ರಾಷ್ಟ್ರಪತಿಗಳ ಕಾರ್ಯಾಲಯ

'ಯುಕ್ತ ಮತ್ತು ಚೇತರಿಕೆಯ ಕೃಷಿ-ಆಹಾರ ವ್ಯವಸ್ಥೆಗಳ ಕಡೆಗೆ: ಸಂಶೋಧನೆಯಿಂದ ಪ್ರಭಾವದವರೆಗೆ'  ಎಂಬ ಅಂತರರಾಷ್ಟ್ರೀಯ ಸಂಶೋಧನಾ ಸಮ್ಮೇಳನವನ್ನು ಭಾರತದ ರಾಷ್ಟ್ರಪತಿಯವರು ಉದ್ಘಾಟಿಸಿದರು


ನಮ್ಮ ಕೃಷಿ-ಆಹಾರ ವ್ಯವಸ್ಥೆಗಳನ್ನು ಇನ್ನಷ್ಟು ಯೋಗ್ಯ, ಅಂತರ್ಗತ ಮತ್ತು ಸಮಾನವಾಗಿ ಮಾಡುವುದು ಕೇವಲ ಅಪೇಕ್ಷಣೀಯವಲ್ಲ, ಜೊತೆಗೆ ಭೂಗ್ರಹ ಮತ್ತು ಮಾನವಕುಲದ ಯೋಗಕ್ಷೇಮಕ್ಕೆ ಕೂಡಾ ಅದು ಬಹಳ ಮುಖ್ಯವಾಗಿದೆ:  ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು

Posted On: 09 OCT 2023 1:25PM by PIB Bengaluru

ಭಾರತದ ರಾಷ್ಟ್ರಪತಿಯವರಾದ ಶ್ರೀಮತಿ ದ್ರೌಪದಿ ಮುರ್ಮು ಅವರು ''ಯುಕ್ತ ಮತ್ತು ಚೇತರಿಕೆಯ ಕೃಷಿ-ಆಹಾರ ವ್ಯವಸ್ಥೆಗಳ ಕಡೆಗೆ: ಸಂಶೋಧನೆಯಿಂದ ಪ್ರಭಾವದವರೆಗೆ' ಎಂಬ ಅಂತರಾಷ್ಟ್ರೀಯ ಸಂಶೋಧನಾ ಸಮ್ಮೇಳನವನ್ನು ಉದ್ಘಾಟಿಸಿದರು.  ದೆಹಲಿಯಲ್ಲಿ ಇಂದು (ಅಕ್ಟೋಬರ್ 9, 2023), ಸಿ.ಜಿ.ಐ.ಎ.ಆರ್. ಜಿ.ಇ.ಎನ್.ಡಿ.ಆರ್. ಇಂಪ್ಯಾಕ್ಟ್ ಪ್ಲಾಟ್ಫಾರ್ಮ್ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ಸಿ.ಜಿ.ಐ.ಎ.ಆರ್.) ಜಂಟಿಯಾಗಿ ಇದನ್ನು ಆಯೋಜಿಸಿದೆ. 

“ಏಳಿಗೆಯಲ್ಲಿ ತಾರತಮ್ಯವಿರುವ ಸಮಾಜದಲ್ಲಿ,  ನ್ಯಾಯ ಸಿಗದೇ ಹೋದರೆ ಅದು ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ” ಎಂದು ರಾಷ್ಟ್ರಪತಿ  ಶ್ರೀಮತಿ ದ್ರೌಪದಿ ಮುರ್ಮು ಅವರು ಹೇಳಿದರು. “ಲಿಂಗ ನ್ಯಾಯದ ವಿಷಯಕ್ಕೆ ಬಂದರೆ, ಅತ್ಯಂತ ಹಳೆಯ ವಿಜ್ಞಾನ ಎಂದು ಕರೆಯಲ್ಪಡುವ ಕೃಷಿಯು ಆಧುನಿಕ ಕಾಲದಲ್ಲೂ ಬೇಡವಾಗಿದೆ. ಕೋವಿಡ್-19 ಸಾಂಕ್ರಾಮಿಕ ರೋಗವು ಕೃಷಿ-ಆಹಾರ ವ್ಯವಸ್ಥೆಗಳು ಮತ್ತು ಸಮಾಜದಲ್ಲಿನ ರಚನಾತ್ಮಕ ಅಸಮಾನತೆಯ ನಡುವಿನ ಬಲವಾದ ಸಂಬಂಧವನ್ನು ಸಹ ಮುನ್ನೆಲೆಗೆ ತಂದಿದೆ. ಪುರುಷರಿಗೆ ಹೋಲಿಸಿದರೆ, ವಲಸೆಯನ್ನು ಪ್ರಚೋದಿಸಿದ ಕೋವಿಡ್-19 ಸಾಂಕ್ರಾಮಿಕ ವರ್ಷಗಳಲ್ಲಿ ಮಹಿಳೆಯರು ಹೆಚ್ಚು ಉದ್ಯೋಗ ನಷ್ಟವನ್ನು ಅನುಭವಿಸಿದ್ದಾರೆ” ಎಂದು ಅವರು ಹೇಳಿದರು. 

“ಜಾಗತಿಕ ಮಟ್ಟದಲ್ಲಿ ಮಹಿಳೆಯರನ್ನು ಕೃಷಿ-ಆಹಾರ ವ್ಯವಸ್ಥೆಯಿಂದ ಹೊರಗಿಡುವುದನ್ನು ನಾವು ನೋಡಿದ್ದೇವೆ. ಅವರು ಕೃಷಿ ವ್ಯವಸ್ಥೆ ರಚನೆಯ ಪಿರಮಿಡ್ ನ ಅತ್ಯಂತ ತಳಮಟ್ಟದ ಬಹುಭಾಗವನ್ನು ರೂಪಿಸುತ್ತಾರೆ, ಆದರೆ ನಿರ್ಧಾರ ತೆಗೆದುಕೊಳ್ಳುವವರ ಪಾತ್ರವನ್ನು ವಹಿಸಲು ಏಣಿಯನ್ನು ಏರುವ ಅವಕಾಶವನ್ನು ಅವರಿಗೆ ಸದಾ ನಿರಾಕರಿಸಲಾಗಿದೆ. ಪ್ರಪಂಚದಾದ್ಯಂತ, ತಾರತಮ್ಯದ ಸಾಮಾಜಿಕ ನಿಯಮಗಳು ಮತ್ತು ಜ್ಞಾನ, ಮಾಲೀಕತ್ವ, ಆಸ್ತಿಗಳು, ಸಂಪನ್ಮೂಲಗಳು ಮತ್ತು ಸಾಮಾಜಿಕ ನೆಟ್ವರ್ಕ್ಗಳ ಅಡೆತಡೆಗಳಿಂದ ಅವರನ್ನು ತಡೆಹಿಡಿಯಲಾಗಿದೆ ಮತ್ತು ನಿಲ್ಲಿಸಲಾಗಿದೆ. ಅವರ ಕೊಡುಗೆಯನ್ನು ಗುರುತಿಸಲಾಗಿಲ್ಲ, ಅವರ ಪಾತ್ರವನ್ನು ಅಂಚಿನಲ್ಲಿಡಲಾಗಿದೆ ಮತ್ತು ಕೃಷಿ-ಆಹಾರ ವ್ಯವಸ್ಥೆಗಳ ಸಂಪೂರ್ಣ ಸರಪಳಿಯಲ್ಲಿ ಅವರ ಪಾತ್ರವನ್ನು ನಿರಾಕರಿಸಲಾಗಿದೆ ಮತ್ತು ಈ ವ್ಯವಸ್ಥೆಯನ್ನು ಬದಲಾಯಿಸಬೇಕಾಗಿದೆ. ಹಾಗೂ, ಭಾರತದಲ್ಲಿ, ಶಾಸಕಾಂಗ ಮತ್ತು ಸರ್ಕಾರಿ ಮಧ್ಯಸ್ಥಿಕೆಗಳ ಮೂಲಕ ಮಹಿಳೆಯರು ಹೆಚ್ಚು ಸಬಲರಾಗುವುದರೊಂದಿಗೆ ನಾವು ಆ ಬದಲಾವಣೆಗಳನ್ನು ಇತ್ತೀಚೆಗೆ ನೋಡುತ್ತಿದ್ದೇವೆ” ಎಂದು ರಾಷ್ಟ್ರಪತಿಯವರು ಹೇಳಿದರು.

“ಆಧುನಿಕ ಮಹಿಳೆಯರು "ಅಬಲೆ" ಅಲ್ಲ "ಸಬಲೆ", ಅಂದರೆ “ಅಸಹಾಯಕರಲ್ಲ” ಆದರೆ “ಶಕ್ತಿಶಾಲಿ”.  ನಮಗೆ ಮಹಿಳಾ ಅಭಿವೃದ್ಧಿ ಮಾತ್ರವಲ್ಲ, ಮಹಿಳಾ ನೇತೃತ್ವದ ಅಭಿವೃದ್ಧಿಯೂ ಬೇಕು. ನಮ್ಮ ಕೃಷಿ-ಆಹಾರ ವ್ಯವಸ್ಥೆಯನ್ನು ಹೆಚ್ಚು ನ್ಯಾಯಯುತ, ಅಂತರ್ಗತ ಮತ್ತು ಸಮಾನವಾಗಿ ಮಾಡುವುದು ಕೇವಲ ಅಪೇಕ್ಷಣೀಯವಲ್ಲ, ಜೊತೆಗೆ ಭೂಗ್ರಹ ಮತ್ತು ಮಾನವಕುಲದ ಯೋಗಕ್ಷೇಮಕ್ಕೆ ನಿರ್ಣಾಯಕವಾಗಿ ಹಾಗೂ ಅನಿವಾರ್ಯವಾಗಿದೆ”  ಎಂದು ರಾಷ್ಟ್ರಪತಿಯವರು ಹೇಳಿದರು.

“ಹವಾಮಾನ ಬದಲಾವಣೆಯು ಅಸ್ತಿತ್ವದ ಬೆದರಿಕೆಯಾಗಿದೆ ಮತ್ತು ನಾವು ಈಗ ಕಾರ್ಯನಿರ್ವಹಿಸಬೇಕಾಗಿದೆ, ವೇಗವಾಗಿ ಕಾರ್ಯನಿರ್ವಹಿಸಬೇಕು ಮತ್ತು ತ್ವರಿತವಾಗಿ ಕಾರ್ಯನಿರ್ವಹಿಸಬೇಕು. ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ, ಕರಗುತ್ತಿರುವ ಮಂಜುಗಡ್ಡೆಗಳು ಮತ್ತು ಪ್ರಭೇದಗಳ ಅಳಿವು ಆಹಾರ ಉತ್ಪಾದನೆಯನ್ನು ಅಡ್ಡಿಪಡಿಸುತ್ತಿದೆ ಮತ್ತು ಕೃಷಿ-ಆಹಾರ ಚಕ್ರವು ಸಮರ್ಥನೀಯ ಮತ್ತು ಪರಿಸರ ಸ್ನೇಹಿಯಾಗಿಲ್ಲ. ಇದು ಹವಾಮಾನ ಕ್ರಿಯೆಯನ್ನು ತಡೆಯುತ್ತದೆ ಮತ್ತು ಹಸಿರುಮನೆ ಅನಿಲಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ. ನಮ್ಮ ಕೃಷಿ-ಆಹಾರ ವ್ಯವಸ್ಥೆಗಳು ಕೆಟ್ಟ ಚಕ್ರದಲ್ಲಿ ಸಿಲುಕಿಕೊಂಡಿವೆ ಮತ್ತು ನಾವು ಈ "ಚಕ್ರವ್ಯೂಹ" ವನ್ನು ಮುರಿಯಬೇಕಾಗಿದೆ. ಎಲ್ಲರಿಗೂ ಹೆಚ್ಚು ಸಮೃದ್ಧ ಮತ್ತು ಸಮಾನ ಭವಿಷ್ಯದ ಜೊತೆಗೆ ಕೃಷಿ-ಆಹಾರ ವ್ಯವಸ್ಥೆಗಳ ಮೂಲಕ ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಜೀವವೈವಿಧ್ಯತೆಯನ್ನು ಹೆಚ್ಚಿಸುವ ಮತ್ತು ಪರಿಸರ ವ್ಯವಸ್ಥೆಗಳನ್ನು ಪುನಃಸ್ಥಾಪಿಸುವ ಅಗತ್ಯವಿದೆ.” ಎಂದು ರಾಷ್ಟ್ರಪತಿಯವರು ಹೇಳಿದರು.

“ಪರಿಸರದ ಸಮತೋಲನ, ನೈತಿಕವಾಗಿ ಅಪೇಕ್ಷಣೀಯ, ಆರ್ಥಿಕವಾಗಿ ಕೈಗೆಟುಕುವ ಮತ್ತು ಸಾಮಾಜಿಕವಾಗಿ ಸಮರ್ಥನೀಯ ಉತ್ಪಾದನೆಯಾಗುವ ಗುರಿಯನ್ನು ತಲುಪಲು ಪರಿಸ್ಥಿತಿಗಳನ್ನು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಸಂಶೋಧನೆಯ ಅಗತ್ಯವಿದೆ. ಕೃಷಿ-ಆಹಾರ ವ್ಯವಸ್ಥೆಯನ್ನು ಹೇಗೆ ಪರಿವರ್ತಿಸಬೇಕು ಎಂಬುದರ ಕುರಿತು ನಮಗೆ ವ್ಯವಸ್ಥಿತ ತಿಳುವಳಿಕೆ ಅಗತ್ಯವಿದೆ. ಕೃಷಿ-ಆಹಾರ ವ್ಯವಸ್ಥೆಗಳು ಸ್ಥಿತಿಸ್ಥಾಪಕ ಮತ್ತು ಚುರುಕುತನದಿಂದ ಕೂಡಿರಬೇಕು, ಇದರಿಂದಾಗಿ ಪೌಷ್ಟಿಕ ಮತ್ತು ಆರೋಗ್ಯಕರ ಆಹಾರವನ್ನು ಎಲ್ಲರಿಗೂ ಸುಲಭವಾಗಿ, ಲಭ್ಯವಾಗುವಂತೆ ಮತ್ತು ಕೈಗೆಟುಕುವಂತೆ ಮಾಡಲು ಸಾದ್ಯವಾಗಬೇಕು. ಈ ನಿಟ್ಟಿನಲ್ಲಿ ಆಘಾತಗಳು ಮತ್ತು ಅಡೆತಡೆಗಳನ್ನು ತಡೆದುಕೊಳ್ಳಬೇಕಾಗಿದೆ ಮತ್ತು ಅವು ಹೆಚ್ಚು ನ್ಯಾಯಯುತ, ಸಮಾನ ಮತ್ತು ಸಮರ್ಥನೀಯವಾಗಿರಬೇಕು” ಎಂದು ರಾಷ್ಟ್ರಪತಿಯವರು ಹೇಳಿದರು.

“ಮುಂದಿನ ನಾಲ್ಕು ದಿನಗಳಲ್ಲಿ ಸಮ್ಮೇಳನವು ಇಂತಹ ಎಲ್ಲಾ ವಿಷಯಗಳನ್ನು ಪರಿಗಣಿಸುತ್ತದೆ ಮತ್ತು ಕೃಷಿ-ಆಹಾರ ವ್ಯವಸ್ಥೆಗಳ ಸಕಾರಾತ್ಮಕ ರೂಪಾಂತರಕ್ಕೆ ದಾರಿ ಮಾಡಿಕೊಡಲಿದೆ” ಎಂದು ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ವಿಶ್ವಾಸ ವ್ಯಕ್ತಪಡಿಸಿದರು.

ರಾಷ್ಟ್ರಪತಿಯವರ ಭಾಷಣವನ್ನು ವೀಕ್ಷಿಸಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ -

***



(Release ID: 1965998) Visitor Counter : 90