ರಾಷ್ಟ್ರಪತಿಗಳ ಕಾರ್ಯಾಲಯ

​​​​​​​ರಾಷ್ಟ್ರಪತಿಯವರನ್ನು  ಭೇಟಿ ಮಾಡಿದ ನೇಪಾಳದ ಪ್ರಧಾನಿ

Posted On: 01 JUN 2023 6:00PM by PIB Bengaluru

ನೇಪಾಳದ ಪ್ರಧಾನ ಮಂತ್ರಿ ಗೌರವಾನ್ವಿತ ಶ್ರೀ ಪುಷ್ಪ ಕಮಲ್ ದಹಲ್ 'ಪ್ರಚಂಡ' ಅವರು ಇಂದು (ಜೂನ್ 1, 2023) ರಾಷ್ಟ್ರಪತಿ ಭವನದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು.

ಪ್ರಧಾನಮಂತ್ರಿ  ಪ್ರಚಂಡ ಅವರನ್ನು ರಾಷ್ಟ್ರಪತಿ ಅವರು ಸ್ವಾಗತಿಸಿದರು ಮತ್ತು ನೇಪಾಳದ ಪ್ರಧಾನಮಂತ್ರಿಯಾಗಿ ನೇಮಕಗೊಂಡಿದ್ದಕ್ಕಾಗಿ ಅವರನ್ನು ಅಭಿನಂದಿಸಿದರು.  ಭಾರತದೊಂದಿಗಿನ ಅವರ ಹಳೆಯ ಒಡನಾಟ ಮತ್ತು ಅವರ ಅನುಭವದ ದೃಷ್ಟಿಯಿಂದ, ಹಳೆಯ ಸಹಭಾಗಿತ್ವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಭಾರತ-ನೇಪಾಳ ದ್ವಿಪಕ್ಷೀಯ ಸಂಬಂಧಗಳಲ್ಲಿ ಸಕಾರಾತ್ಮಕ ಕಾರ್ಯಸೂಚಿಯನ್ನು ಭಾರತ ಎದುರು ನೋಡುತ್ತಿದೆ ಎಂದು ಅವರು ಹೇಳಿದರು. ಈ ಭೇಟಿಯು ಉಭಯ ದೇಶಗಳ ನಡುವಿನ ನಿಕಟವಾದ  ಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಇತ್ತೀಚಿನ ವರ್ಷಗಳಲ್ಲಿ ಭಾರತ-ನೇಪಾಳ ದ್ವಿಪಕ್ಷೀಯ ಸಹಕಾರದಲ್ಲಿ ಬಲವರ್ಧನೆ ಆಗಿದೆ ಎಂಬುದನ್ನು ರಾಷ್ಟ್ರಪತಿ ಅವರು  ಗಮನಿಸಿದರು. ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ರೋಗದ ಸಂಕಷ್ಟದ ಸಮಯದಲ್ಲೂ ಉಭಯ ದೇಶಗಳ ನಡುವಿನ ವ್ಯಾಪಾರವನ್ನು ಕಾಪಾಡಿಕೊಳ್ಳಲಾಯಿತು.

ಭಾರತ ಮತ್ತು ನೇಪಾಳದ ನಡುವಿನ ಮುಕ್ತ ಗಡಿಯು ಎರಡೂ ಕಡೆಯಿಂದ ಪ್ರವಾಸೋದ್ಯಮವನ್ನು ಉತ್ತೇಜಿಸಿದೆ ಎಂದು ರಾಷ್ಟ್ರಪತಿ ಹೇಳಿದರು. ಜನತೆ ಮತ್ತು  ಜನತೆಯ ನಡುವಣ   ಸಂಪರ್ಕ ಹಾಗು ಪ್ರವಾಸೋದ್ಯಮವನ್ನು ಉತ್ತೇಜಿಸಲು ಆಧ್ಯಾತ್ಮಿಕ ಪ್ರವಾಸಿ ಸರ್ಕ್ಯೂಟ್ ಪುನರುಜ್ಜೀವನಗೊಳಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಸಹೋದರಿ ನಗರಗಳ (ಸಿಸ್ಟರ್ ಸಿಟಿ)  ಒಪ್ಪಂದಗಳು ಮತ್ತು ಆರ್ಥಿಕ ಸಂಪರ್ಕದಲ್ಲಿನ ಸುಧಾರಣೆಯು ನಮ್ಮ ಎರಡೂ ದೇಶಗಳ ನಡುವಿನ ಪ್ರವಾಸೋದ್ಯಮವನ್ನು ಹೆಚ್ಚಿಸುತ್ತದೆ ಎಂದೂ  ಅವರು ಹೇಳಿದರು.

ನೇಪಾಳವು ಭಾರತಕ್ಕೆ ಆದ್ಯತೆಯಾಗಿದೆ ಎಂದು ರಾಷ್ಟ್ರಪತಿ ಅವರು  ಹೇಳಿದರು. ಪ್ರಮುಖ ಯೋಜನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವುದು ಸೇರಿದಂತೆ ನಮ್ಮ ಅಭಿವೃದ್ಧಿ-ಪಾಲುದಾರಿಕೆಯನ್ನು ಮುಂದುವರಿಸುವುದನ್ನು ಭಾರತ ಎದುರು ನೋಡುತ್ತಿದೆ ಎಂದೂ  ಅವರು ನುಡಿದರು.



(Release ID: 1929293) Visitor Counter : 117