ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಹರಿಯಾಣ ಸರ್ಕಾರ 9 ವರ್ಷಗಳನ್ನು ಪೂರೈಸಿದ ಸಂದರ್ಭದ ಅಂಗವಾಗಿ ಕರ್ನಾಲ್‌ ನಲ್ಲಿ ಆಯೋಜಿಸಲಾದ 'ಅಂತ್ಯೋದಯ ಮಹಾಸಮ್ಮೇಳನ'ದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು


ಕೇಂದ್ರ ಗೃಹ ಸಚಿವರು 5 ಸಾರ್ವಜನಿಕ ಕಲ್ಯಾಣ ಯೋಜನೆಗಳಿಗೆ - ಮುಖ್ಯ ಮಂತ್ರಿ ತೀರ್ಥ ಯಾತ್ರಾ ಯೋಜನೆ, ಆಯುಷ್ಮಾನ್ ಭಾರತ್ ಚಿರಾಯು ಯೋಜನೆ, ಹರಿಯಾಣ ಆಯ್ ವೃದ್ಧಿ ಮಂಡಳಿ, ಮುಖ್ಯಮಂತ್ರಿ ಅಂತ್ಯೋದಯ ಹಾಲು ಉತ್ಪಾದನಾ ಸಹಕಾರಿ ಉತ್ತೇಜನ ಯೋಜನೆ ಮತ್ತು ಹ್ಯಾಪಿ ಅಂದರೆ ಹರಿಯಾಣ ಅಂತ್ಯೋದಯ ಪರಿವಾರ ಪರಿವಾಹನ ಯೋಜನೆ- ಚಾಲನೆ ನೀಡಿದರು

ಕೇಂದ್ರದಲ್ಲಿ ಶ್ರೀ ಮೋದಿ ನೇತೃತ್ವದ ಸರ್ಕಾರ ಮತ್ತು ಹರಿಯಾಣದಲ್ಲಿ ಶ್ರೀ ಮನೋಹರ್ ಲಾಲ್ ನೇತೃತ್ವದ ಸರ್ಕಾರವು ಹರಿಯಾಣದ 45 ಲಕ್ಷ ಜನರ ಜೀವನದಲ್ಲಿ ಭರವಸೆಯ ಹೊಸ ಬೆಳಕು ತಂದಿದೆ

ಸಾಕ್ಷರ ಪಂಚಾಯತಿಗಳಾಗಲಿ, ಶೇ.50ರಷ್ಟು ಮಹಿಳೆಯರ ಭಾಗವಹಿಸುವಿಕೆಯಾಗಲಿ, ಎಲ್ಲಾ ಮನೆಗಳಿಗೆ ಕುಡಿಯುವ ನೀರು ಒದಗಿಸುವುದಾಗಲಿ ಅಥವಾ ಮೊದಲ ಆಯುಷ್ ವಿಶ್ವವಿದ್ಯಾಲಯದ ನಿರ್ಮಾಣವಾಗಲಿ, ಶ್ರೀ ನರೇಂದ್ರ ಮೋದಿ ಮತ್ತು ಶ್ರೀ ಮನೋಹರ್ ಲಾಲ್ ಅವರು ಹರಿಯಾಣವನ್ನು ಪ್ರತಿ ಕ್ಷೇತ್ರದಲ್ಲೂ ನಂಬರ್ 1 ಮಾಡಲು ಶ್ರಮಿಸಿದ್ದಾರೆ

ಹರಿಯಾಣ ಸರ್ಕಾರವು ಗರಿಷ್ಠ ಸಂಖ್ಯೆಯ ಬೆಳೆಗಳನ್ನು ಅಂದರೆ 14 ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂ ಎಸ್‌ ಪಿ) ಖರೀದಿಸುತ್ತಿದೆ

ಈ ಹಿಂದೆ ಹರಿಯಾಣದಲ್ಲಿ ಭಯ, ಹಸಿವು, ಭ್ರಷ್ಟಾಚಾರದ ಆಡಳಿತವಿತ್ತು, ಭೂಮಿ ಹರಾಜು ಮಾಡಲಾಗಿತ್ತು ಮತ್ತು ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು, ಆದರೆ ಡಬಲ್ ಇಂಜಿನ್ ಸರ್ಕಾರ ಹರಿಯಾಣವನ್ನು ಅಭಿವೃದ್ಧಿ ಹೊಂದಿದ ಮತ್ತು ಸಮೃದ್ಧ ರಾಜ್ಯವನ್ನಾಗಿ ಮಾಡಲು ಶ್ರಮಿಸಿದೆ

Posted On: 02 NOV 2023 5:07PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಕರ್ನಾಲ್‌ ನಲ್ಲಿ ಮುಖ್ಯ ಅತಿಥಿಯಾಗಿ ಹರಿಯಾಣ ಸರ್ಕಾರ 9 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಆಯೋಜಿಸಲಾದ 'ಅಂತ್ಯೋದಯ ಮಹಾಸಮ್ಮೇಳನ'ವನ್ನು ಉದ್ದೇಶಿಸಿ ಮಾತನಾಡಿದರು. ಕೇಂದ್ರ ಗೃಹ ಸಚಿವರು ಈ ಸಂದರ್ಭದಲ್ಲಿ 5 ಸಾರ್ವಜನಿಕ ಕಲ್ಯಾಣ ಯೋಜನೆಗಳಿಗೆ - ಮುಖ್ಯ ಮಂತ್ರಿ ತೀರ್ಥ ಯಾತ್ರಾ ಯೋಜನೆ, ಆಯುಷ್ಮಾನ್ ಭಾರತ್ ಚಿರಾಯು ಯೋಜನೆ, ಹರಿಯಾಣ ಆಯ್ ವೃದ್ಧಿ ಮಂಡಳಿ, ಮುಖ್ಯಮಂತ್ರಿ ಅಂತ್ಯೋದಯ ಹಾಲು ಉತ್ಪಾದನಾ ಸಹಕಾರಿ ಉತ್ತೇಜನ ಯೋಜನೆ ಮತ್ತು ಹ್ಯಾಪಿ ಅಂದರೆ ಹರಿಯಾಣ ಅಂತ್ಯೋದಯ ಪರಿವಾರ ಪರಿವಾಹನ ಯೋಜನೆ- ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹರಿಯಾಣ ಮುಖ್ಯಮಂತ್ರಿ ಶ್ರೀ ಮನೋಹರ್ ಲಾಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

https://static.pib.gov.in/WriteReadData/userfiles/image/image001KS0D.jpg

ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ ಹರಿಯಾಣವು ರೈತರು ಮತ್ತು ಧೈರ್ಯಶಾಲಿಗಳ ನಾಡು ಎಂದು ಹೇಳಿದರು. ಹರಿಯಾಣವು ದೇಶಕ್ಕಾಗಿ ಗರಿಷ್ಠ ಸಂಖ್ಯೆಯ ಹುತಾತ್ಮರು ಅತ್ಯುನ್ನತ ತ್ಯಾಗ ಮಾಡಿದರು ಮೊದಲ ರಾಜ್ಯವಾಗಿದೆ, ಕೃಷಿ ಮತ್ತು ಹೈನುಗಾರಿಕೆ ಕ್ಷೇತ್ರದಲ್ಲೂ ರಾಜ್ಯ ಹೊಸ ದಾಖಲೆ ಸೃಷ್ಟಿಸಿದೆ ಎಂದರು.

ಇಂದು 5 ಜನಕಲ್ಯಾಣ ಯೋಜನೆಗಳನ್ನು ಪ್ರಾರಂಭಿಸಲಾಗಿದೆ ಮತ್ತು ಅವುಗಳಲ್ಲಿ ಒಂದು ಮುಖ್ಯ ಮಂತ್ರಿ ತೀರ್ಥ ಯಾತ್ರಾ ಯೋಜನೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ದೇಶದ ಜನತೆ ಶ್ರೀ ನರೇಂದ್ರ ಮೋದಿ ಅವರನ್ನು ಎರಡು ಬಾರಿ ಬಹುಮತದಿಂದ ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದಾರೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದ ಭೂಮಿಪೂಜೆಯನ್ನು ನೆರವೇರಿಸಿದರು ಮತ್ತು ಜನವರಿ 22, 2024 ರಂದು ಶ್ರೀ ಮೋದಿಯವರು ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆಯನ್ನು ನೆರವೇರಿಸಲಿದ್ದಾರೆ ಎಂದು ಹೇಳಿದರು.. ಮುಖ್ಯಮಂತ್ರಿ ತೀರ್ಥ ಯಾತ್ರಾ ಯೋಜನೆಯಡಿ ರಾಮ ಲಲ್ಲಾನ ದರ್ಶನಕ್ಕೆ ಮೊದಲು ತಮ್ಮ ಕುಟುಂಬದ ಹಿರಿಯರನ್ನು ಕರೆದೊಯ್ಯುವಂತೆ ಅವರು ಹರಿಯಾಣದ ನಾಗರಿಕರನ್ನು ವಿನಂತಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಭಾರತ ಸರ್ಕಾರ ಮತ್ತು ಶ್ರೀ ಮನೋಹರ್ ಲಾಲ್ ಅವರ ನೇತೃತ್ವದ ಹರಿಯಾಣ ಸರ್ಕಾರವು ಕಳೆದ 9 ವರ್ಷಗಳಲ್ಲಿ ದೇಶ ಮತ್ತು ಹರಿಯಾಣವನ್ನು ಪ್ರಗತಿಯತ್ತ ಕೊಂಡೊಯ್ಯುವ ಯಾವುದೇ ಅವಕಾಶವನ್ನು ಬಿಟ್ಟಿಲ್ಲ ಎಂದು ಶ್ರೀ ಅಮಿತ್ ಶಾ ಹೇಳಿದರು. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಕಳೆದ 9 ವರ್ಷಗಳಲ್ಲಿ ದೇಶದಲ್ಲಿ 7 ಐಐಟಿ, 7 ಐಐಎಂ, 15 ಎಐಐಎಂಎಸ್, 390 ವಿಶ್ವವಿದ್ಯಾಲಯಗಳು, 700 ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಲಾಗಿದೆ ಮತ್ತು 54 ಸಾವಿರ ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದರು. ಅದೇ ರೀತಿ ಹರಿಯಾಣದಲ್ಲಿ ಶ್ರೀ ಮನೋಹರ್ ಲಾಲ್ ಅವರು 77 ಹೊಸ ಕಾಲೇಜುಗಳು, 13 ಹೊಸ ವಿಶ್ವವಿದ್ಯಾಲಯಗಳು, 8 ವೈದ್ಯಕೀಯ ಕಾಲೇಜುಗಳು, 2 ಹೊಸ ವಿಮಾನ ನಿಲ್ದಾಣಗಳು, 16 ಹೊಸ ಆಸ್ಪತ್ರೆಗಳು ಮತ್ತು 28,000 ಕಿಲೋಮೀಟರ್‌ ಗಿಂತಲೂ ಹೆಚ್ಚು ರಸ್ತೆಗಳನ್ನು ನಿರ್ಮಿಸಿದ್ದಾರೆ. ಪ್ರತಿಪಕ್ಷಗಳು ನರೇಂದ್ರ ಮೋದಿ ಸರ್ಕಾರ ಮತ್ತು ಹರಿಯಾಣದ ಮನೋಹರ್ ಲಾಲ್ ಸರ್ಕಾರದಿಂದ ಅಭಿವೃದ್ಧಿಯನ್ನು ಹೇಗೆ ಮಾಡಬೇಕು ಎಂಬುದನ್ನು ಕಲಿಯಬೇಕು ಎಂದು ಅವರು ಹೇಳಿದರು.

https://static.pib.gov.in/WriteReadData/userfiles/image/image002IPSK.jpg

ಸರ್ಕಾರ ಅಥವಾ ರಾಜ್ಯದ ವಾರ್ಷಿಕೋತ್ಸವವನ್ನು ಆಚರಿಸಲು ಬಡ ಜನರ ಕಲ್ಯಾಣಕ್ಕಿಂತ ಉತ್ತಮವಾದ ಮಾರ್ಗವಿಲ್ಲ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಪಂಡಿತ್ ದೀನದಯಾಳ್ ಉಪಾಧ್ಯಾಯರು ಯಾವುದೇ ದೇಶ ಅಥವಾ ರಾಜ್ಯದ ಅಭಿವೃದ್ಧಿಯ ಮಾನದಂಡವೆಂದರೆ ಸಮಾಜದ ಅತ್ಯಂತ ಕೆಳವರ್ಗದ ಜನರ ಅಭಿವೃದ್ಧಿ ಎಂದು ಅಂತ್ಯೋದಯ ಮಂತ್ರವನ್ನು ನೀಡಿದ್ದಾರೆ ಎಂದು ಅವರು ಹೇಳಿದರು. ಶ್ರೀ ನರೇಂದ್ರ ಮೋದಿ ಮತ್ತು ಶ್ರೀ ಮನೋಹರ್ ಲಾಲ್ ಅವರ ಡಬಲ್ ಇಂಜಿನ್ ಸರ್ಕಾರವು ಹರಿಯಾಣದ 45 ಲಕ್ಷ ಜನರ ಜೀವನದಲ್ಲಿ ಬೆಳಕು ನೀಡುವ ಕೆಲಸ ಮಾಡಿರುವುದರಿಂದ ಇಂದಿನ ಅಂತ್ಯೋದಯ ಮಹಾಸಮ್ಮೇಳನ ಸೂಕ್ತವಾಗಿದೆ ಎಂದು ಹೇಳಿದರು. ಪ್ರಧಾನಿ ಮೋದಿ ಮತ್ತು ಶ್ರೀ ಮನೋಹರ್ ಲಾಲ್ ಅವರ ಪ್ರತಿಯೊಂದು ನಿರ್ಧಾರವು ಬಡವರ ಕಲ್ಯಾಣಕ್ಕಾಗಿದೆ ಮತ್ತು ರಾಜ್ಯ ಸರ್ಕಾರವು ರಾಜ್ಯದ 40 ಲಕ್ಷ ಜನರಿಗೆ ಪಡಿತರ ಚೀಟಿಗಳನ್ನು ನೀಡಿದೆ ಎಂದು ಶ್ರೀ ಶಾ ಹೇಳಿದರು. ನರೇಂದ್ರ ಮೋದಿ ಸರಕಾರವು 20 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ 6000 ರೂ.ಗಳನ್ನು ವರ್ಗಾಯಿಸುವ ಮೂಲಕ ರೈತರ ಕಲ್ಯಾಣಕ್ಕಾಗಿ ಪ್ರತಿ ವರ್ಷ 4500 ಕೋಟಿ ರೂ. ನೀಡುತ್ತಿದೆ. ಶ್ರೀ ಮನೋಹರ್ ಲಾಲ್ ಅವರು ರಾಜ್ಯದಲ್ಲಿ 30 ಲಕ್ಷಕ್ಕೂ ಹೆಚ್ಚು ನಲ್ಲಿ ಸಂಪರ್ಕಗಳನ್ನು ಮತ್ತು 85 ಲಕ್ಷಕ್ಕೂ ಹೆಚ್ಚು ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆ ಕಾರ್ಡ್‌ ಗಳನ್ನು ಒದಗಿಸಲು ಕೆಲಸ ಮಾಡಿದ್ದಾರೆ, ಇದರಲ್ಲಿ ಇಂದು 17 ಲಕ್ಷ ಜನರು ಆಯುಷ್ಮಾನ್ ಭಾರತ್ ಚಿರಾಯು ಯೋಜನೆಯಡಿ ಸೇರಿದ್ದಾರೆ ಎಂದು ಅವರು ಹೇಳಿದರು.

ನರೇಂದ್ರ ಮೋದಿ ಸರ್ಕಾರವು ಹರಿಯಾಣದಲ್ಲಿ 7.5 ಲಕ್ಷಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿದೆ ಮತ್ತು 1.2 ಕೋಟಿ ಜನರಿಗೆ ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ರಾಜ್ಯದಲ್ಲಿ 28,000 ಹೊಸ ಮನೆಗಳನ್ನು ನಿರ್ಮಿಸಲಾಗಿದೆ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉಜ್ವಲ ಯೋಜನೆಯಡಿ 8 ಲಕ್ಷ ಗ್ಯಾಸ್ ಸಂಪರ್ಕಗಳನ್ನು ನೀಡುವ ಮೂಲಕ ಹರಿಯಾಣವನ್ನು ಹೊಗೆ ಮುಕ್ತ ಮಾಡಿದ್ದಾರೆ ಎಂದು ಶ್ರೀ ಶಾ ಹೇಳಿದರು. ಬಡವರು ಮತ್ತು ಹಿಂದುಳಿದವರ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಹರಿಯಾಣದ ಮುಖ್ಯಮಂತ್ರಿಯವರು ಹೊಸ ವರ್ಷದಿಂದ ವೃದ್ಧಾಪ್ಯ ಮತ್ತು ವಿಕಲಚೇತನರ ಪಿಂಚಣಿ ಮೊತ್ತವನ್ನು ತಿಂಗಳಿಗೆ 2,725 ರೂ.ಗಳಿಂದ 3,000 ರೂ.ಗೆ ಹೆಚ್ಚಿಸಿದ್ದಾರೆ ಎಂದು ಅವರು ಹೇಳಿದರು.

https://static.pib.gov.in/WriteReadData/userfiles/image/image003HOB9.jpg

ಹರಿಯಾಣದ ಹೊಲ ಗದ್ದೆಗಳು ಆಹಾರ ಧಾನ್ಯಗಳ ರೂಪದಲ್ಲಿ ಚಿನ್ನವನ್ನು ಉತ್ಪಾದಿಸುತ್ತವೆ, ಹರಿಯಾಣದ ಆಟಗಾರರು ಕ್ರೀಡೆಗಳಲ್ಲಿ ಅನೇಕ ಪದಕಗಳನ್ನು ಗೆದ್ದಿದ್ದಾರೆ ಮತ್ತು ರಾಜ್ಯವು ದೇಶದ ಅತಿದೊಡ್ಡ ಅಕ್ಕಿ ರಫ್ತುದಾರನಾಗಿ ಹೊರಹೊಮ್ಮಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಭಾರತೀಯ ಸೇನೆಯ ಪ್ರತಿ ಹತ್ತರಲ್ಲಿ ಒಬ್ಬ ಸೈನಿಕರು ಹರಿಯಾಣದವರಾಗಿದ್ದಾರೆ ಮತ್ತು ಹರಿಯಾಣ ಸರ್ಕಾರವು ಗರಿಷ್ಠ ಸಂಖ್ಯೆಯ ಬೆಳೆಗಳನ್ನು ಅಂದರೆ 14 ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಗೆ (ಎಂ ಎಸ್‌ ಪಿ) ಖರೀದಿಸುತ್ತಿದೆ ಎಂದು ಅವರು ಹೇಳಿದರು. ಲಾಲ್ ದೋರಾ ಅಡಿಯಲ್ಲಿ ಭೂಮಿಯ ಮಾಲೀಕತ್ವದ ಹಕ್ಕುಗಳನ್ನು ಒದಗಿಸಿದ, ಸಾಕ್ಷರ ಪಂಚಾಯತಿಗಳನ್ನು ರಚಿಸಿದ ಮತ್ತು ಮಹಿಳೆಯರ ಶೇಕಡಾ 50 ರಷ್ಟು ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಂಡ ಮೊದಲ ರಾಜ್ಯ ಹರಿಯಾಣವಾಗಿದೆ ಎಂದು ಅವರು ಹೇಳಿದರು. ಎಲ್ಲಾ ಮನೆಗಳಿಗೆ ಕುಡಿಯುವ ನೀರು ಒದಗಿಸುವ ಮತ್ತು ದೇಶದ ಮೊದಲ ಆಯುಷ್ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದ ವಿಷಯದಲ್ಲೂ ಇದು ಮೊದಲ ಸ್ಥಾನದಲ್ಲಿದೆ. ಇಡೀ ದೇಶದಲ್ಲಿ ಹರಿಯಾಣವು ಅತಿ ಹೆಚ್ಚು ತಲಾವಾರು ಜಿ ಎಸ್‌ ಟಿ ಸಂಗ್ರಹವನ್ನು ಹೊಂದಿದೆ ಮತ್ತು ದೇಶದ ಆರ್ಥಿಕತೆಗೆ ಅದರ ಕೊಡುಗೆ ಶೇಕಡಾ 4 ರಷ್ಟಿದೆ ಎಂದು ಶ್ರೀ ಶಾ ಹೇಳಿದರು. ಆಹಾರ ಧಾನ್ಯ ಉತ್ಪಾದನೆಯಲ್ಲಿ ಹರಿಯಾಣ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ ಮತ್ತು ಹಾಲು ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ಅವರು ಹೇಳಿದರು, 400 ಕ್ಕೂ ಹೆಚ್ಚು ಫಾರ್ಚೂನ್ ಕಂಪನಿಗಳು ಗುರುಗ್ರಾಮದಲ್ಲಿ ತಮ್ಮ ಪ್ರಧಾನ ಕಚೇರಿಯನ್ನು ಹೊಂದಿವೆ ಮತ್ತು ಲಾಜಿಸ್ಟಿಕ್ಸ್ ಸೌಲಭ್ಯಗಳನ್ನು ಒದಗಿಸುವಲ್ಲಿ ಹರಿಯಾಣವೂ ಎರಡನೇ ಸ್ಥಾನದಲ್ಲಿದೆ ಎಂದು ಅವರು ಹೇಳಿದರು.

ಪ್ರತಿಪಕ್ಷಗಳು ಹರ್ಯಾಣ ಜನತೆಗೆ ಭಯ, ಹಸಿವು, ಭ್ರಷ್ಟಾಚಾರ ತುಂಬಿದ ಆಡಳಿತ ನೀಡಿದ್ದವು ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವರು ಹೇಳಿದರು. ಈ ಹಿಂದೆ ಹರ್ಯಾಣದಲ್ಲಿ ಭೂಮಿ ಹರಾಜು ನಡೆದಿತ್ತು, ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು ಎಂದರು. ಇಲ್ಲಿನ ಹಿಂದಿನ ಸರ್ಕಾರಗಳು ಸರ್ಕಾರಿ ನೇಮಕಾತಿಯಲ್ಲಿ ಭ್ರಷ್ಟಾಚಾರ ಮಾಡಿ ತಮ್ಮ ಸ್ವಂತ ಜನರಿಗೆ ಉದ್ಯೋಗ ನೀಡಿದ್ದವು, ಆದರೆ ಶ್ರೀ ಮನೋಹರ್ ಲಾಲ್ ನೇತೃತ್ವದ ಸರ್ಕಾರವು ಯಾವುದೇ ರೀತಿಯ ಭ್ರಷ್ಟಾಚಾರವಿಲ್ಲದೆ ಅರ್ಹತೆಯ ಆಧಾರದ ಮೇಲೆ ಉದ್ಯೋಗಗಳನ್ನು ನೀಡಿದೆ. ಶ್ರೀ ನರೇಂದ್ರ ಮೋದಿ ಮತ್ತು ಶ್ರೀ ಮನೋಹರ್ ಲಾಲ್ ಅವರ ಸರ್ಕಾರವು ಇಡೀ ರಾಜ್ಯದ ಏಕರೂಪ ಅಭಿವೃದ್ಧಿಗೆ ಶ್ರಮಿಸಿದೆ ಎಂದು ಅವರು ಹೇಳಿದರು.

https://static.pib.gov.in/WriteReadData/userfiles/image/image0047SGI.jpg

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕಳೆದ 9 ವರ್ಷಗಳಲ್ಲಿ ಭಾರತಕ್ಕೆ ಕೀರ್ತಿ ತಂದ ಅನೇಕ ಕೆಲಸಗಳನ್ನು ಮಾಡಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಇತ್ತೀಚೆಗಷ್ಟೇ ಭಾರತದ ಚಂದ್ರಯಾನ ಚಂದ್ರನ ಮೇಲೆ ಇಳಿದಿದೆ, ಜಿ20 ಸಮ್ಮೇಳನದಲ್ಲಿ ಎಲ್ಲ ದೇಶಗಳು ಪ್ರಧಾನಿ ಮೋದಿ ಅವರನ್ನು ಹೊಗಳಿವೆ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸಮಾಧಿಗೆ ಎಲ್ಲ ರಾಷ್ಟ್ರಗಳ ಮುಖ್ಯಸ್ಥರು ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದ್ದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತೆ ಮಾಡಿದೆ ಎಂದರು. ಪ್ರಧಾನಿ ಮೋದಿಯವರು ರಾಜಪಥವನ್ನು ಕರ್ತವ್ಯಪಥ ಎಂದು ಬದಲಾಯಿಸಿದ್ದಾರೆ ಮತ್ತು ಬ್ರಿಟಿಷರ ಆಳ್ವಿಕೆಯಲ್ಲಿ ನಿರ್ಮಿಸಲಾದ ಹಳೆಯ ಸಂಸತ್ತಿನ ಬದಲಿಗೆ ಹೊಸ ಸಂಸತ್ತನ್ನು ನಿರ್ಮಿಸುವ ಮೂಲಕ ಇಡೀ ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ ಎಂದು ಶ್ರೀ ಶಾ ಹೇಳಿದರು. ಸ್ವಾತಂತ್ರ್ಯಾ ನಂತರ ಮೊಟ್ಟಮೊದಲ ಬಾರಿಗೆ ಕೇಂದ್ರದ ನರೇಂದ್ರ ಮೋದಿ ಸರಕಾರವು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ.33ರಷ್ಟು ಮೀಸಲಾತಿ ನೀಡುವ ಮೂಲಕ ದೇಶದ ಮಹಿಳೆಯರಿಗೆ ನೀತಿ ನಿರೂಪಣೆಯಲ್ಲಿ ಪಾಲುದಾರರನ್ನಾಗಿ ಮಾಡಿದೆ ಎಂದರು. ಇಂದು ಇಡೀ ವಿಶ್ವವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರತ್ತ ಭರವಸೆ ಮತ್ತು ಆಸಕ್ತಿಯಿಂದ ನೋಡುತ್ತಿದೆ ಮತ್ತು ಆಫ್ರಿಕನ್ ಒಕ್ಕೂಟದ ಜಿ 20 ಸದಸ್ಯತ್ವದಿಂದ ಇಂದು ಪ್ರಪಂಚದ ಎಲ್ಲಾ ಹಿಂದುಳಿದ ದೇಶಗಳು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಹೊಸ ನಾಯಕನಾಗಿ ನೋಡುತ್ತಿವೆ ಎಂದು ಅವರು ಹೇಳಿದರು.

https://static.pib.gov.in/WriteReadData/userfiles/image/image005H83O.jpg

ಹಿಂದಿನ ಸರ್ಕಾರ ಕಟ್, ಕಮಿಷನ್ ಮತ್ತು ಕರಪ್ಷನ್ ಸರ್ಕಾರವಾಗಿತ್ತು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಹರಿಯಾಣದ ಶ್ರೀ ಮನೋಹರ್ ಲಾಲ್ ಅವರ ಸರ್ಕಾರವು ತನ್ನ ಎರಡು ಅಧಿಕಾರಾವಧಿಯಲ್ಲಿ ಪ್ರತಿಯೊಬ್ಬ ಬಡವರು, ರೋಗಿಗಳು, ಹಸಿದವರು, ಮಕ್ಕಳು ಮತ್ತು ವೃದ್ಧರ ರಕ್ಷಣೆ ಮಾಡಿದೆ ಎಂದು ಅವರು ಹೇಳಿದರು. ಹರಿಯಾಣದಲ್ಲಿ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತವನ್ನು ಕೊನೆಗೊಳಿಸುವುದು ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಸುಧಾರಿಸುವುದು ತುಂಬಾ ಕಷ್ಟಕರವಾಗಿತ್ತು ಎಂದು ಅವರು ಹೇಳಿದರು, ಆದರೆ ಶ್ರೀ ಮನೋಹರ್ ಲಾಲ್ ಅದನ್ನು ದೃಢವಾಗಿ ನಿಭಾಯಿಸಿದ್ದಾರೆ. ಹಿಂದಿನ ಸರ್ಕಾರವು ತನ್ನ 10 ವರ್ಷಗಳ ಆಡಳಿತದಲ್ಲಿ ಅಧಿಕಾರ ಹಂಚಿಕೆ ಮತ್ತು ಅನುದಾನದ ಮೂಲಕ ಹರಿಯಾಣಕ್ಕೆ ಕೇವಲ 40,000 ಕೋಟಿ ರೂಪಾಯಿಗಳನ್ನು ನೀಡಿತ್ತು, ಆದರೆ ಪ್ರಧಾನಿ ಮೋದಿ ಕಳೆದ 9 ವರ್ಷಗಳಲ್ಲಿ ಅದನ್ನು 1.32 ಲಕ್ಷ ಕೋಟಿ ರೂಪಾಯಿಗಳಿಗೆ ಹೆಚ್ಚಿಸಿದ್ದಾರೆ ಎಂದು ಶ್ರೀ ಶಾ ಹೇಳಿದರು. ಇದರೊಂದಿಗೆ ಮೋದಿ ಸರ್ಕಾರವು ಹರಿಯಾಣಕ್ಕೆ 20,000 ಕೋಟಿ ರೂಪಾಯಿ ವೆಚ್ಚದಲ್ಲಿ ಆರ್ಥಿಕ ಕಾರಿಡಾರ್ ಯೋಜನೆಯನ್ನು ಸಹ ನೀಡಿದೆ ಮತ್ತು 12,150 ಕೋಟಿ ರೂಪಾಯಿ ವೆಚ್ಚದ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಹರಿಯಾಣದ ಮೂಲಕ ಹಾದು ಹೋಗುತ್ತಿದೆ. 64,000 ಕೋಟಿ ರೂಪಾಯಿ ವೆಚ್ಚದಲ್ಲಿ ಕುಂಡ್ಲಿ-ಮನೇಸರ್-ಪಲ್ವಾಲ್ ಎಕ್ಸ್‌ಪ್ರೆಸ್‌ ವೇ ಮತ್ತು 19 ಕಿಮೀ ಉದ್ದದ ದ್ವಾರಕಾ ಎಕ್ಸ್‌ಪ್ರೆಸ್‌ ವೇ ಮೊದಲ ವಿಭಾಗವನ್ನು ಉದ್ಘಾಟಿಸಲಾಗಿದೆ ಎಂದು ಅವರು ಹೇಳಿದರು. ಪಶ್ಚಿಮ ಸರಕು ಸಾಗಣೆ ಕಾರಿಡಾರ್ ರೇವಾರಿ-ಮದಾರ್ ನಿಲ್ದಾಣವನ್ನು ಉದ್ಘಾಟಿಸಲಾಗಿದ್ದು, ಇದರೊಂದಿಗೆ ರೈಲ್ವೆ 21,000 ಕೋಟಿ ರೂ. ವೆಚ್ಚ ಮಾಡಿದೆ. 20,594 ಕೋಟಿ ರೂಪಾಯಿ ವೆಚ್ಚದಲ್ಲಿ 700 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಕೆಲಸವೂ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ಆಗಿದೆ. ಹರಿಯಾಣದಲ್ಲಿ 2ಜಿ ಎಥೆನಾಲ್ ಬಯೋ ರಿಫೈನರಿಯನ್ನು ಸಹ ಉದ್ಘಾಟಿಸಲಾಗಿದೆ ಮತ್ತು 700 ಮಿಲಿಯನ್ ಡಾಲರ್‌ ವೆಚ್ಚದಲ್ಲಿ 886 ಎಕರೆ ಪ್ರದೇಶದಲ್ಲಿ ಮಲ್ಟಿಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್ ಅನ್ನು ನಿರ್ಮಿಸುವ ಕೆಲಸವನ್ನು ಸಹ ಇಲ್ಲಿ ಮಾಡಲಾಗಿದೆ ಎಂದು ಶ್ರೀ ಶಾ ಹೇಳಿದರು.

ಆಗಸ್ಟ್ 5, 2019 ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯಾವುದೇ ಹಿಂಸಾಚಾರಕ್ಕೆ ಎಡೆಮಾಡಿಕೊಡದೆ ಕಾಶ್ಮೀರದಿಂದ 370ನೇ ವಿಧಿಯನ್ನು ರದ್ದುಗೊಳಿಸಿದರು ಎಂದು ಶ್ರೀ ಅಮಿತ್ ಶಾ ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಗಡಿಯನ್ನು ಸುಭದ್ರಗೊಳಿಸಿದ್ದಾರೆ, ದೇಶದ ಪಡೆಗಳನ್ನು ಆಧುನೀಕರಿಸಿದ್ದಾರೆ ಮತ್ತು ಗಡಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಸೃಷ್ಟಿಸುವ ಮೂಲಕ ನಮ್ಮ ಪಡೆಗಳಿಗೆ ಸೌಲಭ್ಯಗಳನ್ನು ಒದಗಿಸಿದ್ದಾರೆ ಎಂದು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಂದು ಶ್ರೇಣಿ, ಒಂದು ಪಿಂಚಣಿ ಬೇಡಿಕೆಯನ್ನು ಈಡೇರಿಸುವ ಮೂಲಕ ಹರಿಯಾಣ ಸೇರಿದಂತೆ ಇಡೀ ದೇಶದ ಎಲ್ಲಾ ವೀರ ಸೇನಾನಿಗಳನ್ನು ಗೌರವಿಸಿದ್ದಾರೆ ಎಂದು ಅವರು ಹೇಳಿದರು.

****

 



(Release ID: 1974248) Visitor Counter : 74