ಪ್ರಧಾನ ಮಂತ್ರಿಯವರ ಕಛೇರಿ

​​​​​​​ಇಂಡಿಯಾ ಇಂಧನ ಸಪ್ತಾಹ-2024 ಕಾರ್ಯಕ್ರಮ ಉದ್ಘಾಟಿಸಿದ  ಪ್ರಧಾನ ಮಂತ್ರಿ 


"ಸದೃಢವಾದ ಇಂಧನ ವಲಯವು ರಾಷ್ಟ್ರೀಯ ಪ್ರಗತಿಗೆ ಉತ್ತಮವಾಗಿದೆ"

"ಭಾರತದ ಬೆಳವಣಿಗೆಯ ಯಶೋಗಾಥೆಯ ಬಗ್ಗೆ ಜಾಗತಿಕ ತಜ್ಞರು ಉತ್ಸುಕರಾಗಿದ್ದಾರೆ"

"ಭಾರತವು ತನ್ನ ಅಗತ್ಯಗಳನ್ನು ಪೂರೈಸುವ ಜತೆಗೆ, ಜಾಗತಿಕ ದಿಕ್ಕನ್ನು ನಿರ್ಧರಿಸುತ್ತಿದೆ"

"ಭಾರತವು ಅಭೂತಪೂರ್ವ ವೇಗದಲ್ಲಿ ಮೂಲಸೌಕರ್ಯಗಳನ್ನು ನಿರ್ಮಿಸುವತ್ತ ಗಮನ ಹರಿಸುತ್ತಿದೆ"

"ಜಾಗತಿಕ ಜೈವಿಕ ಇಂಧನ ಒಕ್ಕೂಟವು ವಿಶ್ವಾದ್ಯಂತದ ಸರ್ಕಾರಗಳು, ಸಂಸ್ಥೆಗಳು ಮತ್ತು ಕೈಗಾರಿಕೆಗಳನ್ನು ಒಟ್ಟುಗೂಡಿಸಿದೆ"

"ನಾವು 'ತ್ಯಾಜ್ಯದಿಂದ ಸಂಪತ್ತು ನಿರ್ವಹಣೆ' ಮೂಲಕ ಗ್ರಾಮೀಣ ಆರ್ಥಿಕತೆಗೆ ವೇಗ ನೀಡುತ್ತಿದ್ದೇವೆ

"ನಮ್ಮ ಇಂಧನ ಮಿಶ್ರಣ ಹೆಚ್ಚಿಸಲು ಭಾರತವು ಪರಿಸರ ಪ್ರಜ್ಞೆಯ ಇಂಧನ ಮೂಲಗಳ ಅಭಿವೃದ್ಧಿಗೆ ಒತ್ತು ನೀಡುತ್ತಿದೆ"

"ನಾವು ಸೌರಶಕ್ತಿ ಕ್ಷೇತ್ರದಲ್ಲಿ ಸ್ವಾವಲಂಬನೆ ಪ್ರೋತ್ಸಾಹಿಸುತ್ತಿದ್ದೇವೆ"

"ಭಾರತ ಇಂಧನ ಸಪ್ತಾಹ ಕಾರ್ಯಕ್ರಮ ಕೇವಲ ಭಾರತದ ಕಾರ್ಯಕ್ರಮವಲ್ಲ, ಅದು 'ವಿಶ್ವದೊಂದಿಗೆ ಭಾರತ ಮತ್ತು ವಿಶ್ವಕ್ಕಾಗಿ ಭಾರತ' ಭಾವನೆಯ ಪ್ರತಿಬಿಂಬವಾಗಿದೆ"

Posted On: 06 FEB 2024 12:43PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೋವಾದಲ್ಲಿಂದು “ಭಾರತ ಇಂಧನ ಸಪ್ತಾಹ-2024” ಕಾರ್ಯಕ್ರಮ ಉದ್ಘಾಟಿಸಿದರು. “ಭಾರತ ಇಂಧನ ಸಪ್ತಾಹ-2024” ಕಾರ್ಯಕ್ರಮವು ಭಾರತದ ಅತಿ ದೊಡ್ಡ ಮತ್ತು ಎಲ್ಲವನ್ನು ಒಳಗೊಂಡಿರುವ ಇಂಧನ ಪ್ರದರ್ಶನ ಮತ್ತು ಸಮ್ಮೇಳನವಾಗಿದ್ದು, ಭಾರತದ ಇಂಧನ ಪರಿವರ್ತನೆಯ ಗುರಿಗಳನ್ನು ವೇಗಗೊಳಿಸಲು ಸಂಪೂರ್ಣ ಇಂಧನ ಮೌಲ್ಯ ಸರಪಳಿಯನ್ನು ಒಟ್ಟುಗೂಡಿಸುತ್ತದೆ. ಪ್ರಧಾನ ಮಂತ್ರಿ ಅವರು ಜಾಗತಿಕ ಮಟ್ಟದ ತೈಲ ಮತ್ತು ಅನಿಲ ಕ್ಷೇತ್ರದ ಸಿಇಒಗಳು ಮತ್ತು ತಜ್ಞರೊಂದಿಗೆ ದುಂಡುಮೇಜಿನ ಸಭೆ ನಡೆಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, ಭಾರತ ಇಂಧನ ಸಪ್ತಾಹದ 2ನೇ ಆವೃತ್ತಿಗೆ ಎಲ್ಲರನ್ನು ಸ್ವಾಗತಿಸಿದರು. ಈ ಕಾರ್ಯಕ್ರಮವು  ಗೋವಾದಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ. ಇದು ಆತಿಥ್ಯ ಮನೋಭಾವಕ್ಕೆ ಹೆಸರುವಾಸಿಯಾಗಿದೆ. ಈ ಸ್ಥಳದ ನೈಸರ್ಗಿಕ ಸೌಂದರ್ಯ ಮತ್ತು ಸಂಸ್ಕೃತಿಯು ವಿಶ್ವದ ಪ್ರವಾಸಿಗರ ಮೇಲೆ ಆಳವಾದ ಪ್ರಭಾವ ಬೀರುತ್ತದೆ. "ಗೋವಾ ಅಭಿವೃದ್ಧಿಯ ಹೊಸ ಎತ್ತರ ಮುಟ್ಟುತ್ತಿದೆ", ಸುಸ್ಥಿರ ಭವಿಷ್ಯ ಮತ್ತು ಪರಿಸರದ ಬಗ್ಗೆ ಸಂವೇದನಾಶೀಲ ಚರ್ಚೆಗೆ ಇದು ಪರಿಪೂರ್ಣ ತಾಣವಾಗಿದೆ. ಇಂಡಿಯಾ ಎನರ್ಜಿ ವೀಕ್-2024ರಲ್ಲಿ  ಗೋವಾದಲ್ಲಿ ನೆರೆದಿರುವ ವಿದೇಶಿ ಅತಿಥಿಗಳು ಈ ರಾಜ್ಯದ ಜೀವಮಾನದ ಸ್ಮರಣೆ ಮಾಡುತ್ತಾರೆ ಎಂಬ ವಿಶ್ವಾಸ ತಮಗಿದೆ ಎಂದು ಪ್ರಧಾನಿ ತಿಳಿಸಿದರು.

ಈ ಆರ್ಥಿಕ ವರ್ಷದ ಮೊದಲ 6 ತಿಂಗಳಲ್ಲಿ ಭಾರತದ ಜಿಡಿಪಿ ದರವು ಶೇಕಡ 7.5ರಷ್ಟು ದಾಟಿದ ಮಹತ್ವದ ಅವಧಿಯಲ್ಲಿ ಭಾರತ ಎನರ್ಜಿ ವೀಕ್-2024 ನಡೆಯುತ್ತಿದೆ. ಜಾಗತಿಕ ಬೆಳವಣಿಗೆಯ ಅಂದಾಜಿಗಿಂತ ಜಿಡಿಪಿ ಬೆಳವಣಿಗೆಯ ದರವು ಭಾರತವನ್ನು ವೇಗವಾಗಿ ಮುಂದಕ್ಕೆ ಕೊಂಡೊಯ್ಯಲಿದೆ. ಜಗತ್ತಿನಲ್ಲಿ ಬೆಳೆಯುತ್ತಿರುವ ಆರ್ಥಿಕತೆ. ಭವಿಷ್ಯದಲ್ಲಿ ಇದೇ ರೀತಿಯ ಬೆಳವಣಿಗೆಯ ಪ್ರವೃತ್ತಿಗಳ ಬಗ್ಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ ನೀಡಿದ್ದ ಅಂದಾಜು ಭವಿಷ್ಯವನ್ನು ಉಲ್ಲೇಖಿಸಿದ ಪ್ರಧಾನಿ, "ಭಾರತವು ಶೀಘ್ರದಲ್ಲೇ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ವಿಶ್ವದಾದ್ಯಂತದ ಆರ್ಥಿಕ ತಜ್ಞರು ನಂಬಿದ್ದಾರೆ". ಭಾರತದ ಬೆಳವಣಿಗೆಯ ಯಶೋಗಾಥೆಯಲ್ಲಿ ಇಂಧನ ಕ್ಷೇತ್ರದ ವಿಸ್ತರಣೆಯ ವ್ಯಾಪ್ತಿ ಅಗಾಧವಾಗಿದೆ ಎಂದರು.

ಭಾರತವು ವಿಶ್ವದ 3ನೇ ಅತಿದೊಡ್ಡ ಇಂಧನ, ತೈಲ ಮತ್ತು ಎಲ್‌ಪಿಜಿ ಗ್ರಾಹಕ ರಾಷ್ಟ್ರವಾಗಿದೆ. ಇದಲ್ಲದೆ, 4ನೇ ಅತಿದೊಡ್ಡ ವಾಹನ ಮಾರುಕಟ್ಟೆಯೊಂದಿಗೆ ಭಾರತವು 4ನೇ ಅತಿದೊಡ್ಡ ಎಲ್ಎನ್ ಜಿ ಆಮದುದಾರ ಮತ್ತು ಸಂಸ್ಕರಣೆ ರಾಷ್ಟ್ರವೂ ಆಗಿದೆ. ದೇಶದಲ್ಲಿ ಹೆಚ್ಚುತ್ತಿರುವ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯನ್ನು ಪ್ರಸ್ತಾಪಿಸಿದ ಅವರು, 2045ರ ವೇಳೆಗೆ ರಾಷ್ಟ್ರದ ಇಂಧನ ಬೇಡಿಕೆಯನ್ನು ದ್ವಿಗುಣಗೊಳಿಸುವ ಅಂದಾಜು ಕುರಿತು ಮಾತನಾಡಿದರು. ಬೆಳೆಯುತ್ತಿರುವ ಈ ಬೇಡಿಕೆಯನ್ನು ಪೂರೈಸುವ ಭಾರತದ ಯೋಜನೆಯನ್ನು ಪ್ರಧಾನ ಮಂತ್ರಿ ವಿವರಿಸಿದರು. ಕೈಗೆಟಕುವ ದರದಲ್ಲಿ ಇಂಧನ ಖಾತ್ರಿಪಡಿಸುವ ಪ್ರಯತ್ನಗಳಿಗೆ ಒತ್ತು ನೀಡಲಾಗಿದೆ. ಪ್ರತಿಕೂಲ ಜಾಗತಿಕ ಅಂಶಗಳ ಹೊರತಾಗಿಯೂ, ಪೆಟ್ರೋಲ್ ಬೆಲೆ ಕಡಿಮೆಯಾದ ಕೆಲವೇ ರಾಷ್ಟ್ರಗಳಲ್ಲಿ ಭಾರತವೂ ಸೇರಿದೆ. ಕೋಟಿಗಟ್ಟಲೆ ಮನೆಗಳನ್ನು ವಿದ್ಯುದ್ದೀಕರಿಸುವ ಮೂಲಕ 100 ಪ್ರತಿಶತ ವಿದ್ಯುತ್ ವ್ಯಾಪ್ತಿ ಸಾಧಿಸಲಾಗಿದೆ. "ಭಾರತವು ಕೇವಲ ತನ್ನ ಅಗತ್ಯಗಳನ್ನು ಪೂರೈಸುವ ಜತೆಗೆ, ಜಾಗತಿಕ ದಿಕ್ಕನ್ನು ಸಹ ನಿರ್ಧರಿಸುತ್ತಿದೆ" ಎಂದು ಪ್ರಧಾನಮಂತ್ರಿ ಹೇಳಿದರು.

ಅಭೂತಪೂರ್ವ ಮೂಲಸೌಕರ್ಯ ಉತ್ತೇಜನ ಪ್ರಸ್ತಾಪಿಸಿದ ಪ್ರಧಾನಿ, ಇತ್ತೀಚಿನ ಬಜೆಟ್‌ನಲ್ಲಿ ಮೂಲಸೌಕರ್ಯಕ್ಕಾಗಿ ವಾಗ್ದಾನ ಮಾಡಲಾದ 11 ಲಕ್ಷ ಕೋಟಿ ರೂಪಾಯಿ ಒದಗಿಸಲಾಗಿದೆ. ಅದರಲ್ಲಿ ಹೆಚ್ಚಿನ ಭಾಗವು ಇಂಧನ ಕ್ಷೇತ್ರಕ್ಕೆ ಹೋಗುತ್ತದೆ. ಈ ಮೊತ್ತವು ರೈಲ್ವೆಗಳು, ರಸ್ತೆ ಮಾರ್ಗಗಳು, ಜಲಮಾರ್ಗಗಳು, ವಾಯು ಮಾರ್ಗಗಳು ಅಥವಾ ವಸತಿಗಳಲ್ಲಿ ಸ್ವತ್ತುಗಳನ್ನು ಸೃಷ್ಟಿಸುತ್ತದೆ, ಇದು ತನ್ನ ಇಂಧನ ಸಾಮರ್ಥ್ಯವನ್ನು ವಿಸ್ತರಿಸುವ ಭಾರತದ ಪ್ರಯತ್ನಗಳಿಗೆ ಇಂಧನ ಅಗತ್ಯವಿರುತ್ತದೆ. ಸರ್ಕಾರದ ಸುಧಾರಣೆಗಳಿಂದಾಗಿ ದೇಶೀಯ ಅನಿಲ ಉತ್ಪಾದನೆ ಹೆಚ್ಚುತ್ತಿದೆ. ಪ್ರಾಥಮಿಕ ಇಂಧನ ಮಿಶ್ರಣದಲ್ಲಿ ಅನಿಲದ ಶೇಕಡಾವಾರು ಪ್ರಮಾಣವನ್ನು 6ರಿಂದ 15 ಪ್ರತಿಶತಕ್ಕೆ ಕೊಂಡೊಯ್ಯಲು ದೇಶವು ಪ್ರಯತ್ನಗಳನ್ನು ಮಾಡುತ್ತಿದೆ. ಇದು ಮುಂದಿನ 5-6 ವರ್ಷಗಳಲ್ಲಿ ಸುಮಾರು 67 ಬಿಲಿಯನ್ ಡಾಲರ್ ಹೂಡಿಕೆ ಹರಿದುಬರಲಿದೆ ಎಂದು ಅವರು ಮಾಹಿತಿ ನೀಡಿದರು.

ಭಾರತದ ಪುರಾತನ ಸಂಪ್ರದಾಯಗಳ ಭಾಗವಾಗಿರುವ ಹಸಿರು ಆರ್ಥಿಕತೆ ಮತ್ತು ಮರುಬಳಕೆಯ ಪರಿಕಲ್ಪನೆಯ ಮೇಲೆ ಬೆಳಕು ಚೆಲ್ಲಿದ ಪ್ರಧಾನಿ, ಇದು ಇಂಧನ ಕ್ಷೇತ್ರಕ್ಕೂ ಅನ್ವಯಿಸುತ್ತದೆ. ಈ ನಂಬಿಕೆಯನ್ನು ಜಾಗತಿಕ ಜೈವಿಕ ಇಂಧನ ಒಕ್ಕೂಟವು ಸಂಕೇತಿಸುತ್ತದೆ. ಇದು ವಿಶ್ವಾದ್ಯಂತದ ಸರ್ಕಾರಗಳು, ಸಂಸ್ಥೆಗಳು ಮತ್ತು ಕೈಗಾರಿಕೆಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುತ್ತದೆ. ಭಾರತದಲ್ಲಿ ನಡೆದ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಪ್ರಾರಂಭವಾದ ಒಕ್ಕೂಟದಿಂದ ಪಡೆದ ಸಮಗ್ರ ಬೆಂಬಲ ವ್ಯಕ್ತವಾಗಿದೆ. 22 ರಾಷ್ಟ್ರಗಳು ಮತ್ತು 12 ಅಂತಾರಾಷ್ಟ್ರೀಯ ಸಂಸ್ಥೆಗಳು ಜಗತ್ತಿನಲ್ಲಿ ಜೈವಿಕ ಇಂಧನಗಳ ಬಳಕೆ ಪ್ರೋತ್ಸಾಹಿಸಲು ಮುಂದೆ ಬಂದಿವೆ ಮತ್ತು 500 ಶತಕೋಟಿ ಡಾಲರ್ ಮೌಲ್ಯದ ಆರ್ಥಿಕ ಅವಕಾಶಗಳನ್ನು ಸೃಷ್ಟಿಸಿವೆ ಎಂದರು.

ಜೈವಿಕ ಇಂಧನ ಕ್ಷೇತ್ರದಲ್ಲಿ ಭಾರತದ ಪ್ರಗತಿಯನ್ನು ಎತ್ತಿ ತೋರಿಸಿದ ಪ್ರಧಾನಿ, ಎಥೆನಾಲ್ ಮಿಶ್ರಣವು 2014ರಲ್ಲಿ ಇದ್ದ 1.5 ಪ್ರತಿಶತವು 2023ರಲ್ಲಿ 12 ಪ್ರತಿಶತಕ್ಕೆ ಗಮನಾರ್ಹ ಏರಿಕೆ ಕಂಡಿದೆ. ಇದು ಇಂಗಾಲದ ಹೊರಸೂಸುವಿಕೆಯಲ್ಲಿ ಸುಮಾರು 42 ದಶಲಕ್ಷ ಮೆಟ್ರಿಕ್ ಟನ್ ಕಡಿತಕ್ಕೆ ಕಾರಣವಾಗಿದೆ. 2025ರ ವೇಳೆಗೆ ಪೆಟ್ರೋಲ್‌ನಲ್ಲಿ ಶೇಕಡ 20ರಷ್ಟು ಎಥೆನಾಲ್ ಮಿಶ್ರಣ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಕಳೆದ ವರ್ಷ ಇಂಡಿಯಾ ಎನರ್ಜಿ ವೀಕ್‌ನಲ್ಲಿ 80ಕ್ಕೂ ಹೆಚ್ಚು ಚಿಲ್ಲರೆ ಮಳಿಗೆಗಳಲ್ಲಿ 20 ಪ್ರತಿಶತ ಎಥೆನಾಲ್ ಮಿಶ್ರಣ ಪ್ರಾರಂಭಿಸಿದ್ದನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, ಈಗ ಮಳಿಗೆಗಳ ಸಂಖ್ಯೆ 9,000ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದರು.

ತ್ಯಾಜ್ಯದಿಂದ ಸಂಪತ್ತು ನಿರ್ವಹಣೆ ಮಾದರಿಯ ಮೂಲಕ ಗ್ರಾಮೀಣ ಆರ್ಥಿಕತೆ  ಪರಿವರ್ತಿಸುವ ಸರ್ಕಾರದ ಬದ್ಧತೆಯನ್ನು ವಿವರಿಸಿದ ಪ್ರಧಾನಿ, ಸುಸ್ಥಿರ ಅಭಿವೃದ್ಧಿಯತ್ತ ಸರ್ಕಾರ ಪ್ರಯತ್ನ ನಡೆಸುತ್ತಿದೆ. "ಭಾರತದಲ್ಲಿ 5000 ಜೈವಿಕ ಅನಿಲ ಸ್ಥಾವರಗಳ ಸ್ಥಾಪನೆಗೆ ನಾವು ಕೆಲಸ ಮಾಡುತ್ತಿದ್ದೇವೆ" ಎಂದು ಘೋಷಿಸಿದರು. ಜಾಗತಿಕ ಪರಿಸರ ಕಾಳಜಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ವಿಶ್ವದ ಜನಸಂಖ್ಯೆಯ 17%ರಷ್ಟಕ್ಕೆ ಭಾರತ ನೆಲೆಯಾಗಿದ್ದರೂ, ಭಾರತದ ಇಂಗಾಲದ ಹೊರಸೂಸುವಿಕೆ ಪಾಲು ಕೇವಲ 4% ಆಗಿದೆ". ಪರಿಸರ ಸೂಕ್ಷ್ಮ ಇಂಧನ ಮೂಲಗಳ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ನಮ್ಮ ಇಂಧನ ಮಿಶ್ರಣವನ್ನು ಇನ್ನಷ್ಟು ಸುಧಾರಿಸಲು ನಾವು ಬದ್ಧರಾಗಿದ್ದೇವೆ. 2070ರ ವೇಳೆಗೆ ನಿವ್ವಳ ಶೂನ್ಯ ಹೊರಸೂಸುವಿಕೆ ಸಾಧಿಸುವ ಭಾರತದ ಗುರಿಯನ್ನು ಪ್ರಧಾನಿ ಪುನರುಚ್ಚರಿಸಿದರು.

ನವೀಕರಿಸಬಹುದಾದ ಇಂಧನ ಮೂಲಗಳ ಸ್ಥಾಪಿತ ಸಾಮರ್ಥ್ಯದಲ್ಲಿ ಇಂದು ಭಾರತವು ವಿಶ್ವದಲ್ಲಿ 4ನೇ ಸ್ಥಾನದಲ್ಲಿದೆ. ಭಾರತದ ಸ್ಥಾಪಿತ ಸಾಮರ್ಥ್ಯದ 40 ಪ್ರತಿಶತವು ಉರವಲುಯೇತರ ಇಂಧನ ಮೂಲಗಳಿಂದ ಬರುತ್ತದೆ. ಸೌರಶಕ್ತಿಯಲ್ಲಿ ರಾಷ್ಟ್ರದ ಪ್ರಗತಿಯನ್ನು ಎತ್ತಿ ಹಿಡಿದ ಪ್ರಧಾನಿ ಮೋದಿ, "ಕಳೆದ ದಶಕದಲ್ಲಿ ಭಾರತದ ಸೌರಶಕ್ತಿ ಸ್ಥಾಪಿತ ಸಾಮರ್ಥ್ಯವು 20 ಪಟ್ಟು ಹೆಚ್ಚು ಬೆಳೆದಿದೆ". "ಸೌರಶಕ್ತಿಯೊಂದಿಗೆ ಸಂಪರ್ಕ ಸಾಧಿಸುವ ಅಭಿಯಾನವು ಭಾರತದಲ್ಲಿ ವೇಗ ಪಡೆಯುತ್ತಿದೆ" ಎಂದರು.

ಭಾರತದಾದ್ಯಂತ 1 ಕೋಟಿ ಮನೆಗಳಲ್ಲಿ ಸೌರ ಮೇಲ್ಛಾವಣಿ ಫಲಕಗಳನ್ನು ಸ್ಥಾಪಿಸುವ ಗುರಿ ಹೊಂದಿರುವ ಪ್ರಮುಖ ಮಿಷನ್‌ನ ಪ್ರಾರಂಭವು 1 ಕೋಟಿ ಕುಟುಂಬಗಳನ್ನು ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯನ್ನಾಗಿ ಮಾಡುವುದಲ್ಲದೆ, ಉತ್ಪಾದಿಸುವ ಹೆಚ್ಚುವರಿ ವಿದ್ಯುತ್ ಅನ್ನು ಗ್ರಿಡ್ ಮೂಲಕ ನೇರವಾಗಿ ತಲುಪಿಸಲು ಕಾರ್ಯವಿಧಾನಗಳನ್ನು ಸ್ಥಾಪಿಸುತ್ತದೆ.. ಈ ಉಪಕ್ರಮಗಳು ಪರಿವರ್ತನೀಯ ಪರಿಣಾಮಗಳನ್ನು ಉಂಟು ಮಾಡಲಿವೆ. "ಇಡೀ ಸೌರಶಕ್ತಿ ಉತ್ಪಾದನೆಯ ಮೌಲ್ಯ ಸರಪಳಿಯಲ್ಲಿ ಹೂಡಿಕೆಗೆ ಹೆಚ್ಚಿನ ಸಾಮರ್ಥ್ಯವಿದೆ" ಎಂದರು.

ಹಸಿರು ಹೈಡ್ರೋಜನ್ ವಲಯದಲ್ಲಿ ಭಾರತದ ಪ್ರಗತಿ ಪ್ರಸ್ತಾಪಿಸಿದ ಪ್ರಧಾನ ಮಂತ್ರಿ ಅವರು, ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಸ್ಥಾಪಿಸಲಾಗಿದ್ದು, ಇದು ಭಾರತವು ಹೈಡ್ರೋಜನ್ ಉತ್ಪಾದನೆ ಮತ್ತು ರಫ್ತಿನ ಕೇಂದ್ರವಾಗಲು ದಾರಿ ಮಾಡಿಕೊಡುತ್ತದೆ. ಭಾರತದ ಹಸಿರು ಇಂಧನ ವಲಯವು ಹೂಡಿಕೆದಾರರು ಮತ್ತು ಕೈಗಾರಿಕೆಗಳೆರಡನ್ನೂ ಖಚಿತವಾಗಿ ವಿಜೇತರನ್ನಾಗಿ ಮಾಡುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇಂಡಿಯಾ ಎನರ್ಜಿ ವೀಕ್ ಕಾರ್ಯಕ್ರಮವು ಇಂಧನ ಕ್ಷೇತ್ರದಲ್ಲಿ ಜಾಗತಿಕ ಸಹಕಾರಕ್ಕೆ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತಿದೆ. ಭಾರತ ಇಂಧನ ಸಪ್ತಾಹ ಕಾರ್ಯಕ್ರಮವು ಕೇವಲ ಭಾರತದ ಕಾರ್ಯಕ್ರಮವಲ್ಲ, ಆದರೆ ‘ವಿಶ್ವದೊಂದಿಗೆ ಭಾರತ ಮತ್ತು ವಿಶ್ವಕ್ಕಾಗಿ ಭಾರತ’ ಎಂಬ ಭಾವನೆಯ ಪ್ರತಿಬಿಂಬವಾಗಿದೆ.  ಸುಸ್ಥಿರ ಇಂಧನ ಅಭಿವೃದ್ಧಿಯಲ್ಲಿ ಸಹಯೋಗ ಮತ್ತು ಜ್ಞಾನ ಹಂಚಿಕೆಯನ್ನು ಪ್ರೋತ್ಸಾಹಿಸಿದ ಪ್ರಧಾನಿ, "ನಾವು ಪರಸ್ಪರ ಕಲಿಯೋಣ, ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಸಹಯೋಗ ಹೊಂದೋಣ, ಸುಸ್ಥಿರ ಇಂಧನ ಅಭಿವೃದ್ಧಿಯ ಮಾರ್ಗಗಳನ್ನು ಅನ್ವೇಷಿಸೋಣ" ಎಂದರು.

ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವ ಸಮೃದ್ಧ ಭವಿಷ್ಯ ನಿರ್ಮಿಸುವ ಬಗ್ಗೆ ಪ್ರಧಾನಿ ಮೋದಿ ಆಶಾವಾದ ವ್ಯಕ್ತಪಡಿಸಿದರು. ಒಟ್ಟಾಗಿ ನಾವು ಸಮೃದ್ಧ ಮತ್ತು ಪರಿಸರ ಸುಸ್ಥಿರ ಭವಿಷ್ಯ ನಿರ್ಮಿಸಬಹುದು ಎಂದು ಅವರು ಹೇಳಿದರು.

ಸಮಾರಂಭದಲ್ಲಿ ಗೋವಾ ರಾಜ್ಯಪಾಲರಾದ ಶ್ರೀ ಪಿ ಎಸ್ ಶ್ರೀಧರನ್ ಪಿಳ್ಳೈ, ಗೋವಾದ ಮುಖ್ಯಮಂತ್ರಿ ಶ್ರೀ ಪ್ರಮೋದ್ ಸಾವಂತ್, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಮತ್ತು ಕೇಂದ್ರ ಪೆಟ್ರೋಲಿಯಂ, ತೈಲ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವ ಶ್ರೀ ರಾಮೇಶ್ವರ್ ತೇಲಿ ಉಪಸ್ಥಿತರಿದ್ದರು. 

ಹಿನ್ನೆಲೆ

ಇಂಧನ ಅಗತ್ಯತೆಗಳಲ್ಲಿ ಆತ್ಮನಿರ್ಭರ್ ಭಾರತ ನಿರ್ಮಾಣ ಕಾರ್ಯ ಸಾಧಿಸುವುದು ಪ್ರಧಾನ ಮಂತ್ರಿ ಅವರ ಪ್ರಮುಖ ಕೇಂದ್ರೀಕೃತ ಕ್ಷೇತ್ರವಾಗಿದೆ. ಈ ದಿಕ್ಕಿನಲ್ಲಿ ಮತ್ತೊಂದು ದಿಟ್ಟ ಹೆಜ್ಜೆಯಾಗಿ, ಇಂಡಿಯಾ ಎನರ್ಜಿ ವೀಕ್-2024 ಅನ್ನು ಫೆಬ್ರವರಿ 6 ರಿಂದ 9ರ ವರೆಗೆ ಗೋವಾದಲ್ಲಿ ಆಯೋಜಿಸಲಾಗಿದೆ. ಇದು ಭಾರತದ ಅತಿದೊಡ್ಡ ಮತ್ತು ಏಕೈಕ ಇಂಧನ ಪ್ರದರ್ಶನ ಮತ್ತು ಸಮ್ಮೇಳನವಾಗಿದೆ, ಇದು ಸಂಪೂರ್ಣ ಇಂಧನ ಮೌಲ್ಯ ಸರಪಳಿಯನ್ನು ಒಟ್ಟುಗೂಡಿಸುತ್ತದೆ, ಇದು ವೇಗವರ್ಧಕವಾಗಿ ಕಾರ್ಯ ನಿರ್ವಹಿಸುತ್ತದೆ. ಭಾರತದ ಇಂಧನ ಪರಿವರ್ತನೆ ಗುರಿಗಳಿಗಾಗಿ. ಪ್ರಧಾನ ಮಂತ್ರಿ ಅವರು ಜಾಗತಿಕ ತೈಲ ಮತ್ತು ಅನಿಲ ವಲಯದ ಕಂಪನಿಗಳ ಸಿಇಒಗಳು ಮತ್ತು ತಜ್ಞರೊಂದಿಗೆ ದುಂಡುಮೇಜಿನ ಸಭೆ ನಡೆಸಿದರು.

ಸ್ಟಾರ್ಟಪ್‌ಗಳನ್ನು ಉತ್ತೇಜಿಸುವುದು ಮತ್ತು ಬೆಳೆಸುವುದು, ಅವುಗಳನ್ನು ಇಂಧನ ಮೌಲ್ಯ ಸರಪಳಿಯಲ್ಲಿ ಸಂಯೋಜಿಸುವುದು ಭಾರತದ ಎನರ್ಜಿ ವೀಕ್-2024ರ ಪ್ರಮುಖ ಗಮನವಾಗಿದೆ. ವಿವಿಧ ದೇಶಗಳ ಸುಮಾರು 17 ಇಂಧನ ಸಚಿವರು, 35,000+ ಪ್ರತಿನಿಧಿಗಳು ಮತ್ತು 900ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸುವ ನಿರೀಕ್ಷೆಯಿದೆ. ಇದು 6 ಮೀಸಲಾದ ದೇಶದ ಮಂಟಪಗಳನ್ನು ಹೊಂದಿದೆ. ಅವುಗಳೆಂದರೆ - ಕೆನಡಾ, ಜರ್ಮನಿ, ನೆದರ್ಲ್ಯಾಂಡ್ಸ್, ರಷ್ಯಾ, ಯುಕೆ ಮತ್ತು ಯುಎಸ್ಎ. ಭಾರತೀಯ ಎಂಎಸ್‌ಎಂಇಗಳು ಇಂಧನ ವಲಯದಲ್ಲಿ ಮುನ್ನಡೆಸುತ್ತಿರುವ ನವೀನ ಪರಿಹಾರಗಳನ್ನು ಪ್ರದರ್ಶಿಸಲು ವಿಶೇಷ ಮೇಕ್ ಇನ್ ಇಂಡಿಯಾ ಪೆವಿಲಿಯನ್ ಅನ್ನು ಸಹ ಆಯೋಜಿಸಲಾಗಿದೆ.

*****



(Release ID: 2003023) Visitor Counter : 84