ರಾಷ್ಟ್ರಪತಿಗಳ ಕಾರ್ಯಾಲಯ

ಮದ್ರಾಸ್ ವಿಶ್ವವಿದ್ಯಾಲಯದ 165ನೇ ಘಟಿಕೋತ್ಸವದಲ್ಲಿ ರಾಷ್ಟ್ರಪತಿ


ಒಂದು ಸಮಾಜವಾಗಿ ನಾವು ನಮ್ಮ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುವ ವಾತಾವರಣವನ್ನು ಸೃಷ್ಟಿಸಬೇಕಾಗಿದೆ: ರಾಷ್ಟ್ರಪತಿ, ದ್ರೌಪದಿ ಮುರ್ಮು

Posted On: 06 AUG 2023 12:51PM by PIB Bengaluru

ಭಾರತದ ರಾಷ್ಟ್ರಪತಿ, ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (2023 ಆಗಸ್ಟ್ 6) ಚೆನ್ನೈನಲ್ಲಿ ನಡೆದ ಮದ್ರಾಸ್ ವಿಶ್ವವಿದ್ಯಾಲಯದ 165 ನೇ ಘಟಿಕೋತ್ಸವದಲ್ಲಿ ಆಶೀರ್ವಚನ ನೀಡಿದರು ಮತ್ತು ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, 1857ರಲ್ಲಿ ಸ್ಥಾಪನೆಯಾದ ಮದ್ರಾಸ್ ವಿಶ್ವವಿದ್ಯಾಲಯವು ಭಾರತದ ಅತ್ಯಂತ ಪುರಾತನ ಆಧುನಿಕ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ಈ ವಿಶ್ವವಿದ್ಯಾಲಯವು ಜ್ಞಾನದ ಪ್ರಸಾರದಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ತನ್ನ 165 ವರ್ಷಗಳ ಪ್ರಯಾಣದುದ್ದಕ್ಕೂ, ಮದ್ರಾಸ್ ವಿಶ್ವವಿದ್ಯಾಲಯವು ಶೈಕ್ಷಣಿಕ ಉನ್ನತ ಮಾನದಂಡಗಳಿಗೆ ಬದ್ಧವಾಗಿದೆ. ಬೌದ್ಧಿಕ ಕುತೂಹಲ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸುವ ವಾತಾವರಣವನ್ನು ಒದಗಿಸುತ್ತದೆ. ಇದು ಅಸಂಖ್ಯಾತ ವಿದ್ವಾಂಸರು, ನಾಯಕರು ಮತ್ತು ದಾರ್ಶನಿಕರನ್ನು ಉತ್ಪಾದಿಸುವ ಕಲಿಕೆಯ ತೊಟ್ಟಿಲು. ಇದು ದೀಪಸ್ತಂಭವಾಗಿಯೂ ಕಾರ್ಯನಿರ್ವಹಿಸಿದೆ, ಭಾರತದ ದಕ್ಷಿಣ ಪ್ರದೇಶದಲ್ಲಿ ಅನೇಕ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಸ್ಥಾಪನೆ ಮತ್ತು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಮದ್ರಾಸ್ ವಿಶ್ವವಿದ್ಯಾಲಯದ ಶ್ರೀಮಂತ ಇತಿಹಾಸ ಮತ್ತು ಭವ್ಯ ಪರಂಪರೆಯನ್ನು ಉಲ್ಲೇಖಿಸಿದ ರಾಷ್ಟ್ರಪತಿ ಅವರು, ಈ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಜಾಗತಿಕ ಉತ್ಕೃಷ್ಟತೆಯ ಕೇಂದ್ರವಾಗಿ ಅದರ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸಬಹುದು ಎಂದರು. ಅವರು ಯುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬಹುದು. ಸಂಸ್ಥೆಯ ಸುಧಾರಣೆಗಾಗಿ ಅವರ ಸಹಕಾರವನ್ನು ಪಡೆಯಲು ವಿಶ್ವವಿದ್ಯಾಲಯವು ಹಳೆಯ ವಿದ್ಯಾರ್ಥಿಗಳನ್ನು ತಲುಪಬೇಕು ಎಂದು ಹೇಳಿದರು.

ಮದ್ರಾಸ್ ವಿಶ್ವವಿದ್ಯಾಲಯವು ಸಂಶೋಧನೆ ಮತ್ತು ಶೈಕ್ಷಣಿಕ ಕಠಿಣತೆಯ ಸಂಸ್ಕೃತಿಯನ್ನು ಉತ್ತೇಜಿಸಿದೆ ಎಂದು ರಾಷ್ಟ್ರಪತಿಗಳು ಉಲ್ಲೇಖಿಸಿದರು. ಮದ್ರಾಸ್ ವಿಶ್ವವಿದ್ಯಾಲಯವು ಅತ್ಯಾಧುನಿಕ ಸಂಶೋಧನೆಯಲ್ಲಿ ಹೆಚ್ಚಿನ ಹೂಡಿಕೆ ಮಾಡಬೇಕು, ಅಂತರ-ಶಿಸ್ತಿನ ಅಧ್ಯಯನಗಳನ್ನು ಪ್ರೋತ್ಸಾಹಿಸಬೇಕು ಮತ್ತು ಅಂತಾರಾಷ್ಟ್ರೀಯ ಸಹಯೋಗವನ್ನು ಉತ್ತೇಜಿಸಬೇಕು ಎಂದು ಅವರು ಒತ್ತಾಯಿಸಿದರು. ರಾಷ್ಟ್ರ ಮತ್ತು ಜಗತ್ತು ಎದುರಿಸುತ್ತಿರುವ ಸಮಸ್ಯೆಗಳಿಗೆ ಕಲಿಕೆ ಆಧಾರಿತ ಪರಿಹಾರಗಳನ್ನು ಕಂಡುಹಿಡಿಯುವಲ್ಲಿ ಮದ್ರಾಸ್ ವಿಶ್ವವಿದ್ಯಾಲಯವು ಮುಂಚೂಣಿಯಲ್ಲಿರಬೇಕು. ಇಂದಿನ ಅತ್ಯಂತ ಸ್ಪರ್ಧಾತ್ಮಕ ವಾತಾವರಣದಲ್ಲಿ, ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡುವ ಒತ್ತಡ, ಉತ್ತಮ ಸಂಸ್ಥೆಗಳಲ್ಲಿ ಪ್ರವೇಶ ಪಡೆಯದಿರುವ ಭಯ, ಪ್ರತಿಷ್ಠಿತ ಉದ್ಯೋಗವನ್ನು ಪಡೆಯದಿರುವ ಆತಂಕ ಮತ್ತು ಪೋಷಕರು ಮತ್ತು ಸಮಾಜದ ನಿರೀಕ್ಷೆಗಳ ಭಾರವು ನಮ್ಮ ಯುವಕರಲ್ಲಿ ತೀವ್ರ ಮಾನಸಿಕ ಒತ್ತಡವನ್ನು ಉಂಟುಮಾಡುತ್ತಿದೆ ಎಂದು ರಾಷ್ಟ್ರಪತಿ ಹೇಳಿದರು. ಈ ಸಮಸ್ಯೆಯನ್ನು ಪರಿಹರಿಸಲು ಮತ್ತು ನಮ್ಮ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುವ ವಾತಾವರಣವನ್ನು ರಚಿಸಲು ನಾವು ಸಮಾಜವಾಗಿ ಒಗ್ಗೂಡುವುದು ಬಹಳ ಮುಖ್ಯ. ಯಾವುದೇ ಆತಂಕವು ತಮ್ಮನ್ನು ಅತಿಯಾಗಿ ಕಾಡಲು ಬಿಡದಂದೆ‌ ಎಚ್ಚರವಹಿಸುವಂತೆ ಅವರು ವಿದ್ಯಾರ್ಥಿಗಳಿಗೆ  ಕಿವಿಮಾತು ಹೇಳಿದರು. ಅವರು ತಮ್ಮ ಸಾಮರ್ಥ್ಯಗಳಲ್ಲಿ ನಂಬಿಕೆ ಇಟ್ಟು ಮುಂದುವರಿಯುವಂತೆ ಸಲಹೆ ನೀಡಿದರು.

ಶಿಕ್ಷಣ ಸಂಸ್ಥೆಗಳು ದ್ವಿಮುಖ ಸಂವಹನವನ್ನು ಉತ್ತೇಜಿಸುವ ವಾತಾವರಣವನ್ನು ಸೃಷ್ಟಿಸಬೇಕು, ಯಾವುದೇ ಫಲಿತಾಂಶಕ್ಕೆ ಅಂಜದೇ, ವಿದ್ಯಾರ್ಥಿಗಳು ಮುಕ್ತ ವಾತಾವರಣದಲ್ಲಿ ತಮ್ಮ ಭಯ, ಆತಂಕಗಳು ಮತ್ತು ಹೋರಾಟಗಳ ಕುರಿತು  ಆರಾಮದಾಯಕವಾಗಿ ಚರ್ಚಿಸುವಂತಿರಬೇಕು. ಸವಾಲುಗಳನ್ನು ಆತ್ಮವಿಶ್ವಾಸ ಮತ್ತು ಧೈರ್ಯದಿಂದ ಎದುರಿಸಲು ನಮ್ಮ ಯುವಕರನ್ನು ಪ್ರೀತಿಸುವ, ಮೌಲ್ಯಯುತ ಮತ್ತು ಸಶಕ್ತರನ್ನಾಗಿ ಮಾಡುವ ವಾತಾವರಣವನ್ನು ಸೃಷ್ಟಿಸಲು ನಾವು ಒಟ್ಟಾಗಿ ಕೆಲಸ ಮಾಡಬೇಕು ಎಂದು ರಾಷ್ಟ್ರಪತಿ ಹೇಳಿದರು.

ರಾಷ್ಟ್ರಪತಿ ಅವರ ಭಾಷಣವನ್ನು ನೋಡಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ -

****



(Release ID: 1946202) Visitor Counter : 96