ರೈಲ್ವೇ ಸಚಿವಾಲಯ

ವಿಮಾನಯಾನ ವಲಯದ "ಸುರಕ್ಷತಾ ನಿರ್ವಹಣಾ ವ್ಯವಸ್ಥೆ" ಕುರಿತ ಮೂರು ದಿನಗಳ  ಕಾರ್ಯನಿರ್ವಾಹಕ ತರಬೇತಿ ಆರಂಭ  

Posted On: 06 AUG 2024 6:06PM by PIB Bengaluru

ಗತಿ ಶಕ್ತಿ ವಿಶ್ವವಿದ್ಯಾಲಯ (GSV)ಯು ನವದೆಹಲಿಯ ದ್ವಾರಕಾದಲ್ಲಿರುವ ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾನ್ಸ್‌ಪೋರ್ಟ್ ಡೆವಲಪ್‌ಮೆಂಟ್ (AITD) ನಲ್ಲಿ ವಾಯುಯಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತನ್ನ ಮೊದಲ ಕಾರ್ಯನಿರ್ವಾಹಕ ತರಬೇತಿ ಕಾರ್ಯಕ್ರಮವನ್ನು ನಿನ್ನೆಯಿಂದ ಪ್ರಾರಂಭಿಸಿತು. ಆಗಸ್ಟ್ 5 ರಿಂದ ಆಗಸ್ಟ್ 7 ರವರೆಗೆ ನಡೆಯುವ ಮೂರು ದಿನಗಳ ಈ ಕಾರ್ಯಕ್ರಮವು  ವಿಮಾನಯಾನ ಕ್ಷರೇತ್ರದಲ್ಲಿ ಕೆಲಸ ಮಾಡುವ ವೃತ್ತಿಪರರಿಗೆ ಸಂಬಂಧಿಸಿದ ಸುರಕ್ಷತಾ ನಿರ್ವಹಣಾ ವ್ಯವಸ್ಥೆಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ.  ಏರ್‌ಬಸ್ ಸಹಯೋಗದೊಂದಿಗೆ  ಈ  ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 

ಪ್ರಮುಖ ವಿಮಾನಯಾನ ಸಂಸ್ಥೆಗಳಾದ ಇಂಡಿಗೋ, ವಿಸ್ತಾರಾ, ಏರ್‌ಬಸ್ ಮತ್ತು ನಾಗರಿಕ ವಿಮಾನಯಾನ ಸಚಿವಾಲಯದ ಪ್ರತಿನಿಧಿಗಳನ್ನು ಆಕರ್ಷಿಸುವ ಮೂಲಕ ಈ ಕಾರ್ಯಕ್ರಮ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.  ನೇಪಾಳ ಮತ್ತು ಭೂತಾನ್‌ನಿಂದ ತಲಾ ನಾಲ್ವರು ಸೇರಿದಂತೆ ಅಂತರರಾಷ್ಟ್ರೀಯ ವೃತ್ತಿಪರರು ಈ  ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ. ವಿಮಾನಯಾನ ಉದ್ಯಮದ ಪ್ರಮುಖ ತಜ್ಞರು ಈ ಕಾರ್ಯಕ್ರಮದ ಬೋಧಕರಾಗಿದ್ದಾರೆ. 

 

ನಾಗರಿಕ ವಿಮಾನಯಾನ ಸಚಿವಾಲಯದ ವಿಮಾನ ಅಪಘಾತ ತನಿಖಾ ಬ್ಯೂರೋದ ಪ್ರಧಾನ ನಿರ್ದೇಶಕ ಗ್ರೂಪ್ ಕ್ಯಾಪ್ಟನ್ ಜಿವಿಜಿ ಯುಗಂಧರ್ ಮತ್ತು ಏರ್ ಇಂಡಿಯಾ ಏವಿಯೇಷನ್ ಅಕಾಡೆಮಿಯ ನಿರ್ದೇಶಕ ಸುನಿಲ್ ಭಾಸ್ಕರನ್ ಅವರು ಈ ತರಬೇತಿ ಕಾರ್ಯಕ್ರಮವನ್ನು ಅನ್ನು ಉದ್ಘಾಟಿಸಿದರು. ಗತಿ ಶಕ್ತಿ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಮನೋಜ್ ಚೌಧರಿ ಮತ್ತು ಡೀನ್ (ಕಾರ್ಯನಿರ್ವಾಹಕ ಶಿಕ್ಷಣ) ಪ್ರೊ ಪ್ರದೀಪ್ ಗರ್ಗ್ ಅವರು ಈ ಸಂದರ್ಭದಲ್ಲಿ ಉಪಸ್ಥಿತಿರಿದ್ದರು. 

ರೈಲ್ವೆ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಗತಿ ಶಕ್ತಿ ವಿಶ್ವವಿದ್ಯಾಲಯವು ಭಾರತದಲ್ಲಿ ಅಂತರಿಕ್ಷ (ಏರೋಸ್ಪೇಸ್) ಶಿಕ್ಷಣ, ತರಬೇತಿ ಮತ್ತು ಸಂಶೋಧನೆಯನ್ನು ಉತ್ತೇಜಿಸಲು ಇತ್ತೀಚೆಗೆ ಏರ್‌ಬಸ್‌ನೊಂದಿಗೆ ಪಾಲುದಾರಿಕೆ ಘೋಷಿಸಿದೆ ಎಂಬುದು ಗಮನಿಸಬೇಕಾದ ಸಂಗತಿ. "ಉದ್ಯಮ-ಚಾಲಿತ" ವಿಧಾನದಲ್ಲಿ ಕೆಲಸ ಮಾಡುತ್ತಿರುವ ಈ ವಿಶ್ವವಿದ್ಯಾಲಯವು ಈಗಾಗಲೇ ನಿಯಮಿತ ಶಿಕ್ಷಣ (ಪದವಿ/ಸ್ನಾತಕೋತ್ತರ/ಡಾಕ್ಟರೇಟ್ ಮಟ್ಟಗಳು) ನೀಡುವುದರ ಜೊತೆಗೆ  ವಿವಿಧ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಗಳಾದ ರೈಲ್ವೇ, ಬಂದರು, ಶಿಪ್ಪಿಂಗ್ ಮತ್ತು ಮೆಟ್ರೋ ರೈಲು ತಂತ್ರಜ್ಞಾನ ಕ್ಷೇತ್ರಗಳಲ್ಲಿ  ಕಾರ್ಯನಿರ್ವಾಹಕ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಗತಿ ಶಕ್ತಿ ವಿಶ್ವವಿದ್ಯಾಲಯವು ಈ ಶೈಕ್ಷಣಿಕ ವರ್ಷದಿಂದ ಏವಿಯೇಷನ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಅನ್ನು ಸಹ ಪ್ರಾರಂಭಿಸಿದೆ.


 

*****



(Release ID: 2042421) Visitor Counter : 12