ಉಪರಾಷ್ಟ್ರಪತಿಗಳ ಕಾರ್ಯಾಲಯ

ಭಾರತೀಯ ರಾಜಕೀಯ ವ್ಯವಸ್ಥೆಯಲ್ಲಿ ಎಲ್ಲವೂ ಸರಿಯಾಗಿಲ್ಲ ಅದು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದೆ - ಉಪರಾಷ್ಟ್ರಪತಿ


ಸಂಸತ್ತಿನ ಕಾರ್ಯಕಲಾಪಗಳನ್ನು ಸ್ಥಗಿತಗೊಳಿಸುವ ಮೂಲಕದ ರಾಜಕೀಯವನ್ನು ಅಸ್ತ್ರೀಕರಣಗೊಳಿಸುವುದು ನಮ್ಮ ರಾಜಕಾರಣದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ - ವಿಪಿ

ಅಧ್ಯಕ್ಷರು ಅಥವಾ ಸ್ಪೀಕರ್ ಅನ್ನು "ಅನುಕೂಲಕರವಾದ ಪಂಚಿಂಗ್ ಬ್ಯಾಗ್" ಮಾಡುವ ಪ್ರವೃತ್ತಿಯ ಬಗ್ಗೆ ವಿಪಿ ಆಳವಾದ ಕಳವಳವನ್ನು ಪಡಿಸಿದರು

ಸಂಸತ್ತನ್ನು "ಪ್ರಜಾಪ್ರಭುತ್ವದ ಉತ್ತರ ನಕ್ಷತ್ರ" ಮತ್ತು ಶಾಸಕರನ್ನು "ಲೈಟ್ ಹೌಸ್" ಎಂದು ವಿವರಿಸಿದರು

ಶಾಸಕಾಂಗಗಳಲ್ಲಿ ಹಾಸ್ಯ ಮತ್ತು ವ್ಯಂಗ್ಯ ಮರೆಯಾಗಿ ಪ್ರತಿರೋಧ ಮತ್ತು ಪ್ರತಿಕೂಲ ಸನ್ನಿವೇಶಗಳು ಹೆಚ್ಚುತ್ತಿವೆ  

ಸದಸ್ಯರು ನನ್ನ ಚೇಂಬರ್‌ನಲ್ಲಿ ನನ್ನನ್ನು ಭೇಟಿಯಾಗಿ ಸದನಕ್ಕೆ ಅಡ್ಡಿಪಡಿಸಲು ತಮ್ಮ ರಾಜಕೀಯ ಪಕ್ಷದಿಂದ ಆದೇಶವಿದೆ ಎಂದು ಹೇಳುತ್ತಾರೆ -  ಉಪರಾಷ್ಟ್ರಪತಿಗಳು

ಸದನದ ಭಾವಿಯೊಳಗೆ ಧುಮುಕುವರಿಗಿಂತ  ತಮ್ಮ ಕಾರ್ಯವನ್ನು ಉತ್ತಮವಾಗಿ ನಿರ್ವಹಿಸುವ ತಮ್ಮ ಸದಸ್ಯರಿಗೆ ಮನ್ನಣೆ ನೀಡುವಂತೆ ಅವರು ರಾಜಕೀಯ ಪಕ್ಷಗಳಿಗೆ ಕರೆ ಕೊಟ್ಟರು

ಇಂದು ಮುಂಬೈನಲ್ಲಿ ಮಹಾರಾಷ್ಟ್ರದ ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿಗಳು 

Posted On: 11 JUL 2024 7:35PM by PIB Bengaluru

"ಭಾರತೀಯ ರಾಜಕೀಯ ವ್ಯವಸ್ಥೆಯಲ್ಲಿ ಎಲ್ಲವೂ ಸರಿಯಾಗಿಲ್ಲ ಮತ್ತು ಅದು ಹೆಚ್ಚಿನ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದೆ" ಎಂದು ಉಪರಾಷ್ಟ್ರಪತಿಗಳಾದ ಶ್ರೀ ಜಗದೀಪ್ ಧನಕರ್ ಅವರು ಇಂದು ಕಳವಳ ವ್ಯಕ್ತಪಡಿಸಿದರು. ಶಾಸನಸಭೆಗಳಲ್ಲಿ ಚರ್ಚೆ, ಸಂವಾದ, ಸಮಾಲೋಚನೆ ಮತ್ತು ಚರ್ಚೆಗಳಿಗಿದ್ದ ಪ್ರಾಮುಖ್ಯತೆಯನ್ನು ಈಗ ಗದ್ದಲ ಮತ್ತು ಗೊಂದಲಗಳು ಪಡೆದುಕೊಂಡಿವೆ ಎಂದು ವಿಷಾದಿಸಿದ ಉಪರಾಷ್ಟ್ರಪತಿಗಳು ಸಂಸತ್ತಿನ ಕಾರ್ಯಕಲಾಪಗಳನ್ನು ಸ್ಥಗಿತಗೊಳಿಸುವ ಮೂಲಕ ರಾಜಕೀಯವನ್ನು ಅಸ್ತ್ರಗೊಳಿಸುವುದು ನಮ್ಮ ದೇಶದ ರಾಜಕಾರಣದ ಮೇಲೆ ಗಂಭೀರ ಪರಿಣಾಮಗಳನ್ನು ಬೀರಲಿದೆ ಎಂದು ಹೇಳಿದರು. 

ಇಂದು ಮುಂಬೈನಲ್ಲಿ ಮಹಾರಾಷ್ಟ್ರ ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಧನಕರ್ ಅವರು ಆಡಳಿತ ಮತ್ತು ವಿರೋಧ ಪಕ್ಷಗಳೆರಡೂ ಅಧ್ಯಕ್ಷರು ಅಥವಾ ಸ್ಪೀಕರ್ ಅವರನ್ನು "ಪಂಚಿಂಗ್ ಬ್ಯಾಗ್" ನಂತೆ ಬಳಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಇದು ಸೂಕ್ತವಲ್ಲ ಎಂದು ಹೇಳಿದ ಅವರು, "ಆ ಕುರ್ಚಿಯಲ್ಲಿ ಕುಳಿತಾಗ ನಾವು ನ್ಯಾಯಯುತವಾಗಿರಬೇಕು ಮತ್ತು ಎರಡೂ ಪಕ್ಷಗಳನ್ನು ಸಮನಾಗಿ ಕಾಣಬೇಕು" ಎಂದರು. ಪ್ರಜಾಪ್ರಭುತ್ವದ ದೇಗುಲ ಯಾವತ್ತೂ ಅಪವಿತ್ರವಾಗಬಾರದು ಎಂದು ಒತ್ತಿ ಹೇಳಿದ ಅವರು, ಪೀಠದ ಗೌರವವನ್ನು ಎಲ್ಲರೂ ಕಾಪಾಡಬೇಕು.  ಸಂಸತ್ತು ಮತ್ತು ಶಾಸಕಾಂಗಗಳಲ್ಲಿ ಹಿರಿಯ ಸದಸ್ಯರು ಈ ದಿಕ್ಕಿನಲ್ಲಿ ಇತರ ಸದಸ್ಯರಿಗೆ ದಾರಿ ತೋರಿಸಬೇಕು  ಎಂದರು.

ನಮ್ಮ ಶಾಸಕಾಂಗಗಳಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಸಂಸದೀಯ ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವನ್ನು ಒತ್ತಿ ಹೇಳಿದ ಉಪರಾಷ್ಟ್ರಪತಿಗಳು, “ಇತ್ತೀಚಿಗೆ ನಡೆದ ಸಂಸತ್ತಿನ ಅಧಿವೇಶನದಲ್ಲಿ ಕಂಡುಬಂದ ನಡವಳಿಕೆಯು ನಿಜವಾಗಿಯೂ ನೋವು ನೀಡುತ್ತದೆ. ಏಕೆಂದರೆ ಇದು ನಮ್ಮ ಶಾಸಕಾಂಗದ ಕಲಾಪಗಳ ಗುಣಮಟ್ಟದಲ್ಲಿ ಆಗಿರುವ ನೈತಿಕ ಕುಸಿತವನ್ನು ಪ್ರತಿಬಿಂಬಿಸುತ್ತದೆ."

ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳನ್ನು "ಪ್ರಜಾಪ್ರಭುತ್ವದ ಉತ್ತರ ನಕ್ಷತ್ರ" ಎಂದು ಬಣ್ಣಿಸಿದ ಶ್ರೀ ಧನಕರ್ ಅವರು ಸಂಸದರು ಮತ್ತು ಶಾಸಕಾಂಗಗಳ ಸದಸ್ಯರು ದೀಪಸ್ತಂಭಗಳಿದ್ದಂತೆ. ಅವರು ಅನುಕರಣೆಗೆ ಯೋಗ್ಯವಾದ ಉತ್ತಮ ನಡವಳಿಕೆಯನ್ನು ಪ್ರದರ್ಶಿಸಬೇಕು ಎಂದು ಹೇಳಿದರು.

“ನಮ್ಮ ಸಂಸತ್ತು ಮತ್ತು ಶಾಸಕಾಂಗಗಳ ಕಾರ್ಯನಿರ್ವಹಣೆಯಲ್ಲಿ ಪ್ರಸ್ತುತ ಎಲ್ಲವೂ ಸರಿಯಾಗಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ಪ್ರಜಾಪ್ರಭುತ್ವದ ಈ ದೇಗುಲಗಳು ಗದ್ದಲ ಮತ್ತು ಅಡಚಣೆಗಳಿಗೆ  ಬಲಿಯಾಗುತ್ತಿವೆ. ಪಕ್ಷಗಳ ನಡುವಿನ ಸಂಭಾಷಣೆ ಕಾಣೆಯಾಗಿದ್ದು, ಸದನಗಳಲ್ಲಿನ ಚರ್ಚೆಗಳ  ಗುಣಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ," ಎಂದು ಉಪರಾಷ್ಟ್ರಪತಿಗಳು ಕಳವಳ ವ್ಯಕ್ತಪಡಿಸಿದರು. 

ಸೌಹಾರ್ದತೆ ಮತ್ತು ಮಾತುಕತೆ ಮೂಲಕ ಮೂಡಿಸಬಹುದಾದ ಒಮ್ಮತಗಳು ಶಾಸಕಾಂಗಗಳಲ್ಲಿ  ಕಾಣೆಯಾಗಿ ಪ್ರತಿರೋಧ ಮತ್ತು ಪ್ರತಿಕೂಲ ನಿಲುವುಗಳು ಮುಂಚೂಣಿಗೆ ಬಂದಿವೆ. "ಪ್ರಜಾಪ್ರಭುತ್ವದ ರಾಜಕೀಯವು ದಿನದಿಂದ ದಿನಕ್ಕೆ ಪಾತಾಳಕ್ಕೆ ಕುಸಿಯುತ್ತಿದ್ದು ಅದು ತೀವ್ರ ಒತ್ತಡದಲ್ಲಿದೆ," ಎಂದರು. ಇಂತಹ "ಸ್ಫೋಟಕ ಮತ್ತು ಆತಂಕಕಾರಿ ಸನ್ನಿವೇಶದಲ್ಲಿ"  ಎಲ್ಲಾ ಹಂತಗಳಲ್ಲಿ ಅದರಲ್ಲೂ ವಿಶೇಷವಾಗಿ ರಾಜಕೀಯ ಪಕ್ಷಗಳಲ್ಲಿ ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವನ್ನು ಅವರು ಪ್ರತಿಪಾದಿಸಿದರು. 

“ಒಂದು ಕಾಲದಲ್ಲಿ ನಾವು ಶಾಸಕಾಂಗಗಳ ಕಲಾಪಗಳಲ್ಲಿದ್ದ ಹಾಸ್ಯ, ವಿಡಂಬನೆ ಮತ್ತು ವ್ಯಂಗ್ಯ ಈಗ ಮಾಯವಾಗಿವೆ. ಈ ಸದನಗಳಲ್ಲಿಈಗ  ಪ್ರತಿರೋಧ ಮತ್ತು ಪ್ರತಿಕೂಲ ಸನ್ನಿವೇಶಗಳನ್ನು ಸಾಮಾನ್ಯವಾಗಿವೆ ಎಂದು ಉಪರಾಷ್ಟ್ರಪತಿಗಳು ಹೇಳಿದರು. ರಾಜಕೀಯ ಪಕ್ಷಗಳು ತಮ್ಮ ಸದಸ್ಯರಲ್ಲಿ ಶಿಸ್ತಿನ ಪ್ರಜ್ಞೆಯನ್ನು ಬೆಳೆಸಬೇಕೆಂದು ಹೇಳಿದ ಅವರು ರಾಜಕೀಯ ಪಕ್ಷಗಳು ಸದನದ ಭಾವಿಗೆ ನುಗ್ಗಿ ಘೋಷಣೆ ಕೂಗುವವರನ್ನು ಬೆಂಬಲಿಸದೇ ಉತ್ತಮ ಕಾರ್ಯಕ್ಷಮತೆ ಪ್ರದರ್ಶಿಸುವ ಸದಸ್ಯರಿಗೆ ಮನ್ನಣೆ ನೀಡಬೇಕೆಂದು ಕರೆ ಕೊಟ್ಟರು. 

ಆಗಾಗ್ಗೆ ಸಂಸತ್ತಿನ ಸದಸ್ಯರು ತಮ್ಮನ್ನು ಚೇಂಬರ್‌ನಲ್ಲಿ ಭೇಟಿಯಾಗಿ ಸದನದ ಕಲಾಪಕ್ಕೆ ಅಡ್ಡಿಪಡಿಸಲು ತಮ್ಮ ರಾಜಕೀಯ ಪಕ್ಷದಿಂದ ಆದೇಶವಿದೆ ಎಂದು ಹೇಳುತ್ತಾರೆ ಎಂದು ಹೇಳಿದ ಉಪರಾಷ್ಟ್ರಪತಿಗಳು, ಸದನವನ್ನು ಅಡ್ಡಿಪಡಿಸಲು ಆದೇಶ ಕೊಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಶಿಷ್ಟಾಚಾರ ಮತ್ತು ಶಿಸ್ತು ಪ್ರಜಾಪ್ರಭುತ್ವದ ಹೃದಯ ಮತ್ತು ಆತ್ಮಗಳಿದ್ದಂತೆ ಎಂದು ಹೇಳಿದ ಶ್ರೀ ಧನಕರ್ ಅವರು, “ಸಂಸದರು ಚರ್ಚಾಪಟುಗಳಲ್ಲ. ಅವರು ಯಾರನ್ನೂ ಚರ್ಚೆಯಲ್ಲಿ ಸೋಲಿಸಬೇಕಾಗಿಲ್ಲ.  ಅವರು ತಮ್ಮ ಉದಾತ್ತತೆಯಿಂದ ಸದನದ ಕಲಾಪಕ್ಕೆ ಮೆರಗು ನೀಡಬೇಕು," ಎಂದರು.

ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ನೈತಿಕತೆ ಸಾರ್ವಜನಿಕ ಜೀವನದ ವಿಶಿಷ್ಟ ಲಕ್ಷಣವಾಗಿದೆ ಎಂದು ಹೇಳಿದ ಉಪರಾಷ್ಟ್ರಪತಿಗಳು, ನೈತಿಕತೆ ಮತ್ತು ನೈತಿಕ ಪ್ರಜ್ಞೆ  ಮಾನವನ ನಡವಳಿಕೆ ಸಾರಾಗಿದ್ದು, ಸಂಸದೀಯ ಪ್ರಜಾಪ್ರಭುತ್ವಕ್ಕೆ ಅತ್ಯಂತ ಅವಶ್ಯವಾಗಿವೆ ಎಂದು ಹೇಳಿದರು. ಪ್ರಜಾಸತ್ತಾತ್ಮಕ ಮೌಲ್ಯಗಳು ನಿಯಮಿತ ಪೋಷಣೆಯನ್ನು ಬೇಡುತ್ತವೆ ಎಂದು ಹೇಳಿದ ಅವರು, ಎಲ್ಲೆಡೆ ಸಹಕಾರ ಮತ್ತು ಉನ್ನತ ನೈತಿಕ ಮಾನದಂಡಗಳು ಇದ್ದಾಗ ಮಾತ್ರ ಅವು ಅರಳುತ್ತವೆ ಎಂದರು. 

ಅಧಿಕಾರಗಳ ಪ್ರತ್ಯೇಕತೆಯ ಸಿದ್ಧಾಂತವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಕರೆ ನೀಡಿದ ಉಪರಾಷ್ಟ್ರಪತಿಗಳು, ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗ ತಮ್ಮ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಿದಾಗ ಮಾತ್ರ ರಾಷ್ಟ್ರವು ಪ್ರಗತಿ ಹೊಂದುತ್ತದೆ ಎಂದು ಹೇಳಿದರು. "ಒಂದು ಸಂಸ್ಥೆ ಇನ್ನೊಂದು ಸಂಸ್ಥೆಯ ಕಾರ್ಯವ್ಯಾಪ್ತಿ ಮೇಲೆ ಆಕ್ರಮಣ ಮಾಡಲಾರಂಭಿಸಿದರೆ ಅದು ಒಟ್ಟಾರೆ ಸಮಾಜದ ಮತ್ತು ದೇಶದ ಆಡಳಿತದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ, " ಎಂದು ಅವರು ಎಚ್ಚರಿಸಿದರು.‌

ಶಾಸನ ರಚನೆ ಶಾಸಕಾಂಗ ಮತ್ತು ಸಂಸತ್ತಿನ ಅಧಿಕಾರ ಎಂದು ಒತ್ತಿ ಹೇಳಿದ ಉಪರಾಷ್ಟ್ರಪತಿಗಳು ಇತರ ಅಂಗಗಳ ಮೂಲಕ ತಮ್ಮ ಕಾರ್ಯವ್ಯಾಪ್ತಿ ಮೇಲೆ ಆಗುವ ಅತಿಕ್ರಮಣದ ವಿರುದ್ಧ ಒಮ್ಮತದ ನಿರ್ಣಯ‌ ತಾಳಲು ಶಾಸಕಾಂಗಗಳು ಸಾಂವಿಧಾನಿಕವಾಗಿ ಬಾಧ್ಯತೆ ಹೊಂದಿವೆ ಎಂದರು.. ಪ್ರಜಾಪ್ರಭುತ್ವಕ್ಕೆ ಸಾಮರಸ್ಯವು ಅತ್ಯಗತ್ಯ ಎಂದ ಅವರು, ನಮ್ಮ ಪ್ರಜಾಪ್ರಭುತ್ವದ ಈ ಮೂರು ಸ್ತಂಭಗಳ ಉತ್ತುಂಗದಲ್ಲಿರುವವರ ನಡುವೆ  ರಚನಾತ್ಮಕ ಸಂವಹನ ಸಾಧ್ಯವಾಗಿಸುವ ಒಂದು ವ್ಯವಸ್ಥೆಯ ಅಗತ್ಯವಿದೆ ಎಂದು ಅವರು ಹೇಳಿದರು. 

ಸದನದಲ್ಲಿ ಚರ್ಚೆಯಲ್ಲಿ ಭಾಗವಹಿಸದಿರುವಿಕೆಗೆ ಯಾವುದೇ ಸಬೂಬು ಇರಲು ಸಾಧ್ಯವಿಲ್ಲ ಎಂದ ಅವರು, ಒಂದೆಡೆ ಸದಸ್ಯರು ಚರ್ಚೆಯಲ್ಲಿ  ಭಾಗವಹಿಸುವುದಿಲ್ಲ. ಮತ್ತೊಂದೆಡೆ ಕಲಾಪ ಭತ್ತೆ ಪಡೆಯಲು ಬಯಸುತ್ತಾರೆ. ಈ ನಡವಳಿಕೆ ಒಪ್ಪಲಾಗದು. 

"ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ನೈತಿಕತೆಯ ವರ್ಧನೆ" ಎಂಬ ಇಂದಿನ ಕಾರ್ಯಕ್ರಮದ ವಿಷಯವು ಅತ್ಯಂತ ಪ್ರಸ್ತುತವಾಗಿದೆ ಎಂದ ಧನಕರ್ ಅವರು, ಭಾರತವು ಪ್ರಜಾಪ್ರಭುತ್ವ ಆಡಳಿತಕ್ಕೆ ಜಗತ್ತಿಗೆ ಮಾದರಿಯಾಗಿ ಹೊರಹೊಮ್ಮಬೇಕಾಗಿದೆ ಎಂದು ಹೇಳಿದರು.

2047 ರ ವೇಳೆಗೆ ಭಾರತವು ವಿಕಸಿತ ರಾಷ್ಟ್ರವಾಗುವ ಹಾದಿಯಲ್ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಉಪರಾಷ್ಟ್ರಪತಿಗಳು, ಈ ಸುದೀರ್ಘ ಪಯಣದಲ್ಲಿ ಚಾಲಕನ ಪಾತ್ರ ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಸಂಸದೀಯ ಪಟುಗಳಾಗಿದ್ದು, ಅವರು ಇತರರಿಗೆ  ಮಾದರಿಯಾಗುವಂತೆ ಈ ಪಯಣವನ್ನು ಮುನ್ನಡೆಸಬೇಕು ಎಂದು ಕರೆ ನೀಡಿದರು.

*****



(Release ID: 2033058) Visitor Counter : 8