ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
azadi ka amrit mahotsav

ಕಳೆದ 9 ವರ್ಷಗಳಲ್ಲಿ ಕಾರ್ಮಿಕ ನೀತಿ ಸುಧಾರಣೆಗಳು ಕನಿಷ್ಠ ವೇತನ, ಉದ್ಯೋಗ ಭದ್ರತೆ, ಸಾಮಾಜಿಕ ಭದ್ರತೆ ಮತ್ತು ಆರೋಗ್ಯ ಭದ್ರತೆಯನ್ನು ಒದಗಿಸುವ ಮೂಲಕ ಕಾರ್ಮಿಕರ ಸಬಲೀಕರಣವನ್ನು ಖಚಿತಪಡಿಸಿವೆ ಎಂದು ಶ್ರೀ ಭೂಪೇಂದರ್ ಯಾದವ್ ಅವರು ಹೇಳಿದ್ದಾರೆ.


29 ಕಾರ್ಮಿಕ ಕಾನೂನುಗಳನ್ನು 4 ಸರಳ ಕಾರ್ಮಿಕ ಸಂಹಿತೆಗಳಾಗಿ ಪರಿವರ್ತಿಸಲಾಗಿದೆ, 28.93 ಕೋಟಿ ಅಸಂಘಟಿತ ಕಾರ್ಮಿಕರು 400 ಕ್ಕೂ ಹೆಚ್ಚು ಉದ್ಯೋಗಗಳಲ್ಲಿ ಇ-ಶ್ರಮ್ ಪೋರ್ಟಲಿನಲ್ಲಿ ನೋಂದಾಯಿಸಿಕೊಂಡಿದ್ದಾರೆ, ರಾಷ್ಟ್ರೀಯ ವೃತ್ತಿ ಸೇವೆ (ಎನ್. ಸಿ.ಎಸ್) ಪ್ರಾರಂಭವಾದಾಗಿನಿಂದ 1.39 ಕೋಟಿಗೂ ಹೆಚ್ಚು ಹುದ್ದೆಗಳನ್ನು ಸಜ್ಜುಗೊಳಿಸಲಾಗಿದೆ: ಶ್ರೀ ಯಾದವ್

Posted On: 22 JUN 2023 5:40PM by PIB Bengaluru

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕಳೆದ 9 ವರ್ಷಗಳಲ್ಲಿ ಭಾರತವು ಅಸಂಘಟಿತ ಮತ್ತು ಸಂಘಟಿತ ವಲಯಗಳ ಕಾರ್ಮಿಕರಿಗಾಗಿ ಬಹಳಷ್ಟು ಕೆಲಸಗಳನ್ನು  ಮಾಡಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಶ್ರೀ ಭೂಪೇಂದರ್ ಯಾದವ್ ಅವರು,ಹೇಳಿದ್ದಾರೆ.

ಹೊಸದಿಲ್ಲಿಯಲ್ಲಿ ಇಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ 9 ವರ್ಷಗಳ ಸಾಧನೆಗಳ ಕುರಿತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶವು ಈಗ ಕಾರ್ಮಿಕ ಕಾನೂನುಗಳನ್ನು ಬದಲಾಯಿಸುತ್ತಿದೆ, ಸುಧಾರಿಸುತ್ತಿದೆ, ಸರಳಗೊಳಿಸುತ್ತಿದೆ ಎಂದು ಹೇಳಿದರು. ಇದನ್ನು ಗಮನದಲ್ಲಿಟ್ಟುಕೊಂಡು 29 ಕಾರ್ಮಿಕ ಕಾನೂನುಗಳನ್ನು 4 ಸರಳ ಕಾರ್ಮಿಕ ಸಂಹಿತೆಗಳಾಗಿ ಪರಿವರ್ತಿಸಲಾಗಿದೆ ಇದು ಕನಿಷ್ಠ ವೇತನ, ಉದ್ಯೋಗ ಭದ್ರತೆ, ಸಾಮಾಜಿಕ ಭದ್ರತೆ ಮತ್ತು ಆರೋಗ್ಯ ಭದ್ರತೆಯ ಮೂಲಕ ಕಾರ್ಮಿಕರ ಸಬಲೀಕರಣವನ್ನು ಖಚಿತಪಡಿಸುತ್ತದೆ ಎಂದೂ ಶ್ರೀ ಯಾದವ್  ಅವರು ಹೇಳಿದರು.

ಇ-ಶ್ರಮ್ ಪೋರ್ಟಲ್, ರಾಷ್ಟ್ರೀಯ ವೃತ್ತಿ ಸೇವೆ (ಎನ್.ಸಿ.ಎಸ್.), ಆತ್ಮನಿರ್ಭರ ಭಾರತ್ ರೋಜ್ಗಾರ್ ಯೋಜನೆ (ಎ.ಬಿ.ಆರ್.ವೈ.), ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನಧನ್ ಯೋಜನೆ (ಪಿಎಂ-ಎಸ್.ವೈ.ಎಂ) ಮತ್ತು ಕಾರ್ಮಿಕರ ಕಲ್ಯಾಣಕ್ಕಾಗಿರುವ ವಿವಿಧ ಪ್ರಮುಖ ಯೋಜನೆಗಳು ಕಾರ್ಮಿಕರಿಗೆ ಹೇಗೆ ಪ್ರಯೋಜನಕಾರಿಯಾಗಿವೆ ಎಂಬುದನ್ನು ಶ್ರೀ ಯಾದವ್ ಪ್ರಮುಖವಾಗಿ ವಿವರಿಸಿದರು. .

ಅಸಂಘಟಿತ ಕಾರ್ಮಿಕರಿಗೆ ರಾಷ್ಟ್ರೀಯ ದತ್ತಾಂಶ ನೆಲೆಯನ್ನು ರಚಿಸುವ ಪ್ರಮುಖ ಉಪಕ್ರಮಗಳಲ್ಲಿ ಇ-ಶ್ರಮ್ ಪೋರ್ಟಲ್ ಒಂದಾಗಿದೆ ಎಂದು ಶ್ರೀ ಯಾದವ್ ಹೇಳಿದರು. ಒಟ್ಟು 28.93 ಕೋಟಿ ಅಸಂಘಟಿತ ಕಾರ್ಮಿಕರು 400 ಕ್ಕೂ ಹೆಚ್ಚು ಉದ್ಯೋಗಗಳಲ್ಲಿ ಪೋರ್ಟಲಿನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಇನ್ನಷ್ಟು ಹೆಚ್ಚಿನ ಉದ್ಯೋಗಗಳನ್ನು ಇದರಲ್ಲಿ  ಸೇರಿಸಲಾಗುವುದು.  ಇ-ಶ್ರಮ್ ಪೋರ್ಟಲ್ ಅನ್ನು ಎನ್.ಸಿ.ಎಸ್. ಮತ್ತು ಸ್ಕಿಲ್ ಇಂಡಿಯಾ ಪೋರ್ಟಲ್ (ಎಸ್ಐಪಿ) ಪೋರ್ಟಲ್ ನೊಂದಿಗೆ ಸಂಯೋಜಿಸಲಾಗಿದೆ ಎಂದೂ ಅವರು ಹೇಳಿದರು.

ಡಿಜಿಟಲ್ ವೇದಿಕೆಗಳಲ್ಲಿ (ಪ್ಲಾಟ್ ಫಾರಂ)  ವಿವಿಧ ಉದ್ಯೋಗ ಸಂಬಂಧಿತ ಸೇವೆಗಳನ್ನು ಒದಗಿಸಲು 2015 ರಲ್ಲಿ ರಾಷ್ಟ್ರೀಯ ವೃತ್ತಿ ಸೇವೆಯನ್ನು (ಎನ್.ಸಿ.ಎಸ್.) ಪ್ರಾರಂಭಿಸಲಾಗಿದೆ ಎಂಬುದನ್ನು  ಕೇಂದ್ರ ಸಚಿವರು ಉಲ್ಲೇಖಿಸಿದರು. 31.05.2023 ರ ಹೊತ್ತಿಗೆ, ಎನ್.ಸಿ.ಎಸ್. ವೇದಿಕೆ 3.20 ಕೋಟಿ ನೋಂದಾಯಿತ ಉದ್ಯೋಗಾಕಾಂಕ್ಷಿಗಳು, 11.25 ಲಕ್ಷ ಸಕ್ರಿಯ ಉದ್ಯೋಗದಾತರು ಮತ್ತು 6.42 ಲಕ್ಷ ಸಕ್ರಿಯ ಖಾಲಿ ಹುದ್ದೆಗಳನ್ನು ಹೊಂದಿದೆ. ಇದು ಪ್ರಾರಂಭವಾದಾಗಿನಿಂದ ಒಟ್ಟುಗೂಡಿಸಿದ ಖಾಲಿ ಹುದ್ದೆಗಳು 1.39 ಕೋಟಿಗೂ ಹೆಚ್ಚು ಎಂದು ಅವರು ಹೇಳಿದರು. ಇದನ್ನು ಇ-ಶ್ರಮ್, ಉದ್ಯಮ್ ಮತ್ತು ಸ್ಕಿಲ್ ಇಂಡಿಯಾ ಪೋರ್ಟಲ್ (ಎಸ್ಐಪಿ) ಯೊಂದಿಗೆ ಸಂಯೋಜಿಸಲಾಗಿದೆ ಎಂದೂ ಅವರು ಹೇಳಿದರು.

ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸಲು ಮತ್ತು ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ರೋಗದ ಸಾಮಾಜಿಕ-ಆರ್ಥಿಕ ಪರಿಣಾಮವನ್ನು ಕಡಿಮೆ ಮಾಡಲು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಸಂಯೋಜಿತ ಆತ್ಮನಿರ್ಭರ ಭಾರತ್ ರೋಜ್ಗಾರ್ ಯೋಜನೆ (ಎ.ಬಿ.ಆರ್.ವೈ.)ಯನ್ನು 30.12.2020 ರಂದು ಹಣಕಾಸು ವರ್ಷ   2020-2024 ರ ಅವಧಿಗೆ 22,810 ಕೋಟಿ ರೂ.ಗಳ ವೆಚ್ಚದಲ್ಲಿ ಪ್ರಾರಂಭಿಸಲಾಗಿದೆ ಎಂದು ಶ್ರೀ ಯಾದವ್ ಹೇಳಿದರು.

30.05.2023 ರವರೆಗೆ 1,52,278 ಸಂಸ್ಥೆಗಳು 60.40 ಲಕ್ಷ ಫಲಾನುಭವಿಗಳಿಗೆ ಸಂಬಂಧಿಸಿದಂತೆ 9382.16 ಕೋಟಿ ರೂ.ಗಳ ಪ್ರಯೋಜನಗಳಿಗೆ ಹಣಕಾಸು ಹಕ್ಕು (ಕ್ಲೇಮ್ ) ಮಂಡಿಸಿವೆ ಎಂದು ಅವರು ಹೇಳಿದರು.

ಅಸಂಘಟಿತ ವಲಯದ ಕಾರ್ಮಿಕರಿಗೆ 60 ವರ್ಷದ ನಂತರ ಕನಿಷ್ಠ ಮಾಸಿಕ 3000 ರೂ.ಗಳ ಪಿಂಚಣಿ ನೀಡುವ ಭರವಸೆಯ ಮೂಲಕ 2019 ರ ಫೆಬ್ರವರಿ 15 ರಂದು ಪ್ರಾರಂಭಿಸಲಾದ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನಧನ ಯೋಜನೆ (ಪಿಎಂ-ಎಸ್.ವೈ.ಎಂ.) ಅಡಿಯಲ್ಲಿ 31.05.2023 ರವರೆಗೆ ಸುಮಾರು 44.33 ಲಕ್ಷ ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ ಎಂದೂ ಶ್ರೀ ಯಾದವ್ ಹೇಳಿದರು.

ಕಾರ್ಮಿಕ ಕಾನೂನುಗಳಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ತರುವ ಮೂಲಕ ಪರಿಣಾಮಕಾರಿ, ದಕ್ಷ ಮತ್ತು ನೈಜ ಸಮಯದ ಆಡಳಿತವನ್ನು ಉತ್ತೇಜಿಸಲು, ನಿಯಮಗಳ ಅನುಸರಣೆಯನ್ನು ಸರಾಗಗೊಳಿಸುವ ಮೂಲಕ ಮತ್ತು ವಹಿವಾಟು ವೆಚ್ಚವನ್ನು ಕಡಿಮೆ ಮಾಡಲು ಶ್ರಮ ಸುವಿಧಾ ಪೋರ್ಟಲ್ (ಎಸ್.ಎಸ್.ಪಿ) 2014 ರ ಅಕ್ಟೋಬರ್ 16 ರಂದು ಪ್ರಾರಂಭಿಸಲಾಯಿತು ಎಂದು ಕೇಂದ್ರ ಸಚಿವರು ಹೇಳಿದರು. ಡಿಪಿಐಐಟಿಯ ಏಕೀಕೃತ ರಾಷ್ಟ್ರೀಯ ಏಕಗವಾಕ್ಷಿ ವ್ಯವಸ್ಥೆ ಪೋರ್ಟಲ್ (ಎನ್.ಎಸ್.ಡಬ್ಲ್ಯು.ಎಸ್.) ಹೂಡಿಕೆದಾರರಿಗೆ  ಎನ್.ಎಸ್.ಡಬ್ಲ್ಯು.ಎಸ್. ನಲ್ಲಿ  ಒಂದೇ ಸೈನ್-ಆನ್ ಮೂಲಕ ಕಾರ್ಮಿಕ ಕಾನೂನುಗಳ ಅಡಿಯಲ್ಲಿ ಪರವಾನಗಿಗಳು ಮತ್ತು ನೋಂದಣಿಗಳಿಗೆ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ವಿವರಿಸಿದರು.

ಕಳೆದ 9 ವರ್ಷಗಳಲ್ಲಿ ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ ಅಪರಾಧೀಕರಣರಾಹಿತ್ಯ, ಹೆರಿಗೆ ಸೌಲಭ್ಯ, ಎಸ್ಸಿ / ಎಸ್ಟಿ ಉದ್ಯೋಗಾಕಾಂಕ್ಷಿಗಳ ಕಲ್ಯಾಣ ಮತ್ತು ಬೀಡಿ / ಸಿನಿ / ಕಲ್ಲಿದ್ದಲುಯೇತರ ಗಣಿ ಕಾರ್ಮಿಕರಿಗೆ ಕಾರ್ಮಿಕ ಕಲ್ಯಾಣ ಯೋಜನೆಯಂತಹ ವಿವಿಧ ನೀತಿ ಸುಧಾರಣೆಗಳನ್ನು ಜಾರಿಗೆ ತಂದಿರುವುದನ್ನು ಶ್ರೀ ಯಾದವ್ ಎತ್ತಿ ತೋರಿಸಿದರು. ಅಧಿಸೂಚಿತ ವೇತನಸಹಿತ ಹೆರಿಗೆ ರಜೆಯನ್ನು ಬದುಕಿರುವ  ಇಬ್ಬರು ಮಕ್ಕಳಿಗೆ ಸಂಬಂಧಿಸಿ 12 ವಾರಗಳಿಂದ 26 ವಾರಗಳಿಗೆ ಮತ್ತು ಎರಡಕ್ಕಿಂತ ಹೆಚ್ಚು ಮಕ್ಕಳಿದ್ದಲ್ಲಿ 12 ವಾರಗಳಿಗೆ ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು. ದತ್ತು ಪಡೆಯುವ ತಾಯಂದಿರಿಗೆ ಇದೇ ಮೊದಲ ಬಾರಿಗೆ 12 ವಾರಗಳ ವೇತನಸಹಿತ ಹೆರಿಗೆ ರಜೆ ನೀಡಲಾಗುವುದು ಎಂದು ಅವರು ಹೇಳಿದರು.

ಕೇಂದ್ರ ಸಚಿವರು ಕಳೆದ ಒಂಬತ್ತು ವರ್ಷಗಳಲ್ಲಿ ಇಎಸ್ಐಸಿಯ ಪ್ರಮುಖ ಬೆಳವಣಿಗೆಗಳನ್ನು ಎತ್ತಿ ತೋರಿಸಿದರು.  ಇಎಸ್ ಐ ಯೋಜನೆಯಡಿ ಬರುವ ಜಿಲ್ಲೆಗಳ ಸಂಖ್ಯೆ 2014 ರಲ್ಲಿ 393  ಇದ್ದು ಅದು ಪ್ರಸ್ತುತ  611 ಕ್ಕೆ ಏರಿದೆ. 2014 ರಲ್ಲಿ 2.03 ಕೋಟಿ ಐಪಿಗಳು ಮತ್ತು 7.89 ಕೋಟಿ ಫಲಾನುಭವಿಗಳಿಗೆ ಹೋಲಿಸಿದರೆ ಪ್ರಸ್ತುತ ವಿಮೆ ಪಡೆದವರು  ಮತ್ತು ಫಲಾನುಭವಿಗಳ ಸಂಖ್ಯೆ  ಅನುಕ್ರಮವಾಗಿ 3.10 ಕೋಟಿ ಹಾಗು 12.03 ಕೋಟಿ ಆಗಿದೆ. ಆಸ್ಪತ್ರೆಗಳ ಸಂಖ್ಯೆ 2014 ರಲ್ಲಿ 151 ಇದ್ದದ್ದು, ಈಗ 161 ಕ್ಕೆ ಏರಿದೆ, ಅದೇ ರೀತಿ, ಡಿಸ್ಪೆನ್ಸರಿಗಳು ಸಹ 1418 ರಿಂದ 1502 ಕ್ಕೆ ಏರಿವೆ. ವೈದ್ಯಕೀಯ ಕಾಲೇಜುಗಳು 2014. ರಲ್ಲಿ 4 ಇದ್ದವು. ಅದಕ್ಕೆ ಹೋಲಿಸಿದಾಗ  ಈಗ 8  ಇವೆ. ಎಂಬಿಬಿಎಸ್ ಸೀಟುಗಳ ಸಂಖ್ಯೆ 2014 ರಲ್ಲಿ 400 ಇತ್ತು ಅದೀಗ  950 ಕ್ಕೆ ಏರಿದೆ. ಎಂಡಿ/ ಎಂಎಸ್ ಸೀಟುಗಳ ಸಂಖ್ಯೆ 2014 ರಲ್ಲಿ 60 ಇತ್ತು, ಅದೀಗ 275 ಕ್ಕೆ ಏರಿದೆ. ಡಿ.ಎನ್. ಬಿ ಬ್ರಾಡ್ ಸ್ಪೆಷಾಲಿಟಿ ಸೀಟುಗಳು ಈಗ 81ಇವೆ, ಆದರೆ 2014ರಲ್ಲಿ ಒಂದೇ ಒಂದು ಸೀಟು ಕೂಡಾ ಇರಲಿಲ್ಲ. 2019 ರಲ್ಲಿ ಯಾವುದೇ ದೇಣಿಗೆ  ದರವನ್ನು 6.5% ರಿಂದ 4% ಕ್ಕೆ ಇಳಿಸಲಾಗಿದೆ. ಇಎಸ್ಐಸಿಯ ಭವಿಷ್ಯದ ವಿಸ್ತರಣೆಯಲ್ಲಿ ಹೆಚ್ಚುವರಿ 10120 ಹಾಸಿಗೆಗಳೊಂದಿಗೆ  89 ಹೊಸ ಆಸ್ಪತ್ರೆಗಳು ಮತ್ತು 202 ಹೊಸ ಡಿಸ್ಪೆನ್ಸರಿಗಳು  ಸೇರಲಿವೆ. ಇಪಿಎಫ್ಒದಲ್ಲಿನ ಪ್ರಮುಖ ಬೆಳವಣಿಗೆಗಳನ್ನು ಎತ್ತಿ ತೋರಿಸಿದ ಶ್ರೀ ಯಾದವ್, ಇಪಿಎಫ್ಒ ಸದಸ್ಯತ್ವವು 2014-15ರಲ್ಲಿ ಇದ್ದ 15.84 ಕೋಟಿಯಿಂದ 2021-22ರಲ್ಲಿ 27.73 ಕೋಟಿಗೆ ಏರಿದೆ ಎಂದರು. ಕ್ಲೈಮ್ ಇತ್ಯರ್ಥ 2014-15ರಲ್ಲಿ 130.21 ಲಕ್ಷ ರೂ.ಗಳಷ್ಟಿತ್ತು. ಅದೀಗ 390.97 ಲಕ್ಷ ರೂ.ಗೆ ಏರಿದೆ. 2014-15ರಲ್ಲಿ 8.61 ಲಕ್ಷ ಇದ್ದ ಸಂಸ್ಥೆಗಳ ವ್ಯಾಪ್ತಿಯನ್ನು 2021-22ರಲ್ಲಿ 18.65 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಪಿಂಚಣಿದಾರರ ಸಂಖ್ಯೆ 2014-15ರಲ್ಲಿ 51.04 ಲಕ್ಷ ಇದ್ದರೆ, 2021-22ರಲ್ಲಿ 72.73 ಲಕ್ಷ ಆಗಿತ್ತು.  ಇಪಿಎಫ್ಒದಲ್ಲಿನ ಪ್ರಮುಖ ಸುಧಾರಣೆಗಳೆಂದರೆ 2014 ರಲ್ಲಿ ಪ್ರಾರಂಭಿಸಲಾದ ಯುನಿವರ್ಸಲ್ ಅಕೌಂಟ್ ನಂಬರ್ (ಯುಎಎನ್), ಇದರಲ್ಲಿ ಪ್ರತಿ ಪಿಎಫ್ ಸದಸ್ಯರಿಗೆ ಯುಎಎನ್ ನೀಡಲಾಗುತ್ತದೆ, ಇದು ಅವರ ಬಹು ಪಿಎಫ್ ಖಾತೆ ಸಂಖ್ಯೆಗಳಿಗೆ ಒಂದು ವಿಸ್ತಾರ ವ್ಯಾಪ್ತಿಯ ಕೊಡೆಯಂತಹ  ಖಾತೆಯಾಗಿ ಕಾರ್ಯನಿರ್ವಹಿಸುತ್ತದೆ, ಎಲ್ಲಾ ಸೇವೆಗಳನ್ನು ಒಂದೇ ಸಂಖ್ಯೆಯ ಮೂಲಕ ವಿಸ್ತರಿಸುತ್ತದೆ; ಇಪಿಎಫ್ ಚಂದಾದಾರರಿಗೆ ಇ-ಪಾಸ್ ಬುಕ್  ಸೌಲಭ್ಯವನ್ನು ಒದಗಿಸಲಾಗಿದ್ದು, ಇದರ ಮೂಲಕ ಪಿಎಫ್ ಖಾತೆಯಲ್ಲಿನ ನಗದನ್ನು ಆನ್ ಲೈನ್ ಮೂಲಕ  ಪರಿಶೀಲಿಸಬಹುದು; ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಉದ್ಯೋಗದಾತರಿಗೆ ಸಮಯ, ಶ್ರಮ ಮತ್ತು ಹಣವನ್ನು ಉಳಿಸಲು ಕಾರಣವಾಗಿರುವ ಕೊಡುಗೆಗಳ ಇ-ಸಂಗ್ರಹ ವ್ಯವಸ್ಥೆ; ಪಿಂಚಣಿದಾರರಿಗೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ವ್ಯವಸ್ಥೆ ಅಳವಡಿಕೆಗಳ ಬಗ್ಗೆ ಪ್ರಮುಖವಾಗಿ ಉಲ್ಲೇಖಿಸಿದ ಶ್ರೀ ಯಾದವ್ ಅವರು ಡಿಜಿಟಲ್ ಲೈಫ್ ಪ್ರಮಾಣಪತ್ರ ವ್ಯವಸ್ಥೆಯಿಂದಾಗಿ ಪಿಂಚಣಿದಾರರು ಜೀವಿತ ಪ್ರಮಾಣಪತ್ರವನ್ನು ಸಲ್ಲಿಸಲು ಬ್ಯಾಂಕುಗಳು ಅಥವಾ ಪಿಎಫ್ ಕಚೇರಿಗಳಲ್ಲಿ ಭೌತಿಕವಾಗಿ ಹಾಜರಿರಬೇಕಾದ ಅಗತ್ಯವನ್ನು ನಿವಾರಿಸಿದೆ ಎಂದರು. ಪಿಎಫ್ ಚಂದಾದಾರರ ಕುಂದುಕೊರತೆಗಳನ್ನು ತ್ವರಿತವಾಗಿ ಪರಿಹರಿಸಲು ನವೀಕರಿಸಿದ ಆನ್ಲೈನ್ ಇ.ಪಿ.ಎಫ್. ಐ.ಜಿ.ಎಂ.ಎಸ್. ಪೋರ್ಟಲ್ ಒದಗಿಸಲಾಗಿದೆ. ಇಪಿಎಫ್ಒ ಸೇವೆಗಳನ್ನು 2017 ರಲ್ಲಿ ಯುನಿಫೈಡ್ ಮೊಬೈಲ್ ಅಪ್ಲಿಕೇಶನ್ ಫಾರ್ ನ್ಯೂ-ಏಜ್ ಗವರ್ನೆನ್ಸ್ (ಉಮಾಂಗ್) ವೇದಿಕೆಯಲ್ಲಿ ಸೇರಿಸಲಾಗಿದೆ, ಇದರಲ್ಲಿ ಸದಸ್ಯರು ತಮ್ಮ ಇ-ಪಾಸ್ ಬುಕ್  ವೀಕ್ಷಿಸಬಹುದು ಮತ್ತು ಅವರ  ಹಣದ ಹಕ್ಕುಗಳ (ಕ್ಲೇಮ್ )  ಬಗ್ಗೆ ನಿಖರ ಮಾಹಿತಿ ಪಡೆಯಬಹುದು ಎಂದೂ  ಅವರು ಹೇಳಿದರು.

****


(Release ID: 1934708)