ಪ್ರಧಾನ ಮಂತ್ರಿಯವರ ಕಛೇರಿ

ರೋಜ್‌ಗಾರ್ ಮೇಳದ ಅಡಿ, ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಹೊಸದಾಗಿ ಸೇರ್ಪಡೆಗೊಂಡ ಉದ್ಯೋಗಾಕಾಂಕ್ಷಿಗಳಿಗೆ 1 ಲಕ್ಷಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಿದ ಪ್ರಧಾನಿ


ನವದೆಹಲಿಯಲ್ಲಿ ಇಂಟಿಗ್ರೇಟೆಡ್ ಕಾಂಪ್ಲೆಕ್ಸ್ "ಕರ್ಮಯೋಗಿ ಭವನ"ದ ಹಂತಕ್ಕೆ ಪ್ರಧಾನಿ ಶಂಕುಸ್ಥಾಪನೆ
 
"ರಾಷ್ಟ್ರ ನಿರ್ಮಾಣದಲ್ಲಿ ನಮ್ಮ ಯುವ ಶಕ್ತಿಯ ಕೊಡುಗೆ ಹೆಚ್ಚಿಸುವಲ್ಲಿ ರೋಜ್ಗಾರ್ ಮೇಳಗಳು ನಿರ್ಣಾಯಕ ಪಾತ್ರ ವಹಿಸುತ್ತವೆ"
 
"ಭಾರತ ಸರ್ಕಾರದಲ್ಲಿ ನೇಮಕಾತಿ ಪ್ರಕ್ರಿಯೆಯು ಈಗ ಸಂಪೂರ್ಣ ಪಾರದರ್ಶಕವಾಗಿದೆ"
 
"ಯುವಜನರನ್ನು ಭಾರತ ಸರ್ಕಾರದೊಂದಿಗೆ ಸಂಪರ್ಕಿಸುವುದು ಮತ್ತು ಅವರನ್ನು ರಾಷ್ಟ್ರ ನಿರ್ಮಾಣದಲ್ಲಿ ಪಾಲುದಾರರನ್ನಾಗಿ ಮಾಡುವುದೇ ನಮ್ಮ ಪ್ರಯತ್ನವಾಗಿದೆ"
 
"ಈ ದಶಕದ ಅಂತ್ಯದ ವೇಳೆಗೆ ಭಾರತೀಯ ರೈಲ್ವೆ ಸಂಪೂರ್ಣ ರೂಪಾಂತರಗೊಳ್ಳಲಿದೆ"
 
"ಉತ್ತಮ ಸಂಪರ್ಕವು ದೇಶದ ಅಭಿವೃದ್ಧಿಯ ಮೇಲೆ ನೇರ ಪರಿಣಾಮ ಬೀರುತ್ತದೆ"
 
"ಅರೆಸೇನಾ ಪಡೆಗಳ ಆಯ್ಕೆ ಪ್ರಕ್ರಿಯೆ ಸುಧಾರಣೆಗಳು ಪ್ರದೇಶದ ಪ್ರತಿ ಯುವಕನಿಗೆ ಸಮಾನ ಅವಕಾಶ ನೀಡುತ್ತದೆ"

Posted On: 12 FEB 2024 11:32AM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಹೊಸದಾಗಿ ಸೇರ್ಪಡೆಗೊಂಡವರಿಗೆ 1 ಲಕ್ಷಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಿದರು. ಅವರು ನವದೆಹಲಿಯಲ್ಲಿ ಇಂಟಿಗ್ರೇಟೆಡ್ ಕಾಂಪ್ಲೆಕ್ಸ್ "ಕರ್ಮಯೋಗಿ ಭವನ"ದ ಒಂದನೇ ಹಂತಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂಕೀರ್ಣವು ಮಿಷನ್ ಕರ್ಮಯೋಗಿಯ ವಿವಿಧ ಆಧಾರಸ್ತಂಭಗಳ ನಡುವೆ ಸಹಭಾಗಿತ್ವ  ಮತ್ತು ಸಂಯೋಜಿತ ಕ್ರಿಯೆ ಅಥವಾ ಕಾರ್ಯಾಚರಣೆಯನ್ನು ಉತ್ತೇಜಿಸುತ್ತದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, 1 ಲಕ್ಷಕ್ಕಿಂತ ಹೆಚ್ಚಿನ  ಉದ್ಯೋಗಾಕಾಂಕ್ಷಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಗುತ್ತಿ. ಈ ಸಂದರ್ಭದಲ್ಲಿ ಉದ್ಯೋಗಾಂಕಾಂಕ್ಷಿಗಳು ಮತ್ತು ಅವರ ಕುಟುಂಬ ಸದಸ್ಯರನ್ನು ಅಭಿನಂದಿಸುತ್ತೇನೆ. ಭಾರತ ಸರ್ಕಾರದಲ್ಲಿ ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಅಭಿಯಾನವು ಭರದಿಂದ ಸಾಗಿದೆ. ಹಿಂದಿನ ಸರ್ಕಾರಗಳಲ್ಲಿ ಉದ್ಯೋಗ ಅಧಿಸೂಚನೆ ಹೊರಡಿಸುವುದು ಮತ್ತು ನೇಮಕಾತಿ ಪತ್ರ ಹಸ್ತಾಂತರದ ನಡುವೆ ಸುದೀರ್ಘ ಸಮಯ ಕಳೆಯುತ್ತಿತ್ತು, ಇದು ಲಂಚದ ಹೆಚ್ಚಳಕ್ಕೆ ಕಾರಣವಾಯಿತು. ಆದರೆ ಪ್ರಸ್ತುತ ಸರ್ಕಾರವು ಸಂಪೂರ್ಣ ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸಿದೆ. ನಿಗದಿತ ಸಮಯದೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿದೆ. ಪ್ರತಿಯೊಬ್ಬ ಯುವಕ ತನ್ನ ಸಾಮರ್ಥ್ಯ ಪ್ರದರ್ಶಿಸಲು ಸಮಾನ ಅವಕಾಶಗಳನ್ನು ಕಲ್ಪಿಸಲು ಇದು ಕಾರಣವಾಗಿದೆ. ಇಂದು, ಪ್ರತಿಯೊಬ್ಬ ಯುವಕ ಕಠಿಣ ಪರಿಶ್ರಮ ಮತ್ತು ಕೌಶಲ್ಯದಿಂದ ತನ್ನ ಉದ್ಯೋಗ ಸ್ಥಾನವನ್ನು ಭದ್ರಪಡಿಸಿಕೊಳ್ಳಬಹುದು ಎಂಬುದನ್ನು ನಂಬುತ್ತಿದ್ದಾರೆ".  ಯುವಜನರನ್ನು ರಾಷ್ಟ್ರದ ಅಭಿವೃದ್ಧಿಯಲ್ಲಿ ಪಾಲುದಾರರನ್ನಾಗಿ ಮಾಡಲು ಸರ್ಕಾರ ಶ್ರಮಿಸುತ್ತಿದೆ. ಕಳೆದ 10 ವರ್ಷಗಳಲ್ಲಿ ಈಗಿನ ಸರ್ಕಾರವು ಹಿಂದಿನ ಸರ್ಕಾರಗಳಿಗಿಂತ ಒಂದೂವರೆ ಪಟ್ಟು ಹೆಚ್ಚು ಉದ್ಯೋಗಗಳನ್ನು ಯುವಕರಿಗೆ ಹಸ್ತಾಂತರಿಸಿದೆ ಎಂದರು. ನಂತರ ಪ್ರಧಾನ ಮಂತ್ರಿ ಅವರು ನವದೆಹಲಿಯಲ್ಲಿ ಸಮಗ್ರ ಸಂಕೀರ್ಣ ‘ಕರ್ಮಯೋಗಿ ಭವನ’ದ Iನೇ ಹಂತ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಇದು ಸಾಮರ್ಥ್ಯ ವರ್ಧನೆಯತ್ತ ಸರ್ಕಾರದ ಉಪಕ್ರಮವನ್ನು ಬಲಪಡಿಸುತ್ತಿದೆ ಎಂದು ಹೇಳಿದರು.

ಸರ್ಕಾರದ ಪ್ರಯತ್ನದಿಂದಾಗಿ ಹೊಸ ವಲಯಗಳ ಪ್ರಾರಂಭ ಮತ್ತು ಯುವಕರಿಗೆ ಉದ್ಯೋಗ ಮತ್ತು ಸ್ವಯಂ-ಉದ್ಯೋಗ ಅವಕಾಶಗಳ ಸೃಷ್ಟಿ ಕುರಿತು ಮಾತನಾಡಿದ ಪ್ರಧಾನಿ, ಕುಟುಂಬಗಳ ವಿದ್ಯುತ್ ಬಿಲ್ ಕಡಿಮೆ ಮಾಡುವ 1 ಕೋಟಿ ರೂಫ್‌ಟಾಪ್ ಸೋಲಾರ್ ಘಟಕಗಳನ್ನು ಸ್ಥಾಪಿಸುವ ಬಜೆಟ್ ಘೋಷಣೆಯನ್ನು ಪ್ರಸ್ತಾಪಿಸಿದರು.  ಗ್ರಿಡ್ ಗೆ ವಿದ್ಯುತ್ ಸರಬರಾಜು ಮಾಡುವ ಮೂಲಕ ಹಣ ಗಳಿಸಲು ಸಾಧ್ಯವಾಗುತ್ತದೆ. ಈ ಯೋಜನೆಯು ಲಕ್ಷಾಂತರ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದರು.

ಸುಮಾರು 1.25 ಲಕ್ಷ ಸ್ಟಾರ್ಟಪ್‌ಗಳನ್ನು ಹೊಂದಿರುವ ಭಾರತವು ವಿಶ್ವದ 3ನೇ ಅತಿದೊಡ್ಡ ಸ್ಟಾರ್ಟಪ್ ಪರಿಸರ ವ್ಯವಸ್ಥೆಯಾಗಿದೆ. ಈ ಸ್ಟಾರ್ಟಪ್‌ಗಳಲ್ಲಿ ಹೆಚ್ಚಿನವು 2 ಅಥವಾ ಶ್ರೇಣಿ 3 ನಗರಗಳಲ್ಲಿ ತಲೆಎತ್ತಿವೆ. ಈ ಸ್ಟಾರ್ಟಪ್‌ಗಳು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿರುವುದರಿಂದ, ಇತ್ತೀಚಿನ ಬಜೆಟ್‌ನಲ್ಲಿ ಸ್ಟಾರ್ಟಪ್‌ಗಳಿಗೆ ತೆರಿಗೆ ರಿಯಾಯಿತಿಯ ಮುಂದುವರಿಕೆ ಘೋಷಿಸಲಾಗಿದೆ. ಸಂಶೋಧನೆ ಮತ್ತು ಆವಿಷ್ಕಾರ ಉತ್ತೇಜಿಸಲು ಬಜೆಟ್‌ನಲ್ಲಿ ಘೋಷಿಸಲಾದ 1 ಲಕ್ಷ ಕೋಟಿ ರೂ. ಮೊತ್ತದ ನಿಧಿಯ ಬಗ್ಗೆಯೂ ಪ್ರಧಾನಿ ಪ್ರಸ್ತಾಪಿಸಿದರು.

ಇಂದು ರೋಜ್‌ಗಾರ್ ಮೇಳದ ಮೂಲಕ ರೈಲ್ವೆಯಲ್ಲಿ ನೇಮಕಾತಿ ನಡೆಯುತ್ತಿದೆ. ಪ್ರಯಾಣ ವಿಷಯದಲ್ಲಿ ರೈಲ್ವೆ ಸಾಮಾನ್ಯ ಜನರ ಮೊದಲ ಆಯ್ಕೆಯಾಗಿದೆ. ಭಾರತದಲ್ಲಿ ರೈಲ್ವೆಯು ಬೃಹತ್ ಪರಿವರ್ತನೆಗೆ ಒಳಗಾಗುತ್ತಿದೆ. ಮುಂದಿನ ದಶಕದಲ್ಲಿ ಈ ವಲಯವು ಸಂಪೂರ್ಣ ಬದಲಾವಣೆಗೆ ಸಾಕ್ಷಿಯಾಗಲಿದೆ. 2014ರ ಮೊದಲು ರೈಲ್ವೆಗೆ ಹೆಚ್ಚಿನ ಗಮನ ನೀಡಲಿಲ್ಲ. ಆದರೆ ಈಗ ರೈಲು ಮಾರ್ಗಗಳ ವಿದ್ಯುದೀಕರಣ, ಜೋಡಿ ಮಾರ್ಗಗಳ ನಿರ್ಮಾಣ ಮತ್ತು ಹೊಸ ರೈಲುಗಳಿಗೆ ಹಸಿರುನಿಶಾನೆ ತೋರಲಾಗುತ್ತಿದೆ. ಪ್ರಯಾಣಿಕರಿಗೆ ಸೌಲಭ್ಯಗಳನ್ನು ಹೆಚ್ಚಿಸಲಾಗುತ್ತಿದೆ. 2014ರ ನಂತರ, ರೈಲ್ವೆಯ ಆಧುನೀಕರಣ ಮತ್ತು ಮೇಲ್ದರ್ಜೆಗೆ ಗಮನ ಹರಿಸುವ ಮೂಲಕ ಸಂಪೂರ್ಣ ರೈಲು ಪ್ರಯಾಣದ ಅನುಭವ ಮರುಶೋಧಿಸುವ ಅಭಿಯಾನ ಪ್ರಾರಂಭಿಸಲಾಯಿತು. ಈ ವರ್ಷದ ಬಜೆಟ್‌ನಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನಂತಹ 40,000 ಆಧುನಿಕ ಬೋಗಿಗಳನ್ನು ಸಿದ್ಧಪಡಿಸಿ ಸಾಮಾನ್ಯ ರೈಲುಗಳಿಗೆ ಸೇರಿಸಲಾಗುವುದು. ಇದರಿಂದಾಗಿ ಪ್ರಯಾಣಿಕರಿಗೆ ಅನುಕೂಲ ಮತ್ತು ಸೌಕರ್ಯ ಹೆಚ್ಚಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಉತ್ತಮ ಸಂಚಾರ ಸಂಪರ್ಕದಿಂದ ದೊರಕುವ ದೂರಗಾಮಿ ಪರಿಣಾಮವನ್ನು ಎತ್ತಿ ಹಿಡಿದ ಪ್ರಧಾನ ಮಂತ್ರಿ, ಹೊಸ ಮಾರುಕಟ್ಟೆಗಳು, ಪ್ರವಾಸೋದ್ಯಮದ ವಿಸ್ತರಣೆ, ಹೊಸ ವ್ಯವಹಾರಗಳು ಮತ್ತು ಸುಧಾರಿತ ಸಂಪರ್ಕದಿಂದಾಗಿ ಲಕ್ಷಗಟ್ಟಲೆ ಉದ್ಯೋಗಗಳ ಸೃಷ್ಟಿ ಆಗುತ್ತದೆ. "ಅಭಿವೃದ್ಧಿಯನ್ನು ವೇಗಗೊಳಿಸಲು ಮೂಲಸೌಕರ್ಯ ಹೂಡಿಕೆ ಹೆಚ್ಚಿಸಲಾಗುತ್ತಿದೆ". ಇತ್ತೀಚಿನ ಬಜೆಟ್‌ನಲ್ಲಿ ಮೂಲಸೌಕರ್ಯ ಹೂಡಿಕೆಗಾಗಿ 11 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಹೊಸ ರೈಲು, ರಸ್ತೆ, ವಿಮಾನ ನಿಲ್ದಾಣಗಳು ಮತ್ತು ಜಲಮಾರ್ಗ ಯೋಜನೆಗಳು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ ಎಂದರು.

ಅರೆಸೇನಾ ಪಡೆಗಳಲ್ಲಿ ಅನೇಕ ಹೊಸ ನೇಮಕಾತಿಗಳು ನಡೆಯುತ್ತಿವೆ. ಅರೆಸೇನಾ ಪಡೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ಸುಧಾರಣೆಗಳನ್ನು ತರಲಾಗಿದೆ. ಜನವರಿಯಿಂದ ಹಿಂದಿ ಮತ್ತು ಇಂಗ್ಲಿಷ್ ಹೊರತುಪಡಿಸಿ 13 ಭಾರತೀಯ ಭಾಷೆಗಳಲ್ಲಿ ಕಾನ್ ಸ್ಟೇಬಲ್ ಪರೀಕ್ಷೆ  ನಡೆಸಲಾಗುವುದು. ಇದರಿಂದ ಲಕ್ಷಾಂತರ ಅಭ್ಯರ್ಥಿಗಳಿಗೆ ಸಮಾನ ಅವಕಾಶ ದೊರೆಯಲಿದೆ. ಗಡಿ ಮತ್ತು ಉಗ್ರಗಾಮಿ ಪೀಡಿತ ಜಿಲ್ಲೆಗಳ ಕೋಟಾ ಹೆಚ್ಚಳ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ವಿಕ್ಷಿತ್ ಭಾರತ್ ಪಯಣದಲ್ಲಿ ಸರ್ಕಾರಿ ಸಿಬ್ಬಂದಿಯ ಪಾತ್ರವನ್ನು ಪ್ರಧಾನ ಮಂತ್ರಿ ಎತ್ತಿ ತೋರಿಸಿದರು. "ಇಂದು ಸೇರುತ್ತಿರುವ 1 ಲಕ್ಷಕ್ಕೂ ಹೆಚ್ಚು ಕರ್ಮಯೋಗಿಗಳು ಈ ಪ್ರಯಾಣಕ್ಕೆ ಹೊಸ ಶಕ್ತಿ ಮತ್ತು ವೇಗ ನೀಡಲಿದ್ದಾರೆ". ರಾಷ್ಟ್ರ ನಿರ್ಮಾಣಕ್ಕೆ ಯುವಕರು ಪ್ರತಿ ದಿನವನ್ನೂ ಮೀಸಲಿಡಬೇಕು. 800ಕ್ಕೂ ಹೆಚ್ಚು ಕೋರ್ಸ್‌ಗಳು ಮತ್ತು 30 ಲಕ್ಷ ಬಳಕೆದಾರರನ್ನು ಹೊಂದಿರುವ ಕರ್ಮಯೋಗಿ ಭಾರತ್ ಪೋರ್ಟಲ್ ನ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳುವಂತೆ ಅವರು ಯುವಕರಿಗೆ ಕರೆ ನೀಡಿದರು.
 
ಹಿನ್ನೆಲೆ

ದೇಶಾದ್ಯಂತ 47 ಸ್ಥಳಗಳಲ್ಲಿ ರೋಜ್‌ಗಾರ್ ಮೇಳ ಆಯೋಜಿಸಲಾಗಿದೆ. ಈ ಉಪಕ್ರಮ ಬೆಂಬಲಿಸುವ ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನೇಮಕಾತಿಗಳು ನಡೆಯುತ್ತಿವೆ. ನೇಮಕಗೊಂಡ ಉದ್ಯೋಗಾಕಾಂಕ್ಷಿಗಳು ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಕೆಲಸಕ್ಕೆ  ಸೇರುತ್ತಾರೆ. ಕಂದಾಯ ಇಲಾಖೆ, ಗೃಹ ಸಚಿವಾಲಯ, ಉನ್ನತ ಶಿಕ್ಷಣ ಇಲಾಖೆ, ಪರಮಾಣು ಶಕ್ತಿ ಇಲಾಖೆ, ರಕ್ಷಣಾ ಸಚಿವಾಲಯ, ಹಣಕಾಸು ಸೇವೆಗಳ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಬುಡಕಟ್ಟು ವ್ಯವಹಾರಗಳ ಸಚಿವಾಲಯ ಮತ್ತು ರೈಲ್ವೆ ಸಚಿವಾಲಯ ವಿವಿಧ ಹುದ್ದೆಗಳಲ್ಲಿ ಅವರು ದೇಶ ಸೇವೆ ಮಾಡಲಿದ್ದಾರೆ.

ರೋಜ್‌ಗಾರ್ ಮೇಳವು ದೇಶದಲ್ಲಿ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡುವ ಪ್ರಧಾನ ಮಂತ್ರಿ ಅವರ ಬದ್ಧತೆಯ ಈಡೇರಿಕೆಗೆ ಒಂದು ದಿಟ್ಟ ಹೆಜ್ಜೆಯಾಗಿದೆ. ರೋಜ್‌ಗಾರ್ ಮೇಳವು ಮತ್ತಷ್ಟು ಉದ್ಯೋಗ ಸೃಷ್ಟಿ ಮಾಡಲಿದೆ.  ಯುವಜನರ  ಸಬಲೀಕರಣ ಮತ್ತು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ನೇರ ಭಾಗವಹಿಸುವಿಕೆಗಾಗಿ ಲಾಭದಾಯಕ ಅವಕಾಶಗಳನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಹೊಸದಾಗಿ ಸೇರ್ಪಡೆಗೊಂಡವರು ಕರ್ಮಯೋಗಿ ಪ್ರಾರಂಭ್ ಮೂಲಕ ತರಬೇತಿ ಪಡೆಯುವ ಅವಕಾಶ ಪಡೆಯುತ್ತಾರೆ, ಐಜಿಒಟಿ - ಕರ್ಮಯೋಗಿ ಪೋರ್ಟಲ್‌ನಲ್ಲಿ ಆನ್‌ಲೈನ್ ಮಾಡ್ಯೂಲ್ ಆಗಿದ್ದು, ಅಲ್ಲಿ 880ಕ್ಕೂ ಹೆಚ್ಚು ಇ-ಲರ್ನಿಂಗ್ ಕೋರ್ಸ್‌ಗಳನ್ನು 'ಎಲ್ಲಿಂದಲಾದರೂ ಯಾವುದೇ ಸಾಧನ' ಕಲಿಕೆಯ ಸ್ವರೂಪವಾಗಿ ರೂಪಿಸಲಾಗಿದೆ. 
 

 

***



(Release ID: 2005312) Visitor Counter : 47