ಪ್ರಧಾನ ಮಂತ್ರಿಯವರ ಕಛೇರಿ

ದೇಶದಲ್ಲಿ ಎಫ್‌ ಎಂ ರೇಡಿಯೋ ಪ್ರಸಾರವನ್ನು ಹೆಚ್ಚಿಸಲು 91 ಹೊಸ 100 ವ್ಯಾಟ್ ಎಫ್‌.ಎಂ ಟ್ರಾನ್ಸ್‌ಮಿಟರ್‌ಗಳನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು


"91 ಎಫ್‌ಎಂ ಟ್ರಾನ್ಸ್‌ಮಿಟರ್‌ಗಳ ಉದ್ಘಾಟನೆಯು ಭಾರತದಲ್ಲಿ ರೇಡಿಯೋ ಉದ್ಯಮದಲ್ಲಿ ಕ್ರಾಂತಿಯನ್ನುಂಟು ಮಾಡುತ್ತದೆ"

"ರೇಡಿಯೋ ಮತ್ತು ʼಮನ್‌ ಕಿ ಬಾತ್‌ʼ ಧ್ವನಿಯ ಮೂಲಕ ನಾನು ದೇಶದ ಸಾಮರ್ಥ್ಯ ಮತ್ತು ದೇಶದ ಜನರಲ್ಲಿರುವ ಕರ್ತವ್ಯದ ಸಾಮೂಹಿಕ ಶಕ್ತಿಯೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಯಿತು"

"ಒಂದು ರೀತಿಯಲ್ಲಿ, ನಾನು ನಿಮ್ಮ ಆಲ್ ಇಂಡಿಯಾ ರೇಡಿಯೋ ತಂಡದ ಭಾಗವಾಗಿದ್ದೇನೆ"

"ದೂರ ಎಂದು ಭಾವಿಸಿದ ಜನರು ಈಗ ಹೆಚ್ಚಿನ ಮಟ್ಟದಲ್ಲಿ ಸಂಪರ್ಕ ಸಾಧಿಸಲು ಅವಕಾಶವನ್ನು ಪಡೆಯುತ್ತಾರೆ"

" ಎಲ್ಲರಿಗೂ ತಂತ್ರಜ್ಞಾನ ಲಭಿಸುವುದಕ್ಕಾಗಿ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ"

"ಡಿಜಿಟಲ್ ಇಂಡಿಯಾವು ರೇಡಿಯೊಗೆ ಹೊಸ ಕೇಳುಗರನ್ನು ಮಾತ್ರವಲ್ಲದೆ ಹೊಸ ಚಿಂತನೆಯ ಪ್ರಕ್ರಿಯೆಯನ್ನೂ ನೀಡಿದೆ"

“ಅದು ಡಿಟಿಎಚ್ ಅಥವಾ ಎಫ್‌ಎಂ ರೇಡಿಯೋ ಆಗಿರಲಿ, ಈ ಶಕ್ತಿಯು ನಮಗೆ ಭವಿಷ್ಯದ ಭಾರತವನ್ನು ಇಣುಕಿ ನೋಡುವ ಕಿಟಕಿಯನ್ನು ನೀಡುತ್ತದೆ. ಈ ಭವಿಷ್ಯಕ್ಕಾಗಿ ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳಬೇಕು”

"ನಮ್ಮ ಸರ್ಕಾರವು ಸಾಂಸ್ಕೃತಿಕ ಸಂಪರ್ಕ ಮತ್ತು ಬೌದ್ಧಿಕ ಸಂಪರ್ಕವನ್ನು ಬಲಪಡಿಸುತ್ತಿದೆ"

" ಸಂಪರ್ಕವು ಯಾವುದೇ ರೂಪದಲ್ಲಿರಲಿ ದೇಶ ಮತ್ತು ಅದರ 140 ಕೋಟಿ ನಾಗರಿಕರನ್ನು ಸಂಪರ್ಕಿಸುವ ಗುರಿಯನ್ನು ಹೊಂದಿರಬೇಕು"

Posted On: 28 APR 2023 11:37AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 91 ಹೊಸ 100 ವ್ಯಾಟ್ ರೇಡಿಯೋ ಟ್ರಾನ್ಸ್‌ಮಿಟರ್‌ಗಳನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು. ಈ ಉದ್ಘಾಟನೆಯು ದೇಶದ ರೇಡಿಯೋ ಸಂಪರ್ಕವನ್ನು ಮತ್ತಷ್ಟು ಉತ್ತೇಜನ ನೀಡಲಿದೆ.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ಕಾರ್ಯಕ್ರಮದಲ್ಲಿ ಹಲವಾರು ಪದ್ಮ ಪ್ರಶಸ್ತಿ ಪುರಸ್ಕೃತರ ಉಪಸ್ಥಿತಿಯನ್ನು ಗಮನಿಸಿ ಅವರನ್ನು ಸ್ವಾಗತಿಸಿದರು. ಅಖಿಲ ಭಾರತ ಎಫ್‌ಎಂ (ಆಲ್‌ ಇಂಡಿಯಾ ಎಫ್‌ ಎಂ) ಆಗುವ ದಿಕ್ಕಿನಲ್ಲಿ ಆಲ್ ಇಂಡಿಯಾ ರೇಡಿಯೊದಿಂದ ಎಫ್‌ಎಂ ಸೇವೆಗಳ ವಿಸ್ತರಣೆಯಲ್ಲಿ ಇಂದು ಮಹತ್ವದ ಹೆಜ್ಜೆಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಆಕಾಶವಾಣಿಯ 91 ಎಫ್‌ಎಂ ಟ್ರಾನ್ಸ್‌ಮಿಟರ್‌ಗಳ ಆರಂಭವು 85 ಜಿಲ್ಲೆಗಳು ಮತ್ತು ರಾಷ್ಟ್ರದ 2 ಕೋಟಿ ಜನರಿಗೆ ಒಂದು ಕೊಡುಗೆಯಾಗಿದೆ  ಎಂದು ಅವರು ಒತ್ತಿ ಹೇಳಿದರು. ಒಂದು ರೀತಿಯಲ್ಲಿ, ಇದು ಭಾರತದ ವೈವಿಧ್ಯತೆ ಮತ್ತು ವರ್ಣಗಳ ಒಂದು ನೋಟವನ್ನು ನೀಡುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಹೊಸ 91 ಎಫ್‌ಎಂ ಟ್ರಾನ್ಸ್‌ಮಿಟರ್‌ಗಳ ಅಡಿಯಲ್ಲಿ ಬರುವ ಜಿಲ್ಲೆಗಳು ಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು ಬ್ಲಾಕ್‌ಗಳಾಗಿವೆ ಎಂದು ಅವರು ಮಾಹಿತಿ ನೀಡಿದರು ಮತ್ತು ಈ ಮಹತ್ವದ ಸಾಧನೆಗಾಗಿ ಆಕಾಶವಾಣಿಯನ್ನು ಅಭಿನಂದಿಸಿದರು. ಇದರಿಂದ ಹೆಚ್ಚಿನ ಪ್ರಯೋಜನ ಪಡೆಯುವ ಈಶಾನ್ಯ ಭಾಗದ ನಾಗರಿಕರನ್ನು ಅವರು ಅಭಿನಂದಿಸಿದರು.

 

ರೇಡಿಯೊದೊಂದಿಗೆ ತಮ್ಮ ಪೀಳಿಗೆಯವರು ಹೊಂದಿರುವ ಭಾವನಾತ್ಮಕ ಸಂಬಂಧವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಮುಂದೆ ಬರುವ ʼಮನ್ ಕಿ ಬಾತ್‌ʼನ 100 ನೇ ಸಂಚಿಕೆಯನ್ನು ಉಲ್ಲೇಖಿಸಿ "ನನಗೆ, ನಾನು ನಿರೂಪಕನಾಗಿ ರೇಡಿಯೊದೊಂದಿಗೆ ಸಂಬಂಧವನ್ನು ಹೊಂದಿದ್ದೇನೆ ಎನ್ನುವ ಹೆಚ್ಚುವರಿ ಸಂತೋಷವಿದೆ",  ಎಂದು ಪ್ರಧಾನಮಂತ್ರಿಯವರು ಹೇಳಿದರು. “ದೇಶದ ಜನರೊಂದಿಗೆ ಅಂತಹ ಭಾವನಾತ್ಮಕ ಸಂಪರ್ಕವು ರೇಡಿಯೊ ಮೂಲಕ ಮಾತ್ರ ಸಾಧ್ಯವಾಯಿತು. ಈ ಮೂಲಕ, ನಾನು ದೇಶದ ಸಾಮರ್ಥ್ಯ ಮತ್ತು ದೇಶದ ಜನರಲ್ಲಿರುವ ಕರ್ತವ್ಯದ ಸಾಮೂಹಿಕ ಶಕ್ತಿಯೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಯಿತು" ಎಂದು ಅವರು ಹೇಳಿದರು.  ಮನ್ ಕಿ ಬಾತ್ ಮೂಲಕ ಜನಾಂದೋಲನವಾಗಿ ಮಾರ್ಪಟ್ಟ ಸ್ವಚ್ಛ ಭಾರತ್, ಬೇಟಿ ಬಚಾವೋ ಬೇಟಿ ಪಢಾವೋ ಮತ್ತು ಹರ್ ಘರ್ ತಿರಂಗದಂತಹ ಉಪಕ್ರಮಗಳಲ್ಲಿ ಕಾರ್ಯಕ್ರಮದ ಪಾತ್ರದ ಉದಾಹರಣೆಗಳನ್ನು ನೀಡುವ ಮೂಲಕ ಅವರು ಈ ವಿಷಯವನ್ನು ವಿವರಿಸಿ, "ಆದ್ದರಿಂದ, ಒಂದು ರೀತಿಯಲ್ಲಿ, ನಾನು ನಿಮ್ಮ ಆಲ್ ಇಂಡಿಯಾ ರೇಡಿಯೋ ತಂಡದ ಭಾಗವಾಗಿದ್ದೇನೆ" ಎಂದು ಪ್ರಧಾನಮಂತ್ರಿಯವರು ಹೇಳಿದರು

91 ಎಫ್‌ಎಂ ಟ್ರಾನ್ಸ್‌ಮಿಟರ್‌ಗಳ ಉದ್ಘಾಟನೆಯು ಇದುವರೆಗೆ ಈ ಸೌಲಭ್ಯದಿಂದ ವಂಚಿತರಾಗಿರುವ ಹಿಂದುಳಿದವರಿಗೆ ಆದ್ಯತೆ ನೀಡುವ ಸರ್ಕಾರದ ನೀತಿಗಳನ್ನು ತಲುಪಿಸುತ್ತದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. “ದೂರ ಎಂದು ಭಾವಿಸಿದ ಜನರು ಈಗ ಹೆಚ್ಚಿನ ಮಟ್ಟದಲ್ಲಿ ಸಂಪರ್ಕ ಸಾಧಿಸಲು ಅವಕಾಶವನ್ನು ಪಡೆಯುತ್ತಾರೆ"  ಎಂದು ಪ್ರಧಾನಮಂತ್ರಿ ಹೇಳಿದರು. ಎಫ್‌ಎಂ ಟ್ರಾನ್ಸ್‌ಮಿಟರ್‌ಗಳ ಪ್ರಯೋಜನಗಳ ಬಗ್ಗೆ ತಿಳಿಸುತ್ತಾ ಸಮಯೋಚಿತವಾಗಿ ಪ್ರಮುಖ ಮಾಹಿತಿಯ ಪ್ರಸಾರ, ಸಮುದಾಯ ನಿರ್ಮಾಣದ ಪ್ರಯತ್ನಗಳು, ಕೃಷಿ ಪದ್ಧತಿಗಳಿಗೆ ಸಂಬಂಧಿಸಿದ ಹವಾಮಾನದ ತಾಜಾ ಸುದ್ದಿಗಳು , ರೈತರಿಗೆ ಆಹಾರ ಮತ್ತು ತರಕಾರಿ ಬೆಲೆಗಳ ಮಾಹಿತಿ, ರಾಸಾಯನಿಕಗಳ ಬಳಕೆಯಿಂದ ಆಗುವ ನಷ್ಟದ ಬಗ್ಗೆ ಚರ್ಚೆ, ಕೃಷಿ, ಕೃಷಿಗಾಗಿ ಸುಧಾರಿತ ಯಂತ್ರೋಪಕರಣಗಳ ಸಂಗ್ರಹಣೆ, ಹೊಸ ಮಾರುಕಟ್ಟೆ ಪದ್ಧತಿಗಳ ಬಗ್ಗೆ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ತಿಳಿಸುವುದು ಮತ್ತು ನೈಸರ್ಗಿಕ ವಿಪತ್ತಿನ ಸಮಯದಲ್ಲಿ ಇಡೀ ಸಮುದಾಯಕ್ಕೆ ಸಹಾಯ ಮಾಡುವುದು ಮುಂತಾದ ಅಂಶಗಳ ಬಗ್ಗೆ ಪ್ರಧಾನಮಂತ್ರಿಯವರು ತಿಳಿಸಿದರು. ಅವರು ಎಫ್‌ ಎಂ ನ ಇನ್ಫೋಟೈನ್‌ಮೆಂಟ್ ಮೌಲ್ಯವನ್ನು ಸಹ ಪ್ರಸ್ತಾಪಿಸಿದರು.

ಎಲ್ಲರಿಗೂ ತಂತ್ರಜ್ಞಾನ ಲಭಿಸುವುದಕ್ಕಾಗಿ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. "ಭಾರತವು ತನ್ನ ಸಂಪೂರ್ಣ ಸಾಮರ್ಥ್ಯದ ಮಟ್ಟಕ್ಕೆ ಏರಬೇಕಾದರೆ ಯಾವುದೇ ಭಾರತೀಯರು ಅವಕಾಶದ ಕೊರತೆಯನ್ನು ಅನುಭವಿಸಬಾರದು" ಎಂದು ಪ್ರಧಾನಮಂತ್ರಿ ಹೇಳಿದರು. ಆಧುನಿಕ ತಂತ್ರಜ್ಞಾನವನ್ನು ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡುವುದೇ ಇದಕ್ಕೆ ಪ್ರಮುಖವಾಗಿದೆ.  ಎಲ್ಲಾ ಗ್ರಾಮಗಳಿಗೆ ಆಪ್ಟಿಕಲ್ ಫೈಬರ್ ಮತ್ತು ಮಾಹಿತಿಯ ಲಭ್ಯತೆಯನ್ನು ಸುಲಭಗೊಳಿಸಿದ ಅಗ್ಗದ ದತ್ತಾಂಶದ ವೆಚ್ಚವನ್ನು ಉಲ್ಲೇಖಿಸುವ ಮೂಲಕ ಅವರು ಇದನ್ನು ವಿವರಿಸಿದರು. ಇದು ಹಳ್ಳಿಗಳಲ್ಲಿ ಡಿಜಿಟಲ್ ಉದ್ಯಮಶೀಲತೆಗೆ ಹೊಸ ಉತ್ತೇಜನ ನೀಡಿದೆ ಎಂದು ಹೇಳಿದರು. ಅದೇ ರೀತಿ, ಯುಪಿಐ ಸಣ್ಣ ವ್ಯಾಪಾರಗಳು ಮತ್ತು ಬೀದಿ ವ್ಯಾಪಾರಿಗಳಿಗೆ ಬ್ಯಾಂಕಿಂಗ್ ಸೇವೆಗಳ ಲಭ್ಯತೆಗೆ ಸಹಾಯ ಮಾಡಿದೆ.

ಕಳೆದ ಕೆಲವು ವರ್ಷಗಳಲ್ಲಿ ದೇಶದಲ್ಲಿ ನಡೆಯುತ್ತಿರುವ ತಾಂತ್ರಿಕ ಕ್ರಾಂತಿಯು ರೇಡಿಯೋ ಮತ್ತು ವಿಶೇಷವಾಗಿ ಎಫ್‌ಎಂ ಅನ್ನು ಹೊಸ ರೂಪದಲ್ಲಿ ನಿರ್ಮಿಸಿದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಇಂಟರ್ನೆಟ್‌ ಬೆಳವಣಿಗೆಯ ಬಗ್ಗೆ ಹೇಳುತ್ತಾ ಪ್ರಧಾನಮಂತ್ರಿಯವರು, ಪಾಡ್‌ಕಾಸ್ಟ್‌ಗಳು ಮತ್ತು ಆನ್‌ಲೈನ್ ಎಫ್‌ಎಂ ಮೂಲಕ ರೇಡಿಯೋ ನವೀನ ರೀತಿಯಲ್ಲಿ ಮುಂಚೂಣಿಗೆ ಬಂದಿದೆ ಎಂದು ತಿಳಿಸಿದರು. "ಡಿಜಿಟಲ್ ಇಂಡಿಯಾವು ರೇಡಿಯೊಗೆ ಹೊಸ ಕೇಳುಗರನ್ನು ಮಾತ್ರವಲ್ಲದೆ ಹೊಸ ಚಿಂತನೆಯ ಪ್ರಕ್ರಿಯೆಯನ್ನೂ ನೀಡಿದೆ", ಪ್ರತಿ ಪ್ರಸಾರ ಮಾಧ್ಯಮದಲ್ಲಿ ಅದೇ ರೀತಿಯಕ್ರಾಂತಿಯನ್ನು ವೀಕ್ಷಿಸಬಹುದು ಎಂದು ಅವರು ಒತ್ತಿಹೇಳಿದರು. ದೇಶದಲ್ಲೇ ಅತಿ ದೊಡ್ಡ ಡಿಟಿಎಚ್ ಪ್ಲಾಟ್‌ಫಾರ್ಮ್ ಆಗಿರುವ ಡಿಡಿ ಫ್ರೀ ಡಿಶ್‌ನ ಸೇವೆಯನ್ನು 4 ಕೋಟಿ 30 ಲಕ್ಷ ಮನೆಗಳಿಗೆ ಒದಗಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು,  ವಿಶ್ವದ ಕೋಟಿಗಟ್ಟಲೆ ಗ್ರಾಮೀಣ ಕುಟುಂಬಗಳು ಮತ್ತು ಗಡಿಗೆ ಸಮೀಪವಿರುವ ಪ್ರದೇಶಗಳ ಮನೆ ಬಾಗಿಲಿಗೆ ನೈಜ ಸಮಯದ ಮಾಹಿತಿ ತಲುಪುತ್ತಿದೆ. ದಶಕಗಳಿಂದ ವಂಚಿತವಾಗಿರುವ ಸಮಾಜದ ವರ್ಗಗಳಿಗೆ ಶಿಕ್ಷಣ ಮತ್ತು ಮನರಂಜನೆಯೂ ತಲುಪುತ್ತಿದೆ ಎಂದು ಅವರು ಒತ್ತಿ ಹೇಳಿದರು. "ಇದು ಸಮಾಜದ ವಿವಿಧ ವರ್ಗಗಳ ನಡುವಿನ ಅಸಮಾನತೆಯನ್ನು ತೊಡೆದುಹಾಕಲು ಮತ್ತು ಎಲ್ಲರಿಗೂ ಗುಣಮಟ್ಟದ ಮಾಹಿತಿಯನ್ನು ಒದಗಿಸಲು ಕಾರಣವಾಗಿದೆ" ಎಂದು ಪ್ರಧಾನಮಂತ್ರಿಯವರು ಹೇಳಿದರು. ಡಿಟಿಎಚ್ ಚಾನೆಲ್‌ಗಳಲ್ಲಿ ವಿವಿಧ ರೀತಿಯ ಶಿಕ್ಷಣ ಕೋರ್ಸ್‌ಗಳು ಲಭ್ಯವಿದ್ದು, ಒಂದಕ್ಕಿಂತ ಹೆಚ್ಚು ವಿಶ್ವವಿದ್ಯಾಲಯಗಳ ಜ್ಞಾನ ನೇರವಾಗಿ ಮನೆಗಳಿಗೆ ತಲುಪುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಇದು ದೇಶದ ಕೋಟ್ಯಂತರ ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಕೊರೊನಾ ಅವಧಿಯಲ್ಲಿ ಹೆಚ್ಚಿನ ಸಹಾಯವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. “ಅದು ಡಿಟಿಎಚ್ ಅಥವಾ ಎಫ್‌ಎಂ ರೇಡಿಯೋ ಆಗಿರಲಿ, ಈ ಶಕ್ತಿಯು ನಮಗೆ ಭವಿಷ್ಯದ ಭಾರತವನ್ನು ಇಣುಕಿ ನೋಡುವ ಕಿಟಕಿಯನ್ನು ನೀಡುತ್ತದೆ. ಈ ಭವಿಷ್ಯಕ್ಕಾಗಿ ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳಬೇಕುಎಂದು ಶ್ರೀ ಮೋದಿ ಹೇಳಿದರು.

ಭಾಷಾ ವೈವಿಧ್ಯತೆಯ ಆಯಾಮಗಳ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು ಎಫ್‌ ಎಂ ಪ್ರಸಾರವು ಎಲ್ಲಾ ಭಾಷೆಗಳಲ್ಲಿ ಮತ್ತು ವಿಶೇಷವಾಗಿ 27 ಉಪಭಾಷೆಗಳನ್ನು ಹೊಂದಿರುವ ಪ್ರದೇಶಗಳಲ್ಲಿ ಆಗಲಿದೆ ಎಂದು ತಿಳಿಸಿದರು. “ಈ ಸಂಪರ್ಕವು ಕೇವಲ ಸಂವಹನ ಸಾಧನಗಳನ್ನು ಲಿಂಕ್ ಮಾಡುವುದಿಲ್ಲ ಅದು ಜನರನ್ನು ಕೂಡ ಸಂಪರ್ಕಿಸುತ್ತದೆ. ಇದು ಈ ಸರ್ಕಾರದ ಕಾರ್ಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಮಂತ್ರಿಯವರು ಬೌದ್ದಿಕ ಸಂಪರ್ಕದ ಜೊತೆಗೆ ಸಾಮಾಜಿಕ ಸಂಪರ್ಕಕ್ಕೂ ಒತ್ತು ನೀಡುವುದನ್ನು ಎತ್ತಿ ಹಿಡಿದರು.  "ನಮ್ಮ ಸರ್ಕಾರವು ಸಾಂಸ್ಕೃತಿಕ ಸಂಪರ್ಕ ಮತ್ತು ಬೌದ್ಧಿಕ ಸಂಪರ್ಕವನ್ನು ಬಲಪಡಿಸುತ್ತಿದೆ" ಎಂದು ಪ್ರಧಾನಮಂತ್ರಿ ಹೇಳಿದರು.  ರಿಯಲ್ ಹೀರೋಗಳನ್ನು ಗೌರವಿಸುವ ಮೂಲಕ ಪದ್ಮ ಮತ್ತು ಇತರ ಪ್ರಶಸ್ತಿಗಳನ್ನು  ನೈಜವಾದ ಜನರ ಪ್ರಶಸ್ತಿಗಳಾಗಿಸುವ ಉದಾಹರಣೆಯನ್ನು ನೀಡುವ ಮೂಲಕ ಅವರು ಇದನ್ನು ವಿವರಿಸಿದರು. "ಹಿಂದಿನಂತೆ,  ಶಿಫಾರಸುಗಳ ಆಧಾರದ ಮೇಲಲ್ಲದೆ, ಈಗ ಪದ್ಮ ಪ್ರಶಸ್ತಿಗಳನ್ನು ರಾಷ್ಟ್ರ ಮತ್ತು ಸಮಾಜಕ್ಕೆ ಸಲ್ಲಿಸಿದ ಸೇವೆಗಾಗಿ ನೀಡಲಾಗುತ್ತಿದೆ" ಎಂದು ಅವರು ಹೇಳಿದರು.

ದೇಶದ ವಿವಿಧ ಭಾಗಗಳಲ್ಲಿ ತೀರ್ಥಯಾತ್ರೆಗಳು ಮತ್ತು ಧಾರ್ಮಿಕ ಸ್ಥಳಗಳ ಪುನರುಜ್ಜೀವನದ ನಂತರ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆತಿದೆ ಎಂದು ತಿಳಿಸಿದ ಪ್ರಧಾನಮಂತ್ರಿಯವರು, ಪ್ರವಾಸಿ ಸ್ಥಳಗಳಿಗೆ ಹೆಚ್ಚುತ್ತಿರುವ ಭೇಟಿ ನೀಡುವ ಜನರ ಸಂಖ್ಯೆಯು ದೇಶದಲ್ಲಿ ಹೆಚ್ಚುತ್ತಿರುವ ಸಾಂಸ್ಕೃತಿಕ ಸಂಪರ್ಕಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು. ಬುಡಕಟ್ಟು ಜನಾಂಗದ ಸ್ವಾತಂತ್ರ್ಯ ಹೋರಾಟಗಾರರಿಗೆ ಸಂಬಂಧಿಸಿದ ವಸ್ತು ಸಂಗ್ರಹಾಲಯಗಳು, ಬಾಬಾಸಾಹೇಬ್ ಅಂಬೇಡ್ಕರ್ ಅವರ ಪಂಚತೀರ್ಥ, ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ ಮತ್ತು ರಾಷ್ಟ್ರೀಯ ಯುದ್ಧ ಸ್ಮಾರಕಗಳ ಉದಾಹರಣೆಗಳನ್ನು ನೀಡಿದ ಅವರು ಇಂತಹ ಉಪಕ್ರಮಗಳು ದೇಶದಲ್ಲಿ ಬೌದ್ಧಿಕ ಮತ್ತು ಭಾವನಾತ್ಮಕ ಸಂಪರ್ಕಕ್ಕೆ ಹೊಸ ಆಯಾಮವನ್ನು ನೀಡಿವೆ ಎಂದು ಹೇಳಿದರು.

 ಪ್ರಧಾನಮಂತ್ರಿಯವರು ಆಲ್ ಇಂಡಿಯಾ ರೇಡಿಯೋದಂತಹ ಎಲ್ಲಾ ಸಂವಹನ ವಾಹಿನಿಗಳ ದೂರದೃಷ್ಟಿ ಮತ್ತು ಧ್ಯೇಯವನ್ನು ಒತ್ತಿ ಹೇಳಿದರು ಮತ್ತು ಸಂಪರ್ಕವು ಯಾವುದೇ ರೂಪದಲ್ಲಿರಲಿ, ದೇಶ ಮತ್ತು ಅದರ 140 ಕೋಟಿ ನಾಗರಿಕರನ್ನು ತಲುಪುವುದು ಅದರ ಉದ್ದೇಶ ಎಂದು ಹೇಳಿದರು. ನಿರಂತರ ಸಂವಾದದ ಮೂಲಕ ದೇಶವನ್ನು ಬಲಪಡಿಸುವ ಪರಿಣಾಮವಾಗಿ ಎಲ್ಲಾ ಪಾಲುದಾರರು ಈ ದೃಷ್ಟಿಕೋನದೊಂದಿಗೆ ಮುಂದುವರಿಯುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸುತ್ತಾ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ಹಿನ್ನೆಲೆ

ದೇಶದಲ್ಲಿ ಎಫ್‌ ಎಂ ಸಂಪರ್ಕವನ್ನು ಹೆಚ್ಚಿಸುವ ಸರ್ಕಾರದ ಬದ್ಧತೆಯ ಭಾಗವಾಗಿ, 18 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ 85 ಜಿಲ್ಲೆಗಳಲ್ಲಿ 91 ಹೊಸ 100 ವ್ಯಾಟ್ ಎಫ್‌.ಎಂ ಟ್ರಾನ್ಸ್‌ಮಿಟರ್‌ಗಳನ್ನು ಸ್ಥಾಪಿಸಲಾಗಿದೆ.  ಈ ವಿಸ್ತರಣೆಯ ವಿಶೇಷ ಗಮನವು ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಮತ್ತು ಗಡಿ ಪ್ರದೇಶಗಳಲ್ಲಿ ವ್ಯಾಪ್ತಿಯನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕರಿಸಿದೆ. ಬಿಹಾರ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಖಂಡ, ಆಂಧ್ರಪ್ರದೇಶ, ಕೇರಳ, ತೆಲಂಗಾಣ, ಛತ್ತೀಸ್‌ಗಢ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ಲಡಾಖ್ ಮತ್ತು ವ್ಯಾಪ್ತಿಗೆ ಒಳಪಡುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಈ ವ್ಯಾಪ್ತಿಯಲ್ಲಿ ಸೇರಿವೆ.  ಆಲ್‌ ಇಂಡಿಯಾ ರೇಡಿಯೊನ ಎಫ್‌ ಎಂ ಸೇವೆಯ ಈ ವಿಸ್ತರಣೆಯಿಂದಾಗಿ, ಮಾಧ್ಯಮದ ಸೇವೆ ಲಭ್ಯವಿಲ್ಲದಿದ್ದ ಹೆಚ್ಚುವರಿ 2 ಕೋಟಿ ಜನರು ಈಗ ಇದನ್ನು ಪಡೆಯುತ್ತಾರೆ. ಇದು ಸುಮಾರು 35,000 ಚದರ ಕಿ.ಮೀ ಪ್ರದೇಶದಲ್ಲಿ ವ್ಯಾಪ್ತಿಯ ವಿಸ್ತರಣೆಗೆ ಕಾರಣವಾಗುತ್ತದೆ.

ಜನಸಾಮಾನ್ಯರನ್ನು ತಲುಪುವಲ್ಲಿ ರೇಡಿಯೋ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರಧಾನಮಂತ್ರಿಯವರು ದೃಢವಾಗಿ ನಂಬಿದ್ದಾರೆ.  ಅಪಾರ ಪ್ರೇಕ್ಷಕರನ್ನು ತಲುಪುವ ಈ ಮಾಧ್ಯಮದ ವಿಶಿಷ್ಟ ಶಕ್ತಿಯನ್ನು ಬಳಸಿಕೊಳ್ಳಲು ಪ್ರಧಾನಮಂತ್ರಿಯವರು ಮನ್ ಕಿ ಬಾತ್ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಈ ಕಾರ್ಯಕ್ರಮವು ಈಗ ತನ್ನ ಐತಿಹಾಸಿಕ 100 ನೇ ಸಂಚಿಕೆಯನ್ನು ಸಮೀಪಿಸುತ್ತಿದೆ.

 

***

 

 



(Release ID: 1921971) Visitor Counter : 82