ಪ್ರಧಾನ ಮಂತ್ರಿಯವರ ಕಛೇರಿ

24.09.2023 ರಂದು 'ಮನ್ ಕಿ ಬಾತ್' ನ 105 ನೇ ಸಂಚಿಕೆಯಲ್ಲಿ ಪ್ರಧಾನ ಮಂತ್ರಿಯವರ ಭಾಷಣದ ಕನ್ನಡ ಅನುವಾದ

Posted On: 24 SEP 2023 11:39AM by PIB Bengaluru

ನನ್ನ ಪ್ರೀತಿಯ ಪರಿವಾರ ಸದಸ್ಯರಿಗೆ ನಮಸ್ಕಾರ. ‘ಮನದ ಮಾತಿನ’ ಮತ್ತೊಂದು ಸಂಚಿಕೆಯಲ್ಲಿ, ದೇಶದ ಯಶಸ್ಸು, ದೇಶದ ಜನತೆಯ ಯಶಸ್ಸು, ಅವರ ಸ್ಪೂರ್ತಿದಾಯಕ ಜೀವನ ಪಯಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಅವಕಾಶ ದೊರೆತಿದೆ. ಇತ್ತೀಚೆಗೆ, ನನಗೆ ಲಭಿಸಿದ ಹೆಚ್ಚಿನ ಪತ್ರಗಳು ಮತ್ತು ಸಂದೇಶಗಳು ಎರಡು ವಿಷಯಗಳ ಮೇಲೆ ಕೇಂದ್ರೀಕೃತವಾಗಿವೆ. ಮೊದಲನೆಯದ್ದು  ಚಂದ್ರಯಾನ-3 ರ ಯಶಸ್ವಿ ಲ್ಯಾಂಡಿಂಗ್ ಮತ್ತು ಎರಡನೇ ವಿಷಯವೆಂದರೆ ದೆಹಲಿಯಲ್ಲಿ ಜಿ-20 ರ ಯಶಸ್ವಿ ಆಯೋಜನೆ. ದೇಶದ ಪ್ರತಿಯೊಂದು ಭಾಗದಿಂದ, ಸಮಾಜದ ಪ್ರತಿಯೊಂದು ವರ್ಗದಿಂದ, ಎಲ್ಲಾ ವಯೋಮಾನದ ಜನರಿಂದ ನನಗೆ ಅಸಂಖ್ಯ ಪತ್ರಗಳು ಬಂದಿವೆ. ಚಂದ್ರಯಾನ-3 ರ ಲ್ಯಾಂಡರ್ ಚಂದ್ರನ ಮೇಲೆ ಇಳಿಯುತ್ತಿದ್ದಾಗ, ವಿವಿಧ ಮಾಧ್ಯಮಗಳ ಮೂಲಕ ಕೋಟ್ಯಾಂತರ ಜನರು ಏಕಕಾಲದಲ್ಲಿ ಈ ಘಟನೆಯ ಪ್ರತಿ ಕ್ಷಣವನ್ನು ಸಾಕ್ಷೀಕರಿಸಿದ್ದಾರೆ. ಇಸ್ರೋದ ಯೂಟ್ಯೂಬ್ ಲೈವ್ ಚಾನೆಲ್‌ನಲ್ಲಿ 80 ಲಕ್ಷಕ್ಕೂ ಹೆಚ್ಚು ಜನರು ಘಟನೆಯನ್ನು ವೀಕ್ಷಿಸಿದ್ದು ಸ್ವತಃ ಒಂದು ದಾಖಲೆಯಾಗಿದೆ. ಇದರಿಂದ ಚಂದ್ರಯಾನ-3 ರ ಕುರಿತು ಕೋಟ್ಯಾಂತರ ಭಾರತೀಯರ ಬಾಂಧವ್ಯ ಎಷ್ಟು ಗಾಢವಾಗಿದೆ ಎಂಬುದರ ಅರಿವಾಗುತ್ತದೆ. ಇತ್ತೀಚೆಗೆ ದೇಶದಲ್ಲಿ ಚಂದ್ರಯಾನದ ಈ ಯಶಸ್ಸಿನ ಕುರಿತು, ಅದ್ಭುತವಾದ ಒಂದು ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ ಮತ್ತು ಅದನ್ನು 'ಚಂದ್ರಯಾನ-3 ಮಹಾಕ್ವಿಜ್' ಎಂದು ಹೆಸರಿಸಲಾಗಿದೆ. MyGov ಪೋರ್ಟಲ್‌ನಲ್ಲಿ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ಇದುವರೆಗೆ 15 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ. MyGov ವೇದಿಕೆ ಆರಂಭಿಸಿದಂದಿನಿಂದ  ಒಂದು ರಸಪ್ರಶ್ನೆಯಲ್ಲಿ ಜನರ ಅತಿ ದೊಡ್ಡ ಭಾಗವಹಿಸುವಿಕೆ ಇದಾಗಿದೆ. ನೀವು ಇನ್ನೂ ಇದರಲ್ಲಿ ಭಾಗವಹಿಸಿಲ್ಲವೆಂದಾದರೆ, ತಡ ಮಾಡಬೇಡಿ, ಇನ್ನೂ ಆರು ದಿನಗಳು ಬಾಕಿ ಇವೆ ಎಂದು ನಿಮಗೆ ಹೇಳಬಯಸುತ್ತೇನೆ. ಈ ರಸಪ್ರಶ್ನೆಯಲ್ಲಿ ಖಂಡಿತ ಭಾಗವಹಿಸಿ.

ನನ್ನ ಪರಿವಾರ ಸದಸ್ಯರೆ, ಚಂದ್ರಯಾನ-3 ರ ಯಶಸ್ಸಿನ ನಂತರ G-20 ರ ಅದ್ಭುತ ಆಯೋಜನೆ ಪ್ರತಿಯೊಬ್ಬ ಭಾರತೀಯನ ಸಂತೋಷವನ್ನು ದುಪ್ಪಟ್ಟುಗೊಳಿಸಿದೆ. ಭಾರತ ಮಂಟಪವು ಸ್ವತಃ ಒಂದು ಸೆಲೆಬ್ರಿಟಿಯಂತಾಗಿದೆ. ಜನರು ಅದರೊಂದಿಗೆ ಸೆಲ್ಫಿ ತೆಗೆದುಕೊಂಡು ಹೆಮ್ಮೆಯಿಂದ ಪೋಸ್ಟ್ ಮಾಡುತ್ತಿದ್ದಾರೆ. ಈ ಶೃಂಗಸಭೆಯಲ್ಲಿ ಆಫ್ರಿಕನ್ ಯೂನಿಯನ್ ಅನ್ನು ಜಿ-20 ನ ಪೂರ್ಣ ಸದಸ್ಯನಾಗಿ ಮಾಡುವ ಮೂಲಕ ಭಾರತವು ತನ್ನ ನಾಯಕತ್ವ ಮೆರೆದಿದೆ. ನಮ್ಮ ಭಾರತ ದೇಶ ಸಮೃದ್ಧವಾಗಿದ್ದ ಅಂದಿನ ಕಾಲದಲ್ಲಿ ನಮ್ಮ ದೇಶದಲ್ಲಿ ಮತ್ತು ಜಗತ್ತಿನಲ್ಲಿ ರೇಷ್ಮೆ ಮಾರ್ಗದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿತ್ತು. ಈ ರೇಷ್ಮೆ ಮಾರ್ಗವು ವ್ಯಾಪಾರ ವ್ಯವಹಾರದ ಬೃಹತ್ ಮಾಧ್ಯಮವಾಗಿತ್ತು. ಈಗಿನ ಆಧುನಿಕ ಕಾಲಮಾನದಲ್ಲಿ ಭಾರತವು ಜಿ-20 ಶೃಂಗಸಭೆಯಲ್ಲಿ ಮತ್ತೊಂದು ಆರ್ಥಿಕ ಕಾರಿಡಾರ್ ಬಗ್ಗೆ ಪ್ರಸ್ತಾಪಿಸಿದೆ. ಅದೇ  ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್. ಈ ಕಾರಿಡಾರ್ ಮುಂಬರುವ ನೂರಾರು ವರ್ಷಗಳವರೆಗೆ ವಿಶ್ವ ವ್ಯಾಪಾರದ ಆಧಾರಸ್ಥಂಭವಾಗಲಿದೆ ಮತ್ತು ಈ ಕಾರಿಡಾರ್ ಗೆ ಭಾರತದಲ್ಲಿ ಮುನ್ನುಡಿ ಬರೆಯಲಾಗಿತ್ತು ಎಂದು ಇತಿಹಾಸವು ಸದಾ ಸ್ಮರಿಸಲಿದೆ.

        ಸ್ನೇಹಿತರೇ, ಜಿ-20 ರ  ಸಂದರ್ಭದಲ್ಲಿ ಭಾರತದ ಯುವ ಶಕ್ತಿ ಈ ಆಯೋಜನೆಯೊಂದಿಗೆ ಹೇಗೆ ಬೆರೆತುಕೊಂಡಿತ್ತು ಎಂಬುದರ ಕುರಿತು ಇಂದು ವಿಶೇಷವಾಗಿ ಚರ್ಚಿಸುವ ಅಗತ್ಯವಿದೆ. ವರ್ಷವಿಡೀ ದೇಶದ ಹಲವು ವಿಶ್ವವಿದ್ಯಾನಿಲಯಗಳಲ್ಲಿ ಜಿ-20 ಗೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಮತ್ತು ಈಗ ಅದೇ ನಿಟ್ಟಿನಲ್ಲಿ ದೆಹಲಿಯಲ್ಲಿ 'ಜಿ 20 ಯುನಿವರ್ಸಿಟಿ ಕನೆಕ್ಟ್ ಪ್ರೋಗ್ರಾಂ' ಎಂಬ ಮತ್ತೊಂದು ಅತ್ಯಾಕರ್ಷಕ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದ ಮೂಲಕ ದೇಶಾದ್ಯಂತದ ಲಕ್ಷಾಂತರ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಪರಸ್ಪರ ಸಂಪರ್ಕ ಹೊಂದಲಿದ್ದಾರೆ. ಇದರಲ್ಲಿ ಐಐಟಿ, ಐಐಎಂ, ಎನ್‌ಐಟಿ ಮತ್ತು ವೈದ್ಯಕೀಯ ಕಾಲೇಜುಗಳಂತಹ ಅನೇಕ ಪ್ರತಿಷ್ಠಿತ ಸಂಸ್ಥೆಗಳು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ. ನೀವು ಕಾಲೇಜು ವಿದ್ಯಾರ್ಥಿಯಾಗಿದ್ದರೆ ಸೆಪ್ಟೆಂಬರ್ 26 ರಂದು ನಡೆಯುವ ಈ ಕಾರ್ಯಕ್ರಮವನ್ನು ಖಂಡಿತ ವೀಕ್ಷಿಸಿ ಮತ್ತು ಖಂಡಿತ ಭಾಗವಹಿಸಿ. ಇದರಲ್ಲಿ ಭಾರತದ ಭವಿಷ್ಯದ ಕುರಿತು, ಯುವಜನತೆಯ ಭವಿಷ್ಯದ ಕುರಿತು ಬಹಳಷ್ಟು ಆಸಕ್ತಿದಾಯಕ ಚರ್ಚೆ ನಡೆಯಲಿದೆ. ನಾನು ಸ್ವತಃ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ನನಗೂ ನನ್ನ ಕಾಲೇಜು ವಿದ್ಯಾರ್ಥಿಗಳೊಂದಿಗೆ ಮಾತನಾಡುವ ನಿರೀಕ್ಷೆಯಿದೆ.

ನನ್ನ ಪರಿವಾರ ಸದಸ್ಯರೆ, ಎರಡು ದಿನಗಳ ನಂತರ ಅಂದರೆ ಸೆಪ್ಟೆಂಬರ್ 27 ರಂದು 'ವಿಶ್ವ ಪ್ರವಾಸೋದ್ಯಮ ದಿನ'ವಿದೆ. ಕೆಲವರು ಪ್ರವಾಸೋದ್ಯಮವನ್ನು ಕೇವಲ ಪ್ರೇಕ್ಷಣೀಯ ಸ್ಥಳವೆಂದು ಮಾತ್ರ ಪರಿಗಣಿಸುತ್ತಾರೆ, ಆದರೆ ಪ್ರವಾಸೋದ್ಯಮದ ಬಹುದೊಡ್ಡ ಭಾಗ ಅಂಶವು 'ಉದ್ಯೋಗ ಸೃಷ್ಟಿ'ಗೆ ಸಂಬಂಧಿಸಿದೆ. ಕನಿಷ್ಠ ಹೂಡಿಕೆಯೊಂದಿಗೆ ಗರಿಷ್ಠ ಉದ್ಯೋಗವನ್ನು ಸೃಷ್ಟಿಸುವ ಯಾವುದೇ ವಲಯವಿದ್ದರೆ ಅದು ಪ್ರವಾಸೋದ್ಯಮ ಕ್ಷೇತ್ರವಾಗಿದೆ ಎನ್ನಲಾಗುತ್ತದೆ. ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ದಿ ಹೊಂದಲು ಯಾವುದೇ ದೇಶದ ಬಗೆಗೆ ಉತ್ತಮ ಅಭಿಪ್ರಾಯ ಮತ್ತು ಆಕರ್ಷಣೆ ಬಹಳ ಮುಖ್ಯವಾಗಿರುತ್ತದೆ. ಕಳೆದ ಕೆಲವು ವರ್ಷಗಳಿಂದ ಭಾರತದೆಡೆಗೆ ಆಕರ್ಷಣೆ ವೃದ್ಧಿಸಿದೆ. ಜಿ-20 ಯಶಸ್ವಿ ಆಯೋಜನೆಯ ನಂತರ, ವಿಶ್ವಾದ್ಯಂತ ಜನರಲ್ಲಿ ಭಾರತದ ಬಗ್ಗೆ ಆಸಕ್ತಿ ಮತ್ತಷ್ಟು ಹೆಚ್ಚಾಗಿದೆ.

ಸ್ನೇಹಿತರೇ, ಜಿ-20 ಯಲ್ಲಿ ಭಾಗವಹಿಸಲು ಒಂದು ಲಕ್ಷಕ್ಕೂ ಹೆಚ್ಚು ಪ್ರತಿನಿಧಿಗಳು ಭಾರತಕ್ಕೆ ಬಂದಿದ್ದರು. ನಮ್ಮ ವೈವಿಧ್ಯತೆ, ವಿಭಿನ್ನ ಸಂಪ್ರದಾಯಗಳು, ವಿಭಿನ್ನ ಪಾಕಪದ್ಧತಿಗಳು ಮತ್ತು ನಮ್ಮ ಪರಂಪರೆಯ ಬಗ್ಗೆ ಅವರು ತಿಳಿದುಕೊಂಡರು. ಇಲ್ಲಿಗೆ ಬಂದ ಪ್ರತಿನಿಧಿಗಳು ತಮ್ಮೊಂದಿಗೆ ಅದ್ಭುತ ಅನುಭವಗಳನ್ನು ಕೊಂಡೊಯ್ದಿದ್ದಾರೆ. ಇದು ಪ್ರವಾಸೋದ್ಯಮವನ್ನು ಮತ್ತಷ್ಟು ವಿಸ್ತರಿಸಲಿದೆ. ಏಕೆಂದರೆ ಭಾರತದಲ್ಲಿ ಅನೇಕ ವಿಶ್ವ ಪಾರಂಪರಿಕ ತಾಣಗಳಿವೆ ಮತ್ತು ಅವುಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ ಎಂದು ನಿಮಗೆಲ್ಲರಿಗೂ ತಿಳಿದಿದೆ. ಕೆಲವು ದಿನಗಳ ಹಿಂದೆ, ಶಾಂತಿನಿಕೇತನ ಮತ್ತು ಕರ್ನಾಟಕದ ಪವಿತ್ರ ಹೊಯ್ಸಳ ದೇವಾಲಯಗಳನ್ನು ವಿಶ್ವ ಪಾರಂಪರಿಕ ತಾಣಗಳೆಂದು ಘೋಷಿಸಲಾಗಿದೆ. ಈ ಮಹತ್ತರ ಸಾಧನೆಗಾಗಿ ಎಲ್ಲಾ ದೇಶಬಾಂಧವರನ್ನು ನಾನು ಅಭಿನಂದಿಸುತ್ತೇನೆ. 2018 ರಲ್ಲಿ ಶಾಂತಿ ನಿಕೇತನಕ್ಕೆ ಭೇಟಿ ನೀಡುವ ಸೌಭಾಗ್ಯ ನನಗೆ ಲಭಿಸಿತ್ತು. ಶಾಂತಿನಿಕೇತನದೊಂದಿಗೆ ಗುರುದೇವ ರವೀಂದ್ರನಾಥ ಟ್ಯಾಗೋರರ ನಿಕಟ ಸಂಪರ್ಕವಿತ್ತು. ಸಂಸ್ಕೃತದ ಪ್ರಾಚೀನ ಶ್ಲೋಕವೊಂದರಿಂದ   ರವೀಂದ್ರನಾಥ ಟ್ಯಾಗೋರರು ಶಾಂತಿನಿಕೇತನದ ಧ್ಯೇಯವಾಕ್ಯವನ್ನು ಆಯ್ದುಕೊಂಡಿದ್ದರು. ಆ ಶ್ಲೋಕ ಹೀಗಿದೆ

       “ಯತ್ರ ವಿಶ್ವಂ ಭವತ್ಯೇಕ ನೀಡಂ”

ಅಂದರೆ ಒಂದು ಪುಟ್ಟ ಗೂಡಿನಲ್ಲಿ ಇಡೀ ಪ್ರಪಂಚವೇ ಸಂಯೋಜನೆಗೊಳ್ಳಬಹುದಾಗಿದೆ ಎಂದು. ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಿದ ಕರ್ನಾಟಕದ ಹೊಯ್ಸಳ ದೇವಾಲಯಗಳು 13 ನೇ ಶತಮಾನದ ತನ್ನ ಅದ್ಭುತ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದವೆ. ಈ ದೇವಾಲಯಗಳಿಗೆ ಯುನೆಸ್ಕೊದಿಂದ ಮನ್ನಣೆ ದೊರೆತಿರುವುದು ದೇವಾಲಯ ನಿರ್ಮಾಣದ ಭಾರತೀಯ ಸಂಪ್ರದಾಯಕ್ಕೆ ಸಂದ ಗೌರವವಾಗಿದೆ. ಭಾರತದಲ್ಲಿ ಈಗ ವಿಶ್ವ ಪಾರಂಪರಿಕ ತಾಣಗಳ ಒಟ್ಟು ಸಂಖ್ಯೆ 42 ಕ್ಕೇರಿದೆ. ನಮ್ಮಲಿರುವ ಹೆಚ್ಚಿನ ಐತಿಹಾಸಿಕ ಮತ್ತು ಸಾಂಸ್ಕೃತಿಕ ತಾಣಗಳಿಗೆ ವಿಶ್ವ ಪಾರಂಪರಿಕ ತಾಣಗಳ ಮನ್ನಣೆ ದೊರೆಯಲಿ ಎಂಬುದು ಭಾರತದ ಪ್ರಯತ್ನವಾಗಿದೆ. ನೀವು ಪ್ರವಾಸದ ಕಾರ್ಯಕ್ರಮವನ್ನು ಹಮ್ಮಿಕೊಂಡಾಗ ಭಾರತದ ವೈವಿಧ್ಯತೆಯ ದರ್ಶನ ಮಾಡಿರಿ ಎಂಬುದು ನನ್ನ ಮನವಿ. ಬೇರೆ ಬೇರೆ ರಾಜ್ಯಗಳ ಸಂಸ್ಕೃತಿಯನ್ನು ಅರಿಯಿರಿ. ಪಾರಂಪರಿಕ ತಾಣಗಳಿಗೆ ಭೇಟಿ ನೀಡಿ. ಇದರಿಂದ ನಿಮ್ಮ ದೇಶದ ಗೌರವಯುತ ಇತಿಹಾಸವನ್ನಂತೂ ನೀವು ತಿಳಿಯುತ್ತೀರಿ, ಜೊತೆಗೆ ಸ್ಥಳೀಯರ ಆದಾಯ ಹೆಚ್ಚಿಸುವಲ್ಲಿಯೂ ನೀವು ಪ್ರಮುಖ ಮಾಧ್ಯಮದಂತೆ ಕೆಲಸ ಮಾಡುವಿರಿ

ಪ್ರಿಯ ಪರಿವಾರ ಸದಸ್ಯರೆ ಭಾರತೀಯ ಸಂಗೀತ ಮತ್ತು ಭಾರತೀಯ ಸಂಸ್ಕೃತ ಈಗ ಜಾಗತಿಕವಾಗಿದೆ. ದಿನದಿಂದ ದಿನಕ್ಕೆ ಪ್ರಪಂಚದಾದ್ಯಂತ ಜನರ ಒಲವು ಇದರತ್ತ ವೃದ್ಧಿಸುತ್ತಿದೆ. ಮುದ್ದಾದ ನಮ್ಮ ಹೆಣ್ಣು ಮಗಳೊಬ್ಬಳು ಮಾಡಿದ ಪ್ರಸ್ತುತಿಯ ಧ್ವನಿಮುದ್ರಿತ ತುಣುಕೊಂದನ್ನು ನಿಮಗೆ ಕೇಳಿಸುತ್ತೇನೆ..

ಇದನ್ನು ಕೇಳಿ ನಿಮಗೂ ಆಶ್ಚರ್ಯವಾಯಿತು ಅಲ್ಲವೇ? ಅವಳು ಎಂತಹ ಮಧುರವಾದ ಧ್ವನಿಯನ್ನು ಹೊಂದಿದ್ದಾಳೆ ಮತ್ತು ಪ್ರತಿ ಪದದಲ್ಲಿ ಭಾವನೆಗಳನ್ನು ಪ್ರತಿಬಿಂಬಿಸುತ್ತಿದ್ದಾಳೆ. ದೇವರ ಮೇಲಿನ ಅವಳ ಪ್ರೀತಿ, ಭಕ್ತಿಯನ್ನು ನಾವು ಕೂಡ ಅನುಭವಿಸಬಹುದು. ಈ ಸುಮಧುರ ಧ್ವನಿ ಜರ್ಮನಿಯ ಒಬ್ಬ ಹೆಣ್ಣು ಮಗಳದ್ದು ಎಂದು ನಾನು ನಿಮಗೆ ಹೇಳಿದರೆ, ಬಹುಶಃ ನೀವು ಮತ್ತಷ್ಟು ಆಶ್ಚರ್ಯಪಡುತ್ತೀರಿ. ಅವಳ ಹೆಸರು ಕೈಸ್ಮಿ. 21 ವರ್ಷದ ಕೈಸ್ಮಿ ಇತ್ತೀಚೆಗೆ Instagram ನಲ್ಲಿ ಬಹಳ ಜನಪ್ರಿಯರಾಗಿದ್ದಾರೆ. ಜರ್ಮನಿಯ ನಿವಾಸಿ ಕೈಸ್ಮಿ ಭಾರತಕ್ಕೆ ಎಂದೂ ಭೇಟಿ ನೀಡಿಲ್ಲ, ಆದರೂ ಆಕೆ ಭಾರತೀಯ ಸಂಗೀತದ ಅಭಿಮಾನಿಯಾಗಿದ್ದಾರೆ, ಭಾರತವನ್ನು ಎಂದೂ ನೋಡಿರದ, ಅವರ ಭಾರತೀಯ ಸಂಗೀತದ ಆಸಕ್ತಿ ತುಂಬಾ ಸ್ಫೂರ್ತಿದಾಯಕವಾಗಿದೆ. ಕೈಸ್ಮಿ ಹುಟ್ಟಿನಿಂದಲೇ ದೃಷ್ಟಿಹೀನರಾಗಿದ್ದಾರೆ, ಆದರೆ ಈ ಕಠಿಣ ಸವಾಲು ಅವರನ್ನು ಅಸಾಮಾನ್ಯ ಸಾಧನೆಗೈಯ್ಯುವುದಕ್ಕೆ ತಡೆಯೊಡ್ಡಲಿಲ್ಲ. ಸಂಗೀತ ಮತ್ತು ಸೃಜನಶೀಲತೆಯ ಬಗ್ಗೆ ಅವರ ಉತ್ಸಾಹ ಎಷ್ಟಿತ್ತೆಂದರೆ ಬಾಲ್ಯದಿಂದಲೇ ಆಕೆ ಹಾಡಲು ಪ್ರಾರಂಭಿಸಿದರು. ಆಕೆ ಕೇವಲ 3 ವರ್ಷದ ವಯಸ್ಸಿನಲ್ಲಿಯೇ ಆಫ್ರಿಕನ್ ಡ್ರಮ್ಮಿಂಗ್ ಅನ್ನು ಪ್ರಾರಂಭಿಸಿದ್ದರು. 5-6 ವರ್ಷಗಳ ಹಿಂದೆಯೇ ಅವರಿಗೆ ಭಾರತೀಯ ಸಂಗೀತದ ಪರಿಚಯವಾಯಿತು. ಭಾರತದ ಸಂಗೀತವು ಅವರನ್ನು ಎಷ್ಟು ಆಕರ್ಷಿಸಿತೆಂದರೆ ಅವರು ಅದರಲ್ಲಿ ಸಂಪೂರ್ಣವಾಗಿ ತಲ್ಲೀನವಾಗಿ ಹೋದರು. ಅವರು ತಬಲಾ ವಾದನವನ್ನೂ ಕಲಿತಿದ್ದಾರೆ. ಅವರು ಅನೇಕ ಭಾರತೀಯ ಭಾಷೆಗಳಲ್ಲಿ ಹಾಡುವುದನ್ನು ಕರಗತ ಮಾಡಿಕೊಂಡಿರುವುದು ಅತ್ಯಂತ ಸ್ಪೂರ್ತಿದಾಯಕ ವಿಷಯವಾಗಿದೆ. ಸಂಸ್ಕೃತ, ಹಿಂದಿ, ಮಲಯಾಳಂ, ತಮಿಳು, ಕನ್ನಡ ಅಥವಾ ಅಸ್ಸಾಮಿ, ಬೆಂಗಾಲಿ, ಮರಾಠಿ, ಉರ್ದು ಎಲ್ಲ ಭಾಷೆಗಳಲ್ಲಿ ಅವರು ಹಾಡಿದ್ದಾರೆ. ಅಪರಿಚಿತ ಭಾಷೆಯ ಎರಡು-ಮೂರು ಸಾಲುಗಳನ್ನು ನಾವು ಮಾತನಾಡಬೇಕಾದರೆ ಎಷ್ಟು ಕಷ್ಟವೆನಿಸುತ್ತದೆ ಎಂದು ನೀವು ಊಹಿಸಬಹುದು, ಆದರೆ ಕೈಸ್ಮಿಗೆ ಅದು ಸುಲಭ ಸಾಧ್ಯವಾಗಿದೆ. ನಿಮ್ಮೆಲ್ಲರಿಗಾಗಿ ಅವರು ಕನ್ನಡದಲ್ಲಿ ಹಾಡಿರುವ ಒಂದು ಗೀತೆಯನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಭಾರತೀಯ ಸಂಸ್ಕೃತಿ ಮತ್ತು ಸಂಗೀತದ ಕುರಿತು ಜರ್ಮನಿಯ ಕೈಸ್ಮಿ ಅವರ ಉತ್ಸಾಹವನ್ನು ನಾನು ಮನಃಪೂರ್ವಕವಾಗಿ ಪ್ರಶಂಸಿಸುತ್ತೇನೆ. ಅವರ ಪ್ರಯತ್ನಗಳು ಪ್ರತಿಯೊಬ್ಬ ಭಾರತೀಯನಿಗೂ ಪ್ರೇರಣದಾಯಕವಾಗಿವೆ.

ನನ್ನ ಪ್ರೀತಿಯ ಪರಿವಾರ ಸದಸ್ಯರೇ, ನಮ್ಮ ದೇಶದಲ್ಲಿ ಶಿಕ್ಷಣವನ್ನು ಯಾವಾಗಲೂ ಸೇವೆಯಂತೆ ಪರಿಗಣಿಸಲಾಗಿದೆ. ಉತ್ತರಾಖಂಡದ ಕೆಲವು ಯುವಕರು ಇದೇ ಮನೋಭಾವದಿಂದ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ಬಗ್ಗೆ ನನಗೆ ತಿಳಿದು ಬಂದಿದೆ. ನೈನಿತಾಲ್ ಜಿಲ್ಲೆಯ ಕೆಲವು ಯುವಕರು ಮಕ್ಕಳಿಗಾಗಿ ಅನೋಖಿ ಘೋಡಾ ಎಂಬ ಗ್ರಂಥಾಲಯವನ್ನು ಪ್ರಾರಂಭಿಸಿದ್ದಾರೆ. ಅತ್ಯಂತ ದೂರದ ಪ್ರದೇಶಗಳಲ್ಲಿಯೂ ಪುಸ್ತಕಗಳು ಮಕ್ಕಳನ್ನು ತಲುಪುತ್ತಿರುವುದು ಈ ಗ್ರಂಥಾಲಯದ ದೊಡ್ಡ ವೈಶಿಷ್ಟ್ಯವಾಗಿದೆ ಅಲ್ಲದೆ ಈ ಸೇವೆಯು ಸಂಪೂರ್ಣ ಉಚಿತವಾಗಿದೆ. ಇಲ್ಲಿಯವರೆಗೆ ನೈನಿತಾಲ್‌ನ 12 ಹಳ್ಳಿಗಳನ್ನು ಈ  ಗ್ರಂಥಾಲಯ ತಲುಪಿದೆ. ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಈ ಉದಾತ್ತ ಕಾರ್ಯದಲ್ಲಿ ಸ್ಥಳೀಯ ಜನರು ಕೂಡಾ ಸಹಾಯಕ್ಕೆ ಕೈ ಜೋಡಿಸಿದ್ದಾರೆ. ಈ ಘೋಡಾ ಗ್ರಂಥಾಲಯದ ಮೂಲಕ ದೂರದ ಹಳ್ಳಿಗಳಲ್ಲಿ ವಾಸಿಸುವ ಮಕ್ಕಳಿಗೆ ಶಾಲಾ ಪುಸ್ತಕಗಳ ಹೊರತಾಗಿ 'ಕವನಗಳು', 'ಕಥೆಗಳು' ಮತ್ತು 'ನೈತಿಕ ಶಿಕ್ಷಣ' ಪುಸ್ತಕಗಳನ್ನು ಓದುವ ಸಂಪೂರ್ಣ ಅವಕಾಶವನ್ನು ಒದಗಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಈ ವಿಶಿಷ್ಟ ಗ್ರಂಥಾಲಯವು ಮಕ್ಕಳಿಗೂ ತುಂಬಾ ಇಷ್ಟವಾಗುತ್ತಿದೆ.

        ಸ್ನೇಹಿತರೇ, ಹೈದರಾಬಾದ್‌ನಲ್ಲಿರುವ ಗ್ರಂಥಾಲಯಕ್ಕೆ ಸಂಬಂಧಿಸಿದ ಅಂತಹ ಒಂದು ವಿಶಿಷ್ಟ ಪ್ರಯತ್ನದ ಬಗ್ಗೆ ನನಗೆ ತಿಳಿದುಬಂದಿದೆ. ಇಲ್ಲಿ ಏಳನೇ ತರಗತಿ ಓದುತ್ತಿರುವ ಹೆಣ್ಣು ಮಗಳು ‘ಆಕರ್ಷಣಾ ಸತೀಶ್’ ಅದ್ಭುತ ಸಾಧನೆಯನ್ನು ಮಾಡಿದ್ದಾಳೆ. ಕೇವಲ 11 ವರ್ಷ ವಯಸ್ಸಿನಲ್ಲೇ ಮಕ್ಕಳಿಗಾಗಿ ಒಂದಲ್ಲ ಎರಡಲ್ಲ, ಏಳು ಗ್ರಂಥಾಲಯಗಳನ್ನು ನಡೆಸುತ್ತಿರುವುದನ್ನು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಎರಡು ವರ್ಷಗಳ ಹಿಂದೆ ‘ಆಕರ್ಷಣಾ’ ತನ್ನ ತಂದೆ-ತಾಯಿಯೊಂದಿಗೆ ಕ್ಯಾನ್ಸರ್ ಆಸ್ಪತ್ರೆಗೆ ಹೋದಾಗ ಇದರ ಬಗ್ಗೆ ಪ್ರೇರಣೆ ದೊರೆಯಿತು. ಅವರ ತಂದೆ ಅವಶ್ಯಕತೆಯಿರುವವರಿಗೆ ಸಹಾಯ ಮಾಡಲೆಂದು ಅಲ್ಲಿಗೆ ಹೋಗಿದ್ದರು. ಅಲ್ಲಿನ ಮಕ್ಕಳು ಅವಳ ಬಳಿ 'ಕಲರಿಂಗ್ ಬುಕ್ಸ್' ಬಗ್ಗೆ ಕೇಳಿದರು. ಈ ವಿಷಯ ಈ ಮುಗ್ಧ ಮಗುವಿನ ಮನಸ್ಸಿಗೆ ಎಷ್ಟು ನಾಟಿತೆಂದರೆ ಅವಳು ವಿವಿಧ ಬಗೆಯ ಪುಸ್ತಕಗಳನ್ನು ಸಂಗ್ರಹಿಸಲು ನಿರ್ಧರಿಸಿದಳು. ಅವಳು  ತಮ್ಮ ನೆರೆಹೊರೆಯ ಮನೆಗಳು, ಸಂಬಂಧಿಕರು ಮತ್ತು ಸ್ನೇಹಿತರಿಂದ ಪುಸ್ತಕಗಳನ್ನು ಸಂಗ್ರಹಿಸಲು ಪ್ರಾರಂಭಿಸಿದಳು ಮತ್ತು ಅದೇ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಮಕ್ಕಳಿಗಾಗಿ ಮೊದಲ ಗ್ರಂಥಾಲಯವನ್ನು ತೆರೆದಳು ಎಂದು ತಿಳಿದರೆ ನಿಮಗೆ ಸಂತೋಷವಾಗುತ್ತದೆ. ಅವಶ್ಯಕತೆಯಿರುವ ಮಕ್ಕಳಿಗಾಗಿ ಈ ಹೆಣ್ಣು ಮಗಳು ವಿವಿಧೆಡೆ ತೆರೆದಿರುವ ಏಳು ಗ್ರಂಥಾಲಯಗಳಲ್ಲಿ ಈಗ ಸುಮಾರು 6 ಸಾವಿರ ಪುಸ್ತಕಗಳು ಲಭ್ಯವಿವೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪುಟ್ಟ 'ಆಕರ್ಷಣಾ' ಕಾರ್ಯ ನಿರ್ವಹಿಸುತ್ತಿರುವ ರೀತಿ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ.

ಸ್ನೇಹಿತರೇ, ಇಂದಿನ ಯುಗ ಡಿಜಿಟಲ್ ತಂತ್ರಜ್ಞಾನ ಮತ್ತು ಇ-ಪುಸ್ತಕದ್ದಾಗಿದೆ ಎನ್ನುವ ಮಾತು ನಿಜ. ಆದರೂ ಪುಸ್ತಕ ಯಾವಾಗಲೂ ನಮ್ಮ ಜೀವನದಲ್ಲಿ ಓರ್ವ ಉತ್ತಮ ಸ್ನೇಹಿತನ ಪಾತ್ರ ನಿರ್ವಹಿಸುತ್ತದೆ. ಆದ್ದರಿಂದ ನಾವು ಮಕ್ಕಳನ್ನು ಪುಸ್ತಕ ಓದುವಂತೆ ಉತ್ತೇಜಿಸಬೇಕಾಗಿದೆ.

 

            ನನ್ನ ಕುಟುಂಬ ಬಾಂಧವರೇ, ನಮ್ಮ ಧರ್ಮಗ್ರಂಥಗಳಲ್ಲಿ ಹೀಗೆಂದು ಹೇಳಲಾಗಿದೆ–

 

ಜೀವೇಷು ಕರುಣಾಚಾಪಿ, ಮೈತ್ರೀತೇಷು ವಿಧೀಯತಾಮ್

ಅಂದರೆ, ಜೀವಿಗಳಲ್ಲಿ ಕರುಣೆ ತೋರಿಸಿ ಮತ್ತು ಅವುಗಳನ್ನು ನಿಮ್ಮ ಮಿತ್ರರನ್ನಾಗಿಸಿಕೊಳ್ಳಿ. ನಮ್ಮಲ್ಲಿ ಹೆಚ್ಚಿನ ದೇವತೆ-ದೇವರುಗಳು ಸವಾರಿ ಮಾಡುವುದು ಪಶು-ಪಕ್ಷಿಗಳ ಮೇಲೇ ಅಲ್ಲವೇ. ಬಹಳಷ್ಟು ಜನರು ದೇವಾಲಯಗಳಿಗೆ ಹೋಗುತ್ತಾರೆ, ದೇವರ ದರ್ಶನ ಮಾಡುತ್ತಾರೆ ಆದರೆ, ಯಾವ ಪಶು ಪಕ್ಷಿಯ ಮೇಲೆ ಆ ದೇವರು ಕುಳಿತಿರುತ್ತಾರೋ ಅದರ ಕಡೆಗೆ ಅವರು ಗಮನ ನೀಡುವುದಿಲ್ಲ. ಈ ಪಶು ಪಕ್ಷಿಗಳು ಕೇವಲ ನಮ್ಮ ನಂಬಿಕೆಯ ಕೇಂದ್ರವಾಗಿಮಾತ್ರಾ ಉಳಿಯಬಾರದು, ನಾವು ಅವುಗಳನ್ನು ಸಾಧ್ಯವಾದಷ್ಟೂ ರಕ್ಷಿಸಬೇಕು. ಕಳೆದ ಕೆಲವು ವರ್ಷಗಳಲ್ಲಿ, ದೇಶದಲ್ಲಿ, ಸಿಂಹಗಳು, ಹುಲಿಗಳು, ಚಿರತೆಗಳು ಮತ್ತು ಆನೆಗಳ ಸಂಖ್ಯೆಯಲ್ಲಿ ಉತ್ತೇಜನಕಾರಿ ಹೆಚ್ಚಳ ಕಂಡುಬಂದಿದೆ. ಈ ಭೂಮಿಯ ಮೇಲೆ ವಾಸಿಸುವ ಇತರೆ ಜೀವ ಜಂತುಗಳನ್ನು ಕೂಡಾ ರಕ್ಷಿಸುವ ನಿಟ್ಟಿನಲ್ಲಿ ಅನೇಕ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಇಂತಹದ್ದೇ ಒಂದು ವಿಶಿಷ್ಠ ಪ್ರಯತ್ನ ರಾಜಸ್ತಾನದ ಪುಷ್ಕರದಲ್ಲಿ ಕೂಡಾ ನಡೆಯುತ್ತಿದೆ. ಇಲ್ಲಿ ಸುಖದೇವ್ ಭಟ್ ಮತ್ತು ಅವರ ತಂಡ ಒಗ್ಗೂಡಿ, ವನ್ಯಜೀವಿಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಅವರ ತಂಡದ ಹೆಸರೇನು ಎಂದು ನಿಮಗೆ ಗೊತ್ತೇ? ಅವರ ತಂಡದ ಹೆಸರು–ಕೋಬ್ರಾ. ಈ ಅಪಾಯಕಾರಿ ಹೆಸರು ಏತಕ್ಕಾಗಿ ಇಡಲಾಗಿದೆ ಎಂದರೇ, ಅವರ ತಂಡವು ಈ ಕ್ಷೇತ್ರದಲ್ಲಿ ಅಪಾಯಕಾರಿ ಹಾವುಗಳನ್ನು ರಕ್ಷಿಸುವ ಕೆಲಸ ಕೂಡಾ ಮಾಡುತ್ತದೆ. ಈ ತಂಡದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ತೊಡಗಿಕೊಂಡಿದ್ದಾರೆ, ಕೇವಲ ಒಂದು ಕರೆ ಮಾಡಿದರೆ ಸಾಕು ಅವರು ಸಮಯಕ್ಕೆ ಸರಿಯಾಗಿ ಬಂದು ಅಭಿಯಾನದಲ್ಲಿ ತೊಡಗಿಕೊಳ್ಳುತ್ತಾರೆ. ಸುಖ್ ದೇವ್ ಅವರ ಈ ತಂಡವು ಈವರೆಗೂ 30 ಸಾವಿರಕ್ಕೂ ಅಧಿಕ ವಿಷಕಾರಿ ಹಾವುಗಳ ಜೀವ ರಕ್ಷಿಸಿದ್ದಾರೆ. ಈ ಪ್ರಯತ್ನದಿಂದಾಗಿ ಜನರಿಗೆ ಅಪಾಯ ದೂರವಾಗಿರುವುದು ಮಾತ್ರವಲ್ಲದೇ, ಪ್ರಕೃತಿಯ ರಕ್ಷಣೆ ಕೂಡಾ ಆಗುತ್ತಿದೆ. ಈ ತಂಡವು ರೋಗದಿಂದ ಬಳಲುತ್ತಿರುವ ಇತರ ಪ್ರಾಣಿಗಳ ಶುಶ್ರೂಷೆ ಕಾರ್ಯದಲ್ಲಿ ಕೂಡಾ ತೊಡಗಿಕೊಂಡಿದೆ.ಸ್ನೇ

ಹಿತರೇ, ತಮಿಳುನಾಡಿನ ಚೆನ್ನೈನಲ್ಲಿ ಆಟೋರಿಕ್ಷಾ ಚಾಲಕರಾಗಿರುವ ಎಂ. ರಾಜೇಂದ್ರ ಪ್ರಸಾದ್ ಅವರು ಕೂಡಾ ಒಂದು ವಿಶಿಷ್ಠ ಕೆಲಸ ಮಾಡುತ್ತಿದ್ದಾರೆ. ಅವರು ಕಳೆದ 25-30 ವರ್ಷಗಳಲ್ಲಿ ಪಾರಿವಾಳಗಳ ಸೇವೆ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಅವರ ಮನೆಯಲ್ಲಿ 200 ಕ್ಕೂ ಅಧಿಕ ಪಾರಿವಾಳಗಳಿವೆ. ಪಕ್ಷಿಗಳ ಆಹಾರ, ನೀರು, ಆರೋಗ್ಯದಂತಹ ಮುಖ್ಯ ವಿಷಯಗಳ ಬಗ್ಗೆ ಅವರು ಕಾಳಜಿ ವಹಿಸುತ್ತಾರೆ. ಇವುಗಳಿಗಾಗಿ ಸಾಕಷ್ಟು ಹಣ ಖರ್ಚಾಗುತ್ತದೆ. ಆದರೂ ಅವರು ತಮ್ಮ ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಸ್ನೇಹಿತರೇ, ಸದುದ್ದೇಶದಿಂದ ಇಂತಹ ಕೆಲಸ ಕಾರ್ಯಗಳನ್ನು ಮಾಡುವ ಜನರನ್ನು ನೋಡಿದಾಗ ನಿಜಕ್ಕೂ ಮನಕ್ಕೆ ನೆಮ್ಮದಿ, ಸಂತೋಷ ದೊರೆಯುತ್ತದೆ. ನಿಮಗೇನಾದರೂ ಇಂತಹ ವಿಶೇಷ, ವಿಶಿಷ್ಠ ಪ್ರಯತ್ನಗಳ ಬಗ್ಗೆ ತಿಳಿದುಬಂದರೆ ಅದನ್ನು ಖಂಡಿತವಾಗಿಯೂ ಹಂಚಿಕೊಳ್ಳಿ.

 ನನ್ನ ಪ್ರೀತಿಯ ಕುಟುಂಬವಾಸಿಗಳೇ, ಸ್ವಾತಂತ್ರ್ಯದ ಈ ಅಮೃತ ಕಾಲವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಕರ್ತವ್ಯ ಕಾಲವೂ ಆಗಿದೆ. ನಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಾ ನಮ್ಮ ಧ್ಯೇಯಗಳನ್ನು ಸಾಧಿಸಬಹುದಾಗಿದೆ, ನಮ್ಮ ಗುರಿಯನ್ನು ಮುಟ್ಟಬಹುದಾಗಿದೆ. ಕರ್ತವ್ಯದ ಈ ಭಾವನೆ ನಮ್ಮೆಲ್ಲರನ್ನೂ ಒಂದು ಸೂತ್ರದಲ್ಲಿ ಬಂಧಿಸುತ್ತದೆ. ಉತ್ತರ ಪ್ರದೇಶದ ಸಂಭಲ್ ನಲ್ಲಿ ದೇಶವು ಕರ್ತವ್ಯ ಭಾವನೆಯ ಇಂತಹದ್ದೇ ಒಂದು ಉದಾಹರಣೆಯನ್ನು ಕಂಡಿದೆ. ಅದನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಯೋಚಿಸಿನೋಡಿ, 70 ಕ್ಕಿಂತ ಹೆಚ್ಚು ಗ್ರಾಮಗಳಿದ್ದು, ಸಾವಿರಾರು ಜನಸಂಖ್ಯೆಯಿದ್ದು, ಎಲ್ಲರೂ ಸೇರಿ, ಒಂದು ಗುರಿ, ಒಂದು ಧ್ಯೇಯ ಸಾಧನೆಗಾಗಿ ಒಗ್ಗಟ್ಟಾಗಿ ಮುಂದೆ ಬರುವುದು ಬಹಳ ಅಪರೂಪಕ್ಕೆ ಕಾಣಸಿಗುತ್ತದೆ. ಆದರೆ, ಸಂಭಲ್ ನ ಜನರು ಇದನ್ನು ಮಾಡಿ ತೋರಿಸಿದ್ದಾರೆ. ಈ ಜನರೆಲ್ಲರೂ ಒಂದುಗೂಡಿ, ಜನಭಾಗಿದಾರಿ ಮತ್ತು ಸಾಮೂಹಿಕತೆಯ ಬಹು ದೊಡ್ಡ ಅದ್ಭುತ ಉದಾಹರಣೆ ತೋರಿಸಿದ್ದಾರೆ. ವಾಸ್ತವದಲ್ಲಿ, ಈ ಕ್ಷೇತ್ರದಲ್ಲಿ ದಶಕಗಳಿಗೆ ಮುನ್ನ, ಸೋತ್ ಎಂಬ ಹೆಸರಿನ ನದಿ ಹರಿಯುತ್ತಿತ್ತು. ಅಮರೋಹಾದಿಂದ ಆರಂಭವಾಗಿ ಸಂಭಲ್ ಮೂಲಕ ಹರಿಯುತ್ತಾ ಬದಾಯುವರೆಗೂ ಪ್ರವಹಿಸುತ್ತಿದ್ದ ಈ ನದಿ ಒಂದು ಕಾಲದಲ್ಲಿ ಈ ಕ್ಷೇತ್ರದಲ್ಲಿ ಜೀವನದಿಯ ರೂಪದಲ್ಲಿ ಹೆಸರಾಗಿತ್ತು. ಈ ನದಿಯಲ್ಲಿ ಸದಾಕಾಲವು ನೀರು ತುಂಬಿ ಪ್ರವಹಿಸುತ್ತಿತ್ತು, ಇದು ಇಲ್ಲಿನ ರೈತರಿಗೆ ಬೇಸಾಯಕ್ಕೆ ಮುಖ್ಯ ಆಧಾರವಾಗಿತ್ತು. ಕಾಲ ಕ್ರಮೇಣ ನದಿಯಲ್ಲಿ ನೀರು ಕಡಿಮೆಯಾಯಿತು, ನದಿ ಹರಿಯುತ್ತಿದ್ದ ಜಾಗಗಳ ಅತಿಕ್ರಮಣವಾಯಿತು ಮತ್ತು ಈ ನದಿ ಬರಿದಾಯಿತು. ನದಿಯನ್ನು ತಾಯಿಯೆಂದು ನಂಬುವ ನಮ್ಮ ದೇಶದಲ್ಲಿ, ಸಂಭಲ್ ನ ಜನರು ಈ ಸೋತ್ ನದಿಯನ್ನು ಕೂಡಾ ಪುನಶ್ಚೇತನಗೊಳಿಸುವ ಸಂಕಲ್ಪ ಕೈಗೊಂಡರು. ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಸೋತ್ ನದಿಯ ಕಾಯಕಲ್ಪದ ಕೆಲಸವನ್ನು 70 ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳು ಒಂದುಗೂಡಿ ಆರಂಭಸಿದವು. ಗ್ರಾಮ ಪಂಚಾಯಿತಿಯ ಜನರು ಸರ್ಕಾರದ ಇಲಾಖೆಗಳನ್ನು ಕೂಡಾ ತಮ್ಮೊಂದಿಗೆ ಸೇರಿಸಿಕೊಂಡರು. ಒಂದು ವರ್ಷಕ್ಕಿಂತ ಮೊದಲು ಕೇವಲ ಆರು ತಿಂಗಳಿನಲ್ಲಿಯೇ ಈ ಜನರು ನದಿಯ 100 ಕಿಲೋಮೀಟರ್ ಗಿಂತ ಹೆಚ್ಚು ಹಾದಿಯನ್ನು ಮರುನಿರ್ಮಾಣ ಮಾಡಿದರೆಂದು ತಿಳಿದು ನಿಮಗೆ ಸಂತೋಷವೆನಿಸಬಹುದು. ಮಳೆಗಾಲ ಆರಂಭವಾದಾಗ, ಇಲ್ಲಿನ ಜನರ ಶ್ರಮಕ್ಕೆ ಫಲ ದೊರೆಯಿತು, ಮತ್ತು ಸೋತ್ ನದಿ ನೀರಿನಿಂದ ಬಹುತೇಕ ತುಂಬಿಬಿಟ್ಟಿತು. ಇಲ್ಲಿನ ರೈತರಿಗೆ ಇದು ಸಂತೋಷದ ಬಹುದೊಡ್ಡ ಅವಕಾಶ ತಂದಿತು. ಜನರು ನದಿಯ ತೀರದಲ್ಲಿ 10 ಸಾವಿರಕ್ಕೂ ಅಧಿಕ ಬಿದಿರಿನ ಸಸಿಗಳನ್ನು ಕೂಡಾ ನೆಟ್ಟಿದ್ದಾರೆ, ಇದರಿಂದಾಗಿ ನದಿಯ ತೀರ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ. ನದಿಯ ನೀರಿನಲ್ಲಿ ಮೂವತ್ತು ಸಾವಿರಕ್ಕಿಂತಲೂ ಅಧಿಕ ಗಾಂಬೂಸಿಯಾ ಮೀನುಗಳನ್ನು ಬಿಡಲಾಗಿದ್ದು, ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳಲಾಗಿದೆ. ಸ್ನೇಹಿತರೇ, ನಾವು ಸಂಕಲ್ಪ ಮಾಡಿದರೆ ದೊಡ್ಡ ದೊಡ್ಡ ಸವಾಲುಗಳನ್ನು ಕೂಡಾ ಎದುರಿಸಿ, ದಾಟಿ, ದೊಡ್ಡ ಬದಲಾವಣೆಗಳನ್ನು ತರಬಹುದು ಎಂಬುದನ್ನು ಸೋತ್ ನದಿಯ ಉದಾಹರಣೆ ನಮಗೆ ತಿಳಿಸುತ್ತದೆ. ನೀವು ಕೂಡಾ ಕರ್ತವ್ಯದ ಮಾರ್ಗದಲ್ಲಿ ಮುಂದೆ ಸಾಗುತ್ತಾ, ನಿಮ್ಮ ಸುತ್ತಮುತ್ತಲಿನ ಇಂತಹ ಅನೇಕ ಬದಲಾವಣೆಗಳಿಗೆ ಮಾಧ್ಯಮವಾಗಬಹುದು.

ನನ್ನ ಪ್ರೀತಿಯ ಕುಟುಂಬಸ್ಥರೇ, ಉದ್ದೇಶಗಳು ದೃಢವಾಗಿದ್ದಾಗ ಮತ್ತು ಏನನ್ನಾದರೂ ಕಲಿಯುವ ಸಂಕಲ್ಪವಿದ್ದಾಗ ಯಾವುದೇ ಕೆಲಸ ಕಷ್ಟ ಎನಿಸುವುದಿಲ್ಲ. ಪಶ್ಚಿಮ ಬಂಗಾಳದ ಶ್ರೀಮತಿ ಶಕುಂತಲಾ ಸರದಾರ್ ಅವರು ಈ ಅಂಶವನ್ನು ನಿಜವಾಗಿಯೂ ಸಾಬೀತು ಮಾಡಿ ತೋರಿಸಿದ್ದಾರೆ. ಇಂದು ಅವರು ಅನೇಕ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. ಶಕುಂತಲಾ ಅವರು ಜಂಗಲ್ ಮಹಲ್ ನ ಶಾತನಾಲಾ ಗ್ರಾಮದ ನಿವಾಸಿಯಾಗಿದ್ದಾರೆ. ಬಹಳ ಕಾಲದವರೆಗೆ ಅವರ ಕುಟುಂಬ ಪ್ರತಿ ದಿನ ಕೂಲಿ ನಾಲಿ ಮಾಡಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿತ್ತು. ಅವರ ಕುಟುಂಬಕ್ಕೆ ಜೀವನೋಪಾಯ ಬಹಳ ಕಷ್ಟವಾಗಿತ್ತು. ಅವರು ಆಗ ಹೊಸದೊಂದು ಮಾರ್ಗ ಆರಿಸಿಕೊಳ್ಳಲು ನಿರ್ಧರಿಸಿದರು ಮತ್ತು ಆ ಹಾದಿಯಲ್ಲಿ ಯಶಸ್ಸು ಗಳಿಸಿ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದರು. ಅವರು ಈ ಅದ್ಭುತವನ್ನು ಹೇಗೆ ಮಾಡಿದರೆಂದು ನೀವು ಖಂಡಿತವಾಗಿಯೂ ತಿಳಿದುಕೊಳ್ಳಬಯುಸುತ್ತೀರೆಂದು ನನಗೆ ಗೊತ್ತು. ಇದಕ್ಕೆ ಉತ್ತರ – ಒಂದು ಬಟ್ಟೆ ಹೊಲಿಯುವ ಯಂತ್ರ. ಒಂದು ಬಟ್ಟೆ ಹೊಲಿಯುವ ಯಂತ್ರದ ಸಹಾಯದಿಂದ ಅವರು ‘ಸಾಲ್‘ ಮರದ ಎಲೆಗಳ ಮೇಲೆ ಸುಂದರ ಆಕರ್ಷಕ ವಿನ್ಯಾಸ ಮೂಡಿಸಲು ಪ್ರಾರಂಭಿಸಿದರು. ಅವರ ಈ ಕೌಶಲ್ಯ ಇಡೀ ಕುಟುಂಬದ ಜೀವನವನ್ನೇ ಬದಲಾಯಿಸಿಬಿಟ್ಟಿತು. ಅವರು ತಯಾರಿಸಿದ ಈ ಅದ್ಭುತ ಕಲೆಗೆ ಬೇಡಿಕೆಗೆ ಕ್ರಮೇಣ ಹೆಚ್ಚುತ್ತಲೇ ಇದೆ. ಶಕುಂತಲಾ ಅವರ ಈ ಕೌಶಲ್ಯವು ಕೇವಲ ಅವರ ಜೀವನವನ್ನು ಮಾತ್ರವಲ್ಲದೇ, ‘ಸಾಲ್‘ ಎಲೆಗಳನ್ನು ಸಂಗ್ರಹಿಸುವ ಅನೇಕರ ಜೀವನವನ್ನು ಕೂಡಾ ಬದಲಾಯಿಸಿಬಿಟ್ಟಿತು. ಅವರು ಈಗ, ಅನೇಕ ಮಹಿಳೆಯರಿಗೆ ತರಬೇತಿ ನೀಡುವ ಕೆಲಸ ಕೂಡಾ ಮಾಡುತ್ತಿದ್ದಾರೆ. ಕೂಲಿ ನಾಲಿಯ ಮೇಲೆ ಆಧಾರಪಟ್ಟಿದ್ದ ಕುಟುಂಬವೊಂದು ಈಗ ಸ್ವತಃ ಮತ್ತೊಬ್ಬರಿಗೆ ಉದ್ಯೋಗ ನೀಡುವಂತಾಗಿರುವುದನ್ನು ನೀವು ಊಹಿಸಬಹುದು. ದೈನಂದಿನ ಕೂಲಿಯ ಮೇಲೆ ಆಧಾರಪಟ್ಟಿದ್ದ ತಮ್ಮ ಕುಟುಂಬ ಈಗ ತನ್ನ ಕಾಲಿನ ಮೇಲೆ ತಾನು ನಿಲ್ಲುವಂತೆ ಅವರು ಮಾಡಿದ್ದಾರೆ. ಇದು ಅವರ ಕುಟುಂಬಕ್ಕೆ ಇತರ ವಿಷಯಗಳ ಬಗ್ಗೆ ಗಮನ ಹರಿಸುವುದಕ್ಕೆ ಅವಕಾಶ ಕಲ್ಪಿಸಿದೆ. ಮತ್ತೊಂದು ವಿಷಯವಿದೆ, ಅದೆಂದರೆ ಶಕುಂತಲಾ ಅವರು ತಮ್ಮ ಜೀವನ ಸ್ವಲ್ಪ ಉತ್ತಮವಾದ ನಂತರ ಹಣ ಉಳಿಸಲು ಕೂಡಾ ಆರಂಭಿಸಿದ್ದಾರೆ. ತನ್ನ ಮಕ್ಕಳ ಭವಿಷ್ಯ ಉಜ್ವಲವಾಗಿರಬೇಕೆಂದು ಆಕೆ ಈಗ ಜೀವ ವಿಮೆ ಯೋಜನೆಗಳಲ್ಲಿ ಹೂಡಿಕೆ ಮಾಡಲು ಆರಂಭಿಸಿದ್ದಾರೆ. ಶಕುಂತಲಾ ಅವರ ಈ ಉತ್ಸಾಹವನ್ನು ಎಷ್ಟು ಪ್ರಶಂಸಿಸಿದರೂ ಕಡಿಮೆಯೇ. ಭಾರತ ಜನರಲ್ಲಿ ಇಂತಹ ಅನೇಕ ಪ್ರತಿಭೆಗಳು ತುಂಬಿವೆ. – ನೀವು ಅವರಿಗೆ ಅವಕಾಶ ಕೊಟ್ಟು ನೋಡಿ ಮತ್ತು ಅವರು ಎಂತೆಂತಹ ಅದ್ಭುತಗಳನ್ನು ಮಾಡಿ ತೋರಿಸುತ್ತಾರೆ ಎಂಬುದನ್ನು ನೋಡಿ.

ನನ್ನ ಕುಟುಂಬ ಸದಸ್ಯರೇ, ದೆಹಲಿಯಲ್ಲಿ ಜಿ-20 ಶೃಂಗಸಭೆಯ ಸಮಯದಲ್ಲಿ ಅನೇಕ ವಿಶ್ವ ನಾಯಕರು ಬಾಪೂಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ರಾಜಘಾಟ್ ಗೆ ಬೇಟಿ ನೀಡಿದ್ದನ್ನು ಯಾರು ತಾನೇ ಮರೆಯಲು ಸಾಧ್ಯ. ಪ್ರಪಂಚದಾದ್ಯಂತ ಬಾಪೂ ಅವರ ಚಿಂತನೆ-ವಿಚಾರಗಳು ಇಂದಿಗೂ ಪ್ರಸ್ತುತ ಎನ್ನುವುದಕ್ಕೆ ಇದು ಅತಿ ದೊಡ್ಡ ರುಜುವಾತಾಗಿದೆ. ಗಾಂಧಿ ಜಯಂತಿಯ ಸಂದರ್ಭದಲ್ಲಿ ಇಡೀ ದೇಶದಲ್ಲಿ ಸ್ವಚ್ಛತೆಗೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ ಎನ್ನುವುದು ನನಗೆ ಬಹಳ ಸಂತೋಷ ತರುವ ವಿಷಯವಾಗಿದೆ. ಕೇಂದ್ರ ಸರ್ಕಾರದ ಎಲ್ಲಾ ಕಚೇರಿಗಳಲ್ಲಿ ‘ಸ್ವಚ್ಛತೆಯೇ ಸೇವೆ –ಸ್ವಚ್ಛತಾ ಹೀ ಸೇವಾ’ ಅಭಿಯಾನ ಸಾಕಷ್ಟು ಉತ್ಸಾಹದಿಂದ ನಡೆಯುತ್ತಿದೆ. Indian Swachhata League ನಲ್ಲಿ ಕೂಡಾ ಸಾಕಷ್ಟು ಉತ್ತಮ ಭಾಗಿದಾರಿ ಕಂಡುಬರುತ್ತಿದೆ. ಅಕ್ಟೋಬರ್ 1 ರಂದು ಅಂದರೆ ಭಾನುವಾರದಂದು ಬೆಳಿಗ್ಗೆ 10 ಗಂಟೆಗೆ ಸ್ವಚ್ಛತೆಗೆ ಸಂಬಂಧಿಸಿದಂತೆ ಒಂದು ದೊಡ್ಡ ಕಾರ್ಯಕ್ರಮ ಆಯೋಜನೆಯಾಗಲಿದೆ. ನೀವು ಅದಕ್ಕಾಗಿ ನಿಮ್ಮ ಸಮಯ ಮೀಸಲಿಟ್ಟು, ಸ್ವಚ್ಛತೆಗಾಗಿ ಮೀಸಲಿಟ್ಟ ಈ ಕಾರ್ಯಕ್ರಮದಲ್ಲಿ ನಿಮ್ಮ ಕೈ ಜೋಡಿಸಿ ಎಂದು ನಾನು ಇಂದು ‘ಮನದ ಮಾತಿನ’ ಮೂಲಕ ದೇಶವಾಸಿಗಳೆಲ್ಲರಲ್ಲಿ ಮನವಿ ಮಾಡುತ್ತಿದ್ದೇನೆ. ನೀವು ನಿಮ್ಮ ರಸ್ತೆಗಳು, ಸುತ್ತ ಮುತ್ತಲಿನ ಪ್ರದೇಶ, ಉದ್ಯಾನವನ, ನದಿ, ಸರೋವರ ಅಥವಾ ಇತರ ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಸ್ವಚ್ಛತಾ ಅಭಿಯಾನಗಳಲ್ಲಿ ಕೈ ಜೋಡಿಸಬಹುದು. ಮತ್ತು ಎಲ್ಲೆಲ್ಲಿ ಅಮೃತ ಸರೋವರಗಳು ನಿರ್ಮಾಣವಾಗಿದೆಯೋ ಅಲ್ಲೆಲ್ಲಾ ಖಂಡಿತವಾಗಿಯೂ ಸ್ವಚ್ಛ ಮಾಡಲೇಬೇಕು. ಸ್ವಚ್ಛತೆಯ ಈ ಕಾರ್ಯಾಂಜಲಿಯೇ ಗಾಂಧೀಜಿಯವರಿಗೆ ನಾವು ಸಲ್ಲಿಸುವ ನಿಜವಾಗ ಶ್ರದ್ಧಾಂಜಲಿ. ಈ ಗಾಂಧಿ ಜಯಂತಿಯ ಸಂದರ್ಭದಲ್ಲಿ ಖಾದಿಯ ಯಾವುದಾದರೊಂದು ಉತ್ಪನ್ನವನ್ನು ಖಂಡಿತವಾಗಿಯೂ ಖರೀದಿಸಬೇಕೆಂದು ನಾನು ನಿಮಗೆ ಮತ್ತೊಮ್ಮೆ ನೆನಪಿಸುತ್ತಿದ್ದೇನೆ.

ನನ್ನ ಕುಟುಂಬ ಸದಸ್ಯರೇ, ನಮ್ಮ ದೇಶದಲ್ಲಿ ಹಬ್ಬಗಳ ಋತು ಕೂಡಾ ಆರಂಭವಾಗಿದೆ. ನಿಮ್ಮ ಮನೆಗಳಲ್ಲಿ ಕೂಡಾ ಏನನ್ನೂದರೂ ಹೊಸದನ್ನು ಖರೀದಿಸುವ ಯೋಜನೆ ಸಿದ್ಧವಾಗುತ್ತಿರಬಹುದಲ್ಲವೇ. ನವರಾತ್ರಿಯಲ್ಲಿ ತಮ್ಮ ಕೆಲಸದ ಶುಭಾರಂಭ ಮಾಡಬೇಕೆಂದು ಕೆಲವು ನಿರೀಕ್ಷಿಸುತ್ತಿರಬಹುದಲ್ಲವೇ? ಸಂತೋಷ, ಉತ್ಸಾಹದ ಈ ವಾತಾವರಣದಲ್ಲಿ ನೀವು ವೋಕಲ್ ಫಾರ್ ಲೋಕಲ್ ಮಂತ್ರವನ್ನು ಖಂಡಿತವಾಗಿಯೂ ನೆನಪಿಸಿಟ್ಟುಕೊಳ್ಳಿ. ಸಾಧ್ಯವಾದಷ್ಟು ನೀವು ಭಾರತದಲ್ಲೇ ತಯಾರಿಸಿದ ಸಾಮಾನುಗಳನ್ನು ಖರೀದಿಸಿ, ಭಾರತದ ಉತ್ಪನ್ನಗಳನ್ನು ಉಪಯೋಗಿಸಿ ಮತ್ತು ಮೇಡ್ ಇನ್ ಇಂಡಿಯಾ ವಸ್ತುಗಳನ್ನೇ ಉಡುಗೊರೆಯಾಗಿ ನೀಡಿ. ನಿಮ್ಮ ಒಂದು ಸಣ್ಣ ಸಂತೋಷ ದೂರದಲ್ಲಿರುವ ಮತ್ತಾವುದೋ ಒಂದು ಕುಟುಂಬಕ್ಕೆ ದೊಡ್ಡ ಸಂತೋಷದ ಕಾರಣವಾಗುತ್ತದೆ. ನೀವು ಖರೀದಿ ಮಾಡುವ ಭಾರತೀಯ ವಸ್ತುವಿನ ನೇರ ಲಾಭ, ನಮ್ಮ ಶ್ರಮಿಕರಿಗೆ, ಕೆಲಸಗಾರರಿಗೆ, ಕಲಾವಿದರಿಗೆ, ಮತ್ತು ಇತರ ಕುಶಲಕರ್ಮಿ ಸೋದರ ಸೋದರಿಯರಿಗೆ ತಲುಪುತ್ತದೆ. ಈಗ ಬಹಳಷ್ಟು ಸ್ಮಾರ್ಟ್ ಆಪ್ ಗಳು ಕೂಡಾ ಸ್ಥಳೀಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುತ್ತಿವೆ. ನೀವು ಸ್ಥಳೀಯ ವಸ್ತುಗಳನ್ನು ಖರೀದಿಸಿದಾಗ, ಸ್ಮಾರ್ಟ್ ಆಪ್ ಗಳು ಈ ಯುವಜನತೆಗೆ ಕೂಡಾ ಇದರ ಪ್ರಯೋಜನ ದೊರೆಯುತ್ತದೆ.

ನನ್ನ ಪ್ರೀತಿಯ ಕುಟುಂಬ ಸದಸ್ಯರೇ, ಇಂದಿನ ‘ಮನದ ಮಾತು’ ನಾನು ಇಲ್ಲಿಗೆ ಮುಗಿಸುತ್ತಿದ್ದೇನೆ. ಮುಂದಿನ ಬಾರಿ ನಾನು ಮನದ ಮಾತಿನಲ್ಲಿ ನಿಮ್ಮನ್ನು ಭೇಟಿಯಾಗುವಾಗ ನವರಾತ್ರಿ ಮತ್ತು ದಸರಾ ಹಬ್ಬಗಳು ಮುಗಿದಿರುತ್ತವೆ. ಹಬ್ಬಗಳ ಈ ಋತುವಿನಲ್ಲಿ ನೀವು ಸಂಪೂರ್ಣ ಉತ್ಸಾಹದಿಂದ ಎಲ್ಲಾ ಹಬ್ಬಗಳನ್ನೂ ಆಚರಿಸಿ. ನಿಮ್ಮ ಕುಟುಂಬಗಳಲ್ಲಿ ಸಂತೋಷ ತುಂಬಿರಲಿ ಎನ್ನುವುದು ನನ್ನ ಪ್ರೀತಿಯ ಹಾರೈಕೆಯಾಗಿದೆ. ಈ ಹಬ್ಬಗಳಿಗಾಗಿ ನಿಮಗೆ ಅನೇಕಾನೇಕ ಶುಭ ಹಾರೈಕೆಗಳು. ನಿಮ್ಮೊಂದಿಗೆ ಹೊಸ ಹೊಸ ವಿಷಯಗಳೊಂದಿಗೆ, ದೇಶವಾಸಿಗಳ ಹೊಸ ಯಶಸ್ಸಿನ ಗಾಥೆಗಳೊಂದಿಗೆ ಮತ್ತೆ ಭೇಟಿಯಾಗುತ್ತೇನೆ. ನೀವು ನಿಮ್ಮ ಸಂದೇಶಗಳನ್ನು ನನಗೆ ಖಂಡಿತವಾಗಿಯೂ ಕಳುಹಿಸುತ್ತಿರಿ, ನಿಮ್ಮ ಅನುಭವಗಳನ್ನು ಹಂಚಿಕೊಳ್ಳಲು ಮರೆಯದಿರಿ. ಅವುಗಳಿಗಾಗಿ ನಾನು ನಿರೀಕ್ಷಿಸುತ್ತಿರುತ್ತೇನೆ.

ಅನೇಕಾನೇಕ ಧನ್ಯವಾದ.

ನಮಸ್ಕಾರ.

****

 



(Release ID: 1960178) Visitor Counter : 100