ಗೃಹ ವ್ಯವಹಾರಗಳ ಸಚಿವಾಲಯ

ಹೊಸ ಕ್ರಿಮಿನಲ್ ಕಾನೂನುಗಳ ಅನುಷ್ಠಾನಕ್ಕಾಗಿ ಮಧ್ಯಸ್ಥಗಾರರಿಗೆ ತರಬೇತಿ

Posted On: 24 JUL 2024 5:15PM by PIB Bengaluru

ʻಭಾರತೀಯ ನ್ಯಾಯ ಸಂಹಿತಾ-2023ʼ(ಬಿಎನ್‌ಎಸ್‌) ನಿಬಂಧನೆಗಳು (ಸೆಕ್ಷನ್ 106ನ ಉಪವಿಧಿ (2)ರ ನಿಬಂಧನೆ ಹೊರತುಪಡಿಸಿ), ʻಭಾರತೀಯ ನಾಗರಿಕ ಸುರಕ್ಷಾ ಸಂಹಿತಾ-2023ʼ(ಬಿಎನ್ಎಸ್ಎಸ್) ನಿಬಂಧನೆಗಳು(ಮೊದಲ ಅನುಸೂಚಿಯಲ್ಲಿ ಬಿಎನ್ಎಸ್‌ನ ಸೆಕ್ಷನ್ 106(2)ಗೆ ಸಂಬಂಧಿಸಿದ ಪ್ರವೇಶದ ನಿಬಂಧನೆಗಳನ್ನು ಹೊರತುಪಡಿಸಿ) ಮತ್ತು ʻಭಾರತೀಯ ಸಾಕ್ಷ್ಯ ಅಧಿನಿಯಮ್‌-2023ʼ(ಬಿಎಸ್ಎ) ನಿಬಂಧನೆಗಳು 2024ರ ಜುಲೈ 1 ರಿಂದ ಜಾರಿಗೆ ಬಂದಿವೆ. 2023ರ ಡಿಸೆಂಬರ್ 25ರಂದು ಈ ಮೂರು ಕಾನೂನುಗಳ ಅಧಿಸೂಚನೆಯ ನಂತರ, ಇವುಗಳ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಪೊಲೀಸ್ ಮತ್ತು ಜೈಲು ಅಧಿಕಾರಿಗಳು, ಪ್ರಾಸಿಕ್ಯೂಟರ್‌ಗಳು, ನ್ಯಾಯಾಂಗ ಮತ್ತು ವಿಧಿವಿಜ್ಞಾನ ಸಿಬ್ಬಂದಿ ಹಾಗೂ ಸಾರ್ವಜನಿಕರು ಸೇರಿದಂತೆ ಎಲ್ಲಾ ಪಾಲುದಾರರಲ್ಲಿ ಜಾಗೃತಿ ಮೂಡಿಸಲು ಸರ್ಕಾರವು ವಿವಿಧ ಉಪಕ್ರಮಗಳನ್ನು ಕೈಗೊಂಡಿದೆ.

ಬಿಎನ್ಎಸ್, ಬಿಎನ್ಎಸ್ಎಸ್ ಮತ್ತು ಬಿಎಸ್ಎ ಅನುಷ್ಠಾನಕ್ಕಾಗಿ ಮಧ್ಯಸ್ಥಗಾರರಿಗೆ ತರಬೇತಿ ನೀಡಲು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ:

  1. ಪೊಲೀಸ್, ಜೈಲು ಅಧಿಕಾರಿಗಳು, ಪ್ರಾಸಿಕ್ಯೂಟರ್‌ಗಳು, ನ್ಯಾಯಾಂಗ ಅಧಿಕಾರಿಗಳು, ವಿಧಿವಿಜ್ಞಾನ ತಜ್ಞರು ಮತ್ತು ಕೇಂದ್ರ ಪೊಲೀಸ್ ಸಂಸ್ಥೆಗಳ ಸಾಮರ್ಥ್ಯ ವರ್ಧನೆಗಾಗಿ ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ (ಬಿಪಿಆರ್ & ಡಿ) ಒಟ್ಟು 13 ತರಬೇತಿ ಮಾಡ್ಯೂಲ್‌ಳನ್ನು ಅಭಿವೃದ್ಧಿಪಡಿಸಿದೆ ಮತ್ತು ಹಂಚಿಕೊಂಡಿದೆ. ಭೋಪಾಲ್‌ನ ʻಸೆಂಟ್ರಲ್ ಅಕಾಡೆಮಿ ಫಾರ್ ಪೊಲೀಸ್ ಟ್ರೈನಿಂಗ್ʼ(ಸಿಎಪಿಟಿ) ಮತ್ತು ಕೋಲ್ಕತಾ, ಹೈದರಾಬಾದ್, ಚಂಡೀಗಢ, ಜೈಪುರ, ಗಾಜಿಯಾಬಾದ್ ಮತ್ತು ಬೆಂಗಳೂರಿನಲ್ಲಿರುವ ʻಸೆಂಟ್ರಲ್ ಡಿಟೆಕ್ಟಿವ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ʼ (ಸಿಡಿಟಿಐ) ಮೂಲಕ ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಮಾಸ್ಟರ್ ತರಬೇತುದಾರರಿಗೆ ತರಬೇತಿ ನೀಡಲು ಇದು 'ತರಬೇತುದಾರರ ತರಬೇತಿ' ಮಾದರಿಯನ್ನು ಅಳವಡಿಸಿಕೊಂಡಿದೆ. ಇದು 274 ತರಬೇತಿ ಕೋರ್ಸ್‌ಗಳು/ ವೆಬಿನಾರ್‌ಗಳು / ವಿಚಾರ ಸಂಕಿರಣಗಳನ್ನು ಸಹ ನಡೆಸಿದೆ ಹಾಗೂ ಮಾಸ್ಟರ್ ಟ್ರೈನರ್‌ಗಳು ಸೇರಿದಂತೆ 43,150 ಅಧಿಕಾರಿಗಳು / ಸಿಬ್ಬಂದಿಗೆ ತರಬೇತಿ ನೀಡಿದೆ. ಹೊಸ ಕ್ರಿಮಿನಲ್ ಕಾನೂನುಗಳ ಅನುಷ್ಠಾನದಲ್ಲಿ ಕ್ಷೇತ್ರ ಕಾರ್ಯಕರ್ತರು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲು ಮತ್ತು ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾನೂನು ಮತ್ತು ಪೊಲೀಸ್ ಅಧಿಕಾರಿಗಳ ತಂಡವನ್ನು ಒಳಗೊಂಡ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ. ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು 8,16,146 ಪೊಲೀಸ್ ಅಧಿಕಾರಿಗಳು ಮತ್ತು ಜೈಲು, ವಿಧಿವಿಜ್ಞಾನ, ನ್ಯಾಯಾಂಗ ಮತ್ತು ಪ್ರಾಸಿಕ್ಯೂಷನ್ ಸಿಬ್ಬಂದಿ ಸೇರಿದಂತೆ 8,40,465 ಅಧಿಕಾರಿಗಳಿಗೆ ʻಬಿಪಿಆರ್ & ಡಿʼ ಸಮನ್ವಯದೊಂದಿಗೆ ತರಬೇತಿ ನೀಡಿದೆ.
  2. ʻಐಜಿಒಟಿ-ಕರ್ಮಯೋಗಿ ಭಾರತ್ ಪೋರ್ಟಲ್ʼ, 2024ರ ಫೆಬ್ರವರಿ 21ರಿಂದ ಹೊಸ ಕ್ರಿಮಿನಲ್ ಕಾನೂನುಗಳ ಬಗ್ಗೆ ಅಧಿಕಾರಿಗಳಿಗೆ ತರಬೇತಿ ನೀಡಲು ಮೂರು ಕೋರ್ಸ್‌ಗಳನ್ನು [ಬಿಎನ್ಎಸ್, ಬಿಎನ್ಎಸ್ಎಸ್ ಮತ್ತು ಬಿಎಸ್ಎ ಪರಿಚಯ] ನಡೆಸುತ್ತಿದೆ. ಈ ಕೋರ್ಸ್‌ಗಳ ಒಟ್ಟಾರೆ ಸ್ಥಿತಿಗತಿ ಈ ಕೆಳಗಿನಂತಿದೆ:
  • ಕನಿಷ್ಠ ಒಂದು ಕೋರ್ಸ್ ಪೂರ್ಣಗೊಳಿಸಿದ ಅಧಿಕಾರಿಗಳು: 2,19,829,
  • ಎಲ್ಲಾ ಮೂರು ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಅಧಿಕಾರಿಗಳು : 1,72,970
  1. ಇದಲ್ಲದೆ, ಕ್ಷೇತ್ರ ಕಾರ್ಯಕರ್ತರಿಗಾಗಿ ʻಐಜಿಒಟಿ-ಕರ್ಮಯೋಗಿ ಭಾರತ್ ಪೋರ್ಟಲ್‌ʼನಲ್ಲಿ [ಬಿಎನ್ಎಸ್, ಬಿಎನ್ಎಸ್ಎಸ್ ಮತ್ತು ಬಿಎಸ್ಎ ಅವಲೋಕನ] 3 ಹೊಸ ಕೋರ್ಸ್‌ಗಳನ್ನು ʻಬಿಪಿಆರ್ & ಡಿʼ ಅಪ್ಲೋಡ್ ಮಾಡಿದೆ.

 ಬಿಎನ್ಎಸ್, ಬಿಎನ್ಎಸ್ಎಸ್ ಮತ್ತು ಬಿಎಸ್ಎ ಅಡಿಯಲ್ಲಿನ ನಿಬಂಧನೆಗಳ ವಿವರಗಳು ಮತ್ತು ಐಪಿಸಿ, ಸಿಆರ್‌ಪಿಸಿ ಮತ್ತು ʻಭಾರತೀಯ ಸಾಕ್ಷ್ಯ ಕಾಯ್ದೆʼಗೆ(ಐಇಎ) ಸಂಬಂಧಿತ ನಿಬಂಧನೆಗಳು ʻಎನ್‌ಸಿಆರ್‌ಬಿ ಸಂಕಲ್ಪನ್ ವೆಬ್ ಅಪ್ಲಿಕೇಶನ್ʼ(https://ncrb.gov.in/uploads/SankalanPortal/Index.html)ನಲ್ಲಿ ಲಭ್ಯವಿದೆ. ಹೊಸ ಕ್ರಿಮಿನಲ್ ಕಾನೂನುಗಳ ಕೆಲವು ಪ್ರಮುಖ ಮುಖ್ಯಾಂಶಗಳು ಅನುಬಂಧದಲ್ಲಿವೆ.

ಹೊಸ ಅಪರಾಧ ಕಾನೂನುಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಸರ್ಕಾರ ಆಯೋಜಿಸಿದ ಜಾಗೃತಿ ಕಾರ್ಯಕ್ರಮಗಳ ವಿವರಗಳು ಈ ಕೆಳಗಿನಂತಿವೆ:

  1. ಪತ್ರಿಕಾ ಮಾಹಿತಿ ಕಾರ್ಯಾಲಯ (ಪಿಐಬಿ) ಹೊಸ ಕ್ರಿಮಿನಲ್ ಕಾನೂನುಗಳಿಗೆ ಸಂಬಂಧಿಸಿದ ಸಲಹೆಗಳು, ಪತ್ರಿಕಾ ಪ್ರಕಟಣೆಗಳು, ಇನ್ಫೋಗ್ರಾಫ್‌ಗಳು ಇತ್ಯಾದಿಗಳನ್ನು ಪ್ರಕಟಿಸುವ ಮೂಲಕ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕ ಪ್ರಚಾರ ಕ್ರಮಗಳನ್ನು ಕೈಗೊಂಡಿದೆ. ಹೊಸ ಕ್ರಿಮಿನಲ್ ಕಾನೂನುಗಳ ಮುಖ್ಯ ಲಕ್ಷಣಗಳನ್ನು ಚರ್ಚಿಸಲು ಪಿಐಬಿ 27 ರಾಜ್ಯಗಳ ರಾಜಧಾನಿಗಳಲ್ಲಿ ಮುಖ್ಯವಾಗಿ ಪ್ರಾದೇಶಿಕ ಮಾಧ್ಯಮಗಳಿಗಾಗಿ ʻವರ್ತಾಲಾಪ್ʼ ಕಾರ್ಯಾಗಾರಗಳನ್ನು ನಡೆಸಿದೆ.
  2. ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನ ವಾಹಿನಿಗಳು ತಮ್ಮ ಸುದ್ದಿ ಬುಲೆಟಿನ್‌ಗಳು, ಕಾರ್ಯಕ್ರಮಗಳು ಮತ್ತು ಚರ್ಚೆಗಳು ಹಾಗೂ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಹೊಸ ಅಪರಾಧ ಕಾನೂನುಗಳ ಬಗ್ಗೆ ಕಾರ್ಯಕ್ರಮಗಳು / ಚಟುವಟಿಕೆಗಳನ್ನು ಆಯೋಜಿಸಿವೆ. ವಿಷಯ ತಜ್ಞರೊಂದಿಗೆ ಚರ್ಚೆಗಳನ್ನು ಸಹ ಆಯೋಜಿಸಲಾಗಿದೆ. ಹೊಸ ಕ್ರಿಮಿನಲ್ ಕಾನೂನುಗಳ ಬಗ್ಗೆ ವಿವರಿಸುವ ವೀಡಿಯೊಗಳನ್ನು ಸಹ ಕಾರ್ಯಕ್ರಮಗಳ ನಡುವೆ ಪ್ರಸಾರ ಮಾಡಲಾಗಿದೆ.
  3. ʻಟ್ರಾನ್ಸ್‌ಫಾರ್ಮಿಂಗ್ ಇಂಡಿಯಾʼ ವೆಬ್‌ಸೈಟ್‌ನಲ್ಲಿ ಮತ್ತು ಎಲ್ಲಾ ʻಮೈಗವ್‌ʼ(MyGov) ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳ ಮೂಲಕ ಮಾಹಿತಿಯುಕ್ತ ಫ್ಲೈಯರ್‌ಗಳನ್ನು ʻಮೈಗವ್‌ʼ(MyGov) ಅಪ್‌ಲೋಡ್ ಮಾಡಿದೆ. ನಾಗರಿಕರ ಜಾಗೃತಿಗಾಗಿ 2024ರ ಫೆಬ್ರವರಿ 19ರಂದು ಸುಮಾರು 7 ಕೋಟಿಗೂ ಹೆಚ್ಚು ಜನರಿಗೆ ಇ-ಮೇಲ್ ಕಳುಹಿಸಲಾಗಿದೆ. ಜಾಗೃತಿ ಮತ್ತು ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಮೂಡಿಸಲು ʻಮೈಗವ್‌ʼ(MyGov) ತನ್ನ ವೇದಿಕೆಯಲ್ಲಿ 2024ರ ಮಾರ್ಚ್ 14 ಮತ್ತು ಜೂನ್ 12 ರಂದು ರಸಪ್ರಶ್ನೆಯನ್ನು ಆಯೋಜಿಸಿತ್ತು.
  4. ಕ್ರಾಂತಿಕಾರಿ ಸುಧಾರಣೆಗಳ ಬಗ್ಗೆ ಮತ್ತು ಅವುಗಳಿಂದ ನಾಗರಿಕರ ಮೇಲೆ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಆಗುವ ಸಕಾರಾತ್ಮಕ ಪರಿಣಾಮದ ಬಗ್ಗೆ ನಾಗರಿಕರಿಗೆ ತಿಳಿಯುವುದನ್ನು ಖಚಿತಪಡಿಸಿಕೊಳ್ಳಲು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ಪಂಚಾಯತ್ ರಾಜ್ ಸಚಿವಾಲಯಗಳು ಜಂಟಿಯಾಗಿ 2024ರ ಜೂನ್ 21ರಂದು ಹಿಂದಿಯಲ್ಲಿ ಹೊಸ ಕ್ರಿಮಿನಲ್ ಕಾನೂನುಗಳ ಬಗ್ಗೆ ವೆಬಿನಾರ್ ನಡೆಸಿದವು, ಇದರಲ್ಲಿ ಸುಮಾರು 40 ಲಕ್ಷ ತಳಮಟ್ಟದ ಕಾರ್ಯಕರ್ತರು ಭಾಗವಹಿಸಿದ್ದರು. 2024ರ ಜೂನ್ 25 ರಂದು ಇಂಗ್ಲಿಷ್‌ನಲ್ಲಿ ಮತ್ತೊಂದು ವೆಬಿನಾರ್ ನಡೆಸಲಾಯಿತು. ಇದರಲ್ಲಿ ಸುಮಾರು 50 ಲಕ್ಷ ತಳಮಟ್ಟದ ಕಾರ್ಯಕರ್ತರು ಭಾಗವಹಿಸಿದ್ದರು.
  5. ವಿಶ್ವವಿದ್ಯಾಲಯ ಧನಸಹಾಯ ಆಯೋಗವು(ಯುಜಿಸಿ) 1,200 ವಿಶ್ವವಿದ್ಯಾಲಯಗಳು ಮತ್ತು 40,000 ಕಾಲೇಜುಗಳಿಗೆ ಮಾಹಿತಿಯುಕ್ತ ಫ್ಲೈಯರ್‌ಗಳನ್ನು ವಿತರಿಸಿದೆ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಸಹ ಹೊಸ ಕ್ರಿಮಿನಲ್ ಕಾನೂನುಗಳ ಬಗ್ಗೆ ಬೋಧಕರು ಮತ್ತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಸುಮಾರು 9,000 ಸಂಸ್ಥೆಗಳಿಗೆ ಪತ್ರ ಬರೆದಿದೆ. ಉನ್ನತ ಶಿಕ್ಷಣ ಸಂಸ್ಥೆಗಳು 2024ರ ಜುಲೈ 1ರಂದು ಹೊಸ ಅಪರಾಧ ಕಾನೂನುಗಳ ವಿವಿಧ ನಿಬಂಧನೆಗಳ ಬಗ್ಗೆ ಕೇಂದ್ರೀಕೃತ ಗುಂಪು ಚರ್ಚಾಗೋಷ್ಠಿಗಳು, ಕಾರ್ಯಾಗಾರಗಳು, ವಿಚಾರ ಸಂಕಿರಣಗಳು ಮತ್ತು ರಸಪ್ರಶ್ನೆಗಳು ಸೇರಿದಂತೆ ದಿನವಿಡೀ ಚಟುವಟಿಕೆಗಳನ್ನು ಆಯೋಜಿಸಿ ಉದ್ದೇಸಿತ ಪ್ರಮುಖ ಬದಲಾವಣೆಗಳನ್ನು ಎತ್ತಿ ತೋರಲಾಯಿತು. ವಿದ್ಯಾರ್ಥಿಗಳು, ಬೋಧಕರು ಮತ್ತು ಇತರ ಸಿಬ್ಬಂದಿಯ ವ್ಯಾಪಕ ಭಾಗವಹಿಸುವಿಕೆಗೆ ಈ ಚಟುವಟಿಕೆಗಳು ಸಾಕ್ಷಿಯಾದವು.
  6. ಕಾನೂನು ವ್ಯವಹಾರಗಳ ಇಲಾಖೆಯು ನವದೆಹಲಿ, ಗುವಾಹಟಿ, ಕೋಲ್ಕತಾ, ಚೆನ್ನೈ ಮತ್ತು ಮುಂಬೈನಲ್ಲಿ ಐದು ಸಮ್ಮೇಳನಗಳನ್ನು ಆಯೋಜಿಸಿತು, ಇದರಲ್ಲಿ ಪೊಲೀಸ್, ನ್ಯಾಯಾಂಗ, ಪ್ರಾಸಿಕ್ಯೂಷನ್, ಜೈಲು ಸಿಬ್ಬಂದಿ ಹಾಗೂ ವಿವಿಧ ರಾಜ್ಯಗಳ ತಜ್ಞರು ಭಾಗವಹಿಸಿದ್ದರು.
  7. ಜುಲೈ 1, 2024ರಂದು ದೇಶದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು, ಇದರಲ್ಲಿ ಹೊಸ ಕ್ರಿಮಿನಲ್ ಕಾನೂನುಗಳ ಪ್ರಮುಖ ವೈಶಿಷ್ಟ್ಯಗಳನ್ನು ಎತ್ತಿ ತೋರಿಸುವ ದ್ವಿಭಾಷಾ ಕಿರುಪುಸ್ತಕವನ್ನು ಮಧ್ಯಸ್ಥಗಾರರು ಮತ್ತು ಸಾರ್ವಜನಿಕರಿಗೆ ಪ್ರದರ್ಶಿಸಲಾಯಿತು.

 

ಅನುಬಂಧ

ಹೊಸ ಕ್ರಿಮಿನಲ್ ಕಾನೂನುಗಳ ಮುಖ್ಯಾಂಶಗಳು

ಹೊಸ ಕ್ರಿಮಿನಲ್ ಕಾನೂನುಗಳ ಜಾರಿಯು ಭಾರತೀಯ ನಾಗರಿಕರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಈ ಕಾನೂನುಗಳು ಎಲ್ಲರಿಗೂ ಹೆಚ್ಚು ಕೈಗೆಟುಕುವ, ಬೆಂಬಲಕಾರಿ ಮತ್ತು ಪರಿಣಾಮಕಾರಿ ನ್ಯಾಯ ವ್ಯವಸ್ಥೆಯನ್ನು ರೂಪಿಸುವ ಗುರಿಯನ್ನು ಹೊಂದಿವೆ. ಹೊಸ ಕ್ರಿಮಿನಲ್ ಕಾನೂನುಗಳ ಪ್ರಮುಖ ನಿಬಂಧನೆಗಳು ಈ ಕೆಳಗಿನಂತಿದ್ದು, ಇವು ವೈಯಕ್ತಿಕ ಹಕ್ಕುಗಳು ಮತ್ತು ರಕ್ಷಣೆಗಳ ಮೇಲಿನ ಪರಿಣಾಮವನ್ನು ಒತ್ತಿ ಹೇಳುತ್ತವೆ:

  1. ಘಟನೆಗಳನ್ನು ಆನ್‌ಲೈನ್‌ನಲ್ಲಿ ವರದಿ ಮಾಡಬಹುದು: ಒಬ್ಬ ವ್ಯಕ್ತಿಯು ಈಗ ಪೊಲೀಸ್ ಠಾಣೆಗೆ ಖುದ್ದು ಭೇಟಿ ನೀಡುವ ಅಗತ್ಯವಿಲ್ಲದೆ, ಎಲೆಕ್ಟ್ರಾನಿಕ್ ಸಂವಹನದ ಮೂಲಕ ಘಟನೆಗಳನ್ನು ವರದಿ ಮಾಡಬಹುದು. ಇದು ಸುಲಭ ಮತ್ತು ತ್ವರಿತವಾಗಿ ವರದಿ ಮಾಡಲು ಅನುವು ಮಾಡಿಕೊಡುತ್ತದೆ, ಪೊಲೀಸರು ತ್ವರಿತವಾಗಿ ಕ್ರಮ ಕೈಗೊಳ್ಳಲು ಹಾದಿಯನ್ನು ಸುಗಮಗೊಳಿಸುತ್ತದೆ.
  2. ಯಾವುದೇ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಬಹುದು: ʻಶೂನ್ಯ ಎಫ್ಐಆರ್ʼ ಪರಿಚಯಿಸುವುದರೊಂದಿಗೆ, ಒಬ್ಬ ವ್ಯಕ್ತಿಯು ನ್ಯಾಯವ್ಯಾಪ್ತಿಯ ಪರಿಗಣನೆ ಇಲ್ಲದೆ ಯಾವುದೇ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸಬಹುದು. ಇದು ಕಾನೂನು ಕ್ರಮಗಳನ್ನು ಪ್ರಾರಂಭಿಸುವಲ್ಲಿ ಇದ್ದ ವಿಳಂಬವನ್ನು ನಿವಾರಿಸುತ್ತದೆ ಮತ್ತು ಅಪರಾಧ ನಡೆದ ಕೂಡಲೇ ತಕ್ಷಣದ ಅದನ್ನು ವರದಿ ಮಾಡುವುದನ್ನು ಖಚಿತಪಡಿಸುತ್ತದೆ.
  3. ಎಫ್ಐಆರ್‌ನ ಉಚಿತ ಪ್ರತಿ: ಸಂತ್ರಸ್ತರು ಎಫ್ಐಆರ್‌ನ ಉಚಿತ ಪ್ರತಿಯನ್ನು ಪಡೆಯುವ ಮೂಲಕ ಕಾನೂನು ಪ್ರಕ್ರಿಯೆಯಲ್ಲಿ ಅವರ ಭಾಗವಹಿಸುವಿಕೆಯನ್ನು ಖಚಿತಪಡಿಸಲಾಗುವುದು.
  4. ಬಂಧನದ ನಂತರ ಮಾಹಿತಿ ನೀಡುವ ಹಕ್ಕು: ಬಂಧನದ ಸಂದರ್ಭದಲ್ಲಿ, ವ್ಯಕ್ತಿಯು ತನ್ನ ಪರಿಸ್ಥಿತಿಯ ಬಗ್ಗೆ ತನ್ನ ಆಯ್ಕೆಯ ವ್ಯಕ್ತಿಗೆ ತಿಳಿಸುವ ಹಕ್ಕನ್ನು ಹೊಂದಿರುತ್ತಾರೆ. ಇದು ಬಂಧಿತ ವ್ಯಕ್ತಿಗೆ ತಕ್ಷಣದ ಬೆಂಬಲ ಮತ್ತು ಸಹಾಯ ದೊರೆಯುವುದನ್ನು ಖಚಿತಪಡಿಸುತ್ತದೆ.
  5. ಬಂಧನ ಮಾಹಿತಿಯ ಪ್ರದರ್ಶನ: ಬಂಧನದ ವಿವರಗಳನ್ನು ಈಗ ಪೊಲೀಸ್ ಠಾಣೆಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಪ್ರಮುಖವಾಗಿ ಪ್ರದರ್ಶಿಸಲಾಗುವುದು, ಇದು ಬಂಧಿತ ವ್ಯಕ್ತಿಯ ಕುಟುಂಬಗಳು ಮತ್ತು ಸ್ನೇಹಿತರಿಗೆ ಪ್ರಮುಖ ಮಾಹಿತಿಯನ್ನು ಸುಲಭವಾಗಿ ಪಡೆಯಲು ಅನುವು ಮಾಡಿಕೊಡುತ್ತದೆ.
  6. ವಿಧಿವಿಜ್ಞಾನ ಸಾಕ್ಷ್ಯ ಸಂಗ್ರಹ ಮತ್ತು ವಿಡಿಯೋಗ್ರಫಿ: ಪ್ರಕರಣ ಮತ್ತು ತನಿಖೆಯನ್ನು ಬಲಪಡಿಸಲು, ವಿಧಿವಿಜ್ಞಾನ ತಜ್ಞರು ಗಂಭೀರ ಅಪರಾಧಗಳ ವಿಚಾರದಲ್ಲಿ ಅಪರಾಧ ಸ್ಥಳಗಳಿಗೆ ಭೇಟಿ ನೀಡುವುದು ಮತ್ತು ಪುರಾವೆಗಳನ್ನು ಸಂಗ್ರಹಿಸುವುದು ಕಡ್ಡಾಯವಾಗಿದೆ. ಹೆಚ್ಚುವರಿಯಾಗಿ, ಸಾಕ್ಷ್ಯಗಳನ್ನು ತಿರುಚುವುದನ್ನು ತಡೆಯಲು ಅಪರಾಧ ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹಣೆಯ ಪ್ರಕ್ರಿಯೆಯನ್ನು ಕಡ್ಡಾಯವಾಗಿ ವೀಡಿಯೊ ರೆಕಾರ್ಡ್‌ ಮಾಡಲಾಗುತ್ತದೆ. ಈ ಅವಳಿ ವಿಧಾನವು ತನಿಖೆಯ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ, ಜೊತೆಗೆ ನ್ಯಾಯೋಚಿತ ನ್ಯಾಯದಾನಕ್ಕೆ ಕೊಡುಗೆ ನೀಡುತ್ತದೆ.
  7. ತ್ವರಿತ ತನಿಖೆ: ಹೊಸ ಕಾನೂನುಗಳು ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳ ತನಿಖೆಗೆ ಆದ್ಯತೆ ನೀಡುತ್ತವೆ, ಮಾಹಿತಿಯನ್ನು ದಾಖಲಿಸಿದ ಎರಡು ತಿಂಗಳೊಳಗೆ ಸಮಯೋಚಿತವಾಗಿ ತನಿಖೆ ಪೂರ್ಣಗೊಳಿಸುವುದನ್ನು ಖಾತರಿಪಡಿಸುತ್ತಬೆ.
  8. ಸಂತ್ರಸ್ತರಿಗೆ ಪ್ರಕರಣದ ಪ್ರಗತಿ ಬಗ್ಗೆ ಮಾಹಿತಿ: ಸಂತ್ರಸ್ತರು ತಮ್ಮ ಪ್ರಕರಣದ ಪ್ರಗತಿಯ ಬಗ್ಗೆ 90 ದಿನಗಳಲ್ಲಿ ಹೊಸ ಮಾಹಿತಿ ಪಡೆಯಲು ಅರ್ಹರಾಗಿರುತ್ತಾರೆ. ಈ ನಿಬಂಧನೆಯು ಸಂತ್ರಸ್ತರಿಗೆ ಮಾಹಿತಿಯನ್ನ ಪಡೆಯಲು ಹಾಗೂ ಕಾನೂನು ಪ್ರಕ್ರಿಯೆಯಲ್ಲಿ ಅವರ ತೊಡಗಿಸುವಿಕೆಗೆ ಅನುವುಮಾಡುತ್ತದೆ, ಪಾರದರ್ಶಕತೆ ಮತ್ತು ವಿಶ್ವಾಸವನ್ನು ಹೆಚ್ಚಿಸುತ್ತದೆ.
  9. ಸಂತ್ರಸ್ತರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ: ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳಲ್ಲಿ ಸಂತ್ರಸ್ತರಾದವರಿಗೆ ಎಲ್ಲಾ ಆಸ್ಪತ್ರೆಗಳಲ್ಲಿ ಉಚಿತ ಪ್ರಥಮ ಚಿಕಿತ್ಸೆ ಅಥವಾ ವೈದ್ಯಕೀಯ ಚಿಕಿತ್ಸೆಯನ್ನು ಹೊಸ ಕಾನೂನುಗಳು ಖಾತರಿಪಡಿಸುತ್ತವೆ. ಈ ನಿಬಂಧನೆಯು ತಕ್ಷಣ ಅಗತ್ಯ ವೈದ್ಯಕೀಯ ಆರೈಕೆ ಲಭ್ಯತೆಯನ್ನು ಖಚಿತಪಡಿಸುತ್ತದೆ, ಸವಾಲಿನ ಸಮಯದಲ್ಲಿ ಸಂತ್ರಸ್ತರ ಯೋಗಕ್ಷೇಮ ಮತ್ತು ಚೇತರಿಕೆಗೆ ಆದ್ಯತೆ ನೀಡುತ್ತದೆ.
  10. ಎಲೆಕ್ಟ್ರಾನಿಕ್ ಸಮನ್ಸ್: ಸಮನ್ಸ್ ಅನ್ನು ಈಗ ವಿದ್ಯುನ್ಮಾನವಾಗಿಯೂ ನೀಡಬಹುದು, ಕಾನೂನು ಪ್ರಕ್ರಿಯೆಗಳನ್ನು ವೇಗಗೊಳಿಸಬಹುದು, ಕಾಗದಪತ್ರಗಳನ್ನು ಕಡಿಮೆ ಮಾಡಬಹುದು ಮತ್ತು ಭಾಗಿಯಾಗಿರುವ ಎಲ್ಲಾ ಪಕ್ಷಗಳ ನಡುವೆ ಪರಿಣಾಮಕಾರಿ ಸಂವಹನವನ್ನು ಖಚಿತಪಡಿಸಿಕೊಳ್ಳಬಹುದು.
  11. ಮಹಿಳಾ ಮ್ಯಾಜಿಸ್ಟ್ರೇಟ್ ಹೇಳಿಕೆಗಳು: ಮಹಿಳೆಯ ವಿರುದ್ಧದ ಕೆಲವು ಅಪರಾಧಗಳಿಗೆ, ಸಂತ್ರಸ್ತೆಯ ಹೇಳಿಕೆಗಳನ್ನು ಸಾಧ್ಯವಾದಷ್ಟು ಮಹಿಳಾ ಮ್ಯಾಜಿಸ್ಟ್ರೇಟ್‌ಗಳೇ ದಾಖಲಿಸಬೇಕು. ಒಂದು ವೇಳೆ ಅವರ ಅನುಪಸ್ಥಿತಿಯಲ್ಲಿ, ಮಹಿಳೆಯೊಬ್ಬರ ಸಮ್ಮುಖದಲ್ಲಿ ಪುರುಷ ಮ್ಯಾಜಿಸ್ಟ್ರೇಟ್ ದಾಖಲಿಸಬೇಕು. ಸೂಕ್ಷ್ಮತೆ ಮತ್ತು ನ್ಯಾಯಸಮ್ಮತತೆಯನ್ನು ಖಚಿತಪಡಿಸಿಕೊಳ್ಳಲು, ಸಂತ್ರಸ್ತರಿಗೆ ಬೆಂಬಲಿತ ವಾತಾವರಣವನ್ನು ಸೃಷ್ಟಿಸಲು ಈ ನಿಬಂಧನೆಯನ್ನು ಸೇರಿಸಲಾಗಿದೆ.
  12. ಪೊಲೀಸ್ ವರದಿ ಮತ್ತು ಇತರ ದಾಖಲೆಗಳ ಪೂರೈಕೆ: ಆರೋಪಿ ಮತ್ತು ಸಂತ್ರಸ್ತೆ ಇಬ್ಬರೂ ಎಫ್ಐಆರ್, ಪೊಲೀಸ್ ವರದಿ / ದೋಷಾರೋಪ ಪಟ್ಟಿ, ಹೇಳಿಕೆಗಳು, ತಪ್ಪೊಪ್ಪಿಗೆಗಳು ಮತ್ತು ಇತರ ದಾಖಲೆಗಳ ಪ್ರತಿಗಳನ್ನು 14 ದಿನಗಳಲ್ಲಿ ಸ್ವೀಕರಿಸಲು ಅರ್ಹರಾಗಿದ್ದಾರೆ.
  13. ಸೀಮಿತ ಮುಂದೂಡಿಕೆ: ಪ್ರಕರಣಗಳ ವಿಚಾರಣೆಗಳಲ್ಲಿ ಅನಗತ್ಯ ವಿಳಂಬವನ್ನು ತಪ್ಪಿಸಲು, ಸಮಯೋಚಿತ ನ್ಯಾಯ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಲಯಗಳು ಗರಿಷ್ಠ ಎರಡು ಮುಂದೂಡಿಕೆಗಳನ್ನು ಮಾತ್ರ ನೀಡಲು ಅವಕಾಶವಿದೆ.
  14. ಸಾಕ್ಷಿ ಸಂರಕ್ಷಣಾ ಯೋಜನೆ: ಸಾಕ್ಷಿಗಳ ಸುರಕ್ಷತೆ ಮತ್ತು ಸಹಕಾರವನ್ನು ಖಚಿತಪಡಿಸಿಕೊಳ್ಳಲು, ಕಾನೂನು ಪ್ರಕ್ರಿಯೆಗಳ ವಿಶ್ವಾಸಾರ್ಹತೆ ಮತ್ತು ಪರಿಣಾಮಕಾರಿತ್ವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲಾ ರಾಜ್ಯ ಸರ್ಕಾರಗಳು ʻಸಾಕ್ಷಿ ಸಂರಕ್ಷಣಾ ಯೋಜನೆʼ ಜಾರಿಗೆ ತರುವುದನ್ನು ಹೊಸ ಕಾನೂನುಗಳು ಕಡ್ಡಾಯಗೊಳಿಸಿವೆ.
  15. ತೃತೀಯ ಲಿಂಗಿ ಸೇರ್ಪಡೆ: "ಲಿಂಗ"ದ ವ್ಯಾಖ್ಯಾನವು ಈಗ ತೃತೀಯ ಲಿಂಗಿ ವ್ಯಕ್ತಿಗಳನ್ನು ಒಳಗೊಂಡಿದೆ, ಆ ಮೂಲಕ ಒಳಗೊಳ್ಳುವಿಕೆ ಮತ್ತು ಸಮಾನತೆಯನ್ನು ಉತ್ತೇಜಿಸುತ್ತದೆ.
  16. ವಿದ್ಯುನ್ಮಾನ ವಿಧಾನದಲ್ಲಿ ಪ್ರಕ್ರಿಯೆಗಳು: ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ವಿದ್ಯುನ್ಮಾನವಾಗಿ ನಡೆಸುವ ಮೂಲಕ, ಹೊಸ ಕಾನೂನುಗಳು ಸಂತ್ರಸ್ತರು, ಸಾಕ್ಷಿಗಳು ಮತ್ತು ಆರೋಪಿಗಳಿಗೆ ಅನುಕೂಲವನ್ನು ಒದಗಿಸುತ್ತವೆ, ಆ ಮೂಲಕ ಇಡೀ ಕಾನೂನು ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸುತ್ತವೆ ಮತ್ತು ವೇಗಗೊಳಿಸುತ್ತವೆ.
  17. ಹೇಳಿಕೆಗಳ ಆಡಿಯೋ-ವಿಡಿಯೋ ರೆಕಾರ್ಡಿಂಗ್: ಸಂತ್ರಸ್ತೆಗೆ ಹೆಚ್ಚಿನ ರಕ್ಷಣೆ ನೀಡಲು ಮತ್ತು ಅತ್ಯಾಚಾರದ ಅಪರಾಧಕ್ಕೆ ಸಂಬಂಧಿಸಿದ ತನಿಖೆಯಲ್ಲಿ ಪಾರದರ್ಶಕತೆಯನ್ನು ಜಾರಿಗೊಳಿಸಲು, ಸಂತ್ರಸ್ತೆಯ ಹೇಳಿಕೆಯನ್ನು ಪೊಲೀಸರು ಆಡಿಯೋ-ವೀಡಿಯೊ ವಿಧಾನಗಳ ಮೂಲಕ ದಾಖಲಿಸಬೇಕು.
  18. ಪೊಲೀಸ್ ಠಾಣೆಗೆ ಹೋಗುವುದರಿಂದ ವಿನಾಯಿತಿ: ಮಹಿಳೆಯರು, 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳು, 60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಹಾಗೂ ಅಂಗವಿಕಲರು ಅಥವಾ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಪೊಲೀಸ್ ಠಾಣೆಗಳಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ.
  19. ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳು: ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳನ್ನು ಪರಿಹರಿಸಲು, ಕೇಂದ್ರೀಕೃತ ರಕ್ಷಣೆ ಮತ್ತು ನ್ಯಾಯವನ್ನು ಖಚಿತಪಡಿಸಿಕೊಳ್ಳಲು ʻಬಿಎನ್ಎಸ್‌ʼನಲ್ಲಿ ಹೊಸ ಅಧ್ಯಾಯವನ್ನು ಸೇರಿಸಲಾಗಿದೆ.
  20. ಲಿಂಗ-ತಟಸ್ಥ ಅಪರಾಧಗಳು: ʻಬಿಎನ್ಎಸ್‌ʼನಲ್ಲಿ ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ವಿವಿಧ ಅಪರಾಧಗಳನ್ನು ಲಿಂಗ-ತಟಸ್ಥಗೊಳಿಸಲಾಗಿದೆ, ಲಿಂಗವನ್ನು ಲೆಕ್ಕಿಸದೆ ಎಲ್ಲಾ ಸಂತ್ರಸ್ತರು ಮತ್ತು ಅಪರಾಧಿಗಳನ್ನು ಇದು ಒಳಗೊಂಡಿದೆ.
  21. ಸಮುದಾಯ ಸೇವೆ: ಹೊಸ ಕಾನೂನುಗಳು ವೈಯಕ್ತಿಕ ಬೆಳವಣಿಗೆ ಮತ್ತು ವ್ಯಕ್ತಿಗಳಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಣ್ಣ ಅಪರಾಧಗಳಿಗೆ ಸಮುದಾಯ ಸೇವೆಯನ್ನು ಪರಿಚಯಿಸುತ್ತವೆ. ಸಮುದಾಯ ಸೇವೆಯ ಅಡಿಯಲ್ಲಿ, ಅಪರಾಧಿಗಳು ಸಮಾಜಕ್ಕೆ ಧನಾತ್ಮಕವಾಗಿ ಕೊಡುಗೆ ನೀಡಲು, ತಮ್ಮ ತಪ್ಪುಗಳಿಂದ ಕಲಿಯಲು ಮತ್ತು ಬಲವಾದ ಸಮುದಾಯ ಬಂಧಗಳನ್ನು ನಿರ್ಮಿಸಲು ಅವಕಾಶವನ್ನು ಪಡೆಯುತ್ತಾರೆ.
  1. ಅಪರಾಧಗಳಿಗೆ ಸರಿಹೊಂದಿಸಿದ ದಂಡಗಳು: ಹೊಸ ಕಾನೂನುಗಳ ಅಡಿಯಲ್ಲಿ, ಕೆಲವು ಅಪರಾಧಗಳಿಗೆ ವಿಧಿಸಲಾಗುವ ದಂಡಗಳನ್ನು ಅಪರಾಧಗಳ ತೀವ್ರತೆಗೆ ಅನುಗುಣವಾಗಿ ಹೊಂದಿಸಲಾಗಿದೆ, ಇದು ನ್ಯಾಯಯುತ ಮತ್ತು ತಕ್ಕನಾದ ಶಿಕ್ಷೆಯನ್ನು ಖಚಿತಪಡಿಸುತ್ತದೆ, ಭವಿಷ್ಯದ ಅಪರಾಧಗಳನ್ನು ತಡೆಯುತ್ತದೆ ಮತ್ತು ಕಾನೂನು ವ್ಯವಸ್ಥೆಯಲ್ಲಿ ಸಾರ್ವಜನಿಕ ನಂಬಿಕೆಯನ್ನು ಕಾಪಾಡುತ್ತದೆ.
  2. ಸರಳೀಕೃತ ಕಾನೂನು ಪ್ರಕ್ರಿಯೆಗಳು: ಕಾನೂನು ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅನುಸರಿಸಲು ಸುಲಭವಾಗುವಂತೆ ಸರಳೀಕರಿಸಲಾಗಿದೆ, ನ್ಯಾಯಯುತ ಮತ್ತು ಕೈಗೆಟುಕುವ ನ್ಯಾಯವನ್ನು ಖಾತ್ರಿಪಡಿಸಲಾಗಿದೆ.
  3. ತ್ವರಿತ ಮತ್ತು ನ್ಯಾಯೋಚಿತ ಪರಿಹಾರ: ಹೊಸ ಕಾನೂನುಗಳು ಪ್ರಕರಣಗಳ ತ್ವರಿತ ಮತ್ತು ನ್ಯಾಯಯುತ ಪರಿಹಾರದ ಭರವಸೆ ನೀಡುತ್ತವೆ, ಕಾನೂನು ವ್ಯವಸ್ಥೆಯಲ್ಲಿ ವಿಶ್ವಾಸವನ್ನು ಮೂಡಿಸುತ್ತವೆ.

 

ಗೃಹ ವ್ಯವಹಾರಗಳ ಸಹಾಯಕ ಸಚಿವರಾದ ಶ್ರೀ ಬಂಡಿ ಸಂಜಯ್ ಕುಮಾರ್ ಅವರು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದರು.

 

*****



(Release ID: 2036937) Visitor Counter : 5