ಕಲ್ಲಿದ್ದಲು ಸಚಿವಾಲಯ

ಭಾರತದಲ್ಲಿ ಕಲ್ಲಿದ್ದಲು ಮತ್ತು ಲಿಗ್ನೈಟ್ ಅನಿಲೀಕರಣ ಯೋಜನೆಗಳನ್ನು ಉತ್ತೇಜಿಸಲು ಕಲ್ಲಿದ್ದಲು ಸಚಿವಾಲಯದ ವತಿಯಿಂದ  ನಾಳೆ ಹೈದರಾಬಾದಿನಲ್ಲಿ ಕೈಗಾರಿಕಾ ಸಂವಹನದ ಆಯೋಜನೆ 

Posted On: 15 FEB 2024 12:49PM by PIB Bengaluru

ಭಾರತ ಸರ್ಕಾರದ ಕಲ್ಲಿದ್ದಲು ಸಚಿವಾಲಯವು 16ನೇ ಫೆಬ್ರವರಿ 2024 ರಂದು ಹೈದರಾಬಾದಿನಲ್ಲಿ ಕೈಗಾರಿಕಾ ಸಂವಹನವನ್ನು ಆಯೋಜಿಸಲು ಸಿದ್ಧವಾಗಿದೆ, ಇದು ರಾಷ್ಟ್ರದಾದ್ಯಂತ ಕಲ್ಲಿದ್ದಲು ಮತ್ತು ಲಿಗ್ನೈಟ್ ಅನಿಲೀಕರಣ ಯೋಜನೆಗಳ ಅಭಿವೃದ್ಧಿ ಮತ್ತು ಪ್ರಸರಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮವು ಭಾರತದಲ್ಲಿ ಸುಸ್ಥಿರ ಇಂಧನ ಪರಿಹಾರಗಳನ್ನು ಉಪಯೋಗಿಸಲು ಕಲ್ಲಿದ್ದಲು ಮತ್ತು ಲಿಗ್ನೈಟ್ ಸಂಪನ್ಮೂಲಗಳ ಸಾಮರ್ಥ್ಯವನ್ನು ಬಳಸಿಕೊಳ್ಳುವಲ್ಲಿ ಮಹತ್ವದ ಹೆಜ್ಜೆಯಾಗಿದೆ.

ದೇಶದ ಭವಿಷ್ಯದ ಇಂಧನ ಅಗತ್ಯಗಳನ್ನು ಪೂರೈಸಲು ಕಲ್ಲಿದ್ದಲು ಮತ್ತು ಲಿಗ್ನೈಟ್ ಅನಿಲೀಕರಣ ಯೋಜನೆಗಳನ್ನು ಉತ್ತೇಜಿಸುವ ಯೋಜನೆಯನ್ನು ಭಾರತ ಸರ್ಕಾರವು ಅನುಮೋದಿಸಿದೆ. ಅನುಮೋದಿತ ಯೋಜನೆಯಂತೆ ರೂ. 8,500 ಕೋಟಿ ಹೂಡಿಕೆ ವೆಚ್ಚವನ್ನು ಕಲ್ಲಿದ್ದಲು ಸಚಿವಾಲಯವು 3 ವಿಭಾಗಗಳ ಅಡಿಯಲ್ಲಿ ಕಲ್ಲಿದ್ದಲು ಮತ್ತು ಲಿಗ್ನೈಟ್ ಅನಿಲೀಕರಣ ಯೋಜನೆಗಳಿಗೆ ಅಂದರೆ ಸರ್ಕಾರಿ ಸ್ವಾಮ್ಯದ ಘಟಕಗಳು, ಖಾಸಗಿ ಸಂಸ್ಥೆಗಳು ಮತ್ತು ಸಣ್ಣ ಪ್ರಮಾಣದ ಯೋಜನೆಗಳಿಗೆ ಒದಗಿಸುತ್ತದೆ.

ಕಲ್ಲಿದ್ದಲು ಮತ್ತು ಲಿಗ್ನೈಟ್ ಅನಿಲೀಕರಣ ಯೋಜನೆಗಳ ಉತ್ತೇಜನವು ಇಂಧನ ಮೂಲಗಳನ್ನು ವೈವಿಧ್ಯಗೊಳಿಸಲು, ಆಮದು ಮಾಡಿಕೊಂಡ ಇಂಧನಗಳ ಮೇಲೆ ಅವಲಂವಿಸುವುದನ್ನು ಕಡಿಮೆ ಮಾಡಲು ಮತ್ತು ಕ್ಲೀನರ್ (ಸ್ವಚ್ಛ) ತಂತ್ರಜ್ಞಾನಗಳ ಮೂಲಕ ಪರಿಸರದ ಮೇಲೆ ದುಷ್ಪರಿಣಾಮದ ಪ್ರಭಾವವನ್ನು ತಗ್ಗಿಸುವ ಸರ್ಕಾರದ  ಉದ್ದೇಶಕ್ಕೆ  ಅನುಗುಣವಾಗಿರುತ್ತದೆ. ಈ ಉಪಕ್ರಮವು ಇಂಧನ ವಲಯದಲ್ಲಿ ನಾವೀನ್ಯತೆ ಮತ್ತು ಸಹಯೋಗವನ್ನು ಉತ್ತೇಜಿಸಲು ಇರುವ ಕಲ್ಲಿದ್ದಲು ಸಚಿವಾಲಯದ ಬದ್ಧತೆಯನ್ನು ಒತ್ತಿಹೇಳುತ್ತದೆ. ಉದ್ಯಮದ ಪಾಲುದಾರರೊಂದಿಗೆ ಕಾರ್ಯತಂತ್ರದ ಸಹಭಾಗಿತ್ವದ ಮೂಲಕ, ಕಲ್ಲಿದ್ದಲು ಸಚಿವಾಲಯವು ಅನಿಲೀಕರಣ ತಂತ್ರಜ್ಞಾನಗಳ ಅಳವಡಿಕೆಯನ್ನು ತೀವ್ರಗೊಳಿಸಲು ಮತ್ತು ಕಲ್ಲಿದ್ದಲು ಮತ್ತು ಲಿಗ್ನೈಟ್ ಆಧಾರಿತ ಇಂಧನ ಪರಿಹಾರಗಳಿಗಾಗಿ ದೃಢವಾದ ಪರಿಸರ ವ್ಯವಸ್ಥೆಯ ಅಭಿವೃದ್ಧಿಯನ್ನು ಸರಾಗವಾಗಿಸಲು ಪ್ರಯತ್ನಿಸುತ್ತದೆ.  ಕಲ್ಲಿದ್ದಲು ಮತ್ತು ಲಿಗ್ನೈಟ್ ಅನಿಲೀಕರಣ ಯೋಜನೆಗಳಿಗೆ ಸಂಬಂಧಿಸಿದ ಅವಕಾಶಗಳು ಮತ್ತು ಸವಾಲುಗಳ ಕುರಿತು ಚರ್ಚಿಸಲು ನೀತಿ ನಿರೂಪಕರು, ಉದ್ಯಮದ ಪ್ರಮುಖರು  ಮತ್ತು ಹೂಡಿಕೆದಾರರು ಸೇರಿದಂತೆ ಪ್ರಮುಖ ಪಾಲುದಾರರನ್ನು ಈ ಕಾರ್ಯಕ್ರಮವು  ಒಟ್ಟುಗೂಡಿಸುತ್ತದೆ. ಭಾಗವಹಿಸುವವರು ಒಳನೋಟವುಳ್ಳ ಚರ್ಚೆಗಳಲ್ಲಿ ತೊಡಗುತ್ತಾರೆ, ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ಭಾರತದಲ್ಲಿ ಅನಿಲೀಕರಣ ಉಪಕ್ರಮಗಳ ಬೆಳವಣಿಗೆಯನ್ನು ಹೆಚ್ಚಿಸಲು ಸಹಯೋಗಕ್ಕಾಗಿ ಉಪಾಯಗಳನ್ನು   ಅನ್ವೇಷಿಸುತ್ತಾರೆ.

ಕಾರ್ಯಕ್ರಮಕ್ಕೆ  ಮುಖ್ಯ ಅತಿಥಿಗಳಾಗಿ ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿ ಶ್ರೀ ಅಮೃತ್ ಲಾಲ್ ಮೀನಾ ಆಗಮಿಸಲಿದ್ದಾರೆ.  ಕಾರ್ಯಕ್ರಮದಲ್ಲಿ ಕೋಲ್ ಇಂಡಿಯಾ ಲಿಮಿಟೆಡ್ ನ  ಅಧ್ಯಕ್ಷರಾದ ಶ್ರೀ ಪಿ.ಎಂ. ಪ್ರಸಾದ್ ಕೂಡ ಭಾಗವಹಿಸಲಿದ್ದಾರೆ. 

ಕಲ್ಲಿದ್ದಲು ಸಚಿವಾಲಯವು ಈ ಮಹತ್ವದ  ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮತ್ತು ಭಾರತದಲ್ಲಿ ಇಂಧನದ ಭವಿಷ್ಯವನ್ನು ರೂಪಿಸಲು ಕೊಡುಗೆ ನೀಡಲು ಎಲ್ಲಾ ಆಸಕ್ತ ಭಾಗೀದಾರರನ್ನು ಆಹ್ವಾನಿಸುತ್ತದೆ. ಕಲ್ಲಿದ್ದಲು ಅನಿಲೀಕರಣವು ಕಲ್ಲಿದ್ದಲು ಮತ್ತು ಲಿಗ್ನೈಟ್ ಸಂಪನ್ಮೂಲಗಳ ಅಗಾಧ ಸಾಮರ್ಥ್ಯವನ್ನು ಸುಸ್ಥಿರ ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ನಮ್ಮ ಇಂಧನ ಭದ್ರತಾ ಉದ್ದೇಶಗಳನ್ನು ಸಾಧಿಸಲು  ಅನುವು ಮಾಡಿಕೊಡುತ್ತದೆ.

***



(Release ID: 2006251) Visitor Counter : 63


Read this release in: English , Urdu , Hindi , Tamil , Telugu