ವಾರ್ತಾ ಮತ್ತು ಪ್ರಸಾರ ಸಚಿವಾಲಯ

18 ನೇ ಎಂಐಎಫ್ಎಫ್ ನಲ್ಲಿ ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ಹಣಕಾಸು ಮತ್ತು ಹಣಗಳಿಕೆ ತಂತ್ರಗಳನ್ನು ಕುರಿತು ಪ್ಯಾನಲ್ ಚರ್ಚೆ


ಉದಯೋನ್ಮುಖ ಚಲನಚಿತ್ರ ತಯಾರಕರಿಗಾಗಿ ಕಾರ್ಪಸ್ ನಿಧಿಯನ್ನು ಸ್ಥಾಪಿಸಲು ಜಮ್ಮು ಮತ್ತು ಕಾಶ್ಮೀರ ಯೋಜಿಸಿದೆ : ಜಮ್ಮು ಮತ್ತು ಕಾಶ್ಮೀರದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ(ಪಿ.ಆರ್.) ಇಲಾಖೆಯ ನಿರ್ದೇಶಕ ಜತಿನ್ ಕಿಶೋರ್

ಡಾಕ್ಯುಮೆಂಟರಿ ಅವಕಾಶವನ್ನು (ಸ್ಪೇಸ್) ವಾಸ್ತವಿಕ ಮನರಂಜನೆ ಎಂದು ಮರುಬ್ರಾಂಡ್ ಮಾಡಲಾಗಿದೆ: ನೆಟ್ವರ್ಕ್ 18 ವಿಷಯ ಸಾಮಗ್ರಿ ಮತ್ತು ಸಂವಹನ ಅಧ್ಯಕ್ಷ ಅರುಣ್ ಥಾಪರ್

ಫೀಚರ್ ಮತ್ತು ನಾನ್-ಫೀಚರ್ ಚಲನಚಿತ್ರಗಳ ನಡುವೆ ವ್ಯತ್ಯಾಸವಿಲ್ಲದೆ “ಮುಬಿ” ಉತ್ತಮ ಗುಣಮಟ್ಟದ ವಿಷಯಕ್ಕೆ ಆದ್ಯತೆ ನೀಡುತ್ತದೆ: ಕಾರ್ಯಕ್ರಮ ನಿರ್ದೇಶಕ ಸ್ವೆಟ್ಲಾನಾ ನೌಡಿಯಾಲ್

ಸಾಕ್ಷ್ಯಚಿತ್ರದ ಮಾನ್ಯತೆಗೆ ಅಂತರರಾಷ್ಟ್ರೀಯ ಪ್ರಶಸ್ತಿಗಳು ಪೂರ್ವಾಪೇಕ್ಷಿತವಲ್ಲ: ಡಾಕ್ಯುಬೇ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರೀಶ್ ದ್ವಿಭಾಶ್ಯಾಮ್

Posted On: 16 JUN 2024 2:39PM by PIB Bengaluru

ಸಾಕ್ಷ್ಯಚಿತ್ರ, ಕಿರು ಕಾದಂಬರಿ ಮತ್ತು ಅನಿಮೇಷನ್ ಫಿಲ್ಮ್ಸ್ ಗಾಗಿರುವ 18 ನೇ ಮುಂಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು ಇಂದು "ಬಿಯಾಂಡ್ ದಿ ಲೆನ್ಸ್ (ಮಸೂರದಿಂದಾಚೆಗೆ) : ಡಾಕ್ಯುಮೆಂಟರಿ ಫಿಲ್ಮ್ ತಯಾರಿಕೆಯಲ್ಲಿ ಹಣಕಾಸು  ಮತ್ತು ಹಣಗಳಿಕೆ" ಎಂಬ ವಿಷಯದ ಮೇಲೆ ದೃಢವಾದ ಪ್ಯಾನಲ್ ಚರ್ಚೆಯನ್ನು ಆಯೋಜಿಸಿತ್ತು. ಈ ಆಕರ್ಷಕ ಅಧಿವೇಶನವು ಸಾಕ್ಷ್ಯಚಿತ್ರ ನಿರ್ಮಾಣಗಳಿಂದ ಲಾಭ ಗಳಿಸುವ ಮತ್ತು ಹಣಕಾಸು ಹೂಡಿಕೆಯ ನವೀನ ವಿಧಾನಗಳನ್ನು ವಿವೇಚಿಸಿತು. ತಮ್ಮ ಕಥೆಗಳಿಗೆ ಜೀವ ತುಂಬಲು ಬಯಸುವ ಚಲನಚಿತ್ರ ನಿರ್ಮಾಪಕರಿಗೆ ಅಮೂಲ್ಯವಾದ ಒಳನೋಟಗಳನ್ನು ನೀಡಿತು.

ಜಮ್ಮು ಮತ್ತು ಕಾಶ್ಮೀರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ, ಐ.ಎ.ಎಸ್. ಅಧಿಕಾರಿ ಜತಿನ್ ಕಿಶೋರ್ ಅವರು ಜಮ್ಮು ಮತ್ತು ಕಾಶ್ಮೀರವನ್ನು ಪ್ರಮುಖ ಚಲನಚಿತ್ರ ನಿರ್ಮಾಣ ತಾಣವಾಗಿ ಉತ್ತೇಜಿಸುವ ಗುರಿಯನ್ನು ಹೊಂದಿರುವ ಹೊಸ ಪ್ರಾದೇಶಿಕ ಚಲನಚಿತ್ರ ನೀತಿಯನ್ನು ಪ್ರಮುಖವಾಗಿ ಪ್ರಸ್ತಾಪಿಸುವುದರೊಂದಿಗೆ  ಅಧಿವೇಶನ ಪ್ರಾರಂಭವಾಯಿತು. “ಸಾಕ್ಷ್ಯಚಿತ್ರಗಳು, ಕಿರುಚಿತ್ರಗಳು ಮತ್ತು ಅನಿಮೇಷನ್ ಚಲನಚಿತ್ರಗಳಿಗೆ ವಿಶೇಷ ನಿಬಂಧನೆಗಳೊಂದಿಗೆ ನಾವು ಗರಿಷ್ಠ 1.5 ಕೋಟಿ ರೂ.ಗಳ ಸಬ್ಸಿಡಿಯನ್ನು ನೀಡುತ್ತಿದ್ದೇವೆ” ಎಂದು ಅವರು ಹೇಳಿದರು.  ಇದಲ್ಲದೆ, ಏಕ ಗವಾಕ್ಷಿ ವ್ಯವಸ್ಥೆಯು ಚಲನಚಿತ್ರ ನಿರ್ಮಾಪಕರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಚಿತ್ರೀಕರಣಕ್ಕೆ ಅಗತ್ಯ ಅನುಮತಿಗಳನ್ನು ಪಡೆಯುವ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ ಎಂಬುದರತ್ತಲೂ  ಅವರು ಗಮನ ಸೆಳೆದರು. ಉದಯೋನ್ಮುಖ ಚಲನಚಿತ್ರ ನಿರ್ಮಾಪಕರನ್ನು ಬೆಂಬಲಿಸಲು ಕಾರ್ಪಸ್ ನಿಧಿಯನ್ನು ಸ್ಥಾಪಿಸುವ ಜಮ್ಮು ಮತ್ತು ಕಾಶ್ಮೀರ ಆಡಳಿತದ ಯೋಜನೆಯನ್ನು ಜತಿನ್ ಕಿಶೋರ್ ಘೋಷಿಸಿದರು.

(ಫೋಟೋ: 18 ನೇ ಎಂಐಎಫ್ಎಫ್ ನಲ್ಲಿ 'ಬಿಯಾಂಡ್ ದಿ ಲೆನ್ಸ್: ಡಾಕ್ಯುಮೆಂಟರಿ ಚಲನಚಿತ್ರ ನಿರ್ಮಾಣದಲ್ಲಿ  ಹಣಕಾಸು  ಮತ್ತು ಹಣಗಳಿಕೆ' ಕುರಿತು ಪ್ಯಾನಲ್ ಚರ್ಚೆ ಪ್ರಗತಿಯಲ್ಲಿರುವ ದೃಶ್ಯ)

ಎಂಯುಬಿಐನ (ಮುಬಿ) ಏಷ್ಯಾ-ಪೆಸಿಫಿಕ್ ವಲಯದ  ಕಾರ್ಯಕ್ರಮ ನಿರ್ದೇಶಕಿ ಸ್ವೆಟ್ಲಾನಾ ನೌಡಿಯಾಲ್, ಸಾಕ್ಷ್ಯಚಿತ್ರಗಳ ವಿಕಸನದ ಭೂದೃಶ್ಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಸಾಕ್ಷ್ಯಚಿತ್ರಗಳು ಬಹಳ ದೂರ ಸಾಗಿ ಬಂದಿವೆ ಎಂದು ಅವರು ಅಭಿಪ್ರಾಯಪಟ್ಟರಲ್ಲದೆ ಈ ದಾರಿಯಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಬೇಕಾಗಿದೆ ಎಂಬುದನ್ನೂ  ಒಪ್ಪಿಕೊಂಡರು. ಎಂಯುಬಿಐನಲ್ಲಿ, ಫೀಚರ್  ಮತ್ತು ನಾನ್ ಫೀಚರ್ ಚಲನಚಿತ್ರಗಳ ನಡುವೆ ವ್ಯತ್ಯಾಸವಿಲ್ಲದೆ ಉತ್ತಮ ಗುಣಮಟ್ಟದ ವಿಷಯ ಸಾಮಗ್ರಿ-ವೈವಿಧ್ಯಕ್ಕೆ  ಆದ್ಯತೆ ನೀಡಲಾಗುತ್ತದೆ  ಎಂದು ನೌಡಿಯಾಲ್ ವಿವರಿಸಿದರು.

ನೆಟ್ವರ್ಕ್ 18 ನ ಹಿರಿಯ ಮಾಧ್ಯಮ ಕಾರ್ಯನಿರ್ವಾಹಕ ಹಾಗು ವಿಷಯ ಸಾಮಗ್ರಿ  ಮತ್ತು ಸಂವಹನದ ಅಧ್ಯಕ್ಷ ಅರುಣ್ ಥಾಪರ್, ಕಲಾವಿದರು ಮತ್ತು ಪತ್ರಕರ್ತರಾಗಿ ಸಾಕ್ಷ್ಯಚಿತ್ರಗಳ ದ್ವಿಪಾತ್ರವನ್ನು ಎತ್ತಿ ತೋರಿಸಿದರು. ಸಾಕ್ಷ್ಯಚಿತ್ರ ಅವಕಾಶವು ಮರು ಬ್ರಾಂಡ್ ಗೆ ಒಳಗಾಗಿದೆ, ಇದು ವಾಸ್ತವಿಕ ಮನರಂಜನೆಗೆ ಹಾದಿ ತೋರಿಸಿದೆ ಎಂದು ಅವರು ಹೇಳಿದರು. ಸಾಕ್ಷ್ಯಚಿತ್ರಗಳು ಸಮಾಜದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ, ಆದರೆ ಅವುಗಳ  ಪ್ರಯಾಣವು ಸುಲಭ ಸಾಧ್ಯವಾದುದಲ್ಲ  ಎಂದು ಥಾಪರ್ ಅಭಿಪ್ರಾಯಪಟ್ಟರು. ಸಾಕ್ಷ್ಯಚಿತ್ರಗಳು ಆರ್ಥಿಕ ಯಶಸ್ಸನ್ನು ಸಾಧಿಸಲು, ಅವುಗಳನ್ನು ಮಾರುಕಟ್ಟೆಯ ಬೇಡಿಕೆಗಳಿಗೆ ಅನುಗುಣವಾಗಿ    ಹೊಂದಿಸಬೇಕು ಎಂದು ಅವರು ಸಲಹೆ ನೀಡಿದರು. ಚಲನಚಿತ್ರಗಳನ್ನು ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ ಗಳಿಗೆ ಪಿಚ್ ಮಾಡುವ ಮೊದಲು ಅವುಗಳನ್ನು ಉತ್ತೇಜಿಸಲು ಫೆಸ್ಟಿವಲ್ ಸರ್ಕ್ಯೂಟ್ ಒಂದು ಮೌಲ್ಯಯುತ ವೇದಿಕೆಯನ್ನು ಒದಗಿಸುತ್ತದೆ. ಕ್ರೌಡ್ ಸೋರ್ಸಿಂಗ್ ಕೂಡ ಕಾರ್ಯಸಾಧ್ಯವಾದ ಹಣಕಾಸು ಆಯ್ಕೆಯಾಗಿದೆ" ಎಂದು ಥಾಪರ್ ಹೇಳಿದರು. ಅವರು ಸಾರ್ವಜನಿಕ ಪ್ರಸಾರ ಸೇವೆಗಳು ಮತ್ತು ಸರ್ಕಾರದ ಬೆಂಬಲದ ಮಹತ್ವವನ್ನು ಮತ್ತಷ್ಟು ಒತ್ತಿಹೇಳಿದರು, ಹಾಗು  ಯುಎಸ್ ಮಾರುಕಟ್ಟೆಯೊಂದಿಗೆ ಇದನ್ನು ತುಲನಾತ್ಮಕವಾಗಿ ಹೋಲಿಸಿ ವಿಶ್ಲೇಷಿಸಿದರು.

ಡೊಕುಬೇ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಗಿರೀಶ್ ದ್ವಿಭಾಶ್ಯಾಮ್ ಅವರು ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ ಗಳನ್ನು ತಲುಪುವ ಬಗ್ಗೆ ಒಳನೋಟಗಳನ್ನು ಹಂಚಿಕೊಂಡರು. ಸಾಕ್ಷ್ಯಚಿತ್ರ ನಿರ್ಮಾಪಕರು ತಮ್ಮ ವಿಷಯಸಾಮಗ್ರಿಗಳು ವಿಶಾಲ ವ್ಯಾಪ್ತಿಯಲ್ಲಿ ಪ್ರೇಕ್ಷಕರನ್ನು ಆಕರ್ಷಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು. ಪ್ಯಾನ್-ಇಂಡಿಯನ್ ಅಥವಾ ಜಾಗತಿಕ ಆಕರ್ಷಣೆಯೊಂದಿಗೆ ಚೆನ್ನಾಗಿ ಹೊಂದಿಕೊಳ್ಳುವ ಸಾಕಷ್ಟು ಸಂಶೋಧನೆಗೆ ಒಳಪಟ್ಟ  ವಿಷಯ ಸಾಮಗ್ರಿ  ಅತ್ಯಗತ್ಯ ಎಂದು ದ್ವಿಭಾಶ್ಯಾಮ್ ಪ್ರತಿಪಾದಿಸಿದರು. ಡೊಕುಬೇಯಲ್ಲಿ ಅನುಭವಿಗಳು  ಮತ್ತು ಯುವ ಚಲನಚಿತ್ರ ನಿರ್ಮಾಪಕರ ವಿಷಯ ಸಾಮಗ್ರಿಗಳೊಂದಿಗೆ ಪೋರ್ಟ್ಫೋಲಿಯೊವನ್ನು ಸಮತೋಲನಗೊಳಿಸಲಾಗುತ್ತದೆ ಎಂದು ಅವರು ವಿವರಿಸಿದರು. "ಅಂತರರಾಷ್ಟ್ರೀಯ ಪ್ರಶಸ್ತಿಗಳು ಪ್ರಚಾರವನ್ನು ಹೆಚ್ಚಿಸಬಹುದಾದರೂ, ಅವು ಮಾನ್ಯತೆಗೆ ಪೂರ್ವಾಪೇಕ್ಷಿತವಲ್ಲ. ಬಲಿಷ್ಟವಾದ ಸಂಶೋಧನೆಯೊಂದಿಗೆ ಉತ್ತಮ ಕಥೆಯು ತನ್ನದೇ ಆದ ರೀತಿಯಲ್ಲಿ ಎದ್ದು ನಿಂತು ಗಮನ ಸೆಳೆಯುತ್ತದೆ ಮತ್ತು ಯಶಸ್ಸಿನತ್ತ ಸಾಗುತ್ತದೆ" ಎಂದು ಅವರು ಹೇಳಿದರು.

ಫಿಲ್ಮ್ ಮಾಸ್ಕೋ ಸಂಸ್ಥಾಪಕ ಇಲಿಯಾ ಟಾಲ್ಸ್ಟೋವ್ ರಷ್ಯಾದ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಅವಕಾಶಗಳ ಬಗ್ಗೆ ಚರ್ಚಿಸಿದರು. ಪಾಶ್ಚಿಮಾತ್ಯ ವಿಷಯ ಸಾಮಗ್ರಿಯು ಒಂದು ಕಾಲದಲ್ಲಿ ಜಾಗತಿಕವಾಗಿ ಪ್ರಾಬಲ್ಯ ಹೊಂದಿದ್ದರೂ, ಈಗ ಸನ್ನಿವೇಶವು ಬದಲಾಗುತ್ತಿದೆ ಮತ್ತು ರಷ್ಯಾದಲ್ಲಿ ಚಲನಚಿತ್ರ ಉದ್ಯಮವು ವಿಸ್ತರಿಸುತ್ತಿದೆ ಎಂದು ಇಲಿಯಾ ಟಾಲ್ಸ್ಟೋವ್ ಹೇಳಿದರು. "ರಷ್ಯಾದಲ್ಲಿ ಹಲವಾರು ಚಲನಚಿತ್ರೋತ್ಸವಗಳಿವೆ, ಇದು ಚಲನಚಿತ್ರ ನಿರ್ಮಾಪಕರಿಗೆ ರಷ್ಯಾದ ಮಾರುಕಟ್ಟೆಗೆ ಪ್ರವೇಶಿಸಲು ಸೂಕ್ತ ಸಮಯವಾಗಿದೆ "  ಎಂದ ಅವರು ಸಹ-ನಿರ್ಮಾಣ ಚಿಂತನೆಗಳಿಗೆ ಅಲ್ಲಿಯವರು  ಮುಕ್ತ ಮನಸ್ಸು ಹೊಂದಿದ್ದಾರೆ ಮತ್ತು ಚಲನಚಿತ್ರ ನಿರ್ಮಾಪಕರನ್ನು ಬೆಂಬಲಿಸಲು ಉತ್ಸುಕರಾಗಿದ್ದಾರೆ ಎಂದೂ ಹೇಳಿದರು. ಭಾರತೀಯ ಚಲನಚಿತ್ರಗಳು ರಷ್ಯಾದಲ್ಲಿ ಹೆಚ್ಚು ರೇಟಿಂಗ್ ಪಡೆದಿವೆ ಎಂಬುದನ್ನೂ ಅವರು ಪ್ರಸ್ತಾಪಿಸಿದರು.

ಲೈಫಾಗ್ರಾಫರ್  ಮತ್ತು ತಕ್ಷಿಲಾ ಮಲ್ಟಿಮೀಡಿಯಾದ ಸ್ಥಾಪಕಿ ರಜನಿ ಆಚಾರ್ಯ ಅವರು ಗೋಷ್ಠಿಯನ್ನು ನಿರ್ವಹಿಸಿದರು. ಸಾಕ್ಷ್ಯಚಿತ್ರ ನಿರ್ಮಾಣದಲ್ಲಿರುವ  ಅಂತರ್ಗತ ಅಪಾಯಗಳನ್ನು ಒತ್ತಿಹೇಳಿದ ಅವರು "ಸಾಕ್ಷ್ಯಚಿತ್ರಗಳ  ಯಶಸ್ಸಿನ ಅನುಪಾತವು ಸುಮಾರು 10% ಆಗಿದೆ, ಮತ್ತು ಚಲನಚಿತ್ರ ನಿರ್ಮಾಪಕರು 90% ಅಪಾಯಕ್ಕೆ ಸಿದ್ಧರಾಗಿರಬೇಕು. ಯಾವುದೇ ಸಾಕ್ಷ್ಯಚಿತ್ರ ನಿರ್ಮಾಪಕರು ಎದುರಿಸುತ್ತಿರುವ ದೊಡ್ಡ ಸವಾಲು ಹಣಕಾಸು " ಎಂದೂ ಹೇಳಿದರು.

*****



(Release ID: 2025798) Visitor Counter : 11