ಗಣಿ ಸಚಿವಾಲಯ
azadi ka amrit mahotsav

ನಿರ್ಣಾಯಕ ಮತ್ತು ವ್ಯೂಹಾತ್ಮಕ ಖನಿಜಗಳಲ್ಲಿ ಸ್ವಾವಲಂಬನೆ ಸಾಧಿಸಲು ಕೈಗೊಂಡ ಉಪಕ್ರಮಗಳು

Posted On: 18 DEC 2023 3:36PM by PIB Bengaluru

ನಿರ್ಣಾಯಕ ಮತ್ತು ವ್ಯೂಹಾತ್ಮಕ (ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯ ಇಲ್ಲದಿರುವ ಮತ್ತು ಆಮದು ಮಾಡಿಕೊಳ್ಳಬೇಕಾಗಿರುವ ಖನಿಜಗಳನ್ನು ಕ್ರಿಟಿಕಲ್ ಮತ್ತು ಸ್ಟ್ರಾಟೆಜಿಕ್ ಖನಿಜಗಳೆಂದು ವ್ಯಾಖ್ಯಾನಿಸಲಾಗುತ್ತದೆ)   ಖನಿಜಗಳನ್ನು ಗುರುತಿಸಲು ಗಣಿ ಸಚಿವಾಲಯವು 01.11.2022 ರಂದು ಸಮಿತಿಯನ್ನು ರಚಿಸಿತ್ತು. ಸಮಿತಿಯು ತನ್ನ ವರದಿಯಲ್ಲಿ, 30 ಖನಿಜಗಳನ್ನು ಅವುಗಳ ಆರ್ಥಿಕ ಪ್ರಾಮುಖ್ಯತೆ ಮತ್ತು ಭಾರತದ ಆದ್ಯತೆಗಳಿಗೆ ಹೋಲಿಸಿದರೆ ಪೂರೈಕೆ ಅಪಾಯ (ಲಭ್ಯತೆ ಕಡಿಮೆ ಇರುವುದು)  ಮತ್ತು ಇಂಧನ ಪರಿವರ್ತನೆಯ ಭವಿಷ್ಯದ ಅಗತ್ಯವನ್ನು ಪರಿಗಣಿಸಿ ನಿರ್ಣಾಯಕ ಮತ್ತು ವ್ಯೂಹಾತ್ಮಕ  ಖನಿಜಗಳಾಗಿ ಗುರುತಿಸಿದೆ. ಸಮಿತಿಯು ಗುರುತಿಸಿದ ಈ 30 ಖನಿಜಗಳಲ್ಲಿ ತಾಮ್ರವೂ ಒಂದು, ಅದರ ಆರ್ಥಿಕ ಪ್ರಾಮುಖ್ಯತೆಯನ್ನು ಪರಿಗಣಿಸಿ ತಾಮ್ರಕ್ಕೆ ಈ ಸ್ಥಾನ ಮಾನ ನೀಡಲಾಗಿದೆ.  

ಕೇಂದ್ರ ಸರ್ಕಾರವು ಇತ್ತೀಚೆಗೆ ಅಂದರೆ 29.11.2023 ರಂದು ತಾಮ್ರ, ಲಿಥಿಯಂ, ಆರ್.ಇ.ಇ.ಗಳು, ಪ್ಲಾಟಿನಂ ಗುಂಪಿನ ಖನಿಜಗಳು, ನಿಕ್ಕೆಲ್, ಪೊಟ್ಯಾಷ್ ಇತ್ಯಾದಿಗಳನ್ನು ಒಳಗೊಂಡಿರುವ ನಿರ್ಣಾಯಕ ಮತ್ತು ವ್ಯೂಹಾತ್ಮಕ  ಖನಿಜಗಳ 20 ಬ್ಲಾಕ್ ಗಳ  ಮೊದಲ ಕಂತಿನ ಇ-ಹರಾಜನ್ನು ಪ್ರಾರಂಭಿಸಿದೆ.

ಸರ್ಫಿಶಿಯಲ್-ಭೂಮಿಯ ಮೇಲ್ಮೈ ಪದರದಲ್ಲಿ ಲಭ್ಯವಾಗುವ (ಭೂಮಿಯ ಮೇಲ್ಮೈಯಲ್ಲಿ ರಾಸಾಯನಿಕ ಕ್ರಿಯೆಯ ಮೂಲಕ ರೂಪುಗೊಳ್ಳುವ ಖನಿಜಗಳು -ಕೆರೆ ಬದಿ ಮತ್ತು ಸಮುದ್ರ ದಡದಲ್ಲಿ ಲಭ್ಯವಾಗುವ ಭೂಮಿಯ  ಮೇಲ್ಮೈ ಮಟ್ಟದ ಖನಿಜಗಳು) ಅಥವಾ ಬೃಹತ್ ಪ್ರಮಾಣದಲ್ಲಿ ಲಭ್ಯವಾಗುವ ಖನಿಜಗಳಿಗೆ ಹೋಲಿಸಿದರೆ ತಾಮ್ರ, ಚಿನ್ನ, ಬೆಳ್ಳಿ, ಕೋಬಾಲ್ಟ್, ಲಿಥಿಯಂ ಮತ್ತು ನಿಕ್ಕೆಲ್ ನಂತಹ ನಿರ್ಣಾಯಕ ಮತ್ತು ಭೂಮಿಯ ಆಳದಲ್ಲಿ ಲಭ್ಯವಾಗುವ  ಖನಿಜಗಳನ್ನು ಅನ್ವೇಷಿಸುವುದು ಮತ್ತು ಅವುಗಳ ಗಣಿಗಾರಿಕೆ ಮಾಡುವುದು ಕಷ್ಟ.   ದೇಶದಲ್ಲಿ ತಾಮ್ರದ ನಿಕ್ಷೇಪಗಳು / ಸಂಪನ್ಮೂಲಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯ ಇರದೇ ಇರುವುದರಿಂದ  ಭಾರತವು ತಾಮ್ರದ ಅದಿರು ಮತ್ತು ಅದರ ಕಾನ್ಸಂಟ್ರೇಟ್ (ಈ ಖನಿಜದ ಸಾಂದ್ರತೆಯ ಪ್ರಮಾಣ ಹೆಚ್ಚು ಇರುವ ಅದಿರು)ನ್ನು ಸದಾ ಕಾಲ ಆಮದು ಮಾಡುವ   ಆಮದುದಾರನಾಗಿದೆ. ಸಂಸ್ಕರಿಸಿದ ತಾಮ್ರದ ಉತ್ಪಾದನೆಯಲ್ಲಿ ತಾಮ್ರದ ಸಾಂದ್ರತೆಯು ಹೆಚ್ಚು ಪ್ರಮಾಣದಲ್ಲಿರುವ ಅದಿರು/ಖನಿಜಗಳನ್ನು  ಕಚ್ಚಾ ವಸ್ತುವಾಗಿ ಬಳಸಲಾಗುತ್ತದೆ, ಇದರಲ್ಲಿ ಭಾರತವು ಬಹಳ ದೃಢವಾದ ಶಕ್ತಿ-ಸಾಮರ್ಥ್ಯವನ್ನು ಹೊಂದಿದೆ. ಕಳೆದ ಎರಡು ವರ್ಷಗಳಲ್ಲಿ ತಾಮ್ರದ ಸಂಸ್ಕರಣೆಯಲ್ಲಿ ಹೆಚ್ಚಿದ ಬೇಡಿಕೆ, ಜಾಗತಿಕ ಸಾಂಕ್ರಾಮಿಕ ರೋಗದ ನಂತರದ ಚೇತರಿಕೆಯನ್ನು ಪ್ರತಿಬಿಂಬಿಸುತ್ತದೆ ಮತ್ತು  ವಿಶೇಷವಾಗಿ ಮೂಲಸೌಕರ್ಯ, ನಿರ್ಮಾಣ, ಟೆಲಿಕಾಂ, ವಿದ್ಯುತ್, ನವೀಕರಿಸಬಹುದಾದ ಇಂಧನ ಮತ್ತು ಎಲೆಕ್ಟ್ರಿಕ್ ವಾಹನಗಳಂತಹ ಬಳಕೆದಾರ ಕ್ಷೇತ್ರಗಳಲ್ಲಿನ ಬೆಳವಣಿಗೆಯಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಆಮದು ಪ್ರಮಾಣದಲ್ಲಿ ಕೂಡಾ ಹೆಚ್ಚಳವಾಗಿದೆ.

ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ, 2023 ರ ಮೂಲಕ ತಾಮ್ರ ಸೇರಿದಂತೆ ಭೂಮಿಯ ಆಳದಲ್ಲಿ ಲಭ್ಯವಾಗುವ 29 ಭೂಮಿಯಾಳದ  ಖನಿಜಗಳು ಮತ್ತು ವ್ಯೂಹಾತ್ಮಕ/ಸಂಕೀರ್ಣ   ಖನಿಜಗಳಿಗೆ ಪರಿಶೋಧನಾ/ಅನ್ವೇಷಣಾ ಪರವಾನಗಿ ಎಂಬ ಹೊಸ ಖನಿಜ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.  ಇದರ ಅಡಿಯಲ್ಲಿ ಪರವಾನಗಿದಾರರು ನಿರ್ಣಾಯಕ ಮತ್ತು ಭೂಮಿಯಾಳದಲ್ಲಿ ಇರುವ  ಖನಿಜಗಳ ಪತ್ತೆ  ಮತ್ತು ಅವುಗಳ ಲಭ್ಯತೆಯ ಶೋಧ  ಕಾರ್ಯಾಚರಣೆಗಳನ್ನು ಕೈಗೊಳ್ಳಲು ಅನುಮತಿಸಲಾಗುತ್ತದೆ, ಈ ವ್ಯವಸ್ಥೆ ಇಲ್ಲದಿದ್ದರೆ ಖನಿಜಗಳ ಶೋಧ ಅಥವಾ ಅನ್ವೇಷಣೆ ನಡೆಸುವುದು  ಮತ್ತು ಗಣಿಗಾರಿಕೆ ಮಾಡುವುದು  ತ್ರಾಸದಾಯಕವಾಗುತ್ತದೆ.  ನಿರ್ಣಾಯಕ ಖನಿಜಗಳ ಪರಿಶೋಧನೆಯಲ್ಲಿ ಸುಧಾರಿತ ಆಧುನಿಕ  ತಂತ್ರಜ್ಞಾನ, ಹಣಕಾಸು ಮತ್ತು ಪರಿಣತಿಯನ್ನು ತರಲು ಖಾಸಗಿ ಏಜೆನ್ಸಿಗಳ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಗುರಿಯನ್ನು ಪರಿಶೋಧನಾ ಪರವಾನಗಿ ವ್ಯವಸ್ಥೆಯು ಹೊಂದಿದೆ.  ಇದಲ್ಲದೆ, ಪ್ರಾಸ್ಪೆಕ್ಟಿಂಗ್ /ಖನಿಜ ಲಭ್ಯತೆ ಶೋಧನಾ ಪರವಾನಗಿ ಇಲ್ಲದೇ ಇರುವ  ಮಾನ್ಯತೆ ಪಡೆದ ಖಾಸಗಿ ಪರಿಶೋಧನಾ ಏಜೆನ್ಸಿಗಳು ರಾಷ್ಟ್ರೀಯ ಖನಿಜ ಪರಿಶೋಧನಾ ಟ್ರಸ್ಟ್ ಅಡಿಯಲ್ಲಿ ಧನಸಹಾಯಕ್ಕೆ ಅರ್ಹವಾಗಿರುತ್ತವೆ. ಈ  ಮೇಲಿನ ಕ್ರಮಗಳು ತಾಮ್ರದ ಖನಿಜದ ದೇಶೀಯ ಲಭ್ಯತೆಯನ್ನು ಹೆಚ್ಚಿಸಲು ಮತ್ತು ಅದರ ಆಮದನ್ನು ಕಡಿಮೆ ಮಾಡಲು ಉದ್ದೇಶಿಸಿವೆ.  ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದರು.

******
 


(Release ID: 1987790)