ಪ್ರಧಾನ ಮಂತ್ರಿಯವರ ಕಛೇರಿ

ಮಾನವ-ಕೇಂದ್ರಿತ ಜಾಗತೀಕರಣ:  ಯಾರನ್ನೂ ಹಿಂದೆ ಬಿಡದೆ, ಜಿ-20ಅನ್ನು ಕೊನೆಯ ಮೈಲಿಗೆ ಕೊಂಡೊಯ್ಯುವುದು

Posted On: 07 SEP 2023 10:41AM by PIB Bengaluru

'ವಸುಧೈವ ಕುಟುಂಬಕಂ'- ಈ ಎರಡು ಪದಗಳು ಗಾಢವಾದ ತತ್ವವನ್ನು ಸಾರುತ್ತವೆ. ಇದರ ಅರ್ಥ 'ಜಗತ್ತು ಒಂದೇ ಕುಟುಂಬ'. ಗಡಿಗಳು, ಭಾಷೆಗಳು ಮತ್ತು ಸಿದ್ಧಾಂತಗಳನ್ನು ಮೀರಿ ಒಂದು ಸಾರ್ವತ್ರಿಕ ಕುಟುಂಬವಾಗಿ ಪ್ರಗತಿ ಸಾಧಿಸಲು ನಮ್ಮನ್ನು ಪ್ರೋತ್ಸಾಹಿಸುವ ದೃಷ್ಟಿಕೋನ ಇದಾಗಿದೆ. ಭಾರತದ ಜಿ-20 ಅಧ್ಯಕ್ಷತೆಯ ಸಮಯದಲ್ಲಿ, ಇದು ಮಾನವ ಕೇಂದ್ರಿತ ಪ್ರಗತಿಯ ಕರೆಯಾಗಿ ಮಾರ್ಪಟ್ಟಿದೆ. ಒಂದು ಭೂಮಿಯಾಗಿ, ನಮ್ಮ ಗ್ರಹವನ್ನು ಪಾಲನೆ ಮಾಡಲು ನಾವು ಒಟ್ಟಾಗಿ ಬರುತ್ತಿದ್ದೇವೆ. ಒಂದು ಕುಟುಂಬವಾಗಿ, ಬೆಳವಣಿಗೆಯ ಸಾಧನೆಯಲ್ಲಿ ನಾವು ಪರಸ್ಪರರನ್ನು ಬೆಂಬಲಿಸುತ್ತೇವೆ ಮತ್ತು ನಾವು ಹಂಚಿಕೆಯ ಭವಿಷ್ಯದ ಕಡೆಗೆ ಒಟ್ಟಿಗೆ ಸಾಗುತ್ತೇವೆ - ಒಂದು ಭವಿಷ್ಯ - ಇದು ಈ ಅಂತರ್‌ ಸಂಪರ್ಕಿತ ಕಾಲದಲ್ಲಿ ನಿರಾಕರಿಸಲಾಗದ ಸತ್ಯವಾಗಿದೆ.

ಸಾಂಕ್ರಾಮಿಕ ನಂತರದ ವಿಶ್ವ ಕ್ರಮಾಂಕವು ಅದರ ಹಿಂದಿನ ಪ್ರಪಂಚಕ್ಕಿಂತ ಬಹಳ ಭಿನ್ನವಾಗಿದೆ. ಇಲ್ಲಿ ಮೂರು ಪ್ರಮುಖ ಬದಲಾವಣೆಗಳಾಗಿವೆ.

ಮೊದಲನೆಯದಾಗಿ, ಪ್ರಪಂಚದ ಜಿಡಿಪಿ-ಕೇಂದ್ರಿತ ದೃಷ್ಟಿಕೋನವು ಮಾನವ-ಕೇಂದ್ರಿತ ದೃಷ್ಟಿಕೋನಕ್ಕೆ ಬದಲಾಗುವ ಅಗತ್ಯವಿದೆ ಎಂಬ ಅರಿವು ಬೆಳೆಯುತ್ತಿದೆ.

ಎರಡನೆಯದಾಗಿ, ಜಾಗತಿಕ ಪೂರೈಕೆ ಸರಪಳಿಗಳಲ್ಲಿ ಸ್ಥಿತಿಸ್ಥಾಪಕತ್ವ ಮತ್ತು ವಿಶ್ವಾಸಾರ್ಹತೆಯ ಪ್ರಾಮುಖ್ಯತೆಯನ್ನು ಜಗತ್ತು ಗುರುತಿಸುತ್ತಿದೆ.

ಮೂರನೆಯದಾಗಿ, ಜಾಗತಿಕ ಸಂಸ್ಥೆಗಳ ಸುಧಾರಣೆಯ ಮೂಲಕ ಬಹುಪಕ್ಷೀಯತೆಯನ್ನು ಹೆಚ್ಚಿಸಲು ಸಾಮೂಹಿಕ ಕರೆ ಇದೆ.

ನಮ್ಮ ಜಿ-20 ಅಧ್ಯಕ್ಷತೆಯು ಈ ಬದಲಾವಣೆಗಳಿಗೆ ವೇಗವರ್ಧಕದ ಪಾತ್ರವನ್ನು ವಹಿಸಿದೆ.

ಡಿಸೆಂಬರ್ 2022 ರಲ್ಲಿ, ನಾವು ಇಂಡೋನೇಷ್ಯಾದಿಂದ ಅಧ್ಯಕ್ಷತೆಯನ್ನು ವಹಿಸಿಕೊಂಡಾಗ, ನಾನು ಜಿ-20 ರ ಮೂಲಕ ಮನಸ್ಥಿತಿ ಬದಲಾವಣೆಯನ್ನು ವೇಗಗೊಳಿಸಬೇಕು ಎಂದು ಬರೆದಿದ್ದೆ. ಇದು ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳು, ಆರ್ಥಿಕವಾಗಿ ಹಿಂದುಳಿದ ರಾಷ್ಟ್ರಗಳು (ಗ್ಲೋಬಲ್‌ ಸೌತ್)‌ ಮತ್ತು ಆಫ್ರಿಕಾದ ರಾಷ್ಟ್ರಗಳ ನಿರ್ಲಕ್ಷಿತ ಆಕಾಂಕ್ಷೆಗಳನ್ನು ಮುಖ್ಯವಾಹಿನಿಗೆ ತರುವ ಸಂದರ್ಭದಲ್ಲಿ ಅಗತ್ಯವಾಗಿತ್ತು.

ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಯು 125 ದೇಶಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಿದೆ, ಇದು ನಮ್ಮ ಅಧ್ಯಕ್ಷತೆಯಲ್ಲಿನ ಅತಿಮುಖ್ಯ ಉಪಕ್ರಮಗಳಲ್ಲಿ ಒಂದಾಗಿದೆ. ಗ್ಲೋಬಲ್ ಸೌತ್‌ನಿಂದ ಒಳಹರಿವು ಮತ್ತು ಆಲೋಚನೆಗಳನ್ನು ಸಂಗ್ರಹಿಸಲು ಇದೊಂದು ಪ್ರಮುಖ ಕಾರ್ಯವಾಗಿತ್ತು. ಇದಲ್ಲದೆ, ನಮ್ಮ ಅಧ್ಯಕ್ಷತೆಯು ಆಫ್ರಿಕನ್ ದೇಶಗಳಿಂದ ಅತಿದೊಡ್ಡ ಭಾಗವಹಿಸುವಿಕೆಯನ್ನು ಕಂಡಿರುವುದು ಮಾತ್ರವಲ್ಲ, ಆಫ್ರಿಕನ್ ಒಕ್ಕೂಟವನ್ನು ಜಿ-20 ರ ಖಾಯಂ ಸದಸ್ಯನನ್ನಾಗಿ ಸೇರಿಸಲು ಒತ್ತಾಯಿಸಿದೆ.

ಅಂತರ್‌ ಸಂಪರ್ಕಿತ ಜಗತ್ತಿನಲ್ಲಿ ವಲಯಗಳಾದ್ಯಂತ ನಮ್ಮ ಸವಾಲುಗಳು ಪರಸ್ಪರ ಬೆಸೆದಿರುತ್ತವೆ. ಇದು 2030 ರ ಕಾರ್ಯಸೂಚಿಯ ಮಧ್ಯದ ವರ್ಷವಾಗಿದೆ ಮತ್ತು ಎಸ್‌ ಡಿ ಜಿ (ಸುಸ್ಥಿರ ಅಭಿವೃದ್ಧಿ ಗುರಿ) ಗಳ ಪ್ರಗತಿಯು ಹಳಿ ತಪ್ಪುತ್ತಿವೆ ಎಂದು ಅನೇಕರು ಹೆಚ್ಚಿನ ಕಾಳಜಿಯಿಂದ ಗಮನಿಸುತ್ತಿದ್ದಾರೆ. ಎಸ್‌ ಡಿ ಜಿ ಗಳ ಪ್ರಗತಿಯನ್ನು ವೇಗಗೊಳಿಸುವ ಜಿ-20 2023 ಕ್ರಿಯಾ ಯೋಜನೆಯು ಎಸ್‌ ಡಿ ಜಿ ಗಳನ್ನು ಅನುಷ್ಠಾನಗೊಳಿಸುವತ್ತ ಜಿ-20 ರ ಭವಿಷ್ಯದ ದಿಕ್ಕನ್ನು ಮುನ್ನಡೆಸುತ್ತದೆ.

ಭಾರತದಲ್ಲಿ, ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವುದು ಪ್ರಾಚೀನ ಕಾಲದಿಂದಲೂ ರೂಢಿಯಾಗಿದೆ ಮತ್ತು ಆಧುನಿಕ ಕಾಲದಲ್ಲೂ ನಾವು ಹವಾಮಾನ ಕ್ರಮಕ್ಕೆ ನಮ್ಮ ಪಾಲಿನ ಕೊಡುಗೆಯನ್ನು ನೀಡುತ್ತಿದ್ದೇವೆ.

ಗ್ಲೋಬಲ್‌ ಸೌತ್‌ ನ ಹಲವು ದೇಶಗಳು ಅಭಿವೃದ್ಧಿಯ ವಿವಿಧ ಹಂತಗಳಲ್ಲಿವೆ ಮತ್ತು ಹವಾಮಾನ ಕ್ರಮವು ಇದಕ್ಕೆ ಪೂರಕವಾಗಿರಬೇಕು. ಹವಾಮಾನ ಕ್ರಮದ ಮಹತ್ವಾಕಾಂಕ್ಷೆಗಳು ಹವಾಮಾನ ಹಣಕಾಸು ಮತ್ತು ತಂತ್ರಜ್ಞಾನ ವರ್ಗಾವಣೆಯ ಮೇಲಿನ ಕ್ರಮಗಳೊಂದಿಗೆ ಹೊಂದಾಣಿಕೆಯಾಗಬೇಕು.

ಏನನ್ನು ಮಾಡಬಾರದು ಎಂಬ ಸಂಪೂರ್ಣ ನಿರ್ಬಂಧಿತ ಮನೋಭಾವದಿಂದ ದೂರ ಸರಿಯುವ ಅವಶ್ಯಕತೆಯಿದೆ ಎಂದು ನಾವು ನಂಬುತ್ತೇವೆ, ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಏನು ಮಾಡಬಹುದು ಎಂಬುದರ ಮೇಲೆ ಹೆಚ್ಚು ರಚನಾತ್ಮಕ ನಿಲುವಿನ ಬಗ್ಗೆ ಕೇಂದ್ರೀಕರಿಸಬೇಕು.

ಸುಸ್ಥಿರ ಮತ್ತು ಸ್ಥಿತಿಸ್ಥಾಪಕ ನೀಲಿ ಆರ್ಥಿಕತೆಗಾಗಿ ಚೆನ್ನೈ ಹೆಚ್‌ ಎಲ್‌ ಪಿ ಗಳು ನಮ್ಮ ಸಾಗರಗಳನ್ನು ಆರೋಗ್ಯಕರವಾಗಿಡುವುದರ ಮೇಲೆ ಕೇಂದ್ರೀಕರಿಸುತ್ತವೆ.

ಸ್ವಚ್ಛ ಮತ್ತು ಹಸಿರು ಹೈಡ್ರೋಜನ್‌ಗಾಗಿ ಹಸಿರು ಹೈಡ್ರೋಜನ್ ಇನ್ನೋವೇಶನ್ ಸೆಂಟರ್ ನೊಂದಿಗೆ ಜಾಗತಿಕ ಪೂರಕ ವ್ಯವಸ್ಥೆಯು ನಮ್ಮ ಅಧ್ಯಕ್ಷ ಸ್ಥಾನದಿಂದ ಹೊರಹೊಮ್ಮುತ್ತದೆ.

2015 ರಲ್ಲಿ, ನಾವು ಅಂತರರಾಷ್ಟ್ರೀಯ ಸೌರ ಒಕ್ಕೂಟವನ್ನು ಪ್ರಾರಂಭಿಸಿದ್ದೇವೆ. ಈಗ, ಜಾಗತಿಕ ಜೈವಿಕ ಇಂಧನ ಒಕ್ಕೂಟದ ಮೂಲಕ, ಮರುಬಳಕೆ ಆರ್ಥಿಕತೆಯ ಪ್ರಯೋಜನಗಳಿಗೆ ಅನುಗುಣವಾಗಿ ಇಂಧನ ಪರಿವರ್ತನೆಗಳನ್ನು ಸಕ್ರಿಯಗೊಳಿಸಲು ನಾವು ಜಗತ್ತನ್ನು ಬೆಂಬಲಿಸುತ್ತೇವೆ.

ಹವಾಮಾನ ಕ್ರಮವನ್ನು ಪ್ರಜಾಪ್ರಭುತ್ವಗೊಳಿಸುವುದು ಆಂದೋಲನಕ್ಕೆ ಆವೇಗವನ್ನು ನೀಡಲು ಉತ್ತಮ ಮಾರ್ಗವಾಗಿದೆ. ವ್ಯಕ್ತಿಗಳು ತಮ್ಮ ದೀರ್ಘಾವಧಿಯ ಆರೋಗ್ಯದ ಆಧಾರದ ಮೇಲೆ ದೈನಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆಯೇ, ಅವರು ಗ್ರಹದ ದೀರ್ಘಾವಧಿಯ ಆರೋಗ್ಯದ ಮೇಲೆ ಆಗುವ ಪರಿಣಾಮಗಳ ಆಧಾರದ ಮೇಲೆ ಜೀವನಶೈಲಿಯ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಯೋಗವು ಸ್ವಾಸ್ಥ್ಯಕ್ಕಾಗಿ ಜಾಗತಿಕ ಜನಾಂದೋಲನವಾದಂತೆಯೇ, ನಾವು ಸುಸ್ಥಿರ ಪರಿಸರಕ್ಕಾಗಿ ಜೀವನಶೈಲಿಯೊಂದಿಗೆ (ಲೈಫ್) ಜಗತ್ತನ್ನು ಹುರಿದುಂಬಿಸಿದ್ದೇವೆ.

ಹವಾಮಾನ ಬದಲಾವಣೆಯ ಪರಿಣಾಮದಿಂದಾಗಿ, ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು ನಿರ್ಣಾಯಕವಾಗಿದೆ. ಸಿರಿಧಾನ್ಯ ಅಥವಾ ಶ್ರೀಅನ್ನ, ಹವಾಮಾನ-ಆಧಾರಿತ ಕೃಷಿಯನ್ನು ಉತ್ತೇಜಿಸುವ ಜೊತೆಗೆ ಇದಕ್ಕೆ ಸಹಾಯ ಮಾಡಬಹುದು. ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷದಲ್ಲಿ, ನಾವು ಸಿರಿಧಾನ್ಯವನ್ನು ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದೇವೆ. ಆಹಾರ ಭದ್ರತೆ ಮತ್ತು ಪೋಷಣೆಯ ಮೇಲಿನ ಡೆಕ್ಕನ್ ಉನ್ನತ ಮಟ್ಟದ ತತ್ವಗಳು ಸಹ ಈ ದಿಕ್ಕಿನಲ್ಲಿ ಸಹಾಯಕವಾಗಿವೆ.

ತಂತ್ರಜ್ಞಾನವು ಪರಿವರ್ತಕವಾಗಿದೆ ಆದರೆ ಅದನ್ನು ಎಲ್ಲರಿಗೂ ಲಭ್ಯಗೊಳಿಸುವ ಅಗತ್ಯವಿದೆ. ಹಿಂದೆ, ತಾಂತ್ರಿಕ ಪ್ರಗತಿಯ ಪ್ರಯೋಜನಗಳು ಸಮಾಜದ ಎಲ್ಲಾ ವರ್ಗಗಳಿಗೆ ಸಮಾನವಾಗಿ ದೊರಕಿಲ್ಲ.  ಭಾರತವು ಕಳೆದ ಕೆಲವು ವರ್ಷಗಳಿಂದ ತಂತ್ರಜ್ಞಾನವನ್ನು ಅಸಮಾನತೆಯನ್ನು ಕಡಿಮೆ ಮಾಡಲು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತೋರಿಸಿದೆ.

ಉದಾಹರಣೆಗೆ, ಪ್ರಪಂಚದಾದ್ಯಂತದ ಬ್ಯಾಂಕ್ ವ್ಯವಸ್ಥೆಯಿಂದ ಹೊರಗೆ ಉಳಿದಿರುವ ಅಥವಾ ಡಿಜಿಟಲ್ ಗುರುತುಗಳನ್ನು ಹೊಂದಿಲ್ಲದ ಶತಕೋಟಿ ಜನರನ್ನು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ಮೂಲಕ ಆರ್ಥಿಕವಾಗಿ ಒಳಗೊಳ್ಳಬಹುದು. ನಮ್ಮ ಡಿಪಿಐ ಬಳಸಿ ನಾವು ನಿರ್ಮಿಸಿದ ಪರಿಹಾರಗಳು ಈಗ ಜಾಗತಿಕವಾಗಿ ಗುರುತಿಸಲ್ಪಟ್ಟಿವೆ. ಈಗ, ಜಿ-20 ಮೂಲಕ, ಒಳಗೊಳ್ಳುವ ಬೆಳವಣಿಗೆಯ ಶಕ್ತಿಯನ್ನು ಅನ್‌ಲಾಕ್ ಮಾಡಲು ನಾವು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಡಿಪಿಐ ಅನ್ನು ಅಳವಡಿಸಿಕೊಳ್ಳಲು, ನಿರ್ಮಿಸಲು ಮತ್ತು ಹೆಚ್ಚಿಸಲು ಸಹಾಯ ಮಾಡುತ್ತೇವೆ.

ಭಾರತವು ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿರುವುದು ಆಕಸ್ಮಿಕವಲ್ಲ. ನಮ್ಮ ಸರಳ, ಹೆಚ್ಚಿಸಬಲ್ಲ ಮತ್ತು ಸುಸ್ಥಿರ ಪರಿಹಾರಗಳು ನಮ್ಮ ಅಭಿವೃದ್ಧಿಯ ಕಥೆಯನ್ನು ಮುನ್ನಡೆಸಲು ದುರ್ಬಲ ಮತ್ತು ವಂಚಿತರನ್ನು ಸಬಲೀಕರಣಗೊಳಿಸಿವೆ. ಬಾಹ್ಯಾಕಾಶದಿಂದ ಕ್ರೀಡೆ, ಆರ್ಥಿಕತೆ, ಉದ್ಯಮಶೀಲತೆಯವರೆಗೆ ಭಾರತೀಯ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಅಧ್ಯಕ್ಷತೆಯು ಲಿಂಗ ಡಿಜಿಟಲ್ ವಿಭಜನೆಯನ್ನು ಕಡಿಮೆ ಮಾಡಲು, ಕಾರ್ಮಿಕ ಬಲದ ಭಾಗವಹಿಸುವಿಕೆಯ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ  ಮತ್ತು ನಾಯಕತ್ವ ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ ಮಹಿಳೆಯರಿಗೆ ದೊಡ್ಡ ಪಾತ್ರವನ್ನು ಸಕ್ರಿಯಗೊಳಿಸುತ್ತದೆ.

ಭಾರತಕ್ಕೆ, ಜಿ-20 ಅಧ್ಯಕ್ಷತೆಯು ಕೇವಲ ಉನ್ನತ ಮಟ್ಟದ ರಾಜತಾಂತ್ರಿಕ ಪ್ರಯತ್ನವಲ್ಲ. ಪ್ರಜಾಪ್ರಭುತ್ವದ ತಾಯಿಯಾಗಿ ಮತ್ತು ವೈವಿಧ್ಯತೆಗೆ ಮಾದರಿಯಾಗಿ, ನಾವು ಈ ಅನುಭವದ ಬಾಗಿಲುಗಳನ್ನು ಜಗತ್ತಿಗೆ ತೆರೆದಿದ್ದೇವೆ.

ಇಂದು, ಪ್ರಮಾಣದಲ್ಲಿ ಕೆಲಸಗಳನ್ನು ಸಾಧಿಸುವುದು ಭಾರತದ ಒಂದು ಗುಣಲಕ್ಷಣವಾಗಿದೆ. ಜಿ-20 ಅಧ್ಯಕ್ಷತೆಯು ಇದಕ್ಕೆ ಹೊರತಾಗಿಲ್ಲ. ಅದೊಂದು ಜನ ಪ್ರೇರಿತ ಆಂದೋಲನವಾಗಿ ಮಾರ್ಪಟ್ಟಿದೆ. ನಮ್ಮ ರಾಷ್ಟ್ರದ ಉದ್ದಗಲಕ್ಕೆ 60 ನಗರಗಳಲ್ಲಿ 200 ಕ್ಕೂ ಹೆಚ್ಚು ಸಭೆಗಳನ್ನು ಆಯೋಜಿಸಲಾಗಿದೆ, ನಮ್ಮ ಅವಧಿಯ ಅಂತ್ಯದ ವೇಳೆಗೆ 125 ದೇಶಗಳ ಸುಮಾರು 100,000 ಪ್ರತಿನಿಧಿಗಳಿಗೆ ಆತಿಥ್ಯ ನೀಡಲಾಗುವುದು. ಯಾವುದೇ ಅಧ್ಯಕ್ಷತೆಯಲ್ಲೂ ಇಷ್ಟೊಂದು ವಿಶಾಲವಾದ ಮತ್ತು ವೈವಿಧ್ಯಮಯ ಭೌಗೋಳಿಕ ವಿಸ್ತಾರದಲ್ಲಿ ಆಯೋಜನೆಯಾಗಿರಲಿಲ್ಲ.

ಭಾರತದ ಜನಸಂಖ್ಯೆ, ಪ್ರಜಾಪ್ರಭುತ್ವ, ವೈವಿಧ್ಯತೆ ಮತ್ತು ಅಭಿವೃದ್ಧಿಯ ಬಗ್ಗೆ ಬೇರೆಯವರಿಂದ ಕೇಳುವುದು ಬೇರೆಯ ವಿಷಯ, ಆದರೆ ಅವುಗಳನ್ನು ನೇರವಾಗಿ ಅನುಭವಿಸುವುದು ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ. ನಮ್ಮ ಜಿ-20 ಪ್ರತಿನಿಧಿಗಳು ಇದನ್ನು ಒಪ್ಪುತ್ತಾರೆ ಎಂದು ನನಗೆ ಖಾತ್ರಿಯಿದೆ.

ನಮ್ಮ ಜಿ-20 ಅಧ್ಯಕ್ಷತೆಯು ವಿಭಜನೆಗಳನ್ನು ಬೆಸೆಯಲು, ಅಡೆತಡೆಗಳನ್ನು ಕೆಡವಲು ಮತ್ತು ಸಹಯೋಗದ ಬೀಜಗಳನ್ನು ಬಿತ್ತಲು ಶ್ರಮಿಸುತ್ತದೆ, ಇಲ್ಲಿ ಅಪಸ್ವರದ ವಿರುದ್ಧ ಏಕತೆ ಮೇಲುಗೈ ಸಾಧಿಸುತ್ತದೆ, ಇಲ್ಲಿ ಹಂಚಿಕೆಯ ಅದೃಷ್ಟವು ಪ್ರತ್ಯೇಕತೆಯನ್ನು ನಿವಾರಿಸುತ್ತದೆ. ಜಿ-20 ಅಧ್ಯಕ್ಷರಾಗಿ, ನಾವು ಜಾಗತಿಕ ಕೋಷ್ಟಕವನ್ನು ವಿಸ್ತರಿಸಲು, ಪ್ರತಿ ಧ್ವನಿಯನ್ನು ಕೇಳಲಾಗುತ್ತದೆ ಮತ್ತು ಪ್ರತಿ ದೇಶವು ಕೊಡುಗೆ ನೀಡುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಪ್ರತಿಜ್ಞೆ ಮಾಡಿದ್ದೆವು. ಕ್ರಮಗಳು ಮತ್ತು ಫಲಿತಾಂಶಗಳೊಂದಿಗೆ ನಾವು ನಮ್ಮ ಪ್ರತಿಜ್ಞೆಯನ್ನು ಈಡೇರಿಸಿದ್ದೇವೆ ಎಂಬ ಭರವಸೆ ನನಗಿದೆ.

****



(Release ID: 1955357) Visitor Counter : 146