್ಠ ಭಾರತ’ |

ನನ್ನ ಪ್ರೀತಿಯ ದೇಶವಾಸಿಗಳೇ, ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಪ್ರೀತಿಯ ಬಗ್ಗೆ ನಾವು ಎಷ್ಟೊಂದು ಚಲನಚಿತ್ರಗಳನ್ನು ನೋಡಿದ್ದೇವೆ ಅಲ್ಲವೇ.! ಆದರೆ ಇತ್ತೀಚಿನ ದಿನಗಳಲ್ಲಿ ಅಸ್ಸಾಂನಲ್ಲಿ ಇಂತಹ ನೈಜ ಕಥೆಯೊಂದು ನಡೆಯುತ್ತಿದೆ. ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯ ಬಾರೆಕುರಿ ಎಂಬ ಸಣ್ಣ ಹಳ್ಳಿಯಲ್ಲಿ,  ಮೊರಾನ್ ಸಮುದಾಯದ ಜನರು ವಾಸ ಮಾಡುತ್ತಿದ್ದು, ಇದೇ ಗ್ರಾಮದಲ್ಲಿ 'ಹೂಲಾಕ್ ಗಿಬ್ಬನ್' ಕೂಡಾ ವಾಸಿಸುತ್ತದೆ, ಇಲ್ಲಿನ ಜನರು ಇವುಗಳನ್ನು ಹೋಲೋ ಮಂಗಗಳು ಎಂದು ಕರೆಯುತ್ತಾರೆ. ಹೂಲಾಕ್ ಗಿಬ್ಬನ್ ಗಳು ಈ ಗ್ರಾಮದಲ್ಲಿಯೇ ತಮ್ಮ ವಾಸಸ್ಥಾನ ಮಾಡಿಕೊಂಡಿವೆ. ಹೂಲಾಕ್ ಗಿಬ್ಬನ್ ಗಳೊಂದಿಗೆ ಇಲ್ಲಿನ ಜನರು ನಿಕಟ ಬಾಂಧವ್ಯ ಹೊಂದಿದ್ದಾರೆಂದು ತಿಳಿದು ನಿಮಗೆ ಆಶ್ಚರ್ಯವೆನಿಸಬಹುದು. ಗ್ರಾಮದ ಜನರು ಇಂದಿಗೂ ತಮ್ಮ ಸಾಂಪ್ರದಾಯಿಕ ಮೌಲ್ಯಗಳನ್ನು ಅನುಸರಿಸುತ್ತಾರೆ. ಆದ್ದರಿಂದಲೇ ಅವರು ಗಿಬ್ಬನ್ ಗಳೊಂದಿಗೆ ತಮ್ಮ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಎಲ್ಲ ಕೆಲಸವನ್ನೂ ಮಾಡಿದರು.  ಗಿಬ್ಬನ್ ಗಳಿಗೆ ಬಾಳೆಹಣ್ಣು ಬಹಳ ಇಷ್ಟವೆಂದು ಅವರಿಗೆ ಮನದಟ್ಟಾದಾಗ, ಅವರು ಬಾಳೇ ಕೃಷಿ ಕೂಡಾ ಆರಂಭಿಸಿದರು. ಇಷ್ಟೇ ಅಲ್ಲದೆ, ತಮ್ಮ ಸ್ವಂತ ಸಮುದಾಯದಲ್ಲಿ ಜನನ ಮತ್ತು ಮರಣ ಸಂಭವಿಸಿದಾಗ ಅನುಸರಿಸುವಂತಹ ಸಂಪ್ರದಾಯಗಳನ್ನೇ ಗಿಬ್ಬನ್ ಗಳ ಜನನ ಮತ್ತು ಮರಣ ಸಂದರ್ಭದಲ್ಲೂ ಮಾಡಬೇಕೆಂದು ಅವರು ನಿರ್ಧರಿಸಿದರು. ಅವರು ಗಿಬ್ಬನ್ ಗಳಿಗೆ ನಾಮಕರಣ ಕೂಡಾ ಮಾಡಿದ್ದಾರೆ. ಇತ್ತೀಚೆಗಷ್ಟೇ ಸಮೀಪದಲ್ಲೇ ಹಾದು ಹೋಗುವ ವಿದ್ಯುತ್ ತಂತಿಗಳಿಂದ ಗಿಬ್ಬನ್ ಗಳು ಸಮಸ್ಯೆ ಎದುರಿಸಬೇಕಾಗಿ ಬಂದಿತ್ತು.  ಈ ಗ್ರಾಮದ ಜನರು ಈ ವಿಷಯವನ್ನು ಸರ್ಕಾರದ ಮುಂದಿಟ್ಟರು ಮತ್ತು ಶೀಘ್ರದಲ್ಲೇ ಈ ಸಮಸ್ಯೆಗೆ ಪರಿಹಾರ ಕೂಡಾ ದೊರೆಯಿತು. ಈಗ ಈ ಗಿಬ್ಬನ್ ಗಳು ಫೋಟೋಗೆ ಪೋಜ್ ಕೂಡಾ ನೀಡುತ್ತವೆಂದು ನನಗೆ ತಿಳಿದುಬಂದಿದೆ.

ಸ್ನೇಹಿತರೇ, ಅರುಣಾಚಲ ಪ್ರದೇಶದ ನಮ್ಮ ಯುವ ಸ್ನೇಹಿತರು ಕೂಡ ಪ್ರಾಣಿಗಳ ಮೇಲಿನ ಪ್ರೀತಿಯ ವಿಷಯದಲ್ಲಿ ಯಾರಿಗೂ ಕಡಿಮೆಯಿಲ್ಲ. ಅರುಣಾಚಲದಲ್ಲಿರುವ ನಮ್ಮ ಕೆಲವು ಯುವ ಸ್ನೇಹಿತರು 3 -ಡಿ ಪ್ರಿಂಟಿಂಗ್ ತಂತ್ರಜ್ಞಾನ ಬಳಸಲು ಪ್ರಾರಂಭಿಸಿದ್ದಾರೆ – ಇದಕ್ಕೆ ಕಾರಣವೇನೆಂದು ನಿಮಗೆ ತಿಳಿದಿದೆಯೇ? ಏಕೆಂದರೆ, ಕೊಂಬು ಮತ್ತು ದಂತಗಳ ಆಸೆಗಾಗಿ ಕಾಡುಪ್ರಾಣಿಗಳನ್ನು ಬೇಟೆಯಿಂದ ರಕ್ಷಿಸಬೇಕೆಂದು ಅವರು ಬಯಸುತ್ತಾರೆ. ನಬಮ್ ಬಾಪು ಮತ್ತು ಲಿಖಾ ನಾನಾ ಅವರ ನೇತೃತ್ವದಲ್ಲಿ ಈ ತಂಡವು ಪ್ರಾಣಿಗಳ ವಿವಿಧ ಭಾಗಗಳ 3-ಡಿ ಮುದ್ರಣವನ್ನು ಮಾಡುತ್ತದೆ. ಕೊಂಬುಗಳಿರಲಿ, ಪ್ರಾಣಿಗಳ ದಂತಗಳಿರಲಿ,  ಇವೆಲ್ಲವನ್ನೂ3-ಡಿ ಪ್ರಿಂಟಿಂಗ್ ಮೂಲಕ ಸಿದ್ಧಪಡಿಸಲಾಗುತ್ತದೆ. ನಂತರ ಉಡುಪುಗಳು ಮತ್ತು ಟೋಪಿಗಳಂತಹ ವಸ್ತುಗಳನ್ನು ಇದರಿಂದ ತಯಾರಿಸಲಾಗುತ್ತದೆ. ಇದೊಂದು ಅದ್ಭುತ ಪರ್ಯಾಯವಾಗಿದ್ದು, ಇದರಲ್ಲಿ ಜೈವಿಕ ವಿಘಟನೆಯ ವಸ್ತುಗಳನ್ನು ಬಳಸಲಾಗುತ್ತದೆ. ಇಂತಹ ಅದ್ಭುತ ಪ್ರಯತ್ನಗಳನ್ನು ಎಷ್ಚು ಪ್ರಶಂಸಿಸಿದರೂ ಕಡಿಮೆಯೇ. ನಮ್ಮ ಪ್ರಾಣಿಗಳನ್ನು ರಕ್ಷಿಸುವಂತಹ  ಮತ್ತು ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುವಂತಹ ಹೆಚ್ಚು ಹೆಚ್ಚು ನವೋದ್ಯಮಗಳು ಈ ಕ್ಷೇತ್ರದಲ್ಲಿ ತಲೆ ಎತ್ತಬೇಕೆಂದು ನಾನು ಹೇಳುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೇ, ಮಧ್ಯಪ್ರದೇಶದ ಝಬುವಾದಲ್ಲಿ ಅದ್ಭುತವಾದ ಸಂಗತಿಯೊಂದು ನಡೆಯುತ್ತಿದ್ದು, ಈ ಕುರಿತು ನೀವು ತಿಳಿದುಕೊಳ್ಳಲೇಬೇಕು. ನೈರ್ಮಲ್ಯೀಕರಣದ ಕಾರ್ಮಿಕ ಸೋದರ-ಸೋದರಿಯರು ಅಲ್ಲಿ ಅದ್ಭುತವನ್ನೇ ಮಾಡಿದ್ದಾರೆ. ‘ಕಸದಿಂದ ರಸ’ ಎಂಬ ಸಂದೇಶವನ್ನು ಈ ಸೋದರ-ಸೋದರಿಯರು ನಿಜ ಮಾಡಿ ತೋರಿಸಿದ್ದಾರೆ. ಈ ತಂಡವು ಜಬುವಾದ ಉದ್ಯಾನವನದಲ್ಲಿ ಕಸದಿಂದ ಅದ್ಭುತ ಕಲಾಕೃತಿಗಳನ್ನು ರಚಿಸಿದೆ. ತಮ್ಮ ಈ ಕೆಲಸಕ್ಕಾಗಿ ಅವರು ಸುತ್ತಮುತ್ತಲಿನ ಪ್ರದೇಶಗಳಿಂದ ಪ್ಲಾಸ್ಟಿಕ್ ತ್ಯಾಜ್ಯ, ಬಳಸಿ ಬಿಸಾಡಿದ ಬಾಟಲಿಗಳು, ವಾಹನದ ಚಕ್ರಗಳು, ಮತ್ತು ಕೊಳವೆಗಳನ್ನು ಸಂಗ್ರಹಿಸಿದರು. ಈ ಕಲಾಕೃತಿಗಳಲ್ಲಿ ಹೆಲಿಕಾಪ್ಟರ್, ಕಾರ್ ಮತ್ತು ಫಿರಂಗಿಗಳು ಕೂಡಾ ಸೇರಿವೆ. ಆಕರ್ಷಕ ತೂಗು ಹೂ ಕುಂಡಗಳನ್ನು ಕೂಡಾ ತಯಾರಿಸಲಾಗಿದೆ. ಬಳಸಿ ಬಿಸಾಡಲಾಗಿದ್ದ ಟೈರ್‌ ಗಳನ್ನು ಆರಾಮದಾಯಕ ಬೆಂಚ್ ತಯಾರಿಸಲು ಬಳಸಲಾಗಿದೆ. ನೈರ್ಮಲ್ಯ ಕಾರ್ಮಿಕರ ಈ ತಂಡವು ರೆಡ್ಯೂಸ್, ರೀಯೂಸ್, ಮತ್ತು ರೀಸೈಕಲ್ ಮಂತ್ರವನ್ನು ತಮ್ಮದಾಗಿಸಿಕೊಂಡಿದೆ. ಇವರ ಪ್ರಯತ್ನಗಳಿಂದ ಉದ್ಯಾನವನ ಈಗ ಬಹಳ ಸುಂದರವಾಗಿ ಕಂಗೊಳಿಸುತ್ತಿದೆ. ಇದನ್ನು ನೋಡಲು ಕೇವಲ ಸ್ಥಳೀಯರು ಮಾತ್ರವಲ್ಲದೇ ಸುತ್ತ ಮುತ್ತಲ ಜಿಲ್ಲೆಗಳಲ್ಲಿ ವಾಸವಿರುವ ಜನರು ಕೂಡಾ ಬರುತ್ತಿದ್ದಾರೆ.

ಸ್ನೇಹಿತರೇ, ಇಂದು ನಮ್ಮ ದೇಶದ ಹಲವಾರು ನವೋದ್ಯಮ ತಂಡಗಳು ಪರಿಸರ ರಕ್ಷಣೆಯನ್ನು ಉತ್ತೇಜಿಸುವ ಇಂತಹ ಪ್ರಯತ್ನಗಳಿಗೆ ಕೈಜೋಡಿಸುತ್ತಿರುವುದು ನನಗೆ ಸಂತಸ ತಂದಿದೆ. ಇ-ಕಾನ್ಷಿಯಸ್ ಎಂಬ ಹೆಸರಿನ ತಂಡವೊಂದಿದೆ, ಇದು ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಿ ಪರಿಸರ ಸ್ನೇಹಿ ಉತ್ಪನ್ನಗಳನ್ನು ತಯಾರಿಸುತ್ತದೆ. ನಮ್ಮ ಪ್ರವಾಸಿ ಸ್ಥಳಗಳಲ್ಲಿ ಅದರಲ್ಲೂ ಗುಡ್ಡಗಾಡು ಪ್ರದೇಶಗಳಲ್ಲಿ ಹರಡಿರುವ ಕಸವನ್ನು ನೋಡಿ ಅವರಲ್ಲಿ ಈ ಆಲೋಚನೆ ಮೂಡಿತು. ಇಂತಹದ್ದೇ ಇನ್ನೊಂದು ತಂಡ ಇಕೋಕಾರಿ ಹೆಸರಿನ ನವೋದ್ಯಮ ಆರಂಭಿಸಿದೆ. ಇಲ್ಲಿ ಪ್ಲಾಸ್ಟಿಕ್ ತ್ಯಾಜ್ಯದಿಂದ ವಿವಿಧ ಸುಂದರ ವಸ್ತುಗಳನ್ನು ತಯಾರಿಸಲಾಗುತ್ತದೆ.

ಸ್ನೇಹಿತರೇ, ಆಟಿಕೆಗಳ Recycling ಎನ್ನುವುದು ಕೂಡಾ ಇಂತಹದ್ದೇ ಕ್ಷೇತ್ರವಾಗಿದ್ದು, ಇಲ್ಲಿ ನಾವು ಒಟ್ಟಾಗಿ ಕೆಲಸ ಮಾಡಬಹುದಾಗಿದೆ. ಎಷ್ಟೋ ಮಕ್ಕಳು ಬಹಳ ಬೇಗ ತಮ್ಮ ಬಳಿ ಇರುವ ಆಟಿಕೆಗಳ ಬಗ್ಗೆ ಬೇಸರ ತಳೆಯುತ್ತಾರೆಂದು ನಿಮಗೂ ಗೊತ್ತು. ಅಂತೆಯೇ ಆಟಿಕೆಗಳ ಬಗ್ಗೆ ಕನಸು ಕಾಣುವ ಮಕ್ಕಳೂ ಇರುತ್ತಾರೆ. ನಿಮ್ಮ ಮಕ್ಕಳು ಈಗ ಆಟವಾಡಲು ಬಳಸದೇ ಇರುವ ಆಟಿಕೆಗಳನ್ನು ನೀವು ಈಗ ಬಳಸುವಂತಹವರಿಗೆ ಅವುಗಳನ್ನು ನೀಡಬಹುದು. ಇದು ಕೂಡಾ ಪರಿಸರದ ರಕ್ಷಣೆಯ ಒಂದು ಮಾರ್ಗವೇ ಆಗಿದೆ. ನಾವೆಲ್ಲರೂ ಸೇರಿ ಪ್ರಯತ್ನ ಮಾಡಿದಾಗ, ಪರಿಸರವೂ ಸದೃಢವಾಗುತ್ತದೆ ಅಂತೆಯೇ ನಮ್ಮ ದೇಶ ಕೂಡಾ ಪ್ರಗತಿಯಾಗುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಕೆಲವೇ ದಿನಗಳ ಹಿಂದಷ್ಟೇ ಇದೇ 19 ರಂದು ನಾವು ರಕ್ಷಾಬಂಧನ ಹಬ್ಬ ಆಚರಿಸಿದೆವು. ಅದೇ ದಿನದಂದು ಇಡೀ ವಿಶ್ವದಲ್ಲಿ ‘ವಿಶ್ವ ಸಂಸ್ಕೃತ ದಿನ’ ಆಚರಿಸಲಾಯಿತು. ಇಂದು ಕೂಡಾ ದೇಶ - ವಿದೇಶಗಳಲ್ಲಿ ಜನರು ಸಂಸ್ಕೃತ ಭಾಷೆಯ ಬಗ್ಗೆ ವಿಶೇಷ ಒಲವು ತೋರುವುದು ಕಂಡುಬರುತ್ತದೆ. ವಿಶ್ವದ ಅನೇಕ ದೇಶಗಳಲ್ಲಿ ಸಂಸ್ಕೃತ ಭಾಷೆಯ ಬಗ್ಗೆ ಹಲವು ಸಂಶೋಧನೆಗಳು ಮತ್ತು ಪ್ರಯೋಗಗಳು ನಡೆಯುತ್ತಿವೆ. ಮಾತು ಮುಂದುವರಿಸುವುದಕ್ಕೆ ಮುನ್ನ ನಾನು ನಿಮಗೆ ಚಿಕ್ಕದೊಂದು ಧ್ವನಿ ಸುರುಳಿ – ಆಡಿಯೋ ಕ್ಲಿಪ್ ಕೇಳಿಸುತ್ತಿದ್ದೇನೆ.:

### Audio Clip#####

ಸ್ನೇಹಿತರೇ, ಈ ಆಡಿಯೋ ಯೂರೋಪ್ ನ ದೇಶವಾದ ಲಿಥುಯೇನಿಯಾಗೆ ಸಂಬಂಧಿಸಿದ್ದಾಗಿದೆ. ಅಲ್ಲಿನ ಓರ್ವ ಪ್ರೊಫೆಸರ್ Vytis Vidūnas ಅವರು ಒಂದು ವಿಶಿಷ್ಟ ಪ್ರಯತ್ನ ಮಾಡಿದ್ದು, ಅದಕ್ಕೆ – ‘ಸಂಸ್ಕೃತ್- On the Rivers’ ಎಂದು ಹೆಸರಿಸಲಾಗಿದೆ. ನೆರಿಸ್ ನದಿಯ ದಡದಲ್ಲಿ ಕೆಲ ಜನರು ಸೇರಿ, ವೇದಗಳನ್ನು ಮತ್ತು ಗೀತೆ ಪಠಿಸಿತು. ಇಲ್ಲಿ ಕಳೆದ ಕೆಲವು ವರ್ಷಗಳಿಂದ ಇಂತಹ ಪ್ರಯತ್ನಗಳು ನಡೆಯುತ್ತಲೇ ಇವೆ. ಸಂಸ್ಕೃತ ಭಾಷೆಗೆ ಉತ್ತೇಜನ ನೀಡುವ ಇಂತಹ ಪ್ರಯತ್ನಗಳನ್ನು ನೀವೂ ಮಾಡುತ್ತಿರಿ.

ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮೆಲ್ಲರ ಜೀವನದಲ್ಲಿ ಫಿಟ್ನೆಸ್ ಎನ್ನುವುದು ಬಹಳ ಮಹತ್ವದ್ದಾಗಿದೆ. ಸದೃಢರಾಗಿರಲು ನಾವು ನಮ್ಮ ಆಹಾರ ಸೇವನೆ, ಜೀವನ ಶೈಲಿ ಎಲ್ಲದರ ಬಗ್ಗೆ ಸಾಕಷ್ಟು ನಿಗಾ ವಹಿಸಬೇಕು. ಜನರಲ್ಲಿ fitness ಬಗ್ಗೆ ಜಾಗರೂಕತೆ ಮೂಡಿಸುವ ನಿಟ್ಟಿನಲ್ಲಿ “ಫಿಟ್ ಇಂಡಿಯಾ ಅಭಿಯಾನ” ಆರಂಭಿಸಲಾಗಿದೆ. ಆರೋಗ್ಯವಾಗಿರಲು ಇಂದು ಎಲ್ಲ ವಯೋಮಾನದ, ಎಲ್ಲ ವರ್ಗದ ಜನರೂ ಯೋಗ ಅಭ್ಯಾಸ ಮಾಡುತ್ತಿದ್ದಾರೆ. ಜನರು ಈಗ ತಮ್ಮ ಊಟದ ತಟ್ಟೆಯಲ್ಲಿ ಸೂಪರ್ ಫುಡ್ ಸಿರಿಧಾನ್ಯಗಳು ಅಂದರೆ ಶ್ರೀಅನ್ನಕ್ಕೆ ಜಾಗ ಕಲ್ಪಿಸುತ್ತಿದ್ದಾರೆ. ಈ ಎಲ್ಲಾ ಪ್ರಯತ್ನಗಳ ಉದ್ದೇಶ ಪ್ರತಿಯೊಂದು ಕುಟುಂಬವೂ ಆರೋಗ್ಯವಾಗಿ ಇರಬೇಕು ಎನ್ನುವುದಾಗಿದೆ.

ಸ್ನೇಹಿತರೇ, ನಮ್ಮ ಕುಟುಂಬ, ನಮ್ಮ ಸಮಾಜ, ಮತ್ತು ನಮ್ಮ ದೇಶ ಮತ್ತು ಇವುಗಳೆಲ್ಲದರ ಭವಿಷ್ಯವು, ನಮ್ಮ ಮಕ್ಕಳ ಆರೋಗ್ಯದ ಮೇಲೆ ಅವಲಂಬಿತವಾಗಿದೆ, ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಅವರಿಗೆ ಸರಿಯಾದ ಪೋಷಣೆ ದೊರೆಯುವುದು ಅತ್ಯಗತ್ಯವಾಗಿದೆ. ಮಕ್ಕಳ ಪೌಷ್ಠಿಕತೆ ದೇಶದ ಪ್ರಥಮ ಆದ್ಯತೆಯಾಗಿದೆ. ಅವರ ಪೋಷಣೆಯತ್ತ ಇಡೀ ವರ್ಷ ನಮ್ಮ ಗಮನ ಇದ್ದೇ ಇರುತ್ತದೆ ಆದರೆ ಒಂದು ತಿಂಗಳು ದೇಶ ಈ ಕುರಿತಂತೆ ವಿಶೇಷ ಗಮನ ಹರಿಸುತ್ತದೆ. ಇದಕ್ಕಾಗಿ ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳ ಒಂದರಿಂದ 30 ರ ನಡುವೆ ಪೌಷ್ಠಿಕಾಂಶ ಮಾಸ ಆಚರಿಸಲಾಗುತ್ತದೆ. ಪೌಷ್ಠಿಕಾಂಶದ ಬಗ್ಗೆ ಜನರಿಗೆ ಅರಿವು ಮೂಡಿಸಲು ಪೌಷ್ಠಿಕಾಂಶ ಮೇಳ, ರಕ್ತಹೀನತೆ ಶಿಬಿರ, ನವಜಾತ ಶಿಶುಗಳಿರುವ ಮನೆಗೆ ಭೇಟಿ,  ವಿಚಾರ ಸಂಕಿರಣ, ವೆಬಿನಾರ್ ಹೀಗೆ ಹಲವು ವಿಧಾನಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ಅನೇಕ ಸ್ಥಳಗಳಲ್ಲಿ ಅಂಗನವಾಡಿ ಯೋಜನೆ ಅಡಿಯಲ್ಲಿ ತಾಯಿ ಮತ್ತು ಮಕ್ಕಳ ಸಮಿತಿಗಳನ್ನು ಕೂಡಾ ಸ್ಥಾಪಿಸಲಾಗಿದೆ. ಈ ಸಮಿತಿಯು ಅಪೌಷ್ಟಿಕ ಮಕ್ಕಳು, ಗರ್ಭಿಣಿಯರು ಮತ್ತು ನವಜಾತ ಶಿಶುಗಳ ತಾಯಂದಿರನ್ನು ಗುರುತಿಸುತ್ತದೆ. ನಿರಂತರವಾಗಿ ಅವರ ಮೇಲೆ ಗಮನ ಹರಿಸುತ್ತದೆ ಮತ್ತು ಅವರ ಪೋಷಣೆಗೆ ಸೂಕ್ತ ವ್ಯವಸ್ಥೆ ಮಾಡುತ್ತದೆ. ಕಳೆದ ವರ್ಷ ಪೋಷಣ್ ಅಭಿಯಾನವನ್ನು ನೂತನ ಶಿಕ್ಷಣ ನೀತಿಯೊಂದಿಗೆ ಜೋಡಿಸಲಾಯಿತು. ‘ಪೋಷಣೆಯೂ, ಶಿಕ್ಷಣವೂ’ ಎಂಬ ಈ ಅಭಿಯಾನದ ಮೂಲಕ ಮಕ್ಕಳಿಗೆ ಮಕ್ಕಳ ಸಮತೋಲಿತ ಬೆಳವಣಿಗೆಗೆ ಒತ್ತು ನೀಡಲಾಗಿದೆ. ನೀವು ವಾಸಿಸುವ ಪ್ರದೇಶದಲ್ಲಿ ಪೌಷ್ಠಿಕಾಂಶ ಜಾಗೃತಿ ಅಭಿಯಾನದಲ್ಲಿ ನೀವೂ ಕೈಜೋಡಿಸಬೇಕು. ಅಪೌಷ್ಟಿಕತೆಯ ವಿರುದ್ಧದ ಈ ಹೋರಾಟದಲ್ಲಿ ನಿಮ್ಮ ಸಣ್ಣ ಪ್ರಯತ್ನವು ಬಹಳ ಸಹಾಯಕವಾಗುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಈ ಬಾರಿಯ ಮನ್ ಕಿ ಬಾತ್ ಇಲ್ಲಿಗೆ ಮುಕ್ತಾಯಗೊಳಿಸುತ್ತಿದ್ದೇನೆ. ‘ಮನದ ಮಾತಿನಲ್ಲಿ’ ನಿಮ್ಮೊಂದಿಗೆ ಮಾತನಾಡುವುದು ನನಗೆ ಸದಾ ಸಂತೋಷದ ವಿಷಯವಾಗಿರುತ್ತದೆ.  ನಾನು ನನ್ನ ಕುಟುಂಬದವರೊಡನೆ ಕುಳಿತು ತಿಳಿ ಮನಸ್ಸಿನ ವಾತಾವರಣದಲ್ಲಿ ನನ್ನ ಮನದ ಮಾತುಗಳನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ನನಗೆ ಭಾಸವಾಗುತ್ತದೆ. ಮನಃಪೂರ್ವಕವಾಗಿ ನಿಮ್ಮೊಂದಿಗೆ ಬೆರೆಯುತ್ತಿದ್ದೇನೆ ಎನಿಸುತ್ತದೆ. ನಿಮ್ಮ ಸಲಹೆ-ಸೂಚನೆ, ನಿಮ್ಮ ಸಲಹೆ, ನನಗೆ ಅತ್ಯಮೂಲ್ಯವಾಗಿವೆ. ಮುಂಬರುವ ದಿನಗಳಲ್ಲಿ ಹಲವಾರು ಹಬ್ಬಗಳು ಬರಲಿವೆ. ನಾನು ನಿಮ್ಮೆಲ್ಲರಿಗೂ ಹಬ್ಬಗಳಿಗಾಗಿ ಶುಭಾಶಯ ಕೋರುತ್ತಿದ್ದೇನೆ. ಜನ್ಮಾಷ್ಠಮಿ ಹಬ್ಬವೂ ಬರಲಿದೆ. ಮುಂದಿನ ತಿಂಗಳ ಆರಂಭದಲ್ಲಿಯೇ ಗಣೇಶ ಚತುರ್ಥಿ ಹಬ್ಬವೂ ಇದೆ. ಓಣಂ ಹಬ್ಬವೂ ಸಮೀಪಿಸುತ್ತಿದೆ. ಮಿಲಾದ್-ಉನ್-ನಬೀ ಗಾಗಿ ಕೂಡಾ ಅಭಿನಂದಿಸುತ್ತಿದ್ದೇನೆ.

ಸ್ನೇಹಿತರೇ, ಈ ತಿಂಗಳ 29 ರಂದು ‘ತೆಲುಗು ಭಾಷಾ ದಿನ‘ ಆಚರಿಸಲಾಗುತ್ತದೆ. ತೆಲುಗು ನಿಜಕ್ಕೂ ಅದ್ಭುತವಾದ ಭಾಷೆಯಾಗಿದೆ. ನಾನು ವಿಶ್ವಾದ್ಯಂತ ಇರುವ ಎಲ್ಲಾ ತೆಲುಗು ಭಾಷಿಗರಿಗೂ ತೆಲುಗು ದಿನದ ಶುಭಾಶಯ ಕೋರುತ್ತೇನೆ.

ಪ್ರಪಂಚ ವ್ಯಾಪ್ತಂಗಾ ಉನ್ನ,

ತೆಲುಗು ವಾರಿಕಿ,

ತೆಲುಗು ಭಾಷಾ ದಿನೋತ್ಸವ ಶುಭಾಕಾಂಕ್ಷಲು.

ಸ್ನೇಹಿತರೇ,  ಮಳೆಗಾಲದ ಈ ಋತುವಿನಲ್ಲಿ ಮುಂಜಾಗೃತೆ ವಹಿಸುವುದರೊಂದಿಗೆ, ‘Catch the Rain Movement’ ನ ಭಾಗವಾಗಬೇಕೆಂದು ನಿಮ್ಮಲ್ಲರಲ್ಲಿ ಪುನಃ ಮನವಿ ಮಾಡುತ್ತಿದ್ದೇನೆ. ‘ಒಂದು ಸಸಿ ತಾಯಿ ಹೆಸರಿನಲ್ಲಿ’ ಅಭಿಯಾನವನ್ನು ನಿಮ್ಮೆಲ್ಲರಿಗೂ ನೆನಪಿಸಲು ಬಯಸುತ್ತೇನೆ. ಹೆಚ್ಚು ಹೆಚ್ಚು ಸಸಿಗಳನ್ನು ನೆಡಿ ಮತ್ತು ಸಸಿ ನೆಡಲು ಇತರರನ್ನೂ ಪ್ರೋತ್ಸಾಹಿಸಿ. ಮುಂಬರುವ ದಿನಗಳಲ್ಲಿ ಪ್ಯಾರಿಸ್ ನಲ್ಲಿ ಪ್ಯಾರಾಲಂಪಿಕ್ಸ್ ಆರಂಭವಾಗಲಿದೆ. ನಮ್ಮ ವಿಶೇಷ ಚೇತನ ಸೋದರ-ಸೋದರಿಯರು ಅಲ್ಲಿಗೆ ತಲುಪಿದ್ದಾರೆ. 140 ಕೋಟಿ ಭಾರತೀಯರು ತಮ್ಮ ಕ್ರೀಡಾಪಟುಗಳಿಗೆ ಶುಭಾಶಯ ಕೋರುತ್ತಿದ್ದಾರೆ. ನೀವು ಕೂಡಾ #cheer4bharat ಮೂಲಕ ನಮ್ಮ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿ. ಮುಂದಿನ ತಿಂಗಳು ನಾವು ಮತ್ತೊಮ್ಮೆ ಭೇಟಿಯಾಗೋಣ ಮತ್ತು ಸಾಕಷ್ಟು ವಿಷಯಗಳ ಕುರಿತು ಮಾತನಾಡೋಣ. ಅಲ್ಲಿಯವರೆಗೆ ನನಗೆ ಅನುಮತಿ ನೀಡಿ.

ಅನೇಕಾನೇಕ ಧನ್ಯವಾದ. ನಮಸ್ಕಾರ.

 

*****



(Release ID: 2048716) Visitor Counter : 12