ಪ್ರಧಾನ ಮಂತ್ರಿಯವರ ಕಛೇರಿ

ಮಧ್ಯಪ್ರದೇಶದ ಜಬಲ್‌ಪುರದಲ್ಲಿ 12,600 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಿದ ಪ್ರಧಾನಿ


ಜಬಲ್‌ಪುರದಲ್ಲಿ 'ವೀರಾಂಗನಾ ರಾಣಿ ದುರ್ಗಾವತಿ ಸ್ಮಾರಕ ಮತ್ತು ಉದ್ಯಾನ'ಕ್ಕೆ ಭೂಮಿ ಪೂಜೆ ನೆರವೇರಿಸಿದರು

ವೀರಾಂಗಣ ರಾಣಿ ದುರ್ಗಾವತಿ ಅವರ 500ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿ ಬಿಡುಗಡೆ ಮಾಡಿದರು

ʻಪಿಎಂಎವೈʼ ಅಡಿಯಲ್ಲಿ ಇಂದೋರ್‌ನಲ್ಲಿ ಲೈಟ್‌ಹೌಸ್ ಯೋಜನೆಯಡಿ ನಿರ್ಮಿಸಲಾದ 1000ಕ್ಕೂ ಹೆಚ್ಚು ಮನೆಗಳನ್ನು ಉದ್ಘಾಟಿಸಿದರು

ಮಾಂಡ್ಲಾ, ಜಬಲ್‌ಪುರ ಮತ್ತು ದಿಂಡೋರಿ ಜಿಲ್ಲೆಗಳಲ್ಲಿಹಲವು ʻಜಲ ಜೀವನ್ ಮಿಷನ್ʼ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ಸಿಯೋನಿ ಜಿಲ್ಲೆಯಲ್ಲಿ ʻಜಲ ಜೀವನ್ ಮಿಷನ್ʼ ಯೋಜನೆಯ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಿದರು

ಮಧ್ಯಪ್ರದೇಶದಲ್ಲಿ ರಸ್ತೆ ಮೂಲಸೌಕರ್ಯ ಸುಧಾರಣೆಗಾಗಿ 4800 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಯೋಜನೆಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಮಾಡಿದರು

1850 ಕೋಟಿ ರೂ.ಗೂ ಅಧಿಕ ಮೌಲ್ಯದ ರೈಲು ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು

ವಜೈಪುರ - ಔರೈಯಾನ್-ಫೂಲ್‌ಪುರ ಪೈಪ್‌ಲೈನ್ ಯೋಜನೆಯ ಲೋಕಾರ್ಪಣೆ ನೆರವೇರಿಸಿದರು

ಮುಂಬೈ-ನಾಗ್‌ಪುರ -ಜಾರ್ಸುಗುಡ ಪೈಪ್‌ಲೈನ್ʼ ಯೋಜನೆಯ ʻನಾಗ್‌ಪುರ -ಜಬಲ್‌ಪುರʼ ವಿಭಾಗಕ್ಕೆ (317 ಕಿ.ಮೀ.) ಶಂಕುಸ್ಥಾಪನೆ ನೆರವೇರಿಸಿದರು ಮತ್ತು ಜಬಲ್‌ಪುರದಲ್ಲಿ ಹೊಸ ಬಾಟ್ಲಿಂಗ್ ಘಟಕವನ್ನು ಸಮರ್ಪಿಸಿದರು

"ರಾಣಿ ದುರ್ಗಾವತಿ ಇತರರ ಪ್ರಯೋಜನಕ್ಕಾಗಿ ಬದುಕಲು ನಮಗೆ ಕಲಿಸಿದ್ದಾಳೆ ಮತ್ತು ತಾಯ್ನಾಡಿಗಾಗಿ ಏನನ್ನಾದರೂ ಮಾಡಲು ನಮ್ಮನ್ನು ಪ್ರೇರೇಪಿಸುತ್ತಾಳೆ"

"ಕಳೆದ ಕೆಲವು ವಾರಗಳಲ್ಲಿ, ʻಉಜ್ವಲʼ ಯೋಜನೆಯ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್ಗಳ ಬೆಲೆಯನ್ನು 500 ರೂ.ಗಳಷ್ಟು ಕಡಿಮೆ ಮಾಡಲಾಗಿದೆ"

"ಜನ್ ಧನ್, ಆಧಾರ್ ಮತ್ತು ಮೊಬೈಲ್ ತ್ರಿವಳಿ ವ್ಯವಸ್ಥೆಗಳು ಭ್ರಷ್ಟ ವ್ಯವಸ್ಥೆಯನ್ನು ಅಳಿಸಿಹಾಕಲು ಸಹಾಯ ಮಾಡಿವೆ"

"ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ಮಧ್ಯಪ್ರದೇಶವನ್ನು ನೋಡಲು ತಮ್ಮ ಮಕ್ಕಳು ಬೆಳೆಯುವಂತೆ ಖಚಿತಪಡಿಸಿಕೊಳ್ಳುವುದು 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಜವಾಬ್ದಾರಿಯಾಗಿದೆ"

"ಇಂದು ಭಾರತದ ಆತ್ಮವಿಶ್ವಾಸ ಹೊಸ ಎತ್ತರದಲ್ಲಿದೆ. ಆಟದ ಮೈದಾನದಿಂದ ಹೊಲಗಳು ಮತ್ತು ಕಣಜಗಳವರೆಗೆ ಎಲ್ಲೆಲ್ಲೂ ಭಾರತದ ಧ್ವಜ ಹಾರಾಡುತ್ತಿದೆ

"ಸ್ವದೇಶಿ ಭಾವನೆ, ದೇಶವನ್ನು ಮುಂದೆ ಕೊಂಡೊಯ್ಯುವ ಭಾವನೆ ಇಂದು ಎಲ್ಲೆಡೆ ಹೆಚ್ಚುತ್ತಿದೆ"

"ಡಬಲ್ ಇಂಜಿನ್ ಸರ್ಕಾರವು ದೀನದಲಿತರಿಗೆ ಆದ್ಯತೆ ನೀಡುತ್ತದೆ"

Posted On: 05 OCT 2023 6:10PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಧ್ಯಪ್ರದೇಶದ ಜಬಲ್‌ಪುರದಲ್ಲಿ 12,600 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ರಸ್ತೆ, ರೈಲು, ಅನಿಲ ಕೊಳವೆ ಮಾರ್ಗ, ವಸತಿ ಹಾಗೂ ಶುದ್ಧ ಕುಡಿಯುವ ನೀರಿನಂತಹ ವಿವಿಧ ವಲಯಗಳ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ನೆರವೇರಿಸಿದರು. ರಾಣಿ ದುರ್ಗಾವತಿ ಅವರ 500ನೇ ಜನ್ಮ ಶತಮಾನೋತ್ಸವದ ಅಂಗವಾಗಿ ಜಬಲ್‌ಪುರದಲ್ಲಿ 'ವೀರಾಂಗನ ರಾಣಿ ದುರ್ಗಾವತಿ ಸ್ಮಾರಕ ಮತ್ತು ಉದ್ಯಾನ'ಕ್ಕೆ ಶ್ರೀ ಮೋದಿ ಭೂಮಿ ಪೂಜೆ ನೆರವೇರಿಸಿದರು. ಇಂದೋರ್‌ನಲ್ಲಿ ʻಲೈಟ್ ಹೌಸ್ʼ ಯೋಜನೆಯಡಿ ನಿರ್ಮಿಸಲಾದ 1000ಕ್ಕೂ ಹೆಚ್ಚು ಮನೆಗಳ ಉದ್ಘಾಟನೆ; ಮಾಂಡ್ಲಾ, ಜಬಲ್‌ಪುರ ಮತ್ತು ದಿಂಡೋರಿ ಜಿಲ್ಲೆಗಳಲ್ಲಿ ಅನೇಕ ʻಜಲ ಜೀವನ್ ಮಿಷನ್ʼ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಸಿಯೋನಿ ಜಿಲ್ಲೆಯಲ್ಲಿ ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿಗಳ ಲೋಕಾರ್ಪಣೆ; ಮಧ್ಯಪ್ರದೇಶದಲ್ಲಿ ರಸ್ತೆ ಮೂಲಸೌಕರ್ಯವನ್ನು ಸುಧಾರಿಸಲು 4,800 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಅನೇಕ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ; 1,850 ಕೋಟಿ ರೂ.ಗೂ ಅಧಿಕ ಮೌಲ್ಯದ ರೈಲು ಯೋಜನೆಗಳ ಸಮರ್ಪಣೆ, ವಿಜೈಪುರ-ಔರೈಯಾನ್-ಫೂಲ್‌ಪುರ ಪೈಪ್‌ಲೈನ್‌ ಯೋಜನೆ ಮತ್ತು ಜಬಲ್‌ಪುರದಲ್ಲಿ ಹೊಸ ಬಾಟ್ಲಿಂಗ್ ಘಟಕ ಹಾಗೂ ಮುಂಬೈ- ನಾಗ್‌ಪುರ -ಜಾರ್ಸುಗುಡ ಪೈಪ್‌ಲೈನ್‌ ಯೋಜನೆಯ ನಾಗ್‌ಪುರ ಜಬಲ್‌ಪುರ ವಿಭಾಗಕ್ಕೆ (317 ಕಿ.ಮೀ) ಶಂಕುಸ್ಥಾಪನೆ ಈ ಯೋಜನೆಗಳಲ್ಲಿ ಸೇರಿವೆ. 

ಈ ಸಂದರ್ಭದಲ್ಲಿ ಪ್ರದರ್ಶಿಸಲಾದ ವಸ್ತುಪ್ರದರ್ಶನದಲ್ಲಿ ಹೆಜ್ಜೆ ಹಾಕಿದ ಪ್ರಧಾನಮಂತ್ರಿಯವರು ವೀರಾಂಗಣ ರಾಣಿ ದುರ್ಗಾವತಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ನರ್ಮದಾ ಮಾತೆಯ ಪುಣ್ಯಭೂಮಿಯತ್ತ ನಮಸ್ಕರಿಸಿರು. ಜಬಲ್‌ಪುರವು ಉತ್ಸಾಹ, ಹುಮ್ಮಸ್ಸು ಮತ್ತು ನವಚೈತನ್ಯದಿಂದ ತುಂಬಿ ತುಳುಕುತ್ತಿರುವುದರಿಂದ ನಾನು ಈ ನಗರನವನ್ನು ಸಂಪೂರ್ಣವಾಗಿ ಹೊಸ ರೂಪದಲ್ಲಿ ನೋಡುತ್ತಿದ್ದೇನೆ, ಇದು ನಗರದ ಉತ್ಸಾಹವನ್ನು ಪ್ರತಿಬಿಂಬಿಸುತ್ತದೆ ಎಂದರು. ಇಡೀ ರಾಷ್ಟ್ರವು ವೀರಾಂಗಣ ರಾಣಿ ದುರ್ಗಾವತಿ ಅವರ 500ನೇ ಜನ್ಮ ದಿನಾಚರಣೆಯನ್ನು ಉತ್ಸಾಹ ಮತ್ತು ಹುಮ್ಮಸ್ಸಿನಿಂದ ಆಚರಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ʻರಾಣಿ ದುರ್ಗಾವತಿ ಗೌರವ್ ಯಾತ್ರೆʼಯ ಸಮಾರೋಪದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಅವರ ಜಯಂತಿಯನ್ನು ರಾಷ್ಟ್ರಮಟ್ಟದಲ್ಲಿ ಆಚರಿಸಲು ಕರೆ ನೀಡಿರುವುದಾಗಿ ತಿಳಿಸಿದರು. "ಭಾರತದ ಪೂರ್ವಜರಿಗೆ ನಮ್ಮ ಋಣವನ್ನು ತೀರಿಸಲು ನಾವು ಇಲ್ಲಿ ಸೇರಿದ್ದೇವೆ," ಎಂದು ಪ್ರಧಾನಿ ಹೇಳಿದರು. ವೀರಾಂಗನಾ ರಾಣಿ ದುರ್ಗಾವತಿ ಸ್ಮಾರಕ ಮತ್ತು ಉದ್ಯಾನ ಯೋಜನೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ದೇಶದ ಪ್ರತಿಯೊಬ್ಬ ತಾಯಿ ಮತ್ತು ಯುವಕರು ಈ ಸ್ಥಳಕ್ಕೆ ಭೇಟಿ ನೀಡಲು ಬಯಸುತ್ತಾರೆ ಮತ್ತು ಇದು ಮುಂದೆ ತೀರ್ಥಯಾತ್ರೆ ಕ್ಷೇತ್ರವಾಗಿ ಬದಲಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ರಾಣಿ ದುರ್ಗಾವತಿಯ ಜೀವನವು ಇತರರ ಪ್ರಯೋಜನಕ್ಕಾಗಿ ಬದುಕುವುದನ್ನು ನಮಗೆ ಕಲಿಸುತ್ತದೆ ಮತ್ತು ತಾಯ್ನಾಡಿಗಾಗಿ ಏನನ್ನಾದರೂ ಮಾಡಲು ನಮಗೆ ಸ್ಫೂರ್ತಿ ನೀಡುತ್ತದೆ ಎಂದು ಅವರು ಒತ್ತಿ ಹೇಳಿದರು. ರಾಣಿ ದುರ್ಗಾವತಿ ಅವರ 500ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಇಡೀ ಬುಡಕಟ್ಟು ಸಮಾಜ, ಮಧ್ಯಪ್ರದೇಶದ ಜನರು ಮತ್ತು ದೇಶದ 140 ಕೋಟಿ ನಾಗರಿಕರಿಗೆ ಪ್ರಧಾನಿ ಶುಭಾಶಯಗಳನ್ನು ತಿಳಿಸಿದರು. ಭಾರತದ ಸ್ವಾತಂತ್ರ್ಯದ ನಂತರ ಈ ನೆಲದ ಪೂರ್ವಜರಿಗೆ ಸ್ಥಳಾವಕಾಶದ ಕೊರತೆಯ ಬಗ್ಗೆ ವಿಷಾದಿಸಿದ ಪ್ರಧಾನಿ, ಈ ನಾಡಿನ ವೀರರನ್ನು ಮರೆಯಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸುಮಾರು 12,000 ಕೋಟಿ ರೂಪಾಯಿ ಮೌಲ್ಯದ ಇಂದಿನ ಯೋಜನೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಇದು ರೈತರು ಮತ್ತು ಯುವಕರು ಸೇರಿದಂತೆ ಲಕ್ಷಾಂತರ ಜನರ ಜೀವನವನ್ನು ಪರಿವರ್ತಿಸಲಿದೆ ಎಂದರು. "ಈ ಪ್ರದೇಶದಲ್ಲಿ ಹೊಸ ಕೈಗಾರಿಕೆಗಳ ಆಗಮನದೊಂದಿಗೆ, ಯುವಕರು ಈಗ ಇಲ್ಲಿ ಉದ್ಯೋಗಗಳನ್ನು ಪಡೆಯಲಿದ್ದಾರೆ," ಎಂದು ಅವರು ಹೇಳಿದರು.

ತಾಯಂದಿರು ಮತ್ತು ಸಹೋದರಿಯರಿಗೆ ಅಡುಗೆಮನೆಯಲ್ಲಿ ಹೊಗೆ ಮುಕ್ತ ವಾತಾವರಣವನ್ನು ಒದಗಿಸುವುದು ಪ್ರಸ್ತುತ ಸರ್ಕಾರದ ಉನ್ನತ ಆದ್ಯತೆಯಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಸಂಶೋಧನಾ ಅಧ್ಯಯನವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಹೊಗೆ ಹೊರಸೂಸುವ ಒಲೆಯು 24 ಗಂಟೆಗಳಲ್ಲಿ 400 ಸಿಗರೇಟುಗಳನ್ನು ಸೇದುವುದಕ್ಕೆ ಸಮನಾಗಿದೆ ಎಂದು ಮಾಹಿತಿ ನೀಡಿದರು. ಮಹಿಳೆಯರಿಗೆ ಸುರಕ್ಷಿತ ವಾತಾವರಣವನ್ನು ಒದಗಿಸಲು ಹಿಂದಿನ ಸರ್ಕಾರಗಳ ಪ್ರಯತ್ನದ ಕೊರತೆ ಬಗ್ಗೆ ಅವರು ವಿಷಾದಿಸಿದರು.

ಉಜ್ವಲ ಯೋಜನೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಈ ಹಿಂದೆ ಅನಿಲ ಸಂಪರ್ಕ ಪಡೆಯುವಲ್ಲಿ ಆಗುತ್ತಿದ್ದ ತೊಂದರೆಗಳನ್ನು ಸ್ಮರಿಸಿದರು. ಪ್ರಸ್ತುತ ಸರ್ಕಾರವು ʻರಕ್ಷಾ ಬಂಧನʼದ ಹಬ್ಬದ ಅವಧಿಯಲ್ಲಿ ಅನಿಲ ಬೆಲೆಯನ್ನು ಕಡಿಮೆ ಮಾಡಿದೆ, ಇದು ಉಜ್ವಲ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು 400 ರೂ.ಗಳಷ್ಟು ಅಗ್ಗವಾಗಿಸಿದೆ ಎಂದು ಅವರು ಒತ್ತಿ ಹೇಳಿದರು. ಮುಂಬರುವ ಹಬ್ಬದ ಋತುವಿನ ಪ್ರಾರಂಭದ ಹಿನ್ನೆಲೆಯಲ್ಲಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಇನ್ನೂ 100 ರೂ.ಗಳಷ್ಟು ಕಡಿಮೆ ಮಾಡಲು ಸರ್ಕಾರ ಕೈಗೊಂಡ ನಿರ್ಧಾರದ ಬಗ್ಗೆ ಅವರು ಮಾಹಿತಿ ನೀಡಿದರು. "ಕಳೆದ ಕೆಲವು ವಾರಗಳಲ್ಲಿ, ಉಜ್ವಲ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಒಟ್ಟು 500 ರೂ.ಗಳಷ್ಟು ಕಡಿಮೆ ಮಾಡಲಾಗಿದೆ" ಎಂದು ಪ್ರಧಾನಿ ಹೇಳಿದರು. ರಾಜ್ಯದಲ್ಲಿ ಅನಿಲ ಕೊಳವೆ ಮಾರ್ಗಗಳನ್ನು ಹಾಕಿರುವುದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಪೈಪ್‌ಲೈನ್‌ಗಳ ಮೂಲಕ ಅಗ್ಗದ ಅಡುಗೆ ಅನಿಲ ಪೂರೈಕೆಯಲ್ಲಿ ಕೇಂದ್ರ ಸರ್ಕಾರ ದಾಪುಗಾಲು ಹಾಕುತ್ತಿದೆ ಎಂದು ಒತ್ತಿ ಹೇಳಿದರು.

ಹಿಂದಿನ ಸರ್ಕಾರಗಳ ಅವಧಿಯಲ್ಲಿ ನಡೆದ ಹಗರಣಗಳ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಬಡವರಿಗಾಗಿ ಮೀಸಲಿಟ್ಟಿರುವ ಹಣವು ಭ್ರಷ್ಟರ ಬೊಕ್ಕಸವನ್ನು ತುಂಬುತ್ತಿತ್ತು ಎಂದು ಒತ್ತಿ ಹೇಳಿದರು. ಹತ್ತು ವರ್ಷಗಳ ಹಿಂದೆ ನಡೆದ ವಿವಿಧ ಹಗರಣಗಳ ಬಗ್ಗೆಯೇ ಹೆಚ್ಚು ಸುದ್ದಿಗಳಾಗುತ್ತಿದ್ದನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುವಂತೆ ಅವರು ಸಲಹೆ ನೀಡಿದರು.

2014ರ ನಂತರ, ಪ್ರಸ್ತುತ ಸರ್ಕಾರವು ಭ್ರಷ್ಟಾಚಾರದ ಅಭ್ಯಾಸಗಳನ್ನು ತೊಡೆದುಹಾಕಲು 'ಸ್ವಚ್ಚ' ಅಭಿಯಾನವನ್ನು ಕೈಗೊಂಡಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. "ಎಂದಿಗೂ ಅಸ್ತಿತ್ವದಲ್ಲಿಲ್ಲದ 11 ಕೋಟಿ ನಕಲಿ ಫಲಾನುಭವಿಗಳನ್ನು ತಂತ್ರಜ್ಞಾನದ ಬಳಕೆಯೊಂದಿಗೆ ಸರ್ಕಾರದ ಪಟ್ಟಿಯಿಂದ ತೆಗೆದುಹಾಕಲಾಗಿದೆ," ಎಂದು ಪ್ರಧಾನಿ ಒತ್ತಿ ಹೇಳಿದರು, "2014ರ ನಂತರ, ಬಡವರಿಗಾಗಿ ಮೀಸಲಾದ ಹಣವನ್ನು ಯಾರೂ ಲೂಟಿ ಮಾಡದಂತೆ ಮೋದಿ ನೋಡಿಕೊಂಡರು," ಎಂದು ಪ್ರಧಾನಿ ಒತ್ತಿ ಹೇಳಿದರು. ʻಜನ್‌ಧನ್, ಆಧಾರ್ ಮತ್ತು ಮೊಬೈಲ್ʼ ಎಂಬ ತ್ರಿವಗಳಿಗಳ ಸೃಷ್ಟಿಯು ಅಸ್ತಿತ್ವದಲ್ಲಿದ್ದ ಭ್ರಷ್ಟ ವ್ಯವಸ್ಥೆಯನ್ನು ಅಳಿಸಿಹಾಕಲು ನೆರವಾಯಿತು ಎಂದು ಅವರು ಹೇಳಿದರು. "ಇಂದು, ಈ ತ್ರಿಶಕ್ತಿಯಿಂದಾಗಿ, 2.5 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಅನರ್ಹರ ಕೈಗಳಿಗೆ ಸೇರದಂತೆ ಉಳಿಸಲಾಗಿದೆ," ಎಂದು ಪ್ರಧಾನಿ ಪುನರುಚ್ಚರಿಸಿದರು. ಕೇವಲ 500 ರೂ.ಗೆ ಉಜ್ವಲ ಸಿಲಿಂಡರ್ ಒದಗಿಸಲು ಕೇಂದ್ರ ಸರ್ಕಾರ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ, ಕೋಟ್ಯಂತರ ಕುಟುಂಬಗಳಿಗೆ ಉಚಿತ ಪಡಿತರವನ್ನು ಒದಗಿಸಲು 3 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ, ʻಆಯುಷ್ಮಾನ್ʼ ಯೋಜನೆಯಡಿ ದೇಶದ ಸುಮಾರು 5 ಕೋಟಿ ಕುಟುಂಬಗಳಿಗೆ ಉಚಿತ ಚಿಕಿತ್ಸೆಗಾಗಿ 70,000 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ, ರೈತರಿಗೆ ಅಗ್ಗದ ಯೂರಿಯಾ ಸಿಗುವಂತೆ ನೋಡಿಕೊಳ್ಳಲು 8 ಲಕ್ಷ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.  ʻಪಿಎಂ ಕಿಸಾನ್ ಸಮ್ಮಾನ್ ನಿಧಿʼ ಅಡಿಯಲ್ಲಿ ಸಣ್ಣ ರೈತರ ಬ್ಯಾಂಕ್ ಖಾತೆಗಳಿಗೆ ಒಟ್ಟು 2.5 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಠೇವಣಿ ಮಾಡಲಾಗಿದೆ. ಬಡ ಕುಟುಂಬಗಳಿಗೆ ಶಾಶ್ವತ ಮನೆಗಳನ್ನು ಒದಗಿಸಲು 4 ಲಕ್ಷ ಕೋಟಿ ರೂ. ವೆಚ್ಚಿಸಲಾಗಿದೆ. ಇಂದೋರ್‌ನ ಬಡ ಕುಟುಂಬಗಳು ಆಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಿಸಲಾದ 1,000 ಶಾಶ್ವತ ಮನೆಗಳನ್ನು ಪಡೆದಿವೆ ಎಂದು ಅವರು ಉಲ್ಲೇಖಿಸಿದರು.

ಮಧ್ಯಪ್ರದೇಶಕ್ಕೆ ಇದು ನಿರ್ಣಾಯಕ ಸಮಯ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಅಭಿವೃದ್ಧಿಯಲ್ಲಿ ಯಾವುದೇ ಅಡೆತಡೆಯು ಎದುರಾದಲ್ಲಿ ಅದು ಕಳೆದ ಎರಡು ದಶಕಗಳ ಕಠಿಣ ಪರಿಶ್ರಮವನ್ನು ಹಾಳು ಮಾಡುತ್ತದೆ ಎಂದು ಹೇಳಿದರು. 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ಮಧ್ಯಪ್ರದೇಶವನ್ನು ನೋಡಲು ತಮ್ಮ ಮಕ್ಕಳು ಬೆಳೆಯುವಂತೆ ಖಚಿತಪಡಿಸಿಕೊಳ್ಳುವುದು ಅವರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಪ್ರಸ್ತುತ ಸರ್ಕಾರವು ಕಳೆದ ವರ್ಷಗಳಲ್ಲಿ ಕೃಷಿ ರಫ್ತಿನಲ್ಲಿ ಮಧ್ಯಪ್ರದೇಶವನ್ನು ಅಗ್ರಸ್ಥಾನಕ್ಕೆ ಕೊಂಡೊಯ್ದಿದೆ ಎಂದು ಮಾಹಿತಿ ನೀಡಿದ ಅವರು, ಕೈಗಾರಿಕಾ ಅಭಿವೃದ್ಧಿಯಲ್ಲಿ ರಾಜ್ಯವು ಮುಂಚೂಣಿಯಲ್ಲಿರುವ ಮಹತ್ವವನ್ನು ಒತ್ತಿ ಹೇಳಿದರು. ಕಳೆದ ಹಲವು ವರ್ಷಗಳಿಂದ ಭಾರತದ ರಕ್ಷಣಾ ಸಾಮಗ್ರಿ ರಫ್ತಿನಲ್ಲಿ ಹಲವು ಪಟ್ಟು ಹೆಚ್ಚಳವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ರಕ್ಷಣಾ ಸಂಬಂಧಿತ ಸರಕುಗಳನ್ನು ತಯಾರಿಸುವ 4 ಕಾರ್ಖಾನೆಗಳನ್ನು ಹೊಂದಿರುವ ಜಬಲ್‌ಪುರವು ಇದಕ್ಕೆ ದೊಡ್ಡ ಕೊಡುಗೆ ನೀಡಿದೆ ಎಂದರು. ಕೇಂದ್ರ ಸರ್ಕಾರವು ತನ್ನ ಸೈನ್ಯಕ್ಕೆ 'ಮೇಡ್ ಇನ್ ಇಂಡಿಯಾ' ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದೆ ಮತ್ತು ಭಾರತದ ರಕ್ಷಣಾ ಸರಕುಗಳಿಗೆ ವಿಶ್ವದಲ್ಲಿ ಬೇಡಿಕೆ ಹೆಚ್ಚುತ್ತಿದೆ ಎಂದರು. "ಮಧ್ಯಪ್ರದೇಶವೂ ಇದರಿಂದ ಸಾಕಷ್ಟು ಪ್ರಯೋಜನ ಪಡೆಯಲಿದೆ, ಇಲ್ಲಿ ಸಾವಿರಾರು ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ," ಎಂದು ಅವರು ಹೇಳಿದರು.

"ಇಂದು ಭಾರತದ ಆತ್ಮವಿಶ್ವಾಸ ಹೊಸ ಎತ್ತರದಲ್ಲಿದೆ. ಆಟದ ಮೈದಾನದಿಂದ ಹಿಡಿದು ಹೊಲಗಳು ಮತ್ತು ಕಣಜಗಳವರೆಗೆ ಭಾರತದ ಧ್ವಜ ಹಾರಾಡುತ್ತಿದೆ,", ಎಂದು ಪ್ರಧಾನಿ ಹೇಳಿದರು. ಪ್ರಸ್ತುತ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಅದ್ಭುತ ಪ್ರದರ್ಶನದ ಬಗ್ಗೆ ವಿಶೇಷವಾಗಿ ಉಲ್ಲೇಖಿಸಿದ ಅವರು, ಈ ʻಸಮಯವು ಭಾರತದ ಸಮಯವಾಗಿದೆʼ ಎಂದು ಭಾರತದ ಪ್ರತಿಯೊಬ್ಬ ಯುವಕರು ಭಾವಿಸುತ್ತಾರೆ ಎಂದರು. ಯುವಕರಿಗೆ ಇಂತಹ ಅವಕಾಶಗಳು ದೊರೆತಾಗ, ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಅವರ ಉತ್ಸಾಹಕ್ಕೂ ಉತ್ತೇಜನ ಸಿಗುತ್ತದೆ ಎಂದು ಅವರು ಒತ್ತಿ ಹೇಳಿದರು. ʻಜಿ-20ʼಯಂತಹ ಭವ್ಯ ಜಾಗತಿಕ ಕಾರ್ಯಕ್ರಮವನ್ನು ಆಯೋಜಿಸಿದ ಉದಾಹರಣೆಗಳನ್ನು ಮತ್ತು ಭಾರತದ ಚಂದ್ರಯಾನದ ಯಶಸ್ಸನ್ನು ಉಲ್ಲೇಖಿಸಿದ ಅವರು, ʻವೋಕಲ್‌ ಫಾರ್‌ ಲೋಕಲ್‌ʼ ಮಂತ್ರವು ಅಂತಹ ಯಶಸ್ಸಿನೊಂದಿಗೆ ಎಲ್ಲೆಡೆ ಪ್ರತಿಧ್ವನಿಸಲು ಪ್ರಾರಂಭಿಸುತ್ತದೆ ಎಂದು ಹೇಳಿದರು. ಗಾಂಧಿ ಜಯಂತಿಯ ಸಂದರ್ಭದಲ್ಲಿ ದೆಹಲಿಯ ಅಂಗಡಿಯೊಂದರಲ್ಲಿ 1.5 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಖಾದಿ ಉತ್ಪನ್ನಗಳನ್ನು ಮಾರಾಟ ಮಾಡಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. "ಸ್ವದೇಶಿ ಭಾವನೆ, ದೇಶವನ್ನು ಮುಂದೆ ಕೊಂಡೊಯ್ಯುವ ಭಾವನೆ ಇಂದು ಎಲ್ಲೆಡೆ ಹೆಚ್ಚುತ್ತಿದೆ," ಎಂದು ಶ್ರೀ ಮೋದಿ ಒತ್ತಿ ಹೇಳಿದರು. ನವೋದ್ಯಮಗಳ ಜಗತ್ತಿನಲ್ಲಿ ಯಶಸ್ಸನ್ನು ಸಾಧಿಸುವಲ್ಲಿ ಭಾರತದ ಯುವಕರ ಪಾತ್ರದ ಬಗ್ಗೆಯೂ ಅವರು ಮಾತನಾಡಿದರು. ಅ.1ರಂದು ದೇಶವು ಪ್ರಾರಂಭಿಸಿದ ಸ್ವಚ್ಛತಾ ಅಭಿಯಾನದಲ್ಲಿ, ಸುಮಾರು 9 ಕೋಟಿ ನಾಗರಿಕರ ಭಾಗವಹಿಸುವಿಕೆಯೊಂದಿಗೆ 9 ಲಕ್ಷಕ್ಕೂ ಹೆಚ್ಚು ಸ್ಥಳಗಳಲ್ಲಿ ಸ್ವಚ್ಚತಾ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಸ್ವಚ್ಛತೆಯ ವಿಷಯದಲ್ಲಿ ರಾಜ್ಯವನ್ನು ಅಗ್ರಸ್ಥಾನಕ್ಕೆ ಕೊಂಡೊಯ್ದ ಕೀರ್ತಿ ಮಧ್ಯಪ್ರದೇಶದ ಜನರಿಗೆ ಸಲ್ಲುತ್ತದೆ ಎಂದು ಅವರು ಶ್ಲಾಘಿಸಿದರು.

ದೇಶದ ಸಾಧನೆಗಳು ವಿಶ್ವದಾದ್ಯಂತ ಚರ್ಚೆಯಾಗುತ್ತಿರುವ ಸಮಯದಲ್ಲಿ ಕೆಲವು ರಾಜಕೀಯ ಪಕ್ಷಗಳ ಭಾರತವನ್ನು ದೂಷಿಸುವ ವಿಧಾನದ ವಿರುದ್ಧ ಪ್ರಧಾನಿ ಎಚ್ಚರಿಕೆ ನೀಡಿದರು. ʻಡಿಜಿಟಲ್ ಇಂಡಿಯಾʼ ಅಭಿಯಾನ ಮತ್ತು ಭಾರತದ ಕೋವಿಡ್ ಲಸಿಕೆಗೆ ಸಂಬಂಧಿಸಿದಂತೆ ಅಂತಹ ಪಕ್ಷಗಳು ಎತ್ತಿರುವ ಪ್ರಶ್ನೆಗಳ ಅವರು ಇದಕ್ಕೆ ಉದಾಹರಣೆಯಾಗಿ ನೀಡಿದರು. ಅಂತಹ ರಾಜಕೀಯ ಪಕ್ಷಗಳು ದೇಶದ ಶತ್ರುಗಳ ಮಾತುಗಳನ್ನು ನಂಬುತ್ತವೆ ಮತ್ತು ಭಾರತೀಯ ಸೇನೆಯನ್ನು ಪ್ರಶ್ನಿಸುವ ಮಟ್ಟಕ್ಕೆ ಹೋಗುತ್ತವೆ ಎಂದು ಅವರು ಉಲ್ಲೇಖಿಸಿದರು. ʻಅಮೃತ ಮಹೋತ್ಸವʼ ಆಚರಣೆ ಮತ್ತು ʻಅಮೃತ ಸರೋವರʼಗಳ ಸೃಷ್ಟಿಯ ಬಗ್ಗೆಯೂ ಅವರು ಪ್ರಸ್ತಾಪಿಸಿದರು.

ಸ್ವಾತಂತ್ರ್ಯದಿಂದ ಸಾಂಸ್ಕೃತಿಕ ಪರಂಪರೆಯ ಶ್ರೀಮಂತಿಕೆಯವರೆಗೆ ಭಾರತದ ಬುಡಕಟ್ಟು ಸಮಾಜದ ಪಾತ್ರವನ್ನು ಶ್ರೀ ಮೋದಿ ಒತ್ತಿ ಹೇಳಿದರು. ಸ್ವಾತಂತ್ರ್ಯದ ನಂತರ ದಶಕಗಳ ಕಾಲ ಆಳಿದವರು ಬುಡಕಟ್ಟು ಸಮಾಜವನ್ನು ನಿರ್ಲಕ್ಷಿಸಿದ ಬಗ್ಗೆ ಪ್ರಶ್ನಿಸಿದರು. ಅಟಲ್ ಜಿ ಅವರ ಸರ್ಕಾರವು ಪ್ರತ್ಯೇಕ ಸಚಿವಾಲಯವನ್ನು ರಚಿಸಿತು ಮತ್ತು ಬುಡಕಟ್ಟು ಸಮಾಜದ ಕಲ್ಯಾಣಕ್ಕಾಗಿ ಅನುದಾನ ನಿಗದಿಪಡಿಸಿತು ಎಂದು ಅವರು ಒತ್ತಿಹೇಳಿದರು. ಕಳೆದ 9 ವರ್ಷಗಳಲ್ಲಿ ಈ ವರ್ಗಕ್ಕಾಗಿ ಬಜೆಟ್‌ ಅನುದಾನವನ್ನು ಹಲವು ಪಟ್ಟು ಹೆಚ್ಚಿಸಲಾಗಿದೆ ಎಂದು ಶ್ರೀ ಮೋದಿ ಮಾಹಿತಿ ನೀಡಿದರು. ಭಾರತವು ತನ್ನ ಮೊದಲ ಮಹಿಳಾ ಬುಡಕಟ್ಟು ರಾಷ್ಟ್ರಪತಿಯನ್ನು ಪಡೆದ ಬಗ್ಗೆ ಹಾಗೂ ಲಾರ್ಡ್ ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ʻಗೌರವ್ ದಿವಸ್ʼ ಎಂದು ಆಚರಿಸುತ್ತಿರುವ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ದೇಶದ ಅತ್ಯಂತ ಆಧುನಿಕ ರೈಲ್ವೆ ನಿಲ್ದಾಣಗಳಲ್ಲಿ ಒಂದಕ್ಕೆ ರಾಣಿ ಕಮಲಾಪತಿ ಅವರ ಹೆಸರಿಡುವುದು, ಪಾತಲ್ಪಾನಿ ನಿಲ್ದಾಣವನ್ನು ಜನನಾಯಕ್ ತಂತ್ರ್ಯಭಿಲ್ ಎಂದು ಮರುನಾಮಕರಣ ಮಾಡುವುದು ಮತ್ತು ಗೊಂಡ್ ಸಮುದಾಯಕ್ಕೆ ಸ್ಫೂರ್ತಿಯಾಗಿರುವ ರಾಣಿ ದುರ್ಗಾವತಿ ಅವರ ಹೆಸರಿನಲ್ಲಿ ನಿರ್ಮಿಸಲಾಗುತ್ತಿರುವ ಭವ್ಯ ಸ್ಮಾರಕದ ಇಂದಿನ ಯೋಜನೆಯನ್ನು ಶ್ರೀ ಮೋದಿ ಒತ್ತಿ ಹೇಳಿದರು. ಶ್ರೀಮಂತ ಗೊಂಡ್ ಸಂಪ್ರದಾಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ನಿರ್ಮಿಸಲಾದ ವಸ್ತು ಪ್ರದರ್ಶನಾಲಯವು ಗೊಂಡ್ ಸಂಸ್ಕೃತಿ, ಇತಿಹಾಸ ಮತ್ತು ಕಲೆಯನ್ನು ಪ್ರದರ್ಶಿಸುತ್ತದೆ ಎಂದು ಅವರು ಮಾಹಿತಿ ನೀಡಿದರು. ವಿಶ್ವ ನಾಯಕರಿಗೆ ಗೊಂಡ್ ವರ್ಣಚಿತ್ರಗಳನ್ನು ಉಡುಗೊರೆಯಾಗಿ ನೀಡಿದ ಬಗ್ಗೆಯೂ ಪ್ರಧಾನಿ ಮೋದಿ ಪ್ರಸ್ತಾಪಿಸಿದರು.

ಮೋವ್ ಸೇರಿದಂತೆ ವಿಶ್ವದಾದ್ಯಂತ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಸ್ಥಳಗಳನ್ನು ʻಪಂಚತೀರ್ಥʼವಾಗಿಸಿದ್ದು ಪ್ರಸ್ತುತ ಸರ್ಕಾರವೇ ಎಂದು ಪ್ರಧಾನಿ ಪುನರುಚ್ಚರಿಸಿದರು. ಕೆಲವು ವಾರಗಳ ಹಿಂದೆ ಸಾಗರದಲ್ಲಿ ಸಂತ ರವಿದಾಸ್ ಜೀ ಅವರ ಸ್ಮಾರಕ ಸ್ಥಳಕ್ಕೆ ಭೂಮಿ ಪೂಜೆ ನೆರವೇರಿಸಿದ್ದನ್ನು ಅವರು ಸ್ಮರಿಸಿದರು. ಇದು ಸಾಮಾಜಿಕ ಸಾಮರಸ್ಯ ಮತ್ತು ಪರಂಪರೆಯ ಬಗ್ಗೆ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದರು.

ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರವನ್ನು ಪೋಷಿಸುವ ಪಕ್ಷಗಳು ಬುಡಕಟ್ಟು ಸಮಾಜದ ಸಂಪನ್ಮೂಲಗಳನ್ನು ಲೂಟಿ ಮಾಡಿವೆ ಎಂದು ಅವರು ಒತ್ತಿ ಹೇಳಿದರು. 2014ಕ್ಕಿಂತ ಮೊದಲು, ಕೇವಲ 8-10 ಅರಣ್ಯ ಉತ್ಪನ್ನಗಳಿಗೆ ಮಾತ್ರ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ನೀಡಲಾಗುತ್ತಿತ್ತು, ಉಳಿದವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು, ಆದರೆ ಇಂದು ಸುಮಾರು 90 ಅರಣ್ಯ ಉತ್ಪನ್ನಗಳನ್ನು ʻಎಂಎಸ್‌ಪಿʼ ವ್ಯಾಪ್ತಿಗೆ ತರಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು.

ಈ ಹಿಂದೆ ಬುಡಕಟ್ಟು ಮತ್ತು ಸಣ್ಣ ರೈತರು ಉತ್ಪಾದಿಸುವ ಕೊಡೋ-ಕುಟ್ಕಿಯಂತಹ ಒರಟು ಧಾನ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರಲಿಲ್ಲ ಎಂದು ಪ್ರಧಾನಿ ಹೇಳಿದರು. ʻಜಿ-20ʼ ಅತಿಥಿಗಳಿಗೆ ಆಹಾರ ತಯಾರಿಕೆಗಳನ್ನು ನಿಮ್ಮ ʻಕೊಡೊ-ಕುಟ್ಕಿʼಯಿಂದ ತಯಾರಿಸಲಾಗಿದೆ ಎಂದು ಅವರು ಒತ್ತಿ ಹೇಳಿದರು. "ಪ್ರಸ್ತುತ ಸರ್ಕಾರವು ಸಿರಿಧಾನ್ಯಗಳ (ಶ್ರೀ ಅನ್ನ) ರೂಪದಲ್ಲಿ ʻಕೊಡೊ-ಕುಟ್ಕಿʼಯನ್ನು ದೇಶ ಮತ್ತು ವಿದೇಶಗಳ ಮಾರುಕಟ್ಟೆಗಳಿಗೆ ತಲುಪಿಸಲು ಬಯಸಿದೆ," ಎಂದು ಅವರು ಹೇಳಿದರು.

"ಡಬಲ್ ಇಂಜಿನ್ ಸರ್ಕಾರ ದೀನದಲಿತರಿಗೆ ಆದ್ಯತೆ ನೀಡುತ್ತದೆ," ಎಂದು ಪ್ರಧಾನಿ ಹೇಳಿದರು. ಬಡವರ ಆರೋಗ್ಯಕ್ಕಾಗಿ ಶುದ್ಧ ಕುಡಿಯುವ ನೀರು ಸರಬರಾಜಿನ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಸುಮಾರು 1,600 ಹಳ್ಳಿಗಳಿಗೆ ನೀರು ಪೂರೈಸಲು ವ್ಯವಸ್ಥೆ ಮಾಡಲಾದ ಇಂದಿನ ಯೋಜನೆಗಳನ್ನು ಉಲ್ಲೇಖಿಸಿದರು. ʻನಾರಿ ಶಕ್ತಿ ವಂದನ್ ಅಧಿನಿಯಮ್ʼ ಮೂಲಕ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಅವರ ಹಕ್ಕುಗಳನ್ನು ನೀಡುವ ಬಗ್ಗೆಯೂ ಅವರು ಪ್ರಸ್ತಾಪಿಸಿದರು. 13 ಸಾವಿರ ಕೋಟಿ ರೂ.ಗಳ ʻಪಿಎಂ ವಿಶ್ವಕರ್ಮʼ ಯೋಜನೆಯ ಬಗ್ಗೆಯೂ ಪ್ರಧಾನಿ ಪ್ರಸ್ತಾಪಿಸಿದರು.

ಭಾಷಣವನ್ನು ಮುಕ್ತಾಯಗೊಳಿಸುವ ಮುನ್ನ ಪ್ರಧಾನಮಂತ್ರಿಯವರು, ಅಭಿವೃದ್ಧಿಯ ವಿಷಯದಲ್ಲಿ ಮಧ್ಯಪ್ರದೇಶವನ್ನು ಅಗ್ರಸ್ಥಾನಕ್ಕೆ ಕೊಂಡೊಯ್ಯುವ ಮೋದಿಯವರ ಖಾತರಿಯ ಬಗ್ಗೆ ನಾಗರಿಕರಿಗೆ ಭರವಸೆ ನೀಡಿದರು. "ಮಧ್ಯಪ್ರದೇಶದ ಮಹಾಕೌಶಲವು ಮೋದಿ ಮತ್ತು ಸರ್ಕಾರದ ಈ ಸಂಕಲ್ಪವನ್ನು ಬಲಪಡಿಸುತ್ತದೆ ಎಂದು ನನಗೆ ವಿಶ್ವಾಸವಿದೆ," ಎಂದು ಅವರು ಹೇಳಿದರು.

ಮಧ್ಯಪ್ರದೇಶದ ರಾಜ್ಯಪಾಲ ಮಂಗುಭಾಯಿ ಸಿ. ಪಟೇಲ್ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ರಾಣಿ ದುರ್ಗಾವತಿ ಅವರ 500ನೇ ಜನ್ಮ ದಿನಾಚರಣೆಯನ್ನು ಭಾರತ ಸರ್ಕಾರವು ಬಹಳ ಉತ್ಸಾಹದಿಂದ ಆಚರಿಸುತ್ತಿದೆ. 2023ರ ಜುಲೈನಲ್ಲಿ ಮಧ್ಯಪ್ರದೇಶದ ಶಹದೋಲ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಈ ಆಚರಣೆಯ ಬಗ್ಗೆ ಘೋಷಣೆ ಮಾಡಿದ್ದರು. ಈ ವರ್ಷದ ಐತಿಹಾಸಿಕ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಅವರು ಕೆಂಪು ಕೋಟೆಯ ಕೊತ್ತಲಗಳಿಂದ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಈ ಘೋಷಣೆಯನ್ನು ಪುನರುಚ್ಚರಿಸಿದರು. ಈ ಆಚರಣೆಗಳಿಗೆ ಅನುಗುಣವಾಗಿ ಪ್ರಧಾನಮಂತ್ರಿಯವರು 'ವೀರಾಂಗನಾ ರಾಣಿ ದುರ್ಗಾವತಿ ಸ್ಮಾರಕ ಮತ್ತು ಉದ್ಯಾನ'ಕ್ಕೆ ಭೂಮಿ ಪೂಜೆ ನೆರವೇರಿಸಿದರು.

ಜಬಲ್‌ಪುರದಲ್ಲಿ ಸುಮಾರು 100 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುವ 'ವೀರಾಂಗನಾ ರಾಣಿ ದುರ್ಗಾವತಿ ಸ್ಮಾರಕ ಮತ್ತು ಉದ್ಯಾನ'ವು ಸುಮಾರು 21 ಎಕರೆ ಪ್ರದೇಶದಲ್ಲಿ ಹರಡಿದೆ. ಇದು ರಾಣಿ ದುರ್ಗಾವತಿಯ 52 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಒಳಗೊಂಡಿದೆ. ಇದು ರಾಣಿ ದುರ್ಗಾವತಿಯ ಶೌರ್ಯ ಮತ್ತು ಸಾಹಸ ಸೇರಿದಂತೆ ಗೊಂಡ್ವಾನಾ ಪ್ರದೇಶದ ಇತಿಹಾಸವನ್ನು ಎತ್ತಿ ತೋರಿಸುವ ಭವ್ಯವಾದ ವಸ್ತುಸಂಗ್ರಹಾಲಯವನ್ನು ಹೊಂದಿರುತ್ತದೆ. ಇದು ಗೊಂಡ್ ಜನರು ಮತ್ತು ಇತರ ಬುಡಕಟ್ಟು ಸಮುದಾಯಗಳ ಪಾಕಪದ್ಧತಿ, ಕಲೆ, ಸಂಸ್ಕೃತಿ, ಜೀವನ ವಿಧಾನ ಇತ್ಯಾದಿಗಳನ್ನು ಎತ್ತಿ ತೋರಿಸುತ್ತದೆ. 'ವೀರಾಂಗನ ರಾಣಿ ದುರ್ಗಾವತಿ ಸ್ಮಾರಕ ಮತ್ತು ಉದ್ಯಾನ'ದ ಆವರಣದಲ್ಲಿ ಔಷಧೀಯ ಸಸ್ಯಗಳ ಉದ್ಯಾನ, ಕಳ್ಳಿ ತೋಟ ಮತ್ತು ರಾಕ್ ಗಾರ್ಡನ್ ಸೇರಿದಂತೆ ಅನೇಕ ಉದ್ಯಾನವನಗಳು ಇರಲಿವೆ. ರಾಣಿ ದುರ್ಗಾವತಿ ಅವರು 16ನೇ ಶತಮಾನದ ಮಧ್ಯಭಾಗದಲ್ಲಿ ಗೊಂಡ್ವಾನಾದ ರಾಣಿಯಾಗಿದ್ದರು. ಮೊಘಲರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೈರ್ಯಶಾಲಿ, ನಿರ್ಭೀತ ಮತ್ತು ಸಾಹಸಿ ಯೋಧಳಾಗಿ ಅವರನ್ನು ಸ್ಮರಿಸಲಾಗುತ್ತದೆ.

ಮಧ್ಯಪ್ರದೇಶದ ಇಂದೋರ್‌ನಲ್ಲಿ ʻಲೈಟ್ ಹೌಸ್ʼ ಯೋಜನೆಯನ್ನು ಉದ್ಘಾಟಿಸುವುದರೊಂದಿಗೆ 'ಎಲ್ಲರಿಗೂ ವಸತಿ' ಒದಗಿಸುವ ಪ್ರಧಾನಮಂತ್ರಿಯವರ ಆಶಯಕ್ಕೆ ಬಲ ಬಂದಿದೆ. ʻಪ್ರಧಾನ ಮಂತ್ರಿ ಆವಾಸ್ ಯೋಜನೆ – ನಗರʼ ಅಡಿಯಲ್ಲಿ ಸುಮಾರು 128 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಈ ಯೋಜನೆಯು 1000 ಕ್ಕೂ ಹೆಚ್ಚು ಫಲಾನುಭವಿ ಕುಟುಂಬಗಳಿಗೆ ಪ್ರಯೋಜನವನ್ನು ನೀಡುತ್ತದೆ. ಸಕಲ ಮೂಲಸೌಕರ್ಯಗಳೊಂದಿಗೆ ಗುಣಮಟ್ಟದ ಮನೆಗಳನ್ನು ನಿರ್ಮಿಸಲು ಇದರಲ್ಲಿ ನವೀನ ತಂತ್ರಜ್ಞಾನವನ್ನು ಬಳಸಲಾಗುತ್ತಿದ್ದು, 'ಪ್ರಿ-ಎಂಜಿನಿಯರ್ಡ್ ಸ್ಟೀಲ್ ಸ್ಟ್ರಕ್ಚರಲ್ ಸಿಸ್ಟಮ್' ವ್ಯವಸ್ಥೆಯು ನಿರ್ಮಾಣ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಿದೆ.

ವೈಯಕ್ತಿಕ ಮನೆ ಕೊಳಾಯಿ ಸಂಪರ್ಕಗಳ ಮೂಲಕ ಸುರಕ್ಷಿತ ಮತ್ತು ಸಮರ್ಪಕ ಕುಡಿಯುವ ನೀರನ್ನು ಒದಗಿಸುವ ಪ್ರಧಾನಮಂತ್ರಿಯವರ ಆಶಯವನ್ನು ಸಾಕಾರಗೊಳಿಸುವ ಒಂದು ಹೆಜ್ಜೆಯಾಗಿ, ಮಾಂಡ್ಲಾ, ಜಬಲ್‌ಪುರ ಮತ್ತು ದಿಂಡೋರಿ ಜಿಲ್ಲೆಗಳಲ್ಲಿ 2,350 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ʻಜಲ ಜೀವನ್ ಮಿಷನ್ʼ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಪ್ರಧಾನಮಂತ್ರಿಯವರು ಸಿಯೋನಿ ಜಿಲ್ಲೆಯಲ್ಲಿ 100 ಕೋಟಿ ರೂ.ಗೂ ಅಧಿಕ ಮೌಲ್ಯದ ʻಜಲ ಜೀವನ್ ಮಿಷನ್ʼ ಯೋಜನೆ ಕಾಮಗಾರಿಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿನ ಈ ಯೋಜನೆಗಳು ಮಧ್ಯಪ್ರದೇಶದ ಸುಮಾರು 1,575 ಗ್ರಾಮಗಳಿಗೆ ಪ್ರಯೋಜನವನ್ನು ನೀಡಲಿವೆ.

ಮಧ್ಯಪ್ರದೇಶದಲ್ಲಿ ರಸ್ತೆ ಮೂಲಸೌಕರ್ಯ ಸುಧಾರಣೆಗಾಗಿ 4,800 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಯೋಜನೆಗಳಿಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ / ಲೋಕಾರ್ಪಣೆ ನೆರವೇರಿಸಿದರು. ಪ್ರಧಾನಮಂತ್ರಿಯವರು ರಾಷ್ಟ್ರೀಯ ಹೆದ್ದಾರಿ 346ರ ʻಜಾರ್ಖೇಡಾ-ಬೆರಾಸಿಯಾ-ಧೋಲ್‌ಖೇಡಿʼಯನ್ನು ಸಂಪರ್ಕಿಸುವ ರಸ್ತೆಯನ್ನು ಮೇಲ್ದರ್ಜೆಗೇರಿಸುವುದು ಸೇರಿದಂತೆ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ರಾಷ್ಟ್ರೀಯ ಹೆದ್ದಾರಿ 543ರ ʻಬಾಲಾಘಾಟ್ – ಗೊಂಡಿಯಾʼ ವಿಭಾಗವನ್ನು ಚತುಷ್ಪಥಗೊಳಿಸುವುದು; ರುಧಿ ಮತ್ತು ದೇಶಗಾಂವ್ ಅನ್ನು ಸಂಪರ್ಕಿಸುವ ʻಖಾಂಡ್ವಾ ಬೈಪಾಸ್ʼನ ಚತುಷ್ಪಥ ಕಾಮಗಾರಿ; ರಾಷ್ಟ್ರೀಯ ಹೆದ್ದಾರಿ 47ರ ʻತೆಮಗಾಂವ್‌ನಿಂದ ಚಿಚೋಲಿʼ ವಿಭಾಗವನ್ನು ಚತುಷ್ಪಥಗೊಳಿಸುವುದು; ʻಬೋರೆಗಾಂವ್‌ನಿಂದ ಶಹಪುರʼಕ್ಕೆ ಸಂಪರ್ಕ ಕಲ್ಪಿಸುವ ಚತುಷ್ಪಥ ರಸ್ತೆ; ಮತ್ತು ʻಶಹಪುರದಿಂದ ಮುಕ್ತೈʼನಗರಕ್ಕೆ ಸಂಪರ್ಕ ಕಲ್ಪಿಸುವ ಚತುಷ್ಪಥ ರಸ್ತೆ ಇವುಗಳಲ್ಲಿ ಸೇರಿವೆ. ರಾಷ್ಟ್ರೀಯ ಹೆದ್ದಾರಿ ʻ347ಸಿʼಯ ಖಲ್‌ಘಾಟ್‌ನಿಂದ ಸರ್ವಾರ್‌ದೇವ್ಲಾಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಯನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು.

ಪ್ರಧಾನಮಂತ್ರಿಯವರು 1,850 ಕೋಟಿ ರೂ.ಗೂ ಅಧಿಕ ಮೌಲ್ಯದ ರೈಲು ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಕತ್ನಿ- ವಿಜಯ್‌ಸೋಟ (102 ಕಿ.ಮೀ) ಮತ್ತು ಮಾರ್ವಾಸ್‌ಗ್ರಾಮ್ - ಸಿಂಗ್ರೌಲಿ (78.50 ಕಿ.ಮೀ) ಅನ್ನು ಸಂಪರ್ಕಿಸುವ ರೈಲು ಮಾರ್ಗದ ಡಬ್ಲಿಂಗ್‌ ಯೋಜನೆ ಇದರಲ್ಲಿ ಸೇರಿದೆ. ಈ ಎರಡೂ ಯೋಜನೆಗಳು ಕತ್ನಿ - ಸಿಂಗ್ರೌಲಿ ವಿಭಾಗವನ್ನು ಸಂಪರ್ಕಿಸುವ ರೈಲು ಮಾರ್ಗವನ್ನು ದ್ವಿಗುಣಗೊಳಿಸುವ ಯೋಜನೆಯ ಭಾಗವಾಗಿವೆ. ಈ ಯೋಜನೆಗಳು ಮಧ್ಯಪ್ರದೇಶದಲ್ಲಿ ರೈಲು ಮೂಲಸೌಕರ್ಯವನ್ನು ಸುಧಾರಿಸಲಿದ್ದು, ರಾಜ್ಯದ ವ್ಯಾಪಾರ ಮತ್ತು ಪ್ರವಾಸೋದ್ಯಮಕ್ಕೆ ಪ್ರಯೋಜನವನ್ನು ನೀಡಲಿವೆ.

ಪ್ರಧಾನಮಂತ್ರಿಯವರು ವಿಜೈಪುರ - ಔರೈಯಾನ್- ಫೂಲ್‌ಪುರ ಪೈಪ್‌ಲೈನ್‌ʼ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. 352 ಕಿ.ಮೀ ಉದ್ದದ ಈ ಕೊಳವೆ ಮಾರ್ಗವನ್ನು 1,750 ಕೋಟಿ ರೂ.ಗಿಂತ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪ್ರಧಾನಮಂತ್ರಿಯವರು ಮುಂಬೈ-ನಾಗ್‌ಪುರ ಜಾರ್ಸುಗುಡ ಪೈಪ್‌ಲೈನ್ʼ ಯೋಜನೆಯ ʻನಾಗ್‌ಪುರ ಜಬಲ್‌ಪುರ ವಿಭಾಗʼಕ್ಕೆ (317 ಕಿ.ಮೀ.) ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಯನ್ನು 1,100 ಕೋಟಿ ರೂ.ಗಿಂತ ಅಧಿಕ ವೆಚ್ಚದಲ್ಲಿ ನಿರ್ಮಿಸಲಾಗುವುದು. ಅನಿಲ ಕೊಳವೆ ಮಾರ್ಗ ಯೋಜನೆಗಳು ಕೈಗಾರಿಕೆಗಳು ಹಾಗೂ ಮನೆಗಳಿಗೆ ಶುದ್ಧ ಮತ್ತು ಕೈಗೆಟುಕುವ ನೈಸರ್ಗಿಕ ಅನಿಲವನ್ನು ಒದಗಿಸುತ್ತವೆ. ಜೊತೆಗೆ, ಪರಿಸರಕ್ಕೆ ಮಾಲಿನ್ಯಕಾರಕ ಅನಿಲಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಜಬಲ್‌ಪುರದಲ್ಲಿ ಸುಮಾರು 147 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಹೊಸ ಬಾಟ್ಲಿಂಗ್ ಘಟಕವನ್ನೂ ಪ್ರಧಾನಿ ರಾಷ್ಟ್ರಕ್ಕೆ ಸಮರ್ಪಿಸಿದರು.

*****



(Release ID: 1964943) Visitor Counter : 98