ಪ್ರಧಾನ ಮಂತ್ರಿಯವರ ಕಛೇರಿ

ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಿ ಉತ್ತರ


"ಭಾರತದ ಜನತೆ ಕಳೆದ 10 ವರ್ಷಗಳಲ್ಲಿ ನಮ್ಮ ಸರ್ಕಾರದ ಮೇಲೆ ನಂಬಿಕೆ ಇಟ್ಟಿದ್ದಾರೆ; 3ನೇ ಬಾರಿಗೆ ಉತ್ತಮ ಆಡಳಿತ ಮುಂದುವರಿಸಲು ನಮಗೆ ಅವಕಾಶ ನೀಡಿದ್ದಾರೆ"

"ಜನ ಸೇವಾ ಹಿ ಪ್ರಭು ಸೇವಾ' ಎಂಬ ನಂಬಿಕೆಯೊಂದಿಗೆ ನಾಗರಿಕರಿಗೆ ಸೇವೆ ಸಲ್ಲಿಸುವ ನಮ್ಮ ಬದ್ಧತೆಯನ್ನು ಜನರು ನೋಡಿದ್ದಾರೆ, ಅಂದರೆ ಮಾನವತೆಯ ಸೇವೆ ದೇವರ ಸೇವೆಯಾಗಿದೆ"

"ಭ್ರಷ್ಟಾಚಾರ ವಿಷಯದಲ್ಲಿ ಸರ್ಕಾರದ ಶೂನ್ಯ ಸಹಿಷ್ಣುತೆಯನ್ನು ಜನರು ಪುರಸ್ಕರಿಸಿದ್ದಾರೆ"

"ನಾವು ತುಷ್ಟೀಕರಣದ ಬದಲು ಸಂತುಷ್ಟೀಕರಣಕ್ಕಾಗಿ ಕೆಲಸ ಮಾಡಿದ್ದೇವೆ - ಓಲೈಕೆಗಿಂತ ಹೆಚ್ಚಾಗಿ ಪರಿಪೂರ್ಣತೆಗಾಗಿ"

"140 ಕೋಟಿ ನಾಗರಿಕರ ನಂಬಿಕೆ, ನಿರೀಕ್ಷೆಗಳು ಮತ್ತು ಆಶಾವಾದವು ಅಭಿವೃದ್ಧಿಗೆ ಪ್ರೇರಕ ಶಕ್ತಿಯಾಗಿದೆ"

"ರಾಷ್ಟ್ರ ಮೊದಲು ನಮ್ಮ ಏಕೈಕ ಗುರಿಯಾಗಿದೆ"

"ದೇಶವು ಅಭಿವೃದ್ಧಿ ಹೊಂದಿದಾಗ, ಭವಿಷ್ಯದ ಪೀಳಿಗೆಯ ಕನಸುಗಳನ್ನು ನನಸಾಗಿಸಲು ಬಲವಾದ ಬುನಾದಿ ಹಾಕಲಾಗುತ್ತದೆ"

"3ನೇ ಅವಧಿಯಲ್ಲಿ, ನಾವು 3 ಪಟ್ಟು ವೇಗದಲ್ಲಿ ಕೆಲಸ ಮಾಡುತ್ತೇವೆ, 3 ಪಟ್ಟು ಶಕ್ತಿಯನ್ನು ಹಾಕುತ್ತೇವೆ, 3 ಪಟ್ಟು ಫಲಿತಾಂಶಗಳನ್ನು ನೀಡುತ್ತೇವೆ"

Posted On: 02 JUL 2024 8:46PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂಸತ್ತಿನ ಲೋಕಸಭೆಯಲ್ಲಿಂದು ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸಿದರು.

ಸದನವನ್ನು ಉದ್ದೇಶಿಸಿ ಮಾತು ಆರಂಭಿಸಿದ ಪ್ರಧಾನ ಮಂತ್ರಿ, ರಾಷ್ಟ್ರಪತಿಗಳ ಭಾಷಣಕ್ಕೆ ಕೃತಜ್ಞತೆ ಸಲ್ಲಿಸಿದರು, ಭಾಷಣದ ಕೇಂದ್ರಬಿಂದುವಾಗಿದ್ದ ವಿಕಸಿತ ಭಾರತ ಪರಿಕಲ್ಪನೆಯ ಮೇಲೆ ಬೆಳಕು ಚೆಲ್ಲಿದರು. ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಅವರು ನೀಡಿರುವ ಮಾರ್ಗದರ್ಶನಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿದರು.

ನಿನ್ನೆ ಮತ್ತು ಇಂದು ರಾಷ್ಟ್ರಪತಿಗಳ ಭಾಷಣದ ಕುರಿತು ಅನೇಕ ಸದಸ್ಯರು ತಮ್ಮ ಆಲೋಚನೆಗಳನ್ನು ಹಂಚಿಕೊಂಡಾಗ, ಸದನದ ನಿಯಮಗಳನ್ನು ಗೌರವಿಸುವ ಮೂಲಕ ರಾಷ್ಟ್ರಪತಿಗಳ ಭಾಷಣ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡ ಮೊದಲ ಬಾರಿಯ ಸಂಸತ್ ಸದಸ್ಯರಿಗೆ ಶ್ರೀ ಮೋದಿ ಅವರು ವಿಶೇಷವಾಗಿ ಧನ್ಯವಾದಗಳನ್ನು ಅರ್ಪಿಸಿದರು. ಹೊಸ ಸಂಸದರ ನಡವಳಿಕೆಯು ಯಾವುದೇ ಅನುಭವಿ ಸಂಸದರಿಗಿಂತ ಕಡಿಮೆಯಿಲ್ಲ, ಅವರ ಆಲೋಚನೆಗಳು ಈ ಚರ್ಚೆಯ ಮೌಲ್ಯವನ್ನು ಮತ್ತಷ್ಟು ಪುಷ್ಟೀಕರಿಸಿದೆ ಎಂದು ಅವರು ಶ್ಲಾಘಿಸಿದರು.

ವಿಶ್ವದ ಅತಿದೊಡ್ಡ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸುವ ಮೂಲಕ ಸರ್ಕಾರವನ್ನು ಆಯ್ಕೆ ಮಾಡಿದ್ದಕ್ಕಾಗಿ ಮತದಾರರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಿ, ಪ್ರಸ್ತುತ ಸರ್ಕಾರವನ್ನು ಸತತವಾಗಿ 3ನೇ ಬಾರಿಗೆ ಆಯ್ಕೆ ಮಾಡಿದ್ದಕ್ಕಾಗಿ ಭಾರತದ ನಾಗರಿಕರಿಗೆ ಕೃತಜ್ಞತೆ ಸಲ್ಲಿಸಿದರು. ಇದು ಪ್ರಜಾಪ್ರಭುತ್ವ ಜಗತ್ತಿನಲ್ಲಿ ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದರು. ಕಳೆದ 10 ವರ್ಷಗಳಿಂದ ಸರ್ಕಾರದ ಪ್ರಯತ್ನಗಳು ಮತದಾರರಿಗೆ ನಿರ್ಣಾಯಕ ಅಂಶವಾಗಿದೆ. ‘ಜನ ಸೇವಾ ಹಿ ಪ್ರಭು ಸೇವೆ’, ಅಂದರೆ ಮಾನವತೆಯ ಸೇವೆಯೇ ದೇವರ ಸೇವೆ ಎಂಬ ನಂಬಿಕೆಯೊಂದಿಗೆ ನಾಗರಿಕರ ಸೇವೆ ಮಾಡುವ ಸರ್ಕಾರದ ಬದ್ಧತೆಯನ್ನು ಪ್ರಸ್ತಾಪಿಸಿದರು. ಸ್ವಾತಂತ್ರ್ಯಾ ನಂತರ ಮೊದಲ ಬಾರಿಗೆ 25 ಕೋಟಿಗೂ ಹೆಚ್ಚು ಬಡವರು ಇಷ್ಟು ಕಡಿಮೆ ಅವಧಿಯಲ್ಲಿ ಬಡತನದಿಂದ ಹೊರಬಂದಿದ್ದಾರೆ.

2014ರ ನಂತರ ಭ್ರಷ್ಟಾಚಾರದಲ್ಲಿ ಸರ್ಕಾರದ ಶೂನ್ಯ ಸಹಿಷ್ಣುತೆಯ ನಿಲುವು ಪುನರುಚ್ಚರಿಸಿದ ಪ್ರಧಾನಿ, ದೇಶದ ಮತದಾರರು ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತಂದಿದ್ದಾರೆ. “ಇಂದು ಭಾರತದ ಖ್ಯಾತಿಯು ವಿಶ್ವಾದ್ಯಂತ ಸುಧಾರಿಸಿದೆ. ಪ್ರತಿಯೊಬ್ಬ ಭಾರತೀಯನೂ ಈಗ ಹೆಮ್ಮೆ ಪಡುತ್ತಿದ್ದಾನೆ. ತಮ್ಮ ಸರ್ಕಾರದ ಪ್ರತಿಯೊಂದು ನೀತಿ ನಿರ್ಧಾರಗಳು ಮತ್ತು ಕೆಲಸಗಳು ಭಾರತಕ್ಕೆ ಆದ್ಯತೆ ನೀಡುತ್ತಿವೆ. ಜಾಗತಿಕ ವೇದಿಕೆಯಲ್ಲಿ ಭಾರತದ ಬೆಳೆಯುತ್ತಿರುವ ಉಪಸ್ಥಿತಿಯ ಮೇಲೆ ಬೆಳಕು ಚೆಲ್ಲಿದ  ಪ್ರಧಾನಿ, ರಾಷ್ಟ್ರದ ಕಡೆಗೆ ವಿಶ್ವದ ದೃಷ್ಟಿಕೋನವು ಪರಿವರ್ತನೆಯಾಗಿದೆ. ಇದು ಪ್ರತಿಯೊಬ್ಬ ನಾಗರಿಕರಲ್ಲಿ ಹೆಮ್ಮೆ ತುಂಬುತ್ತಿದೆ. ಸರ್ಕಾರದ ನೀತಿ ನಿರ್ಧಾರಗಳಲ್ಲಿ ಪ್ರತಿಬಿಂಬಿಸುವ ‘ರಾಷ್ಟ್ರ ಮೊದಲು’ ಎಂಬ ಏಕೈಕ ಗುರಿ ಸಾಧಿಸಲಾಗುವುದು. ಈ ನಂಬಿಕೆಯೊಂದಿಗೆ, ಸರ್ಕಾರವು ರಾಷ್ಟ್ರಾದ್ಯಂತ ಸುಧಾರಣೆಗಳ ಪ್ರಕ್ರಿಯೆಯನ್ನು ಮುಂದುವರೆಸಿದೆ. ಕಳೆದ 10 ವರ್ಷಗಳಲ್ಲಿ ಸರ್ಕಾರವು ಸಬ್ಕಾ ಸಾಥ್ ಸಬ್ಕಾ ವಿಕಾಸ್ ಮತ್ತು ಸರ್ವ್ ಪಂಥ್ ಸಂಭವ್ ಎಂಬ ತತ್ವಗಳ ಮಂತ್ರದೊಂದಿಗೆ ಜನರ ಸೇವೆ ಮಾಡಲು ಶ್ರಮಿಸುತ್ತಿದೆ, ಅಂದರೆ ಎಲ್ಲಾ ಧರ್ಮಗಳು ಸಮಾನವಾಗಿವೆ ಎಂದು ಪ್ರಧಾನಿ ಹೇಳಿದರು.

ಭಾರತವು ತುಷ್ಟೀಕರಣ ಅಥವಾ ಓಲೈಕೆಯ ರಾಜಕೀಯ ಮತ್ತು ಆಡಳಿತ ಮಾದರಿಯ ತುಷ್ಟೀಕರಣವನ್ನು ಬಹಳ ಸಮಯದಿಂದ ನೋಡಿದೆ. ಭಾರತದಲ್ಲಿ ಮೊದಲ ಬಾರಿಗೆ, ಸರ್ಕಾರವು ಜನರ ತೃಪ್ತಿ ಮತ್ತು ದೃಢೀಕರಣದೊಂದಿಗೆ ಜಾತ್ಯತೀತತೆಯ ಕಡೆಗೆ ಕೆಲಸ ಮಾಡಿದೆ. ಜನರಿಗೆ ಸಂತೃಪ್ತಿ ಎಂದರೆ ಸರ್ಕಾರದ ವಿವಿಧ ನೀತಿಗಳಲ್ಲಿ ಪರಿಪೂರ್ಣತೆ ಸಾಧಿಸುವುದು ಮತ್ತು ಭಾರತದ ಕಟ್ಟಕಡೆಯ ವ್ಯಕ್ತಿಗೆ ಸೇವೆ ತಲುಪಿಸುವ ಸಂಕಲ್ಪವನ್ನು ಸಾಧಿಸುವುದು ಸರ್ಕಾರದ ಉದ್ದೇಶವಾಗಿದೆ. ಈ ಪರಿಪೂರ್ಣತೆಯ ತತ್ತ್ವಶಾಸ್ತ್ರವು ನಿಜವಾದ ಅರ್ಥದಲ್ಲಿ ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆಯನ್ನು ಅರ್ಥೈಸುತ್ತದೆ. ಸತತ 3ನೇ ಅವಧಿಯ ರೂಪದಲ್ಲಿ ಭಾರತದ ಜನರಿಂದ ಸರ್ಕಾರ ಅಂಗೀಕರಿಸಲ್ಪಟ್ಟಿದೆ ಎಂದರು.

ಈ ಚುನಾವಣೆಯು ಭಾರತದ ಜನರ ಪ್ರಬುದ್ಧತೆ ಮತ್ತು ಆದರ್ಶವಾದವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. "ಜನರು ನಮ್ಮ ನೀತಿಗಳು, ಉದ್ದೇಶಗಳು ಮತ್ತು ಬದ್ಧತೆಯಲ್ಲಿ ವಿಶ್ವಾಸವನ್ನು ತೋರಿಸಿದ್ದಾರೆ". ಈ ಬಾರಿಯ ಚುನಾವಣೆಯಲ್ಲಿ ವಿಕಸಿತ ಭಾರತದ ನಿರ್ಣಯಕ್ಕೆ ಜನರು ಮನ್ನಣೆ ನೀಡಿದ್ದಾರೆ ಎಂದರು.

ಅಭಿವೃದ್ಧಿ ಹೊಂದಿದ ರಾಷ್ಟ್ರದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಪ್ರಧಾನ ಮಂತ್ರಿ, ದೇಶದ ಪ್ರತಿಯೊಬ್ಬ ಪ್ರಜೆಯ ಕನಸುಗಳು ಪ್ರಗತಿಯತ್ತ ಸಾಗಿದಾಗ ನನಸಾಗುತ್ತವೆ, ಅದೇ ಸಮಯದಲ್ಲಿ ಭವಿಷ್ಯದ ಪೀಳಿಗೆಯ ಆಕಾಂಕ್ಷೆಗಳನ್ನು ಈಡೇರಿಸಲು ಅಡಿಪಾಯ ಹಾಕುತ್ತವೆ. ಹಿಂದಿನ ತಲೆಮಾರುಗಳು ಯಾವಾಗಲೂ ಹಂಬಲಿಸುತ್ತಿರುವ ಅಭಿವೃದ್ಧಿ ಹೊಂದಿದ ಭಾರತದ ಲಾಭ ಪಡೆಯಲು ಭಾರತದ ಜನರು ಅರ್ಹರಾಗಿದ್ದಾರೆ. ವಿಕಸಿತ ಭಾರತ ರಚನೆಯು ಭಾರತದ ಹಳ್ಳಿಗಳು ಮತ್ತು ನಗರಗಳಲ್ಲಿ ಜೀವನ ಪರಿಸ್ಥಿತಿಗಳು ಮತ್ತು ಜೀವನದ ಗುಣಮಟ್ಟವನ್ನು ತೀವ್ರವಾಗಿ ಸುಧಾರಿಸುತ್ತಿದೆ. ಇದು ಜನರಲ್ಲಿ ಹೆಮ್ಮೆಯ ಭಾವನೆಯನ್ನು ಹುಟ್ಟುಹಾಕುತ್ತಿದೆ. ಅವರಿಗೆ ಹಲವಾರು ಅವಕಾಶಗಳನ್ನು ಸೃಷ್ಟಿಸುತ್ತಿದೆ. "ಭಾರತದ ನಗರಗಳು ವಿಶ್ವದ ಇತರೆ ಅಭಿವೃದ್ಧಿ ಹೊಂದಿದ ನಗರಗಳೊಂದಿಗೆ ಸಮಾನವಾಗಿ ಭಾಗವಹಿಸುತ್ತಿವೆ" ಎಂದು ಅವರು ಭರವಸೆ ನೀಡಿದರು.

ದೇಶದ ಪ್ರತಿಯೊಬ್ಬ ಪ್ರಜೆಗೂ ಬಹು ಮತ್ತು ಸಮಾನ ಅವಕಾಶಗಳ ಲಭ್ಯತೆಯನ್ನು ವಿಕಸಿತ ಭಾರತ ಉಲ್ಲೇಖಿಸುತ್ತದೆ. ಇದು ಕೌಶಲ್ಯಗಳು, ಸಂಪನ್ಮೂಲಗಳು ಮತ್ತು ಸಾಮರ್ಥ್ಯದ ಆಧಾರದ ಮೇಲೆ ಪ್ರತಿಯೊಬ್ಬರ ಬೆಳವಣಿಗೆಯನ್ನು ಖಾತ್ರಿಗೊಳಿಸುತ್ತಿದೆ.

ವಿಕಸಿತ ಭಾರತ ಆದರ್ಶವನ್ನು ಶ್ರದ್ಧೆಯಿಂದ ಮತ್ತು ಪ್ರಾಮಾಣಿಕವಾಗಿ ಸಾಕಾರಗೊಳಿಸಲು ಸರ್ಕಾರವು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತದೆ. "2047ರ ಹೊತ್ತಿಗೆ 24 X 7" ಸಮಯದ ಪ್ರತಿ ಕ್ಷಣ ಮತ್ತು ನಮ್ಮ ದೇಹದ ಪ್ರತಿಯೊಂದು ಕೋಶವು ವಿಕಸಿತ ಭಾರತವನ್ನು ರಚಿಸುವ ಕಲ್ಪನೆಗೆ ಸಮರ್ಪಿತವಾಗಿದೆ", ಎಂದು ಶ್ರೀ ಮೋದಿ ಒತ್ತಿ ಹೇಳಿದರು.

2014ರ ಮೊದಲು ಇಡೀ ರಾಷ್ಟ್ರವೇ ಹತಾಶ ಸ್ಥಿತಿಯಲ್ಲಿದ್ದ ಅವಧಿಯನ್ನು ಸ್ಮರಿಸಿದ ಪ್ರಧಾನಿ, ಈ ಅವಧಿಯಲ್ಲಿ ರಾಷ್ಟ್ರದ ನಾಗರಿಕರು ವಿಶ್ವಾಸ ಕಳೆದುಕೊಂಡಿದ್ದರು. ಇದರಿಂದ ರಾಷ್ಟ್ರಕ್ಕೆ ದೊಡ್ಡ ನಷ್ಟ ಉಂಟಾಯಿತು. ಇದು ನಿರಾಶೆಯ ಮೋಡವನ್ನು ಸೃಷ್ಟಿಸಿತ್ತು. ಇದು ಹಗರಣಗಳು ಮತ್ತು ನೀತಿ ಪ್ರತೀಕೂಲಗಳಿಂದ ದೇಶವನ್ನು ದುರ್ಬಲ 5 ಆರ್ಥಿಕತೆಯ  ರಾಷ್ಟ್ರಗಳ ಪಟ್ಟಿಗೆ ತಳ್ಳಿದ್ದ ಯುಗವಾಗಿತ್ತು ಎಂದು ಅವರು ನೆನಪಿಸಿಕೊಂಡರು. ಮನೆ, ಅನಿಲ ಸಂಪರ್ಕ ಅಥವಾ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಧಾನ್ಯಗಳನ್ನು ಸ್ವೀಕರಿಸಲು ಲಂಚ ಮತ್ತು ಭ್ರಷ್ಟಾಚಾರ ಸಾಮಾನ್ಯ ಅಭ್ಯಾಸವಾಗಿತ್ತು. ಸಾಮಾನ್ಯ ನಾಗರಿಕರು ಎಲ್ಲಾ ಭರವಸೆ, ಆಶಾವಾದ ಕಳೆದುಕೊಂಡಿದ್ದರು.

2014ರ ಮೊದಲು ಇದ್ದ  ದೇಶದ ಕಳಪೆ ಪರಿಸ್ಥಿತಿಗೆ ತಮ್ಮ ಭವಿಷ್ಯವನ್ನೇ ದೂಷಿಸುತ್ತಾ ದೇಶದ ನಾಗರಿಕರು ತಮ್ಮ ದೈನಂದಿನ ಜೀವನ ನಡೆಸುವಂತಾಗಿತ್ತು. ಒಂದು ಕಾಲದಲ್ಲಿ ಯಾವುದೂ ಸಾಧ್ಯವಿಲ್ಲ ಎಂದು ಭಾವಿಸಿದ್ದವರನ್ನು ಎಲ್ಲವೂ ಸಾಧ್ಯ ಎಂದು ನಂಬುವಂತೆ ಮಾಡುವಲ್ಲಿ ನಮ್ಮ ಸರ್ಕಾರ ಹಲವು ಪ್ರಯತ್ನಗಳನ್ನು ಮಾಡಿದೆ. ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿದ ಪ್ರಧಾನ ಮಂತ್ರಿ, ಯಶಸ್ವಿ 5ಜಿ ಬಿಡುಗಡೆ, ಅತ್ಯಧಿಕ ಕಲ್ಲಿದ್ದಲು ಉತ್ಪಾದನೆ, ರಾಷ್ಟ್ರದ ಬ್ಯಾಂಕಿಂಗ್ ವ್ಯವಸ್ಥೆ ಬಲಪಡಿಸಲು ಪರಿವರ್ತನೀಯ ನೀತಿಗಳು, ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆ ನೀತಿ ಮತ್ತು 370ನೇ ವಿಧಿಯ ರದ್ದತಿಯನ್ನು ಪ್ರಸ್ತಾಪಿಸಿದರು. ಜಮ್ಮು-ಕಾಶ್ಮೀರದಲ್ಲಿ “ಸಂವಿಧಾನ ವಿಧಿ 370ರ ತಡೆಗೋಡೆಗಳನ್ನು ಕೆಡವಲಾಗಿದೆ, ಅಲ್ಲಿ ಪ್ರಜಾಪ್ರಭುತ್ವವು ಬಲಗೊಳ್ಳುತ್ತಿದೆ" ಎಂದು ಅವರು ಇತ್ತೀಚೆಗೆ ಮುಕ್ತಾಯಗೊಂಡ ಸಾರ್ವತ್ರಿಕ ಚುನಾವಣೆಗಳಲ್ಲಿ ದಾಖಲೆಯ ಮತದಾನವನ್ನು ಪ್ರಸ್ತಾಪಿಸಿದರು.

"140 ಕೋಟಿ ನಾಗರಿಕರ ನಂಬಿಕೆ, ನಿರೀಕ್ಷೆಗಳು ಮತ್ತು ಆಶಾವಾದವು ಅಭಿವೃದ್ಧಿಗೆ ಪ್ರೇರಕ ಶಕ್ತಿಯಾಗಿದೆ". ಈ ನಂಬಿಕೆ ಮತ್ತು ಸಂಕಲ್ಪವು ಸಾಧನೆಯನ್ನು ಸಂಕೇತಿಸುತ್ತಿದೆ ಎಂದು ಪ್ರಧಾನಿ ಹೇಳಿದರು.

ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ನಮ್ಮ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಪ್ರಜೆಗಳು ಹೊಂದಿದ್ದ ಉತ್ಸುಕತೆ ಮತ್ತು ಆತ್ಮವಿಶ್ವಾಸವನ್ನು ಇಂದಿನ ಜನರು ಸಹ ಹೊಂದಿದ್ದಾರೆ. ಕಳೆದ 10 ವರ್ಷಗಳಲ್ಲಿ ದೇಶದ ಪ್ರಗತಿಯನ್ನು ಶ್ಲಾಘಿಸಿದ ಪ್ರಧಾನಿ, “ಇಂದು ಭಾರತವು ತನ್ನೊಂದಿಗೆ ಸ್ಪರ್ಧಿಸಬೇಕಾಗಿದೆ. ನಾವು ನಮ್ಮ ಹಳೆಯ ದಾಖಲೆಗಳನ್ನು ಮುರಿದು ದೇಶವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬೇಕು. ಕಳೆದ ದಶಕದಲ್ಲಿ ಭಾರತ ತೆಗೆದುಕೊಂಡಿರುವ ಅಭಿವೃದ್ಧಿಯ ಹಾದಿಯಲ್ಲಿ ನಾವು ಪ್ರತಿ ಕ್ಷೇತ್ರವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತೇವೆ ಎಂದು ಹೇಳಿದ ಅವರು, ದೇಶವು ವೇಗವಾಗಿ ಪ್ರಗತಿ ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ 10 ವರ್ಷಗಳಲ್ಲಿ, ಭಾರತವು 10ನೇ ಅತಿದೊಡ್ಡ ಆರ್ಥಿಕತೆಯಿಂದ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ. ಭಾರತವು ಶೀಘ್ರದಲ್ಲೇ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಭಾರತವು ಈಗ ವಿಶ್ವದ ಅತಿದೊಡ್ಡ ಮೊಬೈಲ್ ತಯಾರಕ ಮತ್ತು ರಫ್ತುದಾರ ದೇಶಗಳಲ್ಲಿ ಒಂದಾಗಿದೆ. ಸರ್ಕಾರದ 3ನೇ ಅವಧಿಯಲ್ಲಿ ಅರೆವಾಹಕ (ಸೆಮಿಕಂಡಕ್ಟರ್) ಕ್ಷೇತ್ರದಲ್ಲಿ ರಾಷ್ಟ್ರವು ಇದೇ ರೀತಿಯ ಎತ್ತರವನ್ನು ಸಾಧಿಸಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.

ರಾಷ್ಟ್ರವು ಹೊಸ ಮೈಲಿಗಲ್ಲುಗಳನ್ನು ಗೆದ್ದು ಹೊಸ ಎತ್ತರ ತಲುಪಿದರೂ, ಸರ್ಕಾರವು ಸಾಮಾನ್ಯ ನಾಗರಿಕರ ಸೇವೆಯಲ್ಲಿ ಬೇರೂರಿದೆ. ಬಡವರಿಗೆ 4 ಕೋಟಿ ಪಕ್ಕಾ ಮನೆಗಳನ್ನು ಹಸ್ತಾಂತರಿಸಲಾಗಿದೆ. ಮುಂಬರುವ ದಿನಗಳಲ್ಲಿ 3 ಕೋಟಿ ಹೊಸ ಮನೆಗಳನ್ನು ನಿರ್ಮಿಸಲಾಗುವುದು. ಮಹಿಳಾ ಸ್ವ-ಸಹಾಯ ಗುಂಪುಗಳ ಪ್ರಮಾಣ ಏರಿಕೆ ಕಂಡಿದೆ. 3 ಕೋಟಿ ಲಖ್ಪತಿ ದೀದಿಗಳನ್ನು ರಚಿಸುವ ಸರ್ಕಾರದ ಕ್ರಿಯಾ ಯೋಜನೆ ರೂಪಿಸಲಾಗಿದೆ. ತನ್ನ 3ನೇ ಅವಧಿಯಲ್ಲಿ 3 ಪಟ್ಟು ವೇಗ ಮತ್ತು ಪ್ರಯತ್ನದಲ್ಲಿ ಕೆಲಸ ಮಾಡುವ ಮತ್ತು 3 ಪಟ್ಟು ಫಲಿತಾಂಶವನ್ನು ನೀಡುವ ಸರ್ಕಾರದ ಬದ್ಧತೆಯನ್ನು ಪ್ರಧಾನ ಮಂತ್ರಿ ಪುನರುಚ್ಚರಿಸಿದರು.

60 ವರ್ಷಗಳ ನಂತರ ಸತತ 3ನೇ ಬಾರಿಗೆ ಸರ್ಕಾರ ಅಧಿಕಾರಕ್ಕೆ ಬರುತ್ತಿರುವುದು ಸರ್ಕಾರದ ಪ್ರಯತ್ನ ಮತ್ತು ನಾಗರಿಕರಲ್ಲಿ ಮೂಡಿಸಿರುವ ವಿಶ್ವಾಸವನ್ನು ಸೂಚಿಸುತ್ತಿದೆ. "ಇಂತಹ ಸಾಧನೆಗಳನ್ನು ಕ್ಷುಲ್ಲಕ ರಾಜಕೀಯದಿಂದ ಸಾಧಿಸಲಾಗುವುದಿಲ್ಲ, ಆದರೆ ನಾಗರಿಕರ ಆಶೀರ್ವಾದದಿಂದ", ಜನರು ಸ್ಥಿರತೆ ಮತ್ತು ನಿರಂತರತೆಯನ್ನು ಆರಿಸಿಕೊಂಡಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

ಒಡಿಶಾ, ಆಂಧ್ರ ಪ್ರದೇಶ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ಈ 4 ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಜನಾದೇಶವನ್ನು ಶ್ಲಾಘಿಸಿದ ಪ್ರಧಾನಿ, ಲೋಕಸಭೆ ಚುನಾವಣೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಭಾರಿ ಗೆಲುವು ಸಾಧಿಸಿರುವುದನ್ನು ಪ್ರಸ್ತಾಪಿಸಿದರು. ರಾಷ್ಟ್ರಾದ್ಯಂತ ಅನೇಕ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಮತಗಳ ಪ್ರಮಾಣವನ್ನು ಪ್ರಸ್ತಾಪಿಸಿದ ಅವರು, "ಜನತಾ ಜನಾರ್ದನ್ ನಮ್ಮ ಪಕ್ಕದಲ್ಲಿದ್ದಾರೆ" ಎಂದು ಹೇಳಿದರು.

ಇತ್ತೀಚಿನ ಲೋಕಸಭಾ ಚುನಾವಣಾ ಫಲಿತಾಂಶ ಪ್ರಸ್ತಾಪಿಸಿದ ಪ್ರಧಾನಿ, ಜನರ ಆದೇಶವನ್ನು ನಮ್ರತೆಯಿಂದ ಸ್ವೀಕರಿಸಬೇಕು ಮತ್ತು ಜನರ ಸಂದೇಶವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರತಿಪಕ್ಷಗಳಿಗೆ ಒತ್ತಾಯಿಸಿದರು. ಜನತೆ ಅಭಿವೃದ್ಧಿ ಪಥವನ್ನು ಆಯ್ಕೆ ಮಾಡಿಕೊಂಡಿದ್ದು, ವಿಕಸಿತ ಭಾರತ ಗುರಿ ಸಾಕಾರಗೊಳಿಸಲು ಸಂಕಲ್ಪ ಮಾಡಿದ್ದಾರೆ. ಭಾರತವು ಒಟ್ಟಾಗಿ ಅಭಿವೃದ್ಧಿಯ ಹೊಸ ಪಯಣ ಪ್ರಾರಂಭಿಸಬೇಕು. ಅವ್ಯವಸ್ಥೆ, ಕಾನೂನುಬಾಹಿರತೆ ಮತ್ತು ವಿಭಜನೆಯ ರಾಜಕೀಯ ಮಾರ್ಗ  ಆರಿಸಿಕೊಳ್ಳುವವರ ವಿರುದ್ಧ ಜಾಗರೂಕರಾಗಿರಲು ಭಾರತದ ನಾಗರಿಕರಿಗೆ ಮನವಿ ಮಾಡಿದರು. ರಾಷ್ಟ್ರವನ್ನು ಆರ್ಥಿಕ ಅವ್ಯವಸ್ಥೆಯತ್ತ ತಳ್ಳುವ ಮತ್ತು ದೇಶದಲ್ಲಿ ತಪ್ಪು ಮಾಹಿತಿಯ ಹರಡುವಿಕೆಗೆ ಒಲವು ತೋರುವ ಸೂಕ್ತವಲ್ಲದ ಆರ್ಥಿಕ ನೀತಿಗಳ ವಿರುದ್ಧ ಅವರು ಎಚ್ಚರಿಕೆ ನೀಡಿದರು. ಸದನದ ಸೌಹಾರ್ದತೆ ಮತ್ತು ಘನತೆಯನ್ನು ಕಾಪಾಡುವಂತೆ ಸ್ಪೀಕರ್ ಮೂಲಕ ಪ್ರತಿಪಕ್ಷಗಳಿಗೆ ಪ್ರಧಾನಿ ಒತ್ತಾಯಿಸಿದರು. ಸದನದ ಪಾವಿತ್ರ್ಯಕ್ಕೆ ಧಕ್ಕೆಯಾಗದಂತೆ ಸರಿಪಡಿಸುವ ಕ್ರಮಗಳನ್ನು ಅನುಷ್ಠಾನಗೊಳಿಸುವಂತೆ ಸ್ಪೀಕರ್‌ಗೆ ಮನವಿ ಮಾಡಿದರು.

ತುರ್ತು ಪರಿಸ್ಥಿತಿ ಯುಗದ ಕುರಿತು ಮಾತನಾಡಿದ ಪ್ರಧಾನಿ, ರಾಷ್ಟ್ರವನ್ನು ಆಳುವವರು ದೇಶದಲ್ಲಿ ಸರ್ವಾಧಿಕಾರಿ ವಾತಾವರಣ ಸೃಷ್ಟಿಸಿದ್ದು, ನಾಗರಿಕರಿಗೆ ವ್ಯಾಪಕ ಕ್ರೌರ್ಯ ಮತ್ತು ರಾಷ್ಟ್ರಕ್ಕೆ ಅನ್ಯಾಯ ಉಂಟುಮಾಡಿದ್ದಾರೆ. ಹೊಸ ಭಾರತೀಯ ಸಂವಿಧಾನದಲ್ಲಿ ಭರವಸೆ ನೀಡಿದಂತೆ, ಹಿಂದುಳಿದ ವರ್ಗಗಳು ಮತ್ತು ಪರಿಶಿಷ್ಟ ಜಾತಿಗಳ ಹಕ್ಕುಗಳನ್ನು ರಕ್ಷಿಸಲು ಅಂದಿನ ಸರ್ಕಾರದ ಕ್ರಮಗಳ ಕೊರತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂಪುಟಕ್ಕೆ ರಾಜೀನಾಮೆ ನೀಡಿದ ಸಮಯವನ್ನು ಅವರು ನೆನಪಿಸಿಕೊಂಡರು. ಜಗ ಜೀವನ್ ರಾಮ್ ಜಿ, ಚೌಧರಿ ಚರಣ್ ಸಿಂಗ್ ಜಿ ಮತ್ತು ಸೀತಾರಾಮ್ ಕೇಸರಿ ಜಿ ಅವರಂತಹ ಪ್ರಮುಖ ನಾಯಕರಿಗೆ ಉಂಟಾದ ದೌರ್ಜನ್ಯಗಳನ್ನು ಅವರು ಪ್ರಸ್ತಾಪಿಸಿದರು.

ದಾರ್ಶನಿಕ ಸ್ವಾಮಿ ವಿವೇಕಾನಂದರ ಷಿಕಾಗೊ ಭಾಷಣವನ್ನು ಉಲ್ಲೇಖಿಸಿದ ಪ್ರಧಾನಿ, ಜಗತ್ತಿಗೆ ಸಹಿಷ್ಣುತೆ ಮತ್ತು ಸಾರ್ವತ್ರಿಕ ಸ್ವೀಕಾರವನ್ನು ಕಲಿಸಿದ ಧರ್ಮಕ್ಕೆ ನಾವೆಲ್ಲಾ ಸೇರಿದವರು ಎಂದು ಹೇಳಲು ಹೆಮ್ಮೆಪಡುತ್ತೇನೆ. ಭಾರತದ ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆಯು ಹಿಂದೂ ಸಮುದಾಯದ ಸಹಿಷ್ಣುತೆ ಮತ್ತು ಏಕತೆಯ ಮನೋಭಾವದಿಂದ ಮಾತ್ರ ಪ್ರವರ್ಧಮಾನಕ್ಕೆ ಬಂದಿದೆ. ಆದರೆ, ಇಂದು ಹಿಂದೂ ಸಮಾಜದ ಮೇಲೆ ಸುಳ್ಳು ಆರೋಪ ಹೊರಿಸಿ ಪಿತೂರಿ ನಡೆಸಲಾಗುತ್ತಿದೆ ಎಂದು ಪ್ರಧಾನಿ ಕಳವಳ ವ್ಯಕ್ತಪಡಿಸಿದರು.

ಭಾರತದ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಶಕ್ತಿಯನ್ನು ಶ್ಲಾಘಿಸಿದ ಶ್ರೀ ಮೋದಿ, ಕಳೆದ 10 ವರ್ಷಗಳಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಹಲವಾರು ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ಪ್ರತಿ ಸವಾಲನ್ನು ಎದುರಿಸಲು ಭಾರತದ ಸಶಸ್ತ್ರ ಪಡೆಗಳನ್ನು ಆಧುನೀಕರಣಗೊಳಿಸಲಾಗುತ್ತಿದೆ ಮತ್ತು ಸಜ್ಜುಗೊಳಿಸಲಾಗುತ್ತಿದೆ. ರಾಷ್ಟ್ರೀಯ ಭದ್ರತೆಯ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಸಶಸ್ತ್ರ ಪಡೆಗಳು ಯುದ್ಧಕ್ಕೆ ಸನ್ನದ್ಧವಾಗಿರಲು ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಥಿಯೇಟರ್ ಕಮಾಂಡ್ ಸ್ಥಾಪನೆಯ ಪ್ರಾಮುಖ್ಯತೆಗೆ ಒತ್ತು ನೀಡಿದ ಅವರು, ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥ(ಸಿಡಿಎಸ್)ರ ನೇಮಕದ ನಂತರ ಈ ದೀರ್ಘಾವಧಿಯ ಮಿಲಿಟರಿ ಸಾಂಸ್ಥಿಕ ರಚನೆಯನ್ನು ಸ್ಥಾಪಿಸುವ ದಿಕ್ಕಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಶ್ರೀ ಮೋದಿ ತೃಪ್ತಿ ವ್ಯಕ್ತಪಡಿಸಿದರು.

ಆತ್ಮನಿರ್ಭರ್ ಭಾರತದಲ್ಲಿ ನಮ್ಮ ಸಶಸ್ತ್ರ ಪಡೆಗಳನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಪ್ರಮುಖ ಸುಧಾರಣೆಗಳನ್ನು ಕೈಗೊಳ್ಳಲಾಗುತ್ತಿದೆ. ಸಶಸ್ತ್ರ ಪಡೆಗಳಲ್ಲಿ ಹೆಚ್ಚಿನ  ಯುವಕರಿರಬೇಕು, ನಮ್ಮ ಪಡೆಗಳಲ್ಲಿ ಯುವಕರ ಸಂಖ್ಯೆ ಹೆಚ್ಚಿಸುವ ಅಗತ್ಯವಿದೆ. ರಾಷ್ಟ್ರೀಯ ಭದ್ರತೆಯು ಗಂಭೀರ ವಿಷಯವಾಗಿದೆ ಮತ್ತು ಸಶಸ್ತ್ರ ಪಡೆಗಳನ್ನು 'ಯುದ್ಧಕ್ಕೆ ಯೋಗ್ಯ' ಮಾಡಲು ಸರ್ಕಾರವು ಸಕಾಲಿಕ ಸುಧಾರಣೆಗಳನ್ನು ಕೈಗೊಳ್ಳುತ್ತಿದೆ ಎಂದು ಮೋದಿ ಒತ್ತಿ ಹೇಳಿದರು.

ಯುದ್ಧದ ಭೂದೃಶ್ಯದಲ್ಲಿ ಅಗಾಧ ಬದಲಾವಣೆಯಾಗಿದೆ, ಅದು ಶಸ್ತ್ರಾಸ್ತ್ರಗಳಾಗಿರಬಹುದು ಅಥವಾ ಕಾರ್ಯತಂತ್ರವಾಗಿರಬಹುದು.  ಆದ್ದರಿಂದ, ಸುಳ್ಳು ಆರೋಪಗಳು ಮತ್ತು ಆಪಾದನೆಗಳ ಹೊರತಾಗಿಯೂ ಅಂತಹ ಉದಯೋನ್ಮುಖ ಸವಾಲುಗಳನ್ನು ಎದುರಿಸಲು ನಮ್ಮ ಪಡೆಗಳನ್ನು ಬಲಪಡಿಸುವ ದೊಡ್ಡ ಜವಾಬ್ದಾರಿ ಸರ್ಕಾರದ ಮೇಲಿದೆ. ವಿವಿಧ ಭ್ರಷ್ಟಾಚಾರ ಹಗರಣಗಳು ಸಶಸ್ತ್ರ ಪಡೆಗಳ ಸಾಮರ್ಥ್ಯಗಳನ್ನು ಬಲಪಡಿಸುವುದನ್ನು ಸ್ಥಗಿತಗೊಳಿಸಿದೆ ಎಂದರು.

ಈ ಹಿಂದೆ ತಮ್ಮ ಸರ್ಕಾರವು ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ “ಒಂದು ಶ್ರೇಣಿ, ಒಂದು ಪಿಂಚಣಿ” ಯೋಜನೆ ಜಾರಿಗೆ ತಂದಿದೆ. ಕೋವಿಡ್ ಸಾಂಕ್ರಾಮಿಕದ ತೊಂದರೆಗಳ ಹೊರತಾಗಿಯೂ, ಒಆರ್ ಒಪಿ ಯೋಜನೆ ಅನುಷ್ಠಾನಕ್ಕೆ ತಮ್ಮ ಸರ್ಕಾರ 1.2 ಲಕ್ಷ ಕೋಟಿ ರೂಪಾಯಿ ಒದಗಿಸಿದೆ ಎಂದು ಅವರು ಹೇಳಿದರು.

ಇತ್ತೀಚಿನ ಪ್ರಶ್ನೆಪತ್ರಿಕೆ ಸೋರಿಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ, ತಮ್ಮ ಸರ್ಕಾರವು ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಅತ್ಯಂತ ಗಂಭೀರವಾಗಿದೆ. ರಾಷ್ಟ್ರದ ಕಡೆಗೆ ತನ್ನ ಜವಾಬ್ದಾರಿಗಳನ್ನು ಪೂರೈಸಲು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ ಎಂದು ದೇಶದ ಯುವಕರಿಗೆ ಭರವಸೆ ನೀಡಿದರು. ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಘಟನೆಗೆ ಸಂಬಂಧಿಸಿದಂತೆ ದೇಶಾದ್ಯಂತ ಹಲವಾರು ಬಂಧನಗಳನ್ನು ಮಾಡಲಾಗಿದೆ. “ಕೇಂದ್ರ ಸರ್ಕಾರವು ಈಗಾಗಲೇ ಕಠಿಣ ಕಾನೂನು ಪರಿಚಯಿಸಿದೆ. ಸಂಪೂರ್ಣ ಪರಿಶೀಲನೆ(ಸ್ಕ್ರೀನಿಂಗ್) ವ್ಯವಸ್ಥೆ ಬಲಪಡಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದರು.

"ಕಳೆದ 10 ವರ್ಷಗಳಲ್ಲಿ ಅಭಿವೃದ್ಧಿಯು ಸರ್ಕಾರದ ಅತಿದೊಡ್ಡ ನಿರ್ಣಯವಾಗಿದೆ". ಭಾರತವನ್ನು ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುವ ನಿರ್ಣಯ ಕೈಗೊಳ್ಳಲಾಗಿದೆ. ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಸರಬರಾಜು, ಪ್ರತಿ ಬಡವರಿಗೆ ಪಕ್ಕಾ ಮನೆಗಳನ್ನು ಒದಗಿಸುವುದು, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಮೂಲಕ ಸಶಸ್ತ್ರ ಪಡೆಗಳನ್ನು ಬಲಪಡಿಸುವುದು, ದೇಶದಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳನ್ನು ಹೆಚ್ಚಿಸುವುದು, ಭಾರತವನ್ನು ಹಸಿರು ಜಲಜನಕ ಕೇಂದ್ರವನ್ನಾಗಿ ಮಾಡುವುದು, ಮೂಲಸೌಕರ್ಯ ಅಭಿವೃದ್ಧಿ ಆಧುನೀಕರಿಸುವುದು, ಅಭಿವೃದ್ಧಿ ಹೊಂದಿದ ಭಾರತದಲ್ಲಿ ಹೊಸ ಉದ್ಯೋಗ ಮತ್ತು ಸ್ವಯಂ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು, ಕೌಶಲ್ಯ ಅಭಿವೃದ್ಧಿ ಸಶಕ್ತಗೊಳಿಸುವುದು ಮತ್ತು ಯುವಕರ ಭವಿಷ್ಯ ರೂಪಿಸುವುದು ನಮ್ಮ ಗುರಿಯಾಗಿದೆ.

ಇತ್ತೀಚಿನ ಅಧ್ಯಯನ ಉಲ್ಲೇಖಿಸಿದ ಪ್ರಧಾನಿ, ಕಳೆದ 18 ವರ್ಷಗಳಲ್ಲಿ ಖಾಸಗಿ ಉದ್ಯಮ ರಂಗದಲ್ಲಿ ಉದ್ಯೋಗ ಸೃಷ್ಟಿಯು ದಾಖಲೆಯ ಸಂಖ್ಯೆ ಕಂಡಿದೆ ಎಂದು ತಿಳಿಸಿದರು.

ಡಿಜಿಟಲ್ ಇಂಡಿಯಾ ಆಂದೋಲನ ಶ್ಲಾಘಿಸಿದ ಪ್ರಧಾನ ಮಂತ್ರಿ, ಭಾರತವು ವಿಶ್ವದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯ ಉಜ್ವಲ ಉದಾಹರಣೆಯಾಗಿದೆ. ಜಿ-20 ಶೃಂಗಸಭೆ ಉಲ್ಲೇಖಿಸಿದ ಅವರು, ನಮ್ಮ ಡಿಜಿಟಲ್ ಆಂದೋಲನದಿಂದ ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಕೂಡ ಆಶ್ಚರ್ಯಚಕಿತವಾಗಿವೆ ಎಂದರು.

ಭಾರತದ ಪ್ರಗತಿಯೊಂದಿಗೆ ಪೈಪೋಟಿ ಮತ್ತು ಸವಾಲುಗಳ ಬೆಳವಣಿಗೆಯನ್ನು ಗಮನಿಸಿದ ಪ್ರಧಾನಿ, ಭಾರತದ ಪ್ರಜಾಪ್ರಭುತ್ವ, ಜನಸಂಖ್ಯಾಶಾಸ್ತ್ರ ಮತ್ತು ವೈವಿಧ್ಯತೆಗೆ ಹಾನಿ ಉಂಟುಮಾಡುವವರ, ರಾಷ್ಟ್ರದ ಪ್ರಗತಿಯನ್ನು ಸವಾಲಾಗಿ ನೋಡುವವರ ವಿರುದ್ಧ ಎಚ್ಚರಿಕೆ ನೀಡಿದರು. ಭಾರತದ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, “ಪ್ರತಿಯೊಂದು ಪ್ರಯತ್ನದಲ್ಲೂ ಅನುಮಾನ ಹುಟ್ಟುಹಾಕುವ ಮತ್ತು ಅದರ ಅಡಿಪಾಯ ದುರ್ಬಲಗೊಳಿಸುವ ಮೂಲಕ ಭಾರತದ ಪ್ರಗತಿಯನ್ನು ದುರ್ಬಲಗೊಳಿಸಲು ಬಲವಾದ ಪ್ರಯತ್ನವನ್ನು ಮಾಡಲಾಗುತ್ತಿದೆ.  ಅಂತಹ ಪ್ರಯತ್ನಗಳನ್ನು ಮೂಲದಿಂದ ತೆಗೆದುಹಾಕಬೇಕು. ” ಭಾರತದ ಸರ್ವೋಚ್ಚ ನ್ಯಾಯಾಲಯದ ಅವಲೋಕನಗಳ ಬಗ್ಗೆ ಇಡೀ ಸದನವು ಗಂಭೀರವಾದ ಚರ್ಚೆ ನಡೆಸುವ ಅಗತ್ಯವಿದೆ. ನಾಗರಿಕರು ಅಂತಹ ಶಕ್ತಿಗಳ ಬಗ್ಗೆ ಜಾಗರೂಕರಾಗಿರಬೇಕು.  ದೇಶವಿರೋಧಿ ಪಿತೂರಿಗಳನ್ನು ಭಾರತ ಎಂದಿಗೂ ಸಹಿಸುವುದಿಲ್ಲ ಎಂದು ಪ್ರಧಾನಿ ಮೋದಿ ಎಚ್ಚರಿಸಿದರು.

ಜಗತ್ತು ಭಾರತದ ಪ್ರಗತಿಯನ್ನು ಅತ್ಯಂತ ಗಂಭೀರತೆಯಿಂದ ಪರಿಗಣಿಸುತ್ತಿದೆ ಮತ್ತು ಎಲ್ಲಾ ಸೂಕ್ಷ್ಮತೆಗಳನ್ನು ಗಮನಿಸುತ್ತಿದೆ. ನಿರ್ಣಯಗಳನ್ನು ಸಾಧಿಸಲು ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಸದನದ ಪ್ರತಿಯೊಬ್ಬ ಸದಸ್ಯರು ಕೊಡುಗೆ ನೀಡುವ ಅಗತ್ಯವಿದೆ. ಸದಸ್ಯರು ದೇಶದ ಕಲ್ಯಾಣದಲ್ಲಿ ವಿಶ್ವಾಸವಿಟ್ಟು ಮುಂದೆ ಬರಬೇಕು. "ನಾವು ಹೆಗಲಿಗೆ ಹೆಗಲು ಕೊಟ್ಟು ನಡೆಯಬೇಕು ಮತ್ತು ನಾಗರಿಕರ ಕನಸುಗಳು ಮತ್ತು ನಿರೀಕ್ಷೆಗಳನ್ನು ಈಡೇರಿಸಬೇಕು" ಎಂದು ಪ್ರಧಾನಿ ಮೋದಿ ಮನವಿ ಮಾಡಿದರು. ಪ್ರಸ್ತುತ ಯುಗದಲ್ಲಿ ಸಕಾರಾತ್ಮಕ ರಾಜಕಾರಣದ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಿ, "ನಾವು ಉತ್ತಮ ಆಡಳಿತ, ವಿತರಣೆ ಮತ್ತು ಜನರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಆರೋಗ್ಯಕರವಾಗಿ ಸ್ಪರ್ಧಿಸೋಣ" ಎಂದರು.

ಭಾಷಣದ ವೇಳೆ, ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಸಂಭವಿಸಿದ ಕಾಲ್ತುಳಿತ ಅಪಘಾತದಲ್ಲಿ ಸಾವಿಗೀಡಾದವರಿಗೆ ಪ್ರಧಾನಿ ಸಂತಾಪ ಸೂಚಿಸಿದರು. ಅಪಘಾತದಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು. ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲ ನೆರವು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ರಾಜ್ಯ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ರಾಜ್ಯ ಸರ್ಕಾರವು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ಅವರು ಸದನಕ್ಕೆ ತಿಳಿಸಿದರು.

ಪ್ರಧಾನಿ ಮೋದಿ ಅವರು ವಿಶೇಷವಾಗಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿರುವ ಸದಸ್ಯರನ್ನು ಅಭಿನಂದಿಸಿ, ಅವರು ಕಲಿಯಲು ಬಹಳಷ್ಟು ಇದೆ ಎಂದರು. ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ, ಕೃತಜ್ಞತೆ ವ್ಯಕ್ತಪಡಿಸುವ ಮೂಲಕ ಅವರು ತಮ್ಮ ಭಾಷಣ  ಮುಕ್ತಾಯಗೊಳಿಸಿದರು. ವಂದನಾ ನಿರ್ಣಯಕ್ಕೆ ತಮ್ಮೆಲ್ಲಾ ಆಲೋಚನೆಗಳು ಮತ್ತು ಕೊಡುಗೆಗಳನ್ನು ನೀಡಿದ ಎಲ್ಲಾ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದರು.

 

 

 

*****



(Release ID: 2030353) Visitor Counter : 63