ಪ್ರಧಾನ ಮಂತ್ರಿಯವರ ಕಛೇರಿ

ಬಿಹಾರದ ಬಿಗುಸರಾಯ್‌ನಲ್ಲಿ ಬಹು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನ ಮಂತ್ರಿ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಸಮರ್ಪಣೆ


ಸುಮಾರು 1.48 ಲಕ್ಷ ಕೋಟಿ ರೂ. ಮೌಲ್ಯದ ಬಹು ತೈಲ ಮತ್ತು ಅನಿಲ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಸಮರ್ಪಣೆ

ಬಿಹಾರದಲ್ಲಿ 13,400 ಕೋಟಿ ರೂಪಾಯಿಗಿಂತ ಹೆಚ್ಚಿನ ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ಮತ್ತು ರಾಷ್ಟ್ರಕ್ಕೆ ಸಮರ್ಪಣೆ

ಬರೌನಿಯಲ್ಲಿ ಹಿಂದೂಸ್ತಾನ್ ಉರ್ವರಕ್ ಮತ್ತು ರಸಾಯನ್ ಲಿಮಿಟೆಡ್ (HURL) ರಸಗೊಬ್ಬರ ಘಟಕ ಉದ್ಘಾಟನೆ

ಸುಮಾರು 3,917 ಕೋಟಿ ರೂ. ಮೊತ್ತದ ಹಲವಾರು ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ

 ‘ಭಾರತ್ ಪಶುಧಾನ್’ - ದೇಶದ ಜಾನುವಾರುಗಳಿಗೆ ಡಿಜಿಟಲ್ ಡೇಟಾಬೇಸ್ ದೇಶಕ್ಕೆ ಸಮರ್ಪಣೆ

‘1962 ರೈತರ ಆ್ಯಪ್’ ಬಿಡುಗಡೆ

"ಡಬಲ್ ಇಂಜಿನ್ ಸರ್ಕಾರದ ಶಕ್ತಿಯಿಂದಾಗಿ ಬಿಹಾರವು ಉತ್ಸಾಹ ಮತ್ತು ಆತ್ಮವಿಶ್ವಾಸದಿಂದ ತುಂಬಿದೆ"

"ಬಿಹಾರ ವಿಕಸಿತವಾದರೆ ಭಾರತವೂ ವಿಕಸನವಾಗುತ್ತದೆ"

"ಬಿಹಾರ ಮತ್ತು ಪೂರ್ವ ಭಾರತವು ಸಮೃದ್ಧವಾಗಿದ್ದಾಗ ಭಾರತವು ಸಶಕ್ತವಾಗಿ ಉಳಿಯಿತು ಎಂಬುದಕ್ಕೆ ಇತಿಹಾಸವೇ ಪುರಾವೆಯಾಗಿದೆ"

"ನಿಜವಾದ ಸಾಮಾಜಿಕ ನ್ಯಾಯವನ್ನು 'ಸಂತುಷ್ಟೀಕರಣ'ದಿಂದ ಸಾಧಿಸಲಾಗುತ್ತದೆ, 'ತುಷ್ಟೀಕರಣ' ಅಲ್ಲ. ನಿಜವಾದ ಸಾಮಾಜಿಕ ನ್ಯಾಯವು ಶುದ್ಧತ್ವದಿಂದ ಸಾಧಿಸಲ್ಪಡುತ್ತದೆ"

"ಡಬಲ್ ಇಂಜಿನ್ ಸರ್ಕಾರದ 2 ಪ್ರಯತ್ನಗಳಿಂದ ಬಿಹಾರ ವಿಕಸಿತವಾಗಲಿದೆ"

Posted On: 02 MAR 2024 6:27PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಿಹಾರದ ಬಿಗುಸರಾಯ್‌ನಲ್ಲಿಂದು ಸುಮಾರು 1.48 ಲಕ್ಷ ಕೋಟಿ ರೂಪಾಯಿ ಮೌಲ್ಯದ ಬಹು ತೈಲ ಮತ್ತು ಅನಿಲ ಕ್ಷೇತ್ರದ ಯೋಜನೆಗಳು ಮತ್ತು ಬಿಹಾರದಲ್ಲಿ 13,400 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು.

ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ವಿಕ್ಷಿತ್ ಭಾರತ್ ರಚನೆಯ ಮೂಲಕ ಬಿಹಾರವನ್ನು ಅಭಿವೃದ್ಧಿಪಡಿಸುವ ಸಂಕಲ್ಪದೊಂದಿಗೆ ಇಂದು ಬಿಹಾರದ ಬಿಗುಸರಾಯ್‌ಗೆ ಆಗಮಿಸಿದ್ದೇನೆ. ಇಲ್ಲಿ ಬಹುದೊಡ್ಡ ಗುಂಪೇ ನೆರೆದಿದೆ. ಇಲ್ಲಿನ ಜನರ ಪ್ರೀತಿ ಮತ್ತು ಆಶೀರ್ವಾದ ಸಿಕ್ಕಿರುವುದು ನನ್ನ ಅದೃಷ್ಟ, ಇದಕ್ಕಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು ಎಂದರು.

ಬಿಗುಸರಾಯ್ ಪ್ರತಿಭಾವಂತ ಯುವಕರ ನಾಡು. ಈ ನಾಡು ಸದಾ ಕಾಲವೂ ರಾಷ್ಟ್ರದ ರೈತರು ಮತ್ತು ಕಾರ್ಮಿಕರನ್ನು ಬಲಪಡಿಸಿದೆ. ಇಂದು ಸುಮಾರು 1.50 ಲಕ್ಷ ಕೋಟಿ ರೂ. ಮೊತ್ತದ ಯೋಜನೆಗಳ ಉದ್ಘಾಟನೆ ಅಥವಾ ಶಂಕುಸ್ಥಾಪನೆ ನಡೆಯುತ್ತಿರುವುದರಿಂದ ಬಿಗುಸರಾಯ್‌ನ ಗತ ಕಾಲದ ವೈಭವ ಮರಳುತ್ತಿದೆ. "ಈ ಹಿಂದೆ ಇಂತಹ ಕಾರ್ಯಕ್ರಮಗಳನ್ನು ದೆಹಲಿಯ ವಿಜ್ಞಾನ ಭವನದಲ್ಲಿ ನಡೆಸಲಾಗುತ್ತಿತ್ತು. ಆದರೆ ಈಗ ಮೋದಿ ದೆಹಲಿಯನ್ನೇ ಬಿಗುಸರಾಯ್‌ಗೆ ತಂದಿದ್ದಾರೆ". 30,000 ಕೋಟಿ ರೂ. ಮೌಲ್ಯದ ಯೋಜನೆಗಳು ಬಿಹಾರಕ್ಕೆ ಮಾತ್ರ ಸಂಬಂಧಿಸಿವೆ. ಈ ಪ್ರಮಾಣವು ಭಾರತದ ನೈಜ ಸಾಮರ್ಥ್ಯಗಳನ್ನು ತೋರಿಸುತ್ತದೆ. ಬಿಹಾರದ ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಇಂದಿನ ಅಭಿವೃದ್ಧಿ ಯೋಜನೆಗಳು ಭಾರತವನ್ನು ವಿಶ್ವದ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯನ್ನಾಗಿ ಮಾಡಲು ಮಾಧ್ಯಮವಾಗಿ ಪರಿಣಮಿಸಿದೆ. ಇದು ಬಿಹಾರದಲ್ಲಿ ಸೇವೆ ಮತ್ತು ಸಮೃದ್ಧಿಗೆ ದಾರಿ ಮಾಡಿಕೊಡುತ್ತದೆ. ಇಂದು ಬಿಹಾರಕ್ಕೆ ಹೊಸ ರೈಲು ಸೇವೆಗಳ ಉದ್ಘಾಟನೆ ನೆರವೇರಿಸಲಾಗಿದೆ ಎಂದು ಪ್ರಧಾನಿ ಪ್ರಸ್ತಾಪಿಸಿದರು.

2014ರಲ್ಲಿ ಅಧಿಕಾರಕ್ಕೆ ಬಂದ ನಂತರ ವೇಗದ ಅಭಿವೃದ್ಧಿಗೆ ಸರ್ಕಾರದ ಆದ್ಯತೆ ನೀಡುತ್ತಾ ಬಂದಿದೆ. "ಬಿಹಾರ ಮತ್ತು ಪೂರ್ವ ಭಾರತವು ಸಮೃದ್ಧವಾಗಿರುವಾಗ ಭಾರತವು ಸಶಕ್ತವಾಗಿ ಉಳಿದಿದೆ ಎಂಬುದಕ್ಕೆ ಇತಿಹಾಸವೇ ಪುರಾವೆಯಾಗಿದೆ", ಬಿಹಾರದ ಹಿಂದಿನ ನಕಾರಾತ್ಮಕ ಪರಿಣಾಮಗಳು ಮತ್ತು ರಾಷ್ಟ್ರದ ಮೇಲೆ ಆದ ಹದಗೆಟ್ಟ ಪರಿಸ್ಥಿತಿಗಳನ್ನು ಪ್ರಸ್ತಾಪಿಸಿದ ಅವರು, ಬಿಹಾರದ ಅಭಿವೃದ್ಧಿ ಮೂಲಕ ವಿಕ್ಷಿತ ಭಾರತ ಮಾಡುವುದಾಗಿ ಅವರು ರಾಜ್ಯದ ಜನರಿಗೆ ಭರವಸೆ ನೀಡಿದರು. "ಇದು ಭರವಸೆಯಲ್ಲ, ಇದು ಒಂದು ಧ್ಯೇಯ, ನಿರ್ಣಯ", ಮುಖ್ಯವಾಗಿ ಪೆಟ್ರೋಲಿಯಂ, ರಸಗೊಬ್ಬರಗಳು ಮತ್ತು ರೈಲ್ವೆಗೆ ಸಂಬಂಧಿಸಿದ ಇಂದಿನ ಯೋಜನೆಗಳು ಈ ದಿಕ್ಕಿನಲ್ಲಿ ಬಹುದೊಡ್ಡ ಹೆಜ್ಜೆಯಾಗಿದೆ. “ಇಂಧನ, ರಸಗೊಬ್ಬರಗಳ ಉತ್ಪಾದನೆ ಮತ್ತು ಸಂಪರ್ಕವು ಅಭಿವೃದ್ಧಿಯ ಆಧಾರಸ್ತಂಭವಾಗಿದೆ. ಅದು ಕೃಷಿಯಾಗಿರಲಿ ಅಥವಾ ಕೈಗಾರಿಕೆಯಾಗಿರಲಿ, ಎಲ್ಲವೂ ಅವುಗಳ ಮೇಲೆ ಅವಲಂಬಿತವಾಗಿದೆ. ಉದ್ಯೋಗ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಸರ್ಕಾರದ ಆದ್ಯತೆಯ ಕ್ಷೇತ್ರಗಳನ್ನು ಕೈಗ1ತ್ತಿಕೊಂಡಿದೆ ಎಂದರು.

ಬರೌನಿ ರಸಗೊಬ್ಬರ ಸ್ಥಾವರವನ್ನು ಪ್ರಾರಂಭವನ್ನು ನೆನಪಿಸಿದ ಪ್ರಧಾನಿ, ಅದು ಇಂದು ಈಡೇರಿದೆ. ಬಿಹಾರ ಸೇರಿದಂತೆ ದೇಶದ ರೈತರಿಗೆ ಇದೊಂದು ದೊಡ್ಡ ಸಾಧನೆಯಾಗಿದೆ. ಗೋರಖ್‌ಪುರ, ರಾಮಗುಂಡಂ ಮತ್ತು ಸಿಂದ್ರಿಯ ಸ್ಥಾವರಗಳು ಸ್ಥಗಿತಗೊಂಡಿದ್ದವು, ಆದರೆ ಈಗ ಅವು ಯೂರಿಯಾದಲ್ಲಿ ಭಾರತದ ಸ್ವಾವಲಂಬನೆಯ ಆಧಾರವಾಗುತ್ತಿವೆ. ಅದಕ್ಕಾಗಿಯೇ ರಾಷ್ಟ್ರವೇ ಹೇಳುತ್ತದೆ, ಮೋದಿ ಅವರ ಗ್ಯಾರಂಟಿಗಳು ಎಂದರೆ ಗ್ಯಾರಂಟಿ ಈಡೇರಿಕೆಯ ಭರವಸೆ ಎಂದರು.

ಸಾವಿರಾರು ಶ್ರಮಿಕರಿಗೆ ತಿಂಗಳುಗಟ್ಟಲೆ ಉದ್ಯೋಗ ಸೃಷ್ಟಿಸಿದ ಬರೌನಿ ಸಂಸ್ಕರಣಾಗಾರದ ಕಾರ್ಯವ್ಯಾಪ್ತಿಯ ವಿಸ್ತರಣೆ ಮಾಡಲಾಗಿದೆ. ಬರೌನಿ ಸಂಸ್ಕರಣಾಗಾರವು ಬಿಹಾರದ ಕೈಗಾರಿಕಾ ಅಭಿವೃದ್ಧಿಗೆ ಹೊಸ ಶಕ್ತಿ ನೀಡುತ್ತದೆ, ಇದು ಭಾರತವನ್ನು ಆತ್ಮನಿರ್ಭರ್ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.  ಬಿಹಾರದಲ್ಲಿ 65,000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಕ್ಕೆ ಸಂಬಂಧಿಸಿದ ಹೆಚ್ಚಿನ ಅಭಿವೃದ್ಧಿ ಯೋಜನೆಗಳು ಪೂರ್ಣಗೊಂಡಿರುವುದಕ್ಕೆ ಪ್ರಧಾನ ಮಂತ್ರಿ ಹರ್ಷ ವ್ಯಕ್ತಪಡಿಸಿದರು. ಗ್ಯಾಸ್ ಪೈಪ್‌ಲೈನ್ ಜಾಲಗಳ ವಿಸ್ತರಣೆಯೊಂದಿಗೆ ಬಿಹಾರದಲ್ಲಿ ಮಹಿಳೆಯರಿಗೆ ಕಡಿಮೆ ದರದ ಅನಿಲ ಪೂರೈಸುವ ಅನುಕೂಲ ಕಲ್ಪಿಸಲಾಗಿದೆ. ಇದರಿಂದ ಈ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಸುಲಭವಾಗಿದೆ ಎಂದರು.

ಕೆಜಿ ಬೇಸಿನ್‌ನಿಂದ ರಾಷ್ಟ್ರಕ್ಕೆ ಮೊದಲ ತೈಲ ಉತ್ಪಾದಿಸುವ ಒಎನ್ ಜಿಸಿ ಕೃಷ್ಣ ಗೋದಾವರಿ ಆಳವಾದ ನೀರಿನ ಯೋಜನೆಯ ಮೊದಲ ಕಚ್ಚಾ ತೈಲ ಟ್ಯಾಂಕರ್ ಗೆ ಇಂದು ಹಸಿರುನಿಶಾನೆ ತೋರಲಾಗಿದೆ. ಈ ಪ್ರಮುಖ ವಲಯದಲ್ಲಿ ಸ್ವಾವಲಂಬನೆ ಸುಧಾರಿಸಲು ಇದು ಸಹಾಯ ಮಾಡುತ್ತದೆ. ಹೀಗಾಗಿಯೇ ಸರ್ಕಾರ ರಾಷ್ಟ್ರೀಯ ಹಿತಾಸಕ್ತಿ ಕಾಪಾಡಲು ಮುಡಿಪಾಗಿದೆ. ಆದರೆ ಪ್ರತಿಪಕ್ಷಗಳು ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ. ಹಿಂದಿನ ವರ್ಷಗಳಿಗಿಂತ ಭಿನ್ನವಾಗಿ, ಈಗ ಭಾರತದ ರೈಲ್ವೆ ಆಧುನೀಕರಣದ ಬಗ್ಗೆ ಜಾಗತಿಕವಾಗಿ ಚರ್ಚಿಸಲಾಗುತ್ತಿದೆ. ವಿದ್ಯುದೀಕರಣ ಮತ್ತು ನಿಲ್ದಾಣಗಳ ಉನ್ನತೀಕರಣ ಮಾಡಲಾಗುತ್ತಿದೆ. ವಂಶ ಪಾರಂಪರ್ಯ ರಾಜಕೀಯ ಮತ್ತು ಸಾಮಾಜಿಕ ನ್ಯಾಯದ ನಡುವಿನ ಇರುವ ಕಂದಕವನ್ನು ಪ್ರಸ್ತಾಪಿಸಿದ ಪ್ರಧಾನಿ, ವಂಶ ಪಾರಂಪರ್ಯ ರಾಜಕಾರಣವು ಪ್ರತಿಭೆ ಮತ್ತು ಯುವಕರ ಕಲ್ಯಾಣಕ್ಕೆ ವಿಶೇಷವಾಗಿ ಹಾನಿಕಾರಕವಾಗಿದೆ ಎಂದರು.

"ನಿಜವಾದ ಸಾಮಾಜಿಕ ನ್ಯಾಯವನ್ನು 'ಸಂತುಷ್ಟಿಕರಣ'ದಿಂದ ಸಾಧಿಸಲಾಗುತ್ತದೆ, ಆದರೆ 'ತುಷ್ಟಿಕರಣ' ಅಥವಾ ಓಲೈಕೆಯಿಂದಲ್ಲ, ಅದು ಶುದ್ಧತ್ವದಿಂದ ಸಾಧಿಸಲ್ಪಡುತ್ತದೆ". ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯವನ್ನು ಅಂತಹ ರೂಪಗಳಲ್ಲಿ ಮಾತ್ರ ಗುರುತಿಸಲಾಗುತ್ತದೆ. ರೈತರಿಗೆ ಉಚಿತ ಪಡಿತರ, ಪಕ್ಕಾ ಮನೆಗಳು, ಗ್ಯಾಸ್ ಸಂಪರ್ಕಗಳು, ನಲ್ಲಿ ನೀರು ಸರಬರಾಜು, ಶೌಚಾಲಯಗಳು, ಉಚಿತ ಆರೋಗ್ಯ ಸೇವೆಗಳು ಮತ್ತು ಕಿಸಾನ್ ಸಮ್ಮಾನ್ ನಿಧಿಯ ಶುದ್ಧತ್ವ ಮತ್ತು ವಿತರಣೆಯಿಂದ ನಿಜವಾದ ಸಾಮಾಜಿಕ ನ್ಯಾಯ ಸಾಧಿಸಬಹುದು. ಕಳೆದ 10 ವರ್ಷಗಳಲ್ಲಿ ಸರ್ಕಾರದ ಯೋಜನೆಗಳ ಹೆಚ್ಚಿನ ಫಲಾನುಭವಿಗಳು ದಲಿತರು, ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ವರ್ಗಗಳಾಗಿವೆ ಎಂದು ಪ್ರಧಾನಿ ಹೇಳಿದರು.

ನಮಗೆ ಸಾಮಾಜಿಕ ನ್ಯಾಯ ಎಂದರೆ ನಾರಿ ಶಕ್ತಿಯ ಸಬಲೀಕರಣವಾಗಿದೆ.  1 ಕೋಟಿ ಮಹಿಳೆಯರನ್ನು ‘ಲಖಪತಿ ದೀದಿ’ಗಳನ್ನಾಗಿ ಮಾಡಿದ ಸಾಧನೆ ಮತ್ತು 3 ಕೋಟಿ ‘ಲಖಪತಿ ದೀದಿ’ಗಳನ್ನು ಸೃಷ್ಟಿಸುವ ಸಂಕಲ್ಪವನ್ನು ಅವರು ಪುನರಾವರ್ತಿಸಿದರು, ಈ ಲಖಪತಿ ದೀದಿಗಳಲ್ಲಿ ಹಲವರು ಬಿಹಾರಕ್ಕೆ ಸೇರಿದವರಾಗಿದ್ದಾರೆ. ವಿದ್ಯುತ್ ಬಿಲ್‌ಗಳನ್ನು ಕಡಿಮೆ ಮಾಡುವ ಮತ್ತು ಹೆಚ್ಚುವರಿ ಆದಾಯ ಒದಗಿಸುವ ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಯನ್ನೂ ಪ್ರಧಾನಿ ಪ್ರಸ್ತಾಪಿಸಿದರು. ಬಿಹಾರದ ಎನ್‌ಡಿಎ ಸರ್ಕಾರವು ಬಡವರು, ಮಹಿಳೆಯರು, ರೈತರು, ಕುಶಲಕರ್ಮಿಗಳು, ಹಿಂದುಳಿದವರು ಮತ್ತು ವಂಚಿತರಿಗಾಗಿ ನಿರಂತರ ಕೆಲಸ ಮಾಡುತ್ತಿದೆ. "ಡಬಲ್ ಇಂಜಿನ್ ಸರ್ಕಾರದ ದ್ವಿಪ್ರಯತ್ನದಿಂದ ಬಿಹಾರ ವಿಕ್ಷಿತವಾಗಲಿದೆ" ಎಂದು ಪ್ರಧಾನಿ ಹೇಳಿದರು.

ಸಾವಿರಾರು ಕೋಟಿ ರೂ. ಮೊತ್ತದ ಅಭಿವೃದ್ಧಿ ಯೋಜನೆಗಳಿಗಾಗಿ ಬಿಹಾರ ಜನರನ್ನು  ಅಭಿನಂದಿಸಿದ ಪ್ರಧಾನಿ, ಇಂದು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸಿ, ತಮ್ಮ ಭಾಷಣ ಮುಕ್ತಾಯಗೊಳಿಸಿದರು.

ಬಿಹಾರದ ರಾಜ್ಯಪಾಲ ಶ್ರೀ ರಾಜೇಂದ್ರ ವಿ ಅರ್ಲೇಕರ್, ಬಿಹಾರದ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್, ಬಿಹಾರದ ಉಪ ಮುಖ್ಯಮಂತ್ರಿಗಳಾದ ಶ್ರೀ ಸಾಮ್ರಾಟ್ ಚೌಧರಿ ಮತ್ತು ಶ್ರೀ ವಿಜಯ್ ಕುಮಾರ್ ಸಿನ್ಹಾ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಶ್ರೀ ಹರ್ದೀಪ್ ಪುರಿ ಮತ್ತು ಸಂಸದ ಶ್ರೀ ಗಿರಿರಾಜ್ ಸಿಂಗ್ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಸುಮಾರು 1.48 ಲಕ್ಷ ಕೋಟಿ ಮೌಲ್ಯದ ಬಹು ತೈಲ ಮತ್ತು ಅನಿಲ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಿ, ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಕೆಜಿ ಬೇಸಿನ್ ಜೊತೆಗೆ ಬಿಹಾರ, ಹರಿಯಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಪಂಜಾಬ್ ಮತ್ತು ಕರ್ನಾಟಕದಂತಹ ವಿವಿಧ ರಾಜ್ಯಗಳಲ್ಲಿ ಈ ಯೋಜನೆಗಳು ದೇಶಾದ್ಯಂತ ಹರಡಿವೆ.

ಕೆ.ಜಿ ಬೇಸಿನ್‌ನಿಂದ ‘ಮೊದಲ ತೈಲ’ ಉತ್ಪಾದನೆ ಘಟಕವನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನ ಮಂತ್ರಿ, ಒಎನ್‌ಜಿಸಿ ಕೃಷ್ಣ ಗೋದಾವರಿ ಡೀಪ್‌ವಾಟರ್ ಯೋಜನೆಯಿಂದ ಮೊದಲ ಕಚ್ಚಾ ತೈಲ ಟ್ಯಾಂಕರ್‌ಗೆ ಚಾಲನೆ ನೀಡಿದರು. ಕೆಜಿ ಬೇಸಿನ್‌ನಿಂದ ‘ಫಸ್ಟ್ ಆಯಿಲ್’ ಹೊರತೆಗೆಯುವಿಕೆಯು ಭಾರತದ ಇಂಧನ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆಯನ್ನು ಗುರುತಿಸುತ್ತದೆ, ಇದು ಇಂಧನ ಆಮದಿನ ಮೇಲಿನ ನಮ್ಮ ಅವಲಂಬನೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ಭರವಸೆ ನೀಡಿದೆ. ಈ ಯೋಜನೆಯು ಭಾರತದ ಇಂಧನ ವಲಯದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಿದೆ.  ಇಂಧನ ಭದ್ರತೆ ಹೆಚ್ಚಿಸಲು ಮತ್ತು ಆರ್ಥಿಕ ಬೆಳವಣಿಗೆ ಉತ್ತೇಜಿಸುವ ಭರವಸೆ ನೀಡುತ್ತದೆ.

ಬಿಹಾರದಲ್ಲಿ ಸುಮಾರು 14,000 ಕೋಟಿ ರೂಪಾಯಿ ಮೌಲ್ಯದ ತೈಲ ಮತ್ತು ಅನಿಲ ವಲಯದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. 11,400 ಕೋಟಿ ರೂ.ಗಿಂತ ಹೆಚ್ಚಿನ ಯೋಜನಾ ವೆಚ್ಚದ ಬರೌನಿ ಸಂಸ್ಕರಣಾಗಾರದ ವಿಸ್ತರಣೆಗೆ ಶಂಕುಸ್ಥಾಪನೆ ಮತ್ತು ಬರೌನಿ ಸಂಸ್ಕರಣಾಗಾರದಲ್ಲಿ ಗ್ರಿಡ್ ಮೂಲಸೌಕರ್ಯದಂತಹ ಯೋಜನೆಗಳ ಉದ್ಘಾಟನೆಯನ್ನು ಇದು ಒಳಗೊಂಡಿದೆ; ಪರದೀಪ್ - ಹಲ್ದಿಯಾ - ದುರ್ಗಾಪುರ ಎಲ್ಪಿಜಿ  ಪೈಪ್‌ಲೈನ್‌ ಅನ್ನು ಪಾಟ್ನಾ ಮತ್ತು ಮುಜಾಫರ್‌ಪುರದವರೆಗೆ ವಿಸ್ತರಣೆ ಯೋಜನೆ ಮತ್ತು ಇತರೆ ಯೋಜನೆಗಳು ಸೇರಿವೆ.

ಹರಿಯಾಣದ ಪಾಣಿಪತ್ ರಿಫೈನರಿ ಮತ್ತು ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್‌ನ ವಿಸ್ತರಣೆ ಸೇರಿದಂತೆ ದೇಶಾದ್ಯಂತ ಕೈಗೊಳ್ಳಲಾಗುತ್ತಿರುವ ಇತರ ಪ್ರಮುಖ ತೈಲ ಮತ್ತು ಅನಿಲ ಯೋಜನೆಗಳು; ಪಾಣಿಪತ್ ರಿಫೈನರಿಯಲ್ಲಿ 3ಜಿ ಎಥೆನಾಲ್ ಸ್ಥಾವರ ಮತ್ತು ವೇಗವರ್ಧಕ ಸ್ಥಾವರ, ಆಂಧ್ರ ಪ್ರದೇಶದಲ್ಲಿ ವಿಶಾಖ್ ರಿಫೈನರಿ ಆಧುನೀಕರಣ ಯೋಜನೆ (VRMP), ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ ನೆಟ್‌ವರ್ಕ್ ಯೋಜನೆಯು ಪಂಜಾಬ್‌ನ ಫಾಜಿಲ್ಕಾ, ಗಂಗಾನಗರ ಮತ್ತು ಹನುಮಾನ್‌ಗಢ್ ಜಿಲ್ಲೆಗಳನ್ನು ಒಳಗೊಂಡಿದೆ,  ಕರ್ನಾಟಕದ ಕಲಬುರಗಿಯಲ್ಲಿ ಹೊಸ ಪಿಒಎಲ್ ಡಿಪೋ, ಮಹಾರಾಷ್ಟ್ರದಲ್ಲಿ ಮುಂಬೈ ಹೈ ನಾರ್ತ್ ಪುನರಾಭಿವೃದ್ಧಿ ಹಂತ -4 ಇತ್ಯಾದಿ.  ಪ್ರಧಾನ ಮಂತ್ರಿ ಅವರು ಆಂಧ್ರ ಪ್ರದೇಶದ ವಿಶಾಖಪಟ್ಟಣಂನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ ಮತ್ತು ಎನರ್ಜಿ (ಐಐಪಿಇ) ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಪ್ರಧಾನ ಮಂತ್ರಿ ಅವರು ಬರೌನಿಯಲ್ಲಿ ಹಿಂದೂಸ್ತಾನ್ ಉರ್ವರಕ್ ಮತ್ತು ರಸಾಯನ್ ಲಿಮಿಟೆಡ್ (HURL) ರಸಗೊಬ್ಬರ ಘಟಕ ಉದ್ಘಾಟಿಸಿದರು. 9,500 ಕೋಟಿ ರೂ.ಗಿಂತ ಹೆಚ್ಚಿನ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಈ ಸ್ಥಾವರವು ರೈತರಿಗೆ ಕೈಗೆಟುಕುವ ದರದಲ್ಲಿ ಯೂರಿಯಾ ಒದಗಿಸುತ್ತದೆ, ಅದು ಉತ್ಪಾದಕತೆ ಮತ್ತು ಆರ್ಥಿಕ ಸ್ಥಿರತೆ ಹೆಚ್ಚಿಸಲು ಕಾರಣವಾಗುತ್ತದೆ. ದೇಶದಲ್ಲಿ ಪುನಶ್ಚೇತನಗೊಳ್ಳಲಿರುವ 4ನೇ ರಸಗೊಬ್ಬರ ಘಟಕ ಇದಾಗಿದೆ.

ಪ್ರಧಾನ ಮಂತ್ರಿ ಅವರು ಸುಮಾರು 3,917 ಕೋಟಿ ರೂ. ಮೊತ್ತದ ಹಲವಾರು ರೈಲ್ವೆ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಇವುಗಳಲ್ಲಿ ರಾಘೋಪುರ್ - ಫೋರ್ಬ್ಸ್‌ಗಂಜ್ ಗೇಜ್ ಪರಿವರ್ತನೆ ಯೋಜನೆ ಸೇರಿವೆ. ಮುಕುರಿಯಾ-ಕತಿಹಾರ್-ಕುಮೇದ್‌ಪುರ ಜೋಡಿ ರೈಲು ಮಾರ್ಗ, ಬರೌನಿ-ಬಚ್ವಾರಾ 3ನೇ ಮತ್ತು 4ನೇ ಮಾರ್ಗದ ಯೋಜನೆ ಮತ್ತು ಕತಿಹಾರ್-ಜೋಗ್ಬಾನಿ ರೈಲು ವಿಭಾಗದ ವಿದ್ಯುದೀಕರಣ. ಯೋಜನೆಗಳು ಪ್ರಯಾಣವನ್ನು ಹೆಚ್ಚು ಸುಲಭವಾಗಿಸುತ್ತದೆ ಮತ್ತು ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಕಾರಣವಾಗುತ್ತದೆ. ಪ್ರಧಾನ ಮಂತ್ರಿ ಅವರು ದಾನಪುರ್ - ಜೋಗ್ಬಾನಿ ಎಕ್ಸ್‌ಪ್ರೆಸ್ (ದರ್ಭಾಂಗಾ - ಸಕ್ರಿ ಮೂಲಕ) ಸೇರಿದಂತೆ 4 ರೈಲುಗಳಿಗೆ ಹಸಿರುನಿಶಾನೆ ತೋರಿದರು. ಜೋಗ್ಬಾನಿ- ಸಹರ್ಸಾ ಎಕ್ಸ್ ಪ್ರೆಸ್, ಸೋನ್ಪುರ್-ವೈಶಾಲಿ ಎಕ್ಸ್ ಪ್ರೆಸ್ ಮತ್ತು ಜೋಗ್ಬಾನಿ-ಸಿಲಿಗುರಿ ಎಕ್ಸ್‌ಪ್ರೆಸ್ ರೈಲು ಯೋಜನೆಗಳು.

ದೇಶದ ಜಾನುವಾರುಗಳ ಡಿಜಿಟಲ್ ಡೇಟಾಬೇಸ್ - ‘ಭಾರತ್ ಪಶುಧಾನ್’ ಅನ್ನು ಪ್ರಧಾನ ಮಂತ್ರಿ ಅವರು ದೇಶಕ್ಕೆ ಸಮರ್ಪಿಸಿದರು. ರಾಷ್ಟ್ರೀಯ ಡಿಜಿಟಲ್ ಜಾನುವಾರು ಮಿಷನ್ (NDLM) ಅಡಿ, ಇದನ್ನು ಅಭಿವೃದ್ಧಿಪಡಿಸಲಾಗಿದೆ, 'ಭಾರತ್ ಪಶುಧಾನ್' ಪ್ರತಿ ಜಾನುವಾರುಗಳಿಗೆ ನಿಗದಿಪಡಿಸಲಾದ ವಿಶಿಷ್ಟ 12-ಅಂಕಿಯ ಟ್ಯಾಗ್ ಐಡಿ ಬಳಸುತ್ತದೆ. ಈ ಯೋಜನೆಯಡಿ, ಅಂದಾಜು 30.5 ಕೋಟಿ ಜಾನುವಾರು ಪೈಕಿ ಸುಮಾರು 29.6 ಕೋಟಿ ಜಾನುವಾರುಗಳನ್ನು ಈಗಾಗಲೇ ಟ್ಯಾಗ್ ಮಾಡಲಾಗಿದೆ. ಅವುಗಳ ವಿವರಗಳು ಡೇಟಾಬೇಸ್‌ನಲ್ಲಿ ಲಭ್ಯವಿದೆ. 'ಭಾರತ ಪಶುಧಾನ್' ಗೋವುಗಳನ್ನು ಪತ್ತೆ ಹಚ್ಚುವ ವ್ಯವಸ್ಥೆ ಒದಗಿಸುವ ಮೂಲಕ ರೈತರನ್ನು ಸಬಲಗೊಳಿಸುತ್ತದೆ, ರೋಗದ ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೂ ಸಹಾಯ ಮಾಡುತ್ತದೆ.

ಪ್ರಧಾನ ಮಂತ್ರಿ ಅವರು ‘1962 ರೈತರ ಆ್ಯಪ್’ ಬಿಡುಗಡೆ ಮಾಡಿದರು, ಇದು ‘ಭಾರತ್ ಪಶುಧಾನ್’ ಡೇಟಾಬೇಸ್ ಅಡಿ, ಇರುವ ಎಲ್ಲಾ ಡೇಟಾ ಮತ್ತು ಮಾಹಿತಿಯನ್ನು ದಾಖಲಿಸುತ್ತದೆ, ಇದನ್ನು ರೈತರು ಬಳಸಿಕೊಳ್ಳಬಹುದು.

***



(Release ID: 2011229) Visitor Counter : 39